Pages

Total Visitors

Tuesday, April 30, 2013

ಸಂಸಾರ ಸಾರ..





ಸಾಗಬೇಕಿದೆ ದಾರಿ ಬಹು ದೂರ 
ಹೊತ್ತಿರುವುದು ಹಗುರವೇನಲ್ಲದಿದ್ದರೂ
ಹೊರೆಯನಿಳುಹಲಾರೆನು...  
ನನ್ನದಿದು  ಕರುಳ ಬಳ್ಳಿ 
ಹೊಳೆವ  ನಾಳೆಯ ಬೆಳಕು
ಕೈ ಹಿಡಿದರೆ ಸಾಕು ನಡೆಯಬಹುದಿನ್ನು 
ಎನ್ನುವವರೆಗಾದರೂ ಎತ್ತಿಕೊಳಲೇ ಬೇಕು..
ಹಾದಿ ಬದಿಯ ಮುಳ್ಳು ಕಲ್ಲುಗಳು
ಪಾಪದ ಪಾದಗಳಿಗೆ ತಾಕೀತೇನೋ..
ನಾನಾದರೋ ಕಷ್ಟಗಳ ಸಹಿಸಿ 
ಗಟ್ಟಿಯಾದವನು..
ಅವಳು ನವಮಾಸ ಹೊತ್ತು 
ಹೆತ್ತ ತಾಯಿ  
ಕೊಂಚ ನಾನೂ ಅನುಭವಿಸುತ್ತೇನೆ 
ಆ ಕಷ್ಟ ಆ ಸುಖವ.. 
ದಾರಿ ತುಳಿವ ನೋವು ನಲಿವುಗಳು
ಮುಂದಿದೆ.. ಇರಲಿ ಬಿಡು
ಈಗಲೇ ಏಕೆ ನಾಳೆಯ ಚಿಂತೆ..

Monday, April 15, 2013

ಕಥೆ ಮತ್ತು ನೈಜತೆ


ಒಂದಾನೊಂದು ಕಾಲದಲ್ಲಿ ಒಬ್ಬ ಬೇಡನಿದ್ದ. ದಿನವೆಲ್ಲಾ ಕಾಡಿನಲ್ಲಿ  ಬಲೆ ಬೀಸಿ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳನ್ನು ಹಿಡಿದು ಮಾರಿ ಅವನು ಜೀವಿಸುತ್ತಿದ್ದ. ಅಂದ್ಯಾಕೋ ಅವನ ಕೈಯ್ಯಲ್ಲಿ ಚಿಕ್ಕಾಸೂ ಇರಲಿಲ್ಲ. ಅವನ ಹೆಂಡತಿ ಮಕ್ಕಳು ಹಸಿದು ಕಂಗಾಲಾಗಿದ್ದರು. ಅವರ ಬವಣೆಯನ್ನು ನೋಡಲಾರದೇ ಬೇಡ  ಬಲೆಯನ್ನು ಹಿಡಿದು ಮಿಕವನ್ನರಸುತ್ತಾ ಕಾಡಿಗೆ ನಡೆದ. 

ನಡೆದು ನಡೆದು ಕಾಡಿನೊಳಗೆ ಬಹುದೂರ ಸಾಗಿದ. ಸಂಜೆಯಾಗುತ್ತಾ ಬಂತು. ಅವನ ಬಲೆಯಿನ್ನೂ ಬರಿದಾಗಿಯೇ ಇತ್ತು. ನಿರಾಸೆಯಿಂದ  ಇನ್ನೇನು ಮರಳಬೇಕು ಅಂದುಕೊಳ್ಳುವಾಗ  ಒಂದು ಕಡೆ ತುಂಬಾ ಹಕ್ಕಿಗಳು ಅವನ ಕಣ್ಣಿಗೆ ಬಿದ್ದವು. ಸಂತೋಷದಿಂದ  ಬಲೆ ಬೀಸಿ ಅವುಗಳನ್ನು ಹಿಡಿದು ಬಲೆಯಲ್ಲೇ ಮುದುರಿ ಗಂಟು ಕಟ್ಟಿ ಮನೆಯ ಕಡೆ ನಡೆಯುತ್ತಾ ಹೊರಟ. ಅಷ್ಟರಲ್ಲಿ ಕಾಡಿನ ತುಂಬಾ ದಟ್ಟ ಕತ್ತಲಾವರಿಸಿತು. ಕತ್ತಲಲ್ಲಿ ಮುಂದೆ ಹೆಜ್ಜೆಯಿಡಲು ಸಾಧ್ಯವಾಗದೇ ಬಲೆಯ ಗಂಟನ್ನು ಮೆಲ್ಲನೆ ಕೆಳಗಿರಿಸಿ ಒಂದು ವಿಶಾಲವಾದ  ಮರದ ಕೆಳಗೆ ಮಲಗಿದ.ಆದರೆ ವಿಪರೀತ ಚಳಿಯಿಂದಾಗಿ  ಅವನು ತೋಳುಗಳ ನಡುವೆ ಮುಖ ಹುದುಗಿಸಿಕೊಂಡು ಮೊಣಕಾಲು ಗಲ್ಲಕ್ಕೆ ತಾಗುವಂತೆ ಮುದುಡಿ ಮಲಗಿದ್ದರೂ   ಗಡಗಡನೆ ನಡುಗುತ್ತಿದ್ದ. 

ಬೇಡ ಯಾವ ಮರದ ಕೆಳಗೆ ಮಲಗಿದ್ದನೋ ಅದೇ ಮರದ ಮೇಲೊಂದು ಹಕ್ಕಿಗಳ   ಗೂಡಿತ್ತು. ಆ ಗೂಡಿನಲ್ಲಿ ಪುಟ್ಟ ಮರಿಗಳೊಂದಿಗೆ ಗಂಡು ಹಕ್ಕಿಯೊಂದು ಆತಂಕದಿಂದ ತನ್ನ ಸಂಗಾತಿಗಾಗಿ ಕಾಯುತ್ತಾ ಕೂತಿತ್ತು.  ಇದ್ದಕ್ಕಿದ್ದಂತೇ ಅದಕ್ಕೆ ಅದಕ್ಕೆ ಅದರ ಸಂಗಾತಿಯಾದ ಹೆಣ್ಣು ಹಕ್ಕಿ ದುಃಖದಿಂದ ಅಳುವ ಸದ್ದು  ಕೇಳಿಸಿತು. ಸ್ವರ ಬಂದೆಡೆಗೆ ಇಣುಕಿ ನೋಡಿದರೆ ಹೆಣ್ಣು ಹಕ್ಕಿ ಬೇಡನ ಬಲೆಯೊಳಗೆ ಸಿಲುಕಿ ಕೂಗುತ್ತಿತ್ತು. ಗಂಡು ಹಕ್ಕಿಗೀಗ ಅತೀವ ಸಂಕಟವಾಯಿತು. ಬಲೆಯಲ್ಲಿ ಸಿಲುಕಿ ನರಳುತ್ತಿರುವ ತನ್ನ ಮನದನ್ನೆ ಹಾಗೂ ಸೆರೆ ಸಿಕ್ಕ  ಇತರ ಹಕ್ಕಿಗಳನ್ನು ಹೇಗೆ ರಕ್ಷಿಸುವುದು ಎಂದು ಯೋಚಿಸ ತೊಡಗಿತು. 

