Pages

Total Visitors

Tuesday, December 14, 2010

ಕವಿ ನಿವಾಸ

 

ರಾಷ್ಟ್ರ ಕವಿ ಕುವೆಂಪು ಅವರ ಕುಪಳ್ಳಿಯ ಮನೆಗೊಮ್ಮೆ ಭೇಟಿ ನೀಡಬೇಕೆಂಬುದು ಬಹುಕಾಲದ ಕನಸು.. ಪ್ರತಿಸಲವೂ ಕುಪ್ಪಳ್ಳಿ ಎಂಬ ನಾಮ ಪಲಕ ಕಂಡಾಗ ಆಸೆ ಗರಿಕೆದರಿದರೂ ಕೆಲಸದ ಒತ್ತಡ , ಸಮಯದ ಅಭಾವ , ಹೀಗೆ ಯಾವುದಾದರೊಂದು ಕಾರಣ ಗಳನ್ನು ಮುಂದಿಕ್ಕಿ ಹೋಗಲಾರದೆ ಉಳಿದೆ ಬಿಡುತಿತ್ತು. ಈ ಸಲವಂತೂ ಹೋಗಲೇ ಬೇಕೆಂಬ ನಿರ್ಧಾರ ಅಲ್ಲಿಗೆ ಎಳೆದೊಯ್ದಿತು. ನಾಡ ಹಂಚಿನ ಮನೆ, ಮನೆಯ ಮುಂದೆ ಸುಂದರ ಹುಲ್ಲ ಹಾಸು, ನಡು ನಡುವೆ ಹೂವಿನ ಗಿಡಗಳು, ಒಂದು ಬದಿಯಲ್ಲಿ ಪೀಠದ ಮೇಲೆ ಕುಳಿತಂತಿದ್ದ ಕವಿ ಕುವೆಂಪು ರವರ ಪುತ್ಥಳಿ ನಮ್ಮನ್ನು ಮನೆಯ ಒಳಗೆ ಬನ್ನಿ ಎಂದು ಆಹ್ವಾನಿಸುವಂತೆ ಕಾಣಿಸುತ್ತಿತ್ತು. ಸುಂದರ ಕೆತ್ತನೆಗಳ ಹೆಬ್ಬಾಗಿಲು, ಗೋಡೆಯ ಮೇಲೆ "ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು" 
ಎಂಬ ಕವಿವಾಣಿ ಒಳಗಿನ ವೈಭವದ ಮುನ್ಸೂಚನೆ ಇತ್ತಿದ್ದವು. ಒಬ್ಬರಿಗೆ 5 ರೂ ನಂತೆ ಪ್ರವೇಶದರ ನೀಡಿ ಪ್ರವೇಶ ಪತ್ರ ಪಡೆದುಕೊಂಡು ಒಳ ಪ್ರವೇಶಿಸಿದೆವು. ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶ ಪತ್ರವನ್ನು ಧ್ವಾರದಲ್ಲಿ ನಿಂತವರು ಹರಿದು ನಮ್ಮನ್ನು ಒಳ ಬಿಡುತ್ತಾರೆ. ಈಗಲೂ ಹಾಗೆ ಆಗುವುದೆಂಬ ಭಯದಲ್ಲಿ ಅದನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದೆ. ಐದು ರುಪಾಯಿಯ ಟಿಕೆಟ್ ಮೇಲೆ ಅಷ್ಟ್ಯಾಕೆ ಆಸೆ ಅಂತೀರಾ ..ಕವಿ ಮನೆಯಾ ಸುಂದರ ಚಿತ್ರವನ್ನು ಹೊಂದಿದ್ದ ಅದು ಎರಡೂ ಬದಿಗಳಲ್ಲಿ ಕವಿವಾಣಿಯನ್ನು ಸಾರುತಿತ್ತು.ಅದಾಗಲೇ ನಮ್ಮ ಮನೆಯ ಫೋಟೋ ಆಲ್ಬಮ್ ಒಳಗೆ ಜಾಗ ಪಡೆಯಲು ತಯಾರಿ ನಡೆಸಿತ್ತು. ಪ್ರವೇಶಿಸಿದ ಕೂಡಲೇ ನಗುಮುಖದಿನದ ನಮ್ಮನ್ನು ಬರ ಮಾಡಿಕೊಂಡು ಮನೆಯ ಒಳಗಿನ ಅಂದವನ್ನು ನಾವಾಗಿಯೇ ನೋಡಲು ಅನುವು ಮಾಡಿ ಕೊಡುತ್ತಾರೆ. ಫೋಟೋ, ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಇಲ್ಲದ ಅಲ್ಲಿ ಎಲ್ಲವನ್ನೂ ಕಣ್ಣುಗಳಲ್ಲೇ ತುಂಬಿಕೊಳ್ಳುವ ಆತುರವಿತ್ತು.
