Pages

Total Visitors

Tuesday, December 14, 2010

ಕರಿ ಬೇವಿನ ಸೊಪ್ಪು




"ಅಕ್ಕಾ...ಈ ಅತ್ತೆ ಯಾವಾಗಲು ನಿಧಾನ ಸ್ವಲ್ಪ ಬೇಗ ಎದ್ದು ಹೊರಡ್ಬಾರ್ದಾ.. ನನಗಂತೂ ಹೇಳಿ ಹೇಳಿ ಸಾಕಾಯ್ತು ಇನ್ನು ತಡ ಆಯ್ತು ಅಂತ ಅಣ್ಣನ ಕೈಯಲ್ಲಿ ನಾವು ಬಯ್ಸಿಕೊಳ್ಬೇಕು" ನಿಮ್ಮಿ ಹೇಳ್ತಾ ಇರೋ ಮಾತೆಲ್ಲ ನನ್ನ ಕಿವಿಗೆ ಬೀಳ್ತಾ ಇತ್ತು.ನಾನಾದರು ಏನು ಮಾಡ್ಲಿ ಪ್ರತಿಯೊಂದನ್ನೂ ಈ ಮಕ್ಕಳಿಗೆ ಕೈಯಲ್ಲಿ ಹಿಡಿಸಿ ಕೊಟ್ಟೆ ಆಗ್ಬೇಕು.ಹುಂ ಮಕ್ಕಳು .. ನನಗಿನ್ನೂ ಇವರು ಪುಟ್ಟ ಮಕ್ಕಳೇ ಆದ್ರೆ ಅವರಾಗಲೇ ರೆಕ್ಕೆ ಬಲಿತು ಹಾರಿ ಬೇರೆ ಗೂಡು ಸೇರಿ ಆಗಿತ್ತು. ಗಂಡ ಬಿಟ್ಟವಳೆಂಬ ಕಳಂಕ ಹೊತ್ತೇ ಪುನ ತವರು ಮನೆಯ ಕಡೆ ಕಾಲಿರಿಸಿದ್ದು. ನಾನಾದರು ಏನು ಮಾಡುವಳಿದ್ದೆ.ನಿಮ್ಮ ಕೆಲಸದವಳಾಗಿಯಾದರು ಇರ್ತೀನಿ,  ನನ್ನ ಹೊರ ಹಾಕಬೇಡಿ ಎಂದು ಕಾಲು ಹಿಡಿದು ಕೇಳಿ ಕೊಂಡಿದ್ದರೂ ಮಕ್ಕಳನ್ನು ಹೆರದ ಬಂಜೆ ಎಂಬ ಪಟ್ಟ ಕಟ್ಟಿ ಹೊರ ತಳ್ಳಿ ಕೈ ತೊಳುದು ಕೊಂಡಿದ್ದ ಗಂಡನ ಮನೆಯವರು. ಒಡ ಹುಟ್ಟಿದ ಅಣ್ಣ ಕಹಿ ಗುಳಿಗೆ ನುಂಗಿದ ಮುಖ ಮಾಡಿಕೊಂಡೆ ಬರ ಮಾಡಿಕೊಂಡಿದ್ದ. ಆದರೆ ಅತ್ತಿಗೆ ಒಂದು ದಿನವೂ ನನ್ನ ಬಗ್ಗೆ ಕೆಟ್ಟದಾಗಿ ನಡೆದು ಕೊಂಡಿರಲಿಲ್ಲ. ಆದರೆ ದೇವರಿಗ್ಯಾಕೆ ಒಳ್ಳೆಯವರೆಂದರೆ ಪ್ರೀತಿಯೋ ಬೇಗನೆ ತನ್ನ ಬಳಿ ಕರೆಸಿ ಕೊಂಡಿದ್ದ. ಮೂರು ಪುಟ್ಟ ಮಕ್ಕಳು. ನನ್ನ ಮಡಿಲಿಗೆ ಬಂದಿದ್ದವು. ನಾನು ಹೆರದಿದ್ದರೂ ತಾಯಿಯಾಗಿದ್ದೆ. ಅಣ್ಣನೂ ನನ್ನ ಬಗ್ಗೆ ಪ್ರೀತಿ ತೋರದಿದ್ದರೂ ಅಸಹನೆ ಕಾರುವುದನ್ನು ಬಿಟ್ಟಿದ್ದ.  ಮಕ್ಕಳ ಮೇಲೆ ತಾನೆಷ್ಟು ಒಲವು ತೋರಿದರೂ ಅವರ ತಂದೆಯ ಬಳಿ ಇರುವ ಸಲಿಗೆ ನನ್ನ ಬಳಿ ಇರಲೇ ಇಲ್ಲ. ನಾನು ಅದನ್ನು ಬಯಸಲೂ ಇಲ್ಲ. ಮದುವೆ ಮುಂಚಿನ ನನ್ನದೆ ಮನೆಯಲೀ ನಾನು ಹೊರಗಿನವಳಾಗೆ ಜೀವನ ನಡೆಸುತ್ತಿದ್ದೆ. 

ಹೆಣ್ಣು ಹುಡುಗಿಯರಿಬ್ಬರಿಗೂ ಮದುವೆ ಆಗಿತ್ತು. ಒಳ್ಳೆಯ ಮನೆಯನ್ನೇ ಸೇರಿದ್ದರು.ಅವರ ಬಾಣಂತನದ ಸಂಭ್ರಮವೂ ನನ್ನಿಂದಲೇ ನಡೆದಿತ್ತು.  ಇಂದು ಸಂತೋಷನ ಮದುವೆ. ಮದುವೆ ಛತ್ರಕ್ಕೆ ಹೊರಡುವ ಸಡಗರ.  ಹೊರಗಿನಿಂದ "ಅತ್ತೇ"   ಎಂಬ ನಿಮ್ಮಿಯ ಸ್ವರ ಕೇಳಿದಾಗಲೇ ಇಹಲೋಕಕ್ಕಿಳಿದದ್ದು. ಒಂದು ಸೀರೆ ಉಡುವಷ್ಟು ಹೊತ್ತು ಎಡೆ ಕೊಡದ ಇವಳು, 'ಬರುವುದಿಲ್ಲ ನೀವೇ ಹೋಗಿ, ನಾನು ಮನೆಯಲ್ಲಿದ್ದೆ ಇಲ್ಲಿನ ಕೆಲಸ ಮಾಡಿಸುತ್ತೇನೆ' ಎಂದರೆ ಅದಕ್ಕೂ ಒಪ್ಪದೇ "ಸಾಕು ನೀವು ಕೆಲಸ ಮಾಡಿಸೋದು. ಸುಮ್ಮನೆ ಹೇಳಿದಷ್ಟು  ಕೇಳಿ " ಎಂದಿದ್ದಳು.  ದಾರಿಯುದ್ದಕ್ಕೂ ನನ್ನನ್ನು ಬಯ್ಯುತ್ತಲೇ   ಇದ್ದ ಅವಳ ಮಾತು ಕಿವಿಗೆ ಬೀಳಲೇ ಇಲ್ಲ ಎನ್ನುವಂತೆ ಕಾರಿನಿಂದ ಹೊರಗೆ ದೃಷ್ಟಿ ಹಾಯಿಸಿದೆ.