ಆದರೆ ಅಷ್ಟರಲ್ಲಿ  ಹೆಣ್ಣು ಹಕ್ಕಿ ಗಂಡನ್ನು ಕುರಿತು, 'ನೀನೇನು ಮಾಡುತ್ತಿದ್ದೀಯಾ.. ನಿನ್ನ ವೈಯುಕ್ತಿಕ ನೋವನ್ನೇ ಹೆಚ್ಚೆಂದು ತಿಳಿದು ಕರ್ತವ್ಯ ಲೋಪದ ಅಪರಾಧ ಎಸಗುತ್ತಿದ್ದೀಯ !! ಇವನ ಬಲೆಗೆ ಸಿಲುಕಿದ್ದು ನಮ್ಮ ದೌರ್ಭಾಗ್ಯ. ಆದರೆ ಅವನೀಗ ನಮ್ಮ  ಮನೆಗೆ ಬಂದ ಕಾರಣ ನಮ್ಮ ಅತಿಥಿಯಾಗಿದ್ದಾನೆ.  ಅವನನ್ನು ಉಪಚರಿಸದೇ ಚಳಿಯಿಂದ  ನಡುಗುವಂತೆ ಮಾಡುತ್ತಿದ್ದೀಯಲ್ಲ. ಮೊದಲು ಅವನ ಚಳಿಯನ್ನು ಹೋಗಲಾಡಿಸು" ಎಂದಿತು. ಗಂಡು ಹಕ್ಕಿ ಕತ್ತಲಲ್ಲಿ ಹಾರಿ ಹೋಗಿ ಒಣಗಿದ ಮರದ ಕಡ್ದಿಗಳನ್ನು ಆರಿಸಿ ತಂದು ರಾಶಿ ಹಾಕಿತು.  ಎಲ್ಲಿಂದಲೋ ಬೆಂಕಿಯನ್ನು ತಂದು ಪುರುಳೆಗಳನ್ನು ಉರಿಯುವಂತೆ ಮಾಡಿತು.  ಮಲಗಿದ್ದ ಬೇಡ ಅಚ್ಚರಿಯಿಂದ  ಎದ್ದು, ತನ್ನೆದುರು ಉರಿಯುತ್ತಿರುವ ಬೆಂಕಿಯಿಂದಾಗಿ   ತನ್ನ ಚಳಿ ದೂರವಾಗುತ್ತಿರುವುದನ್ನು ಕಂಡು  ದೇವರನ್ನು ನೆನೆದು ವಂದಿಸಿದ. ಅವನಿಗೀಗ ಚಳಿ ಮಾಯವಾಗುತ್ತಿದ್ದಂತೆಯೇ ಆ ಜಾಗದಲ್ಲಿ ಹಸಿವು ಬುಗಿಲೆದ್ದು ಕಾಡತೊಡಗಿತು. 

ಬಂಧನದಲ್ಲಿದ್ದ ಹೆಣ್ಣು ಹಕ್ಕಿ ಈಗ ಮತ್ತೆ ಬಾಯ್ದೆರೆದು ಗಂಡು ಹಕ್ಕಿಯನ್ನು ಅವನ ಹಸಿವನ್ನು ಇಂಗಿಸುವ ಉಪಾಯವನ್ನು ಹುಡುಕು ಎಂದಿತು. ಗಂಡು ಹಕ್ಕಿ ಆ ಕತ್ತಲಿನಲ್ಲಿ ಆಹಾರವನ್ನು ಹುಡುಕುವ ಪರಿ ತಿಳಿಯದೇ ತಾನೇ ಆ ಬೆಂಕಿಗೆ ಬಿದ್ದು ಬೇಡನ ಆಹಾರವಾಗುತ್ತೇನೆ ಎಂದು ಉರಿಯುವ ಬೆಂಕಿಗೆ ಬಿದ್ದುಬಿಟ್ಟಿತು. 

ತನಗಾಗಿ ಪ್ರಾಣತ್ಯಾಗ ಮಾಡಿದ ಹಕ್ಕಿಯನ್ನು ಕಂಡು ಬೇಡ ಜೀವನದ ಮೇಲೆ ವೈರಾಗ್ಯ ತಳೆದು ತಾನು ಹಿಡಿದಿದ್ದ ಹಕ್ಕಿಗಳನ್ನೆಲ್ಲ ಬಂಧಮುಕ್ತಗೊಳಿಸಿ ಅಲ್ಲಿಂದ ಎದ್ದು ಹೋದ.  ಬಲೆಯಿಂದ  ಹೊರ ಬಂದ ಹೆಣ್ಣು ಹಕ್ಕಿ ತನ್ನ ಸಂಗಾತಿ ಅಗಲಿದ ದುಃಖವನ್ನು ಸಹಿಸಲಾರದೇ ಅದೇ ಬೆಂಕಿಯಲ್ಲಿ ತಾನೂ ಬಿದ್ದು ಸತ್ತುಹೋಯಿತು. 

ಈ ಕಥೆಯನ್ನು   ನನ್ನ ಪುಟ್ಟ ಗೆಳತಿಗೆ ಹೇಳಿ ನಿಲ್ಲಿಸಿದೆ. ಆಕೆ ನೀರು ತುಂಬಿದ ಕಣ್ಣನ್ನು ಒರಸಿಕೊಳ್ಳುವ ಪ್ರಯತ್ನ ಮಾಡದೇ "ಹಾಗಿದ್ರೆ ಮರದ ಮೇಲಿದ್ದ ಮರಿಗಳಿಗೆ ಫುಡ್ ಯಾರು ಕೊಡ್ತಾರೆ. ಅವ್ರ ಅಪ್ಪ ಅಮ್ಮ ಇಬ್ರೂ ಸತ್ತು ಹೋದ್ರಲ್ವಾ.." ಎಂದಳು. ಛೇ.. ಹೌದಲ್ವಾ.. ಆ ಮರಿಗಳು ಮತ್ತೆ ಆಹಾರವಿಲ್ಲದೆ ಚಡಪಡಿಸಿ ಸತ್ತಿರಬಹುದು. ತಾಯಿ  ಹಕ್ಕಿಗೆ ತನ್ನ ಮಕ್ಕಳನ್ನು ಉಪವಾಸ ಸಾಯುವಂತೆ ಬಿಟ್ಟು ಬೆಂಕಿಗೆ ಹಾರಿ ತನ್ನ ಗಂಡನೊಡನೆ ಹೋಗುವುದೇ ಧರ್ಮವಾಗಿತ್ತೇ..? ಆ ಕತ್ತಲಲ್ಲೇ ಒಣಗಿದ ಕಸ ಕಡ್ಡಿಗಳಿಗಾಗಿ  ಅಲೆದು ಬೆಂಕಿ ಮಾಡಿದ ಗಂಡು ಹಕ್ಕಿ ಅದರ ಬದಲು  ಹೆಣ್ಣು ಹಕ್ಕಿಯ ಬಿಡುಗಡೆಯ ಬಗ್ಗೆ ಯೋಚಿಸಬಾರದಿತ್ತೇ..ತನ್ನ ಸಂಗಾತಿಯೊಂದಿಗೆ ಸಮಾನ ಕಷ್ಟದಲ್ಲಿ ಸಿಲುಕಿದ್ದ ಇತರ ಹಕ್ಕಿಗಳ ರಕ್ಷಣೆ ಅದರ ಧರ್ಮವಾಗಿರಲಿಲ್ಲವೇ.. ಹೀಗೆ ನೂರಾರು   ಪ್ರಶ್ನೆಗಳು ಮನದಲ್ಲಿ ಕಾಡತೊಡಗಿದವು. ಇಲ್ಲ ಪುಟ್ಟಿ.. ಆಗೇನಾಯ್ತು ಗೊತ್ತಾ.. ಇದನ್ನೆಲ್ಲಾ ನೋಡುತ್ತಿದ್ದ ದೇವರು ಬೆಂಕಿಯಲ್ಲಿ ಬಿದ್ದಿದ ಹಕ್ಕಿಗಳಿಗೆ ಜೀವ ಕೊಟ್ಟ. ಅವು ಪುನಃ ತಮ್ಮ ಮರಿಗಳ ಹತ್ತಿರ  ಹೋದವು ಅಂತ ಸುಳ್ಳು ಸುಳ್ಳು ಕಥೆ ಪೋಣಿಸಿ  ಸಮಾಧಾನ ಮಾಡಿದೆ. 

