Pages

Total Visitors

Sunday, March 11, 2012

ತುಂಬೆ ನಿನ್ನ ಮಹಿಮೆ ಏನೆಂಬೆ ....



 ವಾಮನನಲ್ಲಿ ಬಲಿ ಚಕ್ರವರ್ತಿ ' ನಾನಿನ್ನು ಭೂಮಿಗೆ ಬರುವ ದಿನ ಯಾವುದು 'ಎಂದು ಕೇಳಿದಾಗ ವಾಮನನ ಉತ್ತರದಲ್ಲಿ' ತುಂಬೆಯ ಮರದಡಿ ಮಕ್ಕಳು ಆಟ ಆಡುವ ದಿನ ' ಎಂಬುದು ಒಂದಾಗಿತ್ತು.ಸಾಧ್ಯವೇ ಇಲ್ಲ ಎಂಬುದನ್ನು ಈ ರೀತಿಯಾಗಿ ತಿಳಿಸಿದ್ದ. ಅದ್ಯಾಕೆ ಅಂತೀರಾ?? ಬನ್ನಿ ಆ ಸಸ್ಯದ ಒಂದಿಷ್ಟು ಪರಿಚಯ ಮಾಡಿಕೊಳ್ಳೋಣ ಆಗ ನಿಮಗೆ ತಿಳಿಯುತ್ತೆ ..!! 

ಏನು ಈ ತುಂಬೆಯ ಗಿಡ, ಏನಿದರ ಮಹತ್ವ ..? ನಮ್ಮ ಸುತ್ತು ಮುತ್ತೆಲ್ಲ ಕಾಣಸಿಗುವ ಪುಟ್ಟ ಎಲೆಗಳ ಮೈಯಲ್ಲೆಲ್ಲ ತೇರಿನಂತೆ ಹೂವನ್ನೇರಿಸಿಕೊಂಡ ಚೆಲುವೆಯೇ ಇವಳು..ತುಂಬಾ ಸಣ್ಣ ನಾಲ್ಕರಿಂದ ಐದು ಕವಲುಗಳಿಂದ ಕೂಡಿದ ಒಂದೆರಡಡಿ  ಬೆಳೆಯುವ ಸಸ್ಯ 

ಇದರ ಸಸ್ಯ ಶಾಸ್ತ್ರೀಯ ಹೆಸರು ' Leacus indica .
ಪುಟ್ಟ ಚೆಂಡಿನಂತಹ ರಚನೆಯ ತುಂಬೆಲ್ಲ ಬಿಳಿ ಹೂಗಳು ಇದನ್ನು  ಅಂದಗಾತಿಯನ್ನಾಗಿ ಮಾಡಿದೆ.ಇದರ ಹೂಗಳ ಆಕಾರವನ್ನು ಆಗ ತಾನೇ ಹುಟ್ಟಿದ ಮಗುವಿನ ಸುಕೋಮಲ ಪಾದಗಳಿಗೆ ಹೋಲಿಸುತ್ತಾರೆ. ಇದಕ್ಕೆ  ಒಂದು ಪುಟ್ಟ ಕತೆ ಕೂಡ ಇದೆ.. ಕೇಳಿ .
.

ಒಂದಾನೊಂದು  ಕಾಲದಲ್ಲಿ ಒಬ್ಬ ಶಿವಭಕ್ತ ರಾಕ್ಷಸ ಶಿವನ ಕುರಿತು ಘೋರವಾಗಿ ತಪಸ್ಸು  ಮಾಡಿದ.ಭಕ್ತ ವತ್ಸಲನಾದ ಶಿವ  ಕೂಡಲೇ  ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ.ತನ್ನೆದುರು ಬಂದ ದೇವರನ್ನು ಕಂಡು ಆನಂದಾತಿಶಯಗೊಂಡ ರಾಕ್ಷಸ ತಡಬಡಾಯಿಸಿ 'ದೇವ ನನ್ನ ಪಾದ ಸದಾ ನಿನ್ನ ಶಿರದ ಮೇಲಿರುವಂತೆ ಕರುಣಿಸು ಎಂದ.ಶಿವ ಕೂಡಲೇ ತಥಾಸ್ಥು ಎಂದ. 

ನಂತರ ತನ್ನ ತಪ್ಪಿನ ಅರಿವಾದ ರಾಕ್ಷಸ, 'ದೇವಾ.. ನನ್ನ ಅಪರಾಧವನ್ನು ಮನ್ನಿಸು. ನಿನ್ನ ಪಾದ ನನ್ನ ಶಿರದ ಮೇಲೆ ಸದಾ ಇರಲಿ ಎನ್ನುವುದುನನ್ನ ಆಶಯವಾಗಿತ್ತು.. ಹಾಗೆ ವರ ನೀಡು ಎಂದ.ಅದಕ್ಕೆ ಕರುಣಾಳುವಾದ ಶಿವನು ಒಮ್ಮೆ  ವರ ನೀಡಿದೆನೆಂದರೆ ಮುಗಿಯಿತು ಬದಲಾಯಿಸಲು ಸಾಧ್ಯವಿಲ್ಲ.ನೀನು ತುಂಬೆ ಗಿಡವಾಗಿ ಹುಟ್ಟು.ನಿನ್ನ ಹೂವಿನ ಆಕಾರ ಪಾದಗಳಂತೆ ಇರುವುದು.. ಆ ಹೂಗಳು ಸದಾ ನನ್ನ ಶಿರದ ಮೇಲೇರಲಿ ಎಂದು ವರ ನೀಡಿದನಂತೆ. . 
        

