Pages

Total Visitors

Showing posts with label ಕಥೆಗಳು. Show all posts
Showing posts with label ಕಥೆಗಳು. Show all posts

Friday, March 25, 2016

ಐ ಲವ್ ಯೂ .....



ತುಂಬಾ ಹೊತ್ತಿನಿಂದ ಅವರ  ಜಗಳ ಮುಂದುವರಿದಿತ್ತು 
ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ  ಐ ಲವ್ ಯೂ  ಅಂತ ಹೇಳೋದೇ ಇಲ್ಲ ನೀನು  ಎಂದು ಅವಳ ಕೋಪ 
ಹಾಗೆ ಹೇಳಿದರೆ ಮಾತ್ರ ಪ್ರೀತಿ ಇರೋದು ಇಲ್ಲದಿದ್ರೆ ಪ್ರೀತಿ ಇಲ್ಲ ಅಂತ ನಿನಗ್ಯಾರು ಹೇಳಿದರು ಅನ್ನೋದು ಅವನ ವಾದ 
ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಗಡಿಯಾರದ ಮುಳ್ಳುಗಳು ಚಲಿಸುತ್ತಿದ್ದವು. 
'ಒಹ್  ಮೊನ್ನೆ ಹೋಟೆಲ್ಲಲ್ಲಿ ತಿಂದಿದ್ದೆವಲ್ಲಾ  ಜೀರಾ ಪೂರಿ ಮತ್ತು  ಆಲೂ ಟೊಮ್ಯಾಟೋ  ಮಸಾಲಾ ಅದನ್ನು ಮಾಡುವ ಅಂತಾ ಇದ್ದೆ.'  ಅಂದಳು ಮುಖ ದುಮ್ಮಿಸಿಕೊಂಡೇ 
'ಓಹ್.. ಹೌದಾ  ...??  ಇವತ್ತಾ.. ?? ಐ ಲವ್ ಯೂ  ಸೋ ಮಚ್ ಡಿಯರ್'  ಎಂದವಳ ದುಂಡು ಕೆನ್ನೆ ತಟ್ಟಿದ. 
ಗಂಡಸಿನ ಹೃದಯದ ದಾರಿ ಹೊಟ್ಟೆಯ ಮೂಲಕವೇ ಅಂತ ಅವಳಜ್ಜಿ ಹೇಳಿದ್ದು ನೆನಪಾಗಿ ನಕ್ಕಳು.  

Monday, March 14, 2016

ಎರಡು ಸಣ್ಣ ಕಥೆಗಳು

ಮರಕುಟಿಗ ಮತ್ತು ಮರ 

ಆ ಮರದಲ್ಲಿದ್ದ ಹಕ್ಕಿಗಳೆಲ್ಲ ರೋಷದಲ್ಲಿ ಬೊಬ್ಬಿರಿಯುತ್ತಿದ್ದವು. " ಇದೊಂದು ಮರಕುಟಿಗಕ್ಕೆ ಸ್ವಲ್ಪವೂ ಕೃತಜ್ಞತೆ ಇಲ್ಲ. ಆಶ್ರಯ ಕೊಟ್ಟ ಮರವನ್ನೇ ಕುಟುಕುತ್ತಿದೆ.. ತೊಲಗಾಚೆ.. "  
ಮೈಮೇಲಿದ್ದ ಗೆದ್ದಲು ಹುಳಗಳೆಲ್ಲಾ ಖಾಲಿ ಆಗಿ ಮರ ಕುಶಿಯಿಂದ ತಲೆದೂಗಿ ನಕ್ಕಿತು. 
ಮರಕುಟಿಗ ಹೊಟ್ಟೆ ತುಂಬಿದ ಸಂತಸದಿಂದ ಹಾರಿ ಹೋಯಿತು. 
ಅಬ್ಬಾ .. ನಮ್ಮ ರೋಷಕ್ಕೆ ಹೆದರಿ ಮರಕುಟಿಗ ಹೋಯಿತೆಂದು ತಿಳಿದ ಹಕ್ಕಿಗಳು ನಿರಾಳವಾದವು. 

ಚಿಟ್ಟೆ ಹಕ್ಕಿ ಮತ್ತು ಅವನು 

ಪ್ರತಿ ನಿತ್ಯ ಅವನು ಅದೇ ದೃಶ್ಯ ನೋಡುತ್ತಿದ್ದ.
 ಹಕ್ಕಿಯೊಂದು ಚಿಟ್ಟೆಯನ್ನು ಅಟ್ಟಿಸಿಕೊಂಡು ಬರುವುದು. ಚಿಟ್ಟೆ ತಪ್ಪಿಸಿ ಹಾರುವುದು. 
 ತನ್ನ ಕ್ಯಾಮೆರಾದೊಳಗೆ ಅವೆರಡೂ ಸೆರೆಯಾಗಬೇಕೆಂದವನ  ಆಸೆ.  ಆ ದಿನ ಅವನ ಕಣ್ಣುಗಳಿಗೆ ಅಚ್ಚರಿ ಕಾದಿತ್ತು. 
ಚಿಟ್ಟೆ ಇನ್ನೇನು ಹಕ್ಕಿಯ ಕೊಕ್ಕಿಗೆ  ಸಿಗುವುದರಲ್ಲಿತ್ತು 
ಎರಡೂ ಒಟ್ಟಿಗೆ ಸಿಕ್ಕಿದ ಸಂತಸ ಅವನದು. 
ಕ್ಲಿಕ್ಕಿಸಿಯೇ ಬಿಟ್ಟ. 
ಅವನಾಸೆ ತೀರಿತ್ತು. ಮರುದಿನ ಅವನಲ್ಲಿಗೆ ಹೋಗಲಿಲ್ಲ.  
ಹಕ್ಕಿಯ ಬೇಟೆ ಸಿಕ್ಕಿತ್ತು.  ಅದೂ ಹೋಗಲಿಲ್ಲ.  
ಮತ್ತು 
ಚಿಟ್ಟೆಯೂ  ಹೋಗಲಿಲ್ಲ.  


Saturday, September 12, 2015

ಆಯುಧ..




ಶೂರ ಲಂಕಾಧೀಶ್ವರನ  ತಂಗಿ ನಾನು.  ಒಬ್ಬನಲ್ಲ ಇಬ್ಬರಲ್ಲ ಮೂರು ಜನ ಬಲಾಡ್ಯ ಸಹೋದರರೊಡನೆ ಬೆಳೆದ ಮನೆ ಮಗಳು.. ಹೇಗಿರಬೇಕಿತ್ತು ನನ್ನ ಬದುಕು.. ಹೇಗಾಗಿ ಹೋಯಿತು..ಹರೆಯ ನನ್ನೊಳಗೂ ನುಗ್ಗಿತು. ನೂರಾರು ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿತು. ಗಂಡಿನ ಬಲವಾದ ತೋಳೊಳಗೆ ಕರಗಬೇಕೆಂಬಾಸೆ ಹೆಣ್ಣಾದ ನನಗೆ ಸಹಜ ತಾನೇ.. ಆದರೆ  ಬೆಳೆದು ನಿಂತ ನನಗೆ ಸರಿಯಾದ ಗಂಡನನ್ನೇನು ಹುಡುಕಲಿಲ್ಲ ನನ್ನಣ್ಣ .. ಲೋಕದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ ಮಾಡಿದ.  ತಂಗಿಗೆ ಮದುವೆ  ಮಾಡದೇ ಅಣ್ಣ ತನ್ನ ಅಂತಃಪುರದ ಸ್ತ್ರೀಯರೊಂದಿಗೆ ಚಕ್ಕಂದ ಆಡುತ್ತಾನೆ ಎಂದು ಆಡಿಕೊಳ್ಳದಿರಲಿ ಎಂದಷ್ಟೇ.. 

ವಿದ್ಯುಜ್ಜಿಹ್ವ ನನ್ನ ಗಂಡನೆಂದೆನಿಸಿಕೊಂಡ. ಬಂದ ಬಾಳನ್ನು ಬಂದಂತೆ ಸಂತಸದಿಂದಲೇ ಸ್ವೀಕರಿಸಿದ್ದೆ. ಹೇಡಿ, ಯಾಕೂ ಬೇಡದವ ಎನಿಸಿಕೊಂಡಿದ್ದ ಗಂಡ ನನ್ನ ಸಹವಾಸದಿಂದೇನೋ ಪರಾಕ್ರಮಶಾಲಿಯಾಗುತ್ತಾ ಬೆಳೆದ.. ಅದು ಎಷ್ಟೆತ್ತರಕ್ಕೆ ಎಂದರೆ ರಾವಣನಿಗೆ ಸರಿಸಮನಾಗಿ .. ಕಣ್ಣು ಕುಕ್ಕದಿದ್ದೀತೇ ಅವನಿಗೆ.. ದಿಗ್ವಿಜಯ ಯಾತ್ರೆಯಲ್ಲಿ ಶತ್ರುಗಳೊಡನೆ ಸೇರಿದ ಎಂಬುದೊಂದು ನೆವ..ಹಾಗೊಂದು ವೇಳೆ ಶತ್ರುಗಳೊಡನೆ ಸೇರಿದನೇ ಎಂದುಕೊಂಡರೂ  ತಂಗಿಯ ಗಂಡನೆಂದಾದ ಮೇಲೆ ಕರೆದು ಬುದ್ಧಿ ಹೇಳಬಾರದಿತ್ತೇ..? ಹಾಗೆ ಮಾಡಲಿಲ್ಲ ಅವನು..  ಎಲ್ಲಿಯಾದರೂ ತಂಗಿಯ ಗಂಡ ತನ್ನಿಂದ ಬಲಶಾಲಿಯೂ, ಜನಾನುರಾಗಿಯೂ ಆಗಿ ಬೆಳೆದರೆ ತಾನು ಕುಳಿತ ಸಿಂಹಾಸನ ಕದಲಿ ಬೀಳುವ ಚಿಂತೆ.. ಶತ್ರುವನ್ನು ಸದೆ ಬಡಿದಂತೆ ನನ್ನವನನ್ನು ಕೊಂದು ಬಿಟ್ಟ.. 
ನನ್ನೊಳಗಿನ ಕಣ್ಣೀರು ಇಂಗಿ ಹೋಗುವಷ್ಟು ಶೋಕಿಸಿದೆ..  ಯಾರು ನನ್ನವರು ಎಂದುಕೊಂಡಿದ್ದೆನೋ ಅವರಿಂದಲೇ ಸೋತಿದ್ದೆ. ಬದುಕಿಗಿಂತ ಸಾವೇ ಪ್ರಿಯವೆನಿಸಿತು. ಆದರೆ ಸಾವನ್ನು ನಾನೇ ಬೇಡುವುದೇ..  ಇಲ್ಲ..ಇಲ್ಲ.. ನನ್ನ ಬದುಕನ್ನು ಹಾಳು ಮಾಡಿದವನ ದೇಹ ನೆಲದಲ್ಲಿ ಚಡಪಡಿಸಿ ನರಳುವುದನ್ನು ನಾನು ಕಾಣಬೇಕು.. ನನ್ನವನ ರಕ್ತ ಹರಿಸಿದ ಅವನ ಕೈಗಳು ತುಂಡು ತುಂಡಾಗಿ ನೆಲದ ಮೇಲೆ ಬೀಳಬೇಕು.. ಹಾಂ.. ಆಗ ಶಾಂತಿ ಸಿಕ್ಕೀತು ನನಗೆ.. ಎಲ್ಲ ಕಳೆದುಕೊಂಡಿದ್ದೇನೆ ಈಗ ಈ ದ್ವೇಷದ ನೂಲೇಣಿಯೊಂದನ್ನು ಬಿಟ್ಟು.. ಇದರಿಂದಲೇ ಮೇಲೇರಬೇಕು..ಹೊರಗಿನ ಕಣ್ಣಿಗೆ ಅವನು ನನ್ನಣ್ಣ.. ಅವನಿಗೆ ಹತ್ತಿರವಾದಷ್ಟೂ ಹೊಂಚು ಹಾಕಿ ಇರಿಯುವುದು ಸುಲಭವಾದೀತೇನೋ..  ಮತ್ತೆ ತವರಿಗೆ ಮರಳಿದ್ದೆ. 

ಆಹಾ.. ಈ ರಾವಣನಾದರೂ ಎಷ್ಟೊಂದು ಚತುರ.. ಗೋಳಿಡುತ್ತಾ ಆರ್ತಳಾಗಿ ಬಂದ ನನ್ನ ಮೇಲೆ ಕನಿಕರ ತೋರಿದಂತೆ ಮಾಡಿ ದೂರದ ದಂಡಕಾರಣ್ಯದಲ್ಲಿ ರಕ್ಕಸ ಸೇನೆಯೊಂದಿಗೆ ನನ್ನನ್ನು ನೆಲೆಗೊಳಿಸಿದ. ತಂಗಿ ಕ್ರೂರ ಮೃಗಗಳ ದಾಳಿಗೋ, ಋ ಮುನಿಗಳ ಶಾಪದ ತಾಪಕ್ಕೋ ಸಿಲುಕಿ ಹಾಳಾಗಿ ಹೋಗಲಿ ಎಂಬ ಹಂಚಿಕೆ ಅವನದ್ದು.. ಇಲ್ಲದಿದ್ದರೆ ಸುವರ್ಣಮಯ ಲಂಕೆಯಲ್ಲಿ ಒಂದು ಅರಮನೆ ಕಟ್ಟಿ ನನ್ನನ್ಯಾಕೆ ಇರಗೊಡಬಾರದಿತ್ತು. ನನ್ನ ಮೇಲೆ ಜನ ಕನಿಕರ ತೋರುವುದು ಅವನಿಗೆ ಬೇಕಿರಲಿಲ್ಲ. ನನ್ನನ್ನು ಇಲ್ಲಿಯವರು ಮರೆಯುವಂತೆ ಮಾಡುವುದೇ ಅವನ ತಂತ್ರ. ನಾನು ಅವನ ವಿರುದ್ಧ ಎದ್ದು ನಿಲ್ಲದಂತೆ ನಯವಾದ ಮಾತಿನಲ್ಲಿ ನನ್ನನ್ನು ದೂರ ತಳ್ಳಿದ. 
ಕಾಲ ನನಗೂ ಬಂದೀತು.. ಇಲ್ಲೇ ಇದ್ದರೂ ರಾವಣನನ್ನು ಎದುರಿಸುವ, ಅವನನ್ನು ಕೆಡಹುವ ಜನರನ್ನು ಹುಡುಕುವುದು ನನಗೂ ಕಷ್ಟ.. ಅವನೆದುರು ನಿಲ್ಲುವ ಒಬ್ಬ ರಕ್ಕಸ ಹುಳುವೂ ನನ್ನ ಕಣ್ಣಿಗೆ ಇಲ್ಲಿಯವರೆಗೆ ಬಿದ್ದಿರಲಿಲ್ಲ. ಅಲ್ಲಾದರೆ ಯಾರಾದರೂ ಸಿಕ್ಕಾರು ಎಂಬ ದೂರದ ಆಸೆ ನನಗೆ.. ಹದಿನಾಲ್ಕು ಸಾವಿರ ರಕ್ಕಸ ಸೇನೆಯೊಡನೆ ನಾನು ಕಾನನ ಸೇರಿದೆ. ಈಗ ಒಬ್ಬಳೇ.. ಆಟ ಊಟ ಬೇಟ.. ಎಲ್ಲವೂ ನನಗೆ ಬೇಕಾದಂತೆ.. ಯಾಕೆ ಗಂಡಿಗೊಂದು ಹೆಣ್ಣಿಗೊಂದು ಎರಡು ನ್ಯಾಯ.. ಕಂಡ ಕಂಡ ಹೆಣ್ಣನ್ನೆಲ್ಲಾ ಎಳೆದು ತಂದು  ತಮ್ಮರಮನೆ ತುಂಬಿಸಿಕೊಳ್ಳುತ್ತಾ ಅವರು ಸುಖ ಸಂತೋಷದಲ್ಲಿ ಮೆರೆಯುವಾಗ ನಾನು ನನ್ನ ಮಡಿದ ಪತಿಗಾಗಿ ಎಷ್ಟೆಂದು ಅಳಲಿ.. ನನ್ನ ಮನಸ್ಸಾಗಲೀ ದೇಹವಾಗಲೀ ಯಾರ ಅಧೀನದ್ದು ಅಲ್ಲ. ನನ್ನದೇ ಅದು.. ನನಗೆ ಬೇಕಾದಂತೆ ಬದುಕಬಾರದೇಕೆ..ಸರಿಯಾದ ಜೊತೆಗಾಗಿ ಕಾನನವಿಡೀ ಸುತ್ತುತ್ತಿದ್ದೆ.ಈ ಅಲೆದಾಟಕ್ಕೆ ಇನ್ನೊಂದು ಕಾರಣವೂ ಇತ್ತು. ಇಲ್ಲಿ ಘೋರ ತಪ್ಪಸ್ಸನ್ನಾಚರಿಸುವ ಋ ಮುನಿಗಳು ಅನೇಕ. ಯಾರಾದರು ನನಗಿಂತ ಬಲಾಡ್ಯರಿದ್ದರೆ ಅವರನ್ನು ಕೆಣಕಿ ದ್ವೇಷ ಕಟ್ಟಿಕೊಂಡು ರಾವಣನಿಗೆ ಎದುರಾಗಿಸುವುದು ನನ್ನಾಸೆ. ಉಹೂಂ.. ಅವರೆಲ್ಲರ ಶಕ್ತಿಯೂ ನನ್ನನ್ನು ನೋಡಿದೊಡನೆ ಉಡುಗಿ ಹೋಗುತ್ತಿತ್ತು.ಹಾಗಾಗಿ  ಅವರಿಂದೇನು ಪ್ರಯೋಜನವಾಗುವಂತಿರಲಿಲ್ಲ.  

ಎಲ್ಲೆಲ್ಲೋ ಏಕೆ ಅಲೆಯಲಿ.. ಇಲ್ಲವೇ ನನ್ನ ಪುತ್ರ ಶಂಭೂಕ. ಇವನು ನನ್ನಣ್ಣನಂತೆಯೇ.. ಅಲ್ಲಲ್ಲ.. ಅವನಿಗಿಂತಲೂ ಪರಾಕ್ರಮಶಾಲಿಯದ ರಕ್ಕಸನಾಗಿ ಬೆಳೆದರೆ.. ಲಂಕೆಯನ್ನು ಮುತ್ತಿ ರಾವಣನನ್ನು ಕೊಂದು ನನ್ನ ಹಠ ತೀರಿಸಿಕೊಂಡು ಮಗನನ್ನು ಅಲ್ಲಿಯ ಸುವರ್ಣ ಸಿಂಹಾಸನದ ಮೇಲೆ ಕೂರಿಸಿದರೆ.. ನಾನೇ ಅವನನ್ನು ತಪಸ್ಸಿನಲ್ಲಿ ತೊಡಗುವಂತೆ ಪ್ರೇರೇಪಿಸಿದೆ. ರಾವಣನೂ ಮೊದಲಿಗೆ ಸಾಮಾನ್ಯ ರಕ್ಕಸನೇ ಆಗಿದ್ದ.. ತಪಸ್ಸಿನಿಂದ ಪಡೆದ ವರದ ಮಹಿಮೆಗಳು ಅವನನ್ನು ಪರಾಕ್ರಮಿಯನ್ನಾಗಿಸಿತು.ಯಾರಿಗೂ ನನ್ನ ಹುನ್ನಾರ ತಿಳಿಯಬಾರದೆಂದು ರಹಸ್ಯವಾಗಿ  ಬಿದಿರಿನ ಮೆಳೆಯ ನಡುವಲ್ಲಿ ಕುಳಿತು ಸಾಧನೆ ಮಾಡುವಂತೆ ಉತ್ತೇಜಿಸಿದ್ದೆ.ಅವನು ಮರಳಿ ಬರುವ ಕ್ಷಣಕ್ಕಾಗಿ ಕಾಯುತ್ತಿದ್ದೆ.

ಆದರೆ ಆದಿನ ನಾನು ಕಂಡದ್ದೇನು.. ಯಾವ ತಾಯ ಕಣ್ಣುಗಳೂ ನೋಡಬಾರದ್ದು.. ನೋಡಲಾಗದ್ದು.. ರುಂಡ ಮುಂಡಗಳೆರಡು ಬೇರ್ಪಟ್ಟು ರಕ್ತ ಮಡುವಿನಲ್ಲಿ ಅಸು ನೀಗಿತ್ತು ನನ್ನ ಕಂದಮ್ಮ.. ಉಜ್ವಲವಾಗಿ ಉರಿಯಬೇಕಿದ್ದ ಸೊಡರೊಂದು ಆರಿ ಹೋಯಿತು.. ಹಾ.. ವಿಧಿಯೇ.. ನನ್ನಂತಹ ಹತಭಾಗ್ಯಳು ಯಾರಿದ್ದಾರೆ ಲೋಕದಲ್ಲಿ..
ಆದರೆ ನನ್ನ ಕಂದನನ್ನು ಕೊಂದವರು ಯಾರೇ ಆಗಿರಲಿ ಅದರ ಮೂಲ ಕಾರಣ  ರಾವಣ. ಅವನನ್ನು ಎದುರಿಸುವ ಸಮರ್ಥ ಇಲ್ಲೆಲ್ಲೋ ಬಂದಿರಬಹುದು.. ಇಲ್ಲಿರುವ ತಾಪಸರು ನಮ್ಮನ್ನು ಕಂಡರೆ ಹೆದರಿ ಓಡುವವರು ನನ್ನ ಧೀರ ಕಂದನನ್ನು ಮುಟ್ಟಲು ಸಾಧ್ಯವೇ ಇಲ್ಲ.. ಅವನನ್ನು ಅರಸಬೇಕು ನಾನು..ಇನ್ನೆಲ್ಲವನ್ನೂ ನಾನೇ ಮಾಡಬೇಕು.. ಸಾಧ್ಯವೇ ನನ್ನಿಂದ..?  
ಎಲ್ಲಾ ಮುಗಿಯಿತು ಎಂದುಕೊಂಡಿದ್ದೆ.. ಇಲ್ಲ ಮುಗಿದಂತೆ ಅನಿಸಿದ್ದು ಮಾತ್ರ.. ನನ್ನೊಳಗೆಯೂ ಆಸೆಯ ಮೊಳಕೆಗೆ ನೀರೆರೆಯುವವರು ಇಷ್ಟು ಸುಲಭವಾಗಿ ಸಿಕ್ಕಾರು ಎಂಬ ಕಲ್ಪನೆಯೇ ನನಗಿರಲಿಲ್ಲ. ಎಂತಾ ಧೀಮಂತ ನಿಲುವಿನ ಸುಂದರಾಂಗನವ. ಎಲ್ಲವನ್ನೂ ಗೆಲ್ಲಬಲ್ಲ ಆತ್ಮವಿಶ್ವಾಸ ಅವನಲ್ಲಿದ್ದಂತೆ ತೋರಿತು.   ಹಾಗೆಂದು ದೂರ ನಿಂದು ಸುಮ್ಮನೆ ನೋಡುತ್ತಿದ್ದರೆ ಸಾಕೇ..ಅವನನ್ನು ನನ್ನ ಬಲೆಗೆ ಬೀಳಿಸಬೇಕು..ಅದೂ ಯಾರಿಗೂ ಸಂಶಯ ಬಾರದ ರೀತಿಯಲ್ಲಿ.. ಲೋಕದ ಕಣ್ಣಿಗೆ ನಾನು ಕಾಮಾತುರಳಾಗಿ ಅವನ ಮೇಲೆ ಬಿದ್ದೆ ಅನ್ನಿಸಬೇಕು. ಕಡೆಗಣ್ಣ ನೋಟಕ್ಕೆ ಮರುಳಾಗಿ ನನ್ನವನಾದರೆ ಅವನನ್ನು ರಾವಣನ ವಿರುದ್ಧ ಪ್ರೇರೇಪಿಸಿ ನನ್ನ ಹಗೆ ತೀರಿಸಿಕೊಳ್ಳಬಹುದು.. ರಕ್ಕಸಿಯೆಂದು ನನಗೆದುರಾದರೆ ರಾವಣನನ್ನು ಮುಂದಿಟ್ಟು ಯುದ್ಧ ಮಾಡಬೇಕು.. ಅದೇ ಸರಿ..  
ಸ್ವಚ್ಚವಾಗಿ ಮೈಯನ್ನು ತಿಕ್ಕಿ ತೊಳೆದೆ. ಹೊಚ್ಚ ಹೊಸ ಸೀರೆಯುಟ್ಟೆ, ಎಂದೋ ಬಿಚ್ಚಿ ಎಸೆದಿದ್ದ ಆಭರಣಗಳನ್ನು ಧರಿಸಿದೆ. ಸಿಕ್ಕುಗಟ್ಟಿದ್ದ ಕೂದಲನ್ನು ನಯವಾಗಿ ಬಾಚಿ ಜಡೆ ಹೆಣೆದೆ. ಪರಿಮಳಭರಿತವಾದ ಕಾಡ ಹೂಗಳನ್ನು ಮುಡಿಯಲ್ಲಿಟ್ಟೆ.. ತಿಳಿಜಲದ ಸರೋವರದಲ್ಲಿನನ್ನ ಮೊಗವನ್ನು ನಾನೇ ನೋಡಿಕೊಂಡು ಮೋಹಪರವಶಳಾದೆ.. ಓಹ್.. ನಾನೂ ಸುಂದರಿಯೇ.. ಅವನ ಸೌಂದರ್ಯಕ್ಕೆ ಸಾಟಿಯಾಗಬಲ್ಲ ಚೆಲುವು ನನ್ನದು.  ಅವನನ್ನು ನನ್ನಡೆಗೆ ಸೆಳೆಯಬಲ್ಲೆ ಎಂಬ ಆತ್ಮವಿಶ್ವಾಸ ಜಾಗೃತವಾಯಿತು. 
ನಯವಾಗಿ ಮಾತನಾಡಿಸಿದೆ. ಮಾತುಗಳಲ್ಲಿ ಸಿಹಿ ಜೇನು ತುಂಬಿದೆ. ಅವನದರ ಸವಿಯನ್ನು ಹೀರುವ ಭೃಂಗವಾಗಲೆಂದು ಹಾರೈಸಿದೆ. ಉಹೂಂ..ಹಾಗಾಗಲಿಲ್ಲ. ನಾಡಾಡಿಯಾದ ಆತ ಬರುವಾಗಲೇ ಚೆಂದುಳ್ಳಿ ಚೆಲುವೆಯಂತವಳೊಬ್ಬಳನ್ನು ಜೊತೆಯಲ್ಲೇ ಕರೆತಂದಿದ್ದ. ಅವನರಸಿಯಂತೆ ಅವಳು.. ನಾನು ಅವನನ್ನರಸಿಯೇ ಬಂದವಳು..ಅವಳೊಡನೆ ಅವನನ್ನು ಹಂಚಿಕೊಳ್ಳಬಲ್ಲೆ ಎಂದೆ.  ಏಕಪತ್ನೀವೃತಸ್ಥನಂತೆ ಅವ... ಅವನೇ ದೂರದಲ್ಲಿದ್ದ ತನ್ನ ಸಹೋದರನೆಡೆಗೆ ಬೆರಳು ತೋರಿದ.. ಅವನೊಪ್ಪಿದರೆ.. ಎಂದೂ ಸೇರಿಸಿದ.
 ಹುಂ.. ಇನ್ನೂ ಒಬ್ಬನಿದ್ದಾನೆಯೇ .. ನೋಡಿಬಿಡುವ ಇವನನ್ನೊಮ್ಮೆ..  ಅರ್ರೇ.. ಇವನನ್ನು ನಾನ್ಯಾಕೆ ಮೊದಲೇ ಗಮನಿಸಲಿಲ್ಲ.. ನೋಡಿದ್ದರೆ ಅವನೆಡೆಗೇ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.ಆದರೇನು ಮಾಡಲಿ..ಸಂಶಯ ಬಂತೇನೋ.. ನನ್ನನ್ನೊಪ್ಪದೆ ಸತಾಯಿಸಿ ಅಣ್ಣ ಒಪ್ಪಿದರೆ ನಿನ್ನವನಾದೇನು..ಒಪ್ಪಿದ್ದಾನೆ ಎಂದು ಪ್ರಮಾಣ ಬೇಕೆನಗೆ ಎಂದ.  ಸಿಟ್ಟು ಬಂದರೂ ತಡೆದುಕೊಂಡೆ. ತಿರುಗಿ ಬೀಳಲಿದು ಸಮಯವಾಗಿರಲಿಲ್ಲ.  ಅವನೋ ನನಗೆ ಕಾಣದಿರಲಿ ಎಂದು ನನ್ನ ಬೆನ್ನಲ್ಲೇ ಏನೋ ಬರೆದು ಕಳುಹಿದ. ಮತ್ತೆ ಮರಳಿ ಬೆನ್ನು ತೋರಿಸಿ ನಿಂತೆ.  ಅವನೇನು ಬರೆದನೋ..ಎಂದು ಕೇಳಲು ತಿರುಗಿದ್ದೆನಷ್ಟೇ..ನನ್ನ ಮೈಯನ್ನಿನ್ನೂ ಇವನು ಸೋಕಿರಲಿಲ್ಲ..  ಮಿಂಚಿನಂತೆ ಕಣ್ಣು ಕೋರೈಸಿತ್ತು.. ಮರುಕ್ಷಣದಲ್ಲಿ ನನ್ನ ಕಿವಿ ಮೂಗುಗಳು ತುಂಡಾಗಿ ನೆಲದಲ್ಲಿ ಬಿದ್ದಿತ್ತು.. 
ಬರಿದೆ ಕೆಣಕಿದ್ದಕ್ಕಷ್ಟೇ ಹೆಣ್ಣೆಂದೂ ಕನಿಕರಿಸದೆ  ರಾವಣಾಸುರನ ಶೂರ ತಂಗಿಯನ್ನೇ ಈ ಸ್ಥಿತಿಗೆ ತಂದವರು ಇನ್ನು ಇವರಿಗೆ ವಿರುದ್ಧವಾದುದನ್ನು ಮಾಡಿದರೆ ಕೊಲ್ಲದೇ ಉಳಿದಾರೆ..? ಅಂದರೆ.. ಇದರರ್ಥ ಯುದ್ಧಕ್ಕೆ ಕಹಳೆ ನಾನೇ ಊದಿದ್ದೆ ಎಂದಲ್ಲವೇ..  ಇಷ್ಟರಲ್ಲೇ ಇವರ ಶಕ್ತಿ ಸಾಮರ್ಥ್ಯಗಳ ಅಳತೆ ತಿಳಿಯುವುದು ಹೇಗೆ? ನಮ್ಮವರನ್ನೆಲ್ಲಾ ಯುದ್ಧಕ್ಕೆ ಕಳುಹಿಸಿದೆ. ಎಲ್ಲರನ್ನೂ ಹರಿತ ಬಾಣಗಳಿಂದ ಕೊಂದರು. ಅವರು ಯುದ್ಧ ಮುಗಿಯಿತು ಎಂದುಕೊಂಡರೇನೋ.. ನನಗಿದು ಪ್ರಾರಂಭವಷ್ಟೇ.. ರಾವಣನನ್ನು ಇವರದೆರು ನಿಲ್ಲಿಸಬೇಕಿನ್ನು.. ಇವರನ್ನು ಕೊಲ್ಲಲೋ...ಕೊಲ್ಲಲ್ಪಡಲೋ.. ಯಾವುದಾದರೂ ಸರಿ.. ಜಯ ನನ್ನದೇ.. 
ಅಣ್ಣನೆದುರು ಸುಮ್ಮನೆ ಕಿವಿ  ಮೂಗು ಕಳೆದುಕೊಂಡು ಅತ್ತರೆ ಅವನೇನು ತಂಗೀ ಎಂದು ಬಾಚಿ ತಬ್ಬಿ, ಕಣ್ಣೀರೊರೆಸುವುದಿಲ್ಲ.. ಅವನನ್ನು ಮೇಲೆತ್ತಿಕಟ್ಟಬೇಕಾದರೆ ಅವನೊಳಗಿರುವ ಕಾಮವೋ ಕ್ರೋಧವೋ ಬುಗಿಲೇಳುವಂತೆ ಮಾಡಬೇಕು.. ಅದು ಅರಮನೆಯ ಒಳ ಕೋಣೆಗಳಲ್ಲಿ ಕುಳಿತು ರಹಸ್ಯ ಮಾತುಗಳಲ್ಲಿ ಆಡಬೇಕಾದದ್ದಲ್ಲ.. ರಾಜ ಸಭೆ ನಡೆಯುತ್ತಿರುವಾಗ ಎಲ್ಲರೆದುರಿನಲ್ಲೇ ಆಗಬೇಕು.. ನನ್ನನ್ನು ತಣ್ಣಗಿನ ಮಾತುಗಳಿಂದ ಸಮಾಧಾನಗೊಳಿಸಿ ಮೂಲೆಗುಂಪು ಮಾಡುವ ಮೊದಲೇ ಈ  ಅವಮಾನವನ್ನು ನನ್ನೊಬ್ಬಳ ಅವಮಾನವೆಂದು ಹೇಳಿಕೊಳ್ಳಬಾರದು.. ರಕ್ಕಸ ಕುಲಕ್ಕಾದ ಅವಮಾನವೆಂದೇ ಎತ್ತಿ ಹಿಡಿಯಬೇಕು.. ಲಂಕೆಯ ಮನೆ ಮನೆಯ ಮಗುವೂ ಈ ವಿಷಯವನ್ನು ಅರಿಯಬೇಕು.. ಒಬ್ಬೊಬ್ಬ ರಕ್ಕಸನೂ ದಿನ ನಿತ್ಯ ಇದನ್ನು ರಾವಣನಿಗೆ ನೆನಪಿಸಬೇಕು.. ರಾವಣನ ಗುಣಗಳೂ ದೋಷಗಳೂ ನನಗಲ್ಲದೇ ಇನ್ಯಾರಿಗೆ ತಿಳಿದಿರಲು ಸಾಧ್ಯ.. ಚೆಂದದ ಹೆಣ್ಣುಗಳನ್ನೆಲ್ಲಾ ಹಾಸಿಗೆಗೆಳೆಯುತ್ತಿದ್ದನವ.  ಅಲ್ಲೊಬ್ಬಳಿದ್ದಳಲ್ಲಾ ಚೆಂದುಳ್ಳಿ ಹೆಣ್ಣು ..  ಅವನರಸಿಯೆಂದು ಬೀಗುತ್ತಿದ್ದವಳು.. ನನ್ನ ಈ ಸ್ಥಿತಿಯನ್ನು ನೋಡಿ ನಕ್ಕವಳು.. ಅವಳನ್ನೇ ಮುಂದೊಡ್ಡಬೇಕೀಗ.. 
ಸುರಿಯುತ್ತಿರುವ ನೆತ್ತರ ಧಾರೆಯೊಂದಿಗೇ ತುಂಬಿದ ರಾಜ ಸಭೆಗೆ ನುಗ್ಗಿದೆ. ರಾವಣ ತಡೆಯುವ ಮೊದಲೇ ಎಲ್ಲರಿಗೂ ಕೇಳುವಂತೆ ಬೊಬ್ಬಿಟ್ಟೆ.. ರಕ್ಕಸ ಕುಲದ ಮಾನ ಕಾಪಾಡುವುದೀಗ ನಿನ್ನ ಕೈಯಲ್ಲಿದೆ ಎಂದೆ.ತಪ್ಪು ನನ್ನದೇ ಇರಬಹುದೇ ಎಂಬಂತೆ ಕಣ್ಣುಗಳಿಂದ ತಿವಿದ. ನಾಡಾಡಿಯ ಪಕ್ಕದಲ್ಲಿದ್ದ ಸುಂದರ ತರುಣಿಯನ್ನು ವರ್ಣಿಸಿದೆ.  