ಈ ಕಥೆಯ ತಿರುಳು ಏನೇ ಇರಲಿ, ಆದರೆ ವಾಸ್ತವ ಹೀಗಿರುವುದಿಲ್ಲ. ಅಪಾಯ ಬಂದಾಗ ಆತ್ಮರಕ್ಷಣೆಗಾಗಿ ಹೋರಾಡುವ ಛಲ ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಸಹಜವಾಗಿ ಬೇರೂರಿರುತ್ತದೆ. ಪ್ರಮಾಣ ಬೇಕೇ ನಿಮಗೆ.. ಹಾಗಿದ್ರೆ ಇನ್ನೊಂದು ಕಥೆ ಕೇಳಿ.. ಅಯ್ಯೋ ಕಥೆ ಅಂದೆನಾ.. ಅಲ್ಲಲ್ಲ  .. ಇದು ನೈಜ ಘಟನೆ. 

ಮೊನ್ನೆ ತೋಟದ ದಾರಿಯಲ್ಲಿ  ಏನನ್ನೋ ಯೋಚಿಸುತ್ತಾ ನಡೆಯುತ್ತಿದ್ದೆ. ಆಕಾಶ ಶುಭ್ರವಾಗಿತ್ತು. ಗಾಳಿಯಲ್ಲಿ ಸಂಪಿಗೆ ಹೂವಿನ ಪರಿಮಳ ತೇಲಿ ಬರುತ್ತಿತ್ತು. ಹಕ್ಕಿಗಳ ಕಲರವ , ಹುಲ್ಲಿನ ಮೇಲೆ ಹಾರುವ ಕೀಟಗಳ ಕಿಚಿಕಿಚಿ, ಹೂಗಳ ಮಕರಂದ ಹೀರುವ ದುಂಭಿಗಳ ಝೇಂಕಾರ ಇವುಗಳೆಲ್ಲಾ ಕಿವಿ  ತುಂಬುತ್ತಿದ್ದವು.  ಇದ್ದಕ್ಕಿದ್ದಂತೇ ಬೇರೆಯೇ ರೀತಿಯಲ್ಲಿ ಕೂಗುವ ಹಕ್ಕಿಗಳ ಕೂಗು ಕಿವಿಗೆ ಬಿತ್ತು. ಅದು ಮಾಮೂಲಿನ ಕೂಗಲ್ಲ. ಏನೋ ಅಪಾಯದ ಆಕ್ರಂದನದಂತೇ ಕೇಳಿಸಿತು. ನನ್ನ ಕಣ್ಣುಗಳು ಅವುಗಳ ಸ್ವರದ ಮೂಲ ಹುಡುಕ ಹೊರಟವು. 

ಅಲ್ಲೇ ಹತ್ತಿರದಲ್ಲಿದ್ದ ಜಮ್ಮುನೇರಳೆ ಮರದಿಂದ ಈ ಕೂಗು ಕೇಳಿ ಬರುತ್ತಿತ್ತು. ಆ ಮರಕ್ಕೆ ತಾಕಿದಂತೆ ಒಂದು ಸತ್ತು ಹೋದ ಅಡಿಕೆ ಮರವೂ ಇತ್ತು. ಆ ಅಡಿಕೆ ಮರದ ತುಂಬೆಲ್ಲಾ ಸಣ್ಣ ದೊಡ್ಡ ಉರುಟುರುಟಿನ ತೂತುಗಳು. ನನ್ನ ದೃಷ್ಟಿಯನ್ನು  ಇನ್ನಷ್ಟು ಸೂಕ್ಷ್ಮವಾಗಿಸಿದೆ. ಮರಕ್ಕೆ ಸುತ್ತು ಹೊಡೆಯುತ್ತಾ ಎರಡು ಹಕ್ಕಿಗಳು ಅತ್ತಿತ್ತಾ ಹಾರುತ್ತಾ ಇದ್ದವು. ಹೆಚ್ಚೇನು ಗಾಳಿ ಬೀಸದಿದ್ದರೂ ಜಂಬುನೇರಳೆ  ಮರದ ಒಂದು ಕೊಂಬೆಯ ಎಲೆಗಳು ವಿಚಿತ್ರ ಕಂಪನದಿಂದ ಅದುರುತ್ತಿದ್ದವು. ಅದನ್ನು ಸರಿಯಾಗಿ ಗಮನಿಸಿದಾಗ ನನ್ನ ಗುಂಡಿಗೆ ಭಯದಿಂದ ವೇಗವಾಗಿ ಹೊಡೆದುಕೊಳ್ಳತೊಡಗಿತು. 

ಸುಮಾರು ಆರೇಳು ಅಡಿ ಉದ್ದದ ಕೇರೆ ಹಾವೊಂದು ಮರದ ಮೇಲೆ ಯಾವುದೋ ಗಮ್ಯವನ್ನರಸಿ ಸರ ಸರನೇ ಹೋಗುತ್ತಿದ್ದೆ. ಅದರ ಆ ಅವಸರವೇ ಹಕ್ಕಿಗಳ ಈ ಕೂಗಿಗೆ ಕಾರಣ. ಪಾಪ ಪುಟ್ಟ ಹಕ್ಕಿಗಳು.. ಮರದ ಮೇಲೆ ಅವರ ಗೂಡಿತ್ತೋ ಏನೋ.. ಗೂಡಲ್ಲಿ ಹಾರಲು ಬಾರದ ಮರಿಗಳು..ಮನಸ್ಸು ಭಾರವಾಯಿತು.  ಆ ಹಾವು ಅಡಿಕೆ ಮರದ ಪೊಟರೆಗಳೊಳಗೆ  ತಲೆ ತೂರಿಸಿ ಆಹಾರವನ್ನರಸುತ್ತಿತ್ತು.

ಈಗ ಹಕ್ಕಿಗಳು ಹಾರಾಡುವ ವೇಗ ಜಾಸ್ತಿಯಾಯಿತು. ಅವುಗಳ ಕೂಗೂ ಇನ್ನಷ್ಟು ಜೋರಾಯಿತು. ಪಟ ಪಟ ರೆಕ್ಕೆ ಬಡಿಯುತ್ತಾ ವೇಗವನ್ನು ರೂಢಿಸಿಕೊಂಡು  ಹಕ್ಕಿಗಳೆರಡೂ ಹಾವಿನ ಮೈಗೆ ಕೊಕ್ಕಿನಿಂದ ಕುಕ್ಕಿ ಆಕ್ರಮಣ ಮಾಡಲು ತೊಡಗಿದವು. ಮೊದ ಮೊದಲು ತನ್ನ ಮೈಯನ್ನು ಕೊಡವುತ್ತಾ ಮುಂದಕ್ಕೆ ಚಲಿಸುತ್ತಿದ್ದ ಹಾವಿಗೆ ಈಗ ತೆವಳಲೂ ಅವಕಾಶ ನೀಡದಂತೆ ಅದರ ಮುಖಕ್ಕೇ ಚೂಪಾದ ಕೊಕ್ಕಿನಿಂದ ಕುಕ್ಕತೊಡಗಿದವು. ಹಾವು ಸ್ವಲ್ಪವೇ ಸ್ವಲ್ಪ ತನ್ನ ಬಾಲದ ಭಾಗವನ್ನು ಅಡಕೆ ಮರಕ್ಕೆ ಬಿಗಿಯಾಗಿ ಸುತ್ತಿ ಹಿಡಿದುಕೊಂಡು ತಲೆಯನ್ನು ಮರದಿಂದ ದೂರ ಹೊರಳಿಸಿ ಗಾಳಿಯಲ್ಲಿ ಅತ್ತಿತ್ತ ಜೋಲಾಡಿ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಹೆಣಗಿತು. ಈಗ ಆಕ್ರಮಣದ ರೀತಿ ಬದಲಾಯಿತು.  ಒಂದು ಹಕ್ಕಿ ಅದರ ಮೈಯನ್ನು ಕುಕ್ಕಿದರೆ ಮತ್ತೊಂದು ಮುಖದ ದಾಳಿಯನ್ನು ಮುಂದುವರಿಸಿತು.ನೋವಿನಿಂದಾಗಿ  ಹಾವು ಮರದ ಮೇಲೆ ತನ್ನ ಹಿಡಿತ ಕಳೆದುಕೊಂಡು ದೊಪ್ಪನೆ ಕೆಳಗೆ ಬಿತ್ತು. ಉಸಿರು ಬಿಗಿ ಹಿಡಿದು ನಿಂತಿದ್ದ ನಾನು ಯುದ್ಧ ಮುಗಿದ ಸಂತಸದಲ್ಲಿ ನಿಟ್ಟುಸಿರು ಬಿಟ್ಟೆ.  ಆದರೆ ಹಕ್ಕಿಗಳು ಆಕಾಶದಲ್ಲಿ ಇನ್ನೂ ಮರದ ಸುತ್ತು ಸುತ್ತುವುದನ್ನು  ಮುಂದುವರಿಸಿದ್ದವು.  ಸ್ವಲ್ಪ ಹೊತ್ತು ಬಿದ್ದಲ್ಲೇ ಬಿದ್ದಿದ್ದ ಹಾವು ತೆವಳುತ್ತಾ ಅಲ್ಲಿಂದ ಸರಿದು ಮಾಯವಾಯಿತು.. 

