Pages

Total Visitors

Showing posts with label ಕವನಗಳು. Show all posts
Showing posts with label ಕವನಗಳು. Show all posts

Monday, January 26, 2015

ಪ್ರೇಮವೆನಲು ಹಾಸ್ಯವೇ ..




ಬೀಸುವ ಗಾಳಿಯಲೆಗೆ  
ಕರಗುವ ಸುಮ ಸೌರಭದಂತೆ 
ಒಂದಾಗು  ಬಾ  ಎನ್ನಲ್ಲಿ  
ಬಾಯಾರಿ ಬಂದಿಹೆಯೇನು 
ನೀಗುವೆನು  ದಾಹವ
ತುಂಬಿ ಪ್ರೀತಿಯ ಮಾತಿನಲ್ಲಿ 

ಕಲ್ಲು ಮುಳ್ಳುಗಳುಂಟು 
ಜೀವನದ ದಾರಿಯಲಿ 
ಕಾಲೆಡವದಂತೆ ಹಿಡಿ ನನ್ನ ಕೈ 
ನೋಡೋಣ ಬಾನಿನ 
ಮಿನುಗುವ ಚಿಕ್ಕೆಗಳ 
ಓಹೋ .. ತಗಲಿತೇನು   ಮೈಗೆ ಮೈ 

ದುಃಖದಲಿ  ಬೆಂದಾಗ 
ಹನಿಗಣ್ಣಾಗಿ   ದೂರ ನಿಲ್ಲದಿರು
ನಿನ್ನ ಚೆಲು ಮೊಗವ ಹಾಗೆ  ಮರೆಸಿ 
ತೆರೆದಿಹುದು  ಎದೆಯ ಕದ 
ತುಂಬು ತೋಳುಗಳ ಚಾಚಿ 
ಬರಬಾರದೇ ಬಳಿಗೆ ಕನಿಕರಿಸಿ  

ಬದಲಾಯಿಸಲಾರದ ಬದುಕು 
ಕೊಟ್ಟಷ್ಟು ಸಾಕು ಬಿಡು 
ಸಿಗದ ದ್ರಾಕ್ಷೆಯ ಚಿಂತೆ ನಮಗದೇಕೆ  
ಬೆರಳುಗಳ ಹೆಣೆದುಬಿಡು 
ಸಾಗುವೆಡೆ  ಹೆಜ್ಜೆಯಿಡು 
ಮನದ ಮಾತಿಗೆ ಬೇರೆ ಸಾಕ್ಷಿ ಬೇಕೇ 

Tuesday, March 25, 2014

ದಾಖಲು

ಮೊಣಕೈಯಲ್ಲಿಳಿಯುವ ಬಣ್ಣದ 
ನೀರನ್ನು ನೆಕ್ಕುತ್ತಾ 
ಹಿಡಿದ ಕ್ಯಾಂಡಿಯ ಕರಗಿಸುವ ಪೋರ
ಸರಬರ ನೆರಿಗೆ ಸದ್ದಿನೊಂದಿಗೆ
 ಬಿಸಿಲ ಕೋಲಿಗೆ
ಕೈ ಅಡ್ಡ ಹಿಡಿದೋಡುವ ಯುವತಿ
ಸಿಕ್ಕ ಸಿಕ್ಕಲ್ಲೆಲ್ಲಾ ಮೂಸುತ್ತಾ
ತನ್ನ ಗಡಿ ಅಳೆಯುವ ನಾಯಿ
ಅಂಗಡಿಯ ಅಗ್ಗದ ಸರ 
ಕೊಳ್ಳಲಾಗದ ಅಸಹಾಯಕತೆಗೆ
ರಚ್ಚೆ ಹಿಡಿದ ಮಗಳ
ಬೆನ್ನಿಗೆ ಬಡಿಯುವ ತಾಯಿ
ನಾವು ಜಗತ್ತನ್ನು ಹತ್ತಿರವಾಗಿಸುತ್ತಿದ್ದೇವೆ
ಎಂಬ ಘೋಷ ವಾಕ್ಯದ ಫಲಕ
ಕೈ ಕೈ ಹಿಡಿದು 
ನಡೆವ ಜೋಡಿಯ ಕನಸು 
ಉಡುಪಿನ ಕನ್ನಡಿಯಲ್ಲಿ ಮೂಡಿದ 
ನರೆ ಬಿಂಬವ ಕಂಡ ಮುದುಕ
ಉದುರಿಸುವ ಎಲೆ ಹೊತ್ತ 
ಮರದ ಹಕ್ಕಿಯ ಕಂಬನಿ
ಎಲ್ಲವೂ ದಾಖಲಾಗುತ್ತಿತ್ತು
ಮುಚ್ಚಿದ್ದ ಕನ್ನಡಿಯ ಕಾರೊಂದು
ಅರೆಕ್ಷಣ ನಿಂತಿದ್ದಾಗ 
ಅವಳು ಕಣ್ತೆರೆದಿದ್ದರೆ ... 
-- 