ಧಾನ್ಯ ಶೇಖರಿಸಿಡುವ ದೊಡ್ಡ ಗಾತ್ರದ ಮರದ ಪೆಟ್ಟಿಗೆಗಳು, ಹಳೆ ಕಾಲದ ಮರದ ಸಾಮಗ್ರಿಗಳು ಕಣ್ಣುಗಳನ್ನು ಸೆಳೆದವು. ಗೋಡೆಯಲ್ಲಿ ತೂಗಿ ಬಿದ್ದಿದ್ದ ಕುವೆಂಪುರವರ ಕೋಟು, ಬದಿಯಲ್ಲಿದ್ದ ಊರುಗೋಲು ಕುವೆಂಪುರವರು ಈಗಷ್ಟೇ ಒಳ ಹೋಗಿದ್ದಾರೆನೋ ಎಂಬ ಭ್ರಮೆ ಮೂಡಿಸಿತು.ಸುಂದರ ಕೆತ್ತನೆಯ ಕಂಬಗಳು, ನಾಜೂಕಿನ ಕುಸುರಿಯ ಬಾಗಿಲು, ಒಂದಿಷ್ಟು ಹೊತ್ತು ನಮ್ಮನ್ನು ಅಲ್ಲಿಯೇ ಹಿಡಿದು ನಿಲ್ಲಿಸಿತು. ಒಳ ಭಾಗಕ್ಕೆ ಬಂದರೆ ಅಲ್ಲಿಯೂ ಹಳೆಕಾಲದ ಮರದ ಸಾಮಗ್ರಿಗಳನ್ನು ಅಂದವಾಗಿ ಜೋಡಿಸಿಟ್ಟಿದ್ದರು. ಅಲ್ಲಿದ್ದ ಮರದ ಏಣಿಯನ್ನೇರಿ ಮೇಲಿನ ಮಹಡಿಗೆ ಬಂದರೆ ಅಲ್ಲಿ ಕುವೆಂಪುರವರು ಪಡೆದ ಪ್ರಶಸ್ತಿಗಳು, ಅವರ ಅಮೂಲ್ಯ ಗ್ರಂಥಗಳು,ಅವರ ಬಗೆಗೆ ಬೇರೆ ಲೇಖಕರು ಬರೆದ ಪುಸ್ತಕಗಳು ಕಂಡು ಬಂದವು.ಗೋಡೆಯಲ್ಲಿ ಅಳವಡಿಸಿದ್ದ ಸ್ಪೀಕರ್ ನಲ್ಲಿ ಮೆಲುದನಿಯಲ್ಲಿ ಕೇಳಿ ಬರುತ್ತಿದ್ದ ಕುವೆಂಪುರವರ ಗೀತೆಗಳು ನಮ್ಮನ್ನು ಮೌನವಾಗಿರಲು ಒತ್ತಾಯಿಸುತಿತ್ತು. ಅಲ್ಲಿಂದಲೂ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಕುವೆಂಪುರವರು ಬಳಸುತ್ತಿದ್ದ ಮೇಜು ಕುರ್ಚಿಗಳು ಕವಿಗಾಗಿ ಕಾದು ಮೂಕವಾಗಿ ಕುಳಿತಿದ್ದವು. ಕಿಟಕಿಯಿಂದ ಹೊರಗಿಣುಕಿದರೆ ಕುಂದಾದ್ರಿಯ ರಮಣೀಯ ನೋಟ..
ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿದ್ದರೂ ಮೌನವೇ ಮಾತಾಗಿತ್ತು. ಸಿಬ್ಭಂದಿಗಳು ಅಗತ್ಯ ಬಿದ್ದಲ್ಲಿ ಮೆಲುದನಿಯಲ್ಲಿ ವಿವರಿಸುತ್ತಿದ್ದರು. ಅವರ ಆತ್ಮೀಯತೆ, ಸ್ವಚ್ಚತೆಯ ಬಗೆಗಿನ ಕಾಳಜಿ ಮನಸ್ಸಿಗೆ ಮುದ ನೀಡಿದವು. ಇಲ್ಲಿ ಕುವೆಂಪುರವರ ಪುಸ್ತಕಗಳು ರಿಯಾಯಿತಿಯ ಬೆಲೆಯಲ್ಲಿ ದೊರೆಯುತ್ತವೆ.
ಅಲ್ಲಿಂದ ಹೊರ ಬಂದು 'ಕವಿಶೈಲ ' ದತ್ತ ಸಾಗಿದೆವು. ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿದ ಹಸಿರು ತುಂಬಿದ ಸುಂದರ ಬೆಟ್ಟ. ಬೃಹದಾಕಾರದ ಬಂಡೆಗಳನ್ನು ಪೇರಿಸಿ ಮಾಡಿದ್ದ ರಚನೆಗಳು, ಬದಿಗಳಲ್ಲಿ ಅಮೃತ ಶಿಲಾ ಪಲಕಗಳಲ್ಲಿ ಕೊರೆದಿದ್ದ ಕುವೆಂಪುರವರ ಕವಿತೆಗಳು " ಓ ನನ್ನ ಪ್ರಿಯತಮ ಶಿಖರ ಸುಂದರನೆ"ಎಂಬ ಕವಿ ನುಡಿ ಅಲ್ಲಿಗೆ ಅನ್ವರ್ಥವಾಗಿತ್ತು. ಸುಮ್ಮನಿದ್ದರೂ ಮನ ಅದನ್ನೇ ಮೆಲುಕು ಹಾಕುತಿತ್ತು. ಅಲ್ಲಿನ ಸೂರ್ಯಾಸ್ತ ವಂತೂ ಅದ್ಭುತ ಕಾವ್ಯವೇ ಸರಿ. ಏಳುವ ಮನಸ್ಸಿಲ್ಲದಿದ್ದರೂ ಕತ್ತಲಾವರಿಸಿ ನಮ್ಮನ್ನು ಹೊರದೂಡಿತು. ಕೆಳಗಿಳಿದು ಬರುವಾಗಲೂ " ಮಿತ್ರರೇ ಮಾತಿಲ್ಲಿ ಮೈಲಿಗೆ! ಸುಮ್ಮನಿರಿ ಮೌನವೇ ಮಹತ್ತಿಲ್ಲಿ " ಎಂಬ ಕುವೆಂಪುರವರ ನುಡಿಯಂತೆ ಮನದುಂಬಿ ಬಂದು ಮಾತು ತಣ್ಣಗೆ ಮಲಗಿತ್ತು

1 comment: