Pages

Total Visitors

Wednesday, August 29, 2012

ಒಗ್ಗರಣೆ






"ಮಾತು ಮಾತಿಗೆ ಸುಮ್ಮನೆ ಒಗ್ಗರಣೆ ಹಾಕ್ಕೊಂಡು ಯಾಕೆ ಬರ್ತೀಯ? ಸ್ವಲ್ಪ ಸುಮ್ನೆ ಕೂತ್ಕೋಬಾರ್ದಾ.." ಅಂತ ಹಿರಿಯರೆಲ್ಲ ನಮ್ಮ ತಲೆ ಹರಟೆ ಮಾತುಗಳಿಗೆ ಗದರುತ್ತಿದ್ದುದು ನಿಮಗೂ ಅನುಭವವೇದ್ಯವೇ ಆಗಿರುತ್ತದೆ. ಆಗೆಲ್ಲ ಈ ಒಗ್ಗರಣೆ ಎಂಬ ಶಬ್ಧವು ಒಂದು ಬೈಗಳೇ ಇರಬಹುದು ಎಂದು ನನ್ನ ತಿಳುವಳಿಕೆಯಾಗಿತ್ತು. 

ಯಾವಾಗ ಅಡುಗೆ ಮನೆಯ ಕೋಣೆಯಲ್ಲಿ ನನ್ನ ಸೀನುಗಳು ಪ್ರತಿಧ್ವನಿಸಲು ತೊಡಗಿದವೋ ಆವಾಗ ತಿಳಿಯಿತು ನೋಡಿ ಇದರ ಮಹತ್ವ. ಚೆನ್ನಾಗಿ ಅಡುಗೆ ಮಾಡಲು ಬಂದರಷ್ಟೆ ಸಾಲದು. ಅದನ್ನು ಅಲಂಕರಿಸುವುದೂ ಕೂಡ ಅಗತ್ಯ.  ಮಾಡಿದ  ಈ ಅಡುಗೆ ಹೈ ಲೈಟ್ ಆಗುವುದು ಒಗ್ಗರಣೆಯ ಬಲದಿಂದಲೇ..!! 

ಕೈಗೆ ಮೈಗೆ ಸಿಡಿಸಿಕೊಳ್ಳದೇ  ಒಗ್ಗರಣೆ ಹಾಕುವುದೆಂದರೆ ಹಗುರದ ವಿಷಯವೇನಲ್ಲ. ಅದಕ್ಕೆಂದೇ ಎಲ್ಲರೂ ಭಾರವಿರುವ ಉದ್ದನೆಯ ಹಿಡಿಯುಳ್ಳ ಕಬ್ಬಿಣದ ಸೌಟೊಂದನ್ನು ಬಳಸುತ್ತಾರೆ. ಅದನ್ನುಒಲೆಯ ಮೇಲಿರಿಸಿ ಸೌಟಿನಲ್ಲಿ ಒಂದಿಷ್ಟುಎಣ್ಣೆಯೋ ತುಪ್ಪವೋ ಸುರಿದು ಬಿಸಿಯಾಗುತ್ತಿದ್ದಂತೆ ಸ್ವಲ್ಪ ಸಾಸಿವೆ ಮತ್ತು ಕೆಂಪು ಮೆಣಸಿನ ಚೂರುಗಳನ್ನು ಹಾಕಿ ಚಟಪಟನೆ ಸಿಡಿಸಿ ಮತ್ತೊಂದಿಷ್ಟು ಇಂಗು, ಕರಿಬೇವಿನ ಎಲೆಗಳನ್ನು  ಹಾಕಿ ಬಾಡಿಸಿ ಮುಚ್ಚಿಟ್ಟ ಅಡುಗೆಯ ಮುಚ್ಚಳವನ್ನು ಸರಿಸಿ ಸಶಬ್ಧವಾಗಿ ಅದರ ಮೇಲೆ ಹರಡಿದರಾಯಿತು. ಕೂಡಲೇ ಇದು ಸೈರನ್ನಿನಂತೆ ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಅಡುಗೆಯ ಕೆಲಸ ಮುಗಿಯಿತು ಎಂಬ ಸೂಚನೆ ಕೊಡುತ್ತದೆ. 

'ಆಯ್ತೇನ್ರೀ ಅಡುಗೆ, ಅಹಾ ಏನು ಒಗ್ಗರಣೆ ಪರಿಮಳ ಅಂತೀರಿ, ಇಲ್ಲಿವರೆಗೂ ಬಂತುರೀ' ಅಂತ ಹೇಳೇ ಬಿಡುತ್ತಾರೆ. ಅಲ್ಲಿಯವರೆಗೂ ಜಡಭರತರಂತೆ ಕುಳಿತಿದ್ದ ಮನೆ ಮಂದಿ ಲವಲವಿಕೆಯಿಂದ  ಎದ್ದು ಏನಿವತ್ತು ಊಟಕ್ಕೆ? ಯಾಕೋ ಜೋರು ಹಸಿವಾಗುತ್ತಾ ಇದೆ, ಬೇಗ ಬಡಿಸು ಅನ್ನುತ್ತಾ ಬಂದೇ ಬಿಡ್ತಾರೆ. ಬಿಸಿ ಎಣ್ಣೆಯಲ್ಲಿ ಸಾಸಿವೆ ಸಿಡಿದಾಗ ಬಿಟ್ಟುಕೊಳ್ಳುವ ವಿಶೇಷ ರಸ ವಸ್ತುವಿನ ಸಾಮರ್ಥ್ಯ ಅಂತದ್ದು. ಇನ್ನದಕ್ಕೆ ಇಂಗು ಮೆಣಸುಗಳ ಸಾಥ್ ಸಿಕ್ಕರಂತೂ ಕೇಳಲೇ ಬೇಡಿ. 

ಒಹೋ ಒಗ್ಗರಣೆಗೊಂದು ಒಗ್ಗರಣೆ! ಏನು ಮಹಾ..ಎಲ್ಲರೂ ದಿನಾ ಹಾಕ್ತಾರೆ ಅಂತ ಅಂದುಕೋಬೇಡಿ. ಸಭೆ ಸಮಾರಂಭಗಳ ದೊಡ್ಡ ಅಡುಗೆಯಲ್ಲಿ ಇದರ ಮಹತ್ವ ನೋಡಿ ತಿಳಿದುಕೊಳ್ಳಬಹುದು. ಅಲ್ಲಿ ಹತ್ತಾರು ಮಂದಿ ಸೇರಿಕೊಂಡು ಅಡುಗೆ ಮಾಡುತ್ತಿದ್ದರೂ ಒಗ್ಗರಣೆ ಹಾಕುವುದು ಮೇಲಡಿಗೆಯವರೇ ಅಂದರೆ  ಮುಖ್ಯ ಅಡುಗೆ ಭಟ್ರು. ಅವರ ಕೈಗುಣ ಪ್ರಕಟವಾಗುವುದೇ ಒಗ್ಗರಣೆಯಲ್ಲಿ.ಘಮ್ಮೆನ್ನುವ ಒಗ್ಗರಣೆಯನ್ನು ಹಾಕಿದ ಕೂಡಲೇ ಮುಚ್ಚಿಟ್ಟು ಬಿಡುತ್ತಾರೆ. ಅವುಗಳ ಬಂಧನ ವಿಮೋಚನೆಯಾಗುವುದು ಊಟಕ್ಕಾಯಿತು ಎನ್ನುವಾಗಲೇ.. !!  ಪಾತ್ರೆಗಳ ಮುಚ್ಚಳ ತೆರೆದು ಸೌಟಿಂದ ತಿರುವಿ  ಇತರ ಸಣ್ಣ ಪಾತ್ರೆಗಳಿಗೆ ವರ್ಗಾಯಿಸುತ್ತಾರೆ. ಅಲ್ಲಿಯವರೆಗೆ ಒಗ್ಗರಣೆಯು ಅದರ ಮೇಲೆ ಅಶ್ವತ್ಥ ಎಲೆಯ ಮೇಲೆ ಪವಡಿಸಿದ ಬಾಲಕೃಷ್ಣನಂತೆ ತೇಲುತ್ತಲೇ ಇರಬೇಕು. ಓಹ್.. ಏನು ರುಚಿಯಪ್ಪಾ, ಇವರು ಒಗ್ಗರಣೆ ಹಾಕಿದರೆ ಸಾಕು, ಅದು ಹೇಗೋ ರುಚಿಯೂ ಪರಿಮಳವೂ ದುಪ್ಪಟ್ಟಾಗಿಬಿಡುತ್ತದೆ ಎಂದು ಅವರ ಜನಪ್ರಿಯತೆ ಉಣ್ಣುವವರ ಬಾಯಲ್ಲಿ ವ್ಯಕ್ತವಾಗುತ್ತದೆ.

ಇದರ ಹೆಚ್ಚುಗಾರಿಕೆ ಬರೀ ಇಷ್ಟೇ ಎಂದುಕೊಳ್ಳಬೇಡಿ. ತಿಂಡಿ ಮಾಡಲಿಕ್ಕೆ ಉದಾಸೀನ ಕಾಡುತ್ತಿದೆಯೇ? ಅನ್ನಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಒಂದು ಸ್ಟ್ರಾಂಗ್ ಒಗ್ಗರಣೆ ಕೊಟ್ಟು ಕಲಸಿ ತಿನ್ನಿ. ಊಹೂಂ .. ಬೇಡ.. ಬಾಯಾರಿಕೆ ಅನ್ನಿಸುತ್ತಿದೆಯೇ ? ಕಡೆದಿಟ್ಟ ಮಜ್ಜಿಗೆಗೆ ನೀರು ಸೇರಿಸಿ ಹಸಿಮೆಣಸು ಶುಂಠಿ ಉಪ್ಪು ಸೇರಿಸಿ, ಇಂಗಿನ ಗಮಗಮಿಸುವ ಒಗ್ಗರಣೆ ಹಾಕಿ. ಹೊಟ್ಟೆ ತುಂಬಿದ ಕೊಡದಂತಾದರು ಬಾಯಿ  ಇನ್ನಷ್ಟು ಬೇಡೀತು. ಅದೂ ಬಿಡಿ .. ಹಸಿವೇ ಎನಿಸದೆ ಬಾ ರುಚಿ ಕೆಟ್ಟಂತಾಗಿದೆಯೇ? ಹುಣಸೆ ರಸ ಉಪ್ಪು ಬೆಲ್ಲ ನೀರಿಗೆ ಸೇರಿಸಿ ಕುದಿಸಿ ಒಂದು ಖಡಕ್ ಒಗ್ಗರಣೆ ಹಾಕಿ, ಸೂಪಿನಂತೆ ಕುಡಿರಿ. ವಾಹ್ ಎನಿಸುತ್ತದೆಯೇ..!! 
ಹಾಗೆಂದು ಒಗ್ಗರಣೆ ಎಂದರೆ  ಎಲ್ಲವೂ ಒಂದೇ ರೀತಿಯದೇನೂ ಅಲ್ಲ. ನಮ್ಮೂರ ಪಲ್ಯಗಳು, ಉತ್ತರ ಭಾರತದ ಅಡುಗೆಯಂತೆ ಮೊದಲಿಗೆ ಒಗ್ಗರಿಸಿಕೊಂಡು ನಂತರ ತರಕಾರಿಯೋ, ಬೇಳೆಯೋ, ಸೊಪ್ಪೋ,ಹೀಗೆ ಯಾವುದನ್ನಾದರೂ ತನ್ನೊಳಗೆ ಬೆರೆಸಿಕೊಳ್ಳುತ್ತವೆ. ಅದೇ ನಮ್ಮಲ್ಲಿನ ಸಾರು ಸಾಂಬಾರು ಮಜ್ಜಿಗೆ ಹುಳಿಗಳು ತಯಾರಾದ ನಂತರ ಒಗ್ಗರಣೆಂದ ತಮ್ಮನ್ನು ಸಿಂಗರಿಸಿಕೊಳ್ಳುತ್ತವೆ. ಆದರೆ ಎಲ್ಲದರ ಮೂಲ ಉದ್ದೇಶ ಅಡುಗೆಯ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವುದೇ ಆಗಿದೆ.
 
 ಈ ಕಾರಣದಿಂದಲೇ 'ನನ್ನ ಕೈ ತಿಕ್ಕಿ ತಿಕ್ಕಿ ತೊಳೆದರೂ ಮೂರು ದಿನಕ್ಕೆ ಈ ಒಗ್ಗರಣೆ ಪರಿಮಳ ಹೋಗೋದಿಲ್ಲ, ಎಂತಾ ಊಟ ಅಂತೀಯಾ'ಎಂದು ಊಟ ಮುಗಿಸಿ ಗಂಟೆಗಳುರುಳಿದ್ದರೂ,ಇನ್ನೂ ಅದರ ಸವಿಗನಸಿನಲ್ಲಿ ಮುಳುಗೇಳುವವರನ್ನು ನೀವು ನೋಡಿರಬಹುದು. ಇನ್ನು, ಸ್ವಾಭಾವಿಕವಾಗಿಯೇ ಘಾಟು ಹೊಂದಿದ ಈರುಳ್ಳಿ, ಬೆಳ್ಳುಳ್ಳಿಯ ಒಗ್ಗರಣೆಯಾಗಿದ್ದರೆ ಕೈಯ ಜೊತೆಗೆ ಮೈಯೂ ಅದೇ ಪರಿಮಳವನ್ನು ಹೊರಹಾಕುತ್ತದೆ ಬಿಡಿ. 
ಕೆಲವೊಂದು ಪಂಗಡಗಳಲ್ಲಿ ಮನೆಯಲ್ಲಿ ಯಾರಾದರು ತೀರಿ ಹೋಗಿದ್ದರೆ , ಸೂತಕದ ದಿನಗಳು ಕಳೆಯುವವರೆಗೆ ಅಡುಗೆಗೆ ಒಗ್ಗರಣೆ ಬಳಸುವುದಿಲ್ಲ. ಹಾಗಾಗಿಯೇ ಅಪ್ಪಿ ತಪ್ಪಿ ಒಗ್ಗರಣೆ ಹಾಕಲು ಮರೆತಿದ್ದರೆ, ಮನೆಯಲ್ಲಿ , ಹಿರಿತಲೆಗಳೊಮ್ಮೊಮ್ಮೆ  'ಇದೆಂತ ಸಾವಿನ ಅಡುಗೆಯೋ, ಒಗ್ಗರಣೆ ಇಲ್ಲ ಇದ್ರಲ್ಲಿ' ಎಂದು ಬೊಬ್ಬಿರಿಯುವುದನ್ನು ಕೇಳಿರಬಹುದು. ಬಹುಷಃ ಸಾವಿನ ಕರಿನೆರಳು ನಮ್ಮ ಮನೆಯನ್ನೂ ತುಳಿಯದಿರಲಿ  ಎಂಬ ಮುನ್ನೆಚ್ಚರಿಕೆಯೇನೋ ಇದು. 