Friday, March 21, 2014

ಹಸಿವು


ಅಧಿಕಾರದ ಹಸಿವು ಹೊತ್ತವರು
ಬಿದ್ದವರ ಬೆನ್ನ ಮೇಲೆ
ಅಂಬಾರಿ ಏರಿಸಿ ಕುಳಿತರು
ನೋಡಿದವರು ಜಯವೆಂದರು

ಕಾಮದ ಹಸಿವು ಹೊತ್ತವರು 
ಕಕ್ಕುಲಾತಿಯ ಮರೆತು 
ಮಗಳು ಬಿಕ್ಕಿದರೂ ಬಿಡಲಿಲ್ಲ
ಬೆತ್ತಲಾಗಿದ್ದವಳ ತಪ್ಪೆಂದರು 

ಹೊಟ್ಟೆಯ ಹಸಿವು ಹೊತ್ತವರು 
ಕಣ್ಣಲ್ಲೇ ರಕ್ತ ಹರಿಸಿದರೂ
ಎಂದೂ ಮುಗಿಯದ ಹಾಡಿದೆಂದು 
ಜನ ಕಿವಿಗಳನು ಮುಚ್ಚಿದರು 

Thursday, February 20, 2014

ಒಲವಿನ ಹನಿಗಳು



ದೂರವಿದ್ದಾಗ 
ನೆನಪುಗಳಲಿ ಬಂಧಿ
ಹತ್ತಿರವಿದ್ದಾಗ 
ಕನಸುಗಳಿಗೆ ಸ್ವಾತಂತ್ರ್ಯ
  ***
 ನೆನಪುಗಳೋ
ಕಣ್ಣೆವೆಯೊಳಗಿನ ಕನಸುಗಳಂತೆ
ಬಿಚ್ಚಿದರೆ ಸ್ವಾತಂತ್ರ್ಯ
ಮುಚ್ಚಿದರೆ ಜೀವಂತ
***
ಮತ್ತಷ್ಟು ಬದುಕುವಾಸೆ ನನಗೆ
ಕಣ್ಣ ಕನಸುಗಳಿಗೆ ಬಣ್ಣ ತುಂಬಲಿದೆ
ನಿನ್ನ ನೆನಪ ರಂಗಿಂದ
ಇಂದೇ ಸಾಯುವಾಸೆಯೂ ನನ್ನದೇ
ತುಂಬಿಬಿಡಲಿ ನಿನ್ನ ಕಣ್ಣುಗಳು
ನನ್ನ ನೆನಪಿನಿಂದ ..
***
ಕೆಡಿಸದಿರಿ ನಿದ್ದೆ
ಕನಸುಗಳ ರಂಗು
ಚೌಕಟ್ಟಿನ ಹೊರಗೂ
ಚೆಲ್ಲೀತು..
***
ದಾರಿ ದೂರವಿದೆ
ಚಿಂತೆಯಿಲ್ಲ..
ನಿನ್ನ ನೆನಪ ಬುತ್ತಿಯಿದೆ..
***
ದಾರಿ ಕವಲೊಡೆಯುವುದಾದರೆ
ಹಿಂತಿರುಗೋಣ
ಬಂದ ದಾರಿಯಲ್ಲೇ.
***
ಒದ್ದೆಯಾಗಲಿ ಮನಸು
ನಿನ್ನ ನೆನಪ ಸ್ವಾತಿ ಮಳೆಯಲಿ
ಚಿಪ್ಪಿಗೂ ನಾಚಿಕೆಯಾದೀತು ಬಿಡು
ಮುತ್ತುಗಳಿಗೇಕೆ ಲೆಕ್ಕ..
***
ಬಳಿಯಿರುವಾಗ 
ಕಣ್ಣೆತ್ತಲೂ ನಾಚಿಕೆ
ದೂರವಾದಾಗೇಕೋ
ಬೇಕೆನಿಸುವುದು ಅಪ್ಪುಗೆ
***
ಮನದ ಕಿಟಕಿ ತೆರೆದರೆ
ಒಳ ಬಂದ ಬೆಳಕೆಲ್ಲಾ
ಅವನದೇ ನೆನಪು..
***
ಉಸಿರಿಗೂ ಜೀವಕ್ಕೂ 
ಸಂಬಂಧವೇ ಇಲ್ಲ 
ನಿನ್ನ ನೆನಪುಗಳಿವೆ ಬದುಕಲು..
***
ನೀರಿನೊಳಗಿನ ನೀನು
ಹೊರತೆಗೆದರೆ
ನಿನ್ನ ನೆನಪುಗಳಿಲ್ಲದ ನಾನು..
***
ಮನಸು ಕತ್ತಲ ಗೂಡು
ಒಳ ಬಂದ ಬೆಳಕಿಲ್ಲಿ
ಸ್ವತಂತ್ರ
***
ಖಾಲಿ ಇರಲಿ ಮನಸ ಖೋಲಿ
ತುಂಬಬೇಕಿದೆ ನೆನಪುಗಳ ಪೆಟ್ಟಿಗೆ
ಮುಚ್ಚಳ ಸರಿಸಿದರೆ 
ಕನಸು ಕಾಣುವ ನೀನು..
***

Saturday, January 18, 2014

ಕೋಪವೇಕೆ..