ನಾನು ಈ ಘಟನೆಯನ್ನು ಕಥೆಯಾಗಿಸಿ ನನ್ನ ಪುಟ್ಟ ಗೆಳತಿಗೆ ಹೇಳುವ ಆತುರದಲ್ಲಿ ತೋಟದ ಕೆಲಸ ಬಿಟ್ಟು ಮನೆಗೆ ಮರಳಿದೆ. 
 
ಕಷ್ಟ ಬಂದಾಗ ಎದೆಗುಂದದೇ ಮುನ್ನುಗ್ಗಿ ಹೋರಾಡುವುದು ಮುಖ್ಯ. ಸೋಲೇ ಬಂದರೂ ಅದು ವೀರೋಚಿತವಾಗಿಯೇ ಇರುತ್ತದೆ. 

ಆದರೆ ಪ್ರಕೃತಿ ಗೆಲ್ಲುವ ಮನಸ್ಸಿದ್ದವರನ್ನೆಂದೂ ಸೋಲಿಸುವುದಿಲ್ಲ ಅಲ್ವಾ..!!  






Thursday, April 11, 2013

ಹಬ್ಬದ ಸಡಗರ


ಒಬ್ಬರ ಮನೆಯಲ್ಲಿ ಮದುವೆ ಉಪನಯನಗಳಂತಹ ಸಂಭ್ರಮ ಇರಬಹುದು ,ಇನ್ನೊಬ್ಬರ ಮನೆಯಲ್ಲಿ ಪೂಜೆ ಇರಬಹುದು,ಈ ಸಂಭ್ರಮ ಸಡಗರಗಳು ಅದನ್ನು ನಡೆಸುವವರ ಮನೆ ಮನಗಳಲ್ಲಿ ಮಾತ್ರ ಇರುತ್ತದೆ. ಅದರೆ ಎಲ್ಲರೂ ಒಂದೇ ಬಗೆಯ ಸಂತಸವನ್ನು ಮನೆ ಮನೆಗಳಲ್ಲಿ ಆಚರಿಸಿ ಸಂತಸ ಹಂಚಿಕೊಳ್ಳುತ್ತಾರೆ ಎಂದರೆ ಅವುಗಳಿಗೆ ಮೂಲ ಕಾರಣ ಹಬ್ಬಗಳು. 

ಈ ಹಬ್ಬಗಳು ನೂರು ಮೈಲು ದೂರದಲ್ಲಿ ಬರುತ್ತಿರುವಾಗಲೇ ಇಲ್ಲಿ ಮಾವಿನೆಲೆಯ ತೋರಣ ಕಟ್ಟಿ ಸ್ವಾಗತಕ್ಕೆ ಸಿದ್ಧತೆಗಳಾಗುತ್ತದೆ. ಅದರಲ್ಲೂ ಹೆಂಗಳೆಯರಿಗೆ ಹಬ್ಬದ ದಿನಗಳೆಂದರೆ ಉತ್ಸಾಹದ ಜೊತೆ ಜೊತೆಗೆ  ಜವಾಬ್ದಾರಿ  ತಗಲಿಕೊಂಡು ಬಿಡುತ್ತವೆ. 

ಯುಗಾದಿ ದಿನ ಬೇವು ಬೆಲ್ಲ ತಿಂದು ಮುಖ ಕಹಿ  ಮಾಡಿಕೊಂಡು ಸುಧಾರಿಸಿಕೊಳ್ಳುವಾಗಲೇ ಹಬ್ಬದ ಇನ್ನೊಂದಷ್ಟು ದಿನಗಳು ಹೆಸರುಗಳು ನಾಲಿಗೆಯಲ್ಲಿ ನಲಿದಾಡಲು ತೊಡಗುತ್ತವೆ. 'ನಾಗರ ಪಂಚಮಿ  ನಾಡಿಗೆ ದೊಡ್ಡದು' ಎಂದು ಬಗ್ಗಿ ಕಲ್ಲಿನ ನಾಗರಗಳಿಗೆಲ್ಲಾ ಹಾಲೆರೆದು ಬೆನ್ನಿನ್ನೂ ನೆಟ್ಟಗಾಗುವಷ್ಟರಲ್ಲಿ ಬೇರೆ ಹಬ್ಬಗಳು ಒಂದೊಂದಾಗಿ 'ಹಾಜರ್ ಸಾರ್' ಎಂದು ಮನೆಯೊಳಗೆ ಪ್ರವೇಶಿಸಲು ಸರತಿಯಲ್ಲಿ ನಿಂತಿರುತ್ತದೆ. ದಿನನಿತ್ಯದ ಯಾಂತ್ರಿಕ ಬದುಕಿಗೆ ಒಂದಿಷ್ಟು ಹರ್ಷದ ಸಿಂಚನಗರೆಯುತ್ತವೆ.

ಗಂಡಸರೇನೋ ಆ ದಿನ ಸಿಕ್ಕ ರಜೆಯನ್ನು ಕಳೆಯಲು ರುಚಿ ರುಚಿ ಊಟದ ಜೊತೆಗೆ ಸೋಫಾದ ಮೇಲೆ ಮೈ ಚೆಲ್ಲಿ ಮಲಗುವ ಕನಸು ಕಾಣುತ್ತಿದ್ದರೆ ಹೆಂಗಸರು ರೇಶಿಮೆ ಸೀರೆ ಉಟ್ಟು ಸರಬರ ಸದ್ದು ಮಾಡುತ್ತಾ ವಿಶೇಷ ತಿನಿಸುಗಳ ಸಿದ್ಧತೆಯಲ್ಲಿರುತ್ತಾರೆ.ಅದರಲ್ಲೂ ಹೊಸದಾಗಿ ಸೊಸೆಯಾದವಳೋ, ಅಥವಾ ಸೇರಕ್ಕಿಯನ್ನು ಒದ್ದು ಒಳ ಬಂದ ನವಸೊಸೆಯ ಅತ್ತೆಯಾದವಳಿಗೋ ಈ ಹಬ್ಬ ಇನ್ನಷ್ಟು ಮಹತ್ವದ್ದಾಗಿರುತ್ತದೆ. ಅತ್ತೆಗೆ ತಾನಿಷ್ಟು ಕಾಲ ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಸೊಸೆಗೂ ಪರಿಚುಸುವ ಆಸೆಯಾದರೆ ಸೊಸೆಗೆ ತನ್ನ ತವರಲ್ಲಿ ಆಚರಿಸುತ್ತಿದ್ದ ಹಬ್ಬದ ಸಡಗರವನ್ನು ಇಲ್ಲಿಯೂ ಕಾಣುವಾಸೆ. 