 ನಾವೆಲ್ಲ ಚಿಕ್ಕವರಾಗಿದ್ದಾಗ ರಾಮನವಮಿ ಹಬ್ಬ ಬಂತೆಂದರೆ ಗದ್ದೆಗಳಲ್ಲೆಲ್ಲ ಹೂವ ಹಾಸಿಗೆಯಂತೆ ಹರಡಿಕೊಂಡಿರುತ್ತಿದ್ದ ಈ ತುಂಬೆಯ ಹೂಗಳನ್ನು ಸಂಗ್ರಹಿಸಿದೇವರಿಗೆ ಏರಿಸುತ್ತಿದ್ದೆವು. ಕೇರಳದ ಓಣಂ ಹಬ್ಬದಲ್ಲಿ ಈ ಹೂವನ್ನು ಹೂವಿನ ರಂಗೋಲಿಯಾದ '  ಆವಪ್ಪೂ' ದಲ್ಲಿ ಬಳಸುತ್ತಾರೆ. ಅಲ್ಲಿ ಕೃಷ್ಣನಿಗೆ ಅತಿ ಪ್ರಿಯವಾದ ಪುಷ್ಪ ಎಂದು ಹೇಳಿದರೆ ನಮ್ಮಲ್ಲಿ ಶಿವನಿಗೆ ಅತಿ ಇಷ್ಟದ ಹೂವೆಂದು ಬಣ್ಣಿಸುತ್ತಾರೆ. 
 ಇದರ ಸುಂದರ ಬಿಳಿ ಹೂಗಳು ಪರಿಶುದ್ಧತೆ ಮತ್ತು ಸಹಜತೆಯನ್ನು ಬಿಂಬಿಸುತ್ತದೆ. 
        
   ಈ ಪುಟ್ಟ ಸಸ್ಯ ಔಷದೀಯ ಸಸ್ಯವಾಗಿಯೂ ಬಳಕೆಯಲ್ಲಿದೆ. ಇದರ ಸೊಪ್ಪು ಅಥವಾ ಇಡೀ ಸಸ್ಯವನ್ನು ( ಸಮೂಲ ) ಅರೆದು ಹಚ್ಚಿದರೆ ಹಾವಿನ ವಿಷ ಶಮನವಾಗುವುದು.ಪುಟ್ಟ ಮಕ್ಕಳ ಕಫಾ   ಬಾಧೆಗೆ ಇದರ ರಸವನ್ನು ಜೇನು ಬೆರೆಸಿ ನೆಕ್ಕಿಸಬೇಕು. ಸ್ತ್ರೀಯರ ರಜಸ್ವಲೆಯ ಸಮಯದಲ್ಲಿ ಬರುವ ಹೊಟ್ಟೆ ನೋವಿನ ಪರಿಹಾರಕ್ಕೆ ಎಲೆಗಳನ್ನು ಮತ್ತು ಹೂಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅರೆದು ಉಂಡೆಗಳನ್ನಾಗಿಸಿ  ದಿನಕ್ಕೆ ಎರಡರಂತೆ ಹಸುವಿನ ಹಾಲಿನಲ್ಲಿ ಸೇವಿಸಬೇಕು.



ಈ ಅಂದಗಾತಿಯನ್ನು ನಮ್ಮ ಹೂದೋಟದಲ್ಲಿ ನೆಟ್ಟು ಬೆಳಸಬಹುದು. ಬೀಜದಿಂದ ವಂಶಾಭಿವೃದ್ದಿ ಹೊಂದುವ  ಈ ಗಿಡ ಕೊಂಚ ನೀರಾಶ್ರಯವಿರುವಲ್ಲಿ ತನ್ನಿಂದ ತಾನೆ ಹುಟ್ಟಿ ಬೆಳೆಯುತ್ತದೆ. ಈಗೆಲ್ಲ ಗದ್ದೆಗಳು ಕಡಿಮೆ ಆಗಿ, ಈ ಪುಟ್ಟ ಗಿಡ ಎಲ್ಲೆಂದರಲ್ಲಿ ಕಾಣ ಸಿಗುವುದಿಲ್ಲ.  ಬಹೂಪಯೋಗಿಯಾದ ಈ ಸಸ್ಯಕ್ಕೆ ನಮ್ಮ ಮನೆಯಲ್ಲೂ ಮನದಲ್ಲೂ ಕೊಂಚ ಜಾಗ ಮೀಸಲಿಡೋಣ, ಏನಂತೀರ..