Pages

Total Visitors

Monday, July 20, 2015

ಪಿಂಗಳೆ


'ಪಿಂಗಳೇ... ಪಿಂಗಳೇ ..ಒಡತಿ ಕಾಂಚನಲೇಖೆಯ  ಆಗಮನವಾಗುವ ಹೊತ್ತಾಯಿತು.  ನೀನು ಇನ್ನೂ ಹಾಸಿಗೆಯಲ್ಲಿಯೇ ಮಲಗಿರುವೆ ಏಕೆ, ಬೇಗನೇ ಏಳು. ಮೈಗೆ ಚಂದನಾದಿ ಗಂಧಗಳನ್ನು ಲೇಪಿಸಿ ಸುಖವಾದ ಮಜ್ಜನ ಮಾಡಿಸುವೆ. ಇದೇನೇ ಇದು.. ಕೆನ್ನೆ ಕೊರಳುಗಳಲ್ಲಿ ನಖದ ಗುರುತು..ಮಹಾರಾಜರ  ಸಹಿಯೇನೇ ಇದು?.. ಹಹ್ಹ ಹಹ್ಹ.. ನಿನಗಿನ್ನೂ ನಿನ್ನೆಯ ಸುಖದ ಮಂಪರು ಹರಿದಿಲ್ಲವೇ ತಾ?' ಎಂದು ಕೇಳುತ್ತಾ  ಸಖಿಯೊಬ್ಬಳು ಮೈಯನ್ನು ಅಲುಗಾಡಿಸುತ್ತಿದ್ದರೆ ಇನ್ನೂ ನಿದ್ದೆಗಣ್ಣುಗಳಲ್ಲೇ ಇದ್ದ ಪಿಂಗಳೆ ಮೆಲ್ಲನೆ ಬಟ್ಟಲುಗಣ್ಣುಗಳನ್ನು ಅರಳಿಸುತ್ತಾ ಮೈಮುರಿದಳು.
ಎದ್ದೇನು ಮಾಡುವುದಿದೆ ಈಗ. ಅಮ್ಮ ಬಂದರೆ ನಾನು ಸ್ನಾನಗೃಹದಲ್ಲಿರುವೆ ಎಂದು ಹೇಳು. ನನಗೀಗ ಯಾರನ್ನೂ ನೋಡುವ ಮಾತನಾಡುವ ಮನಸ್ಸಿಲ್ಲ. 
ಅಯ್ಯೋ.. ಹಾಗೆ ಸುಳ್ಳು ಹೇಳಲು ನನ್ನಿಂದಾಗದಮ್ಮ..ಇಂದು ನಿನಗೆ    ನೃತ್ಯ ಕಲಿಸಲು ಗುರುಗಳು ಬರುವವರಿದ್ದಾರೆ. ನಿನ್ನನ್ನು ಹೊತ್ತಿಗೆ ಸರಿಯಾಗಿ ಸಿದ್ಧಗೊಳಿಸದಿದ್ದರೆ ನನ್ನ ಹೊಟ್ಟೆಗೆ ಕಲ್ಲು ಬಿದ್ದೀತು ತಾ. ಏಳಮ್ಮಾ..   ನೋಡೀಗ ನಿನಗೆ ನಿದ್ದೆಹರಿದಿದೆ ತಾನೇ.. ಎದ್ದು ಬಿಡು. ಬೇಗನೇ ಸಿದ್ಧಳಾಗು ಪಿಂಗಳೇ..
 ಗುರುಗಳು ಎಂಬ ಶಬ್ಧ ಕೇಳಿದೊಡನೆ ಪಿಂಗಳೆಯು ಏಳುವ ಮನಸ್ಸು ಮಾಡಿದಳು.
 ಮಹಾರಾಜರು  ಸಮಾಧಾನದ ಹೊತ್ತಿನಲ್ಲಿರುವಾಗ ತಾನಾಗಿ ಇಟ್ಟಿದ್ದ ಬೇಡಿಕೆ ಇದು. ಆ ಬೇಡಿಕೆಯನ್ನು ಮನ್ನಿಸಿ ಅವರು ನಾಟ್ಯಗುರುಗಳಿಗಾಗಿ ರಾಜ್ಯವಿಡೀ  ಡಂಗುರ ಹೊಡೆಸಿ, ತಾನೇ ಸ್ವತಃ  ಯಾರನ್ನೋ ಆರಿಸಿದ್ದಾರೆ ಎಂಬ ಸುದ್ದಿಯೂ ಅವಳಿಗೆ ಸಿಕ್ಕಿತ್ತು.
 ನೃತ್ಯದಲ್ಲಿ ಅಪಾರ ಆಸಕ್ತಿದ್ದ ಪಿಂಗಳೆಯ ನೃತ್ಯದ ಜೊತೆ ಅವಳ ಅಪಾರ ಸೌಂದರ್ಯ ರಾಜನ ಕಣ್ಣಿಗೆ ಬಿದ್ದು ಅವಳು ರಾಜನ ಗಣಿಕೆಯಾಗಿ ಬದಲಾದ ಮೇಲೆ ಕಲಿಯುವ ಅವಕಾಶ ತಪ್ಪಿ ಹೋಗಿತ್ತು. ಈಗಿನ್ನು ತಾನಾಗಿ ಬಂದಿರುವ ಅವಕಾಶವನ್ನು ಕಳೆದುಕೊಂಡರೆ ನಾಲ್ಕು ಗೋಡೆಗಳ ಮಧ್ಯದಲ್ಲಿ ಸುಮ್ಮನೆ ಬದುಕು ಕಳೆಯಬೇಕಷ್ಟೇ..
ಎಲ್ಲೋ ಹಾರಿ ಬಿದ್ದಿದ್ದ ಸೆರಗನ್ನು ನೆಪಮಾತ್ರಕ್ಕೆ ಮೈಮೇಲೇಳೆದುಕೊಂಡು ಆಕೆ ನಡೆಯುತ್ತಿದ್ದರೆ ಸಖಿಯ ಕಣ್ಣಲ್ಲೂ ಅಮಲೇರುತ್ತಿತ್ತು, ಅಂತಹ ಸೌಂದರ್ಯ ಪಿಂಗಳೆಯದ್ದು. ಹೊಸತಾದ ಬಟ್ಟೆಯನ್ನು ಎತ್ತಿಕೊಂಡು ಸಖಿಯೂ ಅವಳ ಹಿಂದೆಯೇ ನಡೆದಳು. 
  ಅವಳಿಗೆ ಸ್ನಾನ ಮಾಡಿಸುವಾಗ ಅಲ್ಲಲ್ಲಿ ರಕ್ತ ಮೆತ್ತಿದಂತೆ ಕೆಂಪಾಗಿದ್ದ ಅವಳ ಹಾಲು ಬಿಳುಪಿನ ಮೈಯನ್ನು ನೋಡಿ  'ಪಿಂಗಳೇ ಇದೇನೇ ಇದು.. ನಿನ್ನ ಕೋಮಲ ತನುವನ್ನು ಹೀಗೂ ಘಾಸಿಗೊಳಿಸುವುದೇತಕೆ ಹೇಳು ಮಹಾರಾಜರು. ನೀನಾದರೂ ಮಾತುಗಳಲ್ಲೇ ಮೈಮರೆಸಿ ಅವರನ್ನು  ಒಲಿಸಿಕೊಳ್ಳಬಾರದೇನೇ' ಎಂದಳು.
ಪಕ್ಕನೆ ಕಳೆದಿರುಳಿನ ನೆನಪು ಬಂದು ಪಿಂಗಳೆ ಗಂಭೀರಳಾದಳು. ಇನ್ನೂ ಹದಿಹರೆಯದ ಅರಸಿನ ಮಾಸದ ತನ್ನ ಮೈಯ ಒಡೆಯ ಮಹಾರಾಜನಾದರೋ ಮುಪ್ಪಿನೆಡೆಗೆ ಮುಖ ಮಾಡಿರುವವ. ಬರಿದೇ ಹಿಂಸೆ ಮಾಡುವುದನ್ನೇ ಸುಖವೆಂದುಕೊಂಡಿದ್ದಾನೇನೋ ಅವನು.ನೋವು ತಡೆಯದೇ ಕಣ್ಣುಗಳಲ್ಲಿ ನೀರು ಹರಿಯುವಾಗ ಸುಮ್ಮನೆ ತೆಕ್ಕೆಯೊಳಗಿಟ್ಟು ಸಂತೈಸುತ್ತಿದ್ದ ಅವನನ್ನು ಹೇಗೆ ಅರ್ಥ ಮಾಡಿಕೊಳ್ಳುವುದೆಂದು ಇನ್ನೂ ತಿಳಿಯದಾಗಿದ್ದಳು.  