Pages

Total Visitors

Showing posts with label ಲೇಖನಗಳು. Show all posts
Showing posts with label ಲೇಖನಗಳು. Show all posts

Tuesday, November 24, 2015

ಕ್ಯಾಮರಾ ಕಣ್ಣೊಳಗೆ..

ಕ್ಯಾಮೆರಾ ಹಿಡಿದು ಹುಳ, ಹುಪ್ಪಟೆ, ಮರ, ಹೂವು ಅಂತೆಲ್ಲಾ ಫೊಟೋ ತೆಗೆಯುವ ಇವರಿಗೆ ' ನಾವು ಹೋಗುತ್ತಿರುವ ಮನೆಯಲ್ಲಿ ತುಂಬಾ ಹೂಗಿಡಗಳಿವೆ ಎಂದು ಆಮಿಷವೊಡ್ಡಿ ಕ್ಯಾಮೆರಾ ಹೆಗಲಿಗೇರಿಸಿ ಹೊರಡುವಂತೆ ಮಾಡಿದ್ದೆ. ಅವರ ಮನೆಗೆ ಸಾಗುತ್ತಿರುವ ಕಾಲು ಹಾದಿಯಲ್ಲಿ   ಪಾಲೆ ಮರವೊಂದು ಮೈಯಿಡೀ ಹೂ ಹೊತ್ತು  ಸಿಂಗಾರಗೊಂಡು ನನ್ನ ಫೊಟೋ ತೆಗಿ ಎಂದು ಪರಿಮಳ ಸೂಸಿ ಕರೆಯುತ್ತಿತ್ತು. ನಡು ದಾರಿಯಲ್ಲಿ ನಿಂದು ಅದನ್ನು ಕ್ಲಿಕ್ಕಿಸುತ್ತಿರುವಾಗಲೇ ಹಿಂದಿನಿಂದ ಕುತೂಹಲದ ಕಣ್ಣು ಹೊತ್ತ ಅವಳು ಕಂಡಳು. ಆಗಷ್ಟೇ ಅರಳಿದ  ಹೂ ಮೊಗದ ಹುಡುಗಿ.  ನನ್ನ ನಗುವಿಗೆ ಬೇಕೋ ಬೇಡವೋ ಎಂಬ ಅನುಮಾನದಿಂದಲೇ ನಕ್ಕರೂ ಅವಳ ನೋಟವೆಲ್ಲಾ ಕ್ಯಾಮೆರಾದ ಮೇಲೆಯೇ ಇತ್ತು. 

ನಾವು ಮುಂದೆ ನಡೆದಂತೆಲ್ಲಾ ನಮ್ಮ ಹೆಜ್ಜೆಯ ಜೊತೆ ಅವಳ ಹೆಜ್ಜೆಯೂ ಇತ್ತು. ನಾವು ತಲುಪಬೇಕಾದ ಮನೆ ಬಂದಿತ್ತು. ಮುಚ್ಚಿದ ಗೇಟನ್ನು ತೆರೆದು ಒಳನುಗ್ಗಿ ಮತ್ತೆ ಮುಚ್ಚಲು ಹಿಂದೆ ತಿರುಗಿದರೆ ಅವಳಲ್ಲೇ ನಿಂತಿದ್ದಳು. 'ಅವಳದ್ದು ಒಂದು ಫೊಟೋ ತೆಗೀರಿ' ಅಂದೆ. 

ಅದನ್ನೇ ಕಾದವಳಂತೆ ಉಸಿರು ಬಿಗಿ ಹಿಡಿದು ಕೈಗಳನ್ನು ಗಟ್ಟಿಯಾಗಿಸಿ ಸ್ವಲ್ಪವೂ ಚಲನೆಯಿಲ್ಲದ ಕಂಬದಂತೆ ನಿಂತಳು. ನಗು ಉಕ್ಕಿ ಬಂದು ನಕ್ಕುಬಿಟ್ಟೆ. ಅವಳೂ ಹಗುರಾದಂತೆ ನಕ್ಕಳು. ಕ್ಯಾಮೆರಾದೊಳಗೆ ಸೆರೆ ಸಿಕ್ಕಳು. 'ಇನ್ನೂ ಒಂದು ತೆಗೀತೀರಾ..' ಅವಳ ಕಣ್ಣಲ್ಲಿ ನೂರು ದೀಪಗಳ ಬೆಳಕು. ಮತ್ತೆ ಮತ್ತೆ ಕ್ಯಾಮೆರಾ ಅವಳೆಡೆಗೆ ತಿರುಗಲೇಬೇಕಾಯ್ತು. 
ನಾವು ಹೋಗಿದ್ದ ಮನೆಯವರು ಅವಳ ವರಾತ ಹೆಚ್ಚುತ್ತಿರುವುದನ್ನು ಕಂಡು ' ಹೀಗೆ ಫೊಟೋ ತೆಗೆದ್ರೆ ನಿಂಗೆ ಬೇಗ ಮದುವೆ ಆಗುತ್ತೆ ನೋಡು' ಎಂದರು.
ಸಂಜೆಯ ಸೂರ್ಯನ ರಾಗ ರಂಗು ಅವಳ ಕೆನ್ನೆಯಲ್ಲಿ.. 
ನಾಚುತ್ತಾ ಓಡಿದಳು. 

ನಾವು ಮನೆಯೊಳಗೆ ನಡೆದು ಮಾತುಕತೆಯಲ್ಲಿ ಮುಳುಗಿದ್ದಾಗ ಹೊರಗೆ ಗೇಟಿನ ಸದ್ದು. 
ಅವಳ ಜೊತೆ ಅವಳದೇ ಓರಗೆಯ ಮಕ್ಕಳು. ಹತ್ತಿರದವಳನ್ನು ಬೊಟ್ಟು ಮಾಡಿ 'ಇವಳದ್ದು ಫೊಟೋ ತೆಗೀರಿ.. ಇವಳಿಗೂ ನನ್ನದೇ ಪ್ರಾಯ.  ಬೇಗ ಮದುವೆ ಆಗಬೇಕು' ಅಂದಳು. ಎಲ್ಲರೂ ನಗುವಾಗ ಆ ಮಕ್ಕಳ ಮೊಗದಲ್ಲೂ  ನಗೆ ಹಬ್ಬ.. ಅಲ್ಲೇ ಆಟವಾಡುತ್ತಾ ಇದ್ದ ಹುಡುಗನೊಬ್ಬ  ಫೊಟೋ ತೆಗೆಸಿಕೊಳ್ಳದಿದ್ದರೆ  ತನಗೆ ಮದುವೆ ಆಗದೇ ಹೋದೀತೆಂಬ  ಎಂಬ ಆತಂಕದಲ್ಲಿದ್ದಂತೆ ತಾನೂ ಮುಖ ತೋರಿಸಿದ. ಮಕ್ಕಳ ಗುಂಪು ಹೆಚ್ಚುತ್ತಾ ಇತ್ತು. ಯಾರು ಬಂದರೂ ಅವರೆಲ್ಲರ ಜೊತೆ ಅವಳ ನಗು ಮುಖ ಇದ್ದೇ  ಇತ್ತು. 

ಮತ್ತೊಂದು ಸುತ್ತಿನ ಫೋಟೋ ಪ್ರಹಸನ ಮುಗಿಯುವಾಗ ಅವಳು ಫೋಟೋಕ್ಕೆ ಫೋಸ್ ಕೊಡುವುದರಲ್ಲಿ ಎಕ್ಸ್ ಪರ್ಟ್  ಆಗಿದ್ದಳು. 
 ಆಗಸದ ಸೂರ್ಯ ಆಕಳಿಸುತ್ತಾ ಪಡುವಣಕ್ಕಿಳಿಯ ಹೊರಟ.ಮತ್ತು ನಾವು ಮನೆಯ ಕಡೆ ಮುಖ ಮಾಡಿದೆವು. 

Thursday, January 8, 2015

ಕೃಷ್ಣೇಗೌಡರ ಆನೆ


ಮನುಷ್ಯ ಸ್ವಭಾವವೇ ಹೀಗೆ. ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನೋಡುವುದು, ತನ್ನ ತಿಳುವಳಿಕೆಯ ವ್ಯಾಪ್ತಿಯನ್ನೇ ಸರಿ ಎಂದುಕೊಳ್ಳುವುದು, ತಪ್ಪುಗಳು ಘಟಿಸುವುದೇನಿದ್ದರೂ ಪರರಿಂದ ನಾನ್ಯಾವತ್ತೂ ಮಿಸ್ಟರ್ ರೈಟ್ ಅಂತಲೇ ಅಂದುಕೊಳ್ಳುವುದು. ಆದರೂ ಒಮ್ಮೊಮ್ಮೆ ತಪ್ಪುಗಾರನಾಗಲೇಬೇಕಾಗಿ ಬಂದಾಗ ಅದನ್ನು ತನ್ನ ತಪ್ಪು ಎಂದು ಒಪ್ಪಿಕೊಳ್ಳದೆ ಇನ್ನೊಬ್ಬರ ಮೇಲೆ ನಯವಾಗಿ ಜಾರಿಸಿಬಿಡುವುದು. ಅದೂ ವಿರೋಧಕ್ಕೆ ಎಡೆಯಿಲ್ಲದಂತೆ ..
ಅಂಕಪರದೆ ಮೇಲೇರಿದೊಡನೇ ಕಥೆಯೊಂದು ಶುರುವಾಗುತ್ತದೆ.  

ಇದರಲ್ಲೂ ಒಬ್ಬ ಆಮ್ ಆದ್ಮಿ ಇದ್ದಾನೆ. ಸಮಾಜದ ಓರೆಕೋರೆಗಳನ್ನು  ನೇರವಾಗಿಸುವ ಮನಸ್ಸು ಇದ್ದರೂ ಅದನ್ನು ಆಗಗೊಡದಂತೆ ಮಾಡುವ  ವ್ಯವಸ್ಥೆಗೆ ಬಲಿಯಾಗಲೇ ಬೇಕಾದ ಅನಿವಾರ್ಯತೆ ಅವನದ್ದು. 
ಹಾಳಾದ ತನ್ನ ಹಳೇ ಜೀಪನ್ನು ಸರಿ ಮಾಡುತ್ತಾ ಕುಳಿತಿದ್ದವನ ಬಳಿ ಬಂದವ ಲೈನ್ ಮ್ಯಾನ್. ಅವನ ಗಮನ ಸೆಳೆಯಲು ಬಾರದಿರುವ ಕೆಮ್ಮನ್ನು ಬರಿಸಿಕೊಳ್ಳುತ್ತಾನೆ. ಕತ್ತೆತ್ತಿ ನೋಡಿದವನ ಹತ್ತಿರ  ತನ್ನ ಕಷ್ಟಗಳನ್ನು ಬಗೆ ಬಗೆಯಾಗಿ ಬಣ್ಣಿಸುತ್ತಾ  ಆ ಹಾಳು 'ಕೃಷ್ಣೇಗೌಡರ ಆನೆ'ಯ ದೆಸೆಯಿಂದ ತಾನು ಅನುಭವಿಸುತ್ತಿರುವ ಅವಸ್ಥೆಗಾಗಿ ಆತ ಮರುಕಪಡುವಂತೆ ಮಾಡುತ್ತಾನೆ. ಮತ್ತು ತನಗೀಗ ಅವಶ್ಯ ಬೇಕಾದ  ಕೊಡಲಿಯ ಬೇಡಿಕೆಯನ್ನು ನಯವಾಗಿ ಇಡುತ್ತಾನೆ.


ಈಗ ' ಆಮ್  ಆದ್ಮಿ' ಕಥೆಗಾರನಾಗುತ್ತಾನೆ. ಹೇಗೆ ಕೃಷ್ಣೇಗೌಡರ ಆನೆ ನಮ್ಮೂರಿಗೆ ಬಂತು ಎನ್ನುವಲ್ಲಿಂದ ನೆನಪುಗಳನ್ನು ಹೆಕ್ಕಿ ತೆಗೆಯುತ್ತಾನೆ. 
ರಾಜ ಮಹಾರಾಜರ ತಲೆ ಮೇಲೆ ಕೈಟ್ಟು ಆಶೀರ್ವಾದ  ಮಾಡುವುದು ಬಿಟ್ಟರೆ ಬೇರೇನೂ ಮಾಡದ   ಮಠವೊಂದು ತನ್ನ ಬಳಿ ಇರುವ ಆನೆಯನ್ನು ಅದರ ಕೊರತೆಗಳನ್ನು ಮುಚ್ಚಿಟು , ಕುಡುಕ ಮಾವುತನನ್ನು ಸರಿಪಡಿಸಲಾಗದೇ  ಸಿಕ್ಕ ಹಣಕ್ಕೆ ಮಾರುತ್ತದೆ. ಅದನ್ನು ಕೊಂಡುಕೊಂಡ ಮನುಷ್ಯನು ಕೂಡಾ ಸ್ವಾರ್ಥಿಯೇ.. 
ಘಟ್ಟದ ಮೇಲೆ ಬೆಂಕಿಪೆಟ್ಟಿಗೆಗಾಗಿ ಮರ ಕಡಿಯುವ ಕಂಪೆನಿಯೊಂದು ಗುತ್ತಿಗೆಗೆ ಕಾಡನ್ನು ಕಡಿಯುವ ಕೆಲಸ ಮಾಡಲಿದ್ದು ಅಲ್ಲಿ  ಕಡಿಯುವ ಮರ ಸಾಗಿಸಲು ತನ್ನ ಆನೆಯನ್ನು ಬಾಡಿಗೆ ಕೊಟ್ಟು ಹಣ ಪಡೆಯುವ ಹಂಚಿಕೆ ಅವನದ್ದು. 
ಆದರೆ  ಮಠದಲ್ಲಿ ಕೊಟ್ಟದ್ದನ್ನು ತಿಂದು ಬೆಳೆದ ಆನೆ ಇಲ್ಲೂ ಬೇಡಿ ಬದುಕುವುದನ್ನೇ ವೃತ್ತಿಯಾಗಿಸುತ್ತದೆ.  ತಾನು ನಡೆದದ್ದೇ ದಾರಿ ಎಂಬಂತೆ ಮೂಡಿಗೆರೆ ಬೀದಿ ಬೀದಿಯಲ್ಲಿ ಸುತ್ತುತ್ತದೆ. ಅವರಿವರು ಕೊಟ್ಟದ್ದನ್ನು ತಿಂದು ಬದುಕುತ್ತದೆ. ಆ ಊರಿನಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ತನ್ನ ಸಹಜ ನಡೆಂದ ತನಗೆ ತಿಳಿಯದಂತೆ ತಾನೇ ಹೊಣೆಗಾರನಾಗುತ್ತದೆ. ಕರೆಂಟ್ ಲೈನಿನ ಮೇಲೆ ಮರ ಬೀಳುವುದು, ಯಾವತ್ತೋ ಹಾಕಿದ್ದ ಕಂಬಗಳು ಆನೆಯ ಬೆನ್ನು ತುರಿಸುವ ಕ್ರಿಯೆಂದ ಮುರಿದು ಬೀಳುವುದು, ಅಂಗಡಿಯೊಂದನ್ನು ದೂಡಿ ಹಾಕುವುದು, ಕುರಿಗಳ ಶೆಡ್ಡಿನ ಮೇಲೆ ಮರ ಬೀಳಿಸುವುದು, ಇಷ್ಟು ಸಾಲದು ಎಂಬಂತೆ ಲಾರಿಯನ್ನು ಅಡ್ಡ ಹಾಕಿ ಬೀಳಿಸಿ ಅದರ ಡ್ರೈವರ್ ಸಾಯುವಂತೆ ಮಾಡುವುದು.. ಹೀಗೆ ಸರಣಿ ಪ್ರಕರಣಗಳು ನಡೆಯುತ್ತಾ ಹೋಗುತ್ತವೆ. ಎಲ್ಲರ ಬಾಯಲ್ಲಿಯೂ ಆನೆಯದ್ದೇ ಸುದ್ದಿ. 