ಶಿಲೆಯಂತೆ ಕುಳಿತಿದ್ದ ರಾವಣನಲ್ಲೀಗ ಸಂಚಲನ.. ಕೂಡಲೇ ಎದ್ದು ನಿಂದ.. 

ಮತ್ತಿನದ್ದೆಲ್ಲಾ ಬರಿದೆ ರಾಮಾಯಣ.. 

ಇಂತ ಸುಂದರ ದೃಶ್ಯವೊಂದನ್ನು ನೋಡುವಷ್ಟು ನನ್ನ ಕಣ್ಣುಗಳು ಪುಣ್ಯ ಮಾಡಿದ್ದವೆಂದು ಯಾಕೋ ನಂಬುವುದಕ್ಕೇ ಕಷ್ಟವಾಗುತ್ತಿದೆ. ಪೆಟ್ಟಿನ ಮೇಲೆ ಪೆಟ್ಟು ಬಿದ್ದು ಈ ಸಂತಸಕ್ಕೆ ತೆರೆದುಕೊಳ್ಳಲು ಯಾಕೋ ಭಯವೆನಿಸುತ್ತಿದೆ. ಆದರೂ ಸಿಕ್ಕಷ್ಟನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವ ಬಯಕೆ..  ಯುದ್ಧರಂಗದಲ್ಲಿ ಕಡಿದುರುಳಿದ ಬಾಹುಗಳ, ಚೆಲ್ಲಾಡಿದ ನೆತ್ತರ ನಡುವಿನಲ್ಲಿ ರಾವಣನ ದೇಹ... ಹಸಿ ರಕ್ತದ ವಾಸನೆ ರಕ್ಕಸಿಯಾದ ನನಗೆ ಪ್ರಿಯವೇ.. ಅದರಲ್ಲೂ ನನ್ನ ಬದುಕನ್ನೇ ನಾಶ ಮಾಡಿದ ರಾವಣನ ನೆತ್ತರು.. ನೋಡಿದಷ್ಟೂ ಸಾಲದೆನಿಸಿತು.. ಇದೇ ಅಲ್ಲವೇ ನಾನು ಬಯಸಿದ ಭಾಗ್ಯ.. ಹ್ಹ..ಹ್ಹಹ್ಹ॒..   ಮೆಲ್ಲಗೆ ತುಟಿಗಳಲ್ಲಿ ನುಗ್ಗಿದ  ನಗೆ ಬರು ಬರುತ್ತಾ  ಅಟ್ಟಹಾಸವಾಯಿತು.. ದುಃಖದ್ದೋ ಸುಖದ್ದೋ ತಿಳಿಯದ ಕಣ್ಣೀರ ಪರದೆ ಎಲ್ಲವನ್ನೂ ಮಬ್ಬಾಗಿಸಿತು..ಆದರೂ  ನಾನು ನಗುತ್ತಲೇ ಇದ್ದೆ.. !! 


Monday, July 20, 2015

ಪಿಂಗಳೆ


'ಪಿಂಗಳೇ... ಪಿಂಗಳೇ ..ಒಡತಿ ಕಾಂಚನಲೇಖೆಯ  ಆಗಮನವಾಗುವ ಹೊತ್ತಾಯಿತು.  ನೀನು ಇನ್ನೂ ಹಾಸಿಗೆಯಲ್ಲಿಯೇ ಮಲಗಿರುವೆ ಏಕೆ, ಬೇಗನೇ ಏಳು. ಮೈಗೆ ಚಂದನಾದಿ ಗಂಧಗಳನ್ನು ಲೇಪಿಸಿ ಸುಖವಾದ ಮಜ್ಜನ ಮಾಡಿಸುವೆ. ಇದೇನೇ ಇದು.. ಕೆನ್ನೆ ಕೊರಳುಗಳಲ್ಲಿ ನಖದ ಗುರುತು..ಮಹಾರಾಜರ  ಸಹಿಯೇನೇ ಇದು?.. ಹಹ್ಹ ಹಹ್ಹ.. ನಿನಗಿನ್ನೂ ನಿನ್ನೆಯ ಸುಖದ ಮಂಪರು ಹರಿದಿಲ್ಲವೇ ತಾ?' ಎಂದು ಕೇಳುತ್ತಾ  ಸಖಿಯೊಬ್ಬಳು ಮೈಯನ್ನು ಅಲುಗಾಡಿಸುತ್ತಿದ್ದರೆ ಇನ್ನೂ ನಿದ್ದೆಗಣ್ಣುಗಳಲ್ಲೇ ಇದ್ದ ಪಿಂಗಳೆ ಮೆಲ್ಲನೆ ಬಟ್ಟಲುಗಣ್ಣುಗಳನ್ನು ಅರಳಿಸುತ್ತಾ ಮೈಮುರಿದಳು.
ಎದ್ದೇನು ಮಾಡುವುದಿದೆ ಈಗ. ಅಮ್ಮ ಬಂದರೆ ನಾನು ಸ್ನಾನಗೃಹದಲ್ಲಿರುವೆ ಎಂದು ಹೇಳು. ನನಗೀಗ ಯಾರನ್ನೂ ನೋಡುವ ಮಾತನಾಡುವ ಮನಸ್ಸಿಲ್ಲ. 
ಅಯ್ಯೋ.. ಹಾಗೆ ಸುಳ್ಳು ಹೇಳಲು ನನ್ನಿಂದಾಗದಮ್ಮ..ಇಂದು ನಿನಗೆ    ನೃತ್ಯ ಕಲಿಸಲು ಗುರುಗಳು ಬರುವವರಿದ್ದಾರೆ. ನಿನ್ನನ್ನು ಹೊತ್ತಿಗೆ ಸರಿಯಾಗಿ ಸಿದ್ಧಗೊಳಿಸದಿದ್ದರೆ ನನ್ನ ಹೊಟ್ಟೆಗೆ ಕಲ್ಲು ಬಿದ್ದೀತು ತಾ. ಏಳಮ್ಮಾ..   ನೋಡೀಗ ನಿನಗೆ ನಿದ್ದೆಹರಿದಿದೆ ತಾನೇ.. ಎದ್ದು ಬಿಡು. ಬೇಗನೇ ಸಿದ್ಧಳಾಗು ಪಿಂಗಳೇ..
 ಗುರುಗಳು ಎಂಬ ಶಬ್ಧ ಕೇಳಿದೊಡನೆ ಪಿಂಗಳೆಯು ಏಳುವ ಮನಸ್ಸು ಮಾಡಿದಳು.
 ಮಹಾರಾಜರು  ಸಮಾಧಾನದ ಹೊತ್ತಿನಲ್ಲಿರುವಾಗ ತಾನಾಗಿ ಇಟ್ಟಿದ್ದ ಬೇಡಿಕೆ ಇದು. ಆ ಬೇಡಿಕೆಯನ್ನು ಮನ್ನಿಸಿ ಅವರು ನಾಟ್ಯಗುರುಗಳಿಗಾಗಿ ರಾಜ್ಯವಿಡೀ  ಡಂಗುರ ಹೊಡೆಸಿ, ತಾನೇ ಸ್ವತಃ  ಯಾರನ್ನೋ ಆರಿಸಿದ್ದಾರೆ ಎಂಬ ಸುದ್ದಿಯೂ ಅವಳಿಗೆ ಸಿಕ್ಕಿತ್ತು.
 ನೃತ್ಯದಲ್ಲಿ ಅಪಾರ ಆಸಕ್ತಿದ್ದ ಪಿಂಗಳೆಯ ನೃತ್ಯದ ಜೊತೆ ಅವಳ ಅಪಾರ ಸೌಂದರ್ಯ ರಾಜನ ಕಣ್ಣಿಗೆ ಬಿದ್ದು ಅವಳು ರಾಜನ ಗಣಿಕೆಯಾಗಿ ಬದಲಾದ ಮೇಲೆ ಕಲಿಯುವ ಅವಕಾಶ ತಪ್ಪಿ ಹೋಗಿತ್ತು. ಈಗಿನ್ನು ತಾನಾಗಿ ಬಂದಿರುವ ಅವಕಾಶವನ್ನು ಕಳೆದುಕೊಂಡರೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಸುಮ್ಮನೆ ಬದುಕು ಕಳೆಯಬೇಕಷ್ಟೇ..
ಎಲ್ಲೋ ಹಾರಿ ಬಿದ್ದಿದ್ದ ಸೆರಗನ್ನು ನೆಪಮಾತ್ರಕ್ಕೆ ಮೈಮೇಲೇಳೆದುಕೊಂಡು ಆಕೆ ನಡೆಯುತ್ತಿದ್ದರೆ ಸಖಿಯ ಕಣ್ಣಲ್ಲೂ ಅಮಲೇರುತ್ತಿತ್ತು, ಅಂತಹ ಸೌಂದರ್ಯ ಪಿಂಗಳೆಯದ್ದು. ಹೊಸತಾದ ಬಟ್ಟೆಯನ್ನು ಎತ್ತಿಕೊಂಡು ಸಖಿಯೂ ಅವಳ ಹಿಂದೆಯೇ ನಡೆದಳು. 
  ಅವಳಿಗೆ ಸ್ನಾನ ಮಾಡಿಸುವಾಗ ಅಲ್ಲಲ್ಲಿ ರಕ್ತ ಮೆತ್ತಿದಂತೆ ಕೆಂಪಾಗಿದ್ದ ಅವಳ ಹಾಲು ಬಿಳುಪಿನ ಮೈಯನ್ನು ನೋಡಿ  'ಪಿಂಗಳೇ ಇದೇನೇ ಇದು.. ನಿನ್ನ ಕೋಮಲ ತನುವನ್ನು ಹೀಗೂ ಘಾಸಿಗೊಳಿಸುವುದೇತಕೆ ಹೇಳು ಮಹಾರಾಜರು. ನೀನಾದರೂ ಮಾತುಗಳಲ್ಲೇ ಮೈಮರೆಸಿ ಅವರನ್ನು  ಒಲಿಸಿಕೊಳ್ಳಬಾರದೇನೇ' ಎಂದಳು.
ಪಕ್ಕನೆ ಕಳೆದಿರುಳಿನ ನೆನಪು ಬಂದು ಪಿಂಗಳೆ ಗಂಭೀರಳಾದಳು. ಇನ್ನೂ ಹದಿಹರೆಯದ ಅರಸಿನ ಮಾಸದ ತನ್ನ ಮೈಯ ಒಡೆಯ ಮಹಾರಾಜನಾದರೋ ಮುಪ್ಪಿನೆಡೆಗೆ ಮುಖ ಮಾಡಿರುವವ. ಬರಿದೇ ಹಿಂಸೆ ಮಾಡುವುದನ್ನೇ ಸುಖವೆಂದುಕೊಂಡಿದ್ದಾನೇನೋ ಅವನು.ನೋವು ತಡೆಯದೇ ಕಣ್ಣುಗಳಲ್ಲಿ ನೀರು ಹರಿಯುವಾಗ ಸುಮ್ಮನೆ ತೆಕ್ಕೆಯೊಳಗಿಟ್ಟು ಸಂತೈಸುತ್ತಿದ್ದ ಅವನನ್ನು ಹೇಗೆ ಅರ್ಥ ಮಾಡಿಕೊಳ್ಳುವುದೆಂದು ಇನ್ನೂ ತಿಳಿಯದಾಗಿದ್ದಳು.  ಅಮ್ಮ ಕಾಂಚಮಾಲೆಯೇನೋ ಕಸುಬಿನ ಎಲ್ಲಾ ಕುಶಲತೆಯನ್ನೂ ಪಿಂಗಳೆಗೆ ಕಲಿಸಿದ್ದಲ್ಲದೇ ನಾಲ್ಕು ಪತ್ನಿಯರಿದ್ದರೂ ಇನ್ನೂ ಮಕ್ಕಳೇ ಇಲ್ಲದ ರಾಜನಿಗೆ ನಿನ್ನ ಹೊಟ್ಟೆಯಲ್ಲಾದರೂ ಕುವರನ ಜನನವಾದರೆ ರಾಜ್ಯ ನಮ್ಮ ಕೈಗೆ ಬಂದಂತೆ.. ನೀನು ಇನ್ನು ರಾಜಮಾತೆಯಾಗಿ ಮೆರೆಯಬಹುದು ಎಂದೆಲ್ಲಾ ಕನಸುಗಳನ್ನು ಕಟ್ಟಿಕೊಟ್ಟಿದ್ದಳು. ಆದರೆ ಓರಗೆಯ ಗೆಳತಿಯರು ವರ್ಣಿಸುವ ಶೃಂಗಾರದ ಘಟನೆಗಳೇನೂ ನಡೆಯದ, ಸುಮ್ಮನೆ ತನ್ನನ್ನು ಹಿಂಸೆಗೊಳಪಡಿಸುವ ಮಹಾರಾಜನಿಂದ ತನಗೆ ಮಕ್ಕಳಾಗುವುದುಂಟೇ?  ಇಂತಹ ವಿಷಯಗಳನ್ನು ಯಾರೊಡನೆಯೂ ಹಂಚಿಕೊಳ್ಳುವಂತಿರಲಿಲ್ಲ. ಗೆಳೆತಿಯರು ರಾಜ್ಯದ ಯುವಕರ ಸಂಗದಲ್ಲಿ ಮೈ ಮರೆಯುವುದಲ್ಲದೇ ಅದನ್ನು ಮಾತುಗಳಲ್ಲಿ ಬಯಲಾಗಿಸುವ ದಾರ್ಶ್ಯವನ್ನೂ ತೋರುತ್ತಿದ್ದರು. ಆದರೆ ರಾಜನೊಬ್ಬನ ಅಧಿಕೃತ ಸೊತ್ತಾದ ತಾನು ಯಾರೊಂದಿಗೂ ಹೆಚ್ಚಿಗೆ  ಬೆರೆಯುವಂತೆಯಾಗಲೀ, ಮಾತನಾಡುವಂತೆಯಾಗಲೀ ಇಲ್ಲದೇ ಪಂಜರದ ಬದುಕನ್ನೇ ಬದುಕಬೇಕಾದುದು ಪಿಂಗಳೆಗೆ ಬೇಸರವೆನಿಸುತ್ತಿತ್ತು. ಇವಳೊಬ್ಬಳು ಮುದಿ ಸಖಿ ಮತ್ತು ಅಮ್ಮ ಕಾಂಚನಮಾಲೆಯಲ್ಲದೇ ಬೇರೊಂದು ಜೀವ ಈ ಕೋಣೆಯೊಳಗೆ ಪ್ರವೇಶ ಮಾಡುತ್ತಿದ್ದೆಂದರೆ  ಮಹಾರಾಜರು ಮಾತ್ರ.  
ಹಾಗಾಗಿಯೇ ಇಂದು ಅವಳಿಗೆ ಕುತೂಹಲದ ದಿನ.ಹೊಸ ಗುರುಗಳು. ಪುರುಷರ ನೆರಳು ಸೋಕದ ಕೋಣೆಯಲ್ಲಿ ಒಬ್ಬ ಅಪರಿಚಿತನ ಪ್ರವೇಶ. ಹೇಗಿರಬಹುದು ಆತ? ಗೆಳತಿಯರು ವರ್ಣಿಸುವ ಪುರುಷಸಿಂಹಗಳಂತೆ ಇರಬಹುದೇ? ರೂಪವಂತನೇ? ಗುಣವಂತನೇ? ತನ್ನ ಸೌಂದರ್ಯಕ್ಕೆ ಸೋತು ಶರಣಾಗುವವನೇ?  
ಹೊರಗಿನಿಂದ ಹೆಜ್ಜೆಗಳ ಸದ್ದಾದಂತಾಗಿ ಎದ್ದು ನಿಂತಳು. ಕನ್ನಡಿಯೊಳಗಿನ ಪ್ರತಿಬಿಂಭ ಅಪಾರ ರೂಪರಾಶಿಯೊಬ್ಬಳನ್ನು ದರ್ಶಿಸುತ್ತಾ ಅದು ನೀನೇ ಎಂದು ಹೇಳುತ್ತಿತ್ತು. ಮೊಗದಲ್ಲಿ ನಗುವನ್ನು ತಂದುಕೊಂಡಳು. ಸಖಿ ಬಾಗಿಲು ತೆರೆದು ಯಾರನ್ನೋ ಸ್ವಾಗತಿಸುವುದು ಕೇಳಿಸಿತು. ಕಾಲುಗಳು ಅಲ್ಲಿಗೆ ಹೋಗುವ ಆತುರ ತೋರುತ್ತಿದ್ದರೂ ಅಮ್ಮ ಕಾಂಚನಲೇಖೆ ಕರೆಯದೆ ಹೊರಗೆ ಹೋಗುವಂತಿರಲಿಲ್ಲ. ಹಾಗಾಗಿ ಹೊರಗಿನ ವಿದ್ಯಮಾನಕ್ಕೆ ಕಿವಿಗಳನ್ನು ತೆರೆದಿಟ್ಟಳು. 
ಅಂತೂ 'ಪಿಂಗಳೇ ಇಲ್ಲಿ ಬಾ ಮಗಳೇ'  ಎಂಬ ಸ್ವರ ಕೇಳಿಸಿತು.  ಸಖಿ ಬಂದು ತಲೆಯ ಮೇಲಿನ  ಅವಕುಂಠನವನ್ನು  ಸರಿ ಪಡಿಸಿ ಮೊಗ ಕಾಣದಂತೆ ಮಾಡಿದಳು. ನಿಧಾನಕ್ಕೆ ಎದ್ದು ನಿಂತ ಪಿಂಗಳೆ ಹೆಜ್ಜೆಗಳ ಮೇಲೆ ಹೆಜ್ಜೆಗಳನ್ನಿಡುತ್ತಾ ಹೊರ ಬರುತ್ತಿದ್ದರೆ ಅದೇ ನವಿಲಿನ  ನೃತ್ಯದಂತೆ ಕಾಣಿಸುತ್ತಿತ್ತು. 
  ಇವರು ನಿನ್ನ ಗುರುಗಳಮ್ಮಾ. ಹೆಸರು ಧೀರ್ಘತಮ. ಮಹಾರಾಜರು ನಿನ್ನ ಅಪೇಕ್ಷೆಯೆ ಮೇರೆಗೆ ದೂರದ ಊರಿಂದ ಇವರನ್ನು ಕರೆಸಿದ್ದಾರೆ. 
ಕುತೂಹಲದಿಂದ ಕತ್ತೆತ್ತಿ ನೋಡಿದ ಪಿಂಗಳೆ  ಅಷ್ಟೇ ಬೇಗನೇ ತಲೆ ತಗ್ಗಿಸಿಕೊಂಡು ಮನದಲ್ಲೇ ಮುದುರಿದಳು. 
 ತಲೆ ಹಣ್ಣಾದ ಮುದುಕ. ಬಹುಷಃ ಮಹಾರಾಜರಿಂದಲೂ ಹೆಚ್ಚು ಪ್ರಾಯದವನೇನೋ.. ಹುಂ.. ಇಂತಹವರಲ್ಲದೇ  ಬೇರಾರನ್ನಾದರೂ ತನ್ನ ಬಳಿಗೆ ಮಹಾರಾಜರು ಕಳುಹಿಸುತ್ತಾರೆಯೇ? ಅಯ್ಯೋ.. ತನಗೇನಾಗಿದೆ. ನೃತ್ಯ ಕಲಿಯುವುದಲ್ಲವೇ ತನ್ನ  ಆಸೆದ್ದುದು.. ಯಾರು ಕಲಿಸಿದರೇನು? ಈ  ವಸಂತೋತ್ಸವದಲ್ಲಿ  ನೃತ್ಯ ನೋಡಿದವರು  ಶತ ಶತಮಾನಗಳವರೆಗೆ ನೆನಪಿಟ್ಟುಕೊಳ್ಳಬೇಕು.. ತನ್ನ ಆಲೋಚನೆಗಳಿಂದ ಮುಕ್ತಳಾಗಿ  ತಲೆ ಕೊಡವಿಕೊಂಡು ಅವರ ಕಾಲು ಮುಟ್ಟಿ ನಮಸ್ಕರಿಸಿದಳು.
ಕಾಂಚನಲೇಖೆ ಮಗಳ ಕಡೆಗೆ ತಿರುಗಿ ಸಣ್ಣ ಸ್ವರದಲ್ಲಿ 'ಪಿಂಗಳೇ ನಿನಗೆ ದೇಹಾಲಸ್ಯವಿಲ್ಲದಿದ್ದರೆ ನಿನ್ನ ನೃತ್ಯಾಭ್ಯಾಸ ಇಂದೇ ಶುರುವಾಗುತ್ತದೆ.' ಎಂದಳು.
 ಆಗಲೇ ಗಂಭೀರ ಸ್ವರವೊಂದು ಅವಳನ್ನು ಬೆಚ್ಚಿಬೀಳಿಸಿತು.ಇಲ್ಲಾ.. 'ನಾನಿನ್ನು ಈಕೆಯ ಗುರುವಾಗಲು ಒಪ್ಪಿಗೆ ಕೊಟ್ಟಿಲ್ಲ. ನನ್ನ ಶಿಷ್ಯೆಯಾಗುವವಳಿಗೆ ಕಲಿಕೆಯ ಹಸಿವಿರಬೇಕು. ಅದರ ಹೊರತು ಬೇರೇನು ಯೋಚನೆಗಳೇ ಇರಬಾರದು.  ಮೊದಲಿಗೆ ನೀನು ಇಲ್ಲಿಯವರೆಗೆ ಕಲಿತ  ನೃತ್ಯವನ್ನು ನಾನು ನೋಡಬೇಕಿದೆ. ಆ ಬಳಿಕ ನಿರ್ಧಾರ..' ಎಂದರು.
 ತನ್ನ ಕಲಿಕೆಗೆ ಸರಿಯಾದ ಗುರುವನ್ನೇ ಆಯ್ಕೆ ಮಾಡಿದ್ದಕ್ಕಾಗಿ ಮೊದಲ ಬಾರಿಗೆ ಮಹಾರಾಜರ ಬಗ್ಗೆ ಸಂತಸಗೊಂಡಳು ಪಿಂಗಳೆ.
ಕುಣಿತದ ನೆನಪು ಬಂದೊಡನೇ ಅವಳಾಗಲೇ ವರ್ಷಋತುವಿನ ನವಿಲಾಗಿದ್ದಳು. ಹೆಜ್ಜೆಗಳು ನೆಲದಿಂದ ಮೇಲೆದ್ದವು.ಅವಳ ನಡೆಯ ಲಾಸ್ಯಕ್ಕೆ ನಾಟ್ಯದ ಭಾಷ್ಯಕ್ಕೆ ಗುರುಗಳೇ ಬೆರಗಾದರು.ಅಪ್ಪಟ ವಜ್ರ. ಕೊಂಚ ಸಾಣೆಯ ಅವಶ್ಯಕತೆಯಷ್ಟೇ ಬೇಕಾಗಿರುವುದು. ಒಪ್ಪಿಗೆಯ ನಗೆಯಿತ್ತು ಅವರ ಮೊಗದಲ್ಲಿ.
ಪಿಂಗಳೆಗೀಗ ಊಟ ತಿಂಡಿ ನಿದ್ರೆಯ ನೆನಪೇ ಇರಲಿಲ್ಲ. ಅವಳ ಹಗಲು ರಾತ್ರಿಗಳು ನೃತ್ಯಾಭ್ಯಾಸದಲ್ಲೇ ಮುಳುಗೇಳುತ್ತಿತ್ತು.  ಅವಳ ಕಲಿಕೆಯ ವೇಗಕ್ಕೆ ಗುರುಗಳಾದ ಧೀರ್ಘತಮರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದರು.  ಮಹಲಿನಲ್ಲೇ ಗುರುಗಳಿಗೆ ಪ್ರತ್ಯೇಕ ಬಿಡಾರದ ವ್ಯವಸ್ಥೆಯಿತ್ತು. ಹಾಗಾಗಿ ಅವಳ ಯಾವುದೇ ಸಂದೇಹಕ್ಕೆ ತಕ್ಕ ಉತ್ತರ ಕೂಡಲೇ ದೊರೆಯುತ್ತಿತ್ತು. ಈಗ ಸಾಧನೆಯತ್ತ ಮಾತ್ರವಿದ್ದುದು ಅವಳ ನೋಟ. ಗುರುಗಳ ನೃತ್ಯದ ಆಳವಾದ ಅರಿವಿನ ಜೊತೆಗೆ ಈ ಪ್ರಾಯದಲ್ಲೊ ಅವರ ನಡೆಯ ಮಿಂಚಿನ ಸಂಚಾರದ ಬಗ್ಗೆ ಅಚ್ಚರಿ ಅವಳಲ್ಲಿ. ಅಭ್ಯಾಸ ಮಾಡುತ್ತಾ ಇದ್ದರೆ ಅದು ನಿನ್ನ ಪಾಲಿಗೂ ಬಂದೀತೆಂಬ ಗುರುವಿನ ಮಾತುಗಳಲ್ಲಿ ಅವಳಿಗಿನ್ನೂ ನಂಬಿಕೆ ಇದ್ದಿರಲಿಲ್ಲ.ಅವರ ಮೆಚ್ಚುಗೆ ಗಳಿಸಲು ಏನನ್ನಾದರೂ ಮಾಡುವ ಹುಮ್ಮಸ್ಸು ಅವಳದ್ದು. ಯಾವ ಬಳಲಿಕೆಯನ್ನೂ ಗಮನಕ್ಕೆ ತೆಗೆದುಕೊಳ್ಳದೆ ಅಭ್ಯಾಸದತ್ತ ಮನವಿಟ್ಟಿದ್ದಳು.
ಸಂಜೆಯ ಹೊತ್ತು. ಸೂರ್ಯನಾಗಲೇ ಪಶ್ಚಿಮದಿಕ್ಕಿನತ್ತ ದಾಪುಗಾಲು ಹಾಕುತ್ತಾ ಸಾಗುತ್ತಿದ್ದ.ಹೊರಗೆ ಮಂದದ ಬೆಳಕು. ಪಿಂಗಳೆಯ ಮಹಲಿನಲ್ಲಿ ದೀಪಗಳು ಹೊತ್ತಿಕೊಂಡಿದ್ದವು.   ನೃತ್ಯಾಭ್ಯಾಸಕ್ಕಾಗಿ ಇನ್ನೇನು ಗೆಜ್ಜೆಗಳನ್ನು ಕಾಲಿಗೆ ಕಟ್ಟಬೇಕು ಎನ್ನುವಷ್ಟರಲ್ಲಿ ಹೊರಗಿನಿಂದ ಮಹಾರಾಜರು ಬರುತ್ತಿದ್ದಾರೆ ಎಂಬ ಸಂದೇಶ ಬಂದಿತು. 
ಪಿಂಗಳೆಯ ಹೃದಯ ನಿರಾಸೆಗೊಳಗಾದರೂ ತೋರಿಸಿಕೊಳ್ಳದೆ ಕಾಲಂದುಗೆಗೆಗಳನ್ನು ತೆಗೆದು ಪೆಟ್ಟಿಗೆಗೆ ಸೇರಿಸಿದಳು. ಆಗಲೇ ಒಳಸೇರಿದ ಮಹಾರಾಜನ ಒರಟು ತೋಳುಗಳು ಅವಳನ್ನು ಬಳಸಿಕೊಂಡವು. ನಯವಾಗಿ ಅವನ ತೋಳುಗಳನ್ನು ಸರಿಸುತ್ತಾ ' ಇನ್ನಾರು ದಿನಗಳಲ್ಲಿ ವಸಂತೋತ್ಸವವಲ್ಲವೇ ಮಹಾರಾಜ' ಎಂದಳು. 
'ಹೌದು ಪ್ರಿಯೇ ಆದರೆ ಅಲ್ಲಿ ನಿನ್ನ ನೃತ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ನೀನು ನನ್ನ ಹೃದಯದರಸಿ. ನಿನ್ನ ಈ ದೇಹ,  ಸೌಂದರ್ಯ, ಕಲೆ ಎಲ್ಲವೂ ಕೇವಲ ನನಗಾಗಿ ಮಾತ್ರ. ಅದು ಹೊರಗೆಲ್ಲೂ ಕಾಣುವಂತಿಲ್ಲ. ನಿನ್ನಾಸೆ ಪೂರೈಸಲೆಂದಷ್ಟೇ ಗುರುಗಳನ್ನು ಇರಿಸಿದ್ದೇನೆ. ಅವರು ನಿನ್ನ ನೃತ್ಯಭ್ಯಾಸ ಪೂರ್ಣವಾಗಿದೆ ಎಂದ ದಿನ ಅವರೂ ಹೋಗುತ್ತಾರೆ. ಮತ್ತೆ ನಾನು ನೀನು ಇಬ್ಬರೇ..'
 ಮಹಾರಾಜ ಉತ್ಸಾಹದಿಂದ ವರ್ಣಿಸುತ್ತಿದ್ದರೆ ಬೇಸರದಿಂದ   ಪಿಂಗಳೆಯ ಮನಸ್ಸು ಮುದುಡಿಹೋತು. ಯಾರೂ ಆಸ್ವಾದಿಸಿದ ಕಲೆಗೆ ಬೆಲೆ ಎಲ್ಲಿಯದ್ದು ? ಛೇ.. 
ಮರುದಿನ ಅವಳು ಅನ್ಯಮಸ್ಕತೆಯಲ್ಲೇ ಹೆಜ್ಜೆ ಹಾಕುತ್ತಿದ್ದರೆ ಗುರುಗಳು ಅನೇಕಬಾರಿ ಎಚ್ಚರಿಸಬೇಕಾಯಿತು. 'ಯಾಕೆ ಪಿಂಗಳೇ ಆರೋಗ್ಯ ಸರಿ ಇಲ್ಲವೇ? ಇಂದು ನೃತ್ಯಾಭ್ಯಾಸ ಬೇಡವೆಂದಾದರೆ ಬಿಟ್ಟು ಬಿಡು.. ಸುಮ್ಮನೆ ನೃತ್ಯಕ್ಕೆ ಅಪಚಾರ ಮಾಡಬೇಡ.. '
ಎಷ್ಟು ಸಾವರಿಸಿಕೊಳ್ಳಬೇಕೆನ್ನಿಸಿದರೂ ಸಾಧ್ಯವೇ ಆಗಲಿಲ್ಲ. ನೃತ್ಯದ ಹಾಡಿನಲ್ಲಿ ವಸಂತಕಾಲದ ವರ್ಣನೆಯಿದ್ದರೆ ಇವಳ ಕಂಗಳು ಸುಮ್ಮನೆ ಕಣ್ಣೀರಾಗುತ್ತಿದ್ದವು ಏನನ್ನೊ ಯೋಚಿಸುತ್ತಾ..
ಧೀರ್ಘತಮ ಕೈಯಲ್ಲಿದ್ದ ತಾಳವನ್ನು ಬಿಸುಡಿದ ವೇಗಕ್ಕೆ ಅದು ಪಳಾರನೆ ತುಂಡಾಯಿತು.
'ಎಲ್ಲಿದೆ ನಿನ್ನ ಧ್ಯಾನ? ಪರಧ್ಯಾನದಲ್ಲಿ ತೊಡಗಿ ನೃತ್ಯವನ್ನು ಕಡೆಗಣಿಸುವುದಾದರೆ ಇಂದೇ ನಿನ್ನ ವಿದ್ಯಾಭ್ಯಾಸದ ಕೊನೆಯ ದಿನ'.. . 
 ಪಿಂಗಳೆ ಬುಡ ಕಡಿದ ಮರದಂತೆ ಅವನ ಪಾದಗಳಲ್ಲುರುಳಿದಳು. 'ಬೇಡ ಬೇಡ ಗುರುವೇ.. ಹಾಗೆ ಹೇಳಬೇಡಿ .. ನನ್ನ ಮೇಲೆ ಕರುಣೆಯಿಡಿ. ನಾನು ನನ್ನ ಬದುಕಾದ ನೃತ್ಯಕ್ಕೆ ಅಪಚಾರ ಎಸಗುವವಳಲ್ಲ...'
 ಧೀರ್ಘತಮನ ಬಾಹುಗಳು ಅವಳ ಹೆಗಲನ್ನು ಸ್ಪರ್ಶಿಸಿದವು.ಇಲ್ಲಿಯವರೆಗೆ ಇಲ್ಲದ ಹೊಸತೇನೋ ಕಂಪನ ಅವಳ ಮೈಯಲ್ಲಿ.ತನ್ನ ಹೆಗಲ ಮೇಲಿದ್ದ ಅವನ ಕೈಬೆರಳುಗಳನ್ನು ಸುಮ್ಮನೇ ನೋಡಿದಳು.
 'ಎದ್ದೇಳು ಪಿಂಗಳೇ.. ನಿನಗೇನೋ ನೋವಾಗಿದೆ ಎಂದು ನನಗೂ ತಿಳಿದಿದೆ. ಹಂಚಿಕೊಂಡರೆ ದುಃಖ ಕಡಿಮೆಯಾಗುತ್ತದೆ. ನಾನು ನಿನ್ನ ನಂಬಿಕೆಗೆ ತಕ್ಕವನು ಎಂದಿದ್ದರೆ ಅದನ್ನು ನನ್ನೊಡನೆ ಹೇಳು. ಪರಿಹಾರ ಸಿಗುವಂತಹುದಾಗಿದ್ದರೆ ಪರಿಹಾರ ಹುಡುಕೋಣ' ಎಂದ.
ಅತ್ತಿತ್ತ ನೋಡಿದಳು. ನೃತ್ಯಾಭ್ಯಾಸದ ಮಧ್ಯೆ ಯಾರ ಅಡ್ಡಿ ಆತಂಕವೂ ಬರಬಾರದೆಂದು ತನ್ನಪ್ಪಣೆಲ್ಲದೆ  ನೃತ್ಯಾಂಗಣಕ್ಕೆ ಯಾರ ಪ್ರವೇಶವನ್ನೂ ನಿಷೇಧಿಸಿದ್ದ ದೀರ್ಘತಮ.
ಪಿಂಗಳೆಗಾದರೂ ತನ್ನಾಳವನ್ನು ತೋಡಿಕೊಳ್ಳಲು ಜೊತೆ ಎಲ್ಲಿತ್ತು? ಅವನ ಕಂಗಳ ಕಡೆ ನೋಡಿದಳು. ಅಲ್ಲೊಂದು ಪ್ರೀತಿಯ ಕೊಳವಿದ್ದಂತಿತ್ತು. ಮುಳುಗಬಯಸಿದಳು. 
ಎಲ್ಲವನ್ನು ಮಾತುಗಳಲ್ಲಿ ಬಯಲಾಗಿಸಿದಳು. ಮತ್ತೂ ಮುಂದುವರಿಸುತ್ತಾ 'ನನ್ನ ಚಿಂತೆ ನನ್ನ ಬದುಕಿನದಲ್ಲ.. ಇಂದು ರಾಜನಾಡಿದ ಮಾತು ಇನ್ನೂ ನನ್ನನ್ನು ಘಾಸಿಗೊಳಿಸುತ್ತಿದೆ. ಕೇವಲ ಈ ಖಾಲಿ ಗೋಡೆಗಳ ನಡುವೆ ಮಧಿರೆ ಹೀರಿ ಪ್ರಮತ್ತನಾಗಿ ಬಿದ್ದುಕೊಂಡಿರುವ ರಾಜನ ಎದುರು ಮಾತ್ರ ನನ್ನ ನೃತ್ಯ ಪ್ರದರ್ಶನವಂತೆ.. ನಾಡಿದ್ದಿನ ವಸಂತ ಉತ್ಸವದಲ್ಲಿ ನಾನು ಗೆಜ್ಜೆ ಕಟ್ಟಬಾರದಂತೆ.. ಕಲಾವಿದರಿಗೆ ಚಪ್ಪಾಳೆಯ ಸದ್ದೇ ಅಲ್ಲವೇ ವಿಫುಲ ಸಂಪತ್ತು. ಅದಿಲ್ಲದೇ ಇದ್ದರೆ ನನ್ನ ಕಲಿಯುವಿಕೆ ಕಾನನದ ಸುಮವಾಗದೇ.. ಇದೇ ಚಿಂತೆಂದ ಇಂದು ನನ್ನ ಧ್ಯಾನ ಅತ್ತಿತ್ತ ಹಾರಾಡುತ್ತಿತ್ತು. ಈ ಬದುಕು ಸಾಕಾಗಿದೆ. ಇದರಿಂದ ಸಾವೇ ಆನಂದಮಯ ಅನ್ನಿಸುತ್ತಿದೆ' ಎಂದು ಅವನ ಉತ್ತರಕಾಗಿ ಕಾದಳು. 
ಧೀರ್ಘತಮನ ಮೊಗದಲ್ಲಿ ನಸುನಗುವಿತ್ತು. 
ಅವಳು ನೋಡುತ್ತಿದ್ದಂತೆಯೇ ಅವಳ ಕಣ್ಣುಗಳೇ ನಂಬದಂತಹ ಘಟನೆಯೊಂದು ಆ ಕ್ಷಣದಲ್ಲಿ ಜರುಗಿತು.
ಧೀರ್ಘತಮ ತನ್ನ ಮೊಗವನ್ನಾವರಿಸಿದ್ದ ಬಿಳಿಯ ಗಡ್ಡ ಮೀಸೆಗಳನ್ನು ತೆಗೆದ. ತಲೆಯ ಮೇಲಿದ್ದ ಮುಂಡಾಸನ್ನು ಬಿಚ್ಚಿ ಪಕ್ಕದಲ್ಲಿರಿಸಿದ. ಮೈಗೆ ಹಾಕಿದ್ದ ದೊರಗಿನ ನಿಲುವಂಗಿಯನ್ನು ತೆಗೆದ. 
ಇಪ್ಪತ್ತೆರಡೋ ಇಪ್ಪತ್ತಮೂರೋ .. ಅದಕ್ಕಿಂತ ಸ್ವಲ್ಪವೂ ಹೆಚ್ಚಲ್ಲದ ವಯಸ್ಸಾತನದು. 
ಪಿಂಗಳೆಯ ಕದಪುಗಳು ನಾಚಿಕೆಂದಲೂ ಆಘಾತದಿಂದಲೂ ಕೆಂಪೇರಿದವು. ಜೊತೆಗೆ ರಾಜನಿಗೇನಾದರೂ ಈ ವಿಷಯ ತಿಳಿದರೆ ಅನ್ಯಾಯವಾಗಿ ಇವನ ಪ್ರಾಣ ಹೋಗುವುದಲ್ಲಾ ಎಂಬ ಹೆದರಿಕೆಯಿಂದ ಎದೆ ಬಡಿತ ಮಿತಿ ಮೀರಿತು. ಮಾತುಗಳು ತೊದಲುತ್ತಾ.. 'ನೀವು..ಯಾರು? ನಿಜ ಹೇಳಿ.. ಯಾಕೆ ಬಂದಿರಿ ಇಲ್ಲಿ..' ಎಂದಳು.
'ಪಿಂಗಳೇ..' ಅವನ ಸ್ವರದಲ್ಲೀಗ  ನೀಲಮೇಘ ಶ್ಯಾಮನ ಕೊಳಲಿನ ಒನಪಿತ್ತು.'ನಿನಗಾಗಿಯೇ ಬಂದೆ ಎಂದರೆ ನಂಬುವೆಯಾ' ಎಂದ..
ಅವಳ ಕಣ್ರೆಪ್ಪೆಗಳು ಗಲಿಬಿಲಿಂದ ಪಟಪಟನೆ ಬಡಿದುಕೊಂಡವು. 'ನನಗಾಗಿಯೇ..? ಅಂದರೆ..?'
'ಅಂದು ವಸಂತೋತ್ಸವದಲ್ಲೇ ನಿನ್ನನ್ನು ಮೊದಲ ಬಾರಿಗೆ ನೋಡಿದ್ದು. ನಾನು ನೃತ್ಯದಲ್ಲಿ ಸಾಧನೆ ಮಾಡುತ್ತಿದ್ದವನಾದ್ದರಿಂದ ನಿನ್ನೆಡೆಗೆ ಸೆಳೆಯಲ್ಪಟ್ಟೆ. ನಿನ್ನನ್ನು ಮತ್ತೆ ನೋಡಬೇಕೆಂಬ ಬಯಕೆತ್ತು. ಆದರೆ ವಿಧಿ ಬೇರೆಯದನ್ನೇ ಬರೆದಿತ್ತು..'ಅವನ ಧ್ವನಿಯಲ್ಲಿನ ಹತಾಶೆ ಪಿಂಗಳೆಯನ್ನು ಅವನ ಬಳಿ ಸಾರಿ ಅವನ ಕೈಗಳನ್ನು ಹಿಡಿದು ಸಾಂತ್ವನಗೊಳಿಸುವಂತೆ ಮಾಡಿತು.
ತನ್ನ ಕೈ ಹಿಡಿದ ಅವಳ ಚಿಗುರು ಬೆರಳುಗಳನ್ನು ಸವರುತ್ತಾ ಮಾತು ಮುಂದುವರಿಸಿದ ಧೀರ್ಘತಮ. 'ಮೊದಲಿನಿಂದಲೇ ಹೇಳಿ ಬಿಡುತ್ತೇನೆ ಕೇಳು.. ನಾನು ನಿಮ್ಮ ದೇಶದ ಪಕ್ಕದಲ್ಲೇ ಇರುವ  ದೇಶ ಸಾಂಬಲ್ಯದ ಯುವರಾಜ. ನಿನಗೂ ರಾಜಕಾರಣದ ಕೊಂಚ ಅರಿ"ದೆ ಎಂದಾದರೆ ನಮ್ಮಿಬ್ಬರ ದೇಶಗಳ ನಡುವಿನ ಶತೃತ್ವದ ಅರಿವೂ ಇರಬಹುದಲ್ಲವೇ? 
ಆದರೂ ಚಿಕ್ಕಂದಿನಿಂದಲೇ ಇದ್ದ ನಾಟ್ಯದ ಬಗೆಗಿನ ವಿಶೇಷ ಮೋಹದಿಂದಾಗಿ ಇಲ್ಲಿಗೆ ಬಂದು   ಯುವರಾಜನೆಂಬ ಗುರುತು ಸಿಗದಂತೆ ವೇಷ ಮರೆಸಿಕೊಂಡು ಬಂದು ಇಲ್ಲಿನ ಗುರುಗಳಲ್ಲಿ ಕಲಿಯುತ್ತಿದ್ದೆ. ನಾನು ನೃತ್ಯದಲ್ಲಿ ಯಾವ ಪರಿಯಲ್ಲಿ ಮುಳುಗಿ ಹೋಗಿದ್ದೆ ಎಂದರೆ ನನಗೆ ನನ್ನ ಸುತ್ತ ಮುತ್ತಲಿನ ಪರಿವೆಯೇ ಇರುತ್ತಿರಲಿಲ್ಲ. ನನ್ನ ದೇಶ ನನ್ನ ಕರ್ತವ್ಯ ನನ್ನ ಜನ ಇವರ ಬಗೆಗಿನ ಚಿಂತೆಗಳೂ ಇರುತ್ತಿರಲಿಲ್ಲ.. ಇದೊಂದೇ ನನ್ನ ಉಸಿರು ನನ್ನ ಜೀವನ ಎಲ್ಲವೂ ಆಗಿತ್ತು. ಆಗಲೇ ಆ ವಸಂತೋತ್ಸವ ನಡೆದಿದ್ದು.. ನಾನು ಅಲ್ಲಿ ಭಾಗವಹಿಸದಿದ್ದರೂ ಅಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಆಸ್ವಾದಿಸಿದ್ದೆ. ಆ ದಿನ ಔತಣಕ್ಕೆಂದು ನನ್ನನ್ನೂ ಒಳಗೆ ಕರೆದೊದ್ದರು. ಬಗೆ ಬಗೆಯ ತಿನಿಸುಗಳನ್ನು ಬಡಿಸಿದ್ದರು. ತುತ್ತೆತ್ತುವ ಮುನ್ನ ರಾಜನ ಕಡೆಯವನೊಬ್ಬ ಬಂದು ' ಇಂದಿನ ಈ ಎಲ್ಲಾ ಸಂಭ್ರಮಕ್ಕೆ ಕಾರಣ  ಯುದ್ಧಭೂಮಿಯಲ್ಲಿ ನಮ್ಮ ಮಹಾರಾಜರ  ಶತ್ರುವಾದ ಸಾಂಬಲ್ಯದ ರಾಜನ ಮರಣ ಮತ್ತು ಅದರಿಂದ ಸಿಕ್ಕಿದ ನಮ್ಮ ಜಯ. ಇನ್ನೀ ಉತ್ಸವವನ್ನು ಪ್ರತೀ ವರ್ಷವೂ ಆಚರಿಸಲಾಗುವುದು' ಎಂಬ ಘೋಷಣಾವಾಕ್ಯವನ್ನು ಕೂಗಿದ. ಆಗಲೇ ನನಗೆ ತಿಳಿದದ್ದು ನನ್ನ ತೀರ್ಥರೂಪರ ಮರಣದ ಸುದ್ದಿ.. ಪಿಂಗಳೇ.. ಯೋಚಿಸು ಎಂತಹಾ ಮಗ ನಾನು ತಂದೆಯ ಮರಣದ ಸಂಭ್ರಮದ ದಿನದಾಚರಣೆಯ ಭೋಜನದಲ್ಲಿ ತುತ್ತೆತ್ತಿಕೊಳ್ಳುವವನಿದ್ದೆ.. ಅಂದೇ ನಿಶ್ಚಯಿಸಿದ್ದೆ .. ನನ್ನಪ್ಪನ ಹತ್ಯೆಗೆ ಪ್ರತೀಕಾರವೆಸಗದೇ ಇಲ್ಲಿಂದ ಹೋಗಲಾರೆ ಎಂದು..
ಆ ದಿನವೇ ನನಗೆ ಗೊತ್ತಾದ ಇನ್ನೂ ಒಂದು ಸುದ್ದಿ ಎಂದರೆ ನನ್ನೆದೆಯಲ್ಲಿ ಇನ್ನೂ ಅಡಿ ಇಡುತ್ತಿದ್ದ ನಿನ್ನ ಕಾಲುಗಳಿಗೆ ಸಂಕಲೆಕ್ಕಿ ರಾಜ ತನ್ನ ವಶ ಮಾಡಿಕೊಂಡಿದ್ದಾನೆ ಎಂಬುದು..
ಎದೆಯಲ್ಲಿ ಕ್ರೋಧದ ಜ್ವಾಲಾಮುಖಿ ಬುಗಿಯೇಳುತ್ತಿತ್ತು. ಸೈನ್ಯ ಕಟ್ಟಿಕೊಂಡು ಸೆಣಸಲು ರಾಜ್ಯವಿಲ್ಲ ಕೋಶವಿಲ್ಲ, ನನ್ನವರೆನಿಸಿಕೊಂಡ ಪ್ರಜೆಗಳಿಲ್ಲ.. ರಣಾಂಗಣದಲ್ಲಿದ್ದ  ಒಬ್ಬಂಟಿ ಯೋಧ ನಾನು.. ಅವಕಾಶಕ್ಕಾಗಿ ಕಾದಿದ್ದೆ.. ಮತ್ತೆ ನಿನ್ನಿಂದಾಗಿಯೇ ಅದು ನನ್ನ ಕೈ ಸೇರಿತು. ನಿನ್ನ ಬಯಕೆಯನ್ನು ಪೂರೈಸಲೆಂದೇ  ರಾಜನ ಅಪ್ಪಣೆಯಂತೆ ನಾನಿಲ್ಲಿಗೆ ಕಾಲಿಟ್ಟೆ. ನನಗೂ ದ್ವೇಷವಿರುವುದು ಇಲ್ಲಿನ ರಾಜನಲ್ಲಿ.. . ನನ್ನ ಶತ್ರು ಅವನೇ.. ಅವನನ್ನು ಕೊಂದು ಮುಗಿಸುವುದು ನನ್ನ ಉದ್ದೇಶ.. ಈಗ ಹೇಳು ನೀನು ನಿನ್ನ ಎದೆಯಾಳದ ಮಾತುಗಳನ್ನು ಬಯಲಿಗಿಟ್ಟಂತೆ ನಾನೂ ನನ್ನ ರಹಸ್ಯವನ್ನು ಬಿಚ್ಚಿಟ್ಟಿದ್ದೇನೆ. ಇಬ್ಬರ ದಾರಿಯೂ ಒಂದೇ ಆಗಿರುವ ಕಾರಣ ಜೊತೆಯಾಗಿ ಸಾಗುವುದಾದರೆ ಈಗ ಹಿಡಿದಿರುವ ಕೈ ಇನ್ನಷ್ಟು ಭದ್ರವಾಗುತ್ತದೆ ಏನೆನ್ನುವೇ' ಎಂದ. 
 ಪಕ್ಕನೇ ಆತನಿಂದ ದೂರವಾದ ಚೆಲುವಾದ ಪಿಂಗಳೆಯ ಮೊಗ ಗಂಭೀರವಾಯಿತು. ಆಲೋಚಿಸುವವಳಂತೆ ಸ್ವಲ್ಪ ಹೊತ್ತು ಮೌನವಾಗಿದ್ದ  ಆಕೆ ನಿಧಾನಕ್ಕೆ ನಾಚುತ್ತಾ ಆತನ ಸಮೀಪ ಬಂದು ಅವನ ಬೆರಳುಗಳಿಗೆ ಬೆರಳುಗಳನ್ನು ಹೆಣೆದಳು. 
' ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ ನನ್ನದೊಂದು ನಿಬಂಧನೆಯೂ ಇದೆ. ಈ ಸಲದ ವಸಂತೋತ್ಸವದಲ್ಲಿ ನನ್ನ ನಾಟ್ಯ ನಡೆಯುವಂತೆ ನೀವು ಮಹಾರಾಜರಲ್ಲಿ ಅಪ್ಪಣೆ  ಬೇಡಬೇಕು. ಆ ತುಂಬಿದ ಸಭಾಸದರೆದುರೇ  ನಮ್ಮ ಬದುಕಿನ ನಿರ್ಧಾರವೂ ನಡೆದುಬಿಡಲಿ..'
'ಅದನ್ನು ನನಗೆ ಬಿಡು.. ಅಲ್ಲಿಯವರೆಗೆ ಈ ಮಾತುಗಳು ಮತ್ತು ನನ್ನ ಈ ರೂಪ ನಮ್ಮಿಬ್ಬರಲ್ಲೇ ಇರಲಿ' ಎಂದ ಧೀರ್ಘತಮ ಯಾವುದೋ ಒಂದು ನಿರ್ಧಾರಕ್ಕೆ ಬಂದವನಂತೆ.. 
ತುಂಬಿದ ಸಬಾಂಗಣವದು. ರಾಜ ಮತ್ತು ಸಭಾಸದರು ಮಾತ್ರವಲ್ಲದೇ ಊರ ಪರವೂರ ವಿಶೇಷ ಅತಿಥಿಗಳನ್ನು ಹೊಂದಿತ್ತು. ಆ ದಿನದ ವಿಶೇಷವೆಂದರೆ ಗುರು ಮತ್ತು ಶಿಷ್ಯೆಯರ ಜುಗಲ್ ಬಂಧಿ.. ಧೀರ್ಘತಮನ ಬೇಡಿಕೆಗೆ ರಾಜ ಮಣಿದು ನೀಡಿದ್ದ ಮನ್ನಣೆಯಾಗಿತ್ತದು.
ಸಭಿಕರಿಂದ ಸ್ವಲ್ಪ ದೂರದಲ್ಲೇ ಇದ್ದ ವೇಧಿಕೆಯ ಸಿಂಹಾಸನದ ಮೇಲೆ ರಾಜ ವಿರಾಜಮಾನವಾಗಿದ್ದ. ಒಂದು ಕಡೆ ಅಂತಃಪುರದ ಸ್ತ್ರೀಯರ ದಂಡು ಪರದೆಯ ಹಿಂದೆ ಕುಳಿತು ಅಸೂಯೆಯ ಕಣ್ಣುಗಳಿಂದ ನೋಡುತ್ತಿದ್ದರೆ ಇನ್ನೊಂದೆಡೆ ಅಹ್ವಾನಿತರ ಕುತೂಹಲದ ನೋಟ.. 
ಅವಳು ಸರ್ವಾಲಂಕಾರಭೂತೆಯಾಗಿ ಘಲ್ ಘಲ್ ಎಂದು ಗೆಜ್ಜೆ ನಾದದೊಂದಿಗೆ  ಕೋಲ್ ಮಿಂಚಂತೆ ವೇಧಿಕೆಯನ್ನೇರಿದಳು. ರಾಜ ಅವಳ ಕಡೆಗೆ ಹೆಮ್ಮೆಂದ ನೋಡಿ ಕಣ್ಮಿಟುಕಿಸುತ್ತಾ   ಇನ್ನೊಂದು ಕಡೆಯಿಂದ ವೃದ್ಧನಾದ ಗುರುವನ್ನು ನಿರೀಕ್ಷಿಸುತ್ತಿದ್ದರೆ  ಸದೃಡ ಯುವಕನ ಆಗಮನವಾಯಿತು. ಪಕ್ಕನೆ ಕತ್ತಿ ಹಿರಿದು ಏಳ ಹೊರಟವ ತನ್ನನ್ನು ತಾನು ಸಂಭಾಳಿಸಿಕೊಂಡ. ಇದರಲ್ಲೆನೋ ಸಂಚಿದೆ ಆದರೆ ಆಹ್ವಾನಿತರೆದುರು ಈಗಲೇ ಅದನ್ನು ಪ್ರಚುರ ಪಡಿಸಿದರೆ ತನ್ನ ದೇಶದ ಮರ್ಯಾದೆಯ ಕಥೆಯೇನು ಎಂದು ಚಿಂತಿಸಿ, ತಾನು ಜಾಗರೂಕನಾಗಿದ್ದರೆ ಸರಿ ಎಂದು ಸುಮ್ಮನೆ ಕುಳಿತು ಮುಂದಾಗುವುದನ್ನು ನೋಡ ಹೊರಟ.
ಅವನ ಅಪ್ಪಣೆ ಪಡೆದು ಕಣ್ಮಿಟುಕಿಸುವಷ್ಟರಲ್ಲಿ ಇಬ್ಬರ ನೃತ್ಯವೂ ಶುರುವಾಯಿತು. ಎಲ್ಲರೂ ನರ್ತನದಲ್ಲಿ ತಲ್ಲೀನರಾದರು. ಅದೊಂದು ಮಹಾ ಪ್ರವಾಹ .. ಒಬ್ಬರನ್ನೊಬ್ಬರು ಮೀರಿಸುತ್ತಿದ್ದರು.. ಸುಂದರಿಯಾದ ಅವಳಿಗೆ ಸುಂದರನಾದ ಅವನ ಸರಿ ಮಿಗಿಲೆನಿಸುವ ಜೋಡಿ..  ಯಾರ ಕಡೆಗೆ ನೋಡುವುದೆಂಬ ಗೊಂದಲ ನೋಡುಗರಿಗೆ..ರೆಪ್ಪೆ ಪಿಳುಕಿಸದೆ ಎಲ್ಲರ ಕಣ್ಣುಗಳು ಅವರ ನರ್ತನದ ಸುಖವನ್ನು ಕಣ್ಣುಗಳಲ್ಲಿ ಹೀರುತ್ತಿತ್ತು. ಎಲ್ಲರೂ ಮೈ ಮರೆತಿದ್ದರು. ರಾಜನೂ ನೃತ್ಯದ ಮೋಡಿಗೊಳಗಾಗಿದ್ದ. 
ನೃತ್ಯದ ಅಭಿನಯದ ಜೊತೆ ಜೊತೆಗೆ ಅವರಿಬ್ಬರ ಕಣ್ಣುಗಳು ಏನನ್ನೋ ಮಾತನಾಡಿಕೊಳ್ಳುತ್ತಿದ್ದವು.
 ಅವನ ಕಣ್ಣಲ್ಲೀಗ ಅದೇನೋ ಹೊಳೆವ ಸೆಳಕು.. ಅವಳ ಕಣ್ಣಲ್ಲೂ ಪ್ರತಿಫಲಿಸಿತು.
 ನೃತ್ಯದ ಸಹಜ ನಡಿಗೆಯೊಂದಿಗೆ ಉಡುಪಿಗೆ ಕೈ ಹಾಕಿ ಸಣ್ಣದಾದ  ವಿಷ ಸವರಿದ ಹರಿತದ ಚೂರಿಯನ್ನು ಕೈಗೇರಿಸಿಕೊಂಡ. ಅವಳ ಕೈಯಲ್ಲೂ ಅಂತಹುದೇ ಚೂರಿ.. ಒಬ್ಬರ ಗುರಿ ತಪ್ಪಿದರೆ ಇನ್ನೊಬ್ಬರು ಬೇಕಲ್ಲವೇ.. 
ಮೆತ್ತಗಿನ ಕಣ್ಸನ್ನೆ.. 
ಅವನ ಕೈಯಲ್ಲಿದ್ದ ಚೂರಿ ಕೈ ಬಿಟ್ಟಿತು.. ಅವಳ ಕೈಯಲ್ಲಿದ್ದ ಚೂರಿಯೂ.. ರಾಜನ ಕಡೆಗೆ ಹಾರುತ್ತಿದ್ದ ಚೂರಿಗೆ ರಾಜನಿಂದ ಮೊದಲು ಅವಳ ದೇಹ ಅಡ್ಡ ಬಂದಿತು. ಅವಳ ಕೈಯಿಂದೆಸೆದ ಚೂರಿ ನೇರವಾಗಿ ಅವನ ಎದೆಗೇ ತಗಲಿತ್ತು.. ಅವನ ಕಣ್ಣುಗಳಲ್ಲಿ ಅಪನಂಬಿಕೆಯ ನೆರಳು.. 
'ಪಿಂಗಳೇ ಏನು ಮಾಡಿದೆ ನೀನು..' ಆರ್ತನಾಗಿ ಕಿರುಚಿದ್ದ.
ಕುಸಿದು ಬೀಳುತ್ತಿದ್ದ ಪಿಂಗಳೆಗೆ ರಾಜ ಆಧಾರ ನೀಡಿದ್ದ.
ಉಕ್ಕುತ್ತಿದ್ದ ನೆತ್ತರನ್ನು ಬೆರಳುಗಳಲ್ಲಿ ತಡೆ ಹಿಡಿದು 'ಸರಿಯಾದುದನ್ನೇ ಮಾಡಿದ್ದೇನೆ..  ಹೊತ್ತು ಹೆತ್ತು ಅನ್ನ ನೀಡಿದ ದೇಶದ ಅಳಿವನ್ನು ಬಯಸುವವಳಲ್ಲ ಈ ಪಿಂಗಳೆ.. ಪ್ರೀತಿಯ ಅರ್ಥ ನಿನಗಿನ್ನೂ ತಿಳಿದಿಲ್ಲ ರಾಜಕುವರ.. ಯಾರು ದೇಶವನ್ನು ಪ್ರೀತಿಸಲಾರರೋ ಅವರು ಯಾರನ್ನೂ ಪ್ರೀತಿಸಲಾರರು.. ನೀನು ವೀರನೇ ಆಗಿದ್ದರೆ  ಹೆಣ್ಣಿನ ಸಂಘದಿಂದ ಯುದ್ಧ ಗೆಲ್ಲುವ ಆಲೋಚನೆ ಮಾಡುತ್ತಿರಲಿಲ್ಲ..ನಿನ್ನದು ತಪ್ಪು ನಿರ್ಧಾರವಾಗಿತ್ತು. ನನಗೆ ಬದುಕು ಏನೂ ನೀಡದಿದ್ದರೂ ದೇಶಕ್ಕಾಗಿ ಸಾಯುವ ಅವಕಾಶ ನೀಡಿದೆ.. ಅಷ್ಟು ಸಾಕು.. ಮಹಾರಾಜಾ.. ಈ ವಿಷಯವನ್ನು ಮೊದಲೇ ನಿಮ್ಮೊಡನೆ ಹೇಳಿ ಅವನನ್ನು ಕೊಲ್ಲಿಸಬಹುದಿತ್ತು. ಆದರೆ ಅವನನ್ನು ಬಿಟ್ಟು ಬದುಕುವ ಶಕ್ತಿಯನ್ನು ನಾನೂ ಕಳೆದುಕೊಂಡಿದ್ದೇನೆ.. ಅದಕ್ಕಾಗಿಯೇ ಈ ದಿನವನ್ನು ಆರಿಸಿದೆ.. ನನ್ನ ಗುರಿ ತಪ್ಪಲಿಲ್ಲ.. ನಮ್ಮಿಬ್ಬರನ್ನು ಸಾವು ಒಂದುಗೂಡಿಸುತ್ತದೆ. ಅಷ್ಟು ಸಾಕು.. 
ಅವಳ ಮಾತುಗಳು ಮಂದವಾದವು. ಅವನಲ್ಲಿ ಚಲನೆಯಿರಲಿಲ್ಲ.. ಅವಳ ದೇಹ ರಾಜನ  ಹಿಡಿತದಿಂದ ಜಾರಿ ಅವನೆಡೆಗೆ ತೆವಳಿ ಕೈಗಳನ್ನು ಚಾಚಿ ಅವನ ಬೆರಳುಗಳ ಜೊತೆ ತನ್ನವನ್ನು ಹೆಣೆದುಕೊಂಡಿತು.
'ಪಿಂಗಳೇ.. ಏನು ಮಾಡಿಕೊಂಡೆ ನೀನು.. ಅಯ್ಯೋ..' ರಾಜನ ಕಣ್ಣುಗಳು ಹನಿಯುತ್ತಿದ್ದರೆ ಸಭಿಕರೆಲ್ಲರ ಕರತಾಡನದ ಸದ್ದು ಅವಳೊಳಗೆ ಮಾರ್ಧನಿಸುತ್ತಿತ್ತು..ಕಲಾವಿದೆಯ ಕಲಾಮಯ ಬದುಕು ಚಪ್ಪಾಳೆ ಸದ್ದಿನೊಡನೆ ಕೊನೆಗೊಂಡಿತ್ತು.

Friday, March 27, 2015

ಸಭೆಯೊಳಗೆ ದ್ರೌಪದಿಯ


"ನಂದಕ ಕೇಳಿದೆಯಾ .. ಎಂತಹ ಎದೆ ನಡುಗುವ ಸುದ್ದಿಯಿದು? ತುಂಬಿದ ಸಭೆಯಲ್ಲಿ ಕೌರವರು ದ್ರೌಪದಿಯ ವಸ್ತ್ರವನ್ನು ಸೆಳೆದು ಅವಳ ಲಜ್ಜೆಯನ್ನು ಕಳೆದಿದ್ದಾರಂತೆ ? ಅದೂ ಅವಳ ಐವರು ಗಂಡಂದಿರನ್ನು ಮೋಸದ ದ್ಯೂತದಲ್ಲಿ ಸೋಲಿಸಿ ...  ಇದೆಂತಹಾ ದುಷ್ಟತನ ? ರಾಜಸಭೆಯಲ್ಲಿ ಹೀಗಾಗುವುದು ನ್ಯಾಯವೇ? ಬಿಡು ನಾನೇನು ಇದನ್ನು ಹೊಸತಾಗಿ ಹೇಳುವುದು..  ರಾಜನರಮನೆಯಲ್ಲೇ  ಅಲ್ಲವೇ ನಿನ್ನ ಚಿಕ್ಕಪ್ಪ ಊಳಿಗದಲ್ಲಿರುವುದು..ಅವನೇ ಎಲ್ಲವನ್ನೂ ಹೇಳಿರಬಹುದು. ಅವನೆಂದೇಕೆ ರಾಜ್ಯದ ಪ್ರತಿಯೊಬ್ಬ ಮಂದಿಯೂ ಇದೇ ವಿಷಯವನ್ನು ತಾಂಬೂಲದಂತೆ ಜಗಿದು ರಂಗೇರಿಸುತ್ತಿದ್ದಾರೆ ಎಂದ ಮೇಲೆ ಉಗುಳಿದ ಕಲೆಯಾದರೂ ಕಾಣದಿದ್ದೀತೇ.."
" ಓಹೋ.. ಶ್ರಾವಸ್ತ.. ಈ ಸುದ್ದಿ ನಿನ್ನ ಕಿವಿಗೂ  ತಲುಪಿತೇ? ಅಷ್ಟು ಬೇಗನೆ ನಂಬಿಯೂಬಿಟ್ಟೆಯಾ?  ಅಯ್ಯೋ ಹುಚ್ಚಪ್ಪಾ.. ಅಂತಹದ್ದೇನು ಅಲ್ಲಿ  ನಡೆದೇ ಇಲ್ಲವಂತೆ.. ನಿನಗೆ ಯಾರೋ ತಪ್ಪು ಮಾಹಿತಿ ಮುಟ್ಟಿಸಿದ್ದಾರೆ ಶ್ರಾವಸ್ತ.  ಇಂತಹ ಗಾಳಿ ಸುದ್ದಿಗಳನ್ನು ನಾನೆಷ್ಟು ಕೇಳಿಲ್ಲ.. ಅಷ್ಟಕ್ಕೂ ನನ್ನ ಚಿಕ್ಕಪ್ಪ ಆಹುಕನನ್ನು  ಮೊನ್ನೆಯಷ್ಟೇ ಭೇಟಿಯಾಗಿ ಈ ಸಂಗತಿಯ ನಿಜಾನಿಜಗಳ ಬಗ್ಗೆ ಮಾತನಾಡಿದ್ದೆ. ಅವರಂತೂ  ಇದರಲ್ಲಿ ಒಂದಿನಿತೂ ಸತ್ಯವಿಲ್ಲ ಎಂದು ಅಲ್ಲಗಳೆದಿದ್ದರು.."
"ಹಾಗೆ ಹೇಳಿದರೇ ನಂದಕ ಅವರು, ಹಾಗಿದ್ದರೆ ಇಷ್ಟೊಂದು ಜನರಾಡುವ ಮಾತುಗಳೂ ಸುಳ್ಳೇ? ಇರಲಾರದು..  ಆಹುಕ  ದೊರೆಗಳಿಗಂಜಿ ಮಾತನಾಡುತ್ತಿಲ್ಲವೇನೋ.. ಯಾಕೆಂದರೆ ಇದನ್ನು  ನನಗೆ ಇದನ್ನು ಹೇಳಿದ್ದು ಘಟನೆಯ ಪ್ರತ್ಯಕ್ಷದರ್ಶಿ  ಗಣಿಕೆ ಸೋಮಲತೆ. ನಿನಗೆ ಗೊತ್ತಿಲ್ಲದ್ದೇನಿದೆ? ಅರಮನೆಗೆ ಯಾರಾದರೂ ವಿಶೇಷವಾಗಿ  ಬರುವವರಿದ್ದರೆ ಊರಿನೆಲ್ಲಾ ಗಣಿಕೆಯರು ಅಲ್ಲೇ ಇರಬೇಕಾಗುತ್ತದೆ ತಾನೇ.. ಹಾಗೆ ಆ ದ್ಯೂತವಾಡುವ ದಿನ ಇವಳೂ ಅಲ್ಲಿದ್ದಳು. ಬಲಾತ್ಕಾರದಿಂದ ಎಳೆದು ಕೊಂಡೊಯ್ಯುತ್ತಿರುವ  ಪಾಂಡವರೈವರ ಪ್ರೀತಿಯ ಪತ್ನಿ ಬೊಬ್ಬಿಡುವುದನ್ನು, ಶಪಿಸುವುದನ್ನು ಇವಳ ಕಿವಿಗಳು ಕೇಳಿಸಿಕೊಂಡಿವೆ.    ಆದರೆ ರಾಣೀವಾಸದವರು ಇದನ್ನು ಕೇಳಿಯೂ ಕೇಳಿಸದಂತೆ ಬಾಗಿಲನ್ನು ಭದ್ರಪಡಿಸಿದ್ದರಂತೆ.  ನೀನೇ ಹೇಳು ಇಂತಹ ಕೆಟ್ಟ ಸಂಗತಿ ಕುರುಗಳ  ಅರಮನೆಯಲ್ಲಿ ನಡೆಯಬಹುದೇ? ಅದೂ ತಮ್ಮದೇ ಮನೆಯ ಸೊಸೆಯನ್ನು ಹಾಳುಗೆಡವಿ  ಏನನ್ನು ಸಾಧಿಸುತ್ತಾರೆ ಹೇಳು?" 
"ಹುಂ.. ಶ್ರಾವಸ್ತ   ನನಗೂ  ಇದೇ ಕಥೆಯನ್ನು ಸತ್ಯಘಟನೆ ಎಂಬಂತೆ ಯಾರೋ ಹೇಳಿದ್ದರು ಆದರೆ ನಾನು ನಿನ್ನಂತೆ ಅದನ್ನು ನಂಬಲಿಲ್ಲ. ನೋಡು  ಕುರು ಕುಲ ಎಂದರೆ ಏನು? ಅದೆಷ್ಟು  ಎಂತಹ ಧೀಮಂತ ದೊರೆಗಳು ಆಳಿ ಅಳಿದು ತಮ್ಮ ಗುರುತನ್ನು ಮೂಡಿಸಿ ಹೋಗಿದ್ದಾರಿಲ್ಲಿ. ಅಂತಹ ವಂಶದವರು ಹೀಗೆ ಕೀಳಾಗಿ ನಡೆದುಕೊಳ್ಳುವುದುಂಟೇ.. ಅದೂ ಅವರು ಹೇಳುತ್ತಿರುವುದು ಎಲ್ಲಿ ಎಂದಾದರೂ ಆಲೋಚಿಸಿದೆಯಾ? ತುಂಬಿದ ರಾಜ ಸಭೆಯಲ್ಲಿ.. ಅಲ್ಲೇನು ಯುವರಾಜನ ಸಮಪ್ರಾಯದವರಾದ ಪುಂಡರ ಬಳಗ ಮಾತ್ರವಿರುವುದೇ? ಹಿರಿಯರಾದ ಭೀಷ್ಮರಿಲ್ಲವೇ? ದ್ರೋಣ ಕೃಪಾದಿ ಗುರುಗಳಿಲ್ಲವೇ? ಬುದ್ಧಿಶಾಲಿಯಾದ ವಿವೇಕಿಯೂ ಆದ ವಿದುರರಿಲ್ಲವೇ? ಅಷ್ಟೇ ಏಕೆ ಸಿಂಹಾಸನದ ಮೇಲೆ ಕುರು ಕುಲ ತಿಲಕ ದೃತರಾಷ್ಟ್ರ ಮಹಾಪ್ರಭುಗಳಿಲ್ಲವೇ? ಅಷ್ಟೆಲ್ಲಾ ಜನರೆದುರು ಅಂತಹುದೊಂದು ಘಟನೆ ನಡೆದೀತು ಎನ್ನುವುದನ್ನು ಕನಸು ಮನಸಿನಲ್ಲಾದರೂ ಊಹಿಸುವುದು ಹೇಗೆ ಹೇಳು.. ಸುಮ್ಮನೆ ಆರೋಪವಷ್ಟೇ ಇದು.." 
"ಇಲ್ಲ ಗೆಳೆಯಾ.. ಹಾಗೆ ಸಾರಾಸಗಾಟಾಗಿ ಸುಳ್ಳೆಂದು ತಿರಸ್ಕರಿಸಲು ಬರುವುದಿಲ್ಲ. ನಿನಗೆ ತಿಳಿದಿದೆಯೇ ದ್ಯೂತದಲ್ಲಿ ತಮ್ಮೆಲ್ಲವನ್ನೂ ಕಳೆದುಕೊಂಡಿದ್ದಾರೆಂದುಕೊಂಡ ಪಾಂಡವರು ಮತ್ತೆ ತಮ್ಮ ವೇಷಭೂಷಣ ಆಭರಣಗಳ ಸಮೇತ ಮೊದಲಿನೆಲ್ಲಾ ಗೌರವಗಳೊಂದಿಗೆ ಹೊರಟು  ತಮ್ಮ ರಾಜ್ಯಕ್ಕೆ ಮರಳಿದ್ದಾರೆ.  ರಾಜ್ಯಭ್ರಷ್ಟರಾಗಬೇಕಾಗಿದ್ದ ಪಾಂಡವರು ತಮ್ಮದೆಲ್ಲವನ್ನೂ ಮರಳಿ ಪಡೆದದ್ದು ದ್ರೌಪದಿಗೆ ಕುರುರಾಯನಿತ್ತ ವರಗಳಿಂದಂತೆ.." 
"ಅಯ್ಯೋ .. ಇದೆಲ್ಲಾ ಬರಿದೆ ಪೊಳ್ಳು ಮಾತುಗಳು ಶ್ರಾವಸ್ತ.ನಿನಗಾರು ಇಂತಹುದನ್ನೆಲ್ಲಾ ಹೇಳಿ ದುರ್ಯೋಧನನನ್ನು ಕೆಟ್ಟವನೆಂದು ನಿನ್ನೆದುರು ಬಿಂಭಿಸುತ್ತಾರೋ ನನಗೆ ತಿಳಿಯದು. ಅಣ್ಣ ತಮ್ಮಂದಿರು ಸುಮ್ಮನೆ ಮೋಜಿಗೆಂದು ಆಡಿದ ದ್ಯೂತ ಇಂತಹದೆಲ್ಲಾ ಗಾಳಿಮಾತುಗಳಿಗೆ ಕಾರಣವಾಗಿದೆ ಎಂದು ತಿಳಿದರೆ ಪಾಪ ಯುವರಾಜನೆಷ್ಟು ನೊಂದುಕೊಂಡಾನೋ.. ಅವನಿಗೇನು ಅವನಂತಃಪುರದಲ್ಲಿ ರಾಣಿಯರ  ಕೊರತೆಯಿದೆಯೇ? ರಾಣಿಯರ ಮಾತೇಕೆ ಬಿಡು. ನಮ್ಮ ರಾಜ್ಯದ ಗಣಿಕೆಯರಷ್ಟು ಸೊಗಸುಗಾತಿಯರನ್ನು ನೀನೆಲ್ಲಾದರೂ ನೋಡಿದ್ದೀಯಾ? ಒಮ್ಮೆ ಅವರ ಬಲೆಗೆ ಸಿಲುಕಿದವರು ಪರನಾರಿಯರನ್ನು ಕಣ್ಣೆತ್ತಿ ನೋಡಲಾರರು.." 
"ಹ್ಹ ಹ್ಹ ನಂದಕ ನಿನ್ನ ಕೊನೆಯ ಮಾತಿಗಾದರೆ ನನ್ನ ಸಮ್ಮತಿಯಿದೆ. ನಾನು ನಿನ್ನೆ ಇರುಳು ಕಳೆದ ಜಾಗವಿದೆಯಲ್ಲಾ ಅದೆಂತಹ ಮೋಹಕ ಲಲನೆಯರು ಅಲ್ಲಿದ್ದಾರೆಂದರೆ ಅಬ್ಬಾ.. ಬಿಟ್ಟು ಬರಲೇ ಆಗದು ಎಂಬಷ್ಟು.. ತನು ದಣಿದರೂ ಮನ ತಣಿಯದು.. ಛೇ ..ಎಲ್ಲಿಂದೆಲ್ಲಿಗೆ ಹೋಗುತ್ತಿದೆ ವಿಷಯ.."
"ಹುಂ .. ನನಗೂ ನಿನಗೂ ಇಂತಹ "ಷಯಗಳೇ ಚೆಂದ ಮಾತನಾಡಲು. ಅದು ಬಿಟ್ಟು ರಾಜ್ಯದ ಸುದ್ದಿ, ರಾಜರ ಸುದ್ದಿಯೆಲ್ಲಾ ನಮಗ್ಯಾಕೆ ಹೇಳು ಶ್ರಾವಸ್ತ.." 
"ಅಯ್ಯೋ ನಂದಕ.. ನನಗೂ ಇಂತಹ ವಿಷಯಗಳೇ ಮೋಜೆನಿಸುವುದು. ಆದರೇನು ಮಾಡೋಣ ಹೇಳು.. ಆ ಕನಸಿನ ಲೋಕವನ್ನು ಬಿಟ್ಟು ಈ ನರಕಕ್ಕೆ ಬರಲೇಬೇಕಲ್ಲ.  ಇಲ್ಲಿ ಕೇಳು.. ನೀನು ಹೇಳಿದೆಯಲ್ಲವೇ ರಾಜನ ಸಭೆಯಲ್ಲಿ ಅಷ್ಟೂ ಹಿರಿಯರಿದ್ದು ಅನಾಚಾರವಾಗದು ಎಂದು .. ದುರ್ಯೋಧನನ ತೊಡೆ ಮುರಿಯುತ್ತೇನೆ, ದುಶ್ಯಾಸನನ ಕರುಳನ್ನು ಬಗೆಯುತ್ತೇನೆ ಎಂಬ ಭೀಮನ ರಣಕೂಗು ಕೋಟೆಯ ಗೋಡೆಗಳನ್ನು ಸೀಳಿ ಹೊರಗೆ ಅಪ್ಪಳಿಸಿದ್ದು ಬರಿದೆ ಎನ್ನುವೆಯಾ? ಅದೂ ಬಿಡು. ಐವರು ಗಂಡಂದಿರಿದ್ದೂ ದ್ರೌಪದಿ ಸಹಾಯಕ್ಕಾಗಿ ಕೃಷ್ಣನನ್ನು ಕೂಗಿದ್ದು, ಆತ ತನ್ನ ಶಲ್ಯದಿಂದಲೇ ಆಕೆಯ ಮಾನ ಮುಚ್ಚಿದ್ದು.. ಇದೆಲ್ಲವನ್ನೂ ಅರಮನೆಯ ಗೋಡೆ ಗೋಡೆಗಳು ಮಾತನಾಡುತ್ತವೆ ಎಂದಾದ  ಮೇಲೆ ಕೊಂಚವಾದರೂ ಸತ್ಯ ಇರಲೇಬೇಕಲ್ಲ.." 

"ಇಲ್ಲ ಶ್ರಾವಸ್ತ.  ಇದೆಲ್ಲಾ ಕಟ್ಟು ಕಥೆ. ನೀನು ಕೇಳುತ್ತೀ ಎಂದಾದರೆ ಹೇಳುತ್ತೇನೆ ಕೇಳು.  ನಿನಗೆ ತಿಳಿದಿಲ್ಲವೇ ಹಿರಿಯವನಾದ ದೃತರಾಷ್ಟ್ರನನ್ನು ಕುರುಡ ಎಂಬ ಕಾರಣಕ್ಕೆ ದೂರವಿಟ್ಟು ವಯಸ್ಸಿನಲ್ಲಿ ಕಿರಿಯವನಾದ  ಪಾಂಡು ರಾಜನಿಗೆ ಪಟ್ಟ

ಕಟ್ಟಿದ್ದು ಭೀಷ್ಮಾಚಾರ್ಯರೇ ಅಲ್ಲವೇ. ಋಷಿ ಶಾಪಕ್ಕೆ ಹೆದರಿ, ಮಕ್ಕಳಾಗದ ಚಿಂತೆಗೆ ಆತನೇನೋ ಪತ್ನಿಯರ ಸಮೇತ ಇಲ್ಲಿಂದ ಹಿಮಾಲಯದತ್ತ ನಡೆದ. ಮತ್ತೆ ಅರಸರಿಲ್ಲದೇ ಸಿಂಹಾಸನ ಬರಿದಾಗಬಾರದು ಎಂದು ತಾನೆ ನಮ್ಮ ಈಗಿನ ಮಹಾರಾಜರು ಪಟ್ಟಕ್ಕೆ ಬಂದದ್ದು. ದೊಡ್ಡವರ ಮಾತೇ ಇರಬಹುದು ಆದರೂ ಕೇಳುತ್ತೇನೆ  ಅಂದು ಕುರುಡನಾದವನು ರಾಜ್ಯಾಭಿಷೇಕಕ್ಕೆ ಅನರ್ಹ ಎಂದೆನಿಸಿಕೊಂಡ ದೃತರಾಷ್ಟ್ರ ಮಹಾರಾಜರು ಈಗ ಹೇಗೆ ಪಟ್ಟದಲ್ಲಿ ಕುಳಿತುಕೊಳ್ಳಲು ಶಕ್ತರಾದುದು? ಅಂದರೆ ಆಗ ಅವರಿಂದಲೂ ಸಮರ್ಥ ಇನ್ನೊಬ್ಬನಿದ್ದ ಎಂಬ ಕಾರಣಕ್ಕೆ ಪಟ್ಟ ತಪ್ಪಿದ್ದಷ್ಟೇ.. ಈಗಲೂ ಅದೇ ಹುನ್ನಾರವೇ ನಡೆಯುತ್ತಿರುವುದು. ಅದೇ ಪಾಂಡು ರಾಜನ ಮಕ್ಕಳಾದ ಇವರೈವರು ತಮ್ಮ ತಾಯೊಂದಿಗೆ ನಗರಕ್ಕೆ ಬಂದುದೇ ರಾಜ್ಯಕ್ಕೆ ಮುಳುವಾಯಿತು. ಅಲ್ಲಿಯವರೆಗೆ  ಯುವರಾಜನೆಂದೇ ಪರಿಗಣಿಸಲ್ಪಡುತ್ತಿದ್ದ ದುರ್ಯೋಧನ, ಯುಧಿಷ್ಟಿರನ  ಎದುರು ನಿಂತಾಗ ಹೋಲಿಕೆಗಳು ಪ್ರಾರಂಭವಾದವು. ಅವುಗಳೇ ಅಣ್ಣ ತಮ್ಮಂದಿರ ಪ್ರೇಮಭಾವವನ್ನು ಒಡೆದು ಪ್ರತ್ಯೇಕ ಪಂಗಡಗಳಾಗುವಂತೆ ಮಾಡಿದವು. ಇಲ್ಲದಿದ್ದರೆ ಸಮಗ್ರ ಕುರುಕುಲವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕುರು ವಂಶಜರು ಕೌರವರೇ ಅಲ್ಲವೇ. ಪಾಂಡವರು ಎಂಬ ಪ್ರತ್ಯೇಕತೆಯೇಕೆ ಅವರನ್ನು ಕರೆಯುವಲ್ಲಿ? ಅದನ್ನೂ ಹೇಳುತ್ತೇನೆ ಕೇಳು.. ಅವರು ಈಗಿರುವ ಕೌರವರಿಂದ ಹೆಚ್ಚಿನವರು, ಮೇಲ್ಮಟ್ಟದವರು ಎಂಬ ಅರ್ಥ ಬರಲೋಸುಗವೇ ಈ ಸಂಭೋದನೆ. ಪಾಂಡು ರಾಜ ಮೊದಲು ಅಭಿಕ್ತನಾದವನು. ಅವನ ಮಗ  ಯುಧಿಷ್ಟಿರ ನಮ್ಮ ಯುವರಾಜ ದುರ್ಯೋಧನನಿಂದ ಹಿರಿಯ. ಹಾಗಿದ್ದರೆ ಅವನೇ ರಾಜನಾಗಬೇಕು ಎಂಬುದು ಒಂದು ಗುಂಪಿನ ಮಾತು. ಅದನ್ನು ನಡೆಸಲೆಂದೇ ಈಗವರು ತಮ್ಮ ದಾಳವನ್ನು ಬೀಸುತ್ತಿದ್ದಾರೆ. ಅದಕ್ಕಾಗಿ ಆಗಬೇಕಾದುದು ಏನೆಂದರೆ ಯುವರಾಜ ದುರ್ಯೋಧನನನ್ನು ಖೂಳನೆಂದೂ, ಕೆಟ್ಟವನೆಂದೂ ರಾಜ್ಯದ ಜನರು ಅಂದುಕೊಳ್ಳುವಂತೆ ಮಾಡುವುದು.. ಇದಿಷ್ಟೇ ಅಲ್ಲಿ ನಡೆಯುತ್ತಿರುವುದು.." 

"ನಂದಕ ಇಲ್ಲಿ ಕೇಳು ನೀನು ಹೇಳುವ ಮಾತು ಒಂದು ಸ್ವಲ್ಪ ಸತ್ಯವಿರಲೂಬಹುದು. ಹಾಗೆಂದು ನಾನು ಕೇಳಿದ್ದೆಲ್ಲಾ ಪೂರ್ಣ ಸುಳ್ಳಲ್ಲ. ಯಾಕೆ ತಿಳಿದಿದೆಯಾ ದುರ್ಯೋಧನ ನೀನು ಹೇಳಿದಂತೆ ತುಳಿಯಲ್ಪಡುವವನೇನಲ್ಲ. ನಿನಗೆ ನೆನಪಿರಬಹುದು. ಅಂದೊಮ್ಮೆ ದ್ರೋಣಾಚಾರ್ಯರ ಶಿಷ್ಯರ ಕಲಿಕೆಯನ್ನು ಕುರುಜನರಿಗೆ ತೋರಿಸಲೆಂದೇ ಮಹಾನ್ ಉತ್ಸವವೊಂದು ನಡೆದಿತ್ತಲ್ಲ. ಅಲ್ಲಿ ಅರ್ಜುನನ ಧನುರ್ವಿದ್ಯೆಯ ಚಳಕವನ್ನು ನೋಡಿ ಪುಳಕಗೊಂಡವರೇ ಎಲ್ಲಾ.. ಊರಿಗೆ ಊರೇ ಹರುಷದಿಂದ ಬೊಬ್ಬಿರಿಯುತ್ತಿದ್ದರೆ ದುರ್ಯೋಧನಾದಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದರು.  ಆಗ ಅಲ್ಲಿ ಪ್ರತ್ಯಕ್ಷನಾದವನು ಕರ್ಣ.  ಇದೇನು ಮಹಾ ವಿದ್ಯೆಯಲ್ಲ.. ನಾನೂ ಇದನ್ನೆಲ್ಲಾ ಪ್ರದರ್ಶಿಸಬಲ್ಲೆ ಎಂದು ಎಲ್ಲರೆದುರು  ಪಂಥವನ್ನೇ  ಒಡ್ಡಿದ್ದನವ. ಆಗ ದ್ರೋಣರು ಇದು ಕೇವಲ ರಾಜಕುವರರ ವಿದ್ಯೆಯ ಪ್ರದರ್ಶಕ್ಕಿರುವ ಅವಕಾಶ. ಇಲ್ಲಿ ಆ ಅರ್ಹತೆ ಇಲ್ಲದವರಿಗೆ ಭಾಗವಹಿಸುವ ಹಕ್ಕಿಲ್ಲ ಎಂದು ಬಿಟ್ಟಿದ್ದರು. ಕರ್ಣ ತಲೆ ತಗ್ಗಿಸಿದ್ದ. ಆಗ ಇದೇ ನೀನೀಗ ಹೊಗಳುತ್ತಿರುವ ದುರ್ಯೋಧನ ಏನು ಮಾಡಿದ್ದ ನೆನಪಿದೆಯಾ? ಅಂಗ ರಾಜ್ಯವನ್ನೇ  ಕರ್ಣನ ಕೈಯಲ್ಲಿಟ್ಟು ಅವನನ್ನು ರಾಜನನ್ನಾಗಿಸಿದ. ಅದನ್ನು ಆ ಕೂಡಲೆ ಮಹಾರಾಜ ಖಂಡಿಸಬೇಕಿತ್ತಲ್ಲ.. ಆದರೆ ಹಾಗಾಗಲಿಲ್ಲ. ದೃತರಾಷ್ಟ ಯಾಕೆ ವಿರೋಧಿಸಲಿಲ್ಲ ಹೇಳು? ಅವನಿಗೆ ತನ್ನ ಕುವರರಿಂದ ತಮ್ಮನ ಮಕ್ಕಳು ಬಲಶಾಲಿಗಳಾಗುವುದು ಸಮ್ಮತವಿರಲಿಲ್ಲ.   ಅಲ್ಲಿ ನೀನು ಹೇಳಿದಂತೆ ಒಂದೇ ರಾಜ ಮನೆತನದ ಒಂದೇ ರಾಜಛತ್ರದ ಅಡಿಯಲ್ಲಿರುವ   ಕುವರರ ವಿದ್ಯಾಪ್ರದರ್ಶನ ತಾನೇ ಆಗುತ್ತಿದ್ದುದು. ಅಂದ ಮೇಲೆ ಯಾರು ವಿದ್ಯೆಯಲ್ಲಿ ಪ್ರಾವೀಣತೆಯನ್ನು ಪಡೆದಿದ್ದರೂ ಅದು ಕುಲಕ್ಕೆ ಹೆಮ್ಮೆಯ ವಿಷಯವೇ ತಾನೆ? ಹಾಗಿದ್ದಾಗ ತಮ್ಮವನನ್ನೇ ಕಡಿಮೆಯಾಗಿಸಲು ಪರಕೀಯನೊಬ್ಬನನ್ನು ಸಿಂಹಾಸನಕ್ಕೇರಿಸುವಂತಹ ಅಗತ್ಯವೇನಿತ್ತು? ಅಂದರೆ ಈ ಅಸೂಯೆಯ ಕಿಡಿ ಆಗಲೇ ಇತ್ತು ಕೌರವರಲ್ಲಿ ಎಂಬುದು ಜಾಹೀರಾದಂತೆ ಆಗಲಿಲ್ಲವೇ?" 
"ಹುಂ.. ಹೌದೇನೋ ಶ್ರಾವಸ್ತ.. ನಾನು ಅಷ್ಟು ಚಿಂತಿಸಲಿಲ್ಲ. ಆದರೂ  ಪಟ್ಟದರಸನ ಮಗ ಪಟ್ಟಾಭಿಕ್ತನಾಗುವುದೇ ಧರ್ಮವಲ್ಲವೇ? ಹಾಗಿದ್ದರೆ ದುರ್ಯೋಧನನೇ ಯುವರಾಜ. ಇನ್ನು ಮಹಾರಾಜನಾಗಬೇಕಾದವನು. ಅವನನ್ನು ಬಿಟ್ಟು ಯುಧಿಷ್ಟಿರನನ್ನು  ಯಾಕೆ ಪಟ್ಟಕ್ಕೆ ಕೂರಿಸುವ ಚಿಂತೆ?" 


"ನಂದಕ .. ಅದು ಹಾಗಲ್ಲ.  ಅರಸನಾಗಿ ಅಭಿಕ್ತನಾದವನು ಪಾಂಡು. ಅವನ ಅನುಪಸ್ಥಿತಿಯಲ್ಲಿ ರಾಜ್ಯಕ್ಕೊಂದು ರಾಜನ ಅವಶ್ಯಕತೆಗಾಗಿ ಅಷ್ಟೇ  ದೃತರಾಷ್ಟ್ರ ಪೀಠವನ್ನೇರಿದ್ದು. ಅವನು ಈಗಲೂ ರಾಜನೆಂಬ ಬಿರುದು ಬಿಟ್ಟರೆ ರಾಜ್ಯಭಾರ ಮಾಡಿದ್ದಿದೆಯೇ? ರಾಜ್ಯದ ಸಮಗ್ರ ಆಡಳಿತವಿರುವುದು ಭೀಷ್ಮಾಚಾರ್ಯರ ಕೈಯಲ್ಲೇ ಅಲ್ಲವೇ?  ದುರ್ಯೋಧನನ ಕೆಟ್ಟ ಬುದ್ಧಿ ಕುರುಡನಾದ ಮಹಾರಾಜರಿಗೆ ಕಾಣದಿದ್ದೀತು. ಕಣ್ಣಿದ್ದೂ ಕಣ್ಣು ಕಟ್ಟಿಕೊಂಡ ಗಾಂಧಾರಿ ರಾಣಿಗೆ ಕಾಣದಿದ್ದೀತು. ಆದರೆ ಅವನ ವ್ಯವಹಾರವನ್ನೆಲ್ಲಾ ಭೂತಗನ್ನಡಿಯಲ್ಲಿಟ್ಟು ಸೂಕ್ಷ್ಮವಾಗಿ ನೋಡುತ್ತಿರುವ ಭೀಷ್ಮಾಚಾರ್ಯರ ಕಣ್ಣಿಗೆ ಕಾಣದಿದ್ದೀತೇ? ಅವರು ದೃಷ್ಟಿ  ಇರುವುದು ಕೇವಲ ವರ್ತಮಾನಕ್ಕೆ ಮಾತ್ರ ಅಲ್ಲ. ಅದರಿಂದಾಚಿಗಿನ ಭವಿಷ್ಯವೂ ಅವರ ಮುದಿ ಕಣ್ಣುಗಳಿಗೆ ನಿಚ್ಚಳವಾಗಿ ಕಾಣುತ್ತಿದೆ. ದುಷ್ಟ ಬುದ್ಧಿಯ ದುರ್ಯೋಧನನಿಗೆ ಪಟ್ಟ ಕಟ್ಟುವುದೆಂದರೆ ಕುರುಕುಲದ ಕೊನೆಯನ್ನು ಈಗಲೇ ತಂದುಕೊಂಡಂತೆ ಎಂಬುದು ಅವರರಿವಿಗೂ ಬಂದಿರಬಹುದಲ್ಲವೇ?"

"ಶ್ರಾವಸ್ತ .. ಹಾಗೆ ಬಿಳಿಯದೆಲ್ಲಾ ಹಾಲಲ್ಲ ಬಿಡು. ಇದರಲ್ಲಿ ಆ ಕರಿಯ ಕೃಷ್ಣನ ಕರಾಮತ್ತು ಬಹಳವಿದೆ. ಯಾಕೆಂದರೆ ರಾಜ್ಯ ಕೌರವರ ಕೈಗೆ ಹೋದರೆ ಅವನ ಬೇಳೆಯೇನು ಇಲ್ಲಿ ಬೇಯುವುದಿಲ್ಲ. ಅದೇ ಅವನ ಪ್ರಿಯರಾದ, ಅವನ ಅತ್ತೆಯ ಮಕ್ಕಳಾದ ಕೌಂತೇಯರನ್ನಾದರೆ ಬೆರಳ ತುದಿಯಲ್ಲಿ ಕುಣಿಸಬಹುದು.  ಅದೂ ಈ ಹಿರಿಯರೆಂದು ತಲೆ ಹಣ್ಣಾಗಿಸಿಕೊಂಡ ಮಂದ ಕಣ್ಣಿನ  ಮುದುಕರಿಗೆ ಅವನ ನಯವಾದ ಮಾತುಗಳು ಮೋಡಿ ಮಾಡಿವೆ.  ನಮ್ಮಂತಹ ಯುವಕರಿಗೆ ಅವನ  ಮೋಸ ಕಾಣಿಸುತ್ತಿದೆ. ಅದನ್ನು ಹೇಳಹೊರಟರೆ ನಮ್ಮ ಸ್ವರಗಳು ಅವರ ಕಿವಿಗಳಿಗೆ ತಲುಪುವುದೇ ಇಲ್ಲ. ಆಕಸ್ಮಾತ್ ತಲುಪಿದರೂ ನಾವು ದುಷ್ಟರೆಂದೆನಿಸಿಕೊಳ್ಳುವುದಷ್ಟೇ ಆಗುವ ಲಾಭ.. ಇನ್ನು ಕೃಷ್ಣನೋ ಯುದ್ಧವಿಲ್ಲದೇ ಮಾತಿನಿಂದಲೇ ಸಕಲವನ್ನೂ ಗೆಲ್ಲಬಲ್ಲ ಜಾಣ.."

"ನಂದಕ ಅಷ್ಟು ಸುಲಭವಲ್ಲ ಈ ತಲೆ ನೆರೆತ ಹಿರಿಯರನ್ನು ಮೋಸಗೊಳಿಸುವುದು. ಅವರು ಹೊಗಳಿಕೆಗೋ, ಉಪಚಾರಕ್ಕೋ ಮರುಳಾಗಿ ಸೋಲುವವರಲ್ಲ. ಎಲ್ಲವನ್ನೂ ಪರೀಕ್ಷೆಗೊಡ್ಡಿಯೇ ಪಲಿತಾಂಶ ಪಡೆದುಕೊಳ್ಳುವವರು. ನೋಡೀಗ ಪಾಂಡವರ ಪತ್ನಿ ದ್ರುಪದನ ಮಗಳು.  ದ್ರುಪದ ದ್ರೋಣಾಚಾರ್ಯರಿಗೆ ಮಾಡಿದ ಮೋಸ. ಗುರು ದಕ್ಷಿಣೆಯಾಗಿ ಅರ್ಜುನಿಂದ ಪರಾಭವಗೊಂಡು ದ್ರೋಣಾಚಾರ್ಯನ ಕೃಪಾಭಿಕ್ಷೆಂದ ಜೀವದಾನ ಪಡೆದುಕೊಂಡವ. ಹಾಗೆಂದು ಅವನ ಮಗಳು ಕುರುಕುಲದ ಸೊಸೆಯಾದಾಗ ಈ ಹಿರಿಯರು  ಯಾರಾದರೂ ಅಲ್ಲಗಳೆದಿದ್ದಾರೆಯೇ? ದೂರೀಕರಿಸಿದ್ದಾರೆಯೇ? ಇಲ್ಲಾ ಏಕೆ ಹೇಳು. ಅವರಿಗೆ  ವಿಷಮವಿದ್ದುದು ಅವಳಪ್ಪನಲ್ಲಿ ಮಾತ್ರ. ಅದಕ್ಕೂ ಮಗಳಿಗೂ ಸಂಬಂಧವಿಲ್ಲ. ಅದೇ ನೋಡು ದುರ್ಯೋಧನನಿಗೆ ಕೋಪವಿರುವುದೋ, ಅಸೂಯೆರುವುದೋ ಪಾಂಡವರಲ್ಲಿ.  ಆದರೂ ದ್ರೌಪದಿಯನ್ನು ಅವಮಾನಿಸಿ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಇದೇ ನೀನು ಸ್ವಲ್ಪ ಆಗ ಹೇಳಿದೆಯಲ್ಲವೇ ಅವರಿಬ್ಬರೂ ಸಮಗ್ರ ಕುರುಕುಲದವರು ಎಂದು .. ಅದೇ ಕುರುಕುಲದ ಸೊಸೆಯನ್ನು ಅದೇ ಕುರುಕುಲದ ಮಗನೊಬ್ಬ ಅತ್ಯಾಚಾರಕ್ಕೆಳಸಿರುವುದು ತಪ್ಪಲ್ಲವೇ. ದುರ್ಯೋಧನಾದಿಗಳಿಗೆ ಬೇಕಾದುದೇನು ಗೊತ್ತೇ..? ಪಾಂಡವರು ಅವಮಾನಿತರಾಗಿ ತಾವಾಗಿ ತಾವೇ  ರಾಜ್ಯ ಬಿಟ್ಟು ಹೋಗುವಂತಹುದು. ಒಮ್ಮೆ ಜನ ಮಾನಸದಿಂದ ಅವರ  ಒಳ್ಳೆಯತನದ ನೆನಪು ಮಾಸಿ  ಮರೆಯಾದರೆ ಮತ್ತೆ ಎಲ್ಲಾ ಸುಲಭ. ಅನರ್ಹನಾದರೂ ದೃತರಾಷ್ಟ್ರ ರಾಜನಾಗಿದ್ದಾನಲ್ಲವೇ? ಹಾಗೆಯೇ ದುರ್ಯೋಧನನು ರಾಜನಾಗುತ್ತಾನೆ.  ಅವನು ನಡೆಸುವ ಕೆಟ್ಟ ಕೆಲಸಗಳ ಕುಮ್ಮಕ್ಕಿನಿಂದ ರಾಜ್ಯ ಅರಾಜಕವಾಗುತ್ತದೆ ಅಷ್ಟೇ.."

"ಅಯ್ಯೋ.. ಶ್ರಾವಸ್ತ ನೀನೀಗಾಗಲೇ ಎಲ್ಲಾ ನಡೆದೇ ಬಿಟ್ಟಿದೆಯೇನೋ ಎಂಬಂತೆ ಹೇಳುತ್ತಿರುವುದನ್ನು ಕಂಡರೆ ನಗೆ ಬರುತ್ತದೆ. ಜೊತೆಗೆ ನಿನ್ನ ಮಾತುಗಳೇ ಎಲ್ಲಾದರೂ ಸತ್ಯವಾಗಿಬಿಟ್ಟರೆ ಎಂಬ ಹೆದರಿಕೆಯೂ.." 

"ಇದು ನಡೆದು ಬಿಟ್ಟರೆ ಎನ್ನುವ ಮಾತಿಲ್ಲ ನಂದಕ.. ನಡೆದಾಗಿದೆ.. ಆ ಸತ್ಯವನ್ನು ನಾನೂ ನೀನೂ ಒಪ್ಪಿಕೊಳ್ಳಬೇಕಷ್ಟೇ. ಸತ್ಯವೆನ್ನುವುದು ಬೆಂಕಿಯ ಕೆಂಡ. ಎಲ್ಲಿ ಬಚ್ಚಿಟ್ಟರೂ ಸುಡದೇ ಬಿಡದು. ಅದೇ ನೀನೀಗ ಹೇಳಿದೆಯಲ್ಲಾ ದುರ್ಯೋಧನ ಅಂತಹವನಲ್ಲ.. ಅವನು ಪರಸತಿಯನ್ನು  ಅವಮಾನಕ್ಕೆಳಸಿದುದು ಕಟ್ಟು ಕಥೆ ಎಂದು. ಅದು ಸತ್ಯವೇ ಎನ್ನಲು ಇನ್ನೂ  ಆಧಾರವಿದೆ ನನ್ನಲ್ಲಿ. ಮೊನ್ನೆ ಪಾಂಡವರೈವರು ಸುವರ್ಣಲೇಪಿತ ರಥಗಳಲ್ಲಿ ಬಂದಿದಿಳಿದ್ದಲ್ಲವೇ? ಅದರ ಸಾರಥಿಗಳು ರಥದಲ್ಲೆ ಕುಳಿತು ಮಾಡುವುದೇನು ಎಂದು ಊರು ಸುತ್ತುತ್ತಿದ್ದರು. ಊರು ಸುತ್ತುವುದೆಂದರೆ ಗಣಿಕೆಯರ ಮನೆಯನ್ನು ಹುಡುಕುವುದೇ ಅಲ್ಲವೇ? ಅವರೂ ನುಗ್ಗಿದ್ದು  ಸೋಮಲತೆಯ ಮನೆಗೆ. ಅವಳು ಅಲ್ಲಿರದೇ ಅರಮನೆಗೆ ಹೋಗಿದ್ದ ಕಾರಣ ಮನೆಯ  ಹೊರಗಿನ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದರಂತೆ. ಆಗ ದುರ್ಯೋಧನನ ಸೈನಿಕರು ಬಂದು ಅವರನ್ನು ಹೆಡೆಮುರಿಕಟ್ಟಿ ಎಳೆದೊಯ್ದರಂತೆ. ಸೋಮಲತೆಯ ವೃದ್ದಮಾತೆ ಇದನ್ನೆಲ್ಲಾ ಹೇಳಿದಳು. ಯಾಕೆ ಅವರನ್ನು ಒಯ್ದರು ಬಲ್ಲೆಯಾ?  ಪಾಂಡವರು ಮತ್ತೆ ರಥಗಳ ಮೇಲೆ ಕುಳಿತು ತಮ್ಮ ರಾಜ್ಯಕ್ಕೆ ಹೋಗುವುದಿಲ್ಲ ಎಂಬುದು ಮೊದಲೆ ನಿಶ್ಚೈಸಲ್ಪಟ್ಟಿತ್ತು . ಶಕುನಿಯ ಹಂಚಿಕೆ ಇದ್ದುದು ಕೇವಲ ಮೋಸದ ದ್ಯೂತದಾಟದಲ್ಲಿ ಮಾತ್ರ ಅವರ ಸೋಲಲ್ಲ.. ಅವರ ಒಳಗೆ ಮತ್ತೆಂದೂ ಗೆಲುವಿನ ಮೊಳಕೆಯೇ ಏಳಬಾರದು, ಅವರು ಸೋತು ಕಾಡು ಸೇರಬೇಕು, ರಾಜಕುವರಿ ದ್ರೌಪದಿ ತಮ್ಮ  ತೊತ್ತಾಗಿ ಅಂತಃಪುರದಲ್ಲಿರಬೇಕು ಎಂಬುದೇ ಅವರ ಆಸೆಯಾಗಿತ್ತು. ಇನ್ನೂ ಒಂದು ಗೌಪ್ಯ ಸಂಗತಿಯೂ ನನಗೆ ತಿಳಿದಿದೆ ಕೇಳು. ಹೆಂಗಳೆಯರಿಗೆ ಅಲಂಕಾರ ಎಂದರೆ ಅತಿ ಪ್ರಿಯ ಎಂದು ನೀನೂ ಒಪ್ಪುತ್ತೀಯಾ ತಾನೇ?  ಅದೂ ಪಾಂಡವರೈವರ  ಮಡದಿ ಎಂದ ಮೇಲೆ ಅಲಂಕಾರ ಇಲ್ಲದೇ ಹೊರಗಡಿಟ್ಟಾಳೇ?   ಮೊನ್ನೆ ಅವರು ಮರಳಿ ರಥವೇರುವಾಗ ಅವಳು ಬಿಚ್ಚಿದ ಮುಡಿಯಲ್ಲಿದ್ದಳಂತೆ. ಅವಳ ಮುಡಿಯೆಳೆದು ತುಂಬಿದ ಸಭೆಗೆ ತಂದ  ದುಶ್ಯಾಸನನ ಕರುಳು ಬಗೆದು ಆ ನೆತ್ತರನ್ನು  ಎಣ್ಣೆಯಾಗಿಸಿಯೇ  ಅವಳು ಮುಡಿ ಕಟ್ಟುವುದಂತೆ.  ಈಗ ಹೇಳು ಆ ಹೆಣ್ಣುಮಗಳದ್ದೇನು ತಪ್ಪು. ಈ ಕುಲದ ಸೊಸೆಯಾಗಿ ಬಂದದ್ದೇ?  ಎಲ್ಲರೂ ಒಂದೇ ಕುಲದ ಅಡಿಯಲ್ಲಿ ಬರುವಾಗ ಒಬ್ಬನ ಸೋಲು ಇನ್ನೊಬ್ಬನ ಸೋಲು ಆಗುವುದಿಲ್ಲವೇ? ಅವಮಾನ ಎನ್ನುವುದು ವ್ಯಕ್ತಿಯೊಬ್ಬನ  ವೈಯುಕ್ತಿಕ ನೆಲೆಯಲ್ಲಿ ಆಗದೇ ಇಡೀ ಸಮೂಹವೇ ಅದನ್ನು ಅನುಭವಿಸುವುದಿಲ್ಲವೇ? ಕುರುಕುಲದ ರಾಜಭವನದಲ್ಲಿ ಹೀಗೆ ನಡೆಯಿತಂತೆ ಎಂದರೆ ಅದು ಕೇವಲ ದ್ರೌಪದಿಯೊಬ್ಬಳ ಅವಮಾನ ಮಾತ್ರವೇ ಅಲ್ಲವಲ್ಲ.." 

"ಹೌದು ಶ್ರಾವಸ್ತ. ನಾನೇನೋ ಆಗ ಚಿಕ್ಕಪ್ಪ ಆಹುಕ ಏನೂ ಹೇಳಲಿಲ್ಲವೆಂಬುದರಿಂದ ಅಲ್ಲೇನೂ ನಡೆದಿಲ್ಲ ಎಂದೇ ಅಂದುಕೊಂಡೆ. ಆದರೀಗ ತಿಳಿಯುತ್ತದೆ ಅವನ ಮೌನದ ಹಿಂದೆ ಇದ್ದುದು ಕುರುಕುಲದ ಮಾನ ಹೋಗಬಾರದೆನ್ನುವ ಕಳಕಳಿ. ಅವನ ಮೌನದ ಹಿಂದೆ  ಇದ್ದುದು ಒಂದು ಒಳ್ಳೆಯದಲ್ಲದ ನಡೆ ಮುಂದಿನ ಜನಾಂಗಕ್ಕೆ ತಿಳಿಯಬಾರದ ಕಾಳಜಿ. ಅಥವಾ ಅವನ ಮೌನದ  ಹಿಂದೆ  ಇದ್ದುದು ಭಯದ ಹೊದಿಕೆ..  ಆದರೆ ಇಂತಹ ಮೌನವೂ ಹೇಗೆ ಘಾಸಿಮಾಡುತ್ತದೆ ನೋಡು.. ಒಂದೇ ಮೊಗ ಹೊಂದಿದ ಸತ್ಯಕ್ಕೆ ಇನ್ನೊಂದು  ಮುಖವಾಡವನ್ನೇರಿಸುತ್ತದೆ.  ಅದು ಸುಳ್ಳೇ ಆಗಿರಬೇಕೆಂದೇನೂ ಇಲ್ಲ.. ಸತ್ಯವಲ್ಲ ಅಷ್ಟೇ..  ಒಂದು ನಾವು ನಂಬಿದ ಸತ್ಯ ಇನ್ನೊಂದು ನಾವು ನಂಬಲು ಸಾಧ್ಯವಿಲ್ಲದ ಸತ್ಯ.  ಈ ರಾಜ್ಯದ, ರಾಜಕಾರಣದ ಒಳ ಮರ್ಮವನ್ನು ನಾವು ತಿಳಿದಿರುವೆವೇ? ನಾವು ಜನ ಸಾಮಾನ್ಯರು. ನಮ್ಮದೋ ಮೂರು ಹೊತ್ತಿನ ಹೊಟ್ಟೆಯ ಚಿಂತೆಯಷ್ಟೇ ಇರುವ ಬದುಕು. ಇದು ಹಾಗಲ್ಲ. ಹೊಟ್ಟೆ ತುಂಬಿದವರ ಬದುಕು. ಹೊರಗಿನಿಂದ ನೋಡಿದರೆ ಎಲ್ಲಾ ಇದೆ. ಉಂಡುಟ್ಟು ನಗು ನಗುತ್ತಲೇ ಸುಖವಾಗಿ ಜೀವನ ಕಳೆಯಬಹುದಾದದ್ದು. ನಮ್ಮ ಆಶೆಗಳೂ ಅಂತಹ ಬದುಕನ್ನು ಪಡೆಯುವುದರತ್ತಲೇ ಇರುತ್ತವೆ ಅಲ್ಲವೇ.. ಆದರೀ ರಾಜಕಾರಣ ನೋಡು. ಇದು ನಮಗರ್ಥವಾಗುದು ಅಷ್ಟರಲ್ಲೇ ಇದೆ.ಇಲ್ಲಿ ಬಂಧಗಳಿಲ್ಲ, ಬೇಡಿಗಳಿಲ್ಲದೇ  ಬಂಧನಗಳಿವೆ.  ನಮಗೇಕೆ ದೊಡ್ಡವರ ಸುದ್ದಿ ಎಂದು ಸುಮ್ಮನಿದ್ದುಬಿಡಬಹುದೇ.. ಇರಬಹುದೇನೋ.. ನಮ್ಮ ಪಾಡಿಗೆ ನಮ್ಮನ್ನು ಇರಗೊಟ್ಟರೆ. ಹಾಗಾಗುವುದು ಸಾಧ್ಯವೇ ಇಲ್ಲದ ಸಂಗತಿ ಅಲ್ಲವೇ.. ಯಾಕೆಂದರೆ ಒಮ್ಮೆ ಪಂಗಡಗಳಾಯಿತು ಎಂದರೆ ಜನಬಲದ ಅವಶ್ಯಕತೆ ಬಿದ್ದೇ ಬೀಳುತ್ತದೆ. ಜನಬಲಗಳು ಎರಡೂ  ಕಡೆಯಲ್ಲಿ ಸೇರ್ಪಡೆಗೊಂಡರೆ ಅಭಿಪ್ರಾಯ ಬೇಧಗಳಿಂದ ಸಂಘರ್ಷವಾಗುವುದು ಕೂಡಾ ನಿಶ್ಚಿತವೇ.. ಯುದ್ಧವೆಂದಾದರೆ  ಈಗ ಗೆಳೆಯರಾಗಿರುವ ನೀನೂ ನಾನೂ ವಿರುದ್ಧ ದಿಕ್ಕಿನಲ್ಲಿ ನಿಂತು ಕತ್ತಿ ಹಿರಿಯುತ್ತೇವೆ. ಬಾಣಗಳಿಂದ ಘಾಸಿಗೊಳಿಸುತ್ತೇವೆ.  ನಮ್ಮ ಸಂಖ್ಯೆ ಕಡಿಮೆಯಾದಷ್ಟೂ ರಾಜನ ಸೋಲಷ್ಟೇ.. ಆದರೆ ರಾಜನ ಗೆಲುವಿನಲ್ಲಿ ನಮಗೇನೂ ಪಾಲಿಲ್ಲ.."

"ಅದೇನೋ ನಿಜ ಗೆಳೆಯಾ.. ಆದರೆ ಒಂದು ವೇಳೆ ಯುದ್ಧವೇ ಆಗುವುದಾದಲ್ಲಿ ನಾವ್ಯಾಕೆ ನ್ಯಾಯ ಯಾವುದು ಎನ್ನುವ ಕಡೆಗೇ ಹೋಗಬಾರದು?  ನಮ್ಮ ಹೊಟ್ಟೆಯ ಚಿಂತೆಯನ್ನು ನಾವೇ ನಿವಾರಿಸಿಕೊಳ್ಳುವವರಾಗಿರುವ ಕಾರಣ ಯಾವ ಅನ್ನದ ಋಣ ನಮ್ಮನ್ನು ಅನ್ಯಾಯದೆಡೆಗೇ ನಿಲ್ಲಲು ಪ್ರೇರೇಪಿಸೀತು?  ನಮ್ಮಂತೆ ರಕ್ತ ಮಾಂಸಗಳಿಂದ ಕೂಡಿದ ನಮ್ಮಂತೆಯೇ ಕಾಮಕ್ರೋಧಾದಿಗಳನ್ನು ಮೋಹಿಸುವ ರಾಜನನ್ನು ದೇವರ ಸ್ಥಾನಕ್ಕೇರಿಸಿ ಪೂಜಿಸುವ ಹುಚ್ಚಾಟವೇಕೆ? ಅದರ   ಬದಲು ಪ್ರಪಂಚದ ನಿಯಾಮಕನನ್ನೇ ನಂಬಿದರೇ ಒಳಿತಲ್ಲವೇ.   ಆತ ನಾವು ಸತ್ಯದ ಕಡೆಗೇ ನಿಂತರೆ ಹೆಚ್ಚು ಸಂತಸ ಪಡಲಾರನೇ?" 

"ಹೌದು ಶ್ರಾವಸ್ತ .. ನಮ್ಮ ನೆರಳು ನಮಗೇ ಕಾಣದಂತಹ ಹೊತ್ತಿದು.    ನನಗಿನ್ನೂ ಸತ್ಯವನ್ನು ಒರೆ ಹಚ್ಚಲಿದೆ.  ನಾನು ಕಂಡುಕೊಳ್ಳುವ ಸತ್ಯ ನಿನ್ನ ಸತ್ಯದೊಂದಿಗೆ ಸಮೀಕರಿಸುತ್ತದೆ ಎಂದಾದರೆ ಯುದ್ಧಭೂಮಿಯಲ್ಲಿ ನಾವಿಬ್ಬರೂ ಒಂದೇ ವೈರಿಯನ್ನು ಎದುರಿಸುತ್ತೇವೆ.  ಈ ಮಾತಿನಲ್ಲಿ ಎಳ್ಳಿನಿತೂ ವ್ಯತ್ಯಾಸವಿಲ್ಲ... ಅರೆರೇ..  ಮಾತಿನಲ್ಲಿ ಹೊತ್ತು ಹೋಗಿದ್ದೇ ತಿಳಿಯಲಿಲ್ಲ ನೋಡು.. ಕತ್ತಲೇರುತ್ತಿದೆ.. ಮನೆಯ ಕಡೆಗೆ ಬರುವೆಯಾದರೆ ಬಾ.. ಉಂಡು ಹೋಗಬಹುದು.. ನಿಂತೂ ನಿಂತೂ ಕಾಲುಗಳು ಆಯಾಸಗೊಂಡಿವೆ.." 

"ಇಲ್ಲ ನಂದಕ..  ನಾನೂ ನನ್ನ  ಮನೆಯ ಕಡೆಗೆ ಅವಸರವಾಗಿಯೇ ನಡೆಯಬೇಕು.. ಹೇಳಲು ನಿನ್ನಲ್ಲೇನಿದೆ ಮುಚ್ಚುಮರೆ ..  ನಿನ್ನೆ ಇಡೀ ದಿನ ಗಣಿಕೆಯರ ಸಂಗದಲ್ಲಿ   ಹೊತ್ತು ಕಳೆದದ್ದರಿಂದ  ಮನೆಯೊಳಗೆ ಮುನಿಸಿಕೊಂಡಿರುವ ಮಡದಿಯನ್ನು ಸಲ್ಲಾಪಕ್ಕೆಳೆದು ಸಮಾಧಾನಿಸಬೇಕು.. ಬರುತ್ತೇನೆ ಗೆಳೆಯಾ.. ಇನ್ನೊಮ್ಮೆ.."


-- 

Friday, August 22, 2014

ಕಥೆಯಾದ ಹೊತ್ತು ..











ಅಜ್ಜ, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ಅಲ್ಲೇ ಪಕ್ಕದಲ್ಲಿ ಉಳಿದಿದ್ದ ಹಳೆಯ ಮನೆಯ ಪಳೆಯುಳಿಕೆಗಳನ್ನು ನೋಡುತ್ತಾ ನೆನಪುಗಳನ್ನು ಹೆಕ್ಕಿ ಹೆಕ್ಕಿ ಇಡುತ್ತಿದ್ದ. 

ಮಗ, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ಇದನ್ನು ಕಟ್ಟಬೇಕಾದರೆ ತಾನು ಅನುಭವಿಸಿದ ಕಷ್ಟ ನಷ್ಟಗಳ ಲೆಕ್ಕಾಚಾರ ಮಾಡುತ್ತಾ ತನ್ನ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದ. 

ಮೊಮ್ಮಗ, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ತಾನು ಬಿಡಿಸಿದ ಮನೆಯ ಚಿತ್ರ ಸರಿಯಾಗಲಿಲ್ಲವೆಂದು ಹಾಳೆಗಳನ್ನು ಹರಿದು ಹರಿದು ಬಿಸುಡುತ್ತಿದ್ದ. 

ಪಾರಿವಾಳಗಳು, 
ಹೊಸದಾಗಿ ಕಟ್ಟಿದ ಮನೆಯ ಜಗಲಿಯಲ್ಲಿ ಕುಳಿತು ತಮ್ಮ ಗೂಡಿಗೆ ಜಾಗವೆಲ್ಲಿದೆ ಎಂದು ಹುಡುಕುತ್ತಿದ್ದವು. 

Monday, June 9, 2014

ಅವನು


ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತಿದ್ದ ಅವಳಿಗೆ ಹೊರಗಿನಿಂದ ಬೀಸುತ್ತಿದ್ದ ಚಳಿಗಾಳಿ ಮುಖಕ್ಕೆ ಬಡಿಯುತ್ತಿದ್ದರೂ ಹಣೆಯಲ್ಲಿ ಬೆವರ ಹನಿ. ಮೈಯಲ್ಲೇನೋ ನಡುಕ. ಎದೆ ಬಡಿತದ ಸದ್ದು ಅವಳಿಗೇ ಕೇಳಿಸುತ್ತಿತ್ತು.  ಹಿಂದಿನಿಂದ ಬರುತ್ತಿದ್ದ ಅವನ ಹೆಜ್ಜೆಗಳು ತನ್ನನ್ನು ಸಮೀಪಿಸುತ್ತಿವೆ ಎಂದು ಅವಳಿಗೆ ನೋಡದೆಯೂ ತಿಳಿಯುತ್ತಿತ್ತು.. ಪ್ರತಿ ದಿನ ನೋಡುವವನೇ.. 

ಆದರೂ ಇಂದು ಇಷ್ಟು ಜನರ ಎದುರಲ್ಲೇನಾದರೂ ಅವನು ಮಾತನಾಡಿದರೆ..

ಮತ್ತಷ್ಟು ಮುದುರಿದಳು. ಅವನ ಹೆಜ್ಜೆ ಇನ್ನಷ್ಟು ಹತ್ತಿರಕ್ಕೆ ಬಂತು.. 
 
ಬೇರೇನೂ ಮಾಡಲರಿಯದೇ ಅವಳು ಕೈಯಲ್ಲಿದ್ದ ಕರ್ಚೀಫನ್ನು ಕೆಳ ಹಾಕಿ ಅದನ್ನು ಹುಡುಕುವಂತೆ ನಟನೆ ಮಾಡುತ್ತಾ ಬಗ್ಗಿದಳು. ಸ್ವಲ್ಪ ಹೊತ್ತು ಅವನ ಹೆಜ್ಜೆಗಳು ಅಲ್ಲಿಯೇ ತಟಸ್ಥವಾಗಿ ನಿಂತಿದ್ದು ಅವಳಿಗೆ ಅರಿವಾಯಿತು. ಬಗ್ಗಿಸಿದ ತಲೆಯನ್ನು ಎತ್ತಲೇ ಇಲ್ಲ.

ಮೆಲ್ಲನೆ ಹೆಜ್ಜೆಗಳ ಸದ್ದು ಮುಂದಕ್ಕೆ ಚಲಿಸತೊಡಗಿತು. ಅಬ್ಬಾ ಎಂದು ನಿಟ್ಟುಸಿರು ಬಿಡುತ್ತಾ ತಲೆ ಎತ್ತಿ ಅವನ ಕಡೆಗೆ ನೋಡದೇ ಕುಳಿತುಬಿಟ್ಟಳು.

ಬಸ್ಸು ನಿಂತಿತು.

ಎಲ್ಲರೂ ಇಳಿಯುವ ಮೊದಲೇ ಅವನು ಬಾಗಿಲಿನ ಕೆಳಗಿಳಿದು ನಿಂತಿದ್ದ.

ಸ್ವಲ್ಪವೂ ಜಾರದಂತೆ ಪಿನ್ ಮಾಡಿದ್ದ ಚೂಡಿದಾರದ ಶಾಲನ್ನು ಸುಮ್ಮಸುಮ್ಮನೆ  ಎಳೆದೆಳೆದು ಸರಿ ಮಾಡಿಕೊಳ್ಳುತ್ತಾ ಅವನ ಪಕ್ಕದಿಂದ ದಾಟಲು ಪ್ರಯತ್ಸಿಸಿದಳು.

ಆದರೂ ಅವನ ಮೊಗದ ಭಾವವನ್ನು ಈಕ್ಷಿಸುವ ಕುತೂಹಲ ಹತ್ತಿಕ್ಕಲಾರದೇ ಕಣ್ಣೆತ್ತಿದ್ದಳಷ್ಟೇ..

'ನಾಳೆಯಿಂದ   ಬಸ್ ಪಾಸ್ ತಾರದೇ ಬಸ್ಸಿಗೆ ಹತ್ತಬೇಡಿ..' ಎಂದು ಅವಳಿಗೆ ಮಾತ್ರ ಕೇಳುವಂತೆ ಸಣ್ಣದಾಗಿ ಹೇಳಿ, 'ರೈಟ್' ಎಂದು ಕಿರುಚುತ್ತಾ ಬಸ್ಸೇರಿದ ಅವನ ಅಂಗಿಯ ಖಾಕಿ ಬಣ್ಣ ಅವಳ ಕಣ್ಣಿನಿಂದ  ಮೆಲ್ಲನೆ ಮರೆಯಾಯಿತು. 


Monday, May 5, 2014

ಹೀಗೊಂದು ಪ್ರೇಮಕಥೆ


ಬಾಗಿಲ ಬದಿಯಲ್ಲಿ 41+ 2 ಸೀಟುಗಳು ಎಂಬ ಅರೆಮಾಸಿದ ಪೈಂಟಿನ ಬರಹವನ್ನು ಹೊತ್ತ ಬಸ್ಸು ನನ್ನ ಬಳಿಗೆ ಬಂದು ನಿಂತಿತು. ಚುರುಕಿನಲ್ಲಿ ಮೆಟ್ಟಿಲೇರಿ ಡ್ರೈವರನ ಎಡಬದಿಯಲ್ಲಿದ್ದ ನನ್ನ ಮಾಮೂಲಿ ಸ್ಥಳವಾದ ಅಡ್ಡ ಸೀಟಿನ ಮೇಲೆ ಕುಳಿತೆ. ಎಂದಿನಂತೆ ನನ್ನ ದೃಷ್ಟಿ  ಹರಿದಿದ್ದು ಮಹಿಳೆಯರ ಸೀಟಿನ ನಿಶ್ಚಿತ ಜಾಗದೆಡೆಗೆ. ಅವಳು ನಸು ನಾಚಿಕೆಯಲ್ಲಿ ತಲೆ ಬಗ್ಗಿಸಿ ಮುಗುಳು ನಗೆ ಬೀರುತ್ತಿದ್ದಳು. 

ಓದುಗ ಮಹಾಶಯರು ಕಥೆಯ ತಲೆ ಬರಹವನ್ನು ಮೊದಲೇ ಓದಿದ್ದರೆ ಇದು ನನ್ನ ಕಥೆಯೇ ಎಂದು ತಪ್ಪು ತಿಳಿದುಕೊಳ್ಳುವ ಸಂಭವವುಂಟು. ಆದರೆ ನೀವೊಮ್ಮೆ ನನ್ನ ಪರಿಚಯ ಮಾಡಿಕೊಂಡಲ್ಲಿ ಹಾಗಾಗದು ಎನ್ನುವ ಸದಾಶಯ ನನ್ನದು. 

ನಾನು ಈ ಬಸ್ಸಿನ ಅಜ್ಜನ ಕಾಲದಿಂದಲೇ ಇದರ ಸಹಸವಾರ.   ನನ್ನ ಸರ್ವೀಸಿನ ಕಾಲದಲ್ಲಿ ಇದೇ ರೂಟಿನಲ್ಲಿ  ಬರುತ್ತಿದ್ದ ಮೊದಲಿನೆರಡು ಬಸ್ಸುಗಳು ನಮ್ಮ ಕರಾವಳಿಯ ಉಪ್ಪು ಗಾಳಿಯ ಹೊಡೆತಕ್ಕೆ ತುಕ್ಕು ಹಿಡಿದು, ಎತ್ತರ ತಗ್ಗಿನ ತಿರುವು ಮುರುವಿನ ಮಾರ್ಗದಲ್ಲಿ ಸುತ್ತಿ ಸುಳಿದು ಬಸವಳಿದು ಗೂರಲು ರೋಗ ಅಂಟಿ ಸತ್ತೇ ಹೋಗಿದ್ದವು.  ಅಂದರೆ ನನ್ನ ಜೀವಿತಾವಧಿಯಲ್ಲಿ ಈ ಮಾರ್ಗದಲ್ಲಿ ನಾನು ಹೋಗಲೇಬೇಕಾದ ಹೊತ್ತಿಗೆ ಬರುತ್ತಿದ್ದ ಬಸ್ಸುಗಳಲ್ಲಿ ಇದು ಮೂರನೆಯದು.
ನನ್ನ ಯೌವನ ಕಾಲದಲ್ಲಿ ಅಪ್ಪ ಗಳಿಸಿಟ್ಟ ಅಷ್ಟು ಆಸ್ತಿಯನ್ನೇ ಐಸ್ ಕ್ಯಾಂಡಿಯಂತೆ ಕರಗಿಸುತ್ತಾ ಕಾಲ ಕಳೆಯುವ ನನ್ನನ್ನು ನೋಡಿ ಸಹಿಸಲಾಗದೇ ಅಪ್ಪನೇ ಯಾರ್ಯಾರ ವಶೀಲಿ ಮಾಡಿ ನನಗೆ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಕೊಡಿಸಿದ್ದರು.  ಅಲ್ಲಿಂದ ನನ್ನ ಜೀವನ ಇದೇ ಆರು ಚಕ್ರದ ಗಾಡಿಯನ್ನೇರುತ್ತಲೇ ಚಲಿಸಲಾರಂಭಿಸಿತು. ಹಾಗಾಗಿಯೇ ಏನೋ ಈ ಬಸ್ಸಿನಲ್ಲಿ ಬರುವ ಚರಾಚರಗಳೂ, ಪ್ರ್ಯಾಂ.. ಎನ್ನುವ ಹಾರನ್ನು, ಕ್ರೀಂ.. ಎಂದೊರಲುವ ಬ್ರೇಕು, ದಡ ಬಡ ಸದ್ದೆಸಗುವ ಬಸ್ಸಿನ ಶರೀರ.. ಹೀಗೆ ಸಕಲವೂ ನನ್ನನ್ನು ಕಂಡೊಡನೆ ಪರಿಚಯದ ನಗೆ ಬೀರಿದಂತಾಗುತ್ತಿತ್ತು.

ಮೊದಲೆಲ್ಲಾ ಶಿಕ್ಷಕ ವೃತ್ತಿಧರ್ಮದಂತೆ ಮುಖ ಗಂಟಿಕ್ಕಿಕೊಂಡೇ ಬಸ್ಸೇರುತ್ತಿದ್ದ ನನಗೆ ಬಸ್ಸಿನೊಳಗಿನ ಲೋಕದ ಪರಿಚಯವೇ ಕಡಿಮೆಯಿತ್ತು. ಆದರೀಗ ಘನ ಸರ್ಕಾರದವರು ನನ್ನ ಕೆಲಸದಿಂದ ನನಗೆ ಮುಕ್ತಿ ಕೊಡಿಸಿ ಮನೆಯಲ್ಲೇ ಕುಳಿತುಣ್ಣುವಂತೆ ಪೆನ್ಷನ್ ಕೊಡಲು ಶುರು ಮಾಡಿ ನನ್ನ ಸರ್ವೀಸಿನ ಅರ್ಧಕ್ಕಿಂತಲೂ ಹೆಚ್ಚು ಕಾಲ ಕಳೆದಿತ್ತು. ಮನೆಯಲ್ಲಿ ಕುಳಿತು ಮಾಡುವುದೇನು ಎಂಬುದಕ್ಕಿಂತಲೂ ಹೆಚ್ಚಾಗಿ, ಕುಳಿತರೆ ಏನಾದರೂ ಮಾಡಬೇಕಾಗಬಹುದು ಎನ್ನುವ ಭಯಕ್ಕೆ ನಾನು ನಿತ್ಯವೂ ಈ ಬಸ್ಸೇರುತ್ತಿದ್ದೆ. ಬಸ್ಸಿನ ಸಕಲ ಆಗುಹೋಗುಗಳನ್ನು ಗಮನವಿಟ್ಟು ನೋಡುತ್ತಿದ್ದೆ.  ಈಗ ನಿಮಗೆ ನನ್ನ ಪರಿಚಯ ಆದ ಕಾರಣ ಕಥೆಯ ನಾಯಕ ನಾನಲ್ಲ ಎಂಬುದನ್ನು ಗ್ರಹಿಸಿದ್ದೀರಿ ಎಂದುಕೊಂಡಿದ್ದೇನೆ. 

ನನ್ನ ಕಣ್ಣೋಟ ಮಹಿಳೆಯರಿಗಾಗಿ ಮೀಸಲಾದ ಸೀಟಿನಲ್ಲಿ ಕೇಂದ್ರೀಕೃತಗೊಂಡಿತ್ತು ಎಂದೆನಲ್ಲ.. ಅಲ್ಲಿಯೇ ಕಥಾ ನಾಯಕಿ ಕುಳಿತು ತಮ್ಮ ಕೈಯಲ್ಲಿದ್ದ ಮೊಬೈಲನ್ನು ನಸು ನಾಚಿಕೆಯಲ್ಲಿ ತಲೆ ಬಗ್ಗಿಸಿ ಮುಗುಳು ನಗೆ ಬೀರಿ ನೋಡುತ್ತಿದ್ದಳು. 

ಅವಳಿಂದ ಸರಿಯಾಗಿ ಎರಡು ಸೀಟು ಹಿಂದೆ ಟೈಟ್ ಜೀನ್ಸು, ಬ್ರೈಟು ಮುಖ ಹೊತ್ತ ಹುಡುಗನೊಬ್ಬ 'ಮೈಸೂರ್ ಸಿಲ್ಕ್ ಪ್ಯಾಲೆಸ್' ಎಂಬ ಹೆಸರು ಹೊತ್ತ ಕಡು ಹಳದಿಯ, ನುಣುಪಾದ ಪ್ಲಾಸ್ಟಿಕ್ ಲಕೋಟೆಯನ್ನು ತನ್ನ ತೊಡೆಯ ಮೇಲಿಟ್ಟು ಅದರ ಮೇಲೆ ಇಟ್ಟಿಗೆಯಷ್ಟಗಲದ ತನ್ನ ಮೊಬೈಲನ್ನು ಮಲಗಿಸಿ ಆಗೊಮ್ಮೆ ಈಗೊಮ್ಮೆ ಹುಡುಗಿಯ ಕಡೆ ಕಳ್ಳ ನೋಟ ಬೀರುತ್ತಾ ಕುಳಿತಿದ್ದ.ಅವರಿಬ್ಬರನ್ನು ಯಾವ ಮಾಯೆ ಜೊತೆಯಾಗಿ ಬಂಧಿಸಿತ್ತೋ ಏನೋ.. 
ನಾನು ಬಸ್ಸು ಹತ್ತಿ ಕುಳಿತು ಸರಿಯಾಗಿ ಇಪ್ಪತ್ತು ನಿಮಿಷ ಕಳೆದೊಡನೆ ಅವಳು ತನ್ನ ಮೊಬೈಲನ್ನು ಪರ್ಸಿನೊಳಗೆ ಸೇರಿಸಿಕೊಳ್ಳುತ್ತಾ ಚೂಡಿದಾರದ ಶಾಲನ್ನು  ಸರಿಪಡಿಸಿಕೊಳ್ಳುತ್ತಾ ತನ್ನಿಂದ ಎರಡು ಸೀಟು ಹಿಂದೆ ಕುಳಿತ ಹುಡುಗನ ಕಡೆಗೊಂದು ಕಣ್ಬಾಣ ಎಸೆದು ಘಾಸಿಗೊಳಿಸಿ ತನ್ನಂತೆ ಇಳಿಯ ಹೊರಟ ಉಳಿದ ಹುಡುಗಿಯರ ಸಾಲನ್ನು ಸೇರುತ್ತಿದ್ದಳು. ಅವರ ಜೊತೆಯಲ್ಲೇ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ 'ಕ್ಯಾsಷ್ಯೂ ಫ್ಯಾಕ್ಟರಿ' ಎಂಬ ಬೋರ್ಡು ಹಾಕಿದ ಕಟ್ಟಡದೆಡೆಗೆ ನಡೆಯುತ್ತಿದ್ದಳು.

ಅವಳ ಶಾಲಿನ ಕುಚ್ಚಿನ ತುದಿಯ ನೂಲೂ ಮರೆಯಾಗುವವರೆಗೆ ಅವಳನ್ನು ನೋಡುವ ಯುವಕ ಮತ್ತೆ ಅನಾಥನಂತೆ ಇತ್ತ ತಿರುಗಿ, ತನ್ನ ಮೊಬೈಲನ್ನು ಕುಳಿತಲ್ಲೇ ತನ್ನ ಪಾಂಟಿನ ಕಿಸೆಗೆ ಸೇರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ. ಮುಂದಿನ ಸ್ಟಾಪಿನಲ್ಲಿ ದೊಡ್ಡದಾಗಿ ಕಾಣುವ 'ಗಣೇಶ್ ಗ್ಯಾರೇಜ್' ಎಂಬಲ್ಲಿಗೆ ಅವನ ಬೆಳಗಿನ ಪಯಣದ ಕೊನೆ.

ಹಾಗೆಂದು ಅವರು ಬಸ್ಸಿನಲ್ಲಿ ಒಂದು ಸಲವೂ ಮಾತಾಡಿಕೊಂಡದ್ದು ಇಲ್ಲವೇ ಇಲ್ಲ ಎನ್ನುವ ಹಾಗಿಲ್ಲ ಎಂಬುದಕ್ಕೆ ಅವರ ಮೊದಲ ಭೇಟಿಯೇ ಸಾಕ್ಷಿ. ಅದೆಲ್ಲಿಯೋ, ಯಾವೂರಲ್ಲಿಯೋ ನಡೆದ ಕೋಮುಗಲಭೆ ಎಂಬ ಹಳಸಲು ಪದಕ್ಕೆ ಮರ್ಯಾದೆ ಒದಗಿಸುವ ಕೆಲಸಕ್ಕೆ, ಬೇರೇನೂ ಕೆಲಸವಿಲ್ಲದ ಕೆಲ  ನಮ್ಮೂರ ಯುವಕರೂ  ಉತ್ಸಾಹದಿಂದ ಧುಮುಕಿದ್ದರು.ಅಲ್ಲಿಯವರೆಗೆ ನಾನು ಗಮನಿಸದ  ಇದೇ ಈ ಕಥೆಯ ನಾಯಕಿ ಆಗಷ್ಟೇ ತಾನಿಳಿಯುವ ಜಾಗ ಬಂತೆಂದು ಎದ್ದು ನಿಂತಿದ್ದಳು. ಆಗಲೇ ಬಸ್ಸಿನ ಗಾಜಿಗೆ ಎಲ್ಲಿಂದಲೋ ಕಲ್ಲೊಂದು ಅಪ್ಪಳಿಸಿ ಗಾಜನ್ನು ಭೇದಿಸಿತ್ತು. ಹೆದರಿದ ಹರಿಣಿಯಂತಾದ ಆಕೆ ಆ ಆಘಾತಕ್ಕೋ, ಬಸ್ಸಿನ ಡ್ರೈವರ್ ಅದೇ ಕಾಲಕ್ಕೆ ಅದುಮಿದ ಬ್ರೇಕಿಗೋ ವಾಲಾಡಿ ಕುಳಿತಿದ್ದ ಯುವಕನ ಮಡಿಲಿಗೆ ಬಿದ್ದಿದ್ದಳು. 
ಇದರಿಂದ ಯುವಕನ ಮೈಗೆ ಮಿಂಚು ಬಡಿದು, ಇದ್ದಕ್ಕಿದ್ದಂತೆ ಕ್ಷಾತ್ರ ತೇಜನ್ನು ಉಕ್ಕೇರಿ ' ಯಾವನವನು ... ಮಗ, ಬಸ್ಸಿಗೆ ಕಲ್ಲೆಸದವನು, ಧೈರ್ಯವಿದ್ದರೆ ಬಾ ಮುಂದೆ' ಎಂದು ಹುಡುಗಿಯ ತೋಳನ್ನು ಬಿಗಿಯಾಗಿಯೇ ಹಿಡಿದು ಯಕ್ಷಗಾನದ ಆರ್ಭಟೆ ತೆಗೆದೇ ಬಿಟ್ಟ. ಆ ದಿನ ಮುಂದಿನ ಸ್ಟಾಪಿನಲ್ಲಿ ಇಳಿಯಬೇಕಾದ ಆತ ಅಲ್ಲೇ ಹುಡುಗಿಯೊಂದಿಗೆ ಇಳಿದು ಅವಳು ಅವಳ ಫ್ಯಾಕ್ಟರಿ ಗೇಟ್ ದಾಟಿದ ಮೇಲೆಯೇ ಬಂದಿದ್ದು. ಬಸ್ಸಿನವರು ಕೂಡಾ ಆತನ ಸಾಹಸಕ್ಕೆ ಸರ್ಟಿಫಿಕೇಟ್ ಕೊಡುವವರಂತೆ ಅವನು ಬರುವವರೆಗೆ ನಿಲ್ಲಿಸಿಯೇ ಇದ್ದರು. 

ಮತ್ತಿನದೆಲ್ಲಾ ನೀವು ಸಿನಿಮಾದಲ್ಲಿ ನೋಡಿದ ಹಾಗೆ. ಒಮ್ಮೊಮ್ಮೆ ಅವಳು ತನ್ನ ಸ್ಟಾಪ್ ಬರುವಾಗಲೂ ಏಳದೇ, ಆ ದಿನ ಇವನೂ ತನ್ನ ಗ್ಯಾರೇಜ್ ಕಡೆ ಮೊಗ ತಿರುಗಿಸದೇ ಅದರ ನಂತರದ ಪಿಕ್ಚರ್ ಥಿಯೇಟರ್ ಸ್ಟಾಪಿನಲ್ಲಿ ಇಳಿಯುತ್ತಿದ್ದರು. ನನಗೂ ಬೇರೇನೂ ಕೆಲಸವಿಲ್ಲದೇ ನಾನೂ ಅವರ ಹಿಂದಿನಿಂದಲೇ ಇಳಿದು ಥಿಯೇಟರಿನೊಳಗೆ ನುಗ್ಗುತ್ತಿದ್ದೆ. ಒಳಗೆ ನಡೆದೊಡನೇ ಅವರ  ಕೈ ಕೈ ಸೇರಿಕೊಳ್ಳುತ್ತಿತ್ತು.  ಕಣ್ಣಿಗೆ ಕಣ್ಣೂ ಕೂಡುತ್ತಿತ್ತೋ ಏನೋ ಆ ಕತ್ತಲಿನಲ್ಲಿ ನನಗದು ಕಾಣುತ್ತಿರಲಿಲ್ಲ. ಮತ್ತೆ ಕೆಲವೊಮ್ಮೆ ಕೊನೆಯ ಸ್ಟಾಪ್ ಆದ ಬೀಚಿನ ಮಾರ್ಗದಲ್ಲಿ ಸಾಗುತ್ತಿದ್ದರು. ಬಿಸಿಯಾದ ಮರಳ ಮೇಲೆ ಹಾಯಾಗಿ ಕುಳಿತು ಸಮುದ್ರದ ಅಲೆಗಳನ್ನು ಲೆಕ್ಕ ಹಾಕುವವರಂತೆ ಗಂಟೆಗಟ್ಟಲೆ ಜೊತೆಯಾಗಿ ಕುಳಿತು ಬಿಡುತ್ತಿದ್ದರು. ಆಗಂತೂ ನಾನು ನನ್ನ ಬೋಳು ಮಂಡೆಗೆ ಬಿಸಿಯ ಝಳ ತಡೆಯಲಸಾಧ್ಯವಾಗಿ ಈ ಊರಿಗೆ ಬೀಚ್ ಯಾಕೆ ಬೇಕಿತ್ತು ಎಂದು ಶಪಿಸಿದ್ದಿತ್ತು.

ಇದಲ್ಲದೆ ನಮ್ಮೂರ ಪಾರ್ಕಿನ ಲಂಟಾನ ಬಲ್ಲೆಯ ಮೂಲೆಯಲ್ಲಿ ಕಾಲು ಚಾಚಿ ಕೂರುತ್ತಿದ್ದ ಅವರನ್ನು ನಾನು ಕಂಡಿದ್ದೇನೆ. ಕೆಲವೊಮ್ಮೆ ಅಲ್ಲೇ ಇರುವ ಕಲ್ಲಿನ ಮೇಲೋ, ಮರದ ಬೊಡ್ಡೆಯ ಮೇಲೋ ತಮ್ಮ ಹೆಸರುಗಳನ್ನು ಕೆತ್ತಿ ಅಮರ ಶಿಲ್ಪಿಯ ಫೋಸ್ ಕೊಡುತ್ತಿದ್ದ ಹುಡುಗನನ್ನು ಹತ್ತಿರಕ್ಕೆ ಎಳೆದು ಕೂರಿಸುತ್ತಿದ್ದ ಅವಳು ಕಾಣಿಸುತ್ತಿದ್ದಳು. ಹೀಗೆ ಅವರ ಪ್ರೇಮ ದಿನದಿಂದ ದಿನಕ್ಕೆ ನಿರ್ಮಲವಾಗುತ್ತಾ ಸಾಗಿದಂತೆ ನನಗೆ ನೋಡುವ ಕೆಲಸ ಹೆಚ್ಚಾಗುತ್ತಾ ಹೋಯಿತು.  
ಇನ್ನು ಮುಂದಿನದನ್ನು ಕೇಳಲು ನೀವು ಆತುರರಾಗಿದ್ದೀರಿ ಎಂದು ನನಗೆ ತಿಳಿದಿದೆ ಆದರೇನು ಮಾಡಲಿ ಹೊತ್ತಲ್ಲದ ಹೊತ್ತಿನಲ್ಲಿ ಹರೆಯ ಬಂದವರಂತೆ ಅವರ ಬೆನ್ನ ಹಿಂದೆ ಅಲೆದುದಕ್ಕೋ ಏನೋ ಇದ್ದಕ್ಕಿದ್ದಂತೆ ಕಾಲು ಗಂಟು ನೋವು ಪ್ರಾರಂಭವಾಯಿತು. ಅದು ನೋವು ಎಂದರೆ ಅಂತಿಂತದಲ್ಲ.. ಕಾಲೆತ್ತಿ ಇಡುವುದೇ ನರಕಯಾತನೆಯಾಯಿತು. ಇದರಿಂದಾಗಿ  ನನ್ನ ಬಸ್ಸು ಪ್ರಯಾಣ  ನಿಂತೇ ಹೋಯಿತು. 