ಅಮ್ಮ ಕಾಂಚಮಾಲೆಯೇನೋ ಕಸುಬಿನ ಎಲ್ಲಾ ಕುಶಲತೆಯನ್ನೂ ಪಿಂಗಳೆಗೆ ಕಲಿಸಿದ್ದಲ್ಲದೇ ನಾಲ್ಕು ಪತ್ನಿಯರಿದ್ದರೂ ಇನ್ನೂ ಮಕ್ಕಳೇ ಇಲ್ಲದ ರಾಜನಿಗೆ ನಿನ್ನ ಹೊಟ್ಟೆಯಲ್ಲಾದರೂ ಕುವರನ ಜನನವಾದರೆ ರಾಜ್ಯ ನಮ್ಮ ಕೈಗೆ ಬಂದಂತೆ.. ನೀನು ಇನ್ನು ರಾಜಮಾತೆಯಾಗಿ ಮೆರೆಯಬಹುದು ಎಂದೆಲ್ಲಾ ಕನಸುಗಳನ್ನು ಕಟ್ಟಿಕೊಟ್ಟಿದ್ದಳು. ಆದರೆ ಓರಗೆಯ ಗೆಳತಿಯರು ವರ್ಣಿಸುವ ಶೃಂಗಾರದ ಘಟನೆಗಳೇನೂ ನಡೆಯದ, ಸುಮ್ಮನೆ ತನ್ನನ್ನು ಹಿಂಸೆಗೊಳಪಡಿಸುವ ಮಹಾರಾಜನಿಂದ ತನಗೆ ಮಕ್ಕಳಾಗುವುದುಂಟೇ?  ಇಂತಹ ವಿಷಯಗಳನ್ನು ಯಾರೊಡನೆಯೂ ಹಂಚಿಕೊಳ್ಳುವಂತಿರಲಿಲ್ಲ. ಗೆಳೆತಿಯರು ರಾಜ್ಯದ ಯುವಕರ ಸಂಗದಲ್ಲಿ ಮೈ ಮರೆಯುವುದಲ್ಲದೇ ಅದನ್ನು ಮಾತುಗಳಲ್ಲಿ ಬಯಲಾಗಿಸುವ ದಾರ್ಶ್ಯವನ್ನೂ ತೋರುತ್ತಿದ್ದರು. ಆದರೆ ರಾಜನೊಬ್ಬನ ಅಧಿಕೃತ ಸೊತ್ತಾದ ತಾನು ಯಾರೊಂದಿಗೂ ಹೆಚ್ಚಿಗೆ  ಬೆರೆಯುವಂತೆಯಾಗಲೀ, ಮಾತನಾಡುವಂತೆಯಾಗಲೀ ಇಲ್ಲದೇ ಪಂಜರದ ಬದುಕನ್ನೇ ಬದುಕಬೇಕಾದುದು ಪಿಂಗಳೆಗೆ ಬೇಸರವೆನಿಸುತ್ತಿತ್ತು. ಇವಳೊಬ್ಬಳು ಮುದಿ ಸಖಿ ಮತ್ತು ಅಮ್ಮ ಕಾಂಚನಮಾಲೆಯಲ್ಲದೇ ಬೇರೊಂದು ಜೀವ ಈ ಕೋಣೆಯೊಳಗೆ ಪ್ರವೇಶ ಮಾಡುತ್ತಿದ್ದೆಂದರೆ  ಮಹಾರಾಜರು ಮಾತ್ರ.  
ಹಾಗಾಗಿಯೇ ಇಂದು ಅವಳಿಗೆ ಕುತೂಹಲದ ದಿನ.ಹೊಸ ಗುರುಗಳು. ಪುರುಷರ ನೆರಳು ಸೋಕದ ಕೋಣೆಯಲ್ಲಿ ಒಬ್ಬ ಅಪರಿಚಿತನ ಪ್ರವೇಶ. ಹೇಗಿರಬಹುದು ಆತ? ಗೆಳತಿಯರು ವರ್ಣಿಸುವ ಪುರುಷಸಿಂಹಗಳಂತೆ ಇರಬಹುದೇ? ರೂಪವಂತನೇ? ಗುಣವಂತನೇ? ತನ್ನ ಸೌಂದರ್ಯಕ್ಕೆ ಸೋತು ಶರಣಾಗುವವನೇ?  