ತನ್ನ ಸತ್ತ ಮಗುವನ್ನುಬದುಕಿಸು ಎಂದು ಬಂದ ನೊಂದ ತಾಯಿಗೆ, 'ಸಾವು ಕಾಣದ ಮನೆಯ ಸಾಸಿವೆಯ ತಾರವ್ವ' ಎಂದಿದ್ದನಂತೆ ಬುದ್ಧ. ಆದರೆ ಸಾವಿಲ್ಲದ ಮನೆಯ ಸಾಸಿವೆ ಎಲ್ಲಿಯೂ ಅವಳಿಗೆ ಸಿಗಲಿಲ್ಲ. ಹಾಗೆಯೇ ಸಾಸಿವೆ ಇಲ್ಲದ ಮನೆಯೂ ಇದ್ದಿರಲಿಕ್ಕಿಲ್ಲ ಅಲ್ಲವೇ..? ಆಗಿನ ಕಾಲದಲ್ಲೂ ಸಾಸಿವೆ ಎಲ್ಲರ ಅಡುಗೆ ಮನೆಯಲ್ಲಿ ಇದ್ದಿತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ..? ಸಾಸಿವೆ ಇದ್ದಲ್ಲಿ ಒಗ್ಗರಣೆಯೂ ಇದ್ದೀತಲ್ಲವೇ..!! 

ಇಷ್ಟೆಲ್ಲ ಒಗ್ಗರಣೆ ಹಾಕುತ್ತಿರುವ ನಾನು ನನ್ನ ಒಗ್ಗರಣೆ ಕಥೆಯನ್ನು ನಿಮಗೇ ಹೇಳದೇ ಇದ್ದರೆ  ಹೇಗಾದೀತು..! ನಮ್ಮಲ್ಲಿಗೆ ಅವಸರದಲ್ಲಿ ಬಲು ಅಪುರೂಪದ ಅತಿಥಿಗಳ ಆಗಮನವಾಯಿತು. ನಾನು ಕೂಡಾ ಇನ್ನಷ್ಟು ಅವಸರದಲ್ಲಿ ಅಡುಗೆ ಪೂರೈಸಿ ಎಲರನ್ನೂ ಊಟಕ್ಕೆ ಬನ್ನಿ ಎಂದು ತಟ್ಟೆ ಇಟ್ಟು ಆಮಂತ್ರಿಸಿದೆ. ಘಮ ಘಮ ಒಗ್ಗರಣೆಯ ಸುವಾಸನೆ.. ಎಲ್ಲರ ಹೊಗಳಿಕೆಯ ನುಡಿಗಳು ಬೇರೆ.. ನನ್ನ ಹೆಮ್ಮೆಯ ಬೆಲೂನು ಗಾಳಿ ತುಂಬಿ ದೊಡ್ಡದಾಗುತ್ತಲೇ ಇತ್ತು. ಆದರೆ ಅದು ಟುಸ್ಸೆಂದದ್ದು ಪಾಯಸದ ಮೇಲೆ ತೇಲಾಡುತ್ತಿರುವ ಕೆಂಪು ಮೆಣಸು, ಸಾಸಿವೆ, ಕರಿಬೇವಿನೆಲೆಗಳನ್ನು ಕಂಡಾಗಲೇ.. !! ಗಡಿಬಿಡಿಯಿಂದ  ಸಾರು ಸಾಂಬಾರಿನ ಜೊತೆಗೆ ಅದಕ್ಕೂ ಒಗ್ಗರಣೆ ಹಾಕಿದ್ದೆ. ನನ್ನ ಪುಣ್ಯಕ್ಕೆ ಎಲ್ಲವನ್ನೂ ಅಡುಗೆ ಮನೆಂದ ತಂದು ಒಂದೊಂದಾಗಿ ಬಡಿಸುತ್ತಿದ್ದೆ. ಸೌಟಿನಲ್ಲಿ ಮೆಲ್ಲನೆ ಪಾಯಸದ ಒಗ್ಗರಣೆಯನ್ನೆತ್ತಿ ತೆಗೆದು ಸಿಂಕಿಗೆ ಚೆಲ್ಲಿ ಮತ್ತೊಂದಿಷ್ಟು ಏಲಕ್ಕಿ ಹುಡಿ ಸುರುವಿ , ಬೆರೆಸಿ ಆ ದಿನ ಹೇಗೋ ಪರಿಸ್ಥಿತಿ ನಿಭಾಸಿದ್ದೆ. ಆದರೆ ನಂತರ ವಿಷಯ ತಿಳಿದ ನನ್ನವರು ಈಗಲೂ ಪಾಯಸ ಮಾಡಿದ ದಿನ ಒಗ್ಗರಣೆ ಹಾಕಿದ್ದೀ ತಾನೆ.. ಇಲ್ಲದಿದ್ರೆ ರುಚಿಯೇ ಇಲ್ಲ ನೋಡು ಎಂದು ಕಿಚಾಸುವುದನ್ನು ಬಿಟ್ಟಿಲ್ಲ. 

ಅಂದ ಹಾಗೆ ಈ ಒಗ್ಗರಣೆಯನ್ನು ಕಂಡು ಹಿಡಿದ ಮಹಾನುಭಾವನ್ಯಾರು ಎಂಬ ಚಿಂತೆ ನನ್ನನ್ನು ಅಗಾಗ ಕಾಡುವುದುಂಟು. ಸಾಸಿವೆಯ ಒಳಗೊಂದು  ರುಚಿಯ ಕಂಡು ಅದನ್ನು ಬಿಸಿ ಎಣ್ಣೆಯಲ್ಲಿ ಇಂಗು ಮೆಣಸುಗಳೊಂದಿಗೆ ಸಿಡಿಸಿ ಅಡುಗೆಗೊಂದು ಪರಿಮಳದ ಆವರಣವನ್ನು ಕಲ್ಪಿಸಿದವನು ಮಹಾ ಪಾಕಶಾಸ್ತ್ರ ಪರಿಣಿತನೇ ಇರಬೇಕು. ಥಾಮಸ್ ಅಲ್ವ ಎಡಿಸನ್ ಗುಂಡು ಬಲ್ಬನ್ನೂ, ಮಾರ್ಕೋನಿ ರೇಡಿಯೋವನ್ನು , ಗ್ರಹಾಮ್ ಬೆಲ್ ಟೆಲೆಫೋನನ್ನೂ ಕಂಡು ಹಿಡಿಯುವುದಕ್ಕೂ ಮುಂಚೆಯೇ ಇರ ಬೇಕು ಇದರ ಅವಿಷ್ಕಾರವಾದದ್ದು. ಹೆಚ್ಚೇಕೆ ಮಹಾ ಮಹಾ ಬಾಣಸಿಗರಾದ ಭೀಮಸೇನ, ನಳ ಮಹಾರಾಜರು ಹುಟ್ಟುವ  ಮೊದಲೇ ಇದರ ಸಂಶೋಧನೆಯಾಗಿರಬೇಕು. ಅಂತೂ ಇದರ ಕಾಲ ಹಾಗೂ ಕರ್ತೃವಿನ ನಿರ್ಣಯ ಒಗ್ಗರಣೆಯ ಪರಿಮಳದಷ್ಟೇ ನಿಗೂಢ ಹಾಗೂ ಜಟಿಲ. 

ಅಲ್ಲಾ ...  ಒಗ್ಗರಣೆಯ ಬಗ್ಗೆಯೇ ಹೇಳುತ್ತಾ ಕುಳಿತರೆ ಅಡುಗೆ ಮಾಡೋದ್ಯಾವಾಗ? ಅದಕ್ಕೆ ಒಗ್ಗರಣೆ ಬೀಳೋದ್ಯಾವಾಗ ಅಂತ  ಹೇಳ್ತಾ ಇದ್ದೀರಾ.. !! ಎಲ್ಲಾ ರೆಡಿಯಾಗಿದೆ ..ಒಂದಿಷ್ಟು ಒಗ್ಗರಣೆ ಸಿಡಿಸಿದರಾಯಿತು.. ಅರ್ರೇ.. ನೀವೆಲ್ಲಿಗೆ ಹೊರಟ್ರಿ.. ಒಂದಿಷ್ಟು ಊಟ ಮಾಡ್ಕೊಂಡೇ ಹೋದ್ರಾಯ್ತು .. ಬನ್ನಿ ಬನ್ನಿ.. 

Friday, August 17, 2012

ಹೀಗೊಂದು ಘಟನೆ






ಸಡನ್ ಹಾಕಿದ ಬ್ರೇಕಿಗೆ ಈಗಷ್ಟೇ ಮುಗಿಸಿ ಬಂದ ಪಾರ್ಟಿಯ ಗುಂಗಿನಲ್ಲಿದ್ದ   ಚರಣ್ ಮುಗ್ಗರಿಸಿ, 'ಯಾಕೋ... ಏನಾಯ್ತೋ ವಿಶ್ವಾ'  ಅಂದ

ಕತ್ತಲಿನ ಹಾದಿ , ಕಾರಿನ ಹೆಡ್ ಲೈಟಿನ ಬೆಳಕಿಗೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೈನೆಟಿಕ್ ಪಕ್ಕದಲ್ಲಿ ನಿಂತ ಯುವತಿ,  ಕಾರಿಗೆ ಅಡ್ಡ ಕೈ ಹಿಡಿದು ನಿಲ್ಲಿಸುವಂತೆ ಸನ್ನೆ ಮಾಡುತ್ತಿರುವುದು ಕಾಣಿಸಿತು. 

ಚರಣ್ ವಾಚಿನಲ್ಲಿ ಗಂಟೆ ನೋಡಿಕೊಂಡ . ಹನ್ನೊಂದೂವರೆ .. ಇಬ್ಬರೂ ಮುಖ ಮುಖ ನೋಡಿಕೊಂಡು ಕಾರ್ ನಿಲ್ಲಿಸಿದರು. 

ಆಕೆ ಕಾರಿನ ಕಿಟಕಿಯತ್ತ ಬಗ್ಗಿ 'ಗಾಡಿ ಹಾಳಾಗಿದೆ. ಪ್ಲೀಸ್ ಸ್ವಲ್ಪ ಸಹಾಯ ಮಾಡಿ' ಅಂದಳು. 

ವಿಶ್ವ ಆಗಲೇ ಚರಣ್ ಕಡೆಗೆ ತಿರುಗಿ, ಕಣ್ಣಲ್ಲೇ ಏನೋ ಸನ್ನೆ ಮಾಡಿದ. 


ಪಾರ್ಟಿಯಲ್ಲಿ ಏರಿಸಿದ್ದ ಗುಂಡು ಕೆಲಸ ಮಾಡುತ್ತಿತ್ತು. ತಾನಾಗಿ ಬಂದು ಕೈಗೆ ಸಿಕ್ಕಿದ ಹಕ್ಕಿಯನ್ನು ಬಿಡಲುಂಟೇ ..!!

ಕಾರಿನ ಎರಡು ಬಾಗಿಲುಗಳಿಂದ ಇಳಿದವರು ಎರಡೂ ಕಡೆಯಿಂದ ಆಕೆಯನ್ನು ಸುತ್ತುವರಿದರು. ಆಕೆ ಅಯೋಮಯವಾಗಿ  'ಪ್ಲೀಸ್, ಪ್ಲೀಸ್ 'ಎನ್ನುತ್ತಿರುವಾಗ ಚರಣ್ ಆಕೆಯ ಕೈ ಹಿಡಿದು ತನ್ನೆಡೆ ಎಳೆದುಕೊಂಡ. 
ಅಷ್ಟೆ.. 

ಬುಡ ಕಡಿದ ಬಾಳೆ ಗಿಡದಂತೆ ಆತನ ಮೇಲೆ ಬಿದ್ದಳು. 

ಏನಾಯಿತಪ್ಪ ಎಂದು ಕಕ್ಕಾಬಿಕ್ಕಿಯಾದ ಅವನಿಗೆ ಕಂಡದ್ದು ಹಲ್ಲುಗಳನ್ನು ಕಟ ಕಟಿಸುತ್ತಾ ಕಣ್ಣುಗಳೆಲ್ಲ ಮೇಲಕ್ಕೆ ಸಿಕ್ಕಿದಂತಾಗಿ ನಡುಗುತ್ತಿರುವ ಅವಳ ದೇಹ.


ವಿಶ್ವ ಕೂಡಲೇ 'ಪಿಟ್ಸ್ ಕಣೋ .. ಬಿಟ್ಬಿದು' ಎಂದ. ಕಾರಿಗೆ ಅಡ್ಡವಾಗಿ ಬಿದ್ದವಳನ್ನು ಇಬ್ಬರೂ ಎತ್ತಿ ರಸ್ತೆಯ  ಪಕ್ಕಕ್ಕೆ ಮಲಗಿಸಿದರು. ಇನ್ನೂ ಅವಳ ದೇಹ ನಡುಗುತ್ತಲೇ ಇತ್ತು.

'ಥೂ ಕರ್ಮ ಕಣೋ ನಡೀ ಬೇಗ ..' ಎಂದ ವಿಶ್ವನ ಮಾತಿಗೆ ಗೋಣಾಡಿಸುತ್ತ   ಗಾಡಿ ಏರಿದ ಚರಣ್.. 

ಕಾರ್ ಮುಂದೋಡುತ್ತಲೇ ಬಿದ್ದಿದ್ದ ಯುವತಿ ಸೀರೆಯ ದೂಳು ಕೊಡವಿಕೊಳ್ಳುತ್ತ ಎದ್ದು , ಅವರಿಬ್ಬರ ಜೇಬಿನಿಂದ ತೆಗೆದ ಪರ್ಸುಗಳ ದಪ್ಪವನ್ನು ಕೈಯಿಂದಲೇ ಮುಟ್ಟಿ ಅಂದಾಜಿಸುತ್ತಾ ಕೈನೆಟಿಕ್  ಕಡೆಗೆ ನಡೆದು ಸ್ಟಾರ್ಟ್ ಮಾಡಿ ಹೊರಟಳು.  

-- 

Tuesday, August 7, 2012

ಆ ಎರಡು ಗಂಟೆಗಳು..



ಶನಿವಾರ ಬರುತ್ತಿರುವಂತೆಯೇ ಮನಸ್ಸು ಆದಿತ್ಯವಾರದ ರಜೆಯ ಮೂಡ್ ಹೊದ್ದುಕೊಳ್ಳುತ್ತದೆ. ಆದಿತ್ಯವಾರ ಸೋಮವಾರದ ಕೆಲಸದ ಚಿಂತೆ. ಇವತ್ತು ಶನಿವಾರ ಹಾಗೇ ಆಯ್ತು. ಹೇಗೂ ಫ್ರೀ ಇದ್ದೀವಿ  ಚಿಕ್ಕಮ್ಮನ ಮನೆಗೆ ಹೋಗೋಣ್ವಾ, ತುಂಬಾ ದಿನ ಆಯ್ತು ಅಂತ ರಾಗ ತೆಗೆದೆ. ನನ್ನ ರಾಗಕ್ಕೆ ಇವರ ಕುತ್ತಿಗೆ ಅಲುಗಾಡಿದ್ದೇ ತಡ, ಅವಳ ಮನೆಗೆ ತೆಗೆದುಕೊಂಡು ಹೋಗುವಂತವುಗಳನ್ನೆಲ್ಲಾ ಕಾರಿನ ಹಿಂದಿನ ಸೀಟಿಗೆ ತುರುಕಿದೆ. ಅವಳಿರುವುದು ಕೇರಳ.. ಅಂದ್ರೆ ತುಂಬಾ ದೂರ ಅಂದ್ಕೊಬೇಡಿ. ನಮ್ಮದು ಕರ್ನಾಟಕ ಕೇರಳ ಗಡಿಯ ಹತ್ತಿರವಿರುವ ಪ್ರದೇಶವಾದ್ದರಿಂದ ಅವಳು ಗಡಿಯ ಆ ಕಡೆಯಲ್ಲೇ ಇದ್ದಳು.ಬೆಳಗ್ಗೆಯೇ ಹೊರಟಿತು ನಮ್ಮ ಗಾಡಿ.. 

ಅಲ್ಲಿ ಮಾತಿನಲ್ಲಿ ಹೇಗೆ ಹೊತ್ತು ಹೋತೋ ಗೊತ್ತೇ ಆಗ್ಲಿಲ್ಲ. ಊಟ ಆದ ಸ್ವಲ್ಪ ಹೊತ್ತಲ್ಲೇ ಹೊರಡೋಣ ಅಂತ ಸುರು ಮಾಡಿದೆ. 'ಇನ್ನೊಂದು ಸ್ವಲ್ಪ ಹೊತ್ತು ಇದ್ರೇನೇ ನಿಂಗೆ? ಮನೆಯಲ್ಲೇನು ಅಳುವ ಮಕ್ಕಳಿದ್ದಾರಾ, ದಾರಿಯಲ್ಲಿ ಏನಾದ್ರೂ ಗಿಡ, ಹಣ್ಣು ಕಣ್ಣಿಗೆ ಬಿದ್ದಿರ್ಬೇಕು ಅದಕ್ಕೆ ಅವಸರವೇನೋ' ಅಂತ ಚಿಕ್ಕಮ್ಮ ಗದರಿಸಿದಳು. ಅವಳ ಸಂದೇಹ ಸುಳ್ಳಾಗಿರಲಿಲ್ಲ. ದಾರಿಯ ಇಕ್ಕೆಲಗಳಲ್ಲಿ ಕಪ್ಪು ಕಪ್ಪು ರಾಶಿ ಹಾಕಿಟ್ಟಂತೆ ಕುಂಟಾಲ ಹಣ್ಣುಗಳು ಬರುವಾಗಲೇ ಬಾಯಲ್ಲಿ ನೀರೂರಿಸಿದ್ದವು. 'ಸ್ವಲ್ಪ ಕಾರ್ ನಿಲ್ಸಿ ಹಣ್ಣು ಕುಯ್ಕೊಳ್ಳೋಣ..' ಅಂದ್ರೆ 'ಎಲ್ಲಾ ವಾಪಾಸ್ ಬರುವಾಗ..' ಅಂತ ಎಕ್ಸಿಲೇಟರ್ ತುಳಿದಿದ್ದರು. 

ಅವರಿನ್ನೂ ನಿಲ್ಲದ ಮಾತಿನ ಎಳೆ ಹಿಡಿದು ಮಾತಾನಾಡುತ್ತಾ ಇದ್ದರೆ ನಾನು ಇವರನ್ನು ಎಳೆದುಕೊಂಡು 'ಬೇಗ ಬೇಗ' ಅಂತ ಹೊರಟಿದ್ದೆ. ಹಣ್ಣಿನ ಗಿಡಗಳು ಕಂಡಲ್ಲೆಲ್ಲಾ 'ಇಲ್ಲಿ ನಿಲ್ಲಿಸಿ ..ಹಾಂ ..ಇಲ್ಲಿ ..' ಅಂತ ನಾನು ಇಳಿಯಲು ಸಿದ್ಧವಾಗುತ್ತಿದ್ದರೆ ಇವರು.. 'ನಿಲ್ಲು.. ಇಲ್ಲಲ್ಲ .. ಇನ್ನೂ ಸ್ವಲ್ಪ ಮುಂದೆ..,  ಅಲ್ಲಿ ತುಂಬಾ ಇದೆ' ಅಂತ ನನ್ನನ್ನು ತಡೆಯುತ್ತಿದ್ದರು. 'ಇನ್ನು ಮುಂದೆ ಹಣ್ಣು  ಕಾಣುವಾಗ ನಿಲ್ಲಿಸದಿದ್ರೆ ಕಾರಿನಿಂದ ಕೆಳಗೆ ಹಾರ್ತೀನಿ ಅಷ್ಟೇ' ಎಂಬ ನನ್ನ ಧಮಕಿಯ ನಡುವೆಯೂ ಕಾರ್ ವೇಗವಾಗಿ ಸಾಗುತ್ತಿತ್ತು. 

ಎದುರಿನಲ್ಲಿ  ಏರು ಹಾದಿ. ಮುಂದೆ ಎಸ್ ಆಕಾರದ ದೊಡ್ಡ ತಿರುವು. ಹೋಗುತ್ತಿದ್ದ ಕಾರ್ ತಟ್ಟನೇ ನಿಂತಿತು. ಇಲ್ಲೆಲ್ಲಿದೆ ಹಣ್ಣು ಎಂದು ನಾನು ಮಳೆಯಿಂದಾಗಿ  ಮುಚ್ಚಿದ್ದ ಗ್ಲಾಸನ್ನು ಇಳಿಸಿ ತಲೆ ಹೊರಗೆ ಹಾಕಿ ಹುಡುಕುತ್ತಿದ್ದರೆ, ಇವರು ಮತ್ತೆ ಮತ್ತೆ ಕಾರ್ ಸ್ಟಾರ್ಟ್ ಮಾಡುವ ಪ್ರಯತ್ನದಲ್ಲಿದ್ದಾರೆ.ಆಗಲೇ ನನ್ನ ತಲೆಯ ಟ್ಯೂಬ್ ಲೈಟ್ ಉರಿದು ಗಾಡಿ ಹಾಳಾಗಿದೆ ಅಂತ ತಿಳೀತು. 