ಹೆಣ್ಣಾಗಿ ನಾನು ಈ ಎಲ್ಲಾ ಆಸೆಗಳಿಂದ ಮುಕ್ತಳಾಗಲು ಹೇಗೆ ಸಾಧ್ಯ. ಹಬ್ಬ ಹಳೆಯದೇ ಆದರೂ ನನಗೆ ಹೊಸ ಮನೆಯಲ್ಲಿ ಆಚರಿಸುವ ಉತ್ಸಾಹ. ಜೊತೆಗೆ ಇಲ್ಲಿಯ ರೀತಿ ರಿವಾಜನ್ನು ಅರಿಯುವ ಕುತೂಹಲ. 
'ಹಬ್ಬದ ದಿನವೇ ಬೆಳಿಗ್ಗೆ ಬೇಗ ಎದ್ದು ಎಲ್ಲಾ ತಯಾರಿ ಮಾಡೋಣಮ್ಮಾ.ಇವತ್ತು ಮಾಡಿಟ್ರೆ ನಿನ್ನ ಮಾವನೋ, ನಿನ್ನ ಗಂಡಾನೋ ಡಬ್ಬಿಗೆ ಕೈ ಹಾಕಿ ತಿಂದು ಬಿಡುತ್ತಾರೆ. ಇನ್ನೂ ನೈವೇಧ್ಯ ಆಗಿಲ್ಲ,ಎಂಜಲು ಮಾಡ್ಬಿಟ್ರಲ್ಲ ಅಂದ್ರೆ ಕೈ ಹಾಕಿ ತೆಗೊಂಡ್ರೆ ಅದು ಹೇಗೆ ಎಂಜಲಾಗುತ್ತೆ?  ಎನ್ನುವೆಲ್ಲಾ ಅಥರ್ವಣ ಪಾಠಗಳನ್ನು ಮಾಡ್ತಾರೆ..' ಅಂದರು. ತವರಲ್ಲಿ ನಾನೂ ಇದನ್ನೇ ಮಾಡುತ್ತಿದ್ದೆ ಅಂತ ಅತ್ತೆಯೆದುರು ಹೇಳೋಕೆ ಸಾಧ್ಯಾನೇ..!! ಹೂಂ ಅಂತ ತಲೆ ಅಲುಗಿಸಿದೆ. 

ಮರುದಿನ ಸೂರ್ಯ ಹುಟ್ಟುವ ಮೊದಲೇ ಎದ್ದು ಸ್ನಾನ ಮಾಡಿ ಫಿಲ್ಮೀ ಸ್ಟೈಲಿನಲ್ಲಿ ತಲೆಗೆ ಟವೆಲ್ ಸುತ್ತಿ ಅಡುಗೆ ಮನೆಗೆ ಪ್ರವೇಶ ಮಾಡಿದೆ. ಅತ್ತೆ ಆಗಲೇ ಎದ್ದು ತನ್ನ ಸುತ್ತ ಸಾಮಾನುಗಳ ರಾಶಿಯನ್ನೇ ಹರಡಿಕೊಂಡು ಕಿರಾಣಿ ಅಂಗಡಿಯ ಮಾಲೀಕರಂತೆ ಕಾಣಿಸುತ್ತಿದ್ದರು. ಅವರ ನಿರ್ದೇಶನದಂತೆ ಸ್ವಲ್ಪವನ್ನು ಹುರಿದು, ಇನ್ನೊಂದಿಷ್ಟು ತುರಿದು ಎಂಬೆಲ್ಲ ಕೆಲ್ಸಗಳನ್ನು ಮಡಿಲಿಗೆಳೆದುಕೊಂಡೆ. ಮೈಸೂರುಪಾಕು, ಸಾಟುಗಳೆಂಬ ಸಿಹಿ  ತಿಂಡಿಗಳು ಪರಿಮಳ ಸೂಸುತ್ತಾ ಡಬ್ಬದಲ್ಲಿ ಕುಳಿತುಕೊಂಡವು. ದೇವರಿಗೂ ಬರೀ ಸಿಹಿ  ತಿಂದ್ರೆ ಬೇಸರ ಬರೋಲ್ವಾ.. ಅವನಿಗಾಗಿ ಕರುಂ ಕುರುಂ  ಚಕ್ಕುಲಿ, ಕೋಡುಬಳೆ, ವಡೆಯ ತಯಾರಿ ಆಗಬೇಕಿತ್ತು. ಅದರ ಸಿದ್ಧತೆಗಾಗಿ ಅತ್ತೆ ಹುರಿದ ಉದ್ದಿನಬೇಳೆಯ ಹುಡಿಯನ್ನು ಹುಡುಕುತ್ತಿದ್ದರು. ಎಲ್ಲಿ ಹುಡುಕಿದರೂ ಇಲ್ಲ. ನಾನೂ ಹುಡುಕಿದೆ. ಊಹೂಂ.. ಕಾಣಿಸಲಿಲ್ಲ. ಎಲ್ಲೋ ಅಂಗಡಿಯವನು ಕೊಡಲಿಕ್ಕೆ ಮರೆತಿದ್ದಾನೆ ಅಂತ  ಹಬ್ಬಕ್ಕೆ ತರಿಸಿದ ಸಾಮಾನು ಚೀಟಿಯನ್ನು ತಂದು ಅದರಲ್ಲಿ ನೋಡಿದರೆ ಪಟ್ಟಿಯಲ್ಲಿ ಆ ಹೆಸರೇ ಸೇರಿರಲಿಲ್ಲ. ಅಂಗಡಿಯವನು ಚೀಟಿಯಲ್ಲಿದ್ದ ಸಾಮಾನುಗಳನ್ನೇ ಕಟ್ಟಿ ಕೊಡಲು ಮರೆತಿರುತ್ತಾನೆ ಅಂದ ಮೇಲೇ ಬರೆಯಲು ಮರೆತಿದ್ದ ಸಾಮಾನನ್ನು ಹುಡುಕಿದರೆ ಸಿಗುವುದೆಲ್ಲಿಂದ..? 'ಇಷ್ಟು ವರ್ಷ ಹೀಗೆ ಆಗಿರಲಿಲ್ಲ. ಈಗಿನ್ನೂ ಇಷ್ಟು ಬೇಗ ಯಾವ ಅಂಗಡಿ ತಾನೇ ಬಾಗಿಲು ತೆರೆಯುತ್ತೆ.? ಏನಮ್ಮಾ ಮಾಡೋದೀಗ' ಎಂದು ಅತ್ತೆ ಆತಂಕಗೊಂಡರು.   

ನನ್ನ ತವರಲ್ಲಿ ಅಮ್ಮ ಇಡೀ ಬೇಳೆಯನ್ನು ಹುರಿದು ಮಿಕ್ಸಿಯಲ್ಲಿ ಹುಡಿ ಮಾಡಿ ಚಕ್ಕುಲಿ ಮಾಡುತ್ತಿದ್ದುದು ಅಂತ ತಿಳಿದಿದ್ದುದರಿಂದ ' ಅದೆಷ್ಟು ಹೊತ್ತಿದೆ ಅತ್ತೇ.. ಸ್ವಲ್ಪ ಹುರಿದು ಹುಡಿ ಮಾಡಿದರಾಯ್ತು. ನಾನೇ ಮಾಡಿಕೊಡ್ತೀನಿ ನಿಲ್ಲಿ..' ಎಂದೆ. ಬಾಣಲೆಯಲ್ಲಿ ಹುರಿಯುತ್ತಿದ್ದ  ಉದ್ದಿನಬೇಳೆ ಕೆಂಪಗಾಗುತ್ತಿದ್ದಂತೆ ಅಷ್ಟು ಹೊತ್ತು ಪ್ರಖರವಾಗಿ ಉರಿಯುತ್ತಿದ್ದ ಬಲ್ಬ್ ಕೂಡಾ ನಿಧಾನಕ್ಕೆ ಡಿಮ್ ಆಗಿ ಕೆಂಪಗಾಯಿತು. 