ಕೇವಲ ಮಾತಿನ ಪೌರುಷದಲ್ಲಿ ಎಲ್ಲವನ್ನೂ ವಿರೋಧಿಸುವ ಶ್ರೀಸಾಮಾನ್ಯ ಯಾವಾಗ ತಾನು ಘಟನೆಗಳಿಗೆ ಸಾಕ್ಷಿಯಾಗಿ ವಿವರಣೆ ನೀಡುವ ಹೊಣೆ ಹೊರಬೇಕಾಗುತ್ತದೋ  ಆಗ ಮೆಲ್ಲನೆ ಅಲ್ಲಿಂದ ಮರೆಯಾಗಿಬಿಡುತ್ತಾನೆ. ಆದರೆ  ಅದೇ ಘಟನೆಯ ಬಗೆಗೆ ರೆಕ್ಕೆ ಪುಕ್ಕ ಹಚ್ಚಿ ಗಾಳಿಯಲ್ಲಿ ಹಾರಬಿಡುವಾಗ ತಮ್ಮ ಪಾಲನ್ನು ದಾರಾಳವಾಗಿ ಸೇರಿಸುತ್ತಾ ಹೋಗುತ್ತಾನೆ. 
ನಗು ಬರಿಸುವಂತೆ ಕಥೆ ಮುಂದುವರಿಯುತ್ತಾ ಹೋದಂತೆ ಆಳದಲ್ಲಿ  ಚಿಂತನೆಯನ್ನು ಮೂಡಿಸುತ್ತಾ ಹೋಗುತ್ತದೆ. ವ್ಯವಸ್ಥೆಗಳನ್ನು ಎದುರಿಸಿ ಬದಲಿಸಲು ಒಗ್ಗೂಡದ ನಾವುಗಳು ಅದರ ತಣ್ಣಗಿನ ಕ್ರೌರ್ಯಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಾಗಲು ರೋಧಿಸುವುದನ್ನು ಬಿಟ್ಟು ಇನ್ನೇನೂ ಮಾಡಲಾರದೆ ಅದರ ಸುಳಿಯಲ್ಲಿ ಮುಳುಗುತ್ತಾ ಹೋಗುವುದನ್ನಿಲ್ಲಿ ಕಾಣಬಹುದು. 
ಸರಕಾರದಿಂದ ಸಾಮಾನ್ಯ ಪ್ರಜೆಗಳ ಸಹಾಯಕ್ಕೆಂದು ರಚಿಸಲ್ಪಟ್ಟ,  ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕಾದ ವ್ಯವಸ್ಥೆಗಳು ಪ್ರತಿಷ್ಟೆಯನ್ನು ಮುಂದಿಟ್ಟು  ತಮ್ಮ ತಮ್ಮಲ್ಲೇ ಬಡಿದಾಡಿಕೊಳ್ಳುತ್ತಾ ಹೋಗುತ್ತವೆ. ಎಲ್ಲಾ ನ್ಯೂನತೆಗಳಿಗೂ ಇನ್ನೊಬ್ಬನನ್ನು ಬೆಟ್ಟು ಮಾಡುತ್ತಾ ಹೋಗುತ್ತಾರೆ..  ವಿಚಾರಗಳು  ಸರಿ ತಪ್ಪುಗಳ ವಿಮರ್ಶೆಯ ಒಳಗೂ ಸಿಗದೆ ಮನುಷ್ಯನ ಜೀವ ಅಗ್ಗವಾಗುತ್ತದೆ. ವ್ಯವಸ್ಥೆ ಅವನ ಕೊರಳಿನ ಹಗ್ಗವಾಗುತ್ತದೆ. 


ಕಥೆ ಹೇಳುವವನು ಮೌನವಾಗುತ್ತಾನೆ ..
 ಆದರೆ ದುರಂತದಲ್ಲಿ ಕೊನೆಯಾದಂತೆ ಕಾಣುವ ಕಥೆ ಇಲ್ಲಿ ನಿಲ್ಲದೆ ಮುಂದುವರಿಯುತ್ತಾ ಹೋಗುತ್ತದೆ. ಬಹುಷಃ  ಪ್ರಪಂಚದ  ಕೊಟ್ಟ ಕೊನೆಯ ಮನುಷ್ಯ  ತಾನಾಗಿ ಹೊದ್ದು ಮಲಗಿದ ದಬ್ಬಾಳಿಕೆಯ ಹೊದಿಕೆಯನ್ನು ಕಿತ್ತೆಸೆಯುವವರೆಗೂ ಇದು ಮುಂದುವರಿಯುತ್ತಲೇ ಇರುತ್ತದೆ.

ಕಥೆಗಳು, ನಾಟಕಗಳು ಇದರಲ್ಲೆಲ್ಲಾ ಪಾತ್ರಗಳು ನಾಯಕ, ಖಳನಾಯಕ, ನಾಯಕಿ ಅಂತೆಲ್ಲಾ ಮನುಷ್ಯ ಸ್ವಭಾವಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಕಥೆಯೇ ನಾಯಕನಾಗುವ ಮೂಲಕ  'ಕೃಷ್ಣೇಗೌಡರ ಆನೆ' ಪಾತ್ರದಾರಿಗಳ ಕೆಲಸವನ್ನು ಹಗುರಗೊಳಿಸುತ್ತದೇನೋ ಅನ್ನಿಸಿತು. ತೇಜಸ್ವಿಯವರ ಕಥೆಗಳ ಮೋಡಿಯೇ ಅಂತಹದು. ಸುಮ್ಮನೇ ಓದುವಾಗಲೇ ಅದು ನಿಮ್ಮನ್ನು  ಕಾಡು ಮೇಡು ಅಲೆಸುವ, ನೀವೂ ಕಥೆಯೊಳಗೆ ನುಗ್ಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಶಕ್ತಿಯುಳ್ಳದ್ದು. ಅದನ್ನು ನಾಟಕವಾಗಿ ಒಂದು ಚೌಕಟ್ಟಿನೊಳಗೆ ಕೂರಿಸಿದಾಗ ಆ ಅಗಾಧತೆಯನ್ನೆಲ್ಲೋ ಸ್ವಲ್ಪ ಕಳೆದುಕೊಂಡ ಅನುಭವವಾಗುವುದು ಸತ್ಯ. 
 ಆದರೂ ನಗು ಉಕ್ಕಿಸುತ್ತಲೇ ಅಳು ತರಿಸುವ, ದುರಂತವಾದರೂ ಸುಖಾಂತದ ಬಯಕೆ ಮೂಡಿಸುವ ಇಂತಹ ಕಥೆಯ ಆಶಯ ನಮ್ಮೊಳಗೆ ಇಳಿಯುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾದದ್ದೇ ಅದರ ಹೆಚ್ಚುಗಾರಿಕೆ ಎನ್ನಬಹುದು. 
                                    

Thursday, July 10, 2014

ಕರ್ಣನ ಗೆಲುವು



ಕರ್ಣನ ರಥ ಯುದ್ಧಭೂಮಿಯ ನೆಲದಲ್ಲಿ ಹೂತು ಹೋಗಿದೆ. ಅರ್ಜುನನ ಕಡೆಗೆ ತಿರುಗಿ ಹೇಳುತ್ತಾನೆ. ಅರ್ಜುನಾ 'ಕಲಹಕಾನುವರೀಗಲಲಸದು ಮತವು ಬಿಲುಹೀನ ಶರಹೀನ ಸಲೆ ವಾಹನಗಳ ಬಲಹೀನರಲ್ಲಿ ಸಲೆ ಬಲ್ಲಿದವ ನೀನು ನಿಲುವೊಂದು ಕ್ಷಣಕೆ ಸಿಲುಕಿರ್ದ ರಥವೆತ್ತುತಲೆ ಬರ್ಪೆ ರಣಕೆ' 

ಯುದ್ದದಲ್ಲೂ ನೀತಿಗಳಿರುತ್ತವೆ. ಬೆನ್ನು ತೋರಿಸಿ ಓಡುವವನ ಮೇಲೆ ಯಾರೂ ಯುದ್ದ ಮಾಡುವುದಿಲ್ಲ. ಹಾಗೇ ಆಯುಧವಿಲ್ಲದ ಬಲಹೀನನಾದವನ  ಜೊತೆ ಕಲಹ ಸಲ್ಲದು. ನಿನಗೆ ತಿಳಿಯದಿರುವುದು ಏನಿದೆ ಒಂದು ಕ್ಷಣ ನಿಲ್ಲು ರಥವನ್ನು ಎತ್ತಿ ಮತ್ತೆ ನಿನ್ನೊಡನೆ ಹೋರಾಟಕ್ಕೆ ಬರುತ್ತೇನೆ'. 

ಅರ್ಜುನನಿಗೂ ಕರ್ಣನ ಮಾತುಗಳು ತಪ್ಪೆನಿಸುವುದಿಲ್ಲ. ನಿಯಮಗಳು ಇರುವುದೇ ಹಾಗೇ ತಾನೇ.

ಒಪ್ಪಿದ.
ರಥವನ್ನೆತ್ತುವ ಪ್ರಯತ್ನದಲ್ಲಿರುತ್ತಾನೆ ಕರ್ಣ.
ಆಗಲೇ ಕೃಷ್ಣ ಅರ್ಜುನನಿಗೆ ಕರ್ಣನನ್ನು ಕೊಲ್ಲಲು ಆದೇಶಿಸುತ್ತಾನೆ. ವೈರಿಗಳಿಗೆ ಆಪತ್ತು ಬಂದಾಗಲೇ ಕೊಲ್ಲುವುದು ರಾಜಧರ್ಮ.ಕಾಯುವುದೇನನ್ನು ..ಹಿಡಿ ಬಿಲ್ಲು ತೊಡು ಬಾಣ.. 

ಕರ್ಣನ ಬೆನ್ನು ಮಾತ್ರ ಕಾಣುತ್ತಿದೆ ಅರ್ಜುನನಿಗೆ.. ಇದ್ದಕ್ಕಿದ್ದಂತೆ ಬಿಲ್ಲು ಬಾಣಗಳನ್ನು ಕೆಳಗಿಟ್ಟು ಯಾವುದೋ ಭಾವನೆಗಳ ಆವೇಗಕ್ಕೆ ಸಿಲುಕಿದ್ದಾನೆ ಅರ್ಜುನ.ಅಲ್ಲಿಯವರೆಗೆ ವೈರಿಯಾಗಿದ್ದ ಕರ್ಣ ಆ ಕ್ಷಣಕ್ಕೆ ಆಪ್ತನಾಗುತ್ತಾನೆ. 
ಅಂಗಲಾಚುತ್ತಾನೆ ಕೃಷ್ಣನಲ್ಲಿ .. 

ಮನಸಿಜ ಪಿತ ನೀನು ಮಾತಿಲಿ ಬಿಟ್ಟಾಡು ಕರ್ಣನಾರೈ
ಎನ್ನ ಮನದಲಿ ಹಲವು ಹಂಬಲಿಸುತಲಿರ್ಪುದು ಕರ್ಣನಾರೈ
ಧನುವೆತ್ತಲಾರೆ ಕೂರ್ಗಣೆ ತೊಡಲಾರೆನು ಕರ್ಣನಾರೈ
ಮೇಣೆನಗೀಸು ಪಗೆಗಾಣದಾತನ ಮೇಲಿನ್ನು ಕರ್ಣನಾರೈ
ಪೊಡವಿ ಪಾಲಕನಿಂದ ಹೆಚ್ಚು ತೋರುತಲಿದೆ ಕರ್ಣನಾರೈ
ಎನ್ನ ಒಡಹುಟ್ಟಿದವನೋ ಸಂಬಂಧಿಯೋ ತಿಳಿಯದು ಕರ್ಣನಾರೈ
ನಡೆಯದೆನ್ನಯ ಮಾರ್ಗಣಂಗಳಾತನ ಮೇಲೆ ಕರ್ಣನಾರೈ
ದೇವ ನುಡಿ ನುಡಿ ಮರೆಮಾಜಬೇಡ ಯಥಾರ್ಥವ ಕರ್ಣನಾರೈ

ಇಲ್ಲಿ ಕವಿ ಅರ್ಜುನನ ವಿಲಾಪವನ್ನು, ಅವನ ಮನದಾಳದ ನೋವನ್ನು  ಸರಳ ಶಬ್ಧಗಳಲ್ಲಿ  ಹಿಡಿದಿಡುತ್ತಾನೆ. ಕಣ್ಣರಿಯದಿದ್ದರೂ ಕರುಳರಿಯದೇ ಎಂಬ ಮಾತು ನೆನಪಾಗುವುದು ಈಗಲೇ..

ಈ ಪರಿಸ್ಥಿತಿಯಲ್ಲಿ ಕೊಲ್ಲಬಹುದೇ ಕರ್ಣನನ್ನು ಎಂಬುದು ಅರ್ಜುನನ  ಪ್ರಶ್ನೆಯಲ್ಲ.ಕೊಲ್ಲಬಾರದವನನ್ನು ಎಂಬುದೇ ಅವನ ಇಚ್ಛೆ. ಕೊಲ್ಲದಿರಲು ಕಾರಣಗಳನ್ನು ಹುಡುಕುತ್ತಾನೆ..
'ಕೃಷ್ಣಾ ನಾನೀಗ  ಕೊಲ್ಲಲಾರೆ ಕರ್ಣನನ್ನು.. ಅವನ ಜೊತೆ ಇದ್ದಕ್ಕಿದ್ದಂತೆ ಬಂಧವೊಂದು ಬೆಸೆದಿದೆ. ಆ ನಂಟಿನ ಅಂಟು ಬಿಗಿಯಾಗಿದೆ. ಬಿಡಿಸಿಕೊಳ್ಳಲಾಗದಷ್ಟು..ನಿನಗೆ ತಿಳಿಯದಿದ್ದುದು ಯಾವುದಿದೆ ಜಗದಲ್ಲಿ ಹೇಳಿಬಿಡು ನನಗೆ ಯಾರಿವನು ಈ ಕರ್ಣ..
ಬಿಲ್ಲನ್ನೆತ್ತಲಾರೆನಯ್ಯಾ.. ಬಾಣವನ್ನು ಗುರಿಡಲಾರೆ ಅವನೆಡೆಗೆ.. ಸಮರವೆಸಗಬೇಕಾದರೆ ಹಗೆ ಬೇಕು.. ನನಗೆ ಅವನ ಮೇಲೆ ಕಿಂಚಿತ್ತೂ ಆ ಭಾವನೆಲ್ಲ. ಅಷ್ಟೇ ಏಕೆ ನನ್ನಣ್ಣ ಧರ್ಮರಾಯನಿಂದಲೂ ಈತನೇ ನನಗೆ ಹೆಚ್ಚು ಪ್ರಿಯವಾಗಿ ತೋರುತ್ತಿದ್ದಾನೆ ಹೇಳಬಾರದೇ ಯಾರವನು?'

ಹೇಳಬಹುದಿತ್ತಲ್ಲ ಕೃಷ್ಣನಿಗೆ.. ಇವನು ನಿನ್ನ ಅಣ್ಣ ಎಂದು..ಕೃಷ್ಣನಲ್ಲದೇ ಬೇರೆ ಯಾರೇ ಆಗಿದ್ದರೂ ಅರ್ಜುನನಿಗೆ ನಿಜ ನುಡಿಯುವ ಅಪಾಯವಿತ್ತು.  ಯುದ್ಧವಲ್ಲಿಗೆ ನಿಲ್ಲುತ್ತಿತ್ತೇನೋ? 

ಆದರೆ ಕೃಷ್ಣ ಹಾಗೆ ಹೇಳುವುದಿಲ್ಲ.. ಕರ್ಣನ ಪಾಪಗಳ ಲೆಕ್ಕ ಹಾಕುತ್ತಾನೆ.. ರೊಚ್ಚಿಗೆಬ್ಬಿಸುತ್ತಾನೆ ಅರ್ಜುನನನ್ನು.. 

'ಏನು ಹುಚ್ಚು ಹಿಡಿದಿದೆ ನಿನಗೆ ಅರ್ಜುನಾ.. ಎಷ್ಟೆಷ್ಟು ಮೋಸವೆಸಗಿದ್ದಾನೆ ಇವನು ಲೆಕ್ಕಹಾಕು.. ಆಗೆಂದಾದರು ಸಂಬಂಧಗಳ ಸುಳಿಯಲ್ಲಿ ಸಿಲುಕಿ ನಿಮ್ಮನ್ನು ಪಾರು ಮಾಡಿದ್ದಾನೆಯೇ?  ಇವನು ನಿನ್ನ ಬಂಧುವೆಂತಾದಾನು? ರಣರಂಗದಲ್ಲಿ ಮೋಸದಿಂದ ನಿನ್ನ ಕಂದನನ್ನು ಕೊಂದವನಲ್ಲವೇ ಇವನು.ಏನಾದರೂ ಸಂಬಂಧವೋ ಅನುಬಂಧವೋ ಇದ್ದೀತೆಂದು ಎತ್ತಿದ ಕತ್ತಿ ಕೆಳಗಿಳುಹಿದ್ದಾನೆಯೇ? ಯುದ್ಧಭೂಮಿಗೆ ಬಂದು ಬಂಧುತ್ವವನ್ನು ಹುಡುಕಬೇಡ.. ಕೊಂದು ಕಳೆ ..'  

ಮತ್ತರೆಕ್ಷಣದಲ್ಲಿ  ಅರ್ಜುನನ ಬಾಣ ಕರ್ಣನೆದೆಗೆ ತಾಕಿ ಕರ್ಣ ಕುಸಿಯುತ್ತಾನೆ.

ಪ್ರಶ್ನೆ ಮೂಡುವುದು ಈಗಲೇ.. 

ಕರ್ಣನಿಗೆ ಗೊತ್ತಿದೆ ಅರ್ಜುನ ಯಾರೆಂದು..
ತನಗೂ ಅವನಿಗೂ ಇರುವ ಬಂಧುತ್ವವೇನೆಂದು.. ಆದರೆ ಎಲ್ಲಿಯೂ ಆ ಬಂಧನದ ಪಾಶಕ್ಕೆ ಸಿಲುಕದೆ ಒಡೆಯನ ಉಪ್ಪಿನ ಋಣ ತೀರಿಸುವೆಂದು ಮಾಡಬಾರದ್ದನ್ನೆಲ್ಲಾ ಮಾಡುತ್ತಾನೆ.

ಕೃಷ್ಣನಿಗೂ ತಿಳಿದಿದೆ ಅವರಿಬ್ಬರ ನಡುವಿನ ಬಂಧವೇನೆಂದು.. 