ಹೆಚ್ಚಿನ ಜನ ಸಂಚಾರವಿಲ್ಲದ ಕಾಡಿನ ಹಾದಿ.ಪೇಟೆ ಎನ್ನುವ ನಾಲ್ಕಾರು ಅಂಗಡಿಗಳು ಇರುವ ಜಾಗ ಸಿಗಬೇಕಾದರೆ ಇನ್ನೂ ಆರೇಳು ಮೈಲು ಸಾಗಬೇಕಿತ್ತು. ಗಂಟೆ ನೋಡಿದರೆ ಅತ್ತ ಮಧ್ಯಾಹ್ನವೂ ಅಲ್ಲದ ಸಂಜೆಯೂ ಅಲ್ಲದ ಮೂರೂವರೆ.ನಾನು ಸುತ್ತು ಮುತ್ತೆಲ್ಲ ನೋಡಿದೆ. ರಸ್ತೆಯ ಒಂದು ಬದಿಯಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಕಾಣಿಕೆ ಡಬ್ಬಿ, ಇನ್ನೊಂದು ಕಡೆ ಧೂಮಾವತಿ ದೈವದ ಕಾಣಿಕೆ ಡಬ್ಬಿ.ಪರ್ಸ್ ಅಲ್ಲಾಡಿಸಿ ನೋಡಿದರೆ ಒಂದು ರೂಪಾಯಿ  ಸಿಕ್ಕಿತು. ಯಾವ ಡಬ್ಬಿಗೆ ಹಾಕಿದರೂ ತೊಂದರೆ ಕಟ್ಟಿಟ್ಟ ಬುತ್ತಿ. ಇನ್ನೊಂದು ದೇವರಿಗೆ ಸಿಟ್ಟು ಬಂದು ಗಾಡಿ ಇಂದಿಡೀ ಸ್ಟಾರ್ಟ್ ಆಗದಂತೆ ಶಾಪ ಕೊಟ್ಟು ಬಿಟ್ಟರೇ.. ಬೇಡಪ್ಪಾ.. ನಾಳೆ ಎಕ್ಲೇರ್ಸ್ ಕೊಳ್ಳೋಕಾದರೂ ಆತು ಎಂದು ಪರ್ಸಿನೊಳಗೆ ಪುನಃ ತುರುಕಿದೆ. ಹತ್ತಿರದಲ್ಲೇ ಒಂದು ಮನೆ ಇತ್ತು. ಆದರೆ ಅಲ್ಲಿದ್ದವರಿಂದ ಕಾರಿಗೇನೂ ಸಹಾಯವಾಗಲಾರದು ಅನ್ನಿಸಿತು. 

ಈಗ ನಮ್ಮ ದೃಷ್ಟಿ  ಏಕಕಾಲಕ್ಕೆ ಮೊಬೈಲ್ ನ ಮೇಲೆ.. ಈ ಕಾಡಿನೊಳಗೂ ಅದರ ರೇಂಜ್ ಸಿಗುವ ಬಗ್ಗೆ ಇಬ್ಬರಲ್ಲೂ ಸಂಶಯ ಇತ್ತು.ಮೊಬೈಲ್ ಮಾತ್ರ 'ತಾನು ಸಿದ್ಧ ಕಾಲ್ ಮಾಡಿ' ಅಂತ ನೆಟ್ವರ್ಕ್ ನೆಟ್ಟಗೆ  ಇರುವುದನ್ನು ತೋರಿಸುತ್ತಿತ್ತು.ಅಬ್ಬಾ..ಬದುಕಿದೆ
ವು  ಅಂದುಕೊಂಡೆವು. ಆದರೆ ಕರೆ ಮಾಡುವುದು ಯಾರಿಗೆ? ಇಲ್ಲಿ ನಮಗೆ ಗೊತ್ತಿರುವ ಮೆಕ್ಯಾನಿಕ್  ಗಳಿಲ್ಲ. ಜೊತೆಗೆ ಇದು ಕೇರಳ.ಭಾಷೆಯ ಸಮಸ್ಯೆ ಬೇರೆ.. 
ಶನಿವಾರ ಆದ್ದರಿಂದ ಮಗನಿಗೆ ಆಫೀಸಿನ ಕೆಲಸಗಳು ಹೆಚ್ಚು ಇರಲಾರದು ಅವನಿಗೆ ಹೇಳೋಣ ಅಂತ ಕರೆ ಮಾಡಿದೆವು. ಇನ್ನೆರಡು ಗಂಟೆಗಳಲ್ಲಿ ಅಲ್ಲಿ ಮೆಕ್ಯಾನಿಕ್ ಸಮೇತ ಬರ್ತೀನಿ ಅಂದ.ಸಧ್ಯದ ಸಮಸ್ಯೆಯೇನೋ ಪರಿಹಾರವಾಯಿತು. ಆದರೆ ಎರಡು ಗಂಟೆ ಈ ಕಾಡಿನ ದಾರಿಯಲ್ಲಿ ಮಾಡುವುದೇನು?ಕಾರ್ ಹಾಳಾಗುವುದು ಆಗಿದೆ. ಸ್ವಲ್ಪ ಹಣ್ಣಿನ ಗಿಡಗಳಿರುವಲ್ಲಿ ಹಾಳಾಗಿದ್ದರೆ ಇದರ ಗಂಟೇನು ಹೋಗುತ್ತಿತ್ತು ಎಂದು ಸಶಬ್ಧವಾಗಿಯೇ ಗೊಣಗಿದೆ. ಇವರಾಗಲೇ ಕ್ಯಾಮರಾ ಕುತ್ತಿಗೆಗೆ ನೇತು ಹಾಕಿ ಕೆಳಗಿಳಿದಾಗಿತ್ತು. 

ನಾನು ಕಾರಿನೊಳಗಿನಿಂದಲೇ ಹತ್ತಿರದಲ್ಲಿದ್ದ ಮನೆಯ ಕಡೆ ಕಣ್ಣುಹಾಯಿಸಿದೆ. ಪುಟ್ಟ ವಠಾರ. ಹೆಂಗಸೊಬ್ಬಳು ಹಾಲಿನ ಲೋಟ ಹಿಡಿದು ಕುಡಿಯಲೊಲ್ಲದ ಮಗನನ್ನು ಗದರಿಸುತ್ತಿದ್ದಳು.ಅವನು  ಬಾಯಲ್ಲಿ ಬಸ್ಸಿನ ಶಬ್ಧ ಮಾಡುತ್ತಾ ಅವಳ ಕೈಗೆ ಸಿಗದೆ ಅತ್ತಿತ್ತ ಒಡಾಡುತ್ತಿದ್ದ. ನಿಂತ ಕಾರಿನ ಕಡೆಗೆ ಕೈ ತೋರಿಸಿ ಹಾಲು ಕುಡಿಯದಿದ್ರೆ ಅವರು ಕರ್ಕೊಂಡು ಹೋಗ್ತಾರೆ ನಿನ್ನ ಅಂತ ಹೆದರಿಸಿದಳವಳು.ಗಟಗಟನೆ ಹಾಲು ಕುಡಿದ. ಅಜ್ಜಿಯೊಬ್ಬಳು ಮೊರದ ತುಂಬಾ ಬೀಡಿ ಎಲೆಗಳನ್ನಿಟ್ಟುಕೊಂಡು ಅದನ್ನು ಅಳತೆಗೆ ಕತ್ತರಿಸುತ್ತಿದ್ದಳು. ಹತ್ತಿರದಲ್ಲಿದ ಪೀಕುದಾನಿಯ ಕಡೆಗೆ ಆಗಾಗ ಬಗ್ಗಿ ಬಾಯೊಳಗಿರುವ ತಾಂಬೂಲ ರಸ ಉಗುಳುತ್ತಿದ್ದಳು.

