Pages

Total Visitors

Sunday, November 25, 2012

ಪೂತನಿ


ನನ್ನ ಹೆಸರೇನೆಂದು ಕೇಳಿದಿರಾ..ಸೌಂದರ್ಯಕ್ಕೆ ಇನ್ನೊಂದು ಹೆಸರೇ ನಾನು .. ಹಾಗಾಗಿಯೇ ಕಂಸ ಮಹಾರಾಜನ ಊಳಿಗದವಳಾದರೂ ನನಗಿಷ್ಟು ಮರ್ಯಾದೆ.. ನನ್ನನ್ನು ಹೆಸರೆತ್ತಿ ಕರೆಯುವ ಧಾರ್ಷ್ಟ್ಯ ಯಾರಿಗಿದ್ದೀತು..?! 

ಮಹಾರಾಜನಿಗೆ ನಾನೆಂದರೆ ಅತೀವ ಪ್ರೀತಿ.. ಅವನ ಆಪ್ತರಲ್ಲಿ ಆಪ್ತಳು ನಾನು. ಈಗೇಕೋ ಕಂದಿದ ಅವನ ಮೊಗದಲ್ಲಿ ಮೊದಲಿನ ಗೆಲುವಿಲ್ಲ.. ರಾಜರೆಂದರೆ ಹಾಗೆ, ಬಗಲಲ್ಲೇ ಚುಚ್ಚುವ ಚೂರಿ.. ನೂಲಿನ ಏಣಿಯಲ್ಲೇ ನಡಿಗೆ.. ಒಂದಿಷ್ಟು ಎಚ್ಚರ ತಪ್ಪಿದರೂ ಮತ್ತೆ ಅವನಿಲ್ಲ. ಸಿಂಹಾಸನಕ್ಕೇನು? ಅದು ಜಢ ವಸ್ತು ತಾನೇ.. ಯಾರು ತನ್ನನ್ನೇರಿದರೂ ಕೂರಲು ಅನುವೀಯುತ್ತದೆ. ಈ ತೂಕ ತಪ್ಪಿದ ರಾಜಕಾರಣದಲ್ಲಿ ನಾನೂ ಒಂದು ಭಾಗ.. ಎಷ್ಟೋ ಜನ ವೀರಾಧಿವೀರರನ್ನು ನನ್ನ ಸೊಬಗಿನರಮನೆಯಲ್ಲಿ ಬಂಧಿಸಿ ಮೇಲಿನ ಲೋಕಕ್ಕೆ ಕಳುಹಿಸಿದವಳು ನಾನು.. ನನ್ನ ಈ ಸೊಬಗು , ಈ ವಿಲಾಸ, ಈ ಲಾಸ್ಯ ಇರುವುದೆಲ್ಲ ಬಾಹ್ಯ ನೋಟದ ನಿಲುಮೆ. ನನ್ನನ್ನು ಅಪ್ಪಿಕೊಳ್ಳುವುದೂ, ಒಪ್ಪಿಕೊಳ್ಳುವುದೂ ಯಾರಿಂದಲೂ ಸಾಧ್ಯವಿಲ್ಲ.. ಯಾಕೆ ಗೊತ್ತೇ.. ನಾನು ವಿಷಕನ್ಯೆ.. 'ಪೂತನಿ'. 

ಎಲ್ಲಾ ರಕ್ಕಸಿಯರಿಗೂ ಹೊರಗಿನಿಂದ ಘೋರರೂಪವಾದರೆ, ನಾನು ಒಳಗೇ ಕ್ರೂರತೆಯನ್ನು ಧರಿಸಿದವಳು..! ನನಗಾಗಿಯಲ್ಲ.. ನನ್ನೊಡೆಯನಿಗಾಗಿ ! 

ಇಂದು ಮತ್ತೆ ಕರೆ ಬಂದಿದೆ ಅರಸನಿಂದ.. ಅದೂ ಅತಿ ರಹಸ್ಯವಾಗಿ.. ಅಂದರೆ ಯಾರೋ ಯಮನಾಲಯಕ್ಕೆ ತೆರಳುವ ಆತುರದಲ್ಲಿ  ಇದ್ದಾರೆ ಎಂದೇ ಅರ್ಥ. ನನಗೂ ಈ ಕೊಲ್ಲುವ ಆಟ ಈ ವಿನೋದವೆನಿಸುತ್ತದೆ. ಸುಂದರ ಜಿಂಕೆ ಎಂದುಕೊಂಡು ನನ್ನೆಡೆಗೆ ತಮ್ಮೆಲ್ಲ ವ್ಯಾಘ್ರ ಕಾಮನೆಯನ್ನು ಹರಿಯಬಿಡುವಾಗ ಹರಿಣವೇ ಹುಲಿಯಾಗಿ ಅವರನ್ನು ಬೇಟೆ ಆಡುವುದೆಂದರೆ..  ಅಧರ ಮಧುವನ್ನು ಅಮೃತವೆಂದೇ ತಿಳಿದು ಕುಡಿಯುವ ಆತುರದಲ್ಲಿರುವಾಗಲೇ ಅವನು ಈ ಲೋಕ ತೊರೆದು ಸುರಕನ್ನೆಯರ ತೋಳ್ತೆಕ್ಕೆ ಸೇರಿ ಆಗಿರುತ್ತದೆ.
.. ಆಹಾ ಎಂತಹ ಸುಖ.. ಹೌದೂ.. ಸುಖವೆಂದರೆ ಇದುವೆಯೇ..? ನಿಜವಾಗಿಯೂ ನಾನು ಈ ಆಟದಲ್ಲಿ ಅಷ್ಟು ಸುಖ ಕಾಣುತ್ತಿದ್ದೇನೆಯೇ..? ಸುಖ ಕೊಟ್ಟು ತೆಗೆದುಕೊಳ್ಳುವುದರಲ್ಲಿ ಇರುತ್ತದಂತೆ.. ನಾನು ಕೊಡುವುದನ್ನು ಸ್ವೀಕರಿಸುವವನು ಅರೆಕ್ಷಣದಲ್ಲಿ ಜೀವ ಕಳೆದುಕೊಳ್ಳುತ್ತಾನೆಂದರೆ ನಾನು ಕೊಡುವುದೇನನ್ನು..!!
ಹುಂ.. ಈ ಬಾರಿ ಯಾರ ಸರದಿಯೋ.. ಯಾರಾದರೇನು ನನ್ನನ್ನು ಕೂಡಿದ ಮೇಲೆ ಇಲ್ಲವಾಗುತ್ತಾನೆ.. 

ಕಂಸನರಮನೆಗೆ ಹೋಗುವುದೇನೋ ಸರಿ.. ಶೃಂಗಾರ ಬೇಡವೇ..ಯಾರಲ್ಲಿ.. ದಾಸಿ.. ಈ ಜೊಂಪೆ ಕೂದಲ್ಲನ್ನಿಷ್ಟು ಎತ್ತಿ ಕಟ್ಟು.. ಅದೋ ಅಲ್ಲಿ ಅರಳಿ ಪರಿಮಳಿಸುವ ಹೂವನ್ನು ನನ್ನ ತುರುಬಿಗೆ ಮುಡಿಸು.. ಹೂಂ.. ಅರೇ ಇದೇನಿದು.. ಹೂವು ನನ್ನ ಸಂಪರ್ಕಕ್ಕೆ ಬಂದೊಡನೆ ಬಾಡಿ ಬಸವಳಿಯುತ್ತದೆ.. ಥತ್.. ಬಿಸುಡಾಚೆ.. ಇಲ್ಲವೇ ಅಲ್ಲಿ ಮುತ್ತು ರತ್ನ ಹವಳದಾಭರಣಗಳು.. ತೂಗಿಬಿಡು ನನ್ನ ಹೆರಳಲ್ಲಿ.. ಹೊಳೆಯಲಿ ನಕ್ಷತ್ರದಂತೆ.. ನೋಡೇ ಇಲ್ಲಿ .. ಈ ಸುಕ್ಕಾದ ಸೆರಗನ್ನಿಷ್ಟು ಸರಿ ಪಡಿಸು.. ಈ ಕಣ್ಣ ಕಾಡಿಗೆ ತುಸು ಹೆಚ್ಚೆನಿಸುತ್ತಿದೆ.. ಸ್ವಲ್ಪ ತೆಗೆದು ಬಿಡೇ.. ಅದೇಕೆ ಅಷ್ಟು ದೂರದಲ್ಲಿ ನಿಂತಿದ್ದೀಯ.. ಓಹೋ .. ನಿನಗೂ ಜೀವಭಯ .. ಹ್ಹ ಹ್ಹ .. ಹೋಗು ನನ್ನೆದುರು ನಿಲ್ಲಬೇಡ.. ತೊಲಗಾಚೆ .. 

 ಕನ್ನಡಿಯಲ್ಲಿರುವ ನನ್ನ ಬಿಂಭ ಅದೆಷ್ಟು ಮನೋಹರ.. ನೋಡುತ್ತಲೇ ಇರುವಾಸೆ.. ಓಹ್.. ಅರಸನ ಅಪ್ಪಣೆ ಅವಸರದ್ದೇ ಇದ್ದಿತ್ತಲ್ಲವೇ.. 

ಇಂದವನು ಹೇಳಿದ್ದೇನು.. ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಅರಸನ ಮೃತ್ಯುರೂಪಿ ಶಿಶು ಬೃಂದಾವನದಲ್ಲಿ ಬೆಳೆಯುತ್ತಿದೆಯಂತೆ.. ಎಷ್ಟು ಸಮಯವಾಯ್ತು ಈ ಸುದ್ಧಿ ತಿಳಿಯಲು.. ಅಂದೊಮ್ಮೆ ಆ ಹೊತ್ತಿನಲ್ಲಿ ಜನಿಸಿದ್ದ ಕಂಡ ಕಂಡ ಶಿಶುಗಳನ್ನೆಲ್ಲ  ವಿಷವೂಡಿ ಕೊಂದಿದ್ದೆ.. ನನ್ನ ಹಾಲಿನಿಂದ ಎಷ್ಟು ವಂಶಗಳು ನಿರ್ನಾಮವಾದವೇನೋ..? ಲೆಕ್ಕವಿಟ್ಟವರಾರು.. ನಾನು ಅರಸನ ಆಯುಧ.. ಆಯುಧಕ್ಕೆ ಪಾಪ ಪುಣ್ಯಗಳ ಚಿಂತೆಯೇಕೆ..

ನಾನು ಮೆಟ್ಟಿದ ಮಣ್ಣೀಗ ಹೊಸ ಊರಿನದ್ದು.. ಅರೇ.. ಎಂತಹ ಸುಂದರ ನಗರಿಯಿದು..ಎಲ್ಲೆಲ್ಲಿಯೂ ಹಸಿರುಟ್ಟ ಭೂಸಿರಿ.. ಗೋವುಗಳ ಕೊರಳ ಘಂಟೆಯುಲಿ.. ಆಹಾ ಮರುಳಾಗುತಿದ್ದೇನೆ.. ಹಾಡಿ ಕುಣಿಯುವ ಇಲ್ಲಿನ ಜನರೆಲ್ಲ ಎಂತಹ ಸೊಬಗನ್ನು ಹೊತ್ತಿದ್ದಾರೆ..!! ನನಗರಿವಿಲ್ಲದ ಸಂಚಲನ ಎದೆಯೊಳಗೆ.. ಏನಿರಬಹುದು.. ?? 

ಹುಂ.. ಇರುವುದೇನು.. ನನ್ನರಸನ ವೈರಿ ಇಲ್ಲೇ ಎಲ್ಲೋ ಅಡಗಿದ್ದಾನೆ.. ಹುಡುಕಬೇಕವನ.. 

ಅದೋ ಅಲ್ಲಿ ಹೆಂಗಳೆಯರ ಗುಂಪು ಹಾಲ ಕೊಡವನ್ನು ತುಳುಕಿಸುತ್ತಾ ಹೋಗುತ್ತಿರುವುದೆಲ್ಲಿಗೆ.. ಹಿಂಬಾಲಿಸಿದರೆ ತಿಳಿದೀತು.. ಹೋ.. ಇವರೆಲ್ಲರ ಗಮನವೂ ಅತ್ತ ಕಡೆಗೆ .. ನಂದನರಮನೆಗೆ.. ನನ್ನ ಗಮ್ಯವೂ ಅದೇ ತಾನೇ.. ತೊಟ್ಟಿಲಿನಲ್ಲಿ ಮಲಗಿ ಕನಸು ಕಾಣುತ್ತಿರಬಹುದು ಅ ಮಗು.. ಪಾಪ ಇನ್ನೆಷ್ಟು ಹೊತ್ತಿದೆ ಅವನಿಗೆ ಭುವಿಯ ಋಣ..

ಗುಂಪಿನೊಳಗೊಂದಾಗಿ ಮನೆಯನ್ನು ಸೇರುವುದೇ ಒಳ್ಳೆಯದು.. ಅಬ್ಬಬ್ಬಾ ತೊಟ್ಟಿಲಿನ ಸುತ್ತ ಅದೆಷ್ಟು ಹೆಂಗಳೆಯರು.. ಇದೇ ಮಗುವಿರಬೇಕು.. ಛೇ.. ಒಂದಿಷ್ಟು ಮುಖ ದರ್ಶನವಾಗಬಾರದೇ..? ಬಂಗಾರದ ತೊಟ್ಟಿಲಲ್ಲಿ ಮಲಗಿದ ಶಿಶುವಿನ ಕೇಕೆ ಕೇಳಿಸುತ್ತಿದೆ.. ಆಹಾ.. ಸಂಗೀತದಿಂಪು.. 

ಅಬ್ಬಬ್ಬಾ .. ಎಂತಹ ಚೆಲುವಿದು.. ಮೋಹಕ ಮುಂಗುರುಳು.. ಅತ್ತಿತ್ತ ಮಿಂಚನ್ನೆಸೆಯುತ್ತಾ ಸುಳಿವ ಕಣ್ಣುಗಳು.. ಹೂದಳಗಳಂತಿರುವ ತುಟಿಗಳು.. ಯಾವ ಶಿಲ್ಪಿ ಕಟೆದನೇನೋ.. ಮನಸೋಲುತ್ತಿದೆ.. ಅರರೇ.. ಈ ನೀಲವರ್ಣ..ನನ್ನೊಳಗಿನ ಹಾಲಾಹಲವೇ ಬಣ್ಣವೆತ್ತಂತೇ.. ಯಾರಿವನು.. !!

ಎಲ್ಲಾ ಹೆಂಗಳೆಯರೂ ಎತ್ತಲೋ ಹೋದರು.. ಇದುವೇ ಸುಸಮಯ.. ಎತ್ತಿ ಹಾಲೂಡಿಸುತ್ತೇನೆ.. ಯಾಕಿಂದು ಮನಸ್ಸಿಗೆ ಹೊಸ ಅನುಭವ.. ಮೊದಲೆಷ್ಟು ಶಿಶುಗಳನ್ನೆತ್ತಿ ಹಾಲೂಡಿಸಿದಾಗಲೂ ಹೀಗಾಗಿರಲಿಲ್ಲ..ಆಹ್.. ಇವನ ಸ್ಪರ್ಷವೇ ಎಷ್ಟು ಸಂತಸದಾಯಕ.. ದಿನಾ ಇವನನ್ನೆತ್ತಿ ಎದೆಗಪ್ಪಿ ಹಾಲೂಡುವ ಯಶೋದೆ ಅದೆಷ್ಟು ಪುಣ್ಯ ಮಾಡಿದ್ದಳೇನೋ.. ಬಟ್ಟಲುಗಣ್ಣುಗಳಲ್ಲಿ ತುಂಟತನ.. ಒಂದಿಷ್ಟು ಅಳುಕಿಲ್ಲ.. ಕಿಲ ಕಿಲ ನಗು.. ಕೊಲ್ಲಲೇ ಮನಸ್ಸಿಲ್ಲ.. ಬಿಟ್ಟು ಹೋಗಿಬಿಡಲೇ.. ಬದುಕಿಕೊಳ್ಳಲಿ.. 

ಹೇಗೆ ಹೋಗಲಿ.. ಅನ್ನದ ಹಂಗು ಕಟ್ಟಿ ಹಾಕುತ್ತಿದೆ ನನ್ನನ್ನು..

 ಅರೆರೆ.. ಹಸಿವಾಗಿರಬೇಕು .. ನಾನೆತ್ತಿದ ಕೂಡಲೇ ಅವನ ತುಟಿಗಳು ಹಾಲನ್ನರಸುತ್ತಿದೆ.. ಅಬ್ಬಾ ಏನು ಆತುರ ಈ ಪೋರನಿಗೆ.. ಎಷ್ಟೊಂದು ಕಾಡುತ್ತಾನೆ.. ಹೀರಿಬಿಡೋ.. ನನ್ನೊಳಗಿನ ಅಷ್ಟೂ ಅಮೃತವೂ ನಿನ್ನದೇ..


 ನಿಲ್ಲು ನಿಲ್ಲು.. ಅಮೃತವೆಂದೆನೇ.. ವಿಷವಲ್ಲವೇ ಇದು.. ಓಹ್.. ಇವನೇನನ್ನು ನನ್ನೊಳಗಿನಿಂದ ಹೀರುತ್ತಿರುವುದು..? ಹಾಲೆಲ್ಲ ಬರಿದಾಗಿ ಜೋತುಬಿದ್ದರೂ ಇನ್ನೂ ಏನನ್ನೋ ಹುಡುಕಾಡುತ್ತಿದ್ದಾನೆ..

ಆಹ್.. ಏನಿದು ನೋವು.. ಸಂಕಟ.. ನನಗೂ ನೋವಾಗಿದ್ದಿದೆಯೇ.. ಇತ್ತು ಈಗಲ್ಲ.. ಚೂರು ಚೂರು ವಿಷವನ್ನೇ ಆಹಾರವಾಗಿಸಿ ಒಡಲೊಳಗೆ ಸೇರಿಸಿಕೊಳ್ಳುತ್ತಿರುವಾಗಿನ ಯಾತನೆ ಇದು.. ಮತ್ತೇಕಿಂದು ಮರುಕಳಿಸುತ್ತಿದೆ..?? ಹಾಲು ಬರಿದಾಗಿದೆ.. ಇನ್ನುಳಿದುದು ಹಾಲಾಹಲ.. ಅಂದರೆ..ಅದನ್ನು ಹೀರಿಯೂ ಅರಗಿಸಿಕೊಳ್ಳಬಲ್ಲವನಿವನು..!! 

ಇನ್ನೇನಾಗಬಹುದು.. ಸಾವು ಬರಬಹುದು.. ಶಿಶುವನ್ನತ್ತ ಎತ್ತಿ ಬಿಸುಟು ಹೋಗಲೇ..? 

ಹೋದರೆ ಕಾರ್ಯ ಸಾಧಿಸದೇ ಬಂದ  ನನ್ನನ್ನು ರಾಜನೆಂದಾದರು ಬರ ಮಾಡಿಕೊಳ್ಳುತ್ತಾನೆಯೇ..? ಅವನ ಕೈಯಲ್ಲಿ ಸಾವು ಬರುವುದಕ್ಕಿಂತ ಇಲ್ಲೇ ಬಂದರೆ ಎಷ್ಟು ಚೆನ್ನ..!! 

ಅರೆಗಳಿಗೆಯಾದರೂ ನನ್ನೆದೆ ಬಡಿತದ ಸದ್ದು ಮಗುವಿನರಿವಿಗೂ ಬಂದಿರಬಹುದಲ್ಲ..! 

ಮಗುವೇ.. ಅಲ್ಲ.. ನನ್ನೆಲ್ಲ ನೋವುಗಳಿಗೂ ಕೊನೆ ಕಾಣಿಸಲು ಬಂದ ದೇವ.. ಯಾರಿಗಿದೆ ಈ ಭಾಗ್ಯ.. ಜನ್ಮ ಸಾರ್ಥಕವಾಯಿತು..ಯಾವುದು ಪರಮ ಸುಖವೋ, ಅದನ್ನು ಪಡೆದ ಮೇಲೆ ಅದಕ್ಕಿಂತ ಹಿರಿದಾದ ಬದುಕಿದೆಯೇ.. ಮೋಕ್ಷವನ್ನೇ ಕರುಣಿಸು ನನಗೆ.. ಎಷ್ಟು ಜನ್ಮಗಳ ಪುಣ್ಯ ಸಂಚಯವಿತ್ತೇನೋ  ನನ್ನ ಬಳಿ.. ನಿನ್ನನ್ನು ಹೀಗೆ ಮಡಿಲೊಳಗಿಟ್ಟು ನಿನ್ನೊಳಗೆ ಐಕ್ಯವಾಗುವ ಪ್ರಾಣ.. ಸಾಕೆಂದು ಹೇಳುವುದಿಲ್ಲ .. ನಿಲ್ಲಿಸಬೇಡ.. ಹೀರಿಬಿಡು..ಎಲ್ಲವನ್ನೂ .. ಸೇರಿಸಿಕೋ ನನ್ನುಸಿರನ್ನು.. !! 

Saturday, November 24, 2012

ನಮ್ಮೂರ ಬಯಲಾಟ


ಯಕ್ಷಗಾನದ ಚೆಂಡೆ ಮೈಲು ದೂರದಲ್ಲಿ ಕೇಳಿದರೂ ಕಿವಿ  ನೆಟ್ಟಗಾಗಿಸಿ ಅತ್ತ ಕಡೆಗೆ ಕಾಲು ಹಾಕುತ್ತಿದ್ದವರು ನನ್ನಪ್ಪ.  ಕೊಡಗಿಗೆ ಬಂದ ಮೇಲೆ ಅಪ್ಪನ ಯಕ್ಷಗಾನದ ಆಸಕ್ತಿಯ ಬಳ್ಳಿಗೆ ನೀರು ಸಿಕ್ಕುತ್ತಿದ್ದುದು ಅಷ್ಟರಲ್ಲೇ ಇತ್ತು. ಈ 'ಮಳೆ'ನಾಡಿಗೆ ಯಾವ ಮೇಳಗಳೂ ಬಂದು ಟೆಂಟ್ ಹಾಕಿ ಆಟ ಆಡಿ ದುಡ್ಡು ಮಾಡುವುದು ಸಾಧ್ಯವೂ ಇರುತ್ತಿರಲಿಲ್ಲ ಎಂದ ಮೇಲೆ ಘಟ್ಟ ಹತ್ತಿ ಬರುವ ತೊಂದರೆಯನ್ನು ಅವರೂ ತೆಗೆದುಕೊಳ್ಳುತ್ತಿರಲಿಲ್ಲ. ಅಪ್ಪ ಆಗೊಮ್ಮೆ ಈಗೊಮ್ಮೆ ದಕ್ಷಿಣ ಕನ್ನಡದ ಕಡೆ ಹೋದರೆ ರಾತ್ರಿಡೀ ನಿದ್ದೆಗೆಟ್ಟು ಆಟ ನೋಡಿ ಕೆಂಗಣ್ಣಿಗನಾಗಿ ಬರುತ್ತಿದ್ದರು. 

ಹೀಗೆ ಅಪರೂಪಕ್ಕೊಮ್ಮೆ ಆಟ ನೋಡಿ ಬರುತ್ತಿದ್ದ ಅಪ್ಪ ಬಹು ದಿನಗಳವರೆಗೆ ಅದರ ಗುಣಗಾನದಲ್ಲಿ ತೊಡಗಿರುತ್ತಿದ್ದರು. ಭಾಗವತರ ಕಂಠಸಿರಿ, ಹಿಮ್ಮೇಳದವರ ನೈಪುಣ್ಯತೆ, ಅರ್ಥದಾರಿಗಳ ಪಾಂಡಿತ್ಯ ಇತ್ಯಾದಿಗಳನ್ನು ಹೊಗಳಿ ವೈಭವೀಕರಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಔಷಧಕ್ಕಾಗಿ ಬಂದ ಪೇಷಂಟುಗಳಿಗೂ ಈ ಹೊಗಳಿಕೆಯ ಗುಟುಕನ್ನು ಕುಡಿಸುತ್ತಿದ್ದರು. ಅವರಿಗೂ ಇದನ್ನು ಸ್ವೀಕರಿಸುವುದು ಅನಿವಾರ್ಯವಾಗಿತ್ತು.  
ಹೀಗೆ ಮೇಲಿಂದ ಮೇಲೆ ಅಪ್ಪನ ದೆಸೆಯಿಂದ   ಯಕ್ಷಗಾನವನ್ನು ಗುಟುಕಾಯಿಸಿದ ಪರಿಣಾಮವೋ ಏನೋ, ನಮ್ಮೂರ ಜನರಿಗೂ ಉತ್ಸಾಹ ಉಕ್ಕಿ ಬಂತು. ಮೊದ ಮೊದಲು ಅಪ್ಪನ ಯಕ್ಷಗಾನದ ಹರಟೆಗೆ ಸುಮ್ಮಗೆ ಹೂಗುಟ್ಟುತ್ತಿದ್ದವರು ಕ್ರಮೇಣ, ಗಂಡು ಕಲೆಯೆನಿಸಿಕೊಂಡ  ಯಕ್ಷಗಾನ ನಮಗೇನು ದೂರದ್ದೇ ಸ್ವಾಮೀ ? ನಮ್ಮ ಪಕ್ಕದ ಊರು ಕರಾವಳಿಯದ್ದಲ್ಲವೇ.. ನಾವೂ ಒಂದು ಆಟ ಆಡೇ ಬಿಡೋಣ ಅನ್ನತೊಡಗಿದರು. 

ಹೇಳಿ ಕೇಳಿ ಟಿಪ್ಪುಸುಲ್ತಾನನ ಸೈನ್ಯವನ್ನೇ ಹಿಮ್ಮೆಟ್ಟಿಸಿದ ಖ್ಯಾತಿಯ ಪರಂಪರೆಯವರಿವರು, ಮನೆಗೊಬ್ಬ ಯೋಧನಂತೆ ಗಡಿಯಲ್ಲಿ ದೇಶ ಕಾಯುವ ಕೊಡಗಿನ ಕಲಿಗಳು. ಇವರಿಗೆ ಬಯಲಾಟದ ಯುದ್ಧಗಳು ತೀರ ಸಾಧಾರಣವಾಗಿ ಕಂಡದ್ದರಲ್ಲಿ ಆಶ್ಚರ್ಯವೇನಿದೆ? ಸ್ವಾಮಿ , ನೀವು ಹೇಳಿ ಕೊಡುವುದಾದರೆ ನಾವು ವೇಷ ಕುಟ್ಟಿ ಕುಣಿಯುವುದಕ್ಕೆ ಸೈ ಎಂದು ಪಂಥಾಹ್ವಾನವನ್ನು ನೀಡಿಯೇ ಬಿಟ್ಟರು.

ಯಕ್ಷಗಾನದ ಊರಲ್ಲಿ ಹುಟ್ಟಿ ಬೆಳೆದು ಸದಾ ಯಕ್ಷಗಾನದ ಗುಂಗಿನಲ್ಲೇ ಇರುತ್ತಿದ್ದ ಅಪ್ಪನಿಗೆ ಇದನ್ನು ಕೇಳಿ ಎಲ್ಲಿಲ್ಲದ ಉಮೇದು ಬಂದು ಬಿಟ್ಟಿತು. ಆದರೆ ಅಪ್ಪನಿಗೆ ಯಕ್ಷಗಾನ ತರಬೇತಿಗೆ ಸಂಬಂಧಿಸಿದಂತೆ ಶಾಲಾದಿನಗಳಲ್ಲಿ ಊರ ಕಲಾವಿದರೊಂದಿಗೆ ಬಣ್ಣ ಹಚ್ಚಿ ಕುಣಿದ ಅನುಭವ ಬಿಟ್ಟರೆ ಬೇರೆ ಅನುಭವ ಇರಲಿಲ್ಲ. ಆದರೆ ತಾವಾಗಿ ಬಂದು ರಣವೀಳ್ಯ ನೀಡಿದಾಗ ಸುಮ್ಮನೆ ಕೂರುವುದುಂಟೇ.. ನಾನು ಸಿದ್ದ ಎಂದು ಊರ ಜನರು ಕೊಟ್ಟ ರಣವೀಳ್ಯವನ್ನು ಕಚಕಚನೆ ಜಗಿದೇ ಬಿಟ್ಟರು.

ಕಲಿಯುವುದು ಕಲಿಸುವುದು ಎಲ್ಲ ಸರಿ.. ಆದರೆ ಆಟಕ್ಕೊಂದು ಪ್ರಸಂಗ ಬೇಡವೆ? ಇದನ್ನು ನಿರ್ಧರಿಸಲು ರಾಮ ಮಂದಿರದಲ್ಲಿ ಕಲಾಪ್ರೇಮಿಗಳ ಮೀಟಿಂಗ್ ಕರೆಯಲಾಯಿತು. ಗಧಾಯುದ್ದ, ರಾಮಾಶ್ವಮೇಧದಂತಹಾ ಪ್ರಸಂಗಗಳು ಒಂದಿಲ್ಲೊಂದು ಕಾರಣದಿಂದ ತಳ್ಳಿಹಾಕಲ್ಪಟ್ಟವು. ನಡುವೆ ಹೋಟೇಲ್ ವೆಂಕಟ ಸರಬರಾಜು ಮಾಡಿದ ಗೋಳಿಬಜೆ ಪ್ಲೇಟುಗಟ್ಟಲೆ ಖಾಲಿಯಾದವು. ಕಾಫಿಯ ಹಂಡೆ ಕ್ಷಣಾರ್ದದಲ್ಲಿ ತಳ ಕಂಡಿತು. ಅಂತೂ ಪ್ರಸಂಗ ಯಾವುದೆಂದು ನಿರ್ಧಾರವಾಗದೇ ಎರಡನೇ ಮೀಟಿಂಗಿಗೆ ದಿನ ನಿಗದಿಪಡಿಸಿ ಮೀಟಿಂಗ್ ಬರಖಾಸ್ತು ಮಾಡಲಾತು. 

ಎರಡನೇ ಮೀಟಿಂಗ್ ಕೂಡ ಇದೇ ದಾರಿ ಹಿಡಿದರೆ ಕಷ್ಟ ಎಂಬ ಮುನ್ನೆಚ್ಚರಿಕೆಯಿಂದ  ಅಪ್ಪ ' ಶ್ವೇತಕುಮಾರ ಚರಿತ್ರೆ'ಯೆಂಬ ನವರಸ ಭರಿತ ಪ್ರಸಂಗವೊಂದನ್ನು ಆರಿಸಿಕೊಂಡು ಸಭಾ ಪ್ರವೇಶ ಮಾಡಿದ್ದರು. ಮೊದಲನೇ ಮೀಟಿಂಗ್ ಬಾಬ್ತು ಇರಿಸಿದ್ದ ಕಾಫಿ ತಿಂಡಿಯ ಬಿಲ್ಲನ್ನು ಯಾವ ವೀರನೂ ಎತ್ತಿ ಹೆದೆಗೇರಿಸದೇ ಇದ್ದದ್ದರಿಂದ ಬರಿಗೈಯ್ಯಲ್ಲೇ ಬಂದಿದ್ದ ಹೊಟೆಲ್ ವೆಂಕಟ ಹೀರೋ ಪಾತ್ರ ತನಗೇ ಬೇಕೆಂದು ಪಟ್ಟು ಹಿಡಿದ. ಅವನ ಭರ್ತಿ ದೇಹ ನೋಡಿ ಅಪ್ಪ ಕಥಾ ಸಾರಾಂಶವನ್ನು ಹೇಳಿ ಈ ಕಥೆಯಲ್ಲಿ  ಹೀರೋ, ರಕ್ತ ಮಾಂಸಗಳಿಲ್ಲದ ಪ್ರೇತ ಎಂದಾಗ ಆತ ಸ್ವಲ್ಪ ನಡುಗುತ್ತಲೇ ಅದಾದ್ರೆ ನಂಗೆ ಬೇಡ ಎಂದು ದೂರ ಸರಿದ. 

ಕಲಿಸುವ ಗುರುವಾದ ಕಾರಣ ಅಪ್ಪನೇ ಪಾತ್ರಗಳನ್ನು ಒಬ್ಬೊಬ್ಬರಿಗೂ ಹಂಚಿದರು. ಮಿಲಿಟ್ರಿಯ ರಜೆಯಲ್ಲಿ ಮನೆಗೆ ಬಂದಿದ್ದ ಬೋಪಯ್ಯ ಯಮನಾದರೆ, ವೆಂಕಟ ರಕ್ಕಸನಾದ. ತನಗೆ ಒಗೆಯಲು ಕೊಡುವ ಯಾವುದಾದರು ಒಳ್ಳೆ ಸೀರೆಯನ್ನು ಆ ದಿನದ ಮಟ್ಟಿಗೆ ತಾನೇ ಹೊಂದಿಸುತ್ತೇನೆ ಎಂದು ಸಾರಿದ ಡೋಬಿ ರಾಜ ರಂಬೆಯಾದ. ಮೇಕಪ್ ಇಲ್ಲದಿದ್ದರೂ,ಯಾವತ್ತೂ ಪ್ರೇತ ಕಳೆಯಿಂದ  ನಳ ನಳಿಸುತ್ತಿರುವ ರಾಜನ ತಮ್ಮ ಲಾಲು ಪ್ರೇತವಾದ. ಶೋಕಿಲಾಲನಾಗಿದ್ದ ಟೈಲರ್ ವೀರು ಶ್ವೇತಕುಮಾರನಾದರೆ, ಕಳೆದ ವರ್ಷವಷ್ಟೇ ಹೆಂಡತಿಗೆ ಸೋಡಾ ಚೀಟಿ ಕೊಟ್ಟು ತೌರುಮನೆಗೆ ಸೇರಿಸಿದ್ದ ಕಾಳಯ್ಯ ಶ್ವೇತಕುಮಾರನ ಸಾದ್ವೀಮಣಿ ಹೆಂಡತಿಯಾದ. ಮದುವೆಗಳಿಗೆ ಮಂಟಪ ಕಟ್ಟಿ ಅಲಂಕರಿಸುವ  ಶಿವ ತನಗೆ ಸಿಕ್ಕಿದ ಪರಶಿವನ ಪಾತ್ರಕ್ಕೆ ಬದಲಾಗಿ ಉಳಿದವರಿಗೆಲ್ಲ ಬಣ್ಣದ ಕಾಗದ ಮತ್ತು ರಟ್ಟಿನಿಂದ ಕಿರೀಟ, ಬೇಗಡೆ ಕಾಗದದಿಂದ ಚಿನ್ನಾಭರಣಗಳನ್ನು ಮಾಡುವ ಕೆಲಸದ ಗುತ್ತಿಗೆಯನ್ನೂ ಹಿಡಿದ.
ಉಳಿದೆಲ್ಲಾ ಪಾತ್ರಗಳು ಅವರವರ ಗಾತ್ರಕ್ಕೂ ಮತ್ತು ಆಟದ ದಿನದಂದು ಅವರು ಹೊಂದಿಸುತ್ತೇವೆಂದು ಒಪ್ಪಿಕೊಂಡ  ಸಾಮಾಗ್ರಿಗಳ ಮೇಲೆ ನಿರ್ಧಾರಿತವಾಗಿ ಹಂಚಲ್ಪಟ್ಟಿತು.  ಯಾಕೆಂದರೆ ವೇಷ ಭೂಷಣಗಳಿಗೆ ಖರ್ಚು ಮಾಡುವಷ್ಟು ಫಂಡ್ ಯಾರ ಕಿಸೆಯಲ್ಲೂ ಇರಲಿಲ್ಲ. 

ಹೇಗೂ ಮುಮ್ಮೇಳ ಸಿದ್ಧವಾಯಿತು. ಆದರೆ ಆಟದ ದಿನ ಹಿಮ್ಮೇಳಕ್ಕೆ ವ್ಯವಸ್ಥೆಯೇನೆಂಬುದು ಮೊದಲೇ ನಿರ್ಧಾರವಾಗಬೇಕಿತ್ತು. ಭಾಗವತಿಕೆಗೆ ಅಪ್ಪನೇ ಉತ್ಸುಕತೆಂದಿದ್ದರು. ದೇವಸ್ಥಾನದಲ್ಲಿ ಚೆಂಡೆ ಹೊಡೆಯುತ್ತಿದ್ದ ಮೋಹನನನ್ನು ಆ ದಿನಕ್ಕೆ ಚೆಂಡೆ ಮತ್ತು ಬಾರ್ಬರ್ ಪುಟ್ಟಪ್ಪನನ್ನು ಮದ್ದಳೆಗೆ ಒಪ್ಪಿಸಿದ್ದಾಯ್ತು.ಹಾರ್ಮೋನಿಯಮ್ ಹಿಡಿದು, ಹಾಡುತ್ತಾ,  ಬೇಡುತ್ತಾ, ಅಲೆಯುತ್ತಿದ್ದ ದಾಸಜ್ಜನನ್ನು ಹಾರ್ಮೋನಿಯಮ್ ಶೃತಿ ಕೊಡಲು ಬೇಡಿಕೊಂಡಿದ್ದಾಯಿತು.

ಇನ್ನು ಪ್ರಾಕ್ಟೀಸು ತೊಡಗುವುದೊಂದು ಬಾಕಿ. ಆದರೆ ಅಪ್ಪನಿಗೆ ಇಡೀ ಪ್ರಸಂಗದ ಹಾಡುಗಳು ಬಾಯಿ  ಪಾಠ ಇಲ್ಲದ ಕಾರಣ ನಮ್ಮೂರ ಅಪುರೂಪದ ಯಕ್ಷ ಪ್ರೇಮಿಯೊಬ್ಬರನ್ನು ಸಂಪರ್ಕಿಸುವುದು ಅನಿವಾರ್ಯವಾಯಿತು. ಅವರ ಬಳಿ ಯಕ್ಷಗಾನ ಪ್ರಸಂಗ  ಪುಸ್ತಕಗಳ ಬಹು ದೊಡ್ಡ ಸಂಗ್ರಹವೇ ಇತ್ತು. ಅದನ್ನು ಅಮೂಲ್ಯ ಆಸ್ತಿಯಂತೆ ಕಾಪಾಡುತ್ತಿದ್ದ ಅವರು ಯಾರಿಗೂ ಪುಸ್ತಕ ಕೊಡುತ್ತಿರಲಿಲ್ಲ. ಹಾಗೇ ಚಿಲ್ಲರೆ ಪಲ್ಲರೆಗಳೆಲ್ಲ ಹೋಗಿ ಕೇಳಿದರೆ ಅವರು ಕೊಡುವರೇ..? ಅಪ್ಪನೇ ಸ್ವತಃ ಒಂದೆರದು ಹಿಂಬಾಲ(ಕ) ರನ್ನು ಇಟ್ಟುಕೊಂಡು ಅವರಲ್ಲಿಗೆ ಹೋಗಿ ಪ್ರಸ್ಥಾಪವಿಟ್ಟರು. 

ಅಪ್ಪನೊಂದಿಗೆ ಕೆಲವೊಮ್ಮೆ ಅಪ್ಪನ ಖರ್ಚಿನಲ್ಲೇ ಆಟ ನೋಡಿದ ಋಣಭಾರ ಅವರ ಮೇಲಿದ್ದುದರಿಂದ ತಮ್ಮ ಪುಸ್ತಕ ಸಂಗ್ರಹದ ಕಷ್ಟ ನಷ್ಟಗಳನ್ನು ನೂರ ಒಂದು ಬಾರಿ ಹೇಳಿ, ತಮ್ಮ ಪುಸ್ತಕದ ದೂಳು ಕೂಡಾ ಅಲುಗದಂತೆ ಜಾಗ್ರತೆಯಾಗಿ ತಂದು ಕೊಡಬೇಕೆಂದು ಒತ್ತಿ ಒತ್ತಿ ಹೇಳಿ, ಮದುವೆಯಾದ ಮೊದಲ ವಾರದಲ್ಲೇ ಹೆಂಡತಿಯನ್ನು ತೌರು ಮನೆಗೆ ಕಳುಹಿಸುವ ಗಂಡನೋಪಾದಿಯಲ್ಲಿ ಪುಸ್ತಕವನ್ನು ಅಪ್ಪನ ಕೈಗೆ ಹಸ್ತಾಂತರಿಸಿದರು. 

ಅಪ್ಪ ಅವರು ಹೇಳಿದ್ದಕ್ಕೆಲ್ಲ ತಲೆ ಅಲುಗಿಸಿ ಹೊತ್ತಗೆಯನ್ನು ಹೊತ್ತು ಹೊರ ಬರುತ್ತಿರುವಾಗ ಅವರು ಪುನಃ ಬಂದು ಅಡ್ಡ ನಿಂತು, ನನಗೂ ಒಂದು ಪಾತ್ರ ಕೊಡಿ ಎನ್ನಬೇಕೆ ! ನಡೆಯಲು ಇನ್ನೊಬ್ಬರ ಸಹಾಯ ಬೇಕಿದ್ದ ಈ ಇಳಿವಯಸ್ಸಿನಲ್ಲಿ ಅವರಿಗೆ ಯಾವ ಪಾತ್ರ ಕೊಡುವುದಪ್ಪಾ ಎಂದು ಚಿಂತಿಸುವಾಗ ಅಪ್ಪನಿಗೆ ಪಕ್ಕನೇ  ದ್ವಾರ ಪಾಲಕನ ಪಾತ್ರ ಹೊಳೆತು. ಅದಾದರೆ ಊರುಗೋಲಿನ  ಸಹಾಯದಿಂದ ರಂಗಸ್ಥಳಕ್ಕೆ ಒಂದು ಸುತ್ತಾದರೂ ಬರಬಹುದು ಎಂಬ ಆಲೋಚನೆ ಅಪ್ಪನದ್ದು. ಅದನ್ನೇ ಸೂಚಿಸಿದಾಗ, ಯಕ್ಷ ಪ್ರೇಮಿ  ಆದೀತಪ್ಪ..ಆಗದೇ ಏನು? ಎಲ್ಲಿ ನೋಡುವ ಎಷ್ಟು ಪದ್ಯ ಇದೆ ಆ ಪಾತ್ರಕ್ಕೆ ಅನ್ನುತ್ತಾ ಪುಸ್ತಕದತ್ತ ಕೈ ಚಾಚಿದರು. ಅಪ್ಪ ನಾಜೂಕಾಗಿ, ನಿಮಗೇನು ಅರ್ಥ ಹೇಳಲು ಈ ಮಕ್ಕಳಂತೆ ಬಾಯಿ  ಪಾಠ ಬೇಕೇ.. ಆ ದಿನ ಸಿದ್ಧವಾಗಿ ಬನ್ನಿ ಸಾಕು ಎಂದು ನುಡಿದು ಹೊರಟೇ ಬಿಟ್ಟರು. 

ಅಂತೂ ಇಂತೂ ಯಕ್ಷಗಾನಕ್ಕೆ ಅಗತ್ಯವಿರುವ ಜನಸಂಪತ್ತು, ಪದಾರ್ಥ ಸಂಪತ್ತು ಒಟ್ಟಾದ ಮೇಲೆ ಪ್ರಾಕ್ಟೀಸು ಎಂಬ 'ಸುಂದರ ಕಾಂಡ' ಸುರು ಆಯಿತು.  

ಸಂಜೆಯ ವೇಳೆ ನಮ್ಮೂರಿನ ರಾಮಮಂದಿರದ ಹಳೇ ಕಟ್ಟಡ ಇವರ ಕಲಿಕೆಗೆ ಸೂರು ನೀಡಿತು. ಅಪ್ಪ ಜಾಗಟೆ ಹಿಡಿದು ತಾಳ ಕುಟ್ಟುತ್ತಾ ಒಬ್ಬೊಬ್ಬರನ್ನೇ ಕುಣಿಸತೊಡಗಿದರು. ಎಲ್ಲರೂ ಉತ್ಸಾಹದಲ್ಲಿ ಜಿಗಿದು 'ದಿಂಗಣಾ' ತೆಗೆಯುವಾಗ ಜೀರ್ಣಾವಸ್ಥೆಯಲ್ಲಿದ್ದ ಕಟ್ಟಡದ ಗೋಡೆಗಳು ಅದುರುತ್ತಿದ್ದವು. ಅಪಾಯದ ಅರಿವಾಗಿ ಸೌಮ್ಯ ವೇಷಗಳಿಗೆ ಮಾತ್ರ ಒಳ ಪ್ರವೇಶ ನೀಡಿ ಉಳಿದದ್ದನ್ನು ಹೊರಗಿನ ಅಂಗಳದಲ್ಲಿ ಕುಣಿಸಲಾಯಿತು. ತಿಂಗಳುಗಟ್ಲೆ ಅಭ್ಯಾಸ ಮುಂದುವರೆತು. ಊರಿನ ಜನರೆಲ್ಲಾ ಬೇಗ ಕೆಲಸ ಮುಗಿಸಿ ಸಂಜೆ ಹೊತ್ತು ರಾಮ ಮಂದಿರದಲ್ಲಿ ಇವರನ್ನು ವೀಕ್ಷಿಸಲು ಜಮಾಯಿಸುತ್ತಿದ್ದರು. 

ಎಲ್ಲರೂ ಎಷ್ಟು ಮಗ್ನರಾದರು ಎಂದರೆ ಯಕ್ಷಗಾನ ನಿತ್ಯ ಜೀವನದಲ್ಲೂ ನುಗ್ಗಿಬಿಟ್ಟಿತ್ತು. ಹೋಟೆಲ್ ವೆಂಕಟನಲ್ಲಿಗೆ ಹೋಗಿ ಕುಳಿತರೆ ಸಾಕು, ವೆಂಕಟ ಹೋಟೆಲ್ ಮಾಣಿಯನ್ನು ಕೂಗಿ "ನೀರು ತಾ.. ಥಾ ತೈಯಥ ದಿನಥಾ.. ಬೇಗ ತಾ.. ಇಲ್ಲಿ ತಾ.." ಎಂದು ಹೇಳುತ್ತಿದ್ದ. ಮಾಣಿಯೂ 'ತಿತ್ತಿಥ್ಥೈ ತಿತ್ತಿಥ್ಥೈ' ಎಂದು ನಾಟ್ಯದ ಹೆಜ್ಜೆ ಹಾಕುತ್ತಾ ಬಂದು ನೀರನ್ನು ಟೇಬಲ್ ಮೇಲೆ ಇಡುತ್ತಿದ್ದ. ಡೋಬಿ ಲಾಲು ಮತ್ತು ರಾಜು ಬಟ್ಟೆ ಒಗೆಯುವಾಗ ಬಟ್ಟೆಗಳನ್ನು ತಾಳಕ್ಕೆ ಸರಿಯಾಗಿಯೇ ಕಲ್ಲಿಗೆ ಕುಕ್ಕಿ ಕುಕ್ಕಿ ಒಗೆಯುತ್ತಿದ್ದರು. ಟೈಲರ್ ವೀರುವಿನ ಕಾಲುಗಳು ಮಿಷನನ್ನು ಲಯಬದ್ಧವಾಗಿಯೇ ತುಳಿಯಲು ಪ್ರಾರಂಭಿಸಿ, ಒಂದು ವಾರದಲ್ಲಿ ಕೊಡುತ್ತೇನೆಂದ ಬಟ್ಟೆ ಒಂದು ತಿಂಗಳಾದರೂ ಸಿದ್ಧವಾಗುತ್ತಿರಲಿಲ್ಲ. ಆದರೆ ಊರವರೂ ಕೊಂಚವೂ ಬೇಸರಿಸದೇ ಊರ ಹುಡುಗರ ಈ ಎಲ್ಲಾ ಹುಚ್ಚಾಟಗಳನ್ನು ತಾವು ನೋಡಲಿರುವ ಯಕ್ಷಗಾನಕ್ಕಾಗಿ ಸಹಿಸಿಕೊಂಡರು.   

ಪ್ರದರ್ಶನದ ದಿನ ಹತ್ತಿರ ಬರುತ್ತಿದ್ದಂತೆ ರಣೋತ್ಸಾಹ ಎಲ್ಲರಲ್ಲೂ ತುಂಬಿ ತುಳುಕುತ್ತಿದ್ದರೂ, ಡೈಲಾಗ್ 'ಡೆಲಿವರಿ' ಮಾತ್ರ ನಿಜ ಅರ್ಥದ  ಹೆರಿಗೆ ನೋವಾಗಿ ಎಲ್ಲರನ್ನೂ ಕಾಡತೊಡಗಿತ್ತು. ಮುಂಜಾಗರೂಕತಾ ಕ್ರಮವಾಗಿ ತಪ್ಪಿ ಹೋದ ಡೈಲಾಗುಗಳನ್ನು ನೆನಪಿಸಿಕೊಡಲು ಪರದೆಯ ಹಿಂದಿನಿಂದ ಸಹಕರಿಸಲೆಂದೇ ಎರಡು ಕಂಠಗಳನ್ನು ಸಿದ್ದಪಡಿಸಲಾಯಿತು. 

ಆಟಕ್ಕೆ ಮೂರು ದಿನ ಮುಂಚಿತವಾಗಿ "ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ, ಇದೇ ಬರುವ ಶನಿವಾರದಂದು ನಮ್ಮೂರ ದೇವಸ್ಥಾನದ ಮುಂದೆ ಸಜ್ಜುಗೊಳಿಸಿರುವ, ವಿದ್ಯುತ್ ದೀಪಗಳಿಂದಲಂಕೃತವಾಗಿ ಜಗ ಜಗಿಸುವ ಭವ್ಯ ದಿವ್ಯ ರಂಗುರಂಗಿನ ರಂಗ ಮಂಟಪದಲ್ಲಿ, ಮಣ್ಣಿನ ಮಕ್ಕಳು ಪ್ರದರ್ಶಿಸುವ ಶ್ವೇತಕುಮಾರ ಚರಿತ್ರೆ ಎಂಬ ಅದ್ಭುತ ಪುಣ್ಯ ಕಥಾನಕವನ್ನು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ" ಎಂಬ ಘೋಷವಾಕ್ಯವನ್ನು  ಜೀಪಿಗೆ ಮೈಕ್ ಕಟ್ಟಿ ಸಾರಲಾಯಿತು. ಅಂತೂ ಇಂತೂ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಟ್ಟಿತು. ಅಪ್ಪ ಕೆಂಪು ಶಾಲು ಹೊದ್ದು ಹಿಮ್ಮೇಳದೊಂದಿಗೆ ಜಾಗಟೆಯೆತ್ತಿ 'ಗಜಮುಖದವಗೆ ಗಣಪಗೇ' ಎಂದು ಹಾಡಿ ಸುರು ಮಾಡಿಯೇ ಬಿಟ್ಟರು. ಮಿರ ಮಿರನೆ ಮಿನುಗುವ ವಿದ್ಯುದ್ದೀಪಾಲಂಕೃತವಾದ ರಂಗಸ್ಥಳದಲ್ಲಿ ವೇಷಗಳು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವು. ಊರಿನ ಜನಕ್ಕಂತೂ ಆ ವೇಷದೊಳಗಿರುವ ತಮ್ಮ ಮನೆಯ ಜನರನ್ನು ಕಂಡು ಸಂತಸವೋ ಸಂತಸ. ಕೆಲವು ಪಾತ್ರಗಳಂತೂ ಪದ್ಯ ಮುಗಿದರೂ ಕುಣಿಯುವುದನ್ನು ನಿಲ್ಲಿಸದಿದ್ದಾಗ ಅಪ್ಪನೇ ಕೂತಲ್ಲಿಂದ ಇಳಿದು ಬಂದು ಅವರ ರಟ್ಟೆ ಹಿಡಿದು ನಿಲ್ಲಿಸಿ ಅರ್ಥಗಾರಿಕೆ ಸುರು ಮಾಡಲು ಸೂಚಿಸಬೇಕಾಯಿತು. 

ರಂಬೆ ಪಾತ್ರದಾರಿ ರಾಜು, ಮಹಿಳಾ ಸಂಘದ ಅದ್ಯಕ್ಷೆ ಮೀನಾಕ್ಷಮ್ಮನ ಹೊಸ ಸೀರೆಯಲ್ಲಿ ಮಿಂಚುತ್ತಾ ಒಂದು ಸುತ್ತು ನಾಟ್ಯ ಮಾಡಿ ಕಾಲಿಗೆ ಸೀರೆ ತೊಡರಿಸಿಕೊಂಡು ಸ್ಟೇಜಿನಿಂದ ಕೆಳಗೆ ಬಿದ್ದ. ಕೆಳಗಿದ್ದ ಸಭಿಕರು ಅವನನ್ನೆತ್ತಿ ಸ್ಟೇಜಿನ ಮೇಲೆ ಬಿಟ್ಟರು. ಬೀಳುವಾಗ ನಿಲ್ಲಿಸಿದ ಪದ್ಯವನ್ನು ಪುನಃ ಹೇಳಿ ಎಂದು ಭಾಗವತರಾದ ನನ್ನಪ್ಪನಿಗೆ ತಿಳಿಸಿ ಮತ್ತೊಮ್ಮೆ ಕುಣಿದ. ಆಟದ ದಿನ ಸಮೀಪಿಸಿದಾಗ ಯಾರೊಬ್ಬರೂ ಸೀರೆ ಎರವಲು ಕೊಡಲು ಒಪ್ಪದಿದ್ದ ಕಾರಣ ಕಾಳಯ್ಯ ಗುಟ್ಟಿನಲ್ಲಿ ಹೆಂಡತಿಯೊಡನೆ ಸಂಧಾನ ಮಾಡಿಕೊಂಡು ಮರಳಿ ಮನೆಗೆ  ಕರೆ ತಂದದ್ದು ಯಾರಿಗೂ ಗೊತ್ತಿರಲಿಲ್ಲ. ಹೆಂಡತಿಯ ರೇಷ್ಮೆ ಸೀರೆಯನ್ನುಟ್ಟು,  ಪ್ರೇಕ್ಷಕರ ನಡುವೆ ಕುಳಿತಿದ್ದ ಅವಳನ್ನೇ ನೋಡುತ್ತಾ ವೈಯ್ಯಾರದಿಂದ ಕಾಳಯ್ಯ ಕುಣಿಯುವುದನ್ನು ಕಂಡು ಅವಕ್ಕಾದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ವಿಷಲ್ ಹಾಕಿ ಸ್ಪಂದಿಸಿದರು. ಅವಳಂತೂ ಮತ್ತೆ ತನ್ನ ಗಂಡನೆಡೆಗೆ ಮರಳಿಸಿದ 'ಆಟ'ವನ್ನು ಆರಾಧನಾ ಭಾವದಲ್ಲಿ ನೋಡುತ್ತಾ ಕುಳಿತಿದ್ದಳು.

ಅಷ್ಟರಲ್ಲಿ ಸಮಯದೊಂದಿಗೆ ಕಥೆಯೂ ಬೆಳೆದು ಯಮಧರ್ಮರಾಯನೂ ಪ್ರೇತರೂಪದ ಶ್ವೇತ ಕುಮಾರನೂ ಮುಖಾಮುಖಿಯಾಗುವ ಸನ್ನಿವೇಶ ಬಂದೇ ಬಿಟ್ಟಿತು. ಯಮ ಧರ್ಮನ ಪಾತ್ರದಾರಿ ಬೋಪಯ್ಯನಿಗೆ ಗದೆ ಎಂಬ ಆಯುಧ ಸಕಾಲಕ್ಕೆ ಎಲ್ಲೂ ಸಿಗದ ಕಾರಣ ಕೊಡಗಿನ ಮನೆ ಮನೆಯಲ್ಲೂ ಸರ್ವೇ ಸಾಧಾರಣವಾಗಿದ್ದ ಕೋವಿಯನ್ನೇ ಎತ್ತಿಕೊಂಡು ಸ್ಟೇಜಿಗೆ ಬಂದಿದ್ದ. ದೀಪಗಳನ್ನಾರಿಸಿ ಕತ್ತಲುಂಟು ಮಾಡಿದ್ದ ರಂಗ ಸ್ಥಳಕ್ಕೆ ಪ್ರವೇಶಗೈದ ಪ್ರೇತ ವೇಷದಾರಿಯ ವಿಕಾರ ರೂಪಿನಿಂದ ಭಯಗೊಂಡ ಪುಟ್ಟ ಮಕ್ಕಳ ಚಡ್ಡಿಗಳೂ ಒದ್ದೆಯಾದವು. ಕೆಲವು ಹಿರಿ ತಲೆಗಳು ಕಣ್ಣು ಮುಚ್ಚಿಕೊಂಡು ಹನುಮ ಜಪ ಪಠಿಸತೊಡಗಿದವು. 

ದೃಶ್ಯದಲ್ಲಿ ನೈಜತೆ ಇರಲೆಂದು ಯಮನ ಜೊತೆ ಒಂದು ಕೋಣವನ್ನೂ ಸ್ಟೇಜಿನ ಮೇಲೆ ತರುವುದೆಂದು ಮಾತಾಗಿತ್ತು. ಆದರೆ ಗುಂಡೂ ರಾಯರ ಮನೆಯಲ್ಲಿದ್ದ ಏಕಮೇವ ಕೋಣವು ಎರಡು ದಿನಗಳಿಂದ ಸೊಪ್ಪು ಹುಲ್ಲು ಹಿಂಡಿ  ಮುಟ್ಟದೆ ಉಪವಾಸ ಸತ್ಯಾಗ್ರಹ ಮಾಡುತ್ತಿತ್ತು. ಇದರಿಂದಾಗಿ ಸ್ವಲ್ಪ ತಲೆ ಖರ್ಚು ಮಾಡಿದ ಅಪ್ಪನ ಶಿಷ್ಯ ಗಣ ಡೋಬಿ ಲಾಲುವಿನ  ಕತ್ತೆಗೆ ಹಳೇ ಕರಿಗಂಬಳಿ ಹೊದಿಸಿ ತಲೆಗೆ ಕೃತಕ ಕೊಂಬು ಕಟ್ಟಿ ಸ್ಟೇಜಿನ ಮೇಲೆ ತಂದಿದ್ದರು. ಯಮ ವೇಷದಾರಿ ಬೋಪಯ್ಯ ಎಷ್ಟೇ ಜಗ್ಗಿದರೂ  ಕತ್ತೆ ಮಾತ್ರ  ತನಗೆ ಪರಿಚಿತ ವಾಸನೆರುವ ಪ್ರೇತ ವೇಷದಾರಿ ಲಾಲುವಿನ ಹಿಂದೆ  ಹೋಗಿ ನಿಲ್ಲುತ್ತಿತ್ತು. ಈ ಅವಾಂತರದಿಂದಾಗಿ ಗೊಳ್ಳನೆ ಕೇಕೆ ಹಾಕಿ ನಗುತ್ತಿದ್ದ ಸಭಿಕರೆದುರು ತಬ್ಬಿಬ್ಬಾಗಿ ನಿಂತಿದ್ದ  ಯಮನಿಗೂ, ಪ್ರೇತಕ್ಕೂ ತಮ್ಮ ತಮ್ಮ ಸಂಭಾಷಣೆಗಳು ಮರೆತು ಹೋದವು. ಹೇಗೋ ತೆರೆಯ ಹಿಂದೆ  ನಿಂತಿದ್ದ ಕಂಠದಾನಿಗಳು ಎಲ್ಲವನ್ನೂ ಆಡಿ ಸುಧಾರಿಸಿದರು. 

ಈ ಗಲಭೆಯಲ್ಲಿ ಕತ್ತೆಯನ್ನು ಯಾರೂ ಗಮನಿಸಿರಲಿಲ್ಲ. ಅಪ್ಪ ತಮ್ಮ ಮುಂದಿರಿಸಿಕೊಂಡಿದ್ದ ಪ್ರಸಂಗ ಪುಸ್ತಕವನ್ನು ಮೇವು ಎಂದುಕೊಂಡು ಒಂದೇ ತುತ್ತಿಗೆ ಬಾಯಿಗೆ ಸೇರಿಸಿಕೊಂಡಿತು. ಕೊನೇ ಗಳಿಗೆಯಲ್ಲಿ ಇದನ್ನು ಕಂಡ ಅಪ್ಪ ಅದರ ತಲೆಗೆ ಜಾಗಟೆಯ ಕೋಲಿನಲ್ಲಿ ಸಿಟ್ಟಿನಿಂದ ಮೊಟಕಿದರು. ಅದು ಬ್ರೇಂ .. ಎಂದರಚುತ್ತಾ ಸ್ಟೇಜಿನಿಂದ ಕೆಳಗೆ ಜಿಗಿದು ಸಭಿಕರ ಸಾಲಿನ ಮದ್ಯದಲ್ಲಿ ತೂರಿ ಹೊರಗೆ ಓಡಿ ಹೋಯಿತು. ಪುಣ್ಯಕ್ಕೆ ಪ್ರಸಂಗ ಪುಸ್ತಕ ನೀಡಿದ ಯಕ್ಷಪ್ರೇಮಿ  ಆ ದಿನ ತಮ್ಮ ಉಲ್ಬಣಗೊಂಡ ಕಾಲು ನೋವಿನಿಂದಾಗಿ ಇತ್ತ ಕಡೆ ತಲೆ ಹಾಕಿರಲಿಲ್ಲ. ಇಲ್ಲದಿದ್ದರೆ ಈ ದೃಶ್ಯವನ್ನು ನೋಡಿದ್ದರೆ ಎದೆಯೊಡೆದುಕೊಳ್ಳುತ್ತಿದ್ದರೇನೋ..!!

ಮತ್ತೆ ಬಂದ ಪಾತ್ರಗಳೆಲ್ಲವೂ ಅಪ್ಪನಿಗೆ ಬರುತ್ತಿದ್ದ ಬೇರೆ ಯಾವುದೋ ಪದ್ಯಗಳಿಗೆ ಕುಣಿದು ಈ ಆಟದ ಡೈಲಾಗ್ ಹೇಳಿದವು. ಅಂತೂ ಇಂತೂ ಬೆಳಗಾದಾಗ ಶೃತಿ ಪೆಟ್ಟಿಗೆ ಹಿಡಿದು ಕುಳಿತಿದ್ದ ದಾಸಜ್ಜ ಕುಳಿತಲ್ಲೇ ನಿದ್ರೆ ಹೋಗಿದ್ದನು. ಅಪ್ಪ ಮುಗಿಸುವುದೋ ಎಂಬರ್ಥದಲ್ಲಿ ಚೆಂಡೆ ಮದ್ದಲೆಯ ವಾರಸುದಾರರತ್ತ ಪ್ರಶ್ನಾರ್ಥಕ ನೋಟ ಬೀರಿದರು. ಸಮ್ಮತಿಪೂರ್ವಕವಾಗಿ ಅವರುಗಳು ತಲೆಯಾಡಿಸಿದರು. ಅಪ್ಪ ಸುಶ್ರಾವ್ಯವಾಗಿ "ಕರದೊಳು ಪರಶು ಪಾಶಾಂಕುಶ ಧಾರಿಗೇ... ಹರುಷದಿ ಭಕ್ತರ ಪೊರೆವವಗೇ.." ಎಂದು ಮಂಗಳ ಹಾಡಿದರು. ಜೊತೆಗೆ ಮೋಹನನೂ ಪುಟ್ಟಪ್ಪನೂ ಇನ್ನಿಲ್ಲದಂತೆ ಪ್ರಚಂಡವಾಗಿ ಚೆಂಡೆ ಮದ್ದಲೆ ಬಾರಿಸಿ ಮುಕ್ತಾಯ ಮಾಡಿದರು. ಇದರೊಂದಿಗೆ ನಮ್ಮೂರ ಹಮ್ಮೀರರ ಯಕ್ಷಗಾನದಾಟಕ್ಕೆ ತೆರೆ ಬಿದ್ದಂತಾಯ್ತು.

ಹೀಗೆ ಊರವರನ್ನು ಅನಾಯಾಸವಾಗಿ ನಕ್ಕು ನಲಿಸಿದ ಯಕ್ಷಗಾನ ಮುಗಿದು ತಿಂಗಳುಗಟ್ಟಲೆಯಾದರೂ ಜನ ಅದರ ಬಗ್ಗೆ ಮಾತಾಡುವುದು ಬಿಡಲಿಲ್ಲ. ಮೊದಲು ಸುಮ್ಮನೆ ಹೂಗುಟ್ಟುತ್ತಿದ್ದವರೆಲ್ಲಾ ಈಗ ಯಕ್ಷಗಾನದ ಬಗ್ಗೆ ಭಾಷಣ ಬಿಗಿಯಲು ಸುರು ಮಾಡಿದ ನಂತರ ಅಪ್ಪನೇ ಯಾಕೋ ಸಾಕೆನಿಸಿ ಕ್ಲಿನಿಕ್ನಲ್ಲಿ ಆಟದ ವಿಷಯ ಪ್ರಸ್ತಾಪ ಮಾಡುವುದನ್ನು ಬಿಟ್ಟು ಬಿಟ್ಟರು. 

( ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಬರಹ ) 







Wednesday, November 7, 2012

ಪಾಚು ಮತ್ತು ಕಂಪ್ಯೂಟರ್





"ಅಕ್ಕೆರೇ.. ಅಕ್ಕೇರೇ .." ಹೊರಗಿನಿಂದ 'ಪಾಚು' ಜೋರಾಗಿ ಕರೆಯುವುದು ಕೇಳಿಸಿತು.

ಮದ್ಯಾಹ್ನ ಊಟ ಮುಗಿಸಿ ಕೈಯಲ್ಲಿ ನೆಪ ಮಾತ್ರಕ್ಕೆ  ಒಂದು ಪುಸ್ತಕ ಹಿಡಿದು, ಅತ್ತ ನಿದ್ರಾಲೋಕವೂ ಅಲ್ಲದ ಇತ್ತ ಎಚ್ಚರವೂ ಅಲ್ಲದ ತ್ರಿಶಂಕು ಸ್ವರ್ಗದಲ್ಲಿ ತೇಲಾಡುತ್ತಿರುವಾಗ ಇವಳ ಸ್ವರ ನನ್ನನ್ನು ತಟ್ಟನೆ ಭೂಮಿಗೆ  ಎಳೆದು ತಂದು  ಬಿಸುಡಿತು.

ಇನ್ನು ನಾಲ್ಕು ಗಂಟೆಯವರೆಗೆ ಒಳ್ಳೇ ಟೈಮ್ ಪಾಸ್ ಎಂದು ಎದ್ದು ಹೊರಬಂದೆ. 

ಅವಳು ಹೀಗೆ ಅಪುರೂಪಕ್ಕೊಮ್ಮೆ ಸುಳಿವೇನೂ ಕೊಡದೆ ತಟ್ಟನೆ ಪ್ರತ್ಯಕ್ಷವಾಗಿ ಊರಿನಲ್ಲಿರುವವರ ಸುಖ ದು:ಖಗಳನ್ನೆಲ್ಲಾ ಹಂಚಿಕೊಳ್ಳುತ್ತಿದ್ದಳು..!!

ಯಾವುದನ್ನೂ ಬೇಡುವ ಬಾಯಲ್ಲ ಅವಳದ್ದು. ತಾನಾಗೇ ನಮ್ಮೆದುರಿನಲ್ಲಿಯೇ ಅಂಗಳದಲ್ಲಿ ಹರಗಿದ್ದ ರಾಶಿಯಿಂದ  ನಾಲ್ಕು ಅಡಿಕೆ ತೆಗೆದು ಸಿಪ್ಪೆ ಸುಲಿದು ತುಂಡು ಮಾಡಿ ತನ್ನ ಎಲೆ ಅಡಿಕೆಯ ಸಂಚಿಗೆ ಸೇರಿಸಿಕೊಳ್ಳುತ್ತಿದ್ದಳು. ಕತ್ತಿ ಹಿಡಿದು ತೋಟಕ್ಕೆ ನಡೆದು ತೆಂಗಿನ ಮಡಲು ತುಂಡು ಮಾಡಿ ಹೊರೆ ಕಟ್ಟಿಕೊಂಡು ಅದರ ಮೇಲೆರಡು ತೆಂಗಿನಕಾಯನ್ನು ನಮಗೆ ಕಾಣುವಂತೆ ಕಟ್ಟಿ ಇಡುತ್ತಿದ್ದಳು. ಎಲ್ಲಾ ಖುಲ್ಲಂ ಖುಲ್ಲಾ.. !!  

ಅಷ್ಟು ಮಾಡಿ ಉಸ್ಸಪ್ಪ ಎಂದು ಹೇಳುತ್ತಾ 'ಚಾಯ' ಕೊಡಿ ಎಂದು ಜಗಲಿಯಲ್ಲಿ ಕುಳಿತು ಮಾತು ಸುರು ಮಾಡುತ್ತಿದ್ದಳು. 

ಇಂದೇಕೋ ಬಂದವಳೇ ಜಗಲಿಯ ಮೂಲೆ ಸೇರಿ ಕಾಲು ಚಾಚಿ, ಬಾಯಿಗೆರಡು ಅಡಿಕೆ ಹೋಳು ದೂರದಿಂದಲೇ ಎಸೆದು, ವೀಳ್ಯದೆಲೆಯ ತುದಿ ಮುರಿದು ತನ್ನ ಸೀರೆಯಲ್ಲಿ ಅದನ್ನು ಚೆನ್ನಾಗಿ ಉಜ್ಜಿ ಅದರ ಎರಡೂ ಕಡೆಗೆ ಸುಣ್ಣ ಲೇಪಿಸಿದಳು. ಮತ್ತೊಂದು ಕಪ್ಪಾದ ಡಬ್ಬದ ಮುಚ್ಚಳ ತೆಗೆದು ಹೊಗೆಸೊಪ್ಪನ್ನು ಚಿವುಟಿ ತೆಗೆದು , ಎಲ್ಲವನ್ನೂ ಬಾಯಿಗೆ ತುರುಕಿ ಜಗಿಯತೊಡಗಿದಳು. ಆ ಬ್ರಹ್ಮಾನಂದದ ಕ್ಷಣಗಳಲ್ಲಿಯೂ ಎದುರು ಕುಳಿತ ನನ್ನನ್ನು ಮರೆಯದೇ " ಅಕ್ಕೆರೇ.. ನಿಮಗೆ ಗೊತ್ತುಂಟೋ.." ಎಂದಳು. 

ಇದು ಮಾತು ಸುರು ಆಗುವ ಲಕ್ಷಣ .. ನಾನು ಕಿವಿ  ತೆರೆದಿಟ್ಟೆ.

" ನಮ್ಮ ಶಂಕರಣ್ಣೇರ ಮಗ ಶೇಖರಣ್ಣನಿಗೆ ಮದ್ವೆ ಆಗಿ ಎಷ್ಟು ವರ್ಷ ಆಯ್ತು ಹೇಳಿ ನೋಡುವಾ"ಎಂದು ಸವಾಲೆಸೆದಳು. 

ನಾನು ಯೋಚಿಸುತ್ತಾ "ಒಂದಾರು ವರ್ಷ ಆಗಿರಬಹುದು .. ಯಾಕೇ..?" ಅಂದೆ

 "ಅಲ್ಲಾ ಅಕ್ಕೇರೇ ಅವರಿಂದ ಮತ್ತೆ ಮದುವೆಯಾದ ನನ್ನ ಮೊಮ್ಮಗಳು ಎರಡು ಹಡೆದು ಈಗ ಮೂರನೆಯದನ್ನು ಹೊಟ್ಟೆಯಲ್ಲಿ ಹೊತ್ತುಕೊಂಡಿದ್ದಾಳೆ. ಶೇಖರಣ್ಣನ ಹೆಂಡತಿ ಈಗ ಬಸುರಿ ಅಂತೆ" ಎಂದಳು ಸ್ವರ ತಗ್ಗಿಸಿ.. 

"ಹೌದಾ. ಹಾಗಿದ್ರೆ ನಿಂಗೆ ಬಾಣಂತನ ಮಾಡುವ ಕೆಲಸ ಉಂಟಲ್ಲ .. ಇನ್ನು ನಾಲ್ಕು ತಿಂಗಳು ನಿನ್ನನ್ನು ಕಾಣುವಂತಿಲ್ಲ.." ಎಂದು ಕೆಣಕಿದೆ.

ಬದಿಯಲ್ಲಿಟ್ಟ ಮರದ ಕೋಲನ್ನು ತೋರಿಸಿ.. "ಈ ದಂಟೆ ಕೈಯಲ್ಲಿ ಹಿಡ್ಕೊಂಡು ಸರ್ತ ನಡೆಯುವುದೇ ದೊಡ್ಡದು ಈಗ.. ಇನ್ನು ಬಾಣಂತನ ನನ್ನದೇ ಮಾಡ್ಬೇಕು .. ನಿಮ್ಮದೊಂದು ತಮಾಷೆ" ಎಂದು ಎದ್ದು ಹೊರಗೆ ಹೋಗಿ ತೋಟದ ಕಡೆಗೆ ಬಗ್ಗಿ ಕೈ ಬೆರಳನ್ನು ಬಾಗಿಟ್ಟು ಪಿಚಕ್ಕೆಂದು ಉಗುಳಿ ಸೆರಗಿನಲ್ಲಿ ಬಾಯೊರೆಸಿಕೊಳ್ಳುತ್ತಾ ಬಂದು ಕುಳಿತಳು. 

"ಅಲ್ಲಾ ನಿಮಗೆ ಗೊತ್ತುಂಟೋ.. ಅವರಿಗೆ ಯಾಕೆ ಇಷ್ಟು ಸಮಯ ಮಕ್ಕಳಾಗಲಿಲ್ಲ ಅಂತ.. ?"

"ಯಾಕೇ..?" ಅಂದೆ ಕುತೂಹಲದ ದ್ವನಿಯಲ್ಲಿ..

ಅವರ ಮನೆಯಲ್ಲಿ ಒಂದು ಕಂಪ್ಲೀಟರು ಅಂತ ಮಿಷನ್ ಉಂಟು. ನೋಡ್ಲಿಕ್ಕೆಲ್ಲ ನಮ್ಮ ಟಿ  ವಿ  ಯ ಹಾಗೇ.. ಅದು ಮನೆಯಲ್ಲಿದ್ರೆ ಮಕ್ಕಳಾಗೋದಿಲ್ಲ ಅಂತೆ.. ಅವ್ರು ಅಂತಲ್ಲ ಸುಮಾರು ಜನ ಇದ್ದಾರಂತೆ  ಈಗ ಹಾಗೆ.." 

"ಮತ್ತೆ ಈಗ ಹೇಗೆ ಬಸುರಿಯಾಗಿದ್ದೇ..?" ಎಂದು ಲಾ ಪಾಯಿಂಟ್   ಎಸೆದೆ. 
  
ನನ್ನ ಮುಖವನ್ನು ಅರೆ ಗಳಿಗೆ ನೋಡಿ.. 'ಅದನ್ನವರು ಮಾರಿದ್ದಾರೆ ಈಗ.. ಹಾಗಾಗಿ ಬಸುರಿ ಆದದ್ದು.."  ಎಂದಳು 

"ಓಹೋ ಹಾಗಾ.. ಯಾರು ತೆಕ್ಕೊಂಡ್ರಪ್ಪಾ ಆ ಹಳೇದನ್ನ" ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದನ್ನೇ ದೊಡ್ಡದಾಗಿ ಹೇಳಿಬಿಟ್ಟೆ.

"ಮತ್ಯಾರು.. ನಾನೇ.. ನನ್ನ ಪುಳ್ಳಿ ಮನೆಗೆ ಕೊಂಡೋಗಿ ಕೊಟ್ಟಿದ್ದೇನೆ. ಸಾಕು ಅವ್ಳು ಹೆತ್ತದ್ದು. ಹಳೆಯದಾದ್ರು ಪವರ್ ಇರ್ತದಂತೆ.." ಎಂದಳು ಗತ್ತಿನಲ್ಲಿ..!!   

Saturday, November 3, 2012

ಪ್ರತಿಜ್ಞೆ..






ಹಾಸಿಗೆಯಲ್ಲಿ ಕಣ್ಣು ಬಿಟ್ಟು ಮಲಗಿಕೊಂಡೇ ಆಲೋಚಿಸುತ್ತಿದ್ದೆ. ಅಮ್ಮ ಬಂದು 'ಗಂಟೆ ಆಯಿತು ಏಳು ಬೇಗ' ಅಂತ ನಾಲ್ಕಾರು ಸಲ ಕರೆದು ಹೋಗಿದ್ದಳು. ಈಗ ಹೊರಗಿನಿಂದ 'ದೀಪು' ಅಂತ ಅಪ್ಪನ ಸ್ವರವೂ ಕೇಳಿಸಿತು. ಇನ್ನೂ ಏಳದಿದ್ದರೆ ಬೆಳಿಗ್ಗೆ ಬೆಳಿಗ್ಗೆಯೇ ಬೆನ್ನಿಗೆ ಬಿದ್ದರೂ ಬಿದ್ದೀತು ಎಂದುಕೊಂಡು ಮೆಲ್ಲನೆ ಎದ್ದು ತಲೆ ಬಗ್ಗಿಸಿಕೊಂಡು ಬಚ್ಚಲು ಮನೆಗೆ ನಡೆದೆ. ಅಪ್ಪ ಮತ್ತು ತಂಗಿ ಪಾಲಿ ಆಗಲೇ ದೋಸೆ ತಿನ್ನುತ್ತಾ ಕುಳಿತಿದ್ದರು. 

ನನ್ನ ತಟ್ಟೆ ತೆಗೆದುಕೊಂಡು ಬಂದು ಪಾಲಿಯ ಪಕ್ಕವೇ ಕೂತೆ. ಯಾರೂ ನನ್ನನ್ನು ಮಾತಾಡಿಸದಿರಲಿ ಅಂತ ದೇವರನ್ನು ಬೇಡಿಕೊಂಡೆ. ಅಪ್ಪ ಆಗಲೇ ತಮ್ಮ ತಟ್ಟೆ ಎತ್ತಿಕೊಂಡು ಕೈ ತೊಳೆಯಲು ಎದ್ದರು. ನಮ್ಮಲ್ಲಿ ಅವರವರ ತಟ್ಟೆ ಲೋಟ ಅವರೇ ತೊಳೆಯಬೇಕು. ಈ ನಿಯಮ ಅಪ್ಪನೇ ಮಾಡಿದ್ದು. ಆದ್ರೆ ಪಕ್ಕದ ಮನೆ ಸುಧಿ ಮನೆಯ ಕ್ರಮವೇ ಒಳ್ಳೇದು ಅಂತ ನನ್ನ ಭಾವನೆ. ಅವ್ನ ತಟ್ಟೆ ಲೋಟ ಎಲ್ಲಾ ಅವ್ನಕ್ಕ ಪ್ರೀತಿನೇ ತೊಳೆದುಕೊಡ್ತಾಳೆ. ಅವ್ನನ್ನ ಕೇಳಿದರೆ ಗಂಡು ಹುಡುಗರು ಮನೆ ಕೆಲ್ಸ ಮಾಡ್ಬಾರ್ದು ಕಣೋ ಅಂತಾನೆ. ನಮ್ಮನೇನೇ ಇಷ್ಟು ವಿಚಿತ್ರ. ಅಪ್ಪ ಅಮ್ಮಂದು ಸಾವಿರ ರೂಲ್ಸ್..  

ಅಮ್ಮ ತಲೆಗೆ ಮೊಟಕಿ 'ಎಲ್ಲಿದ್ದೀಯಾ.. ದೋಸೆ ಬೇಕಾ ಸಾಕಾ ಅಂತ ಆಗಿಂದ ಕೇಳ್ತಾ ಇದ್ದೀನಿ.. ಏನಾಗಿದೆ ನಿಂಗೆ' ಅಂತ ಕೇಳುವವರೆಗೆ ಯೋಚನೆಯಲ್ಲೇ ಮುಳುಗಿದ್ದೆ. ಯಾಕೋ ತಿಂದಿದ್ದು ಒಂದೇ ದೋಸೆ ಆದರೂ ಹೊಟ್ಟೆ ತುಂಬಿದಂತೆನಿಸಿ 'ಸಾಕು ನಂಗೆ' ಅಂತ ಎದ್ದೆ. 

ಇವತ್ತು ಕಡೇ ದಿನ. ಇಂದೊಂದು ದಿನ ಬೇಗ ಕಳೆದು ಬಿಡಲಪ್ಪಾ.. ಓಹ್ ಎಷ್ಟು ಸಾರಿ ಕೇಳಿಕೊಂಡೆನೇನೋ ಹೀಗೆ..ಈ ನನ್ನ ತಲೆಬಿಸಿಗೆ ಕಾರಣವೇ ಬೇರೆ. 

ಮೊನ್ನೆ ಸಂಜೆ ಶಾಲೆ ಮುಗಿದಾಗ ಪ್ರೇಯರ್ ಹಾಲಿಗೆ ಎಲ್ಲರನ್ನೂ ಕರೆದು, 'ನಾಳೆಂದ ಮೂರು ದಿನ ಜನಗಣತಿ ಇರೋದ್ರಿಂದ ನಿಮಗೆಲ್ಲಾ ರಜ.  ಹಾಗಂತ ಇಡೀ ದಿನ ಆಟ ಆಡೋದಲ್ಲ.. ನಾವು ಟೀಚರ್ಸ್ ನಿಮ್ಮ ಮನೆಗೆ ಬರ್ತೀವಿ .ಆಗ ಓದಿಕೊಂಡು ಇರ್ಬೇಕು. ನಿಮ್ಮ ಮನೆಯವರಲ್ಲೂ ವಿಚಾರಿಸುತ್ತೇವೆ. ಓದದವರಿಗೆ  ಶಾಲೆಯಲ್ಲಿ ಪನಿಶ್ ಮೆಂಟ್ ಇದೆ' ಅಂದಿದ್ರು. ಅದಾದ್ರು ದೊಡ್ದ ವಿಷಯ ಅಲ್ಲ. ಟೀಚರ್ ಏನಾದ್ರು ಇಡೀ ದಿನ ಇರ್ತಾರ..? ಅಲ್ಲಿ ಬರೋದು  ಕಾಣುವಾಗ ಪುಸ್ತಕ ಕೈಯಲ್ಲಿ ಹಿಡಿದರಾಯಿತು. ಹಾಗೇ ಆಡ್ಲಿಕ್ಕೆ ಅಮ್ಮ ಆದ್ರೂ ಎಲ್ಲಿ ಬಿಡ್ತಾಳೆ. ಅವ್ಳೇ ಟೀಚರುಗಳಿಗಿಂತ ಹೆಚ್ಚಾಗಿ ಬಯ್ತಾಳೆ. ಅದ್ರೂ ಇದು ನನ್ನ ಸಮಸ್ಯೆಯೇ ಅಲ್ಲ. 

ಸಮಸ್ಯೆ ಇರೋದು ನೀಲಾ ಟೀಚರ್ ನಮ್ಮನೇಗೆ ಬರೋದ್ರಲ್ಲಿ. ಅವ್ರು ನನ್ನ ಕ್ಲಾಸ್ ಟೀಚರ್. ಗಣಿತ ಅವ್ರೇ ಮಾಡೋದು. ನಂಗೂ ಅವ್ರನ್ನ ಕಂಡರೆ ಇಷ್ಟಾನೇ.. ಲೆಕ್ಕದಲ್ಲಿ ಯಾವಾಗ್ಲೂ ನಾನೇ ಫಸ್ಟ್ ಇಡೀ ಕ್ಲಾಸಿಗೆ. ಯಾವಾಗ್ಲಾದ್ರು ಸಿಕ್ಕಿದ್ರೆ ಹೊಗಳ್ತಾ ಇರ್ತಾರೆ ಅಂತ ಅಮ್ಮ ಹೆಮ್ಮೆಯಿಂದ  ಅಪ್ಪನತ್ರ ಹೇಳೋದನ್ನು ಕೇಳಿದ್ದೀನಿ ನಾನು. 

ಆದ್ರೆ ಈ ಸಲದ ಕಥೆಯೇ ಬೇರೆ. ಅದಕ್ಕೆ ಕಾರಣ ಮಾತ್ರ ಈ ಅಪ್ಪ ಅಮ್ಮನೇ.. ಓ ಅಲ್ಲಿ ಕಾಣುತ್ತಲ್ವಾ ಕಲ್ಯಾಣ ಮಂಟಪ..  ಅಲ್ಲಿ ಅಮ್ಮನ ಊರಿನ ಕಡೆಯವರದ್ದು ಮದುವೆ ಇತ್ತು. ಅವ್ರು ಕಾಗದ ಕೊಡೋದಿಕ್ಕು ನಮ್ಮಲ್ಲಿಗೆ ಬಂದಿದ್ರು. 'ನೀವೂ ಬನ್ನಿ. ಅಲ್ಲಿ ಎಲ್ರೂ ನಿಮ್ಮನ್ನ ಕೇಳ್ತಾರೆ .. ಮಕ್ಳಿಗೆ ಅಡುಗೆ ಮಾಡಿಟ್ಟಿದ್ದೀನಿ. ಬಡಿಸ್ಕೊಂಡು ಊಟ ಮಾಡ್ತಾರೆ. ಪರೀಕ್ಶೆ ಇಲ್ಲಾಂದಿದ್ರೆ ಎಲ್ರೂ ಹೋಗ್ಬೋದಿತ್ತು. ತೊಂದ್ರೇ ಏನೂ ಇಲ್ಲ. ಮಕ್ಳು ಅವ್ರ ಪಾಡಿಗೆ ಓದೋದನ್ನು ಅಭ್ಯಾಸ ಮಾಡೋದು ಒಳ್ಳೇದಲ್ವಾ  .. ಓದ್ಕೊಳ್ಳಿ .. ನಾವು ಹೋಗಿ ಬಂದ್ಬಿಡೋಣ ಅಂತ ಅಪ್ಪನೊಂದಿಗೆ ಹೊರಟಿದ್ಲು. ಹೊರಡುವಾಗ ಸಾವಿರ ಸಲ ಹೇಳಿರಬಹುದು. ಮನೇಲೇ ಇರಿ. ಹೊರಗೆಲ್ಲೂ ಹೋಗ್ಬೇಡಿ. ಚೆನ್ನಾಗಿ ಓದಿಕೊಳ್ಳಿ. ನಾವು ಬಂದ ಮತ್ತೆ ಆಟ ಆಡ್ಲಿಕ್ಕೆ ಹೋದ್ರಾಯ್ತು ಅಂತ. ಎಲ್ಲಾದಕ್ಕು ಕೋಲೆಬಸವನ ತರ ತಲೆ ತೂಗಿದ್ದೆವು ನಾನು ಮತ್ತು ಪಾಲಿ. 

ಅವ್ರು ಆಕಡೆ ಹೋದ ಕೂಡ್ಲೇ ಪಾಲಿ ಪಕ್ಕದ ಮನೆ ಶಾರೀನ್ನ ಕರ್ದು ಅವ್ಳ ಜೊತೆ ಗೊಂಬೆ ಆಟ ಆಡ್ತಾ ಕೂತ್ಕೊಂಡ್ಳು. ನನ್ನನ್ನೂ ಕರೆದಳು. ನಂಗ್ಯಾಕೋ ಈ ಗೊಂಬೆ ಆಟ ಇಷ್ಟಾನೇ ಇಲ್ಲ. ನಾನು ಮೆಲ್ಲನೆ ' ನೋಡೇ ಪಾಲಿ ನೀವಿಬ್ರೂ ಇಲ್ಲೇ ಆಡ್ಕೋತಾ ಇರಿ. ನಾನು ಸುಧಿ ಮನೆಗೆ ಹೋಗಿ ಬೇಗ ಬರ್ತೀನಿ' ಅಂದೆ. ಅದಕ್ಕವಳು 'ಬೇಡ ಗೊತ್ತಾದ್ರೆ ಆಮೇಲೆ ಅಮ್ಮ ಬಯ್ತಾಳೆ' ಅಂದ್ಲು. 'ನನ್ನ ಲೆಕ್ಕದ ನೋಟ್ಸ್ ಅವ್ನತ್ರಾನೇ ಇದೆ .. ಈಗ ಬಂದೆ' ಅಂತ ಹೊರಟೇ ಬಿಟ್ಟಿದ್ದೆ. 

ಅಲ್ಲಿ ಹೋಗ್ಬೇಕಿದ್ರೆ ಸುಧಿ ಮನೆಗೆ ಹೊಸ  ಕೇರಂ ಬೋರ್ಡ್ ತಂದಿದ್ರು. ನಮ್ಗಂತೂ ತುಂಬಾ ಇಷ್ಟದ ಆಟ. ಶಾಲೇಲಿ ಗೇಮ್ಸ್ ಪಿರಿಯಡ್ ಗೆ ಎಲ್ಲಾ ಹೊರಗೆ ಆಡ್ತಾ ಇದ್ರೆ ನಾವೊಂದು ನಾಲ್ಕು ಜನ ಕೇರಂ ಆಡ್ತಿದ್ದೆವು.  ಚೆನ್ನಾಗಿ ಬರ್ತಿತ್ತು  ಈ ಆಟ. ಇಲ್ಲಿ ನೋಡಿದ್ರೆ ಪ್ರೀತಿ ಅವ್ಳ ಫ್ರೆಂಡ್ ರಾಜಿ ಮತ್ತೆ ರೀನಾ  ಮೂರೇ ಜನ ಪಾಪರ್ ಆಟ ಆಡ್ತಿದ್ರು. ನನ್ನನ್ನು ಕಂಡ ಕೂಡ್ಲೇ ಪ್ರೀತಿ ' ಹೋ .. ಚಾಂಪಿಯನ್ ಬಂದಾ.. ಒಳ್ಳೇದಾಯ್ತು.. ಬಾರೋ ಆಟಕ್ಕೆ ಅಂತ ಹಿಡಿದೆಳೆದು ಕೂರಿಸಿದಳು. ನಂಗೆ ಅವ್ಳು ಹಾಗೇ ಕರೆದ ಕುಶಿಗೆ  ನೋಟ್ಸು, ಮನೆ, ಪಾಲಿ, ನಾಳೆಯ ಪರೀಕ್ಷೆ ಎಲ್ಲಾ ಮರೆತೇ ಹೋಯ್ತು. 

ಪಾಲಿ ಒಂದೆರಡು ಸಲ ಬಂದು ಕರೆದು ಹೋದಳು. ನಾನು ಒಂದಾಟ  ಆಡಿ ಸ್ವಲ್ಪ ಓದಿ ಬರ್ತೀನಿ ನೀನು ಹೋಗು ಅಂತ ಅವಳನ್ನಟ್ಟಿದೆ. ' ಅಮ್ಮಂಗೆ ಹೇಳ್ತೀನಿ' ಅಂತ ಹೇಳ್ತಾನೇ ಹೋದಳು.

ಸುಧಿಯ ಅಮ್ಮನ ಒತ್ತಾಯಕ್ಕೆ ಊಟ ಕೂಡಾ ಅಲ್ಲೇ ಮಾಡಿ ಮತ್ತೆ ಆಡಿದೆವು. ಗಂಟೆ ಮೂರಾಗುವ ಹೊತ್ತಿಗೆ ಇನ್ನು ಅಮ್ಮ ಅಪ್ಪ ಬರುವ ಹೊತ್ತಾಯಿತು ಅಂತ ಹೊರಟೆ. ಸುಧಿ ಅಮ್ಮ ಕೊಟ್ಟ ಮೈಸೂರ್ ಪಾಕ್ ಆಗಲೇ ಕಿಸೆಯಲ್ಲಿ ತುರುಕಿಕೊಂಡಿದ್ದೆ. ಪಾಲಿಗೆ ಅದನ್ನು ಕೊಟ್ಟು ' ಅಮ್ಮಂಗೆ ನಾನು ಸುಧಿ ಮನೆಗೆ ಹೋಗಿದ್ದು ಹೇಳ್ಬೇಡ ಅಂದೆ. ಅವಳೂ ಮೈಸೂರುಪಾಕಿನ ತುಂಡನ್ನು ಇಡಿಯಾಗಿ ಬಾಯೊಳಗೆ ತುರುಕಿಕೊಂಡಿದ್ದ ಕಾರಣ ಮಾತಾಡಲಾಗದೆ ತಲೆ ಆಡಿಸಿಯೇ ನನ್ನ ಮಾತಿಗೆ ಸಮ್ಮತಿ ಸೂಚಿಸಿದ್ದಳು.

ಸ್ವಲ್ಪ ಹೊತ್ತಲ್ಲಿ ಮನೆಗೆ ಬಂದ ಅಮ್ಮ ಅಪ್ಪನಿಗೆ ಪುಸ್ತಕ ಬಿಡಿಸಿಟ್ಟು ಓದ್ತಾ ಇದ್ದ ನಮ್ಮನ್ನು ಕಂಡು ಕುಶಿ  ಆಗಿ ' ಸಾಕೀಗ ಓದಿದ್ದು.. ಒಳ್ಳೇ ಮಕ್ಕಳು.. ಸ್ವಲ್ಪ ಹೊರಗೆ ಆಡ್ಕೊಳ್ಳಿ ಅಂದಿದ್ದಳು. ನನ್ನ ಸವಾರಿ ಪುನಃ ಸುಧಿ ಮನೆಗೆ ನಡೆದಿತ್ತು ಕೇರಂ ಆಡಲು. 

ಮಾರನೇ ದಿನ ಲೆಕ್ಕ ಪರೀಕ್ಷೆ. ಮಾಡ್ಲಿಕ್ಕೆ ಹೊರಟ್ರೆ ಯಾವ್ದೂ ಸರಿ ಆಗ್ಲಿಲ್ಲ. ತುಂಬಾ ಕಷ್ಟ ಇತ್ತು. ಜೊತೆಗೆ ಟೀಚರ್ ಬೇರೆ ಬೇಗ ಬೇಗ ಮಾಡಿ ಕೊಡಿ.. ನಂಗೆ ಆಫೀಸಲ್ಲಿ ಕೆಲ್ಸ ಇದೆ ಅಂತ ಪೇಪರ್ ಎಳ್ಕೊಂಡು ಹೋಗಿಯೇ ಬಿಟ್ಟಿದ್ರು. ಉತ್ತರ ಪತ್ರಿಕೆ ಕೊಡುವಾಗ ನನ್ನ ಹೆಸರು ಕಡೇಯಲ್ಲಿ ಹೇಳಿ ಮಾರ್ಕ್ ಹೇಳಿದ್ರು. ಹತ್ತಕ್ಕೆ ಎರಡು. ಎಲ್ಲಾ ಮಕ್ಕಳು ನಗ್ತಾ ಇದ್ರೆ ನನ್ನ ಕಣ್ಣಲ್ಲಿ ನೀರು. ಟೀಚರಿಗೇ ಪಾಪ ಎನ್ನಿಸಿ.. ಯಾಕೇ ಇಷ್ಟು ಕಡಿಮೆ ಮಾರ್ಕು.. ಏನಾಯ್ತು.. ಅಂದರು. ನಂಗೆ ಮೊನ್ನೆ   ಜೋರು ಜ್ವರ ಬಂದಿತ್ತು.. ಲೆಕ್ಕ ಅಬ್ಯಾಸ ಮಾಡ್ಲಿಕೆ ಆಗ್ಲಿಲ್ಲ  ಮಲಗಿದ್ದೆ ಅಂತ ಸುಳ್ಳು ಬಿಟ್ಟಿದ್ದೆ. ಸರಿ ಸರಿ.. ಮೊದ್ಲೇ ಹೇಳ್ಬೇಕಿತ್ತು.. ಅಂತ ಕನಿಕರ ತೋರಿಸಿದ್ದರು. 

ಎಲ್ಲಾ ಮುಗಿತಪ್ಪ ಅಂತ ಸಮಾಧಾನದಿಂದ ಇದ್ದೆ. ಆದರೆ ಈಗ ಅದೇ ನೀಲಾ ಟೀಚರ್ ಬಂದ್ರೆ ಮೊನ್ನೆಯ ಸಂಗತಿ ಹೇಳಿಯೇ ಹೇಳ್ತಾರೆ. ಆಗ ನಾನು ಸುಳ್ಳು ಹೇಳಿದ್ದು ಅಮ್ಮನಿಗೆ ಗೊತ್ತಾಗುತ್ತೆ. ಜೊತೆಗೆ ಮೊದ್ಲಿನ ದಿನ ಸುಧಿ ಮನೇಲಿ ಆಟ ಆಡಿದ್ದು , ಲೆಕ್ಕದಲ್ಲಿ ಎರಡೇ ಎರಡು ಮಾರ್ಕು ಬಂದಿದ್ದು.. ಎಲ್ಲಾ ಗೊತ್ತಾಗುತ್ತೆ. 
ದೇವ್ರೇ..  ಈ ಸಲ ಕ್ಷಮಿಸು.. ಇನ್ನು ಮುಂದೆ ಸುಧಿ ಮನೆ ಕಡೆ ಹೋಗಲ್ಲ. ಅವರ ಕೇರಂ ಬೋರ್ಡ್ ಮುಟ್ಟಿ ಕೂಡಾ  ನೋದಲ್ಲ. ಅಂತ ಪ್ರತಿಜ್ಞೆ ಮಾಡಿದೆ. 

ಹೊರಗಡೆ ಯಾರೋ ಬಂದ ಸದ್ದು. ಮೆಲ್ಲನೆ ಕಿಟಕಿಯಿಂದಲೇ  ಇಣುಕಿದೆ. ನೀಲಾ ಟೀಚರ್  ಚಿಕ್ಕ ಹುಡುಗಿಯ ಕೈ ಹಿಡಿದು ನಿಂತಿದ್ರು. ಅಮ್ಮ ಸೀರೆ ಸೆರಗಲ್ಲಿ ಕೈ ಒರೆಸಿಕೊಳ್ಳುತ್ತಾ ಹೊರಗೆ ಹೋದಳು. ನನಗೆ ಪ್ರಾಣ ಹೋಗುವಷ್ಟು ಹೆದರಿಕೆ ಆಯ್ತು. 

ಮೊನ್ನೆ ನೋಡಿದ ಒಂದು ಪಿಕ್ಚರಲ್ಲಿ ನನ್ನ ಪ್ರಾಯದ ಹುಡುಗನೊಬ್ಬ ಮನೆ ಬಿಟ್ಟು ಓಡಿ ಹೋಗಿದ್ದು ನೆನಪಾಯ್ತು. ನಾನು ಹಾಗೇ ಎಲ್ಲಿಯಾದರೂ ಓಡಿದರೆ ಹೇಗೆ ಅಂತ ಆಲೋಚಿಸಿದೆ.ಆದ್ರೆ ಆ ಹುಡುಗನಿಗೆ ಬಂದ ತೊಂದರೆಗಳೂ ನೆನಪಾಗಿ ಕಾಲೆತ್ತಿ ಇಡಲು ಶಕ್ತಿ ಇಲ್ಲದಷ್ಟು ಭಯ ಆತು. 

ಅಷ್ಟರಲ್ಲಿ ಅಮ್ಮ 'ಹೋ.. ಬನ್ನಿ ಬನ್ನಿ.. ಇವಳ್ಯಾರು ಪುಟ್ಟ ಹುಡುಗಿ' ಅಂತ ಒತ್ತಾಯ ಮಾಡಿ ಒಳಗೆ ಕರೆಯುವುದು ಕೇಳಿಸಿತು. 

ನೀಲಾ ಟೀಚರ್, ' ನಿಮ್ಮಲ್ಲಿಬ್ರೇ ಮಕ್ಕಳಲ್ವಾ ಇರೋದು .. ಹೊಸದಾಗಿ ಏನೂ ಬರೆಯಲಿಕ್ಕೆ ಇಲ್ಲ. ಹಳೇದನ್ನೇ ನೋಡಿ ಬರೀತೀನಿ. ಇವ್ಳು ನನ್ನ ಮಗಳು. ಮನೇಲಿ ಒಬ್ಳೇ ಆಗ್ತಾಳೆ ಅಂತ ಕರ್ಕೊಂಡು ಬಂದೆ. ಇನ್ನು ಕೆಲವು ಮನೆಗೆ ನುಗ್ಗಿ ಬೇಗ ಮನೆಗೆ ಓಡ್ಬೇಕಪ್ಪ.. ಇವತ್ತು ಸಂಜೆ ಊರಿಂದ ಅತ್ತೆ ಮಾವ ಬರ್ತಾರೆ. ಸಲ್ಪ ಅಡುಗೆ ಆಗ್ಬೇಕು.. ನಿಮ್ಮಲ್ಲಿಗೇನು ಇನ್ನೊಮ್ಮೆ ಬರ್ತೀನಿ' ಅಂತ ಹೊರಟೇ ಬಿಟ್ಟರು.

ನನ್ನ ತಲೆ ಮೇಲಿದ್ದ ದೊಡ್ದ ಬಂಡೆ ಸರಿಸಿದಂತಾಯ್ತು. ಅವರು ಹೋಗುವುದನ್ನು ಕಂಡು ಕುಶಿಯಿಂದ  ಕಿರುಚಬೇಕೆಂದುಕೊಂಡೆ. ಅಮ್ಮ ಬಯ್ದರೆ ಅಂತ ಸುಮ್ಮನಾದೆ. ಬೆಳಿಗ್ಗೆ  ತಲೆ ಬಿಸಿಯಲ್ಲಿ ತಿಂದಿದ್ದ ಒಂದು  ದೋಸೆ    ಕರಗಿ ಮಾಯವಾಗಿತ್ತು. 

ಅಮ್ಮನತ್ರ ಬಿಸ್ಕೆಟ್ ಆದ್ರೂ ಕೇಳ್ತೇನೆ ಅಂತ ಎದ್ದೆ. ಸುಧಿ ಬಾಗಿಲ ಬಳಿ ನಿಂತಿದ್ದವನು ನನ್ನನ್ನು ಕಂಡು ' ಇಷ್ಟೊತ್ತು ಓದ್ತಾ ಕೂತಿದ್ದೆ. ಟೀಚರ್ ನಮ್ಮನೇಗೂ ಬರ್ಲಿಲ್ಲ. ಇನ್ನು ಓದ್ಬೇಕೂಂತ ಇಲ್ಲ. ಬಾ ಕೇರಂ ಆಡೋಣ ಅಂದ.
 ಅರೇ.. ಹೌದಲ್ವಾ.. ಎನ್ನಿಸಿ ,  ' ಅಮ್ಮಾ ನಾನು ಸುಧಿ ಮನೇಗೇ ಆಡ್ಲಿಕ್ಕೆ ಹೋಗ್ತೀನಿ ಅಂತ ಹೊರಟೇ ಬಿಟ್ಟೆ.