ಹೊರಗಿನಿಂದ ಹೆಜ್ಜೆಗಳ ಸದ್ದಾದಂತಾಗಿ ಎದ್ದು ನಿಂತಳು. ಕನ್ನಡಿಯೊಳಗಿನ ಪ್ರತಿಬಿಂಭ ಅಪಾರ ರೂಪರಾಶಿಯೊಬ್ಬಳನ್ನು ದರ್ಶಿಸುತ್ತಾ ಅದು ನೀನೇ ಎಂದು ಹೇಳುತ್ತಿತ್ತು. ಮೊಗದಲ್ಲಿ ನಗುವನ್ನು ತಂದುಕೊಂಡಳು. ಸಖಿ ಬಾಗಿಲು ತೆರೆದು ಯಾರನ್ನೋ ಸ್ವಾಗತಿಸುವುದು ಕೇಳಿಸಿತು. ಕಾಲುಗಳು ಅಲ್ಲಿಗೆ ಹೋಗುವ ಆತುರ ತೋರುತ್ತಿದ್ದರೂ ಅಮ್ಮ ಕಾಂಚನಲೇಖೆ ಕರೆಯದೆ ಹೊರಗೆ ಹೋಗುವಂತಿರಲಿಲ್ಲ. ಹಾಗಾಗಿ ಹೊರಗಿನ ವಿದ್ಯಮಾನಕ್ಕೆ ಕಿವಿಗಳನ್ನು ತೆರೆದಿಟ್ಟಳು. 
ಅಂತೂ 'ಪಿಂಗಳೇ ಇಲ್ಲಿ ಬಾ ಮಗಳೇ'  ಎಂಬ ಸ್ವರ ಕೇಳಿಸಿತು.  ಸಖಿ ಬಂದು ತಲೆಯ ಮೇಲಿನ  ಅವಕುಂಠನವನ್ನು  ಸರಿ ಪಡಿಸಿ ಮೊಗ ಕಾಣದಂತೆ ಮಾಡಿದಳು. ನಿಧಾನಕ್ಕೆ ಎದ್ದು ನಿಂತ ಪಿಂಗಳೆ ಹೆಜ್ಜೆಗಳ ಮೇಲೆ ಹೆಜ್ಜೆಗಳನ್ನಿಡುತ್ತಾ ಹೊರ ಬರುತ್ತಿದ್ದರೆ ಅದೇ ನವಿಲಿನ  ನೃತ್ಯದಂತೆ ಕಾಣಿಸುತ್ತಿತ್ತು. 
  ಇವರು ನಿನ್ನ ಗುರುಗಳಮ್ಮಾ. ಹೆಸರು ಧೀರ್ಘತಮ. ಮಹಾರಾಜರು ನಿನ್ನ ಅಪೇಕ್ಷೆಯೆ ಮೇರೆಗೆ ದೂರದ ಊರಿಂದ ಇವರನ್ನು ಕರೆಸಿದ್ದಾರೆ. 
ಕುತೂಹಲದಿಂದ ಕತ್ತೆತ್ತಿ ನೋಡಿದ ಪಿಂಗಳೆ  ಅಷ್ಟೇ ಬೇಗನೇ ತಲೆ ತಗ್ಗಿಸಿಕೊಂಡು ಮನದಲ್ಲೇ ಮುದುರಿದಳು. 
 ತಲೆ ಹಣ್ಣಾದ ಮುದುಕ. ಬಹುಷಃ ಮಹಾರಾಜರಿಂದಲೂ ಹೆಚ್ಚು ಪ್ರಾಯದವನೇನೋ.. ಹುಂ.. ಇಂತಹವರಲ್ಲದೇ  ಬೇರಾರನ್ನಾದರೂ ತನ್ನ ಬಳಿಗೆ ಮಹಾರಾಜರು ಕಳುಹಿಸುತ್ತಾರೆಯೇ? ಅಯ್ಯೋ.. ತನಗೇನಾಗಿದೆ. ನೃತ್ಯ ಕಲಿಯುವುದಲ್ಲವೇ ತನ್ನ  ಆಸೆದ್ದುದು.. ಯಾರು ಕಲಿಸಿದರೇನು? ಈ  ವಸಂತೋತ್ಸವದಲ್ಲಿ  ನೃತ್ಯ ನೋಡಿದವರು  ಶತ ಶತಮಾನಗಳವರೆಗೆ ನೆನಪಿಟ್ಟುಕೊಳ್ಳಬೇಕು.. ತನ್ನ ಆಲೋಚನೆಗಳಿಂದ ಮುಕ್ತಳಾಗಿ  ತಲೆ ಕೊಡವಿಕೊಂಡು ಅವರ ಕಾಲು ಮುಟ್ಟಿ ನಮಸ್ಕರಿಸಿದಳು.
ಕಾಂಚನಲೇಖೆ ಮಗಳ ಕಡೆಗೆ ತಿರುಗಿ ಸಣ್ಣ ಸ್ವರದಲ್ಲಿ 'ಪಿಂಗಳೇ ನಿನಗೆ ದೇಹಾಲಸ್ಯವಿಲ್ಲದಿದ್ದರೆ ನಿನ್ನ ನೃತ್ಯಾಭ್ಯಾಸ ಇಂದೇ ಶುರುವಾಗುತ್ತದೆ.' ಎಂದಳು.
 ಆಗಲೇ ಗಂಭೀರ ಸ್ವರವೊಂದು ಅವಳನ್ನು ಬೆಚ್ಚಿಬೀಳಿಸಿತು.ಇಲ್ಲಾ.. 'ನಾನಿನ್ನು ಈಕೆಯ ಗುರುವಾಗಲು ಒಪ್ಪಿಗೆ ಕೊಟ್ಟಿಲ್ಲ. ನನ್ನ ಶಿಷ್ಯೆಯಾಗುವವಳಿಗೆ ಕಲಿಕೆಯ ಹಸಿವಿರಬೇಕು. ಅದರ ಹೊರತು ಬೇರೇನು ಯೋಚನೆಗಳೇ ಇರಬಾರದು.  ಮೊದಲಿಗೆ ನೀನು ಇಲ್ಲಿಯವರೆಗೆ ಕಲಿತ  ನೃತ್ಯವನ್ನು ನಾನು ನೋಡಬೇಕಿದೆ. ಆ ಬಳಿಕ ನಿರ್ಧಾರ..' ಎಂದರು.
 ತನ್ನ ಕಲಿಕೆಗೆ ಸರಿಯಾದ ಗುರುವನ್ನೇ ಆಯ್ಕೆ ಮಾಡಿದ್ದಕ್ಕಾಗಿ ಮೊದಲ ಬಾರಿಗೆ ಮಹಾರಾಜರ ಬಗ್ಗೆ ಸಂತಸಗೊಂಡಳು ಪಿಂಗಳೆ.
ಕುಣಿತದ ನೆನಪು ಬಂದೊಡನೇ ಅವಳಾಗಲೇ ವರ್ಷಋತುವಿನ ನವಿಲಾಗಿದ್ದಳು. ಹೆಜ್ಜೆಗಳು ನೆಲದಿಂದ ಮೇಲೆದ್ದವು.ಅವಳ ನಡೆಯ ಲಾಸ್ಯಕ್ಕೆ ನಾಟ್ಯದ ಭಾಷ್ಯಕ್ಕೆ ಗುರುಗಳೇ ಬೆರಗಾದರು.ಅಪ್ಪಟ ವಜ್ರ. ಕೊಂಚ ಸಾಣೆಯ ಅವಶ್ಯಕತೆಯಷ್ಟೇ ಬೇಕಾಗಿರುವುದು. ಒಪ್ಪಿಗೆಯ ನಗೆಯಿತ್ತು ಅವರ ಮೊಗದಲ್ಲಿ.
ಪಿಂಗಳೆಗೀಗ ಊಟ ತಿಂಡಿ ನಿದ್ರೆಯ ನೆನಪೇ ಇರಲಿಲ್ಲ. ಅವಳ ಹಗಲು ರಾತ್ರಿಗಳು ನೃತ್ಯಾಭ್ಯಾಸದಲ್ಲೇ ಮುಳುಗೇಳುತ್ತಿತ್ತು.  ಅವಳ ಕಲಿಕೆಯ ವೇಗಕ್ಕೆ ಗುರುಗಳಾದ ಧೀರ್ಘತಮರೇ ಅಚ್ಚರಿ ವ್ಯಕ್ತಪಡಿಸುತ್ತಿದ್ದರು.  ಮಹಲಿನಲ್ಲೇ ಗುರುಗಳಿಗೆ ಪ್ರತ್ಯೇಕ ಬಿಡಾರದ ವ್ಯವಸ್ಥೆಯಿತ್ತು. ಹಾಗಾಗಿ ಅವಳ ಯಾವುದೇ ಸಂದೇಹಕ್ಕೆ ತಕ್ಕ ಉತ್ತರ ಕೂಡಲೇ ದೊರೆಯುತ್ತಿತ್ತು. ಈಗ ಸಾಧನೆಯತ್ತ ಮಾತ್ರವಿದ್ದುದು ಅವಳ ನೋಟ. ಗುರುಗಳ ನೃತ್ಯದ ಆಳವಾದ ಅರಿವಿನ ಜೊತೆಗೆ ಈ ಪ್ರಾಯದಲ್ಲೊ ಅವರ ನಡೆಯ ಮಿಂಚಿನ ಸಂಚಾರದ ಬಗ್ಗೆ ಅಚ್ಚರಿ ಅವಳಲ್ಲಿ. ಅಭ್ಯಾಸ ಮಾಡುತ್ತಾ ಇದ್ದರೆ ಅದು ನಿನ್ನ ಪಾಲಿಗೂ ಬಂದೀತೆಂಬ ಗುರುವಿನ ಮಾತುಗಳಲ್ಲಿ ಅವಳಿಗಿನ್ನೂ ನಂಬಿಕೆ ಇದ್ದಿರಲಿಲ್ಲ.ಅವರ ಮೆಚ್ಚುಗೆ ಗಳಿಸಲು ಏನನ್ನಾದರೂ ಮಾಡುವ ಹುಮ್ಮಸ್ಸು ಅವಳದ್ದು. ಯಾವ ಬಳಲಿಕೆಯನ್ನೂ ಗಮನಕ್ಕೆ ತೆಗೆದುಕೊಳ್ಳದೆ ಅಭ್ಯಾಸದತ್ತ ಮನವಿಟ್ಟಿದ್ದಳು.
ಸಂಜೆಯ ಹೊತ್ತು. ಸೂರ್ಯನಾಗಲೇ ಪಶ್ಚಿಮದಿಕ್ಕಿನತ್ತ ದಾಪುಗಾಲು ಹಾಕುತ್ತಾ ಸಾಗುತ್ತಿದ್ದ.ಹೊರಗೆ ಮಂದದ ಬೆಳಕು. ಪಿಂಗಳೆಯ ಮಹಲಿನಲ್ಲಿ ದೀಪಗಳು ಹೊತ್ತಿಕೊಂಡಿದ್ದವು.   ನೃತ್ಯಾಭ್ಯಾಸಕ್ಕಾಗಿ ಇನ್ನೇನು ಗೆಜ್ಜೆಗಳನ್ನು ಕಾಲಿಗೆ ಕಟ್ಟಬೇಕು ಎನ್ನುವಷ್ಟರಲ್ಲಿ ಹೊರಗಿನಿಂದ ಮಹಾರಾಜರು ಬರುತ್ತಿದ್ದಾರೆ ಎಂಬ ಸಂದೇಶ ಬಂದಿತು. 
ಪಿಂಗಳೆಯ ಹೃದಯ ನಿರಾಸೆಗೊಳಗಾದರೂ ತೋರಿಸಿಕೊಳ್ಳದೆ ಕಾಲಂದುಗೆಗೆಗಳನ್ನು ತೆಗೆದು ಪೆಟ್ಟಿಗೆಗೆ ಸೇರಿಸಿದಳು. ಆಗಲೇ ಒಳಸೇರಿದ ಮಹಾರಾಜನ ಒರಟು ತೋಳುಗಳು ಅವಳನ್ನು ಬಳಸಿಕೊಂಡವು. ನಯವಾಗಿ ಅವನ ತೋಳುಗಳನ್ನು ಸರಿಸುತ್ತಾ ' ಇನ್ನಾರು ದಿನಗಳಲ್ಲಿ ವಸಂತೋತ್ಸವವಲ್ಲವೇ ಮಹಾರಾಜ' ಎಂದಳು. 
'ಹೌದು ಪ್ರಿಯೇ ಆದರೆ ಅಲ್ಲಿ ನಿನ್ನ ನೃತ್ಯ ಪ್ರದರ್ಶನಕ್ಕೆ ಅವಕಾಶವಿಲ್ಲ. ನೀನು ನನ್ನ ಹೃದಯದರಸಿ. ನಿನ್ನ ಈ ದೇಹ,  ಸೌಂದರ್ಯ, ಕಲೆ ಎಲ್ಲವೂ ಕೇವಲ ನನಗಾಗಿ ಮಾತ್ರ. ಅದು ಹೊರಗೆಲ್ಲೂ ಕಾಣುವಂತಿಲ್ಲ. ನಿನ್ನಾಸೆ ಪೂರೈಸಲೆಂದಷ್ಟೇ ಗುರುಗಳನ್ನು ಇರಿಸಿದ್ದೇನೆ. ಅವರು ನಿನ್ನ ನೃತ್ಯಭ್ಯಾಸ ಪೂರ್ಣವಾಗಿದೆ ಎಂದ ದಿನ ಅವರೂ ಹೋಗುತ್ತಾರೆ. ಮತ್ತೆ ನಾನು ನೀನು ಇಬ್ಬರೇ..'