ಹುಡುಗನಿಗೇನೆನಿತೋ ಅವಳಿಟ್ಟ ಪೀಕುದಾನಿಯನ್ನೆತ್ತಿಕೊಂಡು ನೆಲಕ್ಕೆ ಒತ್ತಿ ದೂಡುತ್ತಾ ಬಾಯಲ್ಲಿ ಹಾರ್ನಿನ ಸದ್ದು ಮಾಡುತ್ತಾ ಬಸ್ಸಾಟ ಆಡತೊಡಗಿದ.ನಡು ನಡುವಿಗೆ ನನ್ನ ಕಡೆಗೆ ಕಳ್ಳ ನೋಟ. ಕೆಲಸದಲ್ಲೆ ಮಗ್ನಳಾಗಿದ್ದ ಅಜ್ಜಿ ಪೀಕುದಾನಿಯ ಇದ್ದ ಕಡೆಗೆ ಉಗುಳಲು ಬಗ್ಗಿದರೆ ಅಲ್ಲೇನಿದೆ? ದೊಡ್ಡ ಸ್ವರದಲ್ಲಿ ಮಗುವಿಗೆ ಬೈದಳು. ಮನೆಯೊಳಗಿದ್ದ ಹೆಂಗಸು ಅದನ್ನು ಕೇಳಿ ಹೊರ ಬಂದು ಮಗುವಿನ ಬೆನ್ನಿಗೆ ಪೆಟ್ಟು ಕೊಟ್ಟು, ಪೀಕುದಾನಿಯನ್ನೆತ್ತಿ ಅಜ್ಜಿಯ ಪಕ್ಕದಲ್ಲಿಟ್ಟು ಅವನನ್ನೆತ್ತಿಕೊಂಡು  ಒಳ ನಡೆದಳು. ಅವನ ಅಳುವಿನ  ತಾರಕ ಸ್ವರ ಕಿವಿಗೆ ಅಪ್ಪಳಿಸತೊಡಗಿತು. 

ಬೇಸರವೆನಿಸಿ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ ಇನ್ನೊಂದು ಮನೆಯ ಕಡೆಗೆ ಕಣ್ಣು ಕೊಟ್ಟೆ. ಉದ್ದನೆಯ ಬಳ್ಳಿ ಕಟ್ಟಿ ಅಂಗಳದಲ್ಲಿ ನೇತು ಹಾಕಿದ್ದ ಬಟ್ಟೆಗಳು ಆ ಮನೆಯಲ್ಲಿರಬಹುದಾದ ಸದಸ್ಯರನ್ನು ಎಣಿಸುವಂತಿತ್ತು. ಎಳೆ ಪ್ರಾಯದ ಹುಡುಗಿಯೊಬ್ಬಳು ಒಂದಿಷ್ಟು ಮೋಡ ಮುಸುಕಿದೊಡನೆ ಹೊರ ಬಂದು ಆಕಾಶ ನೋಡಿ ಮಳೆಯ ಸಮೀಕ್ಷೆ ಮಾಡಿ ಒಳಗೆ ಹೋಗುತ್ತಿದ್ದಳು. ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಸಾಗುವ ವಾಹನಗಳು. ಮತ್ತೆಲ್ಲ ಮೌನ.. 
ಸ್ವಲ್ಪ ಹೊತ್ತಿನಲ್ಲಿ ಹುಲ್ಲು ಹೊತ್ತ ಮಹಿಳೆಯೊಬ್ಬಳು ಕಣ್ಣಿಗೆ ಅಡ್ಡವಾಗಿದ್ದ ಹುಲ್ಲನ್ನು ಸರಿಸಿಕೊಂಡು ಕಾರಿನೊಳಗೆ ಇಣುಕಿ ನನ್ನ ಮುಖ ಕಂಡು ನಕ್ಕು ' ಎಂದಾಯಿ' ಎಂದಳು .. ನನ್ನ ಹಾಳು ಮೂಳು ಮಲಯಾಳಂ ನಲ್ಲಿ  ಅವಳಿಗೆ ವಿಷಯ ಹೇಳಿದೆ.  ಅರ್ಥವಾಯಿತೋ ಇಲ್ಲವೋ ತಿಳಿಯಲಿಲ್ಲ . 

ಅಷ್ಟರಲ್ಲಿ ನಮ್ಮ ಕಾರಿನ ಹಿಂದೆ  ರೈನುಕೋಟುದಾರಿಯೊಬ್ಬ ಪ್ಲಾಸ್ಟಿಕ್ ಕವರ್ ಹೊದೆದಿದ್ದ ದೊಡ್ಡ ಕಟ್ಟೊಂದನ್ನು ಎತ್ತಿಕೊಂಡು ಮಗುವಿದ್ದ ಮನೆಯ ಕಡೆಗೆ ನಡೆದ. ವಠಾರದಲ್ಲಿದ್ದ ಮೂರ್ನಾಲ್ಕು ಹೆಂಗಸರು ಅವನ ಸುತ್ತ ನೆರೆದರು. ಅವನು ಕಟ್ಟು ಬಿಚ್ಚಿ ಅದರಲ್ಲಿದ್ದ ಸೀರೆ ಮತ್ತು ಚೂಡಿದಾರ್ ಪೀಸ್ ಗಳನ್ನು ಒಂದೊಂದಾಗಿ ಹೊರತೆಗೆದು ತೋರಿಸುತ್ತಿದ್ದ. ರೇಟಿನ ಬಗ್ಗೆ ಚರ್ಚೆಗಳು ವಾತಾವರಣದ ಮೌನ ಕಲಕಿತ್ತು. ಒಂದು ಮನೆಯವಳು ಸೀರೆ ತೆಗೆದುಕೊಂಡಳು.ವನು ಹೋದ ಬಳಿಕ ಎಲ್ಲರೂ ಅದನ್ನು ಬಿಚ್ಚಿ ಹೊರಳಿಸಿ ಹೊರಳಿಸಿ ನೋಡಿದರು. ಸೀರೆಯ ಒಡತಿಯ ಮುಖದಲ್ಲಿ ಗೆಲುವಿತ್ತು.

ನನ್ನ ಕಣ್ಣು ಆಗಾಗ ಮಗ ಬರುವ ದಾರಿಯೆಡೆಗೆ .. ಅವನ ಕೆಂಪು ಕಾರು ಬರುವ ಕಡೆಗೇ ನೋಡುತ್ತಿತ್ತು. ನನ್ನ ನಿರೀಕ್ಷೆಯಂತೆ ದೂರದಲ್ಲಿ ಬರುವುದು ಕಾಣಿಸಿತು. ಮೆಕ್ಯಾನಿಕ್ ಇಳಿದವನೇ ರಿಪೆರಿಗೆ ಸಿದ್ಧನಾದ. ಟೈಮಿಂಗ್  ತಪ್ಪಿರಬೇಕು ಅಂದ. ಹೌದು ಮಾರಾಯಾ.. ನಮ್ಮ ಟೈಮೇ ಸರಿ ಇಲ್ಲ ಅಂದೆ. ಅದಕ್ಕವನು ಕಾರಿನ ಟೈಮಿಂಗ್ ಬೆಲ್ಟ್  ಅಕ್ಕಾ ನಾನು ಹೇಳಿದ್ದು ಅಂದ. ಒಂದೊಂದು ಸ್ಕ್ರೂ ಸಡಿಲಿಸುತ್ತಾ ತೊಂದರೆಗಳ ಸ್ಪಷ್ಟ ಚಿತ್ರಣ ನೀಡುತ್ತಾ ಹೋದ. ಇವರಿಬ್ಬರೂ ಅದನ್ನುಕೇಳುತ್ತಾ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾ, ಅವನ ಮಾತಿನೊಳಗೆ ಮುಳುಗಿದರು. 

ನನಗೇಕೋ ಈ ಕಾರಿನ ಭಾಷೆ ಅರ್ಥ ಆಗದೆ, ಪಕ್ಕದಲ್ಲಿದ್ದ ಮಗನ ಕಾರಿನೊಳಗೆ ನುಸುಳಿದೆ. ಅದರ ಬಾಕ್ಸಿನಲ್ಲಿ ಚಾಕೊಲೇಟ್ ಬಿಸ್ಕೆಟ್ ಇದೆ ಬೇಕಾದ್ರೆ ತೆಕ್ಕೋ ಎಂದ ಮಗರಾಯ. ಅವನು ಹೇಳುವ ಮೊದಲೇ ನನ್ನ ಕೈ ಅದನ್ನೆಲ್ಲ ಎತ್ತಿಕೊಂಡಾಗಿತ್ತು. ಆ ಮನೆಯ ಅಳುತ್ತಿದ್ದ ಮಗು ಈಗ ಬೇರೆ ಅಂಗಿ ಹಾಕಿಕೊಂಡು ಕಾರಿನ ಬಳಿ ಸೊಂಟಕ್ಕೆ ಕೈ ಕೊಟ್ಟು ನಿಂತಿತ್ತು. ಅದರಮ್ಮ ಎಷ್ಟು ಕರೆದರೂ ಅತ್ತ ಕಡೆಗೆ ತಿರುಗದೇ..!! ನನ್ನ ಕೈಯಲ್ಲಿದ್ದ ಚಾಕೋಲೇಟನ್ನು ಮಗುವಿಗೆ ಕೊಡಲಾ ಎಂದು ಅದರಮ್ಮನಲ್ಲಿ ಕೇಳಿದೆ. ನಾಚುತ್ತಲೇ ತಲೆ ಅಲುಗಿಸಿದಳು. ಯಾವುದೇ ಅಳುಕಿಲ್ಲದೆ ಅದು ತನ್ನ ಹಕ್ಕೆಂಬಂತೆ ಚಾಕೋಲೇಟ್ ಪಡೆದ ಮಗು ಕಾರಿನ ಇನ್ನಷ್ಟು ಸಮೀಪ ಬಂದು ನೋಡತೊಡಗಿತು. 

ಕುಳಿತು ಕುಳಿತು ಕಾಲು ನೋವು ಬಂದಿದ್ದರಿಂದ ಮೆಲ್ಲನೆ ಇಳಿದು ಸ್ವಲ್ಪ ದೂರ ರಸ್ತೆಯಲ್ಲಿ ನಡೆದೆ. ದೂರದಲ್ಲಿದ್ದ ಮನೆಯ ಹತ್ತಿರ ಪುಟ್ಟದೊಂದು ಹುಡುಗಿ ತನ್ನಷ್ಟಕ್ಕೆ ತಾನೆ ಇಳಿ ಬಿಟ್ಟ ಬಳ್ಳಿಯಲ್ಲಿ ಉಯ್ಯಾಲೆ ತೂಗಿಕೊಳ್ಳುತ್ತಿದ್ದಳು. ಯಾವುದೇ ಚಿಂತೆಯಿಲ್ಲ.. ಎಷ್ಟು ಸುಂದರ ಬಾಲ್ಯ ಅನ್ನಿಸಿತು.. ಎದುರಿನಿಂದ ಹೆಂಗಳೆಯರ ಗುಂಪೊಂದು ನಗುತ್ತ ಬರುತ್ತಿತ್ತು. ಎಲ್ಲಿಂದಲೋ ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದವರು.. ಯಾರನ್ನೂ ಕಾಯುವ ತಲೆ ಬಿಸಿ ಇಲ್ಲ ಇವರಿಗೆ ಅನ್ನಿಸ್ತು. ಕಾಲು ಎಳೆದಂತೆ ಮುಂದಕ್ಕೆ ಸಾಗುವ ಬದುಕು.. ಕಾರ್ ಹಾಳಾಗಿದೆ ಎಂದು ನಡು ರಸ್ತೆಯಲ್ಲಿ ಅಬ್ಬೇಪಾರಿಯಂತೆ  ಅಲೆಯುವ ನಾನೆಲ್ಲಿ.. ಸೈನಿಕರಂತೆ ನಡೆಯುವ ಇವರೆಲ್ಲಿ.. ಜೀವನೋತ್ಸಾಹಕ್ಕೆ ವಂದಿಸೋಣ ಅನ್ನಿಸಿತು.. ಮರಳಿ ಬಂದೆ.. 

ಸಂಜೆ ಗತ್ತಲು.. ಸೊಳ್ಳೆಗಳು ಹೊಸ ನೆತ್ತರಿನ ಮೋಹಕ್ಕೆ ಸಿಲುಕಿ ಆಗೀಗ ಮೈ ಮೇಲೆ ಕುಳಿತುಕೊಳ್ಳುತ್ತಿದ್ದವು.ಅಷ್ಟರಲ್
ಲಿ ನಮ್ಮ ಕಾರ್ ಭರ್ರ್ ಎಂಬ ಸದ್ದಿನೊಂದಿಗೆ ಸ್ಟಾರ್ಟ್ ಆಯಿತು. ನಾನು ಮತ್ತೆ ಸ್ವಸ್ಥಾನದಲ್ಲಿ ಕುಳಿತೆ. ಕೈ ಬೀಸುತ್ತಿದ್ದ ಪುಟ್ಟ ಕೈಗಳಿಗೆ ಟಾಟಾ ಮಾಡಿ ಎರಡೂ ಕಾರುಗಳು ಹೊರಟವು.

'ಈ ಕತ್ತಲಲ್ಲಿ ನಿನ್ನ ಕುಂಟಾಲ ಹಣ್ಣುಗಳು ಕಾಣುತ್ತಾ' ಅಂದ್ರು.. ನನಗೇಕೋ ಹಣ್ಣುಗಳು ಸಿಗುವ ಭರವಸೆ ಇರಲಿಲ್ಲ .. ಇವರು ಮಾತ್ರ ಹಣ್ಣಿರುವ ಕಡೆ ಕಾರ್ ನಿಲ್ಲಿಸಿ ಒಂದಷ್ಟು ಹಣ್ಣಿನ ಗೊಂಚಲುಗಳನ್ನು ಕೈಗೆ ತುರುಕಿದರು. ಕಪ್ಪು ಹಣ್ಣುಗಳು ಬಾಯೊಳಗೆ ಹೋಗುತ್ತಿದ್ದಂತೆಯೇ ನಾಲಿಗೆ ನೀಲಿ ಬಣ್ಣಕ್ಕೆ ತಿರುಗುವುದನ್ನು ನಾನು ಸೈಡ್ ಮಿರರಿನಲ್ಲಿ ಪರೀಕ್ಷಿಸುತ್ತಾ ಕುಳಿತಿದ್ದರೆ ಮನೆ ಯಾವಾಗ ಬಂತು ಅಂತಲೇ ತಿಳಿಯಲಿಲ್ಲ.. !!