ನ್ಯಾಯಾನ್ಯಾಯಗಳ ತಕ್ಕಡಿಯಲ್ಲಿ ತೂಗಿದಾಗ ಕರ್ಣನ ಪಾಪಗಳ ತೂಕ ಹೆಚ್ಚಾಗಿಯೇ  ಇತ್ತು.
ಹಾಗೊಂದು ವೇಳೆ ಸತ್ಯ ಹೇಳಿದ್ದರೆ.. ಕರ್ಣ ಬದುಕಬಹುದಿತ್ತು.. ಆದರೆ ಅದು ಅವನ ಸೋಲಾಗುತ್ತಿತ್ತು.
ದ್ರೌಪದಿಯ ಮುಖ ನೋಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದ ಕರ್ಣ, ಸುಭದ್ರೆಯ ಮಗನ ಹಂತಕ ಕರ್ಣ, ಪಾಂಡವರನ್ನು ಅವಮಾನಿಸುವ ಯಾವ ಕ್ಷಣವನ್ನೂ ಕಳೆದುಕೊಳ್ಳದೆ ಬಳಸಿದ್ದ ಕರ್ಣ.. ಸಾಯದೇ ಉಳಿದರೆ ಗೌರವವಿತ್ತೇ ಅವನಿಗೆ.. ಅನಿವಾರ್ಯವಾಗಿ ಪಾಪಪ್ರಜ್ಞೆಯಿಂದ  ಬದುಕಿನುದ್ದಕ್ಕೂ ನರಳಬೇಕಿತ್ತವನು..  ಅವನ ಗೆಲುವು ಇದ್ದುದ್ದು ಸಾವಿನಲ್ಲಿಯೇ.. 

 ಕೃಷ್ಣನ ಆಲೋಚನೆಯೂ ಅದೇ ಆಗಿತ್ತು. ಅವನಿಗೆ ಕರ್ಣನನ್ನು ಗೆಲ್ಲಿಸಬೇಕಿತ್ತು. ಜೊತೆಗೆ ಅರ್ಜುನನನ್ನೂ ..

ಒಂದು ಬಾಣ.. ಎರಡು ಗುರಿ.. 




Sunday, April 20, 2014

ಆಪರೇಷನ್ ಸ್ಪೈಡರ್



ಮನೆಯೊಳಗೆ ಕುಳಿತು ಮಾಡಲೇನೂ ಕೆಲಸವಿಲ್ಲದ್ದರೆ ನಾನು ಜೇಡನ ಬಲೆಯನ್ನು ಹುಡುಕಿಕೊಂಡು ಹೊಸ ಆಟ ಆಡಲು ಹೊರಡುತ್ತೇನೆ.ಇದು ನಾನು ಮತ್ತು ಜೇಡ ಮಾತ್ರ ಆಡುವ ಆಟ. ಈ ಆಟ ಕೂಡಾ ಕುತೂಹಲದ್ದೇ .. ಸುಮ್ಮನೆ ನೆಲದಲ್ಲಿ ಬಿದ್ದಿದ್ದ ತರಗೆಲೆಯನ್ನು ಜೇಡನ ಬಲೆಗೆ ಎಸೆದು ಸ್ವಲ್ಪ ಅಲುಗಾಡಿಸುವುದು. ಕೂಡಲೇ ಅಲ್ಲಿಗೆ ಜೇಡ ಬಂದು ಬಲೆಯೊಳಗೆ ಸಿಕ್ಕಿದ ಎಲೆಯನ್ನು ಪ್ರಾಣಿಯೆಂದು ತಿಳಿದು ಹಿಡಿದು ಅಮುಕಿ ಸಾಯಿಸಲು ಹೊರಡುತ್ತದೆ. 


 ಅದು ತನ್ನ ಆಹಾರವಲ್ಲ ಎಂದು ತಿಳಿದಾಗ ಅದು ಮಾಡುವ ಕೆಲಸ ಇದೆಯಲ್ಲ ಅದು ನಿಜಕ್ಕೂ ಅಚ್ಚರಿ ತರುವಂತಹದ್ದು. ಮೆಲ್ಲನೆ ಎಲೆಯ ಸುತ್ತಲೂ ಸುತ್ತಿ ತನ್ನ ಬಲೆಯ ಎಳೆ ಕಡಿಯದಂತೆ ಅದನ್ನು ನಾಜೂಕಾಗಿ ಬೇರ್ಪಡಿಸುತ್ತಾ ಹೋಗುತ್ತದೆ. ಎಲ್ಲಾ ಬಂಧಗಳನ್ನು ಕಳಚಿಸಿ ನೆಲಕ್ಕೆ ಬೀಳಿಸುತ್ತದೆ. ಮತ್ತೆ ತನ್ನೆಲ್ಲಾ ಗಡಿ ರೇಖೆಗಳಿಗೆ ಒಂದು ವಿಸಿಟ್ ಕೊಟ್ಟು ಎಲ್ಲೂ ಏನೂ ಕಸಗಿಸ ಇಲ್ಲ ಅಂತ ಚೆನ್ನಾಗಿ ನೋಡಿಕೊಂಡು ಯಾವುದೋ ಒಂದು ನೂಲೇಣಿ ಹಿಡಿದು ಮೇಲಕ್ಕೇರಿ ಅಡಗಿ ಕುಳಿತುಕೊಳ್ಳುತ್ತದೆ. ಹೀಗೆ ಆಡಲು ನನಗೂ ಮಿಸ್ಟರ್ ಕ್ಲೀನಪ್ಪ ಜೇಡನಿಗೂ ಬೇಸರ ಎಂಬುದೇ ಇಲ್ಲ. 

ಆದರೆ ಇವತ್ತು ನಾನು ಅದರ ಬಲೆಯ ಹತ್ತಿರ ಹೋಗುವಾಗಲೇ ಒಂದು ಅನಾಹುತ ನಡೆದೇ ಹೋಗಿತ್ತು. 'ಪಾತರಗಿತ್ತಿ ಪಕ್ಕ ನೋಡಿದ್ಯೇನೆ ಅಕ್ಕಾ..' ಅಂತ ನನ್ನ ಬಗ್ಗೆಯೇ ಹಾಡು ಬರೆದಿದ್ದು ಅಂತ ಆ ಚಿಟ್ಟೆ ಜಂಬದಲ್ಲೆ ತಲೆಯೆತ್ತಿ ಆಗಸದತ್ತಲೇ ಮೊಗ ಮಾಡಿ ಹಾರುತ್ತಿತ್ತೋ ಏನೋ..ಅರೆಕ್ಷಣದ ಚಂಚಲತೆ ಸಾಕಿತ್ತು ಬಲಿಯಾಗಲು ..  ಪಕ್ಕನೆ ಬರಿಗಣ್ಣಿಗೆ ಕಾಣದ ಸೂಕ್ಷ್ಮವಾದ ಬಲೆಯೊಳಗೆ ಸಿಕ್ಕಿಯೇ ಬಿಟ್ಟಿತು. ಅಂಟಂಟು .. ಇಬ್ಬೀ.. ಕೊಳಕು.. ಎಂದೆಲ್ಲಾ ಯೋಚಿಸುತ್ತಾ ಬಿಡಿಸಿಕೊಳ್ಳಲು ಅತ್ತಿತ್ತ ಹೊಯ್ದಾಡಿತು. ಇಷ್ಟೇ ಸೂಚನೆ ಸಾಕು ಆ ಬೇಟೆಗಾರನಿಗೆ ತನ್ನ ಬಲೆಯೊಳಗೆ ಮಿಕವೊಂದು ಸಿಕ್ಕಿಬಿದ್ದಿದೆ.. ಇನ್ನೇನಿದ್ದರೂ ಭೂರಿ ಭೋಜನದ ಸಂಭ್ರಮ ಎಂದು ತಿಳಿದುಕೊಳ್ಳಲು.. 

ಮತ್ತಿನ ಕ್ಷಣದಲ್ಲೇ  ಬಲವಾದ ಎಂಟು ಕಾಲು, ವಿಕಾರ ಮೊಗ ಹೊತ್ತ ಆ ರಕ್ಕಸ ಬಂದೇ ಬಿಟ್ಟ. ತಪ್ಪಿಸಿಕೊಳ್ಳಲು ಒಂದಿಷ್ಟೂ ಸಮಯವಿಲ್ಲ. ಎಲ್ಲಾ ಎಷ್ಟು ಪಕ್ಕಾ ಲೆಕ್ಕಾಚಾರ ಎಂದರೆ ಅವೆಲ್ಲಾ ಕ್ಷಣಗಳಲ್ಲೇ ನಡೆದುಬಿಡುವಂತಹವುಗಳು.


ಬಂದದ್ದೇ ತನ್ನ ಬಲವಾದ ಕಾಲುಗಳಲ್ಲಿ ಚಿಟ್ಟೆಯನ್ನು ಹಿಡಿದಿಟ್ಟು ಅದರ ಅಲುಗಾಟ ನಿಲ್ಲುವವರೆಗೆ ಅದನ್ನು ಕಚ್ಚಿ ಹಿಡಿಯಿತು. ಎಲ್ಲಾ ಮುಗಿಯಿತು ಎಂದು ನಿಶ್ಚಯವಾದ ಕೂಡಲೇ ಆದನ್ನಲ್ಲೇ ಬಿಟ್ಟು ಮತ್ತೊಂದು ಸಲ ಅತ್ತಿತ್ತ ಅವಲೋಕನ ಮಾಡಿತು. ಮತ್ತೆ ಚಿಟ್ಟೆಯ ಕಳೇಬರದ ಕಡೆ ಸುಳಿದಾಡಿತು.ಇನ್ನೇನಿಲ್ಲಾ ಆಹಾರ ಸಿಕ್ಕಿದಲ್ಲಿಗೆ ಕಥೆ ಮುಗಿಯಿತು ಅಂದುಕೊಳ್ಳಬೇಡಿ. ಅದಕ್ಕೆ ಮಾಡಲಿಕ್ಕೆ ಇನ್ನೂ ಎಷ್ಟೊಂದು ಕೆಲಸವಿತ್ತು ಗೊತ್ತಾ? 



 ಯಾಕೆಂದರೆ ಕೂಡಲೇ ಅದನ್ನು ತಿಂದು ತೇಗಲು ಹಸಿವಿರಲಿಲ್ಲವೋ ಏನೋ..ಹಾಗೆಂದು ಅದನ್ನು ಅಲ್ಲಿಯೇ ಬಿಟ್ಟು ಹೋದರೆ ಸುರಕ್ಷಿತವಾಗಿರುತ್ತದೆ ಎಂಬ ಧೈರ್ಯ ಎಲ್ಲಿಯದು. ಹಾಗಿದ್ದರೆ ಅದನ್ನು ಕಟ್ಟಿಡಬೇಕು. ಇಲ್ಲವೇ ಮುಚ್ಚಿಡಬೇಕು.ಅದಕ್ಕೆ  ನಮಗೆಲ್ಲ ಸಿದ್ಧವಾದ ಬ್ಯಾಗುಗಳು ಸಿಗುತ್ತವೆ. ಆದರೆ ಜೇಡ   ಮಾರ್ಕೆಟ್ಟಿಗೆ ಹೋಗಿ  ಚಿಟ್ಟೆ ಹಾಕಲಿಕ್ಕೆ ಒಂದು ಚೀಲ ಕೊಡಿ ನೋಡುವಾ ಅಂತ ಬ್ಯಾಗ್ ತರಲಿಕ್ಕಾಗುತ್ತಾ... ಇಲ್ಲವಲ್ಲ. ಅದಕ್ಕೂ ಜೇಡನ ಬಳಿ ಉಪಾಯವಿದೆ ನೋಡಿ.
ಅಗಲಕ್ಕೆ ಹರಡಿದಂತೆ ಸಿಕ್ಕಿ ಬಿದ್ದಿದ್ದ ಚಿಟ್ಟೆಯ ರೆಕ್ಕೆಗಳನ್ನು ಮೆಲ್ಲನೆ ಬಿಡಿಸಿಕೊಂಡಿತು. ಈಗ ಅದರ ದೇಹದ ಭಾಗ ಮಾತ್ರ ಬಲೆಗೆ ಅಂಟಿಕೊಂಡಿತ್ತು. ಕೆಲವೊಮ್ಮೆ ಹೀಗೆ ಮಾಡುವಾಗ ತೂಕ ಹೆಚ್ಚಾಗಿದ್ದ ದೇಹವಾದರೆ ಪಕ್ಕನೆ ಬಿದ್ದು ಬಿಡುತ್ತದೆ. ಆಗ ಜೇಡ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ನಿರಾಸೆಯಲ್ಲಿ ಮತ್ತೆ ಆಹಾರಕ್ಕಾಗಿ ಕಾಯಬೇಕಾಗುತ್ತದೆ. ಆದರೆ ಇದು ಹಾಗಾಗಲಿಲ್ಲ. ರೆಕ್ಕೆಗಳ ಸುತ್ತ ಹೋಗಿ ಬಂದು ತನ್ನ ಅಂಟಿನಿಂದ ಅದನ್ನು ಹತ್ತಿರ ತಂದಿತು. ಎಷ್ಟು ಹತ್ತಿರ ಎಂದರೆ ಚಿಟ್ಟೆಯ ದೇಹ ಕಾಣದ ಹಾಗೆ ರೆಕ್ಕೆಗಳು ಅದನ್ನು ಮುಚ್ಚಿ ಹಿಡಿಯುವಷ್ಟು. ನಂತರ ಅದರ ಸುತ್ತ ವೇಗವಾಗಿ ತಿರುಗುತ್ತಾ ಅದನ್ನು ತನ್ನ ಬಲೆಯ ಎಳೆಗಳಲ್ಲಿ ಬಿಗಿಯಾಗಿಸುತ್ತಾ ಹೋಯಿತು. ಈಗ ಅದೊಂದು ಶವ ಪೆಟ್ಟಿಗೆಯಂತೆ ಕಾಣುತ್ತಿತ್ತು. 

ಅದನ್ನು ತನ್ನ ಬಲೆಯ ಗೂಡಿಗೆ ಚೆನ್ನಾಗಿ ಅಂಟುವಂತೆ ಮಾಡಿತೀಗ. ಇಷ್ಟೆಲ್ಲಾ ಕೆಲಸ ಮುಗಿದ ಮೇಲೆ ಮತ್ತೊಮ್ಮೆ ತನ್ನ ಇಡೀ ಬಲೆಯ ನೇಯ್ಗೆಯನ್ನು ಪರಿಶೀಲಿಸಿತು. ಚಿಟ್ಟೆಯ ಒದ್ದಾಟದಿಂದ ಸ್ವಲ್ಪ ಹರಿದು ಹೋಗಿದ್ದ ಬಲೆಯನ್ನೆಲ್ಲಾ ಹೊಸ ಎಳೆಗಳನ್ನು  ಹಾಕುತ್ತಾ ಮೊದಲಿನಂತೆ  ಜೋಡಿಸಿತು. ಈಗ ನನ್ನ ಕಡೆಗೆ ನೋಟ ಬೀರುತ್ತಾ ಹೇಗೆ ನನ್ನ ಕೆಲಸ ಎಂದು ಕೇಳಿದಂತೆ ಬಾಸವಾಯಿತು. ನಾನು ಅದಕ್ಕೆ ತಂಬ್ಸ್ ಅಪ್ ಎಂದು ತೋರಿಸಿದೆ. 

ಚಿಟ್ಟೆಯ ಸಾವಿಗೆ ಮನಸ್ಸಿಗೆ ಒಂದು ಕ್ಷಣ ಬೇಸರವಾದರೂ ಜೇಡನ ಆಹಾರವಲ್ಲವೇ ಅದು ಎಂದೆನಿಸಿತು. ಆಹಾರ ಪದ್ದತಿ ಬೇರೆ ಬೇರೆ ಇರಬಹುದು.  ಹಸಿವು ಎಂಬುದು ಎಲ್ಲರಿಗೂ ಒಂದೇ ಸಮನಾದುದು ತಾನೇ? ಅದು ಅದರ ಬೇಟೆಯಾಡುವ ಕ್ರಮ. ಚಿಟ್ಟೆಯಲ್ಲದಿದ್ದರೆ  ಇನ್ನೇನೋ.. ಪ್ರಕೃತಿ ಅವುಗಳಿಗೆ ಅವುಗಳದ್ದೇ ನಿಯಮಗಳನ್ನು ಇರಿಸಿದ್ದಾಳೆ. ಮನುಷ್ಯನಂತೆ ಪ್ರಾಣಿಗಳು ಎಂದೂ ಅವುಗಳನ್ನು ಅತಿಕ್ರಮಿಸಲಾರವು. ಅಷ್ಟಲ್ಲದೇ ಹೇಳುತ್ತಾರೆಯೇ..?  ಕೊಂದ ಪಾಪ ತಿಂದು ಪರಿಹಾರ..!! ಹೊತ್ತಿನ ಪರಿವೆಯೇ ಇಲ್ಲದೆ ಅದರ ಬೇಟೆಯ ಕ್ರಮವನ್ನು ನೋಡುತ್ತಾ ನಿಂತುಬಿಟ್ಟಿದ್ದೆ. ನನ್ನ ಹೊಟ್ಟೆಯೂ ಹಸಿವಾಗಿದೆ ಎಂದು ಸೂಚಿಸುತ್ತಿತ್ತು. ಮೆಲ್ಲನೆದ್ದು ಮನೆಗೆ ಹೊರಟೆ.

Sunday, January 19, 2014

ನೋಡಿದ್ಯೇನೆ ಅಕ್ಕಾ..




ಹಾರುವ ಹೂಗಳನ್ನು ಎಂದಾದ್ರೂ ನೋಡಿದ್ದೀರಾ? ಅರ್ರೇ.. ಹಾರುವ 
ಹೂಗಳೇ ನಿಮ್ಮಲ್ಲಿದೆಯೇ.. ಎಂದು ಮೀಡಿಯಾಗಳಿಗೆ  ಸುದ್ಧಿ ಮುಟ್ಟಿಸಿ, 
ಕ್ಯಾಮೆರಾ ಎತ್ತಿಕೊಂಡು ಬರಬೇಡಿ. ಹಸಿರಿನ ವನಸಿರಿಯ ಸುತ್ತ ಕಣ್ತೆರೆದು  
ನೋಡಿ. ನಿಮ್ಮಲ್ಲೂ ಕಂಡೀತು ಈ ರೆಕ್ಕೆಗಳಿರುವ ಸುಂದರ ಹೂವು.


.  ಕಾಣ್ತಾ ಇಲ್ವಾ.. ನಿಲ್ಲಿ ಅವುಗಳ ಪರಿಚಯ ಮಾಡಿಸಿ ಬಿಡುತ್ತೇನೆ.  ಅವುಗಳನ್ನು ಪಾತರಗಿತ್ತಿ,  ಚಿಟ್ಟೆ ಎಂದೆಲ್ಲಾ ಕರೆಯುತ್ತಾರೆ.. ಈಗ  ನಿಮ್ಮ ಅರಳಿದ ಕಣ್ಣುಗಳಲ್ಲಿ ಅವುಗಳ ಸೌಂದರ್ಯ ತುಂಬಿಕೊಳ್ಳುತ್ತಾ ಇದೆ ಅಲ್ವಾ.. ! 
ಹೌದು ಪ್ರಕೃತಿಯ ಕುಂಚ ಇವುಗಳ ರೆಕ್ಕೆಗಳ ಮೇಲೆ ಮೂಡಿಸುವ ಕಲೆಯನ್ನು ನೋಡಿಯೇ  ಸವಿಯಬೇಕು. ಈ ಚಿಟ್ಟೆಗಳೇನೋ ಕೀಟ ಪ್ರಪಂಚದ ನರ್ತಕಿಯರಂತೆ ಕಾಣುತ್ತಿದ್ದರೂ, ಈ ರೂಪ ಪಡೆಯಲು ಇವುಗಳು ಪಡುವ ಕಷ್ಟವನ್ನು ಕಂಡರೆ ನಮ್ಮ ಸೌಂದರ್ಯ ಸ್ಪರ್ಧೆಯ ಸೌಂದರ್ಯ ರಾಣಿಯರು ಪಡುವ ಕಷ್ಟ ನಮ್ಮ ಗಣನೆಗೇ ಬಾರದು. 



 ಪುಟ್ಟ ತತ್ತಿಯಾಗಿ ವಿಶಿಷ್ಟವಾದ ಅಂಟಿನಿಂದ ಗಿಡಗಳ ಎಲೆಯ ಮೇಲೆಯೋ, ಕೆಳಗೆಯೋ ಅಂಟಿ ಕೂತುಕೊಳ್ಳುವ ಇವುಗಳು ತತ್ತಿ ಒಡೆದು ಹೊರ ಬಂದೊಡನೇ ತಾನು ಕೂತ ಎಲೆಯನ್ನೇ ಕಬಳಿಸುವ ರಾಕ್ಷಸ ಕಂಬಳಿ ಹುಳುಗಳಾಗಿ ನಿಂತ  ನೆಲವನ್ನೇ ಬಗೆಯುವ  ನಮ್ಮ ರಾಜಕಾರಿಣಿಗಳನ್ನು ನೆನಪಿಗೆ ತರುತ್ತಾರೆ. 
 ಕಣ್ಣಿಗೆ ಕಂಡ ಹಸಿರೆಲ್ಲಾ ಹೊಟ್ಟೆಯ ಒಳಗೆ ಸೇರಿದೊಡನೇ ನಿಧಾನಕ್ಕೆ ತಮ್ಮ ಸುತ್ತು ಬಲೆಯನ್ನು ನೇಯ್ದುಕೊಳ್ಳುತ್ತಾ ಧ್ಯಾನಸ್ಥ ಸ್ಥಿತಿಯನ್ನು ತಲುಪುತ್ತವೆ. 

 ಈ ಸ್ಥಿತಿಯಲ್ಲಿ ತಮ್ಮನ್ನು ತಾವೇ ಪರಿವರ್ತನೆಯ ಕ್ರಿಯೆಗೆ ಒಡ್ಡಿಕೊಳ್ಳುವ ಇವು ಕೋಶದಿಂದ ಹೊರ ಬರುವಾಗ ಮೋಕ್ಷವನ್ನು ಪಡೆದ ಆತ್ಮದಂತಾಗುತ್ತದೆ. ಈಗ ನೋಡಿ ಇವುಗಳ  ವರ್ಣವೈವಿದ್ಯ. 
 ಪ್ರಕೃತಿ ತನ್ನ ಅಮೂಲ್ಯ ಸಮಯವನ್ನು ಇವುಗಳಿಗೆಂದೇ ಮೀಸಲಿಟ್ಟು ಒಂದೊಂದೇ ಬಣ್ಣಗಳನ್ನು ಹಚ್ಚಿ ಚಿತ್ತಾರ ಮಾಡಿದಂತೆ. ಅದೆಷ್ಟು ಬಣ್ಣಗಳು. ಅದೆಂತಾ ವಿನ್ಯಾಸಗಳು .. ಕಲಾವಿದನ ಕಲ್ಪನೆಯ ಆಚೆಯೂ ಅವುಗಳ ಪರಿಧಿ. ತುಂಬಿ ತುಳುಕುವ ಸೊಬಗು,  ಎಲ್ಲೆ ಇರದ ಆಗಸ, ಹಗುರ ದೇಹ, ಹಾರಲು ಸಹಾಯ ಮಾಡುವ ರೆಕ್ಕೆಗಳು.. ಇಷ್ಟು ಸಾಲದೇ ಸ್ವಾತಂತ್ರ್ಯದ ಸವಿಯನ್ನು ಸವಿಯಲು.. 
 ಸೂರ್ಯನ ಬೆಳಕು ಮೈ ಮೇಲೆ ಬಿದ್ದೊಡನೆಯೇ ಅರಳುವ ಹೂವುಗಳು ಇವರ ಆಕರ್ಷಣೆಯ ಕೇಂದ್ರ. ಬಣ್ಣ ಬಣ್ಣದ ಹೂವುಗಳು ಅರಳುವುದು ತಮಗಾಗಿಯೇ ಎಂಬಂತೆ ಆ ಕುಸುಮ ಬಾಲೆಯರನ್ನು ತಬ್ಬಿ ನೇವರಿಸುತ್ತವೆ. 

 ನೋವಾಗದಂತೆ ಕುಳಿತು ಮಧುವನ್ನು ಹೀರಿ ಕಾಲುಗಳಿಗೆ ಅಂಟಿಕೊಂಡ ಪರಾಗರೇಣುಗಳ ಸಹಿತ ಇನ್ನೊಂದರೆಡೆಗೆ ಪಯಣ. ಅಲ್ಲಿ ಬಿತ್ತುವ ಬೀಜ ಮತ್ತೊಂದು ಹುಟ್ಟಿಗೆ ನಾಂಧಿ. ಮತ್ತೊಂದು ಜೀವನ ವೃತ್ತಕ್ಕೆ ಮುನ್ನುಡಿ..




 ನಿಮ್ಮ ಮನೆಯಂಗಳದಲ್ಲೂ ಈ ಹಾರುವ ಹೂಗಳನ್ನು ನೋಡಲು ಬಯಸುತ್ತೀರಾದರೆ ಹೂ ಗಿಡಗಳನ್ನು ಬೆಳೆಸಿ. ಸಹಜ ಕೃಷಿಗೆ ಮನ ಮಾಡಿ. ಚಿಟ್ಟೆಗಳಿಗೆ ಪ್ರಿಯವಾದ ಕರಿಬೇವು, ನಿಂಬೆ ಜಾತಿಯ ಸಸ್ಯಗಳಿಗೂ ನಿಮ್ಮ ಕೈ ತೋಟದಲ್ಲಿ ಜಾಗವಿಡಿ. ಕಂಬಳಿ ಹುಳಗಳನ್ನು ಕೊಲ್ಲಲೆಂದು ಬಗೆ ಬಗೆಯ ಕೀಟ ನಾಶಕಗಳನ್ನು ಸುರಿದು ಪರಿಸರ ಹಾಳುಗೆಡವದಿರಿ. 


ಚಿಟ್ಟೆಯಿಂದಲೇ ಪರಾಗಸ್ಪರ್ಷ ಹೊಂದುವ ಹಲವು ಹೂಗಳಿವೆ. ಹಲವು ಗಿಡಗಳು ಮತ್ತೆ ಭೂಮಿಯಲ್ಲಿ ಜನ್ಮವೆತ್ತಬೇಕಾದರೆ ಇವುಗಳ ಸಹಾಯ ಬೇಕೇ ಬೇಕು. ಮಕ್ಕಳಿಗೆ ಚಿಟ್ಟೆಗಳನ್ನು ಹಿಂಸಿಸದಿರಲು ಹೇಳಿ.




  

 ಮನುಷ್ಯ ತಾನಾಗಿ  ತಾನು ಏನನ್ನೂ ಸೃಷ್ಟಿಸಲಾರ  ಅಂದ ಮೇಲೆ ಪ್ರಕೃತಿಯನ್ನು ಹಾಳು ಮಾಡುವ ಅಧಿಕಾರವೂ ಇಲ್ಲ. ಈ ಪುಟ್ಟ ಬಣ್ಣದ ಬೆಡಗಿಯರ ಹಾರಾಟವನ್ನು ನೋಡುವುದರಿಂದ ಕದಡುವ ಮನಃಶ್ಯಾಂತಿಯನ್ನು ಮರಳಿ ಪಡೆಯಬಹುದು. 


ಒಂದಷ್ಟು ಹೊತ್ತು ನಿಸರ್ಗದೊಡನಾಟ ನಿಮ್ಮ ಮನಸ್ಸಿನಲ್ಲೂ ರೆಕ್ಕೆ ಮೂಡಿಸಿ, ಕಲ್ಪನೆಯ ಆಗಸದಲ್ಲಿ ಹಾಯಾಗಿ ಹಾರುವಂತೆ ಮಾಡಬಹುದು. ಅವುಗಳೊಡನಾಟದ ಮಧುರತೆಯ ಸವಿಯನ್ನು ಹೀರಬಹುದು. 'ಪಾತರಗಿತ್ತಿ ಪಕ್ಕಾ .. ನೋಡಿದ್ಯೇನೆ ಅಕ್ಕಾ..' ಅಂತ ಹಾಡಬಹುದು.

Thursday, September 5, 2013

ನಿತ್ಯ ಸ್ಮರಣೀಯರು .


ಶಾಲೆಯ ಮೊದಲನೇ ದಿನ.
 

ಕೆಲವು ಮಕ್ಕಳು ಜೋರಾಗಿ ಅಳುತ್ತಿದ್ದರೆ, ಇನ್ನು ಕೆಲವರು ಅವರನ್ನು ನೋಡಿ ನಗುತ್ತಿದ್ದರು. ದೂರದ ಹಳ್ಳಿಯಿಂದ  ಬಂದ ಕೆಲವು ಮಕ್ಕಳು ಸುತ್ತಲಿರುವವರನ್ನು ಮರೆತು ಮಧ್ಯಾಹ್ನ  ಅಮ್ಮ ಕಟ್ಟಿ ಕೊಟ್ಟಿದ್ದ ಬುತ್ತಿಯನ್ನು ಬಿಚ್ಚಿ ರುಚಿ ನೋಡುತ್ತಿದ್ದರು. ಮತ್ತೂ ಕೆಲವರ ಅಮ್ಮಂದಿರು ಮಕ್ಕಳನ್ನು ಸಮಾಧಾನಗೊಳಿಸುತ್ತಾ ಕ್ಲಾಸಿನೊಳಗೇ ನಿಂತುಕೊಂಡು ತಮ್ಮ ಮನೆಯ ಕಷ್ಟ ಸುಖಗಳನ್ನು ಮಾತನಾಡುತ್ತಿದ್ದರು.ಅಷ್ಟರಲ್ಲಿ ತಲೆಯೆಲ್ಲಾ ಬಿಳಿಯಾಗಿ, ವಯಸ್ಸಾದಂತಿದ್ದವರೊಬ್ಬರು ಕ್ಲಾಸಿನೊಳಗೆ ಬಂದರು.  ಪುಟ್ಟ ಬೆಂಚಿನ ಮೇಲೆ ಬಲಿ ಕೊಡಲು ತಂದ ಕುರಿಯ ಮುಖಭಾವ ಹೊತ್ತು ಕೂತಿದ್ದ ನನ್ನ ಹತ್ತಿರ ಬಂದ 'ನೀನು ಒಂದನೇ ಕ್ಲಾಸಾ ಮಗಳೇ.. ನಾನು ಕೂಡಾ ಒಂದನೇ ಕ್ಲಾಸು' ಅಂದರು. 'ನೀವಿಷ್ಟು ಅಜ್ಜ ಆಗಿದ್ದೀರಾ, ನೀವು ಒಂದನೇ ಕ್ಲಾಸಾ' ಎಂದು ಹೇಳಿ  ಜೋರಾಗಿ ನಕ್ಕುಬಿಟ್ಟೆ. ನನ್ನೊಂದಿಗೆ ಉಳಿದ ಮಕ್ಕಳೂ ನಕ್ಕರು.

ಅವರನ್ನು ಕಂಡು ಅಲ್ಲಿದ್ದ ಅಮ್ಮಂದಿರೆಲ್ಲಾ ನಸು ನಾಚುತ್ತಾ ಹೊರಗೆ ಹೋದರು. ಅವರ ಮುಖವನ್ನೇ ನೋಡುತ್ತಾ ಕುಳಿತಿದ್ದ ನಮ್ಮನ್ನು ಕಂಡು " ನಾನೀಗ ಮತ್ತೊಮ್ಮೆ ಹೊರಗೆ ಹೋಗಿ ಒಳಗೆ ಬರ್ತೀನಿ. ಆಗ ನೀವೆಲ್ಲಾ ಎದ್ದು ನಿಂತು 'ನಮಸ್ತೆ ಸರ್' ಅಂತ ಹೇಳಬೇಕು" ಎಂದರು. ಆಗಲೇ ನಮಗೆಲ್ಲಾ ಅವರು ನಮ್ಮ ಸರ್ ಅಂತ ಗೊತ್ತಾಗಿದ್ದು. ನಂಗೆ ಈಗ ನಿಜಕ್ಕೂ ಅಳು ಬರುವ ಹಾಗೇ ಆಯ್ತು. ನಾನು ಅವರನ್ನು ಅಜ್ಜ ಅಂತ ಹೇಳಿದ್ದಕ್ಕೆ ಅವ್ರು ಹೊಡೆದರೆ ಅನ್ನುವ ಭಯ. ಆದರೆ ಹಾಗೇನು ಆಗಲಿಲ್ಲ. ಅವರು ನಮ್ಮ ಶಾಲೆ ಎಂಬ ಭಯವನ್ನು ಹೋಗಲಾಡಿಸಿದ ಸುಬ್ಬಯ್ಯ ಮಾಷ್ಟ್ರು... 

ಶಾಲೆಯ ಕಾರಿಡಾರಿನಲ್ಲಿ ಅತ್ತಿತ್ತ ನಡೆದಾಡುವಾಗ ಅವರ ಉದ್ದದ ಜಡೆ ಕೂಡಾ ಅತ್ತಿತ್ತ ಬಳುಕಾಡುತ್ತಿತ್ತು. ಎಲ್ಲರಂತೆ ಅವರ ಉದ್ದ ಜಡೆಯನ್ನು ನೋಡುವುದು ನನಗೆ ಬಾರೀ ಇಷ್ಟದ ಸಂಗತಿಯಾಗಿತ್ತು. ಆದರೆ ಅವರ ಕೈಯಲ್ಲಿ ಸದಾ ಕಾಣುವ ಬೆತ್ತ, ಸಿಡುಕಿನ ಮುಖ, ಮಕ್ಕಳನ್ನು ಅವರಿಂದ ದೂರವೇ ಇಟ್ಟಿತ್ತು. 

ಆ ದಿನ ನಾನು ಕ್ಲಾಸ್ ರೂಮಿನ ಕಡೆ ಹೆಜ್ಜೆ ಹಾಕುತ್ತಿದ್ದೆ. ಹಿಂದಿನಿಂದ ಬೆತ್ತ ಹಿಡಿದು ಬರುತ್ತಿದ್ದ ಅವರು ನನ್ನನ್ನು ಕರೆದರು. ಹೆದರಿಕೆಯಿಂದ  ಮೈಯೆಲ್ಲಾ ನಡುಗುತ್ತಾ ಅವರ ಕಡೆಗೆ ತಿರುಗಿದೆ. ಅವರು ಕೈಯಲ್ಲಿ ಹಿಡಿದ ಬೆತ್ತವನ್ನು  ನಾನು ಮುಡಿದ ಗುಲಾಬಿಗೆ ತಾಗಿಸಿ " ಇದು ನಿಮ್ಮ ಮನೆಯಲ್ಲಾಗಿದ್ದಾ" ಎಂದು ಕೇಳಿದರು. ಹೌದೆಂಬಂತೆ ತಲೆ ಅಲ್ಲಾಡಿಸಿದ ನನ್ನನ್ನು ಕಂಡು " ನಾಳೆ ಬರುವಾಗ ಅಮ್ಮನ ಹತ್ರ ಕೇಳಿ ನಂಗೆ ಒಂದು ಗೆಲ್ಲು ತರ್ತೀಯಾ" ಎಂದರು.
ನಗುತ್ತಾ ತಲೆ ಆಡಿಸಿದೆ.ಆ ದಿನವೆಲ್ಲಾ ಏನೋ ಪುಳಕ ...   ಕೆಲವು  ದಿನ ಕಳೆದು  ಹೊಸತಾಗಿ ಶುರು ಆದ ಸ್ಕೌಟ್ ಮತ್ತು ಗೈಡ್ ದಳದಲ್ಲಿ ಅವರು ನನಗಿನ್ನೂ ಹತ್ತಿರವಾದರು. 
ಮೊಟ್ಟೆ ಇಟ್ಟ ಕಪ್ಪು ಕೋಳಿ
ಮೊಟ್ಟೆ ನೋಡಿ ಕೂಗಿತು ಕೇಳಿ
ಬಿಳಿ ಮೊಟ್ಟೇ ಬಿಳಿ ಮೊಟ್ಟೇ ಬಿಳಿ ಮೊಟ್ಟೇ.. 
ಎಂದು ಅವರು ಕಲಿಸಿದ ಹಾಡನ್ನು ಹಂಚು ಹಾರುವಂತೆ ನಾವೆಲ್ಲಾ ಕಿರುಚಿ ಅವರಿಂದ ಮೆಚ್ಚುಗೆಯನ್ನೂ ಪಡೆದೆವು.  ಅವರಿಗಾಗೇ ನಾನು ತಂದ ಹೂವು ಅವರ ಉದ್ದ ಜಡೆಯನ್ನು ಅಲಂಕರಿಸಿದಾಗ ನಮಗೆಲ್ಲಾ ಖುಷಿ ..  ಅವರ ಮುಖದಲ್ಲೂ ತೆಳು ನಗು. ನಂತರ ನಮ್ಮ ತರಗತಿಗೆ ಬರುವಾಗ ಅವರ ಕೈಯನ್ನು ಸದಾ ಅಲಂಕರಿಸುತ್ತಿದ್ದ ಬೆತ್ತ ಮಾಯವಾಗಿತ್ತು. ನಾವು ಏಳನೇ ತರಗತಿ ಮುಗಿಸಿ ಹೊರಡುವಾಗ ತಾಯಿ  ಮಗಳನ್ನು  ತವರು ಮನೆಯಿಂದ  ನೀರಾಡುವ ಹಸಿಕಣ್ಣಿನಲ್ಲಿ ಹರಸಿ ಕಳುಹಿಸುವಂತೆ ಕಳುಹಿಸಿದ ನಮ್ಮ ಅಹಲ್ಯಾ ಟೀಚರ್..

ಕ್ಲಾಸಿನಲ್ಲಿ ಲೀಡರ್, ಅಳಿದೂರಿನಲ್ಲಿ ಉಳಿದವನೇ ಗೌಡ ಅನ್ನುವ ಮಟ್ಟದ ಬುದ್ಧಿವಂತೆ, ಡ್ಯಾನ್ಸ್, ಹಾಡುಗಳೆಂದರೆ ಸದಾ ತಯಾರು, ಶಾಲೆಯ ವಾರ್ಷಿಕೋತ್ಸವ , ಮಕ್ಕಳ ದಿನಾಚರಣೆಗಳೆಲ್ಲಾ  ನನ್ನ ನೃತ್ಯದಿಂದಲೇ ಶುರುವಾಗಿ ನನ್ನ ನೃತ್ಯದೊಂದಿಗೇ ಮಂಗಳ ಹಾಡುತ್ತಿದ್ದ ಸುವರ್ಣ ಕಾಲವದು.ಇಷ್ಟೆಲ್ಲಾ ಕಿರೀಟವನ್ನು ಹೊತ್ತು ನಡೆಯುತ್ತಿದ್ದ  ನನ್ನನ್ನು ಹಿಡಿದು ನಿಲ್ಲಿಸುವುದು ಕೊಂಚ ಕಷ್ಟವೇ ಆಗಿತ್ತು.
ಕ್ಲಾಸಿನಲ್ಲಿ ಯಾರನ್ನು ಹೋಮ್ ವರ್ಕ್ ಬಗ್ಗೆ ಕೇಳಿದರೂ, ನನ್ನನ್ನು ಕೇಳುತ್ತಿರಲಿಲ್ಲ. ಒಂದೆರಡು ಸಲ ಮಾಡದೇ ಹೋದಾಗಲೂ ಯಾರಿಗೂ ಗೊತ್ತಾಗಲೇ ಇಲ್ಲ.ಬಂದ ಕೂಡಲೇ ಟೀಚರ್ ಟೇಬಲ್ ಅಲಂಕರಿಸುತ್ತಿದ್ದ  ಹೋಮ್ ವರ್ಕ್ ಪುಸ್ತಕಗಳನ್ನು ಅವರ ಆಫೀಸ್ ರೂಮಿಗೆ ಕೊಂಡೊಯ್ದು ಇಟ್ಟು,  ತಿದ್ದಿದ ಪುಸ್ತಕಗಳನ್ನು ಮರಳಿ ತಂದು ಮಕ್ಕಳಿಗೆ ಹಂಚುವ ಕೆಲಸ ನನ್ನದೇ ಆದ ಕಾರಣ ನನ್ನ ಕಳ್ಳತನ ಹೊರಗೆ ಬಿದ್ದಿರಲೇ ಇಲ್ಲ. ಒಂದು ದಿನ ಇದ್ದಕ್ಕಿದ್ದಂತೆ ನನ್ನನ್ನು ನಿಲ್ಲಿಸಿ 'ಎಲ್ಲಿ ನಿನ್ನ ಹೋಮ್ ವರ್ಕ್ ಪುಸ್ತಕ ಕೊಡು' ಎಂದರು. ಮಾಡಿದರಲ್ಲವೇ ಕೊಡುವುದು.. ಹಾಗೆಂದು ಒಪ್ಪಿಕೊಳ್ಳಲು ಮರ್ಯಾದೆ ಪ್ರಶ್ನೆ. ಬ್ಯಾಗಿಗೆ ಕೈ ಹಾಕಿ ತುಂಬಾ ಹೊತ್ತು ಹುಡುಕಿದಂತೆ ಮಾಡಿ ' ಮನೆಯಲ್ಲೇ ಮರೆತು ಬಂದಿದ್ದೇನೆ' ಎಂದೆ. 'ಸರಿ ನಾಳೆ ತಾ' ಎಂದು ಕೂರಿಸಿದರು.

ಮರುದಿನ ಅವರೆಲ್ಲಿ ಕೇಳುತ್ತಾರೆ ಎಂಬ ಭಂಡ ಧೈರ್ಯದಿಂದ ಕ್ಲಾಸಿನೊಳಗೆ ನುಗ್ಗಿ ಗತ್ತಿನಲ್ಲೇ ಕೂತಿದ್ದೆ. ಬಂದ ಕೂಡಲೇ ' ನಿನ್ನ ಹೋಮ್ ವರ್ಕ್ ತೋರಿಸು' ಅಂದರು. ಕಣ್ಣಲ್ಲಿ ಗಂಗಾ ಜಮುನಾ ಹರಿಸುತ್ತಾ ನಿಂತೆ. ಸಾಧಾರಣ ನನ್ನಷ್ಟೇ ಉದ್ದದ ಬೆತ್ತ ಮೇಜಿನ ಮೇಲೆ ಕುಳಿತಿತ್ತು. ಅದನ್ನು ಎತ್ತಿ ಬೋರ್ಡಿನ ಪಕ್ಕದ  ನೆಲದ ಮೇಲೆ ಕುಟ್ಟುತ್ತಾ 'ಇಲ್ಲೇ ಕೂತ್ಕೊಂಡು ಈಗಲೇ ಬರ್ದು ತೋರಿಸು' ಅಂದರು.

ಕೊಟ್ಟ ಮಾತು ತಪ್ಪದ ಪುಣ್ಯಕೋಟಿಯ ಗೋವಿನ ಹಾಡನ್ನು ಹತ್ತು ಸಲ ಬರೆದು ತೋರಿಸಿದೆ. ಅದೇ ಕೊನೆ ಮತ್ತೆಂದೂ ಹೇಳಿದ ಕೆಲಸ ಮಾಡದೇ ಹೋಗಲಿಲ್ಲ. ಒಂದು ಮಾತು ಕೂಡಾ ಬಯ್ಯದೆ ಹೀಗೆ ಪಾಠ ಕಲಿಸಿದ ಲೀಲಾವತಿ ಟೀಚರ್..

ಶಾಲೆಯ ಹಿಂದಿನ ದೊಡ್ಡ ಗುಡ್ಡವನ್ನು ಸಮತಟ್ಟುಗೊಳಿಸಿ ಸಭಾಭವನ  ಕಟ್ಟುವ ತಯಾರಿಯಲ್ಲಿ ಇದ್ದರು. ಅವರು ಗುಡ್ಡದ ಮೇಲ್ಬಾಗದಲ್ಲಿ ನಿಂತು ಕೆಳಕ್ಕೆ ನೋಡುತ್ತಾ ಇದ್ದರು. ಕಡಿಮೆ ಎಂದರೂ ಒಂದಿಪ್ಪತ್ತು ಅಡಿ ಆಳ ಇದ್ದೀತು. ಮಣ್ಣು ಕಲ್ಲಿನ ಆ ರಾಶಿ ತಮ್ಮ ಕನಸಿನ ಕಟ್ಟಡವಾಗುವುದನ್ನು ಕನವರಿಸುತ್ತಾ ಅವರು ನಿಂತಿದ್ದರೆ ಮೆಲ್ಲನೆ ಹಿಂದಿನಿಂದ ಹೋಗಿ ದೂಡುವಂತೆ ಅವರ ಬೆನ್ನು ಮುಟ್ಟಿದೆ. ಒಮ್ಮೆಲೇ ಹೆದರಿ ಆಯತಪ್ಪುವಂತಾದರು. ನಾನು ಅವರ ಕೈ ಹಿಡಿದು ಪಕ್ಕಕ್ಕೆಳೆದು ಅಳು ಮೂತಿ ಮಾಡಿ ನಿಂತೆ. ಅವರು ನಗುತ್ತಾ " ನನ್ನನು ಹೆದರಿಸಿ ಬಿಟ್ಟೆಯಲ್ಲೇ ಹುಡುಗಿ " ಅಂದರು. ಶಾಲೆಯಲ್ಲೆಲ್ಲಾ ಇದೇ ಸುದ್ಧಿ. 'ಹೆಡ್ ಮಾಷ್ಟ್ರನ್ನು ಅನಿತಾ ಹೆದರಿಸಿದಳಂತೆ..'  ಒಮ್ಮೆಗೇ ನಾನು ಶಾಲೆಯಲ್ಲಿ ವರ್ಲ್ಡ್ ಫೇಮಸ್ ಆದೆ.ಸ್ವಲ್ಪ ಹೊತ್ತಿನಲ್ಲಿ ದೊಡ್ಡ ಹುಡುಗರನ್ನು ಕರೆದು ಆ ಜಾಗದಲ್ಲಿ ಮಕ್ಕಳು ಇದೆ ರೀತಿ ತಂಟೆ  ಮಾಡಿ ಬೀಳುವುದು ಬೇಡ ಎಂದು ತಡೆ ಬೇಲಿ ಮಾಡಿಸಿದರು.  

ಅದೇ ದಿನ ಸಂಜೆ ಪ್ರಾರ್ಥನೆ ಸಮಯದಲ್ಲಿ ಒಂದೊಂದಾಗಿ ಕೆಲವು ಹೆಸರನ್ನು ಕರೆದರು. ಆ ಹೆಸರುಗಳಲ್ಲಿ ನನ್ನದೂ ಇತ್ತು. ನೀವಿಷ್ಟೂ ಜನ ನಾಳೆ ಬೆಳಗ್ಗೆ ಬೇಗ ಶಾಲೆಗೆ ಬರಬೇಕು ಅಂದರು. ಯಾಕಿರಬಹುದು ಎಂಬ ಕುತೂಹಲ ನಮ್ಮದು. ಬೆಳಗಾಗುವುದನ್ನೇ ಕಾದು ಅವರು ಹೇಳಿದ ಹೊತ್ತಿಗೆ  ಬಂದು ನಿಂತೆವು. ನಮ್ಮಿಂದ  ಮೊದಲೇ ಬಂದಿದ್ದ ಹೆಡ್ ಮಾಷ್ಟ್ರು ಅಂಗಳದಲ್ಲಿ  ಸ್ವಲ್ಪ ದೂರ ದೂರಕ್ಕೆ ಚಾಕ್ ಪೀಸಿನಲ್ಲಿ ತ್ರಿಕೋನದ ಮೂರು ಬಿಂದುಗಳಂತೆ ಮೂರು ದೊಡ್ಡ ಉರುಟುಗಳನ್ನು ಹಾಕಿದ್ದರು. ನಮ್ಮನ್ನೆಲ್ಲಾ ಒಂದೊಂದರೊಳಗೆ ಒಬ್ಬೊಬ್ಬರು ನಿಲ್ಲುವಂತೆ ಮಾಡಿದರು. ನಮ್ಮ ಕೈಗೆ ಮುಟ್ಟಿದರೆ ಝಣ್ ಝಣ್ ಎನ್ನುವ ಲೇಜಿಮ್ ಗಳನ್ನು ನೀಡಿ ಹೆಜ್ಜೆಗಳನ್ನು ಆ ಮೂರು ಉರುಟುಗಳಿಂದ ಹೊರ ಬಾರದೇ ಇರುವಂತೆ ಮಾಡಿ ಹೆಜ್ಜೆ ಹಾಕಲು ಕಲಿಸಿದರು.ಹೀಗೆ ತಯಾರಾದ ನಮ್ಮ ಲೇಜಿಮ್ ಮತ್ತು ಕೋಲಾಟದ ತಂಡ ಎಲ್ಲಾ ಕಡೆಗಳಿಂದ ಬಹುಮಾನಗಳನ್ನು ಬಾಚಿಕೊಳ್ಳುತ್ತಿತ್ತು. ನಮ್ಮ ಅತಿ ವೇಗದ ಹೆಜ್ಜೆಗಳು ಎಲ್ಲರ ಮನ ಗೆಲ್ಲುತ್ತಿತ್ತು. ಲೇಜಿಮ್ ನ ಎರಡೂ ಕಡೆಗೆ ಉರಿಯುವ ಪಂಜುಗಳನ್ನು ಕಟ್ಟಿ ಕತ್ತಲೆಯಲ್ಲಿ ಲೇಜಿಮ್ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೂ, ಮತ್ತೆ ಕೆಲವರ ಹೆದರಿಕೆಗೂ ಪಾತ್ರವಾಗಿದ್ದೆವು.ಹಳ್ಳಿ ಶಾಲೆಯ ಮಕ್ಕಳಿಗೆ ಮೊದಲ ಬಾರಿ ಬ್ಯಾಡ್ ಮಿಂಟನ್ ಆಟ ಪರಿಚಯಿಸಿ, ರಾಜ್ಯ ಮಟ್ಟಕ್ಕೇರಿದ ತಂಡವನ್ನು ಸಿದ್ಧಪಡಿಸಿದವರೂ ಅವರೇ..ಖೊ ಎಂದು ಬೆನ್ನಿಗೆ ಬಡಿದು ಆಡುವ ಖೊ ಖೊ ಆಟವನ್ನು ಹೇಳಿಕೊಟ್ಟವರು ಅವರೇ ..  ಶಾಲೆ ಎಂದರೆ ಕೇವಲ ಪಾಠ ಮಾತ್ರ ಎಂಬ ಭ್ರಮೆಯನ್ನು ದೂರ ಮಾಡಿ ವಿದ್ಯಾರ್ಥಿಗಳ ಹತ್ತು ಹಲವು ಪ್ರತಿಭೆಗಳನ್ನು ಹೊರತೆಗೆದ  ರಮೇಶ್ ಹೆಡ್ ಮಾಷ್ಟ್ರು..

ಮಧ್ಯಾಹ್ನ ಊಟ ಮಾಡದೇ ಆಗಾಗ ವಿದ್ಯಾರ್ಥಿಗಳು ಹಸಿವಿನಿಂದ ಬಳಲಿ ತಲೆ ತಿರುಗಿ ಬೀಳುವುದು ನಮ್ಮ ಶಾಲೆಯಲ್ಲಿ ಸಾಮಾನ್ಯ ಸಮಸ್ಯೆ. ಇದಕ್ಕೆ ಹೆತ್ತವರು ಬಡವರಿರಬಹುದು ಪಾಪ ಎಂಬ ಅನುಕಂಪ ಬೇಡ. ಮನೆಯಿಂದ  ಬುತ್ತಿ ಕಟ್ಟಿ ಕೊಟ್ಟದ್ದನ್ನು ದಾರಿಯಲ್ಲೇ ಎಸೆದು ಬರುತ್ತಿದ್ದವರ ಸಂಖ್ಯೆಯೇ ಇದರಲ್ಲಿ ಹೆಚ್ಚಿದ್ದುದು.. ಇದಕ್ಕಿದ್ದ ದೊಡ್ಡ ಕಾರಣವೆಂದರೆ ಊಟ ಮಾಡಿಕೊಂಡು ಸಮಯ ಹಾಳು ಮಾಡಿ, ತಮ್ಮ ಆಟದ ಹೊತ್ತನ್ನು ಕಡಿಮೆ ಮಾಡಲು ಮನಸ್ಸಿಲ್ಲದಿದ್ದುದೇ ಆಗಿತ್ತು. 
ಇದನ್ನು ತಡೆಯಲು ಶಾಲೆಯಲ್ಲಿ ಆಗಾಗ ಶಿಕ್ಷಕರು ಕ್ಲಾಸಿನಲ್ಲಿ ಎಲ್ಲರ ಬುತ್ತಿಗಳನ್ನು ಪರಿಶೀಲಿಸಿ ತಾರದಿದ್ದ ಮಕ್ಕಳಿಗೆ ಕಠಿಣ ಶಿಕ್ಷೆ ವಿಧಿಸುವುದೂ ಜಾರಿಗೆ ಬಂತು. ನಾನು ಕೂಡಾ ಅಮ್ಮ ಕೊಟ್ಟ ಬುತ್ತಿಯನ್ನು ಮನೆಯಲ್ಲೇ ಮಂಚದ ಅಡಿಯಲ್ಲಿ ಅಡಗಿಸಿಟ್ಟೋ, ದೊಡ್ಡ ಸ್ಟೀಲ್ ಪಾತ್ರಗಳ  ಹಿಂದೆ  ಬಚ್ಚಿಟ್ಟು ಬರುವುದರಲ್ಲಿ ಪರಿಣತಿಯನ್ನು ಸಾಧಿಸಿದ್ದೆ. 

ತುಂಬಾ ದಿನಗಳಿಂದ ಬುತ್ತಿ ಪರಿಶೀಲನೆ ಇಲ್ಲದೆ ನಾವುಗಳೆಲ್ಲ ಮೊದಲಿನಂತೆ ಬುತ್ತಿ ತಾರದೇ ಬರುತ್ತಿದ್ದೆವು. ಆ ದಿನ ಕ್ಲಾಸಿಗೆ ಪಾಠ ಮಾಡಲು ಬಂದ ಸರ್ ' ಎಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು ಬುತ್ತಿ ತೋರಿಸಿ' ಅಂದರು. ನನ್ನ ಬುತ್ತಿ ಆ ದಿನ ಮನೆಯ ಮಂಚದಡಿಯಲ್ಲಿತ್ತು.  ಒಬ್ಬೊಬ್ಬರಾಗಿ ನಿಂತು ತಮ್ಮ ಬುತ್ತಿಯನ್ನು ಕೈಯಿಂದ  ಎತ್ತಿ ತೋರಿಸಿ ಅದರೊಳಗೆ ಏನಿದೆ ಎಂಬುದನ್ನು ಹೇಳಬೇಕಿತ್ತು. ಹೆಚ್ಚಿನವರು ಪೇಪರಿನಲ್ಲಿ ಸುರುಳಿ ಸುತ್ತಿದ ರೊಟ್ಟಿಯನ್ನು ತಂದಿದ್ದರು. ನನ್ನ ತಲೆಗೆ ಅದನ್ನು ನೋಡಿ ಉಪಾಯ ಹೊಳೆಯಿತು. ನಲ್ವತ್ತು ಪೇಜಿನ ಕಾಪಿ ಪುಸ್ತಕದ ಖಾಕಿ ಕಲರಿನ ಬೈಂಡ್  ತೆಗೆದು, ಪುಸ್ತಕವನ್ನು ಸುರುಳಿ ಸುತ್ತಿ ಅದರ ಹೊರಗೆ ಖಾಕಿ ಬೈಂಡನ್ನು ಸುತ್ತಿ ರೊಟ್ಟಿಯ ಸುರುಳಿಯಂತೆ ತಯಾರು ಮಾಡಿದೆ. ನನ್ನ ಸರದಿ ಬಂದಾಗ ರೊಟ್ಟಿ, ಗೆಂಡೆಕಾಳು ಗೈಪ್ಪು'(ಆಲೂಗಡ್ಡೆ ಬೀನ್ಸ್ ಕಾಳಿನ ಗಟ್ಟಿಯಾದ ಸಾಂಬಾರ್) ಎಂದೆ. ಬೀಸುವ ದೊಣ್ಣೆ ತಪ್ಪಿತ್ತು. 

ಅವರು ತುಂಬಾ ಸ್ಟ್ರಿಕ್ಟ್ ಎಂದೇ ಹೆಸರುವಾಸಿ. ಅವರ ಹತ್ತಿರ ನಿಂತು  ಮಾತನಾಡುವ ಧೈರ್ಯ ಯಾರೂ ಮಾಡುತ್ತಿರಲಿಲ್ಲ. ಜೀವಶಾಸ್ತ್ರ ಪಾಠ ಮಾಡುತ್ತಿದ್ದ ಅವರು ಪ್ರತಿ ಪಾಠದಿಂದ ಕಡಿಮೆ ಎಂದರೂ ಎಪ್ಪತ್ತು ಪ್ರಶ್ನೆಗಳನ್ನು ತಾವೇ ಸಿದ್ಧ ಮಾಡಿ ಕೊಡುತ್ತಿದ್ದರು. ಅದಕ್ಕೆಲ್ಲಾ ಉತ್ತರ ಬರೆಯುವುದೆಂದರೆ ಪಾಠ ಪುಸ್ತಕವನ್ನು ಇಡಿಯಾಗಿ ಓದಬೇಕಿತ್ತು. ಆ ಪ್ರಶ್ನೆಗಳನ್ನು ಅವರು ಶಾಲೆಯಲ್ಲಿ ಹೊಸತಾಗಿ ಬಂದ ಟೈಪ್ ರೈಟಿಂಗ್ ಮಿಷನ್ನಿನಲ್ಲಿ ಪ್ರಿಂಟ್ ಮಾಡಿಸುತ್ತಿದ್ದರು. ಒಂದು ಪಾಠ ಮುಗಿದ ಕೂಡಲೇ ಸಿದ್ಧಗೊಳ್ಳುತ್ತಿದ್ದ ಅದನ್ನು ನಾನು ಕ್ಲಾಸಿನಲ್ಲಿ ಓದಿ ಹೇಳಿ ಎಲ್ಲರೂ ಬರೆದುಕೊಳ್ಳುವಂತೆ ಮಾಡುತ್ತಿದ್ದೆ. ಆ ಹೊತ್ತಿನಲ್ಲಿ ಅವರು ಅದರಿಂದ ಮೊದಲು ಕೊಟ್ಟ ಪ್ರಶ್ನೆಗಳ ಉತ್ತರ ತಿದ್ದುತ್ತಿದ್ದರು.

ಆ ದಿನವೂ ಕೆಲವು ಪ್ರಶ್ನೆಗಳನ್ನು ಓದಿ ಹೇಳಿ ಆಗಿತ್ತು. ಇದ್ದಕ್ಕಿದ್ದಂತೇ ಕಂಡ ಪ್ರಶ್ನೆ ನೋಡಿ ನಗು ತಡೆಯಲಾಗಲಿಲ್ಲ. ನೋಟ್ಸ್ ತಿದ್ದುತ್ತಿದ್ದ ಅವರ ಹತ್ತಿರ ಹೋಗಿ ಇದನ್ನು ಜೋರಾಗಿ ಓದಿ ಎಂದೆ. " ಮಾನವನ ಮೂತ್ರ ಜನಕಾಂಗದ ಚಿತ್ರ ಬಿಡಿಸಿ ಭಾಗಗಳನ್ನು ಹೆಸರಿಸಿ" ಎಂದು ಓದಿದರು. ನಾನಿನ್ನೂ ಅಲ್ಲೇ ನಿಂತು ಸರಿಯಾಗಿ ಓದಿ ಎಂದೆ. ಮತ್ತೊಮ್ಮೆ ಕಣ್ಣಾಡಿಸಿ 'ಮಹಾ ತರಲೆ ಕಣಮ್ಮಾ ನೀನು ಎಂದು' ಅವರೂ ನಕ್ಕರು. 'ಮಾನವನ' ಎಂದಿರಬೇಕಾದಲ್ಲಿ 'ಮಾವನ' ಎಂದಿತ್ತು. 

ಶಾಲೆಯ ಒಂದು ಕವಾಟಿನ ಲೈಬ್ರರಿಯು ಮತ್ತಷ್ಟು ಕವಾಟುಗಳನ್ನು ಮರಿ ಹಾಕುವಲ್ಲಿ ಅವರ ಪುಸ್ತಕ ಪ್ರೀತಿ ಕೆಲಸ ಮಾಡಿತ್ತು. ಮೊದ ಮೊದಲು ಕವಾಟಿನೊಳಗೆ ಬಂಧಿಯಾಗಿದ್ದ ಪುಸ್ತಕ ಮಕ್ಕಳ ಕೈಗೆ ಯಾವಾಗ ಬೇಕೆಂದರಾವಾಗ ಮುಕ್ತವಾಗಿ ಸಿಗುವಂತೆ ಮಾಡಿದ ಪೊನ್ನಪ್ಪ ಸರ್.. 

ಉಪ್ಪಿನಕಾಯಿ  ಹಾಡು ಕಲಿಸಿದ ವೇದಾವತಿ ಟೀಚರ್..

ಹಿಂದಿ ಅಕ್ಷರಗಳನ್ನು ಚಿತ್ರಗಳೇನೋ ಎಂಬಂತೆ ನೋಡುತ್ತಿದ್ದ ನಮಗೆ ಹಿಂದಿ ಕಷಾಯವನ್ನು ಆರೆದು ಕುಡಿಸಿದ ಸರಸ್ವತಿ ಟೀಚರ್..

ಇಂಗ್ಲೀಷಿನ ಅಕ್ಷರಗಳನ್ನು ಝೆಡ್ ನಿಂದ  ಎ ಯವರೆಗೆ ಉಲ್ಟಾ ಬರೆಯಲು ಕೂಡಾ ಕಲಿಸಿದ ಪ್ರಸನ್ನ ಸರ್.. 

ನಾವು ಆನೆಮರಿ ಎಂದು ಅವರನ್ನು ಆಡಿಕೊಳ್ಳುವುದನ್ನು ತಿಳಿದಿದ್ದರೂ ಬೇಸರಿಸದೇ ರಸಾಯನ ಶಾಸ್ತ್ರವನ್ನು ಮಾವಿನಹಣ್ಣಿನ ರಸಾಯನದಂತೆ ಸಿಹಿಯಾಗಿ ಉಣಬಡಿಸಿದ ಕರುಣಾಕರ್ ಸರ್..

ಯಾರನ್ನು ನೆನೆದರೂ ಇವರು ನಮ್ಮ ಗುರುಗಳಾಗಿದ್ದರು ಎಂದು ಮನ ತುಂಬಿ ಬರುವಂತೆ ಮಾಡಿದವರಿಗೆಲ್ಲಾ ಈ ಶಿಷ್ಯೆಯ ಸಾಷ್ಟಾಂಗ  ಪ್ರಣಾಮಗಳು..

Tuesday, August 20, 2013

ಹಸಿರ ಹನಿಗಳು..





ಬಸ್ಸು ನನ್ನ ಬದಿಯಲ್ಲಿ ಬ್ರೇಕ್ ಹಾಕಿದರೂ ಹತ್ತಡಿ ದೂರದಲ್ಲಿ ನಿಂತಿತು. ಜೋರಾಗಿ ಸುರಿಯುತ್ತಿರುವ ಮಳೆ ಬಸ್ಸಿನ ಮೆಟ್ಟಲೇರುವವರೆಗೂ ಕೊಡೆ ಮಡಿಚಲು ಅವಕಾಶ ನೀಡಲಿಲ್ಲ. ಹೇಗೋ ಒಂದು ಕೈಯಲ್ಲಿ ಹಿಡಿದ ಕೊಡೆಯನ್ನು ಮಡುಚಿ ಬಸ್ಸಿನೊಳಗೆ ತೂರಿಕೊಂಡೆ. ನನ್ನ ಇನ್ನೊಂದು ಕೈಯಲ್ಲಿ ಬಗೆ ಬಗೆಯ ಹೂಗಿಡಗಳ ಗೆಲ್ಲಿನ ತುಂಡುಗಳ ದೊಡ್ಡ ಕಟ್ಟಿತ್ತು.ಅದು ಯಾರ ಕಣ್ಣು ಕೈಕಾಲುಗಳಿಗೆ ತಾಗದಂತೆ ಜಾಗ್ರತೆ ವಹಿಸುತ್ತಾ ಸೀಟಿಲ್ಲದ ಕಾರಣ ನಿಂತೇ ಇದೆ.ಕೆಲವರ ಕಾಲ ಬುಡದಲ್ಲಿ ಮತ್ತೆ ಕೆಲವರ ಕೊಡೆಯ ಒಳಗೆ, ಇನ್ನು ಕೆಲವರ ಮಡಿಲ ಮೇಲೆ ನನ್ನ ಕೈಯಲ್ಲಿದ್ದಂತೇ ಗಿಡಗಳ ಗೆಲ್ಲುಗಳು ರಾರಾಜಿಸುತ್ತಿದ್ದವು. ನನ್ನ ಕುತೂಹಲದ ಕಣ್ಣುಗಳು ಅವುಗಳ ಮೇಲೆ ಹರಿದಾಡಿದರೆ, ಅಲ್ಲೇ  ಪಕ್ಕದ ಸೀಟಿನಲ್ಲಿ ಕೂತ ಹೆಂಗಸೊಬ್ಬಳು ನನ್ನ ಕೈಯಲ್ಲಿದ್ದ ಗಿಡಗಳ ಕಟ್ಟನ್ನು ಎಳೆದು ತಿರುವಿ  ಮುರುವಿ  ನೋಡಿದಳು. 
'ಗುಲಾಬಿ ಯಾವ ಬಣ್ಣದ್ದು' ಅವಳ ಪ್ರಶ್ನೆ.
 "ಇದಾ.. ಇದು ಹಳದಿ, ಮತ್ತೊಂದು ಕೇಸರಿ.." 
"ಓಹ್.. ಹೌದಾ.. ಒಂದೊಂದೇ ಗೆಲ್ಲು ಇರೋದಾ?" ಅವಳ ಆಸೆಕಂಗಳ ಪ್ರಶ್ನೆ ಮರುಕಳಿಸಿತು. 
"ಕೆಲವು ಗಿಡಗಳು ಎರಡಿವೆ. ನೋಡಿ ಕೊಡ್ಬೇಕಷ್ಟೆ..ಆದ್ರೆ ಈಗ ಬಸ್ಸು ಹೋಗ್ತಾ ಇರುವಾಗ ತೆಗೀಯೋದು ಕಷ್ಟ" ಎಂದೆ ನಾನು. 
"ಅಯ್ಯೋ.. ಬನ್ನಿ ಬನ್ನಿ ನೀವಿಲ್ಲಿ ಕುಳಿತುಕೊಳ್ಳಿ.. ನಂಗೇನು.. ಸ್ವಲ್ಪ ದೂರದಲ್ಲಿ ಇಳಿಯೋದೇ.. ಅದ್ರ ಮೊದ್ಲು ಹುಡ್ಕಿ ಕೊಡಿ" ಎಂದು ಅವಳು ಕುಳಿತಲ್ಲಿಂದ ಎದ್ದು ನನಗೆ ಸೀಟ್ ಬಿಟ್ಟುಕೊಟ್ಟು ನನ್ನ ಕೈಯಿಂದ  ಬರುವ ಗಿಡದ ಗೆಲ್ಲಿಗಾಗಿ ಕಾಯುತ್ತಾ ನಿಂತಳು. ಅವಳ ಕೈಗೆ ನಾನಿತ್ತ ಗೆಲ್ಲನ್ನು ಅಮೂಲ್ಯ ನಿಧಿಯೇನೋ ಎಂಬಂತೆ ಹಿಡಿದುಕೊಂಡಳು. ಇಳಿಯುವಾಗ ನನ್ನೆಡೆಗೆ ತಿರುಗಿದ ಅವಳ ಮೊಗದಲ್ಲಿ ಏನನ್ನೋ ಗೆದ್ದಂತಹ ಸಂಭ್ರಮವಿತ್ತು.  