 ಮಹಾರಾಜ ಉತ್ಸಾಹದಿಂದ ವರ್ಣಿಸುತ್ತಿದ್ದರೆ ಬೇಸರದಿಂದ   ಪಿಂಗಳೆಯ ಮನಸ್ಸು ಮುದುಡಿಹೋತು. ಯಾರೂ ಆಸ್ವಾದಿಸಿದ ಕಲೆಗೆ ಬೆಲೆ ಎಲ್ಲಿಯದ್ದು ? ಛೇ.. 
ಮರುದಿನ ಅವಳು ಅನ್ಯಮಸ್ಕತೆಯಲ್ಲೇ ಹೆಜ್ಜೆ ಹಾಕುತ್ತಿದ್ದರೆ ಗುರುಗಳು ಅನೇಕಬಾರಿ ಎಚ್ಚರಿಸಬೇಕಾಯಿತು. 'ಯಾಕೆ ಪಿಂಗಳೇ ಆರೋಗ್ಯ ಸರಿ ಇಲ್ಲವೇ? ಇಂದು ನೃತ್ಯಾಭ್ಯಾಸ ಬೇಡವೆಂದಾದರೆ ಬಿಟ್ಟು ಬಿಡು.. ಸುಮ್ಮನೆ ನೃತ್ಯಕ್ಕೆ ಅಪಚಾರ ಮಾಡಬೇಡ.. '
ಎಷ್ಟು ಸಾವರಿಸಿಕೊಳ್ಳಬೇಕೆನ್ನಿಸಿದರೂ ಸಾಧ್ಯವೇ ಆಗಲಿಲ್ಲ. ನೃತ್ಯದ ಹಾಡಿನಲ್ಲಿ ವಸಂತಕಾಲದ ವರ್ಣನೆಯಿದ್ದರೆ ಇವಳ ಕಂಗಳು ಸುಮ್ಮನೆ ಕಣ್ಣೀರಾಗುತ್ತಿದ್ದವು ಏನನ್ನೊ ಯೋಚಿಸುತ್ತಾ..
ಧೀರ್ಘತಮ ಕೈಯಲ್ಲಿದ್ದ ತಾಳವನ್ನು ಬಿಸುಡಿದ ವೇಗಕ್ಕೆ ಅದು ಪಳಾರನೆ ತುಂಡಾಯಿತು.
'ಎಲ್ಲಿದೆ ನಿನ್ನ ಧ್ಯಾನ? ಪರಧ್ಯಾನದಲ್ಲಿ ತೊಡಗಿ ನೃತ್ಯವನ್ನು ಕಡೆಗಣಿಸುವುದಾದರೆ ಇಂದೇ ನಿನ್ನ ವಿದ್ಯಾಭ್ಯಾಸದ ಕೊನೆಯ ದಿನ'.. . 
 ಪಿಂಗಳೆ ಬುಡ ಕಡಿದ ಮರದಂತೆ ಅವನ ಪಾದಗಳಲ್ಲುರುಳಿದಳು. 'ಬೇಡ ಬೇಡ ಗುರುವೇ.. ಹಾಗೆ ಹೇಳಬೇಡಿ .. ನನ್ನ ಮೇಲೆ ಕರುಣೆಯಿಡಿ. ನಾನು ನನ್ನ ಬದುಕಾದ ನೃತ್ಯಕ್ಕೆ ಅಪಚಾರ ಎಸಗುವವಳಲ್ಲ...'
 ಧೀರ್ಘತಮನ ಬಾಹುಗಳು ಅವಳ ಹೆಗಲನ್ನು ಸ್ಪರ್ಶಿಸಿದವು.ಇಲ್ಲಿಯವರೆಗೆ ಇಲ್ಲದ ಹೊಸತೇನೋ ಕಂಪನ ಅವಳ ಮೈಯಲ್ಲಿ.ತನ್ನ ಹೆಗಲ ಮೇಲಿದ್ದ ಅವನ ಕೈಬೆರಳುಗಳನ್ನು ಸುಮ್ಮನೇ ನೋಡಿದಳು.
 'ಎದ್ದೇಳು ಪಿಂಗಳೇ.. ನಿನಗೇನೋ ನೋವಾಗಿದೆ ಎಂದು ನನಗೂ ತಿಳಿದಿದೆ. ಹಂಚಿಕೊಂಡರೆ ದುಃಖ ಕಡಿಮೆಯಾಗುತ್ತದೆ. ನಾನು ನಿನ್ನ ನಂಬಿಕೆಗೆ ತಕ್ಕವನು ಎಂದಿದ್ದರೆ ಅದನ್ನು ನನ್ನೊಡನೆ ಹೇಳು. ಪರಿಹಾರ ಸಿಗುವಂತಹುದಾಗಿದ್ದರೆ ಪರಿಹಾರ ಹುಡುಕೋಣ' ಎಂದ.