 ಮದುವೆ ಹಾಲ್ ಸಿಂಗಾರ ಗೊಂಡಿತ್ತು. ಹುಡುಗನ ಕಡೆಯವರಾದ ನಮ್ಮನ್ನು ಹಾರ್ದಿಕವಾಗಿ ಬರ ಮಾಡಿಕೊಂಡು ಸತ್ಕಾರ ನಡೆಸಿದರು. ನಿಮ್ಮಿ , ವಿನುತ ಆಗಲೇ ಗಂಡಿನ ಕಡೆಯವರಿಗೆ  ಮೀಸಲಿಟ್ಟ ಕೋಣೆ ಸೇರಿ ಆಗಿತ್ತು. ನಾನು ಪುನಃ ಸೀರೆ ಉಡುವ ಕೆಲಸ ಇಲ್ಲದಿದ್ದರೂ ಅವರ ಹಿಂದೆಯೇ ನಡೆದೆ."ಅಬ್ಬ ಜೊತೆಗೆ ಬಂದಿರಲ್ಲ . ಇನ್ನು ನಿಮ್ಮನ್ನು ಹುಡುಕಿ ಕೊಂಡು ಪುನಃ ಎಲ್ಲಿ ಅಲೀಬೇಕಾಗುತ್ತೆ ಅಂದ್ಕೊಂಡೆ" ಎಂದು ನಿಮ್ಮಿ ಹೇಳಿದರೆ ವಿನುತ ಓರೆ ಮುಖ ಮಾಡಿ ನಕ್ಕಳು. ನಾನೇನಪ್ಪ ಇಲ್ಲಿಗೆ ಬರಲೇ ಬೇಕಾದ್ದು  ಎಂದು ಪ್ರಶ್ನಾರ್ಥಕ ಚಿನ್ಹೆ ಮಾಡಿ ಅವರೆಡೆಗೆ ನೋಡಿದರೆ, "ಮುಹೂರ್ತದ ಹೊತ್ತಿಗೆ ನೀವು ಇಲ್ಲೆ ಇರಿ ಹೊರಗೆ ಬರಬೇಡಿ. ಇಲ್ಲಿರುವ ನಮ್ಮ ಸಾಮಾನು ಸೀರೆ ಒಡವೆ ಎಲ್ಲಾ ಜಾಗ್ರತೆ ಇರಬೇಡವೇ?" ಎಂದಳು. ನನ್ನನ್ನು ಒತ್ತಾಯಿಸಿ ಕರೆದುಕೊಂಡು ಬಂದಿದ್ದರ ಕಾರಣ ಈಗ ಗೊತ್ತಾಯಿತು." ಅಕ್ಕಾ ಸಾಂಬಾರು ತುಂಬಾ ರುಚಿಯಾಗಿತ್ತಲ್ವೇನೆ? ಆದ್ರೆ ಅಷ್ಟೊಂದು ಕರಿ ಬೇವಿನ ಸೊಪ್ಪು ಯಾಕೆ ಹಾಕಿದ್ರೋ. ಪಕ್ಕಕ್ಕಿಡೋದೇ ಕೆಲಸ ಆಯ್ತು".  "ಹೂಂ ಕಣೆ" ...  ಎಂದ   ವಿನುತ ನನ್ನನ್ನು ಸರಿಸಿಕೊಂಡೆ ಹೊರಗಡಿಯಿಟ್ಟಳು. 

ಈ ಸಂಸಾರಕ್ಕೆ ನನ್ನ ಅಗತ್ಯ ಇದೆಯೆ? ಇಲ್ಲವೆ? ನಾನು ಒಬ್ಬಳು ಭಾವನೆಗಳಿರುವ ಮನುಷ್ಯಳು ಅಂತ ಯಾಕೆ ಇವರಿಗೆ ಅನ್ನಿಸೋದೇ ಇಲ್ಲ. ನಾನೇ ಎತ್ತಿ ಆಡಿಸಿದ ಅಣ್ಣನ ಮಗನ ಮದುವೆ ನೋಡುವ ಬಯಕೆ ನನ್ನಲ್ಲೂ ಇಲ್ಲವೆ?ಇದ್ದು ಇಲ್ಲದಂತಿರುವ ನನ್ನ ಬದುಕಿಗೂ  ಮತ್ತು ಸಾಂಬಾರಿನೊಳಗೆ ಬೆರೆತೂ, ತುತ್ತಿನೊಡನೆ ಬಾಯಿಗೆ ಸಿಕ್ಕಿದರೆ ಕಸದಂತೆ ಹೀನಾಯಿಸಿ   ಬದಿಯಲ್ಲಿಡುವ ಕರಿ ಬೇವಿನ ಸೊಪ್ಪಿಗೂ  ಸಾಮ್ಯತೆ ಇದೆಯೆಂದು ನನಗಾಗಲೇ ಅನಿಸಿದ್ದು . ..
  



No comments:

Post a Comment