ನಕ್ಕು ಬಿಡೇ ಗೆಳತಿ 
ಕರಗಿ ಹರಿಯಲಿ ನೋವ ಬಂಡೆಗಳು
ಒಲವೊಸರ ಧಾರೆಯಾಗಿ 
ಅದರ ಹನಿ ಸ್ಪರ್ಶಕ್ಕೆ 
ಕಾದಿಹೆನು ಜನುಮಗಳಿಂದ
ತಣಿಸು ಬಾ ಬೇಗೆ ನೀಗಿ

ಈ ಬಿಂಕ ಬಿಗುಮಾನ
ಆ ಕೊಂಕು ಕುಡಿಹುಬ್ಬು
ಕೆನ್ನೆಯ ಕೆಂಪೆಲ್ಲ ನನ್ನದೇ ನಲ್ಲೆ
ಕೊಡುವೆಯೇನೇ ಎನಗೆ
ಕಿರುನಗುವ ರಸದೂಟ
ನೀನೀಗ ಕಬ್ಬ ಜಲ್ಲೆ

ಸಿಹಿಯ  ಜೊತೆ ಕಹಿ ಬೇಕು
ನೋವಿನಲು ನಲಿವು
ಒಣ ಕೊಂಬೆಯಲ್ಲು ಜೀವ ಸೆಲೆಯು
ಜೊತೆ ನೀನು ಇರುವಾಗ
ಕತ್ತಲೆಯ ಬದುಕಿನಲು 
ಕೋಟಿ  ನಕ್ಷತ್ರದ ಹೊಳೆವ ಪ್ರಭೆಯು

ಆ ಚಿಂತೆ ಈ ಚಿಂತೆ ನೂರಾರು ನೆವಗಳ
ಗುಡಿಸಿ ಸಾರಿಸಿ 
ರಂಗೋಲಿಯಲಿ ಮುಚ್ಚು
ಹೆಣೆದು ಬೆರಳುಗಳ
ಕೂಡಿಸಿ ಕಣ್ಬೆಳಕು
ಬಾ ಇಲ್ಲಿ ಎದೆಯೊಳಗೆ ದೀಪ ಹಚ್ಚು.


Thursday, November 28, 2013

ವೃಕ್ಷ ಮಾತೆ




ಹಸಿರೊಡಲಿನ ಬಸಿರೇ 
ಇಳೆಯ ದೇಹದುಸಿರೇ 
ನೆಲದೊಲುಮೆಯ ಚೇತನವೇ
ಅರಳಿ ನಿಂತ ಸುಮವೇ

ತಂಗಾಳಿಯ ಜೋಕಾಲಿಯ 
ಹಾರಾಡುವ ಬಾನಾಡಿಯ
ಕ್ಷಣ ತಡೆದು ನಿಲ್ಲಿಸಿ
ನೆರಳ ಕೊಟ್ಟು ಲಾಲಿಸಿ

ಭೂರಮೆಯ ವಿಸ್ಮಯವೋ
ನೆಲ ಜಲದ ಪ್ರಣಯವೋ
ಕೊಂಬೆ ಕೊಂಬೆಯಲ್ಲು ಕೆಂಪು
ಪಸರಿಸಿದ ಹೂವ ಕಂಪು

ಪ್ರಕೃತಿಯ ಗಡಿಯಾರವ
ತಿರುಗಿಸುವವರ್ಯಾರವ್ವ
ಪರ್ವ ಮಾಸ ವರ್ಷಕಾಲ
ನಿಲ್ಲದೆ ನಡೆವುದೀ ಜಾಲ

ಹೊತ್ತ ತನ್ನದೆಲ್ಲವ
ಪರರಿಗಿತ್ತು ಸಲಹುವ
ತಾಯೇ ನಿನ್ನ  ಮಮತೆಗೆ
ಕೊಡಲೇನಿದೆ  ಬದಲಿಗೆ ..

Thursday, May 9, 2013

ಸಂತೆ


ಕನಸುಗಳಿದೆಯೇ ಇಲ್ಲಿ ಮಾರಲಿಕ್ಕೆ 
ಹುಡುಕಿದರೆ ಹೆಕ್ಕಲಿಕ್ಕೆ.. 
ಯಾರಾದರು ಕಳೆದುಕೊಂಡಿರುವರೆ
ಈ ಸಂತೆಯೊಳಗೆ.. 
ಬದುಕುಗಳ ಮಾಲೆ ಕಟ್ಟಿ 
ಬಣ್ಣ ತುಂಬಿ .. ನೇತು ಹಾಕಿದ್ದಾರಿಲ್ಲಿ
ಕೊಳ್ಳಬಲ್ಲವರಿಗಾಗಿ .ಕಾಯುತಿದೆ.. 
ಹಳೆಯದಕ್ಕೆ ಹೊಸ ಮೆರಗು 
ನೀಡಿ ಕರೆಯುತಿದೆ..
ನುಗ್ಗಿ ಕೊಳ್ಳುವ ಜನ ಇರುವವರೆಗೆ.. 
ಒಂದಿಷ್ಟು ಪರಿಚಿತ ಮುಖಗಳಲ್ಲೂ 
ಅಪರಿಚಿತ ಭಾವ ......
ಗುರುತರಿಯದಿದ್ದರೂ ಕಿರುನಗೆಯ ಧಾರೆ .. 
ಸಣ್ಣ ಹೂವ ಮಾಲೆಯಾದರೂ ಸರಿ.. 
ಕೊಂಡು ಕೊಡುವವರಿದ್ದರೆ.. 
ಮೊಗದಲ್ಲಿ ನಗು ತುಳುಕಿ ಬೆಳಗೀತು... 
ಹೊರಳಿ ಮನೆಗೆ ನಡೆವ ವೇದನೆಯೋ .. 
ಮರಳಿ ಬರುವ ಕಿರು ಆಸೆಯ ತುಡಿತವೋ .. 
ಕಾಡೀತು ಯಾವತ್ತಿಗೂ..
ಸಂತೆಯೊಳಗಿನ ಏಕಾಂತದ 'ಮತ್ತು'... 
ಇನ್ನೊಮ್ಮೆ ಹಂಚಲು ಸಂತಸವ ಹೊತ್ತು...
                              -- ಅನಿತಾ ನರೇಶ್ ಮಂಚಿ 








ಸಂತೆಯ ಸರಕ ನೋಡಿ 
ಬೆರಗಾಗಿ ನಿಂತೆಯಲ್ಲೆ !
ಕೊಂಡದ್ದು ಕಳೆದದ್ದು ಸರಿಹೋಯ್ತು 
ನೋಡಿಲ್ಲಿ!
ಬಗೆ ಬಗೆಯಾ ಓಲೆ ಬಣ್ಣಾದ ಮಾಲೆ
ರಂಗು ಮಾಸೀತು ಜೋಕೆ !
ಅಗ್ಗದ ಅರಿವೇ ಜಗ್ಗಿ ಎಳೆದಾಗ 
ಹರಿದೇ ಹೊಯ್ತಲ್ಲೇ ಚೆಲುವೆ !
ಈ ಚಿಲ್ಲರೆ ಸರಕು ತರವಲ್ಲ ನಿನಗೆ
ತಂದೇನು ರೇಶಿಮೆ ಮಕಮಲ್ಲ ಉಡುಗೆ
ಅಸಲಿ ಬಂಗಾರ ನೀನು 
ನಿನಗೇಕೆ ನಕಲಿ ಗೊಡವೆ !
ಜೋಡಿಸಿ ಇಟ್ಟಿರುವೆ ಸಿಹಿ ಮುತ್ತ ಮಾಲೆ
ತುಂಬಲೇನೇ ನಿನ್ನ ಕೆನ್ನೆ ಗುಳಿ ... !!
                          -- ಅಶೋಕ ಭಾಗಮಂಡಲ 

Tuesday, April 30, 2013

ಸಂಸಾರ ಸಾರ..





ಸಾಗಬೇಕಿದೆ ದಾರಿ ಬಹು ದೂರ 
ಹೊತ್ತಿರುವುದು ಹಗುರವೇನಲ್ಲದಿದ್ದರೂ
ಹೊರೆಯನಿಳುಹಲಾರೆನು...  
ನನ್ನದಿದು  ಕರುಳ ಬಳ್ಳಿ 
ಹೊಳೆವ  ನಾಳೆಯ ಬೆಳಕು
ಕೈ ಹಿಡಿದರೆ ಸಾಕು ನಡೆಯಬಹುದಿನ್ನು 
ಎನ್ನುವವರೆಗಾದರೂ ಎತ್ತಿಕೊಳಲೇ ಬೇಕು..
ಹಾದಿ ಬದಿಯ ಮುಳ್ಳು ಕಲ್ಲುಗಳು
ಪಾಪದ ಪಾದಗಳಿಗೆ ತಾಕೀತೇನೋ..
ನಾನಾದರೋ ಕಷ್ಟಗಳ ಸಹಿಸಿ 
ಗಟ್ಟಿಯಾದವನು..
ಅವಳು ನವಮಾಸ ಹೊತ್ತು 
ಹೆತ್ತ ತಾಯಿ  
ಕೊಂಚ ನಾನೂ ಅನುಭವಿಸುತ್ತೇನೆ 
ಆ ಕಷ್ಟ ಆ ಸುಖವ.. 
ದಾರಿ ತುಳಿವ ನೋವು ನಲಿವುಗಳು
ಮುಂದಿದೆ.. ಇರಲಿ ಬಿಡು
ಈಗಲೇ ಏಕೆ ನಾಳೆಯ ಚಿಂತೆ..

Saturday, March 23, 2013

ಭಾನುಮತಿಯ ಸ್ವಗತ






ಸೌಂದರ್ಯ ಎಂದರೆ ಏನು 
ನೀನೇ  ನೀನು .. 
ಎಣೆಯಾರು ನಿನಗೆ ಎಂದಿದ್ದವ
ದ್ರೌಪದಿಗೆ ಸ್ವಯಂವರ 
ಎಂಬ ವಾರ್ತೆಗೆ 
ಬಾಸಿಂಗ ಕಟ್ಟಿದ್ದ ಕೌರವ  

ಭುಜಬಲದ  ಗದೆಯಲ್ಲ 
ಎತ್ತಬೇಕಿದೆ ಬಿಲ್ಲು 
ಹೂಡಬೇಕಿದೆ ಬಾಣ 
ನೀರೊಳಗೆ ನಿಜವಲ್ಲದ 
ಪ್ರತಿಬಿಂಬ ಗುರಿ 
ತಿರುಗುವ ಮೀನ ಕಣ್ಣ 

ಸೋತನಂತೆ ಆವ
ಗೆದ್ದೆ  ಎಂದುಕೊಂಡಿದ್ದೆ ನಾನು 
ಒಳಗೆಲ್ಲ ಅವಮಾನದ ಗಾಳಿ 
ಅವಳಿಗಾದರೋ 
ಹೊರಲಾರದ ಭಾರ 
ಕೊರಳೊಳಗೆ ಐವರ ತಾಳಿ 