ಇದೇನು ಕರ್ಮ ಹಬ್ಬದ ದಿನ ಕರೆಂಟ್  ಹೀಗಾಗೋದು..? ಎಂದು ಇಬ್ಬರಿಗೂ ತಲೆ ಬಿಸಿ ಆಯಿತು. ನಾವಿಬ್ಬರೂ ಒಬ್ಬರಾದ ಮೇಲೊಬ್ಬರಂತೆ ಕರೆಂಟಿನವರಿಗೆ ಬಯ್ದು ಅದೂ ಸಾಕಾಗದೆ ನಮ್ಮೂರ ಲೈನ್ ಮ್ಯಾನ್ ನ ವಂಶದವರ ಜನ್ಮ ಜಾಲಾಡಿದೆವು. ಅಷ್ಟರಲ್ಲಿ ಸ್ವಲ್ಪ ಬಲ್ಬ್ ಎಲ್ಲಿದೆ ಎಂದು ಕಾಣುವಂತೆ ಉರಿಯುತ್ತಿದ್ದ ಅದು ಪೂರ್ಣ ಮಾಯವಾಯಿತು. 

ಇನ್ನು ಬಯ್ದು ಪ್ರಯೋಜನವಿಲ್ಲ ಎಂದು  ಹಾಸಿಗೆಯಲ್ಲಿ ಕಾಲು ಚಾಚಿ ಮಲಗಿದ್ದ ಮಾವನವರನ್ನು ಎಬ್ಬಿಸಿ, ಲೈನ್ ಮ್ಯಾನಿಗೆ ಫೋನ್ ಮಾಡಲು ಒತ್ತಾಯಿಸಿದೆವು. 'ಹಬ್ಬ ಅಲ್ವಾ ಸಾರ್.. ನಾನು ಎರಡು ದಿನ ರಜೆಯಲ್ಲಿದ್ದೀನಿ. ಅಂತ ಫೋನ್ ಕಟ್ ಮಾಡಿದ. ಛೇ.. ಇನ್ನೇನು ಮಾಡೋದು ಎಂದು ಅತ್ತೆ ತಲೆ ಮೇಲೆ ಕೈ ಹೊತ್ತರೆ ನಾನು ಎದೆಗುಂದದೇ, ಕೊಂಚ ಸಿಟ್ಟಿನ ಸ್ವರದಲ್ಲೆ  ' ಅತ್ತೇ ಒನಕೆ ಎಲ್ಲಿದೆ ಹೇಳಿ' ಎಂದು ಓಬವ್ವನ ಮಾದರಿಯಲ್ಲೇ ಸೊಂಟಕ್ಕೆ ಸೆರಗು ಬಿಗಿದು ಕೇಳಿದೆ. ಮೊದಲೇ ವೀರಕಲಿಗಳ ನಾಡು ಕೊಡಗಿನಿಂದ ಬಂದವಳು.ಮದುವೆ ಮಾಡಿ ಗಂಡನ ಮನೆಗೆ ಕಳಿಸುವಾಗ ಅಮ್ಮ ಬೇರೆ ' ಇವಳಿಗೆ ಸ್ವಲ್ಪ ಸಹನೆ ಕಮ್ಮಿ , ಒಂಚೂರು ಕೋಪವೂ ಜಾಸ್ತಿ, ಅಂತೆಲ್ಲ ಹೇಳಿ ಬಿಟ್ಟಿದ್ದರು. ಆದ್ದರಿಂದ ನನ್ನ ಈಗಿನ ರೋಷಾವೇಶಕ್ಕೆ  ಅತ್ತೆ ಸ್ವಲ್ಪ ನಡುಗಿ  ನಾನೇನೋ ಅವನ ತಲೆ ಒಡೆಯಲು ಹೋಗುತ್ತಿರುವಂತೆ 'ಲೈನ್ ಮ್ಯಾನ್ ಪಾಪ ರಜೆ ಅಂತೆ, ಅವ್ನಿಗೂ ಹಬ್ಬ ಮಾಡ್ಬೇಕಲ್ಲ ಬಿಟ್ಬಿಡೇ ಸುಮ್ನೆ' ಅಂದ್ರು.

' ಅವ್ನು ಇರ್ಲಿ ಅತ್ತೆ ಅವನ ಪಾಡಿಗೆ, ನೀವು ಒನಕೆ ಕೊಡಿ. ಒರಳಿಗಾದ್ರು ಹಾಕಿ ಈ ಉದ್ದಿನ ಬೇಳೆಯನ್ನು ಹುಡಿ ಮಾಡಿ ಕೊಡ್ತೀನಿ' ಅಂದೆ. ಅತ್ತೇ ಕೂಡಲೇ  ' ಅಯ್ಯೋ ಹಾಗಂದಿದ್ದಾ ನೀನು.. ತಡಿ ತಡಿ ತಂದೆ ಎಂದು ಒಳಹೋಗಿ ಒನಕೆ ಹುಡುಕಿ ತಂದಿಟ್ಟರು. ನಾನು ಒನಕೆಯಲ್ಲಿ ಅಕ್ಕಿ ಹುಡಿ ಮಾಡುವುದನ್ನು ಚಿಕ್ಕಂದಿನಲ್ಲಿ ನೋಡಿದ್ದು ನೆನಪಿತ್ತೇ ವಿನಃ ಅದರ ಬಗ್ಗೆ ಬೇರೇನೂ ತಿಳಿದಿರಲಿಲ್ಲ. ಒರಳಿಗೆ ತುಂಬಾ ಉದ್ದಿನಬೇಳೆಯನ್ನು ತುಂಬಿ ಲೈನ್ ಮ್ಯಾನ್ ನ ತಲೆಗೇ ಹೊಡೆಯುವಷ್ಟು ಶಕ್ತಿ ಹಾಕಿ ಕುಟ್ಟಿದೆ. ಒಳಗಿದ್ದ ಉದ್ದಿನಬೇಳೆ 'ಚೆಲ್ಲಿದರೂ ಮಲ್ಲಿಗೇಯಾ..' ಎಂಬಂತೆ ಸುತ್ತಲೂ ಚೆಲ್ಲಿತು. ಮತ್ತೊಮ್ಮೆ ತುಂಬಿ ನಿಧಾನಕ್ಕೆ ಕುಟ್ಟಿದರೂ ಆ ಕೆಲಸ ಸುಸೂತ್ರವಾಗಿ ನಡೆಯುವಂತೆ ತೋರಲಿಲ್ಲ. 
ಆದರೆ ಮನೆಯ ಸೊಸೆಯಾಗಿ ನಾನು ಅಷ್ಟು ಸುಲಭಕ್ಕೆ ಕೈ ಚೆಲ್ಲಿ ಕುಳಿತುಕೊಳ್ಳಲು ಸಾಧ್ಯವೇ..? ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಅತ್ತೆಯ ಕಡೆಗೆ ತಿರುಗಿ ' ಅತ್ತೇ ಬೀಸುವ ಕಲ್ಲು ಇಲ್ಲವೇ' ಎಂದೆ.
ನನ್ನ ಓಬವ್ವಾವತಾರ ನೋಡಿಯೇ ಅರ್ಧ ಸುಸ್ತಾಗಿದ್ದ ಅತ್ತೆ, 'ಇದೆಯಮ್ಮಾ ಆದ್ರೆ ಅದನ್ನು ಮುಟ್ಟದೇ ಮೂರು ವರ್ಷ ಕಳೀತು. ಈಗ ಹೊಸದಾಗಿ ಬ್ರಹ್ಮ ಕಲಶ ಮಾಡಿ ತೊಳೀಬೇಕಷ್ಟೇ' ಎಂದರು 

ಅಷ್ಟರಲ್ಲಿ ನಮ್ಮ ಗಲಾಟೆಗೆ ಕಣ್ಣು ಪಿಳುಕಿಸುತ್ತಾ ಎದ್ದ ನನ್ನ ಪತಿರಾಯರಿಗೆ ಹೊಸ ಹೆಂಡತಿಯ ಉತ್ಸಾಹಕ್ಕೆ ಭಂಗ ತರುವ ಮನಸ್ಸಾಗಲಿಲ್ಲ. ಬಲ ಭೀಮನಂತೆ ಎದ್ದು ಬೀಸುವ ಕಲ್ಲನ್ನೆತ್ತಿ ಅಂಗಳದಲ್ಲಿರಿಸಿ, ಎರಡು ಕೊಡ ನೀರು ಹೊಯ್ದು ಸ್ನಾನ ಮಾಡಿಸಿದರು. ನಾನು ಒಣಗಿದ ಬಟ್ಟೆಯಲ್ಲಿ ಅದನ್ನೊರೆಸಿದೆ. ಆದ್ರೂ ಯಾಕೋ ಏನೋ ಮಿಸ್ಸಿಂಗ್ ಅಂತ ಅನ್ನಿಸತೊಡಗಿತು. ನೋಡಿದರೆ ಅದನ್ನು ತಿರುಗಿಸುವ  ಮರದ ಹಿಡಿಯೇ ಇರಲಿಲ್ಲ. 

ಈಗ ಮಾವನ ಸರದಿ. ನಾವು ಬಾಯಿ  ತೆರೆಯುವುದಕ್ಕೆ ಮುನ್ನವೇ ಅದಕ್ಕೊಂದು ಮರದ ಹಿಡಿ ಹೊಂದಿಸಿ ಕೊಟ್ಟರು. ಎಲ್ಲಾ ಸಿದ್ಧವಾಗಿ ನಾನು ಕಲ್ಲಿನೆದುರು ಕುಳಿತೆ. ಅತ್ತೆಯೂ ನನ್ನೆದುರು ಕುಳಿತು ಕೈ ಜೋಡಿಸಿದರು.ಸುಮ್ಮನೆ ಹಿಟ್ಟು ಬೀಸುವ ಬದಲು ಹಬ್ಬದ ಸಡಗರ ಹೆಚ್ಚಿಸಲು  ' ನಿಮ್ಗೆ ಬೀಸುವ ಕಲ್ಲಿನ ಪದ ಬರುತ್ತಾ ಅತ್ತೆ' ಅಂದೆ. ಮೊದಲೇ ಕೆಲಸ ಆಗದ ಮಂಡೆ ಬಿಸಿಯಲ್ಲಿದ್ದ ಅವರು  ಒಂದು ಹಾಡೂ ನೆನಪಾಗದೇ, 'ಇಲ್ಲಮ್ಮಾ ಸತ್ಯನಾರಾಯಣ ಪೂಜೆಯ ಹಾಡು ಮಾತ್ರ ನೆನಪಾಗ್ತಿದೆ ಈಗ ಹೇಳಲಾ' ಅಂದ್ರು. ನಂಗೆ ಹಾಗೊಂದಿದೆ ಅಂತ ಗೊತ್ತಿರಲಿಲ್ಲ. ಹುಂ ಹೇಳಿ ಅತ್ತೆ ಅಂದೆ.
 " ಸತ್ಯ ದೇವ ಕೊಡು ಪ್ರಸಾದವಾ , ಶಿರದಿ ಮೆರೆವ ಪತ್ರ ಪುಷ್ಪ ಭರಿತ ದ್ರವ್ಯವಾ.." "ಗೆ ಸರಾಗವಾಗಿ ಸುರುವಾದ ಹಾಡು ಬೀಸುವ ಕಲ್ಲಿನೊಂದಿಗೆ ಸ್ಪರ್ಧೆ ಮಾಡಲಾಗದೇ ಫಸ್ಟ್ ಗೇರು ಹಾಕಿದರೂ ಏರದ ಗಾಡಿಯಂತೆ ಏದುಬ್ಬಸ ಬಿಡತೊಡಗಿತು. ' ನಂಗೆ ಕೆಲ್ಸ ಮಾಡುತ್ತಾ ಹಾಡೋಕ್ಕಾಗಲ್ಲಮ್ಮ .. ನೀನೇ ಹೇಳು ಅಂದರು. 
ಮರ್ಯಾಧೆಗೆ ಒಂದಾದರೂ ದೇವರ ನಾಮ ನೆನಪಿಗೆ ಬರಬೇಡವೇ..!! ಹೋಗಲಿ ದೇಶ ಭಕ್ತಿ ಗೀತೆಯನ್ನು ನೆನಪಿಸಿಕೊಂಡೆ. ಅದೂ ಜನ ಗಣ ಮನ, ವಂದೇ ಮಾತರಂ ಬಿಟ್ಟು ಮುಂದೆ ಹೋಗಲಿಲ್ಲ. ಮದುವೆಗಿಂತ ಎಷ್ಟೋ ಮೊದಲು ನೋಡಿದ ಸಿನೆಮಾದಾ ಹಾಡು 'ಕಬೂತರ್ ಜಾ ಜಾ'  ನೆನಪಾಗಿ ಅದನ್ನೇ ಹಾಡಿದೆ. ಅಷ್ಟರಲ್ಲಿ ಅದನ್ನು ಕೇಳಿಸಿಕೊಂಡ ನನ್ನವರು ' ಕಬೂತರ್ ಬಿಡು ಕಾಗೆ ಕೂಡಾ ಈ ಸ್ವರ ಕೇಳಿ ಹೆದರಿ ಹಾರುತ್ತೆ. ಜಾ .. ಜಾ.. ಅಂತ ಹೇಳಲೇ ಬೇಕಿಲ್ಲ ಅಂತ ಕಿಚಾಸಿದರು. ನನ್ನ ಸ್ವರ ಮಾಧುರ್ಯದ ಬಗ್ಗೆ ಇಂತಹ ಮಾತು ಕೇಳಿ ಸಿಟ್ಟು ಬಂದು, ಅತ್ತೆ ಎದುರಿಗಿರುವುದರಿಂದ ಬಯ್ಗುಳಗಳನ್ನು ನುಂಗಿಕೊಂಡು ಮೌನವಾಗಿ ಬೀಸುವುದನ್ನು ರಭಸಗೊಳಿಸಿದೆ. 

ಅಂತೂ ಇಂತೂ ಉದ್ದಿನಬೇಳೆಯನ್ನು ಹುಡಿಯ ರೂಪಕ್ಕೆ ತಂದು, ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಚಕ್ಕುಲಿ ವಡೆಯ  ಹಿಟ್ಟು ರೆಡಿ ಮಾಡಿದ್ದಾಯಿತು. ಈಗ ಉತ್ಸಾಹದಲ್ಲಿ ಎಣ್ಣೆ ಬಿಸಿಗಿಟ್ಟು ಕಾದ ಎಣ್ಣೆಗೆ ಚಕ್ಕುಲಿ ಹಾಕಿದೆ. ಡಬ್ ಎಂಬ ಸದ್ದಿನೊದನೆ ಎಣ್ಣೆ ಹೊರ ಚೆಲ್ಲಿತು. ' ಎಲ್ಲಿಯೋ ಉದ್ದಿನ ಬೇಳೆ ಇಡೀ ಉಳ್ಕೊಂಡಿದೆ ಎಂದರು ಅತ್ತೆ ಅನುಭವೀ  ಕಂಠದಲ್ಲಿ. ದೋಸೆಯ ಕಾವಲಿಯ ಮುಚ್ಚಳವನ್ನೇ ಗುರಾಣಿಯಂತೆ ಹಿಡಿದು ಚಕ್ಕುಲಿ ಬೇಯಿಸಿ ತೆಗೆದಿದ್ದಾಯಿತು.ಚಕ್ಕುಲಿ ಸಿಡಿತಕ್ಕೆ ಸಿಕ್ಕಿ ಕೆಲವು ಕಡೆ ತನ್ನ ಮೂಲ ಆಕಾರವನ್ನು ಕಳೆದುಕೊಂಡು ಹೊಸ ರೂಪ ಹೊಂದಿತ್ತು. ದೇವನೊಬ್ಬ ನಾಮ ಹಲವು ಎಂಬುದಿಲ್ಲಿ ನಾಮ ಒಂದೇ ರೂಪ ಹಲವು ಆಗಿತ್ತು. ಆದರೇನು ರುಚಿಯಲ್ಲಿ ವ್ಯತ್ಯಾಸವಿಲ್ಲ ತಾನೇ ಅಂತ ನಾವೇ ಸಮಾಧಾನ ಪಟ್ಟುಕೊಂಡೆವು. 