ಹಾಗಂತ ಹೀಗೆ ಗಿಡ ಹೊತ್ತುಕೊಂಡು ಹೋಗುವವರಲ್ಲೆಲ್ಲಾ ಸುಂದರ ಹೂತೋಟ ಇರುತ್ತದೆ ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಯಾಕೆ ಅಂತೀರಾ? ನಮ್ಮಲ್ಲಿಗೆ ನನ್ನ ದೂರದ ಅತ್ತೆಯೊಬ್ಬರು ಆಗೀಗ ಭೇಟಿ ನೀಡುತ್ತಾರೆ. ಅದೂ ಮಳೆಗಾಲದಲ್ಲಂತೂ ಬಂದೇ ಬರುತ್ತಾರೆ.ಗೇಟು ಸರಿಸುವಾಗಲೇ ಕೈಯಲ್ಲಿ ಗಿಡ ಕತ್ತರಿಸುವ ಹರಿತ ಕತ್ತರಿಯನ್ನು ಝಳಪಿಸುತ್ತಲೇ ಬಿಜಯಂಗೈಯುತ್ತಾರೆ. ಬಂದವರು ಮನೆಯ ಒಳಗೂ ಬಾರದೇ ನೇರವಾಗಿ ಹೂತೋಟಕ್ಕೆ ದಾಳಿ ಇಡುತ್ತಾರೆ. ತಮಗೆ ಬೇಕೆನಿಸಿದ್ದನ್ನೆಲ್ಲಾ ಇದೊಂದು ಗೆಲ್ಲು ತೆಗೊಳ್ತೇನೆ, ಅದ್ರದ್ದೊಂದು ಪಿಳ್ಳೆ ಬೇಕಿತ್ತು ಎಂದು ತುಂಬಿಕೊಳ್ಳುತ್ತಾರೆ. "ಇದು ಕಳ್ದ ಸರ್ತಿಯೂ ಕೊಟ್ಟಿದ್ದೆ ಅಲ್ವಾ.. ಅದೇನಾಯ್ತು" ಎಂದರೆ, "ಅದಾ.. ಅದು ಬದುಕ್ಲಿಲ್ಲ ಮಾರಾಯ್ತಿ . ದೊಡ್ಡ ಚಟ್ಟಿಯಲ್ಲಿ ಭರ್ತಿ ಗೊಬ್ಬರ ಹಾಕಿ ನೆಟ್ಟಿದ್ದೆ ಯಾರದೋ ಕಣ್ಣು ಮುಟ್ಟಿತೋ ಏನೋ .. ಸತ್ತೇಹೋಯ್ತು ನೋಡು. ನಂಗೆ ಬೇಸರವಾಗಿ ಮೂರು ದಿನ ಅನ್ನ ಸೇರ್ಲಿಲ್ಲ. ಆ ಚಟ್ಟಿಯಲ್ಲಿ ಬೇರೇನೂ ಗಿಡ ನೆಡ್ಲೇ ಇಲ್ಲ. ಹಾಗೇ ಇಟ್ಟಿದ್ದೀನಿ. ಇದನ್ನು ತೆಗೊಂಡು ಹೋದ ಕೂಡ್ಲೇ ಮೊದಲು ಅದರಲ್ಲಿ ನೆಟ್ಟಾಗಿಯೇ ನನ್ನ ಸೀರೆ ಬದಲಾಸುವುದು ನೋಡು" ಅಂತ ಬೀಷ್ಮ ಪ್ರತಿಜ್ಞೆ ಮಾಡುತ್ತಿದ್ದರು. ನಿಜವಾದ ಸಂಗತಿ ಏನೆಂದರೆ ಮನೆಗೆ ಹೋದ ಕೂಡಲೇ ಸಾಧಾರಣ ಧನಕ್ಕೆ ಹಾಕುವ ಹುಲ್ಲಿನ ಕಟ್ಟದಷ್ಟು ದೊಡ್ಡ ಇರುವ, ಸರಿಯಾಗಿ ನೆಡಲು ಕಡಿಮೆ ಎಂದರೂ ಅರ್ಧ ಎಕರೆ ಜಾಗ ಬೇಡುವ ಈ ಗಿಡಗಳ ಕಟ್ಟನ್ನು ತಮ್ಮ ಮನೆಯ ಟೆರೇಸಿನ ಮೆಟ್ಟಲುಗಳ ಹಿಂದೆ ಇಟ್ಟು ಬಿಡುತ್ತಿದ್ದರು. ಅದು ಮಳೆ ಬಂದರೆ ಕೊಳೆದೋ ಬಿಸಿಲು ಬಂದರೆ ಒಣಗಿಯೋ ಕಡ್ಡಿಯಂತಾಗಿ ಬಿಸಾಡಲು ಯೋಗ್ಯವಾಗುತ್ತಿದ್ದವು. ಹೂವಿನ ಚಟ್ಟಿಯನ್ನೇರುವ ಭಾಗ್ಯ ಬರುತ್ತಲೇ ಇರಲಿಲ್ಲ. ಹಾಗಾಗಿ ಇವರ ಮನೆಯ ಹೂಕುಂಡಗಳು ಸರಕಾರೀ ವನಮಹೋತ್ಸವದಲ್ಲಿ ಗಿಡ ನೆಟ್ಟ ಹೊಂಡಗಳಂತೆ ಸದಾ ಖಾಲಿಯಾಗಿ ನಳನಳಿಸುತ್ತಿದ್ದವು.

ಇನ್ನು ಕೆಲವರಿಗೆ ಮಳೆಗಾಲ ಬಂತೆಂದರೆ ತಮ್ಮ ಹೂದೋಟವನ್ನು ಗಿಡ ಬೇಡುವವರಿಂದ ಕಾಪಾಡುವ ಚಿಂತೆ. ಒಳ್ಳೆಯ ಜಾತಿಯ ಕಸಿ ಕಟ್ಟಿದ ಗಿಡಗಳನ್ನೆಲ್ಲಾ ಸಾವಿರಾರು ರೂಪಾಯಿ  ದುಡ್ಡು ನರ್ಸರಿಗೆ ಕೊಟ್ಟು ತಂದಿರುತ್ತಾರೆ. ಅದರ ಗೆಲ್ಲನ್ನು ಪಕ್ಕದವರು ಬಿಟ್ಟಿಯಾಗಿಯೇ ಗಿಡ ಮಾಡಿಕೊಳ್ಳುತ್ತಾರೆ ಎಂದು  ಹೊಟ್ಟೆ ನೋವು.  ಹಾಗೆಂದು ಎಲ್ಲರೂ ಹೀಗಿರುವುದಿಲ್ಲ ಬಿಡಿ. 

ನನ್ನ ಪರಿಚಯದವರೊಬ್ಬರಿಗೆ ತಮ್ಮ ಮನೆಯ ಎಲ್ಲಾ ಗಿಡಗಳನ್ನು ಇನ್ನೊಬ್ಬರಿಗೆ ಹಂಚುವುದೆಂದರೆ ಬಾರೀ ಸಂತಸ. ಒಮ್ಮೆ ಅವರಲ್ಲಿ ಅತೀ ಅಪುರೂಪದ ಬಣ್ಣದ ದಾಸವಾಳದ ಗಿಡವಿತ್ತು. ನನ್ನ ಕಣ್ಣುಗಳು ಅವುಗಳ ಮೇಲೇ ಇದ್ದುದನ್ನು ಕಂಡು ಸರಕ್ಕನೆ ಕತ್ತಿಂದ ಅದರ ಗೆಲ್ಲನ್ನೊಂದು ತುಂಡು ಮಾಡಿ ನನ್ನ ಕೈಯಲ್ಲಿಟ್ಟರು. "ಅಯ್ಯೋ.. ಯಾಕೆ ತುಂಡು ಮಾಡಿದಿರಿ? ಇದು ಕಸಿ ಗಿಡ ಅಲ್ವಾ ಗೆಲ್ಲು ಬದುಕುತ್ತಾ" ಅಂದೆ. "ಅರ್ರೇ.. ನೆಟ್ಟು ನೋಡು ಬದುಕುತ್ತಾ ಅಂತ. ಬದುಕದಿದ್ದರೆ ಸಾಯುತ್ತದೆ ಅಷ್ಟೇ. ತಲೆ ಬಿಸಿ ಮಾಡ್ಬೇಡ ಸತ್ರೆ ಅದಕ್ಕೆ ಬೊಜ್ಜ ತಿಥಿ ಎಲ್ಲಾ ಮಾಡುವ ಖರ್ಚೇನು ಇಲ್ಲ" ಅಂತ ತುಂಟ ನಗೆ ನಕ್ಕರು. "ಅಲ್ಲಾ ಹೀಗೆ ನೀವು ದುಡ್ಡು ಕೊಟ್ಟು ತಂದ ಗಿಡವನ್ನು ಎಲ್ಲರಿಗೂ ಕೊಡ್ತೀರಲ್ವಾ.. ನಿಮಗೇನು ಲಾಭ" ಅಂದೆ. 

"ಲಾಭ ನಷ್ಟ ಎಲ್ಲಾ ವ್ಯವಹಾರಗಳಲ್ಲಿರೋದು. ಗಿಡಗಳಿಗೆ ಕೇವಲ ಮಣ್ಣಿನ, ನೀರಿನ ನಂಟು. ಆದ್ರೂ ನಂಗೆ ಲಾಭ ಅಂತು ಇದ್ದೇ ಇದೆ. ನನ್ನ ಮನೆಯಲ್ಲಿ ಆ ಗಿಡ ಅಳಿದರೆ ನಾನು ಗಿಡ ಕೊಟ್ಟಿರುವ ಯಾರದ್ದಾದ್ರು ಮನೆಯಲ್ಲಿ ಇದ್ದೇ ಇರುತ್ತೆ. ಹೋಗಿ ಕೇಳಿದ್ರಾಯ್ತು. ಹತ್ತಿರದಲ್ಲೇ ಸಿಗುತ್ತದೆ.ಮತ್ತೆ ನಂಗೆ ಬೇಕು ಅನ್ನಿಸುವ ಯಾವ ಗಿಡ ಕೇಳಿದ್ರು  ಇಲ್ಲಾ ಅನ್ನುವ ಜನರೇ ಇಲ್ಲ. ನೆರೆ ಹೊರೆಯೊಡನೆ ನಮ್ಮ ಸಂಬಂಧಗಳು ಗಿಡಗಳ ನೆಪದಲ್ಲಿಹತ್ತಿರವಾಗುತ್ತವೆ. ಬೇಕು ಎನ್ನಿಸಿದಾಗ ಸಹಾಯದ ಕೈಗಳು ತಾನಾಗಿಯೇ ಚಾಚುತ್ತವೆ..ನಾನು ಗಿಡಗಳಿಗೆ ಕೊಟ್ಟ ಹಣಕ್ಕಿಂತ ಈ ಸಾಮರಸ್ಯದ ಮೌಲ್ಯ ಹೆಚ್ಚು ಅಂತ ಅನ್ನಿಸಲ್ವಾ ನಿಂಗೆ.." ಅಂದರು. ಅವರ ಮಾತಿಗೆ ನಾನು ತಲೆದೂಗಲೇ ಬೇಕಾಯ್ತು.

ಯಾರು ಏನೇ ಹೇಳಲಿ, ಏನೇ ಅಭಿಪ್ರಾಯ ವ್ಯಕ್ತಪಡಿಸಲಿ, ಮಳೆಗಾಲವಂತು ನಾನು ಯಾರ ಮನೆಗೆ ಹೋದರೂ ಒಂದೆರಡಾದರು ಗಿಡಗಳಿಲ್ಲದೇ ಖಾಲಿ ಕೈಯಲ್ಲಿ ಬಂದದ್ದೇ ಇಲ್ಲ.ಅಲ್ಲಿಲ್ಲಿಂದ ತಂದು ನೆಟ್ಟ ಗಿಡಗಳು ಚಿಗುರಿ ಹೂವೋ ಕಾಯೋ ಬಿಟ್ಟಾಗ ಮತ್ತೊಮ್ಮೆ ಗಿಡಗಳನ್ನು ಕೊಟ್ಟ ಮನೆಯವರ ನೆನಪೂ ಹಸಿರಾಗುತ್ತದೆ. ಗಿಡ ಗೆಳೆತನದ ಬೇರುಗಳೂ ಗಟ್ಟಿಯಾಗಿ ಹರಡಿ ಭದ್ರವಾಗುತ್ತವೆ. ಸುಲಭದಲ್ಲಿ ಮಧುರ ಬಾಂಧವ್ಯದ ಸೇತುವೆ ನಿರ್ಮಿಸುವ ಈ ಗಿಡಗಳ ಬಗೆಗೆ ನಂಗಂತೂ ತುಂಬಾ ಪ್ರೀತಿ..ನಿಮ್ಗೂ ಹಾಗೇ ಅನ್ನಿಸಿದ್ರೆ ಹೇಳಿ.. ನಿಮ್ಮನೆಗೆ ಯಾವಾಗ ಬರ್ಲಿ ಗಿಡ ಕೇಳ್ಳಿಕ್ಕೆ.. ??

Monday, June 10, 2013

ಎಲ್ಲಿ ಭೂರಮೆ..



ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ವನಸಿರಿ ಮಳೆ ಹನಿಗಳ ಮಾಲೆ ಧರಿಸಿ ಬೀಸಿ ಬರುವ ಗಾಳಿಯಲೆಗೆ ತೊನೆದಾಡುತ್ತಾ ನರ್ತಿಸುತ್ತಿದ್ದವು.ನಾವು ಸಾಗುತ್ತಿರುವ ಬೆಟ್ಟಗಳ ನಡುವಿನ ತಿರುವು ಮುರುವಿನ  ಹಾದಿ ಇದ್ಯಾವುದೂ  ತನಗೆ ಸಂಬಂಧವಿಲ್ಲ ಎನ್ನುವಂತೆ ಒದ್ದೆಯಾಗಿ  ತಣ್ಣಗೆ ಮಲಗಿತ್ತು.

 ಯಾವುದೇ ಎಚ್ಚರಿಕೆಯ ಸೂಚನೆಗಳಿಲ್ಲದಿದ್ದರೂ ವಾಹನದ ವೇಗ ತನ್ನಿಂದ ತಾನೇ ತಗ್ಗುತಿತ್ತು. ಕಣ್ಣು ಸರಿ ಇದ್ದರೂ ತಡಕಾಡುತ್ತಾ ಚಲಾಯಿಸುವಂತಾಗುತ್ತಿತ್ತು.ಕಣ್ಣಿನ ಎದುರು ಮಂಜಿನ ಲೋಕವೊಂದು ಪ್ರತ್ಯಕ್ಷವಾಗಿತ್ತು.



ನೆಲಕ್ಕೆ ಹೆಜ್ಜೆಯೂರಿ ನಿಂತಾಗ ತಣ್ಣನೆಯ ಅಲೆಯೊಂದು ನಮ್ಮನ್ನು ಸುತ್ತುವರಿಯಿತು. ಮಂಜಿನ ಪದರದೊಳಗೆ ಸಿಲುಕಿದ ನಾವು ನಮ್ಮ ಗುರುತು ಪರಿಚಯಗಳನ್ನು ಕಳೆದುಕೊಂಡು ವಿಶ್ವ ಮಾನವರಾದೆವು. ಹತ್ತಡಿ ದೂರದಲ್ಲಿ ನಿಂತರೂ ಕಣ್ಣಿಗೆ ಗೋಚರಿಸದೇ ಅದೃಶ್ಯ ಜೀವಿಗಳಾದೆವು.'ನಮಗೆ ನಾವು ಮಾತ್ರ ಬೇರಾರು ಇಲ್ಲ' ಎಂಬ ವೇದಾಂತವು ತಲೆಯೊಳಗೆ ನುಗ್ಗಿ ಸುಲಭವಾಗಿಯೇ ವೇದಾಂತಿಗಳಾದೆವು. ಪ್ರಕೃತಿಯ ಮಾಯಾಜಾಲದ ಬಲೆಯೊಳಗೆ ಸಿಲುಕಿ ಎಲ್ಲವನ್ನೂ ಮರೆತೆವು.

ಪುಟ್ಟದೊಂದು ಕೊಳ, ಅದರ ಹಿಂದೆ  ಕುಂಡಿಕೆ ಅಲ್ಲೇ ಸ್ವಲ್ಪ ಮೇಲ್ಬಾಗದಲ್ಲಿ ಎರಡು ದೇವರ ಗುಡಿಗಳು ಇದ್ದವು. ಒಂದು ಪಕ್ಕದಲ್ಲಿ ಪ್ರಪಾತವಿದ್ದರೆ ಇನ್ನೊಂದೆಡೆಯಲ್ಲಿ ಎತ್ತರದ ಗಿರಿಯಿತ್ತು. ಇದರರ್ಥ ನಾವು ಕೊಡಗಿನ ತಲಕಾವೇರಿಯ ಮಡಿಲನ್ನು ಸೇರಿದ್ದೇವೆ ಎಂದಾಗಿತ್ತು.


ಹೌದು ಇದು ಕಾವೇರಿಯ ಉಗಮ ಸ್ಥಳ. ಪುರಾಣ ಪ್ರಸಿದ್ಧ ಭೂಮಿ. ಲೋಪಾಮುದ್ರೆ ಲೋಕ ಕಲ್ಯಾಣಕ್ಕಾಗಿ ಅಗಸ್ತ್ಯನ  ಕಮಂಡಲದಿಂದ ಹೊರ ಬಂದು ಕಾವೇರಿಯಾಗಿ ಹರಿಯಲು ಮೊದಲಿಟ್ಟದ್ದು ಇಲ್ಲಿಂದಲೇ. ದಕ್ಷಿಣದ ಸುರಗಂಗೆ, ಬಿಂದು ಮಾತ್ರ ಪ್ರೋಕ್ಷಣೆಯಿಂದ  ಸರ್ವ ಪಾಪಗಳನ್ನು ನಿವಾರಿಸುವ ಶಕ್ತಿ ಹೊಂದಿದ ದೇವಿಯೆಂದೇ ಪೂಜಿಸಲ್ಪಡುವ ಕಾವೇರಿ ತಾಯಿಯ ತವರಿದು. ನೀರು ಸಕಲ ಚರಾಚರಗಳಿಗೂ ಮೂಲ . ಕೊಳೆಯನ್ನು ತೊಳೆಯುತ್ತದೆ. ಅನ್ನವನ್ನು ನೀಡುತ್ತದೆ.  ಇದರಿಂದಾಗಿ ಸಹಜವಾಗಿಯೇ ಪೂಜನೀಯವೆನಿಸುತ್ತದೆ. ಅದರಲ್ಲೂ ಪ್ರಕೃತಿಯ ಎಲ್ಲಾ ಸೌಂದರ್ಯವನ್ನು ಮನದಣಿಯೆ ಉಣಬಡಿಸುವ ತಾಣ ಪವಿತ್ರ ಕ್ಷೇತ್ರವೂ ಆಗಿದ್ದಾಗ ಮನಸ್ಸು ಅಲ್ಲಿಗೆಳೆಯುವುದರಲ್ಲಿ ಅಚ್ಚರಿಯೇನಿದೆ?