ಸುಮಾರು ಎರಡು ಮೂರು ವರ್ಷಗಳೇ ಉರುಳಿತ್ತು ನಾನು ಮನೆಯಿಂದ ಅಲುಗಾಡದೇ.. 

ಆದರೀಗ ಕಾಲು ನೋವಿಗೆ ಕೊನೆಯ ಪರಿಹಾರವಾಗಿ ಆಪರೇಷನ್ ಸೂಕ್ತ ಎಂದು ಹೇಳಿದ್ದರಿಂದ ದೊಡ್ಡಾಸ್ಪತ್ರೆಗೆ ಸೇರಿ ರೂಮ್ ನಂ. 302 ರ ಖಾಯಂವಾಸಿಯಾಗಿಯೇ ಎರಡು ತಿಂಗಳು ಕಳೆದಿತ್ತು. ಈಗ ಡಾಕ್ಟರು ಪ್ರತಿದಿನ ಕಾರಿಡಾರಿನಲ್ಲೇ ನಿಧಾನಕ್ಕೆ ನಡೆದಾಡಬೇಕೆಂದು ಸೂಚಿಸಿದ ಕಾರಣ ನಾನು  ಮಲಗಿ ಬೇಸರಾದಾಗ ಅದನ್ನೇ ಮಾಡುತ್ತಿರುತ್ತೇನೆ. 
ಆ ದಿನವೂ ಅತ್ತಿತ್ತ ಠಳಾಯಿಸುತ್ತಾ ಇರಬೇಕಾದರೆ ಅವಳನ್ನು ಕಂಡದ್ದು. ತುಂಬಿದ ಬಸುರಿಯನ್ನು ಸೀದಾ ನನ್ನೆದುರಿದ್ದ ಲೇಬರ್ ರೂಮಿಗೆ ಕರೆದೊದ್ದರು. ನನಗೂ ಈ ಆಸ್ಪತ್ರೆಯಲ್ಲಿ ಈ ಲೇಬರ್ ರೂಮಿನ ಎದುರು ನಡೆದಾದುವುದೆಂದರೆ ಅತಿ ಪ್ರಿಯ. ಅಲ್ಲಿನ ಕಾತರತೆ, ಹೊಸ ಜೀವದ ಸ್ವಾಗತಕ್ಕೆ ಸಂಭ್ರಮದ ಸಿದ್ದತೆ, ಕೆಲವೊಮ್ಮೆ ನಿರಾಸೆ. ಇದೆಲ್ಲವನ್ನೂ ನನ್ನ ಅಳತೆಯಲ್ಲಿ ಅಳೆಯುವುದು ನನಗೆ ಪ್ರಿಯವಾಗಿತ್ತು. ಮತ್ತೂ ಒಂದು ಗುಟ್ಟಿನ ವಿಷಯವೆಂದರೆ ಈ ಆಸ್ಪತ್ರೆಯ ಕ್ಯಾಂಟೀನಿನ ಒಂದೇ ರುಚಿಯ ನೀರು ಬಣ್ಣದ ಸಾರು, ಮೆಣಸಿನ ಬಣ್ಣದ ಸಾಂಬಾರು ಎಂಬ ಮತ್ತೊಂದು ನೀರು ಇದನ್ನೇ ತಿಂದು ತಿಂದು ಬಾಯಿ  ರುಚಿ ಸತ್ತಿರುವಾಗ  ಈ ವಾರ್ಡಿನ ಎದುರು  ಹೆಚ್ಚಾಗಿ  ಹೊಸ ಜೀವ ಹುಟ್ಟಿದ ಸಂತಸಕ್ಕಾಗಿ ಜನರು ಹಂಚುತ್ತಿದ್ದ ಲಾಡು, ಮೈಸೂರ್ ಪಾಕ್, ಪೇಡೆಗಳೇ ನನ್ನ ಜಿಹ್ವೆಯನ್ನು ಜೀವಂತವಿಡುತ್ತಿದ್ದುದು. 

ಆ ದಿನ ನನ್ನ ಕಣ್ಣುಗಳಿಗೆ ಇನ್ನೂ ಒಂದು  ಅಚ್ಚರಿ ಕಾದಿತ್ತು. ಅದೇ ಬಸ್ಸಿನ ಯುವಕ ಲೇಬರ್ ವಾರ್ಡಿನ ಹೊರಗೆ ಮುಖ ಕಿವುಚಿಕೊಂಡು  ಅತ್ತಿತ್ತ ಸುಳಿದಾಡುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಗೋಡೆಯ ಮೇಲೆ ಉರಿದ ಹಸಿರು ಲೈಟಿನ ಕೆಳಗಿನ ಬಾಗಿಲಿಗೆ ಎರಗಿ ಒಳಗಿನ ಪಲಿತಾಂಶಕ್ಕಾಗಿ ಕಾದು ನಿಂದ. ನರ್ಸೊಬ್ಬಳು ಇಣುಕಿ ಇವನ ಮುಖ ನೋಡಿ ನಗುತ್ತಾ 'ಹೆಣ್ಣು ಮಗು' ಎಂದು ಹೇಳಿ ಬಾಗಿಲು ಮುಚ್ಚಿಕೊಂಡಳು. ನಿಂತಲ್ಲೇ ಕುಪ್ಪಳಿಸಿದ. ಅವನು ಮೊದಲೇ ಕೈಯಲ್ಲಿ ಹಿಡಿದಿದ್ದ ದೊಡ್ಡ ಡಬ್ಬದಿಂದ ಸೋನ್ ಪಾಪ್ಡಿ ಹಂಚತೊಡಗಿದ.ನನ್ನ ಕೈಗೂ ಒಂದು ತುಂಡು ಬಿದ್ದಿತು. ಅದರ ನವಿರಾದ ಎಳೆಗಳನ್ನು ಆಸ್ವಾದಿಸುತ್ತಾ  ಈ ಸೋನ್ ಪಪ್ಡಿಯನ್ನು ಯಾರು ಕಂಡು ಹಿಡಿದರಪ್ಪಾ ಎಂದು ಅಚ್ಚರಿ ಪಡುತ್ತಾ  ಆಲೋಚಿಸುತ್ತಿರುವಾಗಲೇ ಆ ಯುವಕ ದೂರಕ್ಕೆ ನಡೆದು ನನ್ನ ಕಣ್ಣಿಂದ ಮರೆಯಾದ. 

ಮತ್ತೊಮ್ಮೆ ಲೇಬರ್ ವಾರ್ಡ್ ಬಾಗಿಲು ತೆರೆಯಿತು. ಹೊರಗೆ ನಿಂತಿದ್ದವರು ಎದ್ದು ಬಾಗಿಲ ಬಳಿ ನಿಂತರು.  ಆ ಹುಡುಗಿಯನ್ನು ಸ್ಟ್ರೆಚರಿನಲ್ಲಿ ಮಲಗಿಸಿ ಹೊರಗೆ ಕರೆತರುತ್ತಿದ್ದರು. ಅವಳ ಜೊತೆ ಇದ್ದವರಾರೋ ನನ್ನ ಕೈಗೆ ಮೋತೀ ಚೂರ್ ಲಡ್ಡೊಂದನ್ನು ತುರುಕಿ 'ಗಂಡು ಮಗು' ಎಂದರು. 

ಅವಳನ್ನು ರೂಮ್ ನಂ. 337 ಕ್ಕೆ ಕರೆದೊಯ್ದರೆ ಅವನು ರೂಂ. ನಂ. 372ರಲ್ಲಿ ಕಾಯುತ್ತಾ ನಿಂತಿದ್ದ. 

-- 

Monday, February 24, 2014

ಮಂಡೋದರಿ.




ಹೆಣ್ಣಿನ ಬಾಳೆಷ್ಟು ವಿಚಿತ್ರ. ಬದುಕು ಮುಗಿಯುವವರೆಗೆ ಹೋರಾಟ.ಗೆದ್ದರೆ ಕಳೆದುಕೊಳ್ಳುವ ಭಯ. ಹಾಗಾಗಿಯೇ ಏನೋ...  ಸೋಲದಿದ್ದರೂ ಎಲ್ಲೂ ಗೆಲ್ಲುವಂತಿಲ್ಲ.ದಶಕಂಠ ಎಂಬ ಹೆಸರು ಕೇಳದವರುಂಟೇ ಈ ಜಗದಲ್ಲಿ.. ಅವನ ಜಾಣ್ಮೆ,  ಬಾಹುಗಳ ಅದ್ಬುತ ಶಕ್ತಿ, ಅಪೂರ್ವ ದೈವಭಕ್ತಿ, ಎಲ್ಲವೂ ಅವನನ್ನು ಹಾಗೆ ಕರೆಯುವಂತೆ ಮಾಡಿತ್ತು. ಅಷ್ಟೇಕೆ ಮೂರುಲೋಕಗಳನ್ನು ಕೇವಲ ತನ್ನ ನಾಮ ಮಾತ್ರದಿಂದಲೇ ನಡುಗಿಸಬಲ್ಲಂತಹ ಸಾಮರ್ಥ್ಯಿಕೆ ಹೊಂದಿದ್ದವ ನನ್ನವ. ನಾನೇನು ಕಡಿಮೆ ಇದ್ದೆನೇ? ನನ್ನ ಸೌಂದರ್ಯದ ವರ್ಣನೆ ಎಲ್ಲರ ನಾಲಿಗೆಯಲ್ಲಿ ಸಿ"ತಿಂಡಿಯಂತೆ ಜಗಿದಾಡಲ್ಪಡುತ್ತಿತ್ತು. ಹೆತ್ತವರ ಹೆಮ್ಮೆಯೇ ಆಗಿದ್ದ ಮುತ್ತಿನ ಚೆಂಡಿನಂತಹ ಮೂರು ಲೋಕೋತ್ತರ ಶೂರ ಕುವರರನ್ನು ಹೊತ್ತು ಹೆತ್ತ ಗರ್ಭ ನನ್ನದು.ಅಪಾರ ಸಂಪತ್ತು ಹೊಂದಿದ ಲಂಕಾ ಪಟ್ಟಣದ ಮಹಾರಾಣಿ. ಮಂಡೋದರಿ ಎಂದರೆ  ರಾವಣನಿಗೆ ತಕ್ಕ ಮಡದಿ ಎಂದು ಹರಸಿ ಹಾರೈಸುತ್ತಿದ್ದ ರಕ್ಕಸ ಕುಲದವರು. ಓಹ್.. ಬದುಕಿನಲ್ಲಿ ಇದಕ್ಕಿಂತ ಮಿಗಿಲೇನಾದರೂ ಇದೆಯೇ..  ನಾನೂ ಅದೇ ಭ್ರಮೆಯಲ್ಲಿ ಮುಳುಗೇಳುತ್ತಿದ್ದೆ. 

ಒಂದು ಹಂತದಲ್ಲಿ ಎಲ್ಲವನ್ನೂ ಹೊಂದಿದ ತೃಪ್ತ ಭಾವವನ್ನೇ ಮೆಲುಕು ಹಾಕುತ್ತಾ ತಟಸ್ಥಳಾದಾಗಲೇ ಆತ ಹೊಸ ಅನುಭವಕ್ಕಾಗಿ ಬಲೆ ಬೀಸತೊಡಗಿದ್ದ.. ಹಾಗೆಂದು ರಾವಣನ ಒಳ್ಳೆಯ ಗುಣಗಳ ಬಗ್ಗೆಯೂ, ಹೆಣ್ಣು ಕಂಡಾಗ ಕಣ್ಣು ಹಾಕುವ ಕಾಮುಕ ಗುಣಗಳ ಬಗ್ಗೆಯೂ ತಿಳಿಯದವಳಲ್ಲ.ತಿಳಿದೂ ಸುಮ್ಮನಿದ್ದೆ.ಯಾಕೆಂದರೆ ಹೆಣ್ಣು ಒಲಿದೋ, ಬೆದರಿಕೆಗೆ ಮಣಿದೋ ತಾನೇ ತಾನಾಗಿ ವಶಳಾಗದ ಹೊರತು ಇವನು ಬಲತ್ಕಾರವಾಗಿ  ಹೆಣ್ಣನ್ನು ಕೆಡಿಸಲಾರ. ಇದು ನನಗೆ  ಗೊತ್ತಿದ್ದ ಸತ್ಯವೇ ಆಗಿತ್ತು. ವೇದಾವತಿಯನ್ನು ಕೆಣಕಿ ಅವಳನ್ನು ಕೆಡಿಸಲು ಹೋದಾಗ ಅವಳು ವಶಳಾಗದೇ ಅಗ್ನಿಯಲ್ಲಿ ಬೆಂದು ದಗ್ಧಳಾಗುವ ಮೊದಲು 'ಹೆಣ್ಣನ್ನು ಅವಳ ಇಚ್ಚೆಗೆ "
ವಿರುದ್ಧವಾಗಿ  ಮುಟ್ಟಿದರೆ ನೀನು ಸತ್ತು ಹೋಗುತ್ತೀಯ' ಎಂದು ಶಪಿಸಿದ್ದಳಂತೆ. ಮರಣ ಭಯ ಎಂಬುದು ಕತ್ತಿಯ ಮೊನೆಗೆದುರಾಗಿ ನಿಂದಂತೆ.. ಸ್ವಲ್ಪ ಎಚ್ಚರ ತಪ್ಪಿದರೂ ಇರಿಯುವ ಹೆದರಿಕೆ.. ಅವನಿಗೆ ಸಿಕ್ಕ ಶಾಪ ನನ್ನ ಪಾಲಿನ ವರವಾಗಿತ್ತು. ಹಾಗಾಗಿಯೇ ಅವನು ತಪ್ಪು ಹಾದಿ ತುಳಿಯಲಾರ ಎಂದು ಹೆಚ್ಚೇ ನಂಬಿಬಿಟ್ಟಿದ್ದೆನೇನೋ.. 

ಅಂದಿನದ್ದು ಗಾಳಿಯಲೆಯ  ಸಣ್ಣ ಅಲುಗಾಟವೆಂದುಕೊಂಡಿದ್ದೆ. ಆದರೆ ಮರದ ಬೇರಿಗಾಗಲೇ ಗೆದ್ದಲು ಹಿಡಿದಿದ್ದು ನನ್ನರಿವಿಗೆ ಬರಲೇ ಇಲ್ಲ..

ತುಂಬಿದ ಸಭಾಭವನಕ್ಕೆ ನೆತ್ತರು ಸುರಿವ ಮೋರೆಯಲ್ಲಿ ಬಂದು ನಿಂದಿದ್ದಳು ಶೂರ್ಪನಖಿ..  ಅವಳದ್ದೇನಿತ್ತು ತಪ್ಪು.. ರಾಮನಿಗೆ ಮನಸೋತದ್ದೇ..? ಆತ ಒಪ್ಪದಾಗ ಲಕ್ಷ್ಮಣನ ಬಳಿ ಸಾಗಿದ್ದೇ..? ತುಂಬು ಹರೆಯದಲ್ಲಿ ಪತಿಯನ್ನು ಕಳೆದುಕೊಂಡವಳವಳು.. ಕಳೆದುಕೊಂಡದ್ದೇನು.. ರಾವಣನೇ ಕೊಂದದ್ದು. ಅಪರೂಪದ ಪರಾಕ್ರಮಿಯಾಗಿದ್ದ ವಿದ್ಯುಜ್ಜಿಹ್ವನ   ಪರಾಕ್ರಮವೇ ಆತನಿಗೆ ಮುಳ್ಳಾಯಿತು. ಎಂದಾದರೊಂದು ದಿನ ಅವನಿಂದ ತನ್ನ ಸ್ಥಾನಕ್ಕೆ, ಹಿರಿಮೆಗೆ ಚ್ಯುತಿ ಬಂದೀತೆಂದು  ಯುದ್ಧದಲ್ಲಿ ಶತ್ರುಸೇನೆಗೆ ಸಹಾಯ ಮಾಡಿದನೆಂಬ ಆರೋಪದಿಂದ ರಾವಣನೇ ಕೊಂದ ಅವನನ್ನು.. ರಾಜಕೀಯದ ಪಗಡೆಯಲ್ಲಿ ಶೂರ್ಪನಖಿ ಎಲ್ಲವನ್ನೂ ಕಳೆದುಕೊಂಡು ಹೊರಬಿದ್ದಿದ್ದಳು. ಅವಳದ್ದು ರಕ್ಕಸ ನೆತ್ತರೇ ತಾನೇ.. ಅವಳ ಕೋಪ ಬುಗಿಲೇಳದಂತೆ ಖರ, ದೂಷಣ, ತ್ರಿಶಿರಸ್ಸು ಸಹಿತ ಹದಿನಾಲ್ಕು ಸಾವಿರ ಸೇನೆಯೊಡನೆ ಅವಳನ್ನು ದಂಡಕಾರಣ್ಯದಲ್ಲಿರುವಂತೆ ರಾವಣನೇ ಕಳುಹಿದ್ದ.ಅಲ್ಲಿ ಅವಳದ್ದೇ ಆಡಳಿತ. ಎಲ್ಲ ಸರಿ ಆಯಿತು ಎಂದುಕೊಂಡು ಪುಟ ಮಗುಚಿದರೆ ಹೊಸ ಹಾಳೆಯ ಕಥೆ ಬೇರೆಯೇ ಆಗಿತ್ತು.

ಅವ  ರಾಮನಂತೆ. ಅವನ ತಮ್ಮ ಮತ್ತು ಮಡದಿಯೊಂದಿಗೆ ವನವಾಸದಲ್ಲಿದ್ದ ಅರಸು ಕುಲದವರವನು.ಕಾಡಿನ ಪರ್ಣಕುಟಿಯಲ್ಲಿದ್ದ ಅವರು ಶೂರ್ಪನಖಿಯ ಕಣ್ಣಿಗೆ ಬಿದ್ದಿದ್ದು ಈ ಎಲ್ಲಾ ಘಟನೆಗಳಿಗೆ ಮೂಲವಾಯ್ತು. ಮೋಹಪರವಶೆಯಾದ ಶೂರ್ಪನಖಿ ಏಕಪತ್ನೀವೃತತ್ಸನಾದ  ರಾಮನನ್ನು ಪಡೆಯುವ ಆತುರದಲ್ಲಿ  ಸೀತೆಯನ್ನು ನುಂಗಹೊರಟಿದ್ದು ತಪ್ಪಿರಬಹುದೇನೋ.. ಆದರೆ ಅದಕ್ಕಾಗಿ ಸಿಕ್ಕ ಶಿಕ್ಷೆಯಾದರೂ ಎಂತಹದ್ದು... ಹೆಣ್ಣು ತನ್ನ ರೂಪವನ್ನು ಕೊನೆಗಾಲದವರೆಗೂ ಜತನದಿಂದಲೇ ಕಾಪಾಡುವ ಆಸೆ ಹೊತ್ತವಳು. ಒಂದಿಷ್ಟು ಕೂದಲು ಕೆದರಿದರೂ, ಕಣ್ಣ ಕಾಡಿಗೆ ಚದುರಿದರೂ ಅದನ್ನು ಸರಿ ಪಡಿಸಿಕೊಳ್ಳದೇ ಯಾರೆದುರೂ ಸುಳಿದಾಡಳು.. ಅಂತಹ ಹೆಣ್ಣಿನ ಕಿವಿ  ಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸುವುದೇ.. ಅವಳಾದರೂ ಏನು ಮಾಡಿಯಾಳು..ಪಾಪದ ಹೆಣ್ಣು.. ಒಂದರೆಕ್ಷಣವಷ್ಟೇ ಆ ಮರುಕದ  ಭಾವ ನನ್ನೊಳಗಿದ್ದುದು.. ಅದೂ ಅವಳ ಮಾತು ಕೇಳುವವರೆಗೆ..ಅವಳ ರೂಪಿಗೆ ಬಂದ ವಿಕಾರತೆ ಈಗ ಬಂದದ್ದಿರಬಹುದು.. ಆದರೆ ಒಳಗಿನ ವಿಕಾರತೆ ಮೊದಲಿಂದಲೂ ಇದ್ದಿತ್ತಲ್ಲವೇ.. ಇಲ್ಲದಿದ್ದರೆ ಪರ ಪತ್ನಿಯನ್ನು ಅಣ್ಣನೆದುರು ಬಣ್ಣಿಸಿ ಹೇಳಿಯಾಳೇ..

ನನ್ನೊಳಗಿನ ದಂದ್ವ ಸರಿ ತಪ್ಪುಗಳ ವಿವೇಚನೆಯ ಬದಲು ನನಗೆ ಅನುಕೂಲವಾಗುವುದನ್ನೇ ಸರಿ ಎಂದು ಒಪ್ಪಿಕೊಳ್ಳುವತ್ತ ಮನ ಮಾಡಿತೇನೋ.. ಶೂರ್ಪನಖಿಯೇನೂ ದೂರದವಳಾಗಿರಲಿಲ್ಲ. ಅವಳ ವೇದನೆಗೆ ಪರಿಹಾರ ಬೇಕಿತ್ತು..

ಲೋಕದ ಕಣ್ಣಿಗೆ ಮಣ್ಣೆರೆಚುವುದಕ್ಕೆ ರಾವಣನಿಗೆ ಇನ್ನೊಂದು ಅವಕಾಶ ಸಿಕ್ಕಿತು. ಸೀತೆಯ ಸ್ವಯಂವರಕ್ಕೆ ಹೋಗಿ ಶಿವಧನಸ್ಸನ್ನು ಎತ್ತಲಾರದೇ ಬರಿಗೈಯಲ್ಲಿ ಮರಳಿದ ಸೋಲಿನ ನೋವಿಗೆ ಔಷದವಾಗಿ ಗೆದ್ದು ತರಲಾಗದಿದ್ದ ಸೀತೆಯನ್ನು ಕದ್ದು ತರ ಹೊರಟ.ರಕ್ಕಸರೋ ಮಾಯಾವಿಗಳು.. ಬಹು ಬಗೆಯ ರೂಪಧಾರಣೆ ಮಾಡುವುದು ನಮಗೆ ಕರಗತವಾಗಿತ್ತು. ನಾಡಿನಿಂದ ಬಂದ ಸೀತೆ ನಮ್ಮ ಜಾಡನ್ನರಿಯದೇ ಹೋದಳು. ಹೊನ್ನ ಹರಿಣಕ್ಕೆ ಮನಸೋತಳು. ಮಾರೀಚ ರಾಮ ಲಕ್ಷ್ಮಣರನ್ನು ಅವಳಿಂದ ಬಹುದೂರ ಕೊಂಡೊಯ್ದ. ಸನ್ಯಾಸಿಯ ರೂಪಿನಿಂದ ಸೀತೆಯೆದುರು ನಿಂದು ಭಿಕ್ಷೆ ಬೇಡಿದ. ಲಕ್ಷ್ಮಣ ರೇಖೆಯನ್ನು ದಾಟಿ ಬಂದ ಸೀತೆ ರಾವಣನ ವಶವಾದಳು.  ಎತ್ತಿ ಹೆಗಲಿಗೇರಿಸಿಕೊಳ್ಳುತ್ತಿದ್ದ ರಾವಣ.. ಆದರೆ ಪರ ಹೆಣ್ಣನ್ನು ಮುಟ್ಟಬಾರದೆಂಬ ಶಾಪ ಅವನ ಕೈಯನ್ನು ಕಟ್ಟಿ ಹಾಕಿತೇನೋ.. ಅವಳು ನಿಂತಷ್ಟು ನೆಲದ ಸಮೇತ ಅವಳನ್ನು ಪುಷ್ಪಕ ವಿಮಾನಕ್ಕೇರಿಸಿ ನಡೆದ. ಮೋಸದಿಂದ ಜಟಾಯುವನ್ನು ಕೊಂದ. ಸೀತೆಯನ್ನು ತಂದು ಅಶೋಕವನದಲ್ಲಿಟ್ಟ. ಇದೆಲ್ಲ ಸಖಿಯರ ಮೂಲಕ ನನಗೆ ಗೊತ್ತಾಗುವ ಹೊತ್ತಿಗೆ ಸೀತೆಯ ಬಗ್ಗೆ ಇಡೀ ಲಂಕೆ ಮಾತಾಡಿಕೊಳ್ಳುತ್ತಿತ್ತು.  ಅದ್ಯಾರು ಅದಕ್ಕೆ ಅಶೋಕವನವೆಂದು ಹೆಸರಿಟ್ಟರೋ ತಿಳಿಯದು. ಸೀತೆ ಅಲ್ಲಿಗೆ ಬಂದ ಮೇಲೆ ಶೋಕವನ್ನಲ್ಲದೆ ಬೇರೇನನ್ನು ಕಾಣಲಿಲ್ಲ.

ಪ್ರತಿ ದಿನ ನನ್ನ ಪತಿ ಅವಳಲ್ಲಿ ಪ್ರಣಯಾರ್ಥಿಯಾಗಿ ಹೋಗುತ್ತಿದ್ದ.ಧರಿಸುತ್ತಿದ್ದ ಹೊಸ ಹೊಸ ಅರಿವೆಗಳೇನು.. ಮೈ ಕೈಗಳಿಗೆ ಪೂಸುತ್ತಿದ್ದ ಚಂದನಗಂಧಾದಿ ಪರಿಮಳಗಳೇನು.. ದೇಹವನ್ನಲಂಕರಿಸುತ್ತಿದ್ದ ಒಡವೆಗಳ ಬಗೆಯದೇನು.. ಹೋಗುವಾಗ ಹೆಮ್ಮೆಂದ ಎತ್ತಿ ನಡೆಯುತ್ತಿದ್ದ ತಲೆ, ಬರುವಾಗ ಸೋತ  ಕಾಲ್ಗಳನ್ನೇ ನೋಡಿಕೊಂಡು ಬರುತ್ತಿತ್ತು. ನನ್ನ ಪಕ್ಕದಲ್ಲಿ ಮಲಗಿದವನ ಕನವರಿಕೆಯಲ್ಲೆಲ್ಲ ಅವಳದೇ ಹೆಸರು. ನನ್ನೊಳಗೆ ಅಸೂಯೆಯ ಕಿಚ್ಚು ಹೊತ್ತಿ ಉರಿಯುತ್ತಿತ್ತು.  ಅದರೊಂದಿಗೆ ಕೆಟ್ಟ ಕುತೂಹಲವೂ. ನನ್ನವನಂತಹ ಧೀರಾದಿಧೀರನಿಗೆ ಸೋಲದ ಆ ಹೆಣ್ಣು ಹೇಗಿರಬಹುದು.. ನೋಡುವ ಅವಕಾಶವೂ ಬಂದಿತ್ತು. 
ಅವನೊಲುಮೆಗಾಗಿ ಪರಿತಪಿಸುತ್ತಿದ್ದ ನನ್ನ ಆರ್ತನಾದ ಅವನವರೆಗೆ ತಲುಪುತ್ತಲೇ ಇರಲಿಲ್ಲ. ಆದರೆ ಅವಳನ್ನು ಹೊಂದುವ ಆಸೆ ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಏರುತ್ತಲೇ ಹೋಗುತ್ತಿತ್ತು. ಅವನನ್ನು ತೃಣಸಮಾನವೆಂದು ಪರಿಗಣಿಸಿ ಕಡೆಗಣ್ಣ ನೋಟವನ್ನು ಅವನೆಡೆಗೆ ಬೀರದ ಅವಳ ಮೇಲೆ ಅವನಿಗಿನ್ನೂ ಹುಚ್ಚು ವ್ಯಾಮೋಹ.. ಆ ದಿನ ಅದೇಕೋ ಅವನ ಸಹನೆ ಸತ್ತು ಹೋಗಿತ್ತು. ಪ್ರತಿದಿನದಂತೆ ಅವಳ ಬಳಿ ಹೋಗಿದ್ದ ಅವನಿಗೆ ಅವಳ ಹಠ ಕೋಪವನ್ನೆ ತಂದಿತ್ತು. ಖಡ್ಗವನ್ನೆತ್ತಿದ್ದ ಅವಳನ್ನು ತುಂಡರಿಸಲು..  ಹಾಂ..ಅಬಲೆಯಾದವಳನ್ನು ಕೊಂದು ಹಂತಕನಾಗುವುದೇ.. ಛೇ.. ಕೂಡದು..  ಸ್ತ್ರೀ ಹತ್ಯಾ ಪಾಪ ನನ್ನವನ ಹೆಗಲೇರುವುದು ನನಗೆ  ವಿಹಿತವೆನ್ನಿಸಲಿಲ್ಲ. ಎತ್ತಿದ ಕೈಯನ್ನು ನನ್ನ ಕೈಯಿಂದ ತಡೆದೆ. ಉರಿಕೋಪದಲ್ಲಿ  'ಒಂದು ತಿಂಗಳ ಕಾಲಾವಕಾಶದಲ್ಲಿ ನನ್ನವಳಾಗಬೇಕವಳು' ಎಂದು ಅಪ್ಪಣೆ ಮಾಡಿ ಕಾಲನ್ನಪ್ಪಳಿಸುತ್ತಾ ಹೊರ ಹೋದನವ. ಆಗಲೇ ಸೀತೆಯನ್ನು ಕಂಡದ್ದು ನನ್ನ ಕಣ್ಣುಗಳು.. ನನ್ನನ್ನೇ ಕನ್ನಡಿಯಲ್ಲಿ ನೋಡಿಕೊಂಡತ್ತಿತ್ತು. ಯಾವ ತಾಯಿ  ಹಡೆದ ಶಿಶುವೋ ಏನೋ.. ಸ್ತ್ರೀಯಾಗಿ ಹುಟ್ಟಿದ್ದಕ್ಕೆ ಎಷ್ಟೆಲ್ಲ ಕಷ್ಟ ಅವಳಿಗೆ..  ಏನಿದೆ ನನಗೂ ಅವಳಿಗೂ ವ್ಯತ್ಯಾಸ.. ನಾನು ಪರಪತ್ನಿಯ ಹಿಂದೆ ಹೋಗಿ ನನ್ನಿಂದ ದೂರಾಗುತ್ತಿರುವ ರಾವಣನ ಬಗ್ಗೆ ಚಿಂತೆ ಹೊಂದಿದ್ದರೆ, ಅವಳು ಕಣ್ಣಿಗೆ ಕಾಣಲಾರದಷ್ಟು ದೂರವಿರುವ ರಾಮನ ಧ್ಯಾನದಲ್ಲಿ ಮುಳುಗಿದ್ದಳು.

ಅವಳು ಮರಳಿ ರಾಮನನ್ನು  ಸೇರುವುದರಿಂದ ಮಾತ್ರ ನಾನು ನನ್ನವನನ್ನು ಮತ್ತೆ ಪಡೆಯಬಹುದಿತ್ತು.ಆದರೆ ಕುಟಿಲ ಮನಸ್ಸು ಹೊಂದಿದ ರಾವಣನನ್ನು ಬುದ್ಧಿ ಮಾತುಗಳಿಂದ ತಡೆಯಬಲ್ಲೆನೇ.. ವಿವೇಕ, ವಿವೇಚನೆ, ಅಧಿಕಾರ ಎಲ್ಲವೂ ಈ ಮೋಹಭಾವನೆಗಿಂತ ಚಿಕ್ಕದೇನೋ.. ಅವಳಾಗಿ ಒಲಿದು ಬಂದಿದ್ದರೆ ನಾನಾದರು ಏನು ಮಾಡುವವಳಿದ್ದೆ. ಕಿರಿಯವಳು ಎಂದು ಆಧರಿಸಿ ಒಪ್ಪಿಕೊಳ್ಳಲೇಬೇಕಿತ್ತು. ರಾಜನಿಗೆ ಅರಸಿಯರ ಸಂಖ್ಯೆ ಏರಿದಷ್ಟು ಅವನ ಹೆಮ್ಮೆಯ ಕಿರೀಟಕ್ಕೆ ಕುಂದಣಗಳ ಹೊಳಪು ಹೆಚ್ಚಾಗುತ್ತಿತ್ತು. ಗಂಡ ತೃಪ್ತಿಯ ಕೇಕೆ ಹಾಕಿ ನಕ್ಕಷ್ಟು ನನ್ನ ಮನಸ್ಸು ನಗುತ್ತಿತ್ತು. ನಾನು ಮಹಾರಾಣಿಯಾಗಿದ್ದರೂ ಅವನಿಗೆ ವಿದೇಯ ಪತ್ನಿಯಾಗಿದ್ದೆ. 

ಎಲ್ಲ ಅಂದುಕೊಂಡಂತೆ ಆಗುವುದಿದ್ದರೆ ಪ್ರಪಂಚ ಹೀಗಿರುತ್ತಿರಲಿಲ್ಲ.. ಭೋರ್ಗರೆವ ಕಡಲೇ ನಮ್ಮ ಅಭೇದ್ಯ ಕೋಟೆ. ಅತ್ತ ಕಡೆಂದ ಹಾರಿ ಬರಲು ರಾಮನಿಗೇನಾದರು ರೆಕ್ಕೆಗಳಿವೆಯೇ.. ತಿಂಗಳ ಕಾಲಾವಧಿಯನ್ನು ಕ್ಷಣಕ್ಷಣಕ್ಕೂ ಲೆಕ್ಕ ಹಾಕುತ್ತಿದ್ದ ರಾವಣ ಕನಸ ಲೋಕದಲ್ಲಿ ಕಳೆದುಹೋಗುತ್ತಿದ್ದ.. 

ಆಗಲೇ ಮೊದಲ ಬಾರಿಗೆ ರಕ್ಕಸನಲ್ಲದ ಒಬ್ಬ ಮಾಯಾವಿ  ಲಂಕೆಯೊಳಕ್ಕಿಳಿದಿದ್ದು. ಅದೆಂತ ಧೈರ್ಯ, ಎಂತಹ ಸಾಹಸ. ಸೀತೆಯನ್ನು 'ಹೆಗಲೇರು ಹೊತ್ತೊಯ್ದು ನಿನ್ನ ಪ್ರಭುವಿನ ಹತ್ತಿರ ಬಿಡುತ್ತೇನೆ' ಎಂದಿದ್ದನಂತೆ.. ಆದರೆ ಆಕೆಯ ಆತ್ಮವಿಶ್ವಾಸ, ದೃಢ ನಂಬಿಕೆಗೆ ತಲೆದೂಗಲೇಬೇಕು.. 'ರಾಮನೇ ಬಂದು ನನ್ನನ್ನಿಲ್ಲಿಂದ ಕರೆದೊಯ್ಯಲಿ' ಎಂದಳಂತೆ.... ನಾನಿದ್ದಾಗಲೇ ಬೇರೆಯವರೊಡನೆ ಸರಸಕ್ಕೆ ಹಾರುವ ರಾವಣನೆಲ್ಲಿ.. ಸೀತೆಗಾಗಿ ಸಮುದ್ರ ದಾಟಿ ಬರಬಹುದಾದ ರಾಮನೆಲ್ಲಿ..ರಾಮನ ಶಕ್ತಿಯ ಕಿರು ಪ್ರದರ್ಶನವನ್ನು ಏರ್ಪಡಿಸಿಯೇ ಹೋದನವ,,  ತನ್ನ ಬಾಲಕ್ಕೆ ಹಚ್ಚಿದ ಬೆಂಕಿಂದಲೇ ಲಂಕೆಗೆಲ್ಲ ಕಿಚ್ಚಿಟ್ಟು ಹಾರಿದ.. ಸುಂದರ ಲಂಕೆ ಕರಗಿ ಕಪ್ಪಾಯಿತು.ಹರೆಯ ಬಂದಂತಿದ್ದ ರಾವಣನ ಆಸೆ ಆಗಲೇ ಮುಪ್ಪಾಯಿತು..   ಇದು ಮುಂದಿನ ಕೇಡಿನ ದಿನಗಳ ಸುಳಿವೇನೋ.. ಎದೆ ಗೂಡಲ್ಲಿ ಆತಂಕ ಮಡುಗಟ್ಟಿತ್ತು. ಮಡಿಲಲ್ಲಿ ಸೀತೆಯೆಂಬ ಸುಡು ಬೆಂಕಿಯ ಬಿಸಿ.. 

ರಾಮ ಬಂದ ... ಲಕ್ಷ್ಮಣ ಬಂದ... ಕಪಿವೀರರೆಲ್ಲಾ ಬಂದರು.. ಯುದ್ಧ ಪ್ರಾರಂಭವಾಯಿತು. ಅಲ್ಲಿಯವರೆಗೆ ರಕ್ಕಸ ಕುಲದವರಾದ ನಮ್ಮನ್ನು ಹುಡುಕಿ ಬಂದು ಯುದ್ಧ ಮಾಡಿದವರಿರಲಿಲ್ಲ. ನಾವೇ ಮೋಜಿಗೋ, ನಮ್ಮ ಶಕ್ತಿ ಪ್ರದರ್ಶನಕ್ಕೋ ಇನ್ನೊಬ್ಬರ ಮೇಲೇರಿ ಹೋಗಿ ಸದೆ ಬಡಿಯುತ್ತಿದ್ದೆವು. ಮೊದಲ ಸಲ ನಮ್ಮ ನೆಲದಲ್ಲಿ ನಮ್ಮವರದ್ದೇ ರಕ್ತದ ಧಾರೆ.. ರಾವಣನ ಅರಮನೆಯ ಕಂಬಗಳಂತಿದ್ದ ವೀರರೆಲ್ಲ ಒಬ್ಬೊಬ್ಬರಾಗಿ ಸೋತರು.. ಸತ್ತರು..ಹೆಚ್ಚೇಕೆ ನಾನು ನನ್ನ ಕರುಳಕುಡಿಗಳನ್ನೇ ರಾವಣನ ಕಾಮದಾಸೆಯ ಯಜ್ಞಕ್ಕೆ ಅರ್ಘ್ಯವಿತ್ತೆ. ಲಂಕೆ ಸ್ಮಶಾನವಾಯಿತು.

ವಿಭೀಷಣ ರಾವಣನ ತಮ್ಮನಾದರೂ ವಿವೇಕಶಾಲಿ. ಅಣ್ಣನಿಗೆ ಹೇಳುವಷ್ಟು ಹೇಳಿ ನೋಡಿದ. ಧರ್ಮದ ಮಾರ್ಗ ಹಿಡಿಯುತ್ತೇನೆಂದು ರಾಮನಿಗೆ ಶರಣಾಗಿ ಅವನ ಪಕ್ಷದಲ್ಲಿ ನಿಂತು ನಮ್ಮ ಮೇಲೆರಗಿದ. ನಾನು ಪತಿಯ ಜಯವನ್ನಲ್ಲದೇ ಬೇರೇನನ್ನು ಬೇಡಬಾರದು.. ರಾಮ ಸರಿರಬಹುದು.. ಆದರೆ ನಾನು ತಪ್ಪಬಾರದು.. ನನ್ನ ಪತೀವೃತ ಧರ್ಮ ತಪ್ಪಬಾರದು..ಯಾಕೆಂದರೆ ನಾನೀಗ ಯುದ್ಧದಲ್ಲಿ ಹೋರಾಡುವ ಯೋಧನೊಬ್ಬನ ಮಡದಿ ಮಾತ್ರ.. ಅವನ ಗೆಲುವೇ ನನ್ನ ಗೆಲುವು.. ಅವನಿಗೂ ಈಗ ಯುದ್ಧ ಅನಿವಾರ್ಯವಾಗಿತ್ತು.. "
ಹಿಮ್ಮೆಟ್ಟುವುದು, ಕ್ಷಮೆ ಬೇಡುವುದು ಎರಡರ ಸಮಯವೂ ಮಿಂಚಿ ಹೋಗಿತ್ತು.. ಹೆತ್ತೊಡಲೇ ಬರಿದಾಗಿ ಹೋದ ಮೇಲೆ ಬದುಕಿ ಮಾಡುವುದಾದರೂ ಏನಿತ್ತು. ಪೊಳ್ಳು ಪ್ರತಿಷ್ಟೆಯ ಗಾಳಿಪಟವೇರಿ ಸಾಗುತ್ತಿದ್ದಾಗಲೇ ಹಿಡಿದಿದ್ದ ದಾರ ಕಡಿದಿತ್ತು. ತಪ್ಪಿನ ಬಗೆಗೆ ಅರಿವಾದರೂ ಪಶ್ಚಾತಾಪದ ಗಡು ಮೀರಿತ್ತು.  ಆ ಹೆಣ್ಣಿನ ಕಣ್ಣೀರಿನ ಒಂದೊಂದು ಹನಿಗಳಿಗೂ ಲೆಕ್ಕ ಇಟ್ಟಂತೆ ರಾಮ ಬಾಣಗಳು ಘಾಸಿ ಮಾಡಿದವು. ಅವಳು ಅವನ ಪಾಲಿನ ಮೃತ್ಯುದೇವತೆಯಾದಳು, ರಾವಣನ ಆಸೆ ಕೊನೆಗೂ ನೆರವೇರಿತೇನೋ.. ಅವನನ್ನು ಮೃತ್ಯು ದೇವತೆ ಆಲಂಗಿಸಿದಾಗ..

ನನ್ನವನ ಶವ ಚಿಂದಿಯಾಗಿ ನೆಲದ ಮೇಲೆ ಬಿದ್ದಿದ್ದರೆ ಸೀತೆಯ ಕಣ್ಣಲ್ಲಿ ಹೊಳಪಿನ ರಾಮ ಕುಣಿಯುತ್ತಿದ್ದ. ನನ್ನೆಲ್ಲ ಆಸೆಗಳು ಕಮರಿ ಕಪ್ಪಾಗಿದ್ದರೆ ಅವಳ ಬಾಳಲ್ಲಿ ಹೊನ್ನ ಬೆಳಕು ರಂಗವಲ್ಲಿ ಇಡುತ್ತಿತ್ತು. ಕಣ್ಣೀರು ಕಡಲಲೆಯಂತೆ ಮತ್ತೆ ಮತ್ತೆ ... ಆ ನೋವು ಆ ದುಃಖ  ನನ್ನವ ಸತ್ತ ಎಂಬುದಕ್ಕಿಂತ  ಅವನನ್ನು ಕಣ್ಣೆತ್ತಿಯೂ ನೋಡದ ಅವಳಿಗಾಗಿ ಸತ್ತ ಎನ್ನುವುದಕ್ಕಾಗಿತ್ತು. ಪ್ರೀತಿಸುವ ಪತ್ನಿ ಪುತ್ರರು, ಸುವರ್ಣನಗರಿಯಾಗಿದ್ದ ಲಂಕೆ, ಎಲ್ಲವನ್ನು ಎಲ್ಲರನ್ನೂ ಕೇವಲ ಅವಳನ್ನು ಪಡೆಯುವ ಮೋಹದ ಬೆಂಕಿಗೆ ಒಡ್ಡಿ ಪತಂಗವಾಗಿ ಉರಿದು ಬಿದ್ದಿದ್ದ. ನನ್ನವನು ಹಲವು ಸದ್ಗುಣಗಳ ಅರಸ..ಆದರೆ  ಇನ್ನು ಯಾರೂ ರಾವಣನನ್ನು ಉತ್ತಮ ರಾಜನಾಗಿ ನೆನಪಿಸಿಕೊಳ್ಳುವುದಿಲ್ಲ ಪ್ರೀತಿಯ ಗಂಡನಿಗೆ ಅವನ ಹೆಸರನ್ನು ಉಧಾಹರಿಸುವುದಿಲ್ಲ.. ಯೋಗ್ಯ ತಂದೆಯಾಗಿ .. ಅಣ್ಣನಾಗಿ..ಬಂಧುವಾಗಿ..  ಉಹುಂ.. ಇಲ್ಲ ಇಲ್ಲ.. ರಾವಣ ಎಂದೊಡನೇ ಅವನ ಹೇಸಿಗೆಯ ಮುಖ ಮಾತ್ರ ನೆನಪಿಗೆ ಬರುತ್ತದೆ. ಉಳಿದ ಮುಖಗಳು ಇದ್ದೂ ಇಲ್ಲದಂತೆ..ನಾನು ಕೊನೆಯವರೆಗೆ ಅವನೊಂದಿಗೆ ಇದ್ದೆ.. ಅವನು ತಪ್ಪುಗಳನ್ನೆಣಿಸುತ್ತಲಲ್ಲ.. ಅವನು ಸರಿಯಾಗಬಹುದಾಗಿದ್ದ ದಾರಿಗೆ ತೋರಿಸಬೇಕಾಗಿದ್ದ ಬೆಳಕನ್ನರಸುತ್ತಾ..ಆದರೆ  ಬೆಳಕಾಗಬಹುದಾಗಿದ್ದ ಕಿರಣ ಕತ್ತಲೆಯಲ್ಲಡಗಿ ಮಾಯವಾಯಿತು.. ನನ್ನನ್ನು ಅಂಧಕಾರಕ್ಕೆ ನೂಕಿ.. 








Wednesday, January 15, 2014

ರಾಜ ಪರಂಪರೆ



ಲೋಕದ ಕಣ್ಣಿಗೆ ಅವನು ಅರೆಹುಚ್ಚ. ಮಕ್ಕಳಿಗೆ ಮಾತ್ರ ಅವನು ಪ್ರೀತಿಯ ಕಥೆಯಜ್ಜ. 

ಅವನ ಕಥೆಗಳಲ್ಲಿ  ಇಣುಕುತ್ತಿದ್ದ ರಾಜಕುಮಾರಿಗೆ ಏಳು ಮಹಡಿಯಷ್ಟುದ್ದದ ಜಡೆಯಿತ್ತು. ಇನ್ನೂ ನಡು ಬೆನ್ನೂ ಸವರದ ನಮ್ಮ ಕೂದಲ ಬಗ್ಗೆ ನಮಗೆ ನಿರಾಶೆ ..

ರಾಜಕುಮಾರ ಎಲ್ಲಾ ಯುದ್ಧವಿದ್ಯೆಗಳಲ್ಲೂ ಪ್ರವೀಣ... ಅವನ ಬಳಿಯಿದ್ದ ಕುದುರೆಯಂತೂ ಅತ್ಯದ್ಭುತ. ಬೇಕಾದಾಗ ರೆಕ್ಕೆ ಬಿಡಿಸಿ ಹಾರುತ್ತಿತ್ತು. ಒಮ್ಮೊಮ್ಮೆ ಅದರ ತಲೆಯ ಮೇಲೆ  ಒಂಟಿ ಕೊಂಬು.

ಕಥೆಗಳಲ್ಲಿ ಬರುವ  ಮಾಂತ್ರಿಕನಂತೂ ಹಗಲಲ್ಲೂ ಹೆದರಿಕೆ ಹುಟ್ಟಿಸುವಂತಿದ್ದ.

ಕೊನೆಗೆಲ್ಲವೂ ಒಳಿತೇ  ಆಗುತ್ತಿದ್ದ ಆ ಕಥೆಗಳನ್ನು ಕೇಳುತ್ತ  ನಾವು ಕುತೂಹಲ ಹೊತ್ತ ನಮ್ಮ ಕಣ್ಣು ಕಿವಿಗಳನ್ನು ಅವನಿಗೊಪ್ಪಿಸಿ ಕಥೆಯ ಲೋಕದಲ್ಲಿ ನಡೆದಾಡುತ್ತಿದ್ದೆವು. ಆ ಕಾಲದಲ್ಲೇ ಬದುಕುತ್ತಿದ್ದೆವು. 

ಕಾಲ ಸರಿಯಿತು..

ನಾವು ಬೆಳೆದೆವೆಂದುಕೊಂಡೆವು .ನೈಜ ಬದುಕಿನ ಮುಂದೆ ಕಥೆಯ ರುಚಿ ಮಾಸಿತು. 

ಕೇಳುವ ಕಿವಿಗಳಿರದೆ ಕಥೆಯಜ್ಜ ಮೌನವನ್ನೇ ಹಾಸಿ ಹೊದ್ದ.

ಕಥೆಗಳಳಿದವು.. 

ಹೀಗೆ ರಾಜ ಪರಂಪರೆ ನಶಿಸಿತಂತೆ.. 
-- 

Tuesday, December 17, 2013

ವೃತ್ತಿಧರ್ಮ



ದೂರದಲ್ಲಿದ್ದ  ಗೆಳೆಯರನ್ನು ಕಂಡು ಓಡುತ್ತಾ  ಅವರನ್ನು ಸಮೀಪಿಸಿದ . ಏದುಸಿರು ಬಿಡುತ್ತಾ ಹತ್ತಿರ ಬಂದವನನ್ನು ಕಂಡು ಅವರು ಬೆಚ್ಚಿದರು. 

 ' ಈ ಅವತಾರದಲ್ಲಿ ನಮ್ಮ ಜೊತೆ ಬಂದು ನಮ್ಮ ಮರ್ಯಾದೆ  ಕಳೀತೀಯಾ .. ಹೋಗು ಮೊದಲು  ಈ ಧರಿದ್ರ  ಅಂಗಿ ಚಡ್ಡಿ ಬದಲಾಯಿಸಿ ಬಾ. ನೀನು  ಬರೋವರೆಗೂ ಇಲ್ಲಿಯೇ ನಿಂತಿರ್ತೀವಿ ಬೇಗ ಹೋಗು " ಎಂದು ಅವನನ್ನು ದೂಡಿ ಹಿಂದಕ್ಕೆ ಕಳುಹಿಸಿದರವರು. 

ತಲೆ ತಗ್ಗಿಸಿ ಮರಳಿ ಬಂದ  ಅವನು, ತಾನು ಹಾಕಿದ ಹೊಸತರಂತೆ ತೋರುವ ಅಂಗಿ ಚಡ್ಡಿಗಳನ್ನು ಕಳಚಿ  ಕೊಳೆಯಾದ , ಅಲ್ಲಲ್ಲಿ ಹರಿದು ತೇಪೆ ಹಾಕಿದ ಅಂಗಿ ಚಡ್ಡಿಗಳನ್ನು ಸಿಕ್ಕಿಸಿಕೊಂಡು  ಭಿಕ್ಷೆ  ಬೇಡಲು ಹೊರಟಿದ್ದ  ಗೆಳೆಯರ ಗುಂಪು ಸೇರಿಕೊಳ್ಳಲು ಹೊರಟ .

Thursday, December 5, 2013

ಶಿವು


ಅದೊಂದು ಸುಂದರ ಕಡಲ ತೀರ. ಸಂಜೆಯ ಹೊತ್ತು. ಮುಳುಗುವ ಸೂರ್ಯನ ಕೆಂಬಣ್ಣ ಮರಳ ಮೇಲೂ ರಾಚಿ ಇಡೀ ತೀರ ಬಂಗಾರದಲ್ಲಿ ಅದ್ದಿ ತೆಗೆದಂತೆ ಕಾಣಿಸುತ್ತಿತ್ತು. ಪುಟ್ಟ ಬಂಡೆಯ ಮೇಲೆ ಕಾಲು ಚಾಚಿ ಕುಳಿತಿದ್ದ ಅವನು ಪ್ಯಾಂಟಿಗೆ ಅಂಟಿದ ಮರಳನ್ನು ಕೊಡವುತ್ತಾ ಏಳಲು ಹೊರಟ. ಆಗಲೇ ಅವನ ಕಣ್ಣಿಗೆ ತನ್ನಿಂದ ಸ್ವಲ್ಪ ದೂರದಲ್ಲಿ ತನ್ನಂತೆ ಎದ್ದು ನಿಂತು ಸೀರೆ ಕೊಡವುತ್ತಿದ್ದ ಅವಳು ಕಣ್ಣಿಗೆ ಬಿದ್ದಿದ್ದು.  ಇಷ್ಟು ಹೊತ್ತಿನಿಂದ ಇಲ್ಲಿಯೇ ಕುಳಿತಿದ್ದರೂ ಕಾಣದ ಈಕೆ ಯಾವ ಮಾಯಕದಲ್ಲಿ ಈಗೆದ್ದು ನಿಂತಿದ್ದಾಳೆ ಎನ್ನಿಸಿ ಅಚ್ಚರಿಯಾಯಿತವನಿಗೆ. ಆದೇ ಕುತೂಹಲದಲ್ಲಿ ಮತ್ತೊಮ್ಮೆ ಅವಳತ್ತಲೇ ಕಣ್ಣು ಹಾಯಿಸಿದ. ಅವಳೂ ಇವನನ್ನೇ ನೋಡುತ್ತಿದ್ದಳು. ಅವಳ ಮೊಗದಲ್ಲಿ ಪರಿಚಿತ ಭಾವ. ಇವನ ಹತ್ತಿರಕ್ಕೆ ಹೆಜ್ಜೆ ಇಡುತ್ತಾ ಬಂದಳು. ' ಬನ್ನಿ ಶಿವು ಮನೆಗೆ ಹೋಗೋಣ..' ಎಂದಳು. 

'ಕ್ಷಮಿಸಿ.. ನನ್ನ ಹೆಸರು ಹರಿ ಕುಮಾರ್' ಎಂದ.

ಅವಳು   'ಸರಿ ಹಾಗಿದ್ರೆ ನಾನು ಹೋಗ್ತೀನಿ' ಎಂದಳು. ಅವಳ ಮೊಗದಲ್ಲಿ ಬೇಸರವೂ, ಕಣ್ಣಂಚಿನಲ್ಲಿ ನೀರು ಕಾಣಿಸಿದಂತೆನಿಸಿ ಅವನಿಗೂ ಬೇಸರವೆನಿಸಿತು. 'ಪಾಪ ಅವಳ ಶಿವು ಕೂಡಾ ನನ್ನಂತೆ ಇದ್ದನೇನೋ.. ಒಂದು ಕ್ಷಣ ನಾನು ಶಿವು ಅಂತ ಒಪ್ಪಿಕೊಂಡರೆ ಅವಳ ಮೊಗದಲ್ಲಿ ನಗು ಕಂಡೀತೇನೋ'.. ಎಂದುಕೊಂಡ. 

ತನ್ನಿಂದ ಮುಂದೆ ಹೆಜ್ಜೆ ಹಾಕುತ್ತಿದ್ದ ಅವಳನ್ನುದ್ದೇಶಿಸಿ.. ' ನೋಡಿ ನಾನೇ ಶಿವು .. ಆಗ ಸುಮ್ಮನೆ ಸುಳ್ಳು ಹೇಳಿದೆ .. ನೀವು ಬೇಸರ ಮಾಡ್ಕೋಬೇಡಿ' ಎಂದ. 

ಅವಳ ಮೊಗದಲ್ಲಿ ಅಪನಂಬಿಕೆಯ ನೆರಳು..'ಇನ್ನೊಮ್ಮೆ ಹೇಳಿ.. ನಿಜವಾಗಿಯೂ ನೀವು ಈ ಮಾತನ್ನು ಹೇಳ್ತಾ ಇದ್ದೀರಾ' ಎಂದಳು. 

ಅವನಿಗೀಗ ಇಬ್ಬಂದಿತನ ಕಾಡಿತು.  ಶಿವು ಎಂದು ಒಪ್ಪಿಕೊಂಡರೆ ಅವಳಿಗೆ ಸಂತಸವೆನಿಸುತ್ತದೆ.. ಅಲ್ಲ ಎಂದರೆ ಅವಳ ಮ್ಲಾನ ಮುಖ ನೋಡಬೇಕು.. ಎರಡರಿಂದಲೂ ಅವನಿಗೆ  ಏನೂ ತೊಂದರೆ ಇರಲಿಲ್ಲ..ಆದರೂ ಯಾಕೋ ಆ ಮುಖವನ್ನು ಅಳಿಸುವುದಕ್ಕವನಿಗೆ ಮನಸ್ಸು ಬರಲಿಲ್ಲ. 'ಹೌದು ನಾನೇ ಶಿವು' ಎಂದ ನಿರ್ಧಾರದ ಧ್ವನಿಯಲ್ಲಿ.. 

ಅವಳು ಅವನ ಕೈ ಹಿಡಿದಳು.. ಅವನ ಕೈಯೂ ಅವಳ ಕೈಯೊಳಗೆ ಸೇರಿತು.ಅವಳು ನಗುತ್ತಾ ಅವನೊಡನೆ ಹೆಜ್ಜೆ ಹಾಕಿದಳು.

ರೂಮಿನ ಒಳಗೆ ಬರುತ್ತಿದ್ದಂತೆ ತನ್ನ ಕೈಯನ್ನು ಬಿಗಿಯಾಗಿ ಹಿಡಿದಿದ್ದ ಅವನ ಕೈಯನ್ನು ಸಡಿಲಿಸಿ ಅವನನ್ನು ಮಂಚದ ಮೇಲೆ ಕೂರಿಸಿ 'ಈಗ ಬಂದೆ' ಎಂದು ಹೊರ ಹೋದಳು. ಅವನು ಕುತೂಹಲದಿಂದ ಮುಂದಾಗುವುದನ್ನು ಕಾಯುತ್ತಿದ್ದ. 

ಒಂದು ಕೈಯಲ್ಲಿ ತುಂಬಿದ ಹಾಲಿನ ಲೋಟ  ಹಿಡಿದು  ಬಂದು  ಅವನನ್ನೆಬ್ಬಿಸಿದಳು. 'ನೋಡಿ ಶಿವು..ನೀವು ತುಂಬಾ ಒಳ್ಳೆಯವರು.. ನನ್ನ ಮಾತು ಕೇಳ್ತೀರಲ್ವಾ.. ಈಗ ಈ ಹಾಲು ಕುಡಿಯಿರಿ ಎಂದಳು. ಅವನು ಕುಡಿದು ಕೊಟ್ಟ ಖಾಲಿ ಲೋಟವನ್ನು ಪಕ್ಕಕ್ಕಿಟ್ಟು ಅವನನ್ನು ಮಂಚದ ಮೇಲೆ ಮಲಗುವಂತೆ ಹೇಳಿ ಕುತ್ತಿಗೆಯವರೆಗೆ ಹೊದಿಕೆ ಹಾಕಿ ಕೆನ್ನೆ ತಟ್ಟಿ 'ಗುಡ್ ಬಾಯ್ ಶಿವು' ಎಂದು ತುಂಟ ನಗೆ ನಕ್ಕು ಹೊರ ಹೋದಳು. 

ಸ್ವಲ್ಪ ಹೊತ್ತಿನ ನಂತರ ಅವಳು ತನ್ನ ಪಕ್ಕ ಕುಳಿತ ಇನ್ನೊಬ್ಬ ನರ್ಸ್ ಹತ್ತಿರ ಹೇಳುತ್ತಿದ್ದಳು. 'ಆ ರೂಮಿನ ಪೇಷಂಟಿಗೆ ಈಗ ನಿಧಾನಕ್ಕೆ ಜ್ಞಾಪಕ  ಶಕ್ತಿ ಮರಳುತ್ತಿದೆ ಅನ್ನಿಸುತ್ತೆ. ಇವತ್ತು ವಾಕಿಂಗ್ ಮಾಡಿಸಿ ಬರುವಾಗ  ಅವನು  'ನಾನೇ  ಶಿವು'ಅಂತ ಒಪ್ಪಿಕೊಂಡ..'