ದೇವರಿಗೆ ನೈವೇಧ್ಯ ಆದ ನಂತರ  "ಇಷ್ಟು ಭಕ್ತಿಯಲ್ಲಿ ಯಾರೂ ನೈವೇಧ್ಯ ತಯರು ಮಾಡಿರಲಿಕ್ಕಿಲ್ಲ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೇವರು ಕೊಟ್ಟೇ ಕೊಡ್ತಾನೆ" ಎಂದು ಚಕ್ಕುಲಿ ಪ್ರಿಯರಾದ ಮಾವ ನಮ್ಮನ್ನು ಹೊಗಳಿ ಅಟ್ಟಕ್ಕೇರಿಸಿದರು.ಅತ್ತೆಯಂತೂ ಇದರಿಂದ ಸಂತೋಷಗೊಂಡು ಬರೋ ತಿಂಗಳು ಬರುವ ಹಬ್ಬಕ್ಕೆ ಇನ್ನೊಂದು ಸೇರು ಹಿಟ್ಟು ಹೆಚ್ಚೇ ಚಕ್ಕುಲಿ ಮಾಡ್ಬೇಕು. ರುಚಿ ಪರಿಮಳ ಎಲ್ಲಾ ತುಂಬಾ ಚೆನ್ನಾಗಿದೆ ಎಂದರು. 

ನಾನಂತೂ ಆ ದಿನವೂ ಕರೆಂಟ್ ಹೋಗದಿರಲಿ ಅಂತೆ ಈಗಿನಿಂದಲೇ ಆ ಹಬ್ಬದ ದೇವರನ್ನು ಬೇಡಿಕೊಳ್ಳಲು ಪ್ರಾರಂಭಿಸಿದ್ದೇನೆ. 

  






Tuesday, April 2, 2013

ಅಕ್ಕಿ ಆರಿಸುವಾಗ .......

ಅವಳದೋ ಧ್ಯಾನಸ್ಥ ಭಾವ. ಕಾಣದಿರುವುದನ್ನೇ ಕಾಣುವ ಹಂಬಲ. ಸಿಗದಿದ್ದಾಗ ಚಡಪಡಿಕೆ, ಆ  ಹುಡುಕಾಟದ ಅರಿವು  ಅವಳ ಬೆರಳುಗಳಿಗೆ ಗೊತ್ತಿತ್ತು,ಕಣ್ಣುಗಳಿಗೆ ಗೊತ್ತಿತ್ತು, ಉಣ್ಣುವ ಬಾಯಿಗಳಿಗೆ ಗೊತ್ತಿತ್ತು. ಅವಳಿಗೂ ನಿರಾಳತೆಯಿತ್ತು.  


ಮೊರದ ತುಂಬಾ ಇದ್ದ   ಬಿಳಿ ಅಕ್ಕಿ ದೂರ ನಿಂತವರಿಗೆ ಕಾಣುತ್ತಿತ್ತು. ಆದರೆ ಅವಳ ಕಣ್ಣುಗಳಿಗೆ ಅದು ಕೇವಲ ಬಿಳಿ ಹಾಸು.ಆ ನೋಟಕ್ಕೆ  ಅದು ಬೇಕಿರಲಿಲ್ಲ. . ಮತ್ತೇನೋ ಇದೆ ಎಂಬುದರ ಹುಡುಕಾಟದಲ್ಲಿ ಕಳೆಯುತ್ತಿದ್ದ ಸಮಯ. 

 ಬತ್ತ, ಕಲ್ಲು, ಹೊಟ್ಟು.. ಅಲ್ಲೆಲ್ಲೋ ಇತ್ತದು ಬೆಳ್ಳನೆಯ ಅಕ್ಕಿಯ ಮರೆಯಲ್ಲಿ.. ಕಾಣದುಳಿದೀತೇ..?? ಕಣ್ಣು ಬಯಸಿದ್ದು ಸಿಕ್ಕಾಗ ಕೈಗೆ ಅವಸರ. ಮೊಗದಲ್ಲಿ ಕಿರುನಗು.ಎಲ್ಲಿ ಅಡಗಿದರೂ  ಕಂಡು ಹಿಡಿದೆ ನಿನ್ನನ್ನು ಎಂಬ ಗೆಲುವಿನ ಭಾವ. ಸಿಕ್ಕಿದ್ದನ್ನು ಅಲ್ಲೇ ಪಕ್ಕದಲ್ಲಿರಿಸಿ ನೋಡುವ ಚಪಲ. 

 ಮತ್ತೊಮ್ಮೆ ಕಣ್ಣಿಗೆ ಕಂಡದ್ದು ಕೈಯಿಂದ ಜಾರಿ ಹೋದಾಗ ನಿರಾಶೆ. ಒಮ್ಮೆ ಜಾರಿದ್ದು ಕೂಡಾ ಹಾಗೆ ಸುಲಭದಲ್ಲಿ ಸಿಕ್ಕೀತೇ.. ಸಿಕ್ಕಿದರೂ ಇದಲ್ಲವೇನೋ..ಅದಿನ್ನೂ ಕೈಗೆ ಸಿಗಲಿಲ್ಲವೇನೋ ಎಂಬ ಒದ್ದಾಟ.. ಬೆರಳುಗಳ ಪಟ್ಟಿನಿಂದ ನುಣುಚಿ ಬೀಳುವ ಅವುಗಳ ಮೇಲೇನೋ ದ್ವೇಷ.. 

ಸಿಕ್ಕಿದ್ದನ್ನು ಹೆಕ್ಕಿದರೆ ಸಾಕೇ.. ಅಕ್ಕಿಯನ್ನು ಗಾಳಿಗೆತ್ತರಿಸಿ ಮತ್ತೆ ಮೊರದಲ್ಲಿ ತುಂಬಿಕೊಳ್ಳುವ ಆಟದಲ್ಲಿ ಕಳೆದುಹೋಗುವುದು ಒಂದಿಷ್ಟು ಪುಡಿ ದೂಳು..

 ಬೇಡದಿದ್ದುದನ್ನು ಆರಿಸಿ ಹೊರಚೆಲ್ಲುವುದೂ ಕಠಿಣ. ಬೇಕಿದ್ದದ್ದು ಮೊದಲು ಅದರೊಳಗೇ ಇತ್ತಲ್ಲ.. ಅದರಿಂದ ಹೊರ ಬಂದ ಮೇಲೆ ಒನಕೆಯ ಪೆಟ್ಟಿಗೆ  ಸಿಕ್ಕದೇ ಉಳಿದ ಅದೇ ಬತ್ತ ಈಗ ಬೇಡವಾಗಿದ್ದುದು... ಅಕ್ಕಿಯಿಂದ ಹೊರಹಾಕಬೇಕಿದ್ದುದು.  ಆ ಪೆಟ್ಟು ನೀಡುವ ನೋವಿನಿಂದ ಪಾರಾಗಿದ್ದೇ ಸುಖ ಅಂದುಕೊಂಡಿದ್ದರೆ, ಅದು ಸುಖವಾಗಿರಲೇ ಇಲ್ಲ ಎಂದು ತಿಳಿದಿದ್ದು ಈಗಲೇ..  

ಕೆಲಸ ಮುಗಿದಿತ್ತು..  ಅವಳ ಮನವೀಗ ಸ್ವತಂತ್ರ..ಕಣ್ಣುಗಳೀಗ ನಿಶ್ಚಿಂತ.. ಹೀಗೊಂದು ಧ್ಯಾನದ ಅಂತ್ಯ..