ಮುಂದೇನಿದೆ ಎಂಬ ಕುತೂಹಲವೇ.. ಬನ್ನಿ ನಮ್ಮೊಡನೆ..


ಎತ್ತರೆತ್ತರದ ಪರ್ವತಗಳಿಂದ ಸುತ್ತುವರಿದ ಈ ಸ್ಥಳ ಕೊಡಗಿನ ಪ್ರವಾಸಿಗಳ ಮುಖ್ಯ ಆಕರ್ಷಣೆ. ಪ್ರಕೃತಿಯ ನಡುವೆ ಕರಗಿ ಹೋಗಬೇಕೆನ್ನುವವರ ಕನಸಿನ ಅರಮನೆ.ಭಾಗಮಂಡಲದಿಂದ ಎಂಟು ಕಿಲೋ ಮೀಟರುಗಳ ಅಂತರದಲ್ಲಿರುವ ತಲಕಾವೇರಿ ಪ್ರವಾಸಿಗಳ ಸ್ವರ್ಗ. 


ಕಾವೇರಿ ಕುಂಡಿಕೆಯನ್ನೊಳಗೊಂಡ ಪುಟ್ಟದೇಗುಲ.ಎದುರಿಗೊಂದು ಕೊಳ. ಅದರ  ತಣ್ಣಗಿನ  ನೀರಲ್ಲಿ ಮುಳುಗೇಳುವುದೂ ಅದ್ಭುತ ಅನುಭವ.ಅಲ್ಲೇ ಮೇಲ್ಬಾಗದಲ್ಲಿ ಗಣಪತಿ ಮತ್ತು ಅಗಸ್ತೇಶ್ವರನ ಗುಡಿ. ಅದರ ಪಕ್ಕದಲ್ಲಿರುವ ಮೆಟ್ಟಿಲುಗಳು ನಿಮ್ಮನ್ನು ಬ್ರಹ್ಮಗಿರಿಯನ್ನೇರಿಸುತ್ತವೆ. 



 ಮೇಲೇರಿ ಸುತ್ತ ಕಣ್ಣು ಹಾಯಿಸಿದರೆ ಅಲೆ ಅಲೆಯಾಗಿ ಪರ್ವತಗಳು ಕಾಣಿಸುತ್ತವೆ. ಸುಮ್ಮನೆ ನಿಂತಲ್ಲಿಂದಲೇ ಒಂದು ಸುತ್ತು ತಿರುಗಿ. ನೀವೊಂದು ಹಸಿರಿನ ಬೆಟ್ಟಗಳ ಗೋಲದೊಳಗೆ ಕುಳಿತಂತೆ ಅನುಭವವಾಗುತ್ತದೆ. ನಿಮ್ಮಿಂದ ತಗ್ಗಿನಲ್ಲಿ  ಕೆಳಗೆ ಮೋಡಗಳು ಲಾಸ್ಯವಾಡುತ್ತಾ ಸಂಚರಿಸುವುದು ಕಾಣುತ್ತದೆ. ಇದ್ದಕ್ಕಿದ್ದಂತೆ ಮೋಡಗಳು ನಿಮ್ಮನ್ನು ಆವರಿಸಿ ಮುಚ್ಚಿ ಬಿಡಬಹುದು.ಅರಸಿಕ ಮನಸ್ಸೂ ಇಲ್ಲಿ ಕವಿಯಾಗಬಹುದು. ಭಾವುಕ ಮನಸ್ಸು ಮೌನವಾಗಬಹುದು. 


ಹೊತ್ತು ತಾನಾಗಿಯೇ ಕರಗುತ್ತದೆ.  ಕಾಲವೆಂಬುದನ್ನು ಸ್ಥಗಿತಗೊಳಿಸಿ ಇಲ್ಲೇ ಉಳಿಯುವ ಮನ ನಿಮ್ಮದಾಗುತ್ತದೆ.ಮತ್ತೊಮ್ಮೆ ಬರುವ ಪ್ರತಿಜ್ಞೆ ಮಾಡಿಯೇ ಕುಳಿತಲ್ಲಿಂದ ಏಳುತ್ತೀರಿ. ಮನಸ್ಸು ನಿಮಗರಿವಿಲ್ಲದೇ


 ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲೆ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ  ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ
ಅಲ್ಲಿ ಆ ಕಡೆ ನೋಡಲಾ
ಅಲ್ಲಿ ಕೊಡವರ ನಾಡಲಾ
ಅಲ್ಲಿ ಕೊಡವರ ಬೀಡಲಾ
ಎಂಬ ಪಂಜೆಯವರ ಹಾಡನ್ನು ಗುಣುಗುಣಿಸತೊಡಗುತ್ತದೆ.






Tuesday, April 2, 2013

ಅಕ್ಕಿ ಆರಿಸುವಾಗ .......

ಅವಳದೋ ಧ್ಯಾನಸ್ಥ ಭಾವ. ಕಾಣದಿರುವುದನ್ನೇ ಕಾಣುವ ಹಂಬಲ. ಸಿಗದಿದ್ದಾಗ ಚಡಪಡಿಕೆ, ಆ  ಹುಡುಕಾಟದ ಅರಿವು  ಅವಳ ಬೆರಳುಗಳಿಗೆ ಗೊತ್ತಿತ್ತು,ಕಣ್ಣುಗಳಿಗೆ ಗೊತ್ತಿತ್ತು, ಉಣ್ಣುವ ಬಾಯಿಗಳಿಗೆ ಗೊತ್ತಿತ್ತು. ಅವಳಿಗೂ ನಿರಾಳತೆಯಿತ್ತು.  


ಮೊರದ ತುಂಬಾ ಇದ್ದ   ಬಿಳಿ ಅಕ್ಕಿ ದೂರ ನಿಂತವರಿಗೆ ಕಾಣುತ್ತಿತ್ತು. ಆದರೆ ಅವಳ ಕಣ್ಣುಗಳಿಗೆ ಅದು ಕೇವಲ ಬಿಳಿ ಹಾಸು.ಆ ನೋಟಕ್ಕೆ  ಅದು ಬೇಕಿರಲಿಲ್ಲ. . ಮತ್ತೇನೋ ಇದೆ ಎಂಬುದರ ಹುಡುಕಾಟದಲ್ಲಿ ಕಳೆಯುತ್ತಿದ್ದ ಸಮಯ. 

 ಬತ್ತ, ಕಲ್ಲು, ಹೊಟ್ಟು.. ಅಲ್ಲೆಲ್ಲೋ ಇತ್ತದು ಬೆಳ್ಳನೆಯ ಅಕ್ಕಿಯ ಮರೆಯಲ್ಲಿ.. ಕಾಣದುಳಿದೀತೇ..?? ಕಣ್ಣು ಬಯಸಿದ್ದು ಸಿಕ್ಕಾಗ ಕೈಗೆ ಅವಸರ. ಮೊಗದಲ್ಲಿ ಕಿರುನಗು.ಎಲ್ಲಿ ಅಡಗಿದರೂ  ಕಂಡು ಹಿಡಿದೆ ನಿನ್ನನ್ನು ಎಂಬ ಗೆಲುವಿನ ಭಾವ. ಸಿಕ್ಕಿದ್ದನ್ನು ಅಲ್ಲೇ ಪಕ್ಕದಲ್ಲಿರಿಸಿ ನೋಡುವ ಚಪಲ. 

 ಮತ್ತೊಮ್ಮೆ ಕಣ್ಣಿಗೆ ಕಂಡದ್ದು ಕೈಯಿಂದ ಜಾರಿ ಹೋದಾಗ ನಿರಾಶೆ. ಒಮ್ಮೆ ಜಾರಿದ್ದು ಕೂಡಾ ಹಾಗೆ ಸುಲಭದಲ್ಲಿ ಸಿಕ್ಕೀತೇ.. ಸಿಕ್ಕಿದರೂ ಇದಲ್ಲವೇನೋ..ಅದಿನ್ನೂ ಕೈಗೆ ಸಿಗಲಿಲ್ಲವೇನೋ ಎಂಬ ಒದ್ದಾಟ.. ಬೆರಳುಗಳ ಪಟ್ಟಿನಿಂದ ನುಣುಚಿ ಬೀಳುವ ಅವುಗಳ ಮೇಲೇನೋ ದ್ವೇಷ.. 

ಸಿಕ್ಕಿದ್ದನ್ನು ಹೆಕ್ಕಿದರೆ ಸಾಕೇ.. ಅಕ್ಕಿಯನ್ನು ಗಾಳಿಗೆತ್ತರಿಸಿ ಮತ್ತೆ ಮೊರದಲ್ಲಿ ತುಂಬಿಕೊಳ್ಳುವ ಆಟದಲ್ಲಿ ಕಳೆದುಹೋಗುವುದು ಒಂದಿಷ್ಟು ಪುಡಿ ದೂಳು..

 ಬೇಡದಿದ್ದುದನ್ನು ಆರಿಸಿ ಹೊರಚೆಲ್ಲುವುದೂ ಕಠಿಣ. ಬೇಕಿದ್ದದ್ದು ಮೊದಲು ಅದರೊಳಗೇ ಇತ್ತಲ್ಲ.. ಅದರಿಂದ ಹೊರ ಬಂದ ಮೇಲೆ ಒನಕೆಯ ಪೆಟ್ಟಿಗೆ  ಸಿಕ್ಕದೇ ಉಳಿದ ಅದೇ ಬತ್ತ ಈಗ ಬೇಡವಾಗಿದ್ದುದು... ಅಕ್ಕಿಯಿಂದ ಹೊರಹಾಕಬೇಕಿದ್ದುದು.  ಆ ಪೆಟ್ಟು ನೀಡುವ ನೋವಿನಿಂದ ಪಾರಾಗಿದ್ದೇ ಸುಖ ಅಂದುಕೊಂಡಿದ್ದರೆ, ಅದು ಸುಖವಾಗಿರಲೇ ಇಲ್ಲ ಎಂದು ತಿಳಿದಿದ್ದು ಈಗಲೇ..  

ಕೆಲಸ ಮುಗಿದಿತ್ತು..  ಅವಳ ಮನವೀಗ ಸ್ವತಂತ್ರ..ಕಣ್ಣುಗಳೀಗ ನಿಶ್ಚಿಂತ.. ಹೀಗೊಂದು ಧ್ಯಾನದ ಅಂತ್ಯ.. 




Friday, January 25, 2013

ಒಂದು ಬೆರಗು ..









ಎದ್ದವಳೇ ಹೊರಗಿಣುಕಿದೆ. ಕಣ್ಣು ಹೊಸಕಿ ಎರಡೆರಡು ಸಲ ನೋಡಿದೆ. ಇಲ್ಲಾ.. ಏನೂ ಕಾಣಿಸುತ್ತಿಲ್ಲ. ಮನೆಯ ಮುಂದಿದ್ದ ಅಂಗಳ, ಅದರಾಚೆಯ ಮಾವಿನ ಮರಗಳು, ಬದಿಯಲ್ಲಿ ಹಬ್ಬಿದ್ದ ಮಲ್ಲಿಗೆ ಗುಲಾಬಿ ಹೂತೋಟ, ನಂತರದ ಕಾಲು ಹಾದಿ, ಫಸಲು ಹೊತ್ತಿರುವ ತೆಂಗಿನಮರಗಳ ನೋಟ.. ಒಂದೂ ಇಲ್ಲ.   ನನ್ನ ಕಣ್ಣಿಗೆ ಏನಾದರೂ ಆಗಿದೆಯೇ.. ಉಹುಂ.. ಹಾಗೇನಿಲ್ಲ.. ಮನೆಯೊಳಗೆ ಎಲ್ಲಾ ಚೆನ್ನಾಗಿ ಕಾಣುತ್ತಿದೆ. ಇದ್ದಕ್ಕಿದ್ದಂತೆ ನಿಶ್ಚಲವಾಗಿ ನಿಂತಿದ್ದ ಎಲ್ಲವನ್ನೂ ಯಾವ ಮಾಯೆ ಹೊತ್ತೊಯ್ದಿತು..!! 


ಅದರಿಂದಲೂ ದೊಡ್ಡ ಪ್ರಶ್ನೆ ಅದೆಲ್ಲ ಇಲ್ಲದೆ ಬರಡು ಬದುಕು ಬದುಕಲು ಸಾಧ್ಯವೇ..? ಮಾವಿನ ಮರಗಳು ದಿನಾ ಅಂಗಳಕ್ಕೆ ಉದುರಿಸುತ್ತಿದ್ದ ಎಲೆಗಳನ್ನು ಅವುಗಳಿಗೆ ಬಯ್ದುಕೊಳ್ಳುತ್ತಲೇ ಗುಡಿಸಿ ಎಸೆದರೂ, ಮನೆಯ ಎದುರು ಆಚೀಚೆ ಕಾವಲುಗಾರರಂತೆ ನಿಂದ ಅದರ ಎತ್ತರದ ನಿಲುವಿಗೆ, ಅದರ ಮೇಲಿದ್ದ ಹಕ್ಕಿಗಳ ಚೆಲುವಿಗೆ ಮಾರು ಹೋಗುವ ಮನ. 

ಗುಲಾಬಿಯ ಚುಚ್ಚುವ ಮುಳ್ಳು ಎಷ್ಟು ಸಲ ರಕ್ತ ಹೀರಿದರೂ ಪರಿಮಳಿಸಿ ನಗುವ ಹೂವಿನೆಡೆಗೆ ಹರಿವ ಪ್ರೀತಿ..  ಆಧಾರ ಗೂಟದ ಮೇಲೇರಬೇಕಿದ್ದ ಮಲ್ಲಿಗೆ ಬಳ್ಳಿ ನಿಯಮ ತಪ್ಪಿಸಿ ನೆಲದಲ್ಲಿ ಹರಿದಾಡಿ ಕಾಲಿಗೆ ಸಿಕ್ಕಿಕೊಂಡರೂ ಮೆಲ್ಲನೆತ್ತಿ ಮೇಲೇರಿಸುವ ಹಠ.. 


ಒಣಗಿದ ಎಲೆಗಳ ಹಾಸಿಗೆಯ ಮೇಲೆ ಚರ ಪರ ಸದ್ದು ಮಾಡುತ್ತಾ ಯಾರೋ ಬರುತ್ತಿದ್ದಾರೆ ಎಂಬ ಸುಳುಹನ್ನು ಮೊದಲೇ ಬಿಟ್ಟು ಕೊಡುವ ಕಾಲು ಹಾದಿ, ತಂಪಾದ ನೆರಳು ನೀಡುತ್ತಾ  ಹಿತವಾದ ಗಾಳಿಗೆ ಓಲಾಡುತ್ತಾ ಇರುವ ತೆಂಗಿನ ಮರಗಳ ಲಾಸ್ಯ.. ಎಲ್ಲವೂ ರಾತ್ರಿ ಕಳೆಯುವುದರೊಳಗೆ ಹೀಗೆ ಮರೆಯಾಗಬಹುದು ಒಂದು ದಿನ ಎಂಬ ಕಲ್ಪನೆಯೇ ಇರಲಿಲ್ಲ.. ಯಾರಾದರು ಹೇಳಿದರೂ ನಂಬಿಕೆ ಹುಟ್ಟುತ್ತಿರಲಿಲ್ಲ.. 


ಮನೆಯ ಮುಖ ಮಂಟಪದ ಗೇಟನ್ನು ಸದ್ದಿಲ್ಲದೆ ಸರಿಸಿ, ಎದುರಿನ ಅಂಗಳಕ್ಕೆ ಬರಿಗಾಲಲ್ಲಿ ಇಳಿದೆ. ಮತ್ತೆ ನಾಲ್ಕು ಹೆಜ್ಜೆ ಹಾಕಿದ್ದೆನಷ್ಟೇ.. ಏನೋ ಅಸ್ಪಷ್ಟವಾಗಿ ನನ್ನೆದುರು ಎತ್ತರಕ್ಕೆ ನಿಂತಿತ್ತು. ನಡೆಯುತ್ತಿದ್ದಂತೇ ಮಾಮರದ ರೆಂಬೆ ಕೊಂಬೆಗಳೆಲ್ಲಾ ವಿವರವಾಗಿ ಕಾಣಿಸಿದವು. ಕಾಲು ಹಾದಿ ಇನ್ನೂ ಅಲ್ಲೇ  ತಣ್ಣಗೆ ಮಲಗಿತ್ತು. ಹೂಗಳು ಮೆಲ್ಲನೆ ಮೈಮುರಿದು ಏಳುವ ತಯಾರಿಯಲ್ಲಿದ್ದವು. ಅದರಾಚೆಯ ಎಲ್ಲವೂ ನನ್ನ ಹೆಜ್ಜೆಗಳು ಸಾಗುತ್ತಿದ್ದಂತೆ ನಿಚ್ಚಳವಾಗತೊಡಗಿದವು.. ಅಬ್ಬಾ.. ಎಲ್ಲವೂ ಇದ್ದಲ್ಲೇ ಇದೆ.. ಎಂದಿನಂತೆ.. 


ಮರಳುತ್ತಿದ್ದ ನನಗೆ ಇವರ ಧ್ವನಿ ಕೇಳಿಸಿತು.  "ಇಷ್ಟೊಂದು ಇಬ್ಬನಿ ಎಂದೂ ಬಿದ್ದಿರಲಿಲ್ಲ.. ನಿನ್ನ ಗೆಜ್ಜೆ ಸದ್ದು ಹತ್ತಿರ ಬಂದರೂ ನೀನು ಕಾಣಿಸಲಿಲ್ಲ.. !!