ತುಂಬಿದ ಸಭೆಯೊಳಗೆ 
ಸೀರೆಯನೆಳೆವ ಹಠ 
ಕಣ್ಣಿಗೆ ಅಸೂಯೆಯ ಬಟ್ಟೆ 
ಬಿಚ್ಚಿದಂತೆ ಮುಚ್ಚಿತ್ತು 
ಅವಳ ಮೈ ಮನಸ್ಸು 
ನಾ ಬೆತ್ತಲಾಗಿದ್ದೆನಷ್ಟೆ 

ಯುದ್ಧದಲಿ ಸತ್ತವರು 
ಯಾರ ಬಂಧುಗಳು ಅಲ್ಲ 
ಇರಲಿಲ್ಲ ಅವರಿಗೆ ಬಂಧನದ ಚಿಂತೆ 
ನನ್ನದೋ  ಒಳಗೊಳಗೇ 
ಉರಿವ ದೇಹ 
ಹಾರಬೇಕೇಕೆ ಮತ್ತೊಮ್ಮೆ ಚಿತೆ 

ನಾನೇನು ಅವಳೇನು 
ಒಂದೇ ದೋಣಿಯ ಪಯಣಿಗರು 
ಕಣ್ಣೊಳಗೆ ಚಿನ್ನದ ಸೂಜಿ 
ಚಿಗುರಿದಂತೆಲ್ಲ  ಬಾಡಿದ್ದೆ
ಬಿದ್ದಿದ್ದೆ ಬೇಡಿದ್ದೆ  
ಕಟ್ಟಬೇಡಿ ಜೀವನದ ಬಾಜಿ

Wednesday, January 23, 2013

ತುಂಟ ಅಲೆ ..




ಎಲೆ ಕಡಲೆ ನಿನ್ನ ಅಲೆಗಳಿಗೆ 
ತೀರದೆಡೆಗೆ ತೀರದ ಬಯಕೆ 
ತಾಯಿ ನೀನಹುದು ನಿಜ ಆದರೂ 
ಎಳೆದೊಯ್ದು ಬಾಗಿಲು ಹಾಕುವೆಯೇಕೆ 

ರಚ್ಚೆ ಹಿಡಿದ ತುಂಟ ಮಗುವದು  
ಬೋರ್ಗರೆದು ನಿನ್ನ ತೆಕ್ಕೆ ಸಡಿಲಿಸಿ 
ರಭಸದಿಂದ  ಬರುತ್ತಿವೆ ದಡದೆಡೆಗೆ 
ಕ್ಷಣ ಹೊತ್ತು ಬಿಟ್ಟು ಬಿಡಬಾರದೇ ಕನಿಕರಿಸಿ 

ಪಿಸು ಮಾತು , ತುಸು ಪ್ರೀತಿ 
ಬರಡು ನೆಲಕೆ ಬೇಕಿದೆ ತಂಪು ಆಲಿಂಗನ 
ನಿನ್ನಲೆಯ ಅಲೆಯುವ ಹುಚ್ಚಿಗೆ 
ಅದೇ ಹಾಕುವುದು ಕಡಿವಾಣ 

ಮರುಕಳಿಸುವ ನೆನಪ ಅಲೆಗೆ  
ಮರಳ ತೀರ ನೆನೆ ನೆನೆದು ಒದ್ದೆ.
ಹೊತ್ತ ಪರಿವೆಯಿಲ್ಲದೆ ನಿಂತು ನಾನು 
ಈ ಚಿನ್ನಾಟವ ನೋಡುತ್ತಲೇ ಇದ್ದೆ. 

Monday, July 9, 2012

ಹೋಗುವೆನು ನಾ...



ಅರಳುವ ಹೂವುಗಳೇ 
ಮಾಡದಿರಿ ಸದ್ದು
ಅವನೆಡೆಗೆ ನಡೆವಾಗ 
ನೋಡುವುದ್ಯಾತಕೆ ಹೀಗೆ ಕದ್ದು 

ಬೀಸುವ ಗಾಳಿಯೇ 
ಒಂದಿಷ್ಟು ಸುಮ್ಮನುಳಿ 
ನಾ ತೆರಳಿದ  ಬಳಿಕ 
ಬೇಕಾದಷ್ಟು ಸುತ್ತಿ ಸುಳಿ 

ಬೆಳ್ಳಿ ಕಾಲ್ಗೆಜ್ಜೆಯೇ 
ಮೆತ್ತಗಿರಲಿ ನಿನ್ನ ಸ್ವರ 
ತಡ ಮಾಡದಿರು ಹೆಜ್ಜೆಯೇ
ಕಾದಿರುವ ನನ್ನ ವರ 

ಓ ನನ್ನ ಹೊನ್ನ ಝರಿ 
ತಂಪೆರೆಯೇ ನನ್ನೊಳಗೂ 
ಬಿರು ತಾಪವೀ ಒಲವು 
ಹರಿತ ಕತ್ತಿಯ ಅಲುಗು 

ಒಮ್ಮೆ ಸೇರಿದರವನ 
ಬೆಚ್ಚನೆಯ ಆಸರೆ 
ಮತ್ತು ಏರುವುದು 
ಬೇಕಿಲ್ಲ ಬೇರೆ ಸುರೆ 

ತುಂಬು ಬದುಕಿನ ದಾರಿ 
ಇದ್ದರೆಷ್ಟೇ ದೂರ 
ಒಲುಮೆ ಪಡೆದ ಮನಕೆ 
ಇನಿತಿಲ್ಲ ಬೇಸರ ..

Saturday, June 30, 2012

* ವಿಪರ್ಯಾಸ


ಒಂದು ಹೊಸ ಚಂದ್ರನ 
ಉದಯವಾಯಿತು 
ನಡುವೆ ಮೋಡದ ಆಣೆಕಟ್ಟು .........

ರಾಶಿ ರಾಶಿ ನಕ್ಷತ್ರಗಳ ಮಡಿಲಿಗೆ 
ತುಂಬಿಸಿತ್ತು
ಕತ್ತಲೆಯ ಪಕ್ಕಕ್ಕಿಟ್ಟು ...........

ಸಂತಸಕ್ಕೆ ರೆಕ್ಕೆ 
ಮೂಡಿಸಿತು 
ಹಾರಲು ಆಗಸವ ಕಿತ್ತಿಟ್ಟು ..........

ಬಾಳ ಕಡಲು ಗಾಳಿಯನ್ನೆಲ್ಲ
ದೂರಸರಿಸಿತ್ತು 
ನನ್ನ ಹಾಯಿ ದೋಣಿಯಲ್ಲಿಟ್ಟು ........

ಬದುಕು ದುಃಖವನ್ನೆಲ್ಲ 
ಕೊಂಡೊಯ್ದಿತು 
ನನಗೊಂದು ಅಳುವ ಹೃದಯವನಿತ್ತು ....


Friday, December 30, 2011



ಒಂಟಿ .. 

ನಡೆದಾಡಿದವೆಷ್ಟೋ ಹೆಜ್ಜೆಗಳು 
ಬಿಟ್ಟು ಗುರುತುಗಳ ..
ನಾನಿಲ್ಲಿ ಒಂಟಿ, ನನ್ನವರಿಲ್ಲಿಲ್ಲ .. 

ಕಳೆದ ಕಾಲದ ನೆನಪ 
ಮೈ ತುಂಬಾ ಹೊದ್ದರೂ 
ಬದಲಾಗಿದ್ದು ನಾನೇ... ಕಡಲಲ್ಲ .. 

ನೋಟಕ್ಕೆ ನಿಲುಕುವಷ್ಟೇ 
ಹರಿಯಬಿಡಬಹುದು ಮನ 
ಅದರಾಚೆಗಿನ ನಿಜವು ನನ್ನದಲ್ಲ .. 














Tuesday, December 20, 2011

ಗುಲ್ ಮೊಹರ್ ...



ಬಂದಾಗ ಮಾರ್ಚ್ ತಿಂಗಳು 

ಮೈ ಕೈಯೆಲ್ಲಾ ಖಾಲಿ ಖಾಲಿ 

ಶೂನ್ಯಕ್ಕೆ ನೆಟ್ಟ ನೋಟ 

ತಲೆಯ ಮೇಲೆ ಬೆಂಕಿಯ 

ಮಳೆಗರೆವ ಸುಡು  ಸೂರ್ಯ 

ನೆತ್ತರೂ ಆರುವ ಕಾಲ 

ತೇವ ಕಾಣದ ನೆಲದಾಳದಲ್ಲಿ 

ಅದೇನೋ ಕಂಪನ 

ಸಹಜವಿದು ಎಂಬಂತೆ  ಕುಡಿವೊಡೆವ  

ಹೊಸ ಮೊಗ್ಗುಗಳಿಗೆಲ್ಲಿ 

ಅಡಗಿತ್ತೋ ಜೀವ ಚೈತನ್ಯ  

ಹಸಿರ ಹರೆಯಕೆ 

ನಾಚಿಕೆಯ ಅರುಣರಾಗ 

ಆವರಿಸಿದ ಇಬ್ಬನಿಯ ಜೊತೆಗೆ

ಮೌನದಲೇ ಪ್ರೇಮ ಸಲ್ಲಾಪ .... 


Monday, November 7, 2011

ಕಿಟಕಿ ..


ನಾನಿದ್ದೆ ಜೀರ್ಣವಾಗಿದ್ದ ಪುಟ್ಟ ಮನೆಯಲ್ಲಿ ...
ಆಗಸದ ಸುಡು ಸೂರ್ಯ ಸುಡುತ್ತಿದ್ದ ನನ್ನ
 ಮಳೆನೀರ ಎರಚಲಿಗೆ ಮುಖವೊಡ್ಡುತ್ತಿದ್ದೆ..
ತಂಗಾಳಿ ನನ್ನ ಒಳ ಹೊರಗೆ 
ಸುಳಿ ಸುಳಿದು ಆಟವಾಡುತ್ತಿತ್ತು..
ಪ್ರತಿ ಕಂಬಿ ಕಂಬಿಗಳಲ್ಲೂ 
ಪ್ರಿಯಕರನ ಕಾದಿದ್ದ ಪ್ರೇಯಸಿಯ ಕೈಯ ಬಿಸಿ,
ಬರದಾಗ ನಿಂತು ಕಣ್ಣೀರು ಸುರಿಸಿದ್ದ ಅವಳ ಹೃದಯದ ಚೂರು .....
 ಮೇಲೇರ ಹೋಗಿ ಬಿದ್ದು ಅತ್ತಿದ್ದ 
ಪುಟ್ಟ ಕಂದನ ಅಳು ......
ಅಪ್ಪನ ಹೆಗಲೇರಿ ನನ್ನಿಂದ ಎತ್ತರ ಎಂದು ನಕ್ಕಿದ್ದ ಮುಗ್ದ ಹಾಸ ...
 ಕೈಯಾಸರೆಯಲ್ಲೇ ನಡೆಯುತಿದ್ದ ಅಜ್ಜಿಯ ಭರವಸೆ....
ಯಾರೋ ಬಂದು ನನ್ನಂದವ  ಕಂಡು ಎತ್ತಿ ಒಯ್ದರು 
ಸುಂದರ  ಅರಮನೆಗೆ.........
ಅಮೃತ ಶಿಲೆಯ ಗೋಡೆಯೇರಿದ ನಾನು ಕಪ್ಪು ಕನ್ನಡಿಯೊಳಗೆ ಬಂಧಿ ...
ಒಳಗಿನಿಂದಾದರೋ ಕಸೂತಿಯ ಪರದೆಗಳ ಮಾಲೆ...
ಇಲ್ಲಿ ನನ್ನನಾರು ನೋಡುವರಿಲ್ಲ ....ಕಾಡುವರಿಲ್ಲ...ಆಡುವರಿಲ್ಲ....
ನನ್ನ ಅಗತ್ಯವೇ ಇಲ್ಲದ ಸದಾ ಮುಚ್ಚಿರುವ ಬಾಗಿಲಿನ ಈ ಮನೆಯಲ್ಲಿ.....   

Monday, October 24, 2011

ದೀಪಾವಳಿ ..




ಒಂದಿಷ್ಟು  ಮುಚ್ಚುಮರೆ
ಅಲ್ಲೊಮ್ಮೆ ಇಲ್ಲೊಮ್ಮೆ 
ಇಣುಕುವ ಅಂಜಿಕೆ 

ಅವನು ಕೈಯಲ್ಲಿ ಕೈಯಿಟ್ಟು 
ನುಡಿದೇ ನುಡಿಯುತ್ತಾನೆ 
ನೀ ಬೇಲೂರ ಶಿಲಾ ಬಾಲಿಕೆ

ಸುತ್ಯಾರಿಲ್ಲದಿದ್ದರೂ ಪಿಸುಮಾತು 
ಹತ್ತಿರವಾದಷ್ಟು ಕರಗುವ ತನು ಮನ 
ಕುಡಿಯೊಡೆದು ತುಸು ನಾಚಿಕೆ 

ಕಾಲ ಉರುಳುತ್ತದೆ ಬೇಡದಿದ್ದರೂ 
ಗಂಟೆಗಳು ನಿಮಿಷದಷ್ಟು ವೇಗದಿ 
 ನಾಳೆ ಮರಳಿ ನನ್ನೆಡೆಗೆ  ಬಾ ಎಂಬ ಕೋರಿಕೆ .. 

ಮತ್ತೆ ಮತ್ತೆ ಹೆಣೆದುಕೊಳ್ಳುವ ಬೆರಳ ಸಡಿಲಿಸಿ  
 ತಿರುಗಿ ನೋಡುವ ನೋಟದೊಳಗೆ 
 ಹಚ್ಚಿಟ್ಟ ಸಾಲು ಸಾಲು ದೀಪಾವಳಿಯ ದೀಪಿಕೆ 

Tuesday, October 18, 2011

ಕರಗುವ ಕ್ಷಣಗಳು..




ಸವಿಗನಸು ಆಗಷ್ಟೇ ಮೂಡಿತ್ತು
ಕರಗಿ ಬಿಡಬೇಕೇ ಕತ್ತಲು...

ಹೊಸತೊಂದು ಆಟದ ಆವಿಷ್ಕಾರವಾಗಿತ್ತು 
ಮುಗಿದೇ ಬಿಟ್ಟಿತು ಬಾಲ್ಯ 

ಪ್ರಿಯನ ಕಣ್ಣಿಗಿನ್ನೂ ಕಣ್ಣು ಕೂಡಿತ್ತಷ್ಟೇ
ಹರೆಯ ಕೈಗೆ  ಸಿಗದಂತೆ ಜಾರಿತ್ತು 

ತುಟಿಗಿನ್ನೂ ಸೋಕಿತ್ತಷ್ಟೇ ರುಚಿಕರ ತಿನಿಸು 
ಖಾಲಿಯಾಗಿತ್ತು ತುಂಬಿದ್ದ ತಟ್ಟೆ 

ಶಬ್ಧಗಳಿನ್ನೂ  ಹಾಡಾಗಿರಲಿಲ್ಲ
ಉಡುಗಿತ್ತು ಗಂಟಲಿನ ಧ್ವನಿ 

ಅಲ್ಲಲ್ಲಿ ಬೆಳ್ಳಿ ಕೂದಲು ಕಾಣಿಸಿತ್ತಷ್ಟೇ
ಹೇಳದೆ ಕೇಳದೆ ಕಾಲ ಮೀರಿತ್ತು 

ಪಯಣದ ಸುಖವಿನ್ನೂ ಸುರುವಾಗಿತ್ತಷ್ಟೇ 
ಗಮ್ಯ ಕಾಣಿಸಿ ವಾಹನದಿಂದ ಇಳಿಸಿತ್ತು 


ಬೇಕೆನಿಸಿದ್ದೆಲ್ಲ   ಹೀಗೆ ಬೇಗನೆ ಕಳೆದು ಹೋಗುವುದ್ಯಾಕೋ   .. 

  


Wednesday, October 12, 2011

ನಾಚಿಕೆ ..




ಕಲ್ಲು ನೆಲದ ಎದೆಯ ಮೇಲೆ 

ಬೀಸಿ ಬಂದ ಗಾಳಿಯೊಲುಮೆಗೆ  

ಮೆಲ್ಲನೂರಿ ಬೇರ ತೋಳುಗಳ 

ಲಲ್ಲೆಗರೆದು ಭುವಿಯ ತಬ್ಬಿ  

ಮೋಡ ಕರಗಿ  ಸುರಿದ ಹನಿಮಳೆಯ 

ಸರಸವ ಬಚ್ಚಿಟ್ಟು ತನ್ನೊಳಗೆ 

ಮುಳ್ಳಿನ ಜೊತೆಗೆ ಪುಳಕಿತಗೊಂಡು

ಮೊಗ್ಗು ನಸು ನಾಚಿತು  

Saturday, October 8, 2011

ಕಳೆದು ಹೋಗಿದ್ದೇನೆ ..



ಇಲ್ಲೇ ನೋಡಿ.. ಎಲ್ಲಾ ಇಲ್ಲಿದೆ 

ಕೊಂಡುಕೊಳ್ಳಿ ನೀವು ಬಯಸಿದುದನು

ಬಣ್ಣ ಬೇರೆ ಬೇರೆ ಇರಬಹುದು

ಎಲ್ಲದಕ್ಕೂ  ಸಮಾನ ಬೆಲೆ

ಇರುವ ಸುಳ್ಳು  ಪೊಳ್ಳು 

ಮುಚ್ಚಲೊಂದು ಕವಚವಷ್ಟೇ ..

ತೂಕವೇನಿಲ್ಲ, ನನ್ನಂತೆ ಇದೂ ಖಾಲಿ 

ಒಳಗೆ  ತುಂಬಿಟ್ಟ ಗಾಳಿ 

ನೋಟಕ್ಕಾದರೂ ಹೊಟ್ಟೆ ತುಂಬಿದಂತಿರಬೇಕಲ್ಲ 

ಬಿಟ್ಟರೆ ಹಾರಲೂ ಆಗದ 

ನೆಟ್ಟಗೆ ನಿಲ್ಲಲೂ ಬಾರದ ಜೀವವಿದು 

ಕೊಳ್ಳಿ ಕೊಳ್ಳಿ ಇದನೆಂದು ಕೂಗುತ್ತಲೇ

ಮರೆತಿದ್ದೇನೆ ಇವು ನಿಜವಲ್ಲವೆಂದು 

ಕೊಂಡ ಮುಖಗಳಲ್ಲಿ ನಗೆ ರೇಖೆ ಎಳೆಯುವ 
ಇವುಗಳ ಮರೆಯಲ್ಲಿ ನನ್ನದಿದೆ ಬೆವರು 

ಹೊತ್ತ ಹೊರೆಯ ಇಳುಹುವರಿಲ್ಲದೆಯೇ 

ಎತ್ತಿ ಹಿಡಿದ ಇವುಗಳ ನಡುವೆಯೇ 

ಕಳೆದು ಹೋಗಿದ್ದೇನೆ .. ಬದುಕ ಅರಸುತ್ತಲೇ.. 

Tuesday, September 27, 2011

ಕಲ್ಲರಳುವ ಕಾಲ




ಕಡಲಲೆಯು ಮತ್ತೆ ಮತ್ತೆ

ಸೋಕಿ ಪುಳಕಿತಗೊಂಡು  ಪಿಸುಗುಟ್ಟಿದರೂ
ಮಾರ್ನುಡಿಯದ ಒರಟ....

ಹುಚ್ಚೆದ್ದ ಶರಧಿ 

ತನ್ನ ತೋಳೊಳಗೆ  ಬಂಧಿಸಿ ಆವರಿಸಿದರೂ  

ಜಾರಿಸಿ  ಸರಿಸಿ ಬೀರುವ ಒಣ ನೋಟ ....

ಅಲೆ ಒಂದಿಷ್ಟು ದೂರ ಸರಿದರೆ  ಸಾಕು

ಕಾವೇರಿದ ಬೆಳಕಿಗೆ ಮೈಯೊಡ್ಡಿ 

ಹಗುರಾಗುವ ನಿರ್ಧಯ ....

ಎಂದೆಲ್ಲ ಜರಿದರೂ 

ಕಲ್ಲು ಹೃದಯ 

ಕಾಯುತ್ತಲೇ ಇರುತ್ತದೆ.....

ಹನಿ ಹನಿ ಪ್ರೀತಿಯ ಸಿಂಚನಕ್ಕೆ ಒದ್ದೆಯಾಗಲು 

ಕನಸಲ್ಲೂ ಕನವರಿಸಿ 

ಮನದಲ್ಲೇ  ನುಡಿಯುತ್ತದೆ ಕಡಲಲೆಗೆ 

ಬಂದು ಬಿಡು ನನ್ನೊಡನೆ ಎಂದೂ ಮರಳದಂತೆ....