ಅತ್ತಿತ್ತ ನೋಡಿದಳು. ನೃತ್ಯಾಭ್ಯಾಸದ ಮಧ್ಯೆ ಯಾರ ಅಡ್ಡಿ ಆತಂಕವೂ ಬರಬಾರದೆಂದು ತನ್ನಪ್ಪಣೆಲ್ಲದೆ  ನೃತ್ಯಾಂಗಣಕ್ಕೆ ಯಾರ ಪ್ರವೇಶವನ್ನೂ ನಿಷೇಧಿಸಿದ್ದ ದೀರ್ಘತಮ.
ಪಿಂಗಳೆಗಾದರೂ ತನ್ನಾಳವನ್ನು ತೋಡಿಕೊಳ್ಳಲು ಜೊತೆ ಎಲ್ಲಿತ್ತು? ಅವನ ಕಂಗಳ ಕಡೆ ನೋಡಿದಳು. ಅಲ್ಲೊಂದು ಪ್ರೀತಿಯ ಕೊಳವಿದ್ದಂತಿತ್ತು. ಮುಳುಗಬಯಸಿದಳು. 
ಎಲ್ಲವನ್ನು ಮಾತುಗಳಲ್ಲಿ ಬಯಲಾಗಿಸಿದಳು. ಮತ್ತೂ ಮುಂದುವರಿಸುತ್ತಾ 'ನನ್ನ ಚಿಂತೆ ನನ್ನ ಬದುಕಿನದಲ್ಲ.. ಇಂದು ರಾಜನಾಡಿದ ಮಾತು ಇನ್ನೂ ನನ್ನನ್ನು ಘಾಸಿಗೊಳಿಸುತ್ತಿದೆ. ಕೇವಲ ಈ ಖಾಲಿ ಗೋಡೆಗಳ ನಡುವೆ ಮಧಿರೆ ಹೀರಿ ಪ್ರಮತ್ತನಾಗಿ ಬಿದ್ದುಕೊಂಡಿರುವ ರಾಜನ ಎದುರು ಮಾತ್ರ ನನ್ನ ನೃತ್ಯ ಪ್ರದರ್ಶನವಂತೆ.. ನಾಡಿದ್ದಿನ ವಸಂತ ಉತ್ಸವದಲ್ಲಿ ನಾನು ಗೆಜ್ಜೆ ಕಟ್ಟಬಾರದಂತೆ.. ಕಲಾವಿದರಿಗೆ ಚಪ್ಪಾಳೆಯ ಸದ್ದೇ ಅಲ್ಲವೇ ವಿಫುಲ ಸಂಪತ್ತು. ಅದಿಲ್ಲದೇ ಇದ್ದರೆ ನನ್ನ ಕಲಿಯುವಿಕೆ ಕಾನನದ ಸುಮವಾಗದೇ.. ಇದೇ ಚಿಂತೆಂದ ಇಂದು ನನ್ನ ಧ್ಯಾನ ಅತ್ತಿತ್ತ ಹಾರಾಡುತ್ತಿತ್ತು. ಈ ಬದುಕು ಸಾಕಾಗಿದೆ. ಇದರಿಂದ ಸಾವೇ ಆನಂದಮಯ ಅನ್ನಿಸುತ್ತಿದೆ' ಎಂದು ಅವನ ಉತ್ತರಕಾಗಿ ಕಾದಳು. 
ಧೀರ್ಘತಮನ ಮೊಗದಲ್ಲಿ ನಸುನಗುವಿತ್ತು. 
ಅವಳು ನೋಡುತ್ತಿದ್ದಂತೆಯೇ ಅವಳ ಕಣ್ಣುಗಳೇ ನಂಬದಂತಹ ಘಟನೆಯೊಂದು ಆ ಕ್ಷಣದಲ್ಲಿ ಜರುಗಿತು.
ಧೀರ್ಘತಮ ತನ್ನ ಮೊಗವನ್ನಾವರಿಸಿದ್ದ ಬಿಳಿಯ ಗಡ್ಡ ಮೀಸೆಗಳನ್ನು ತೆಗೆದ. ತಲೆಯ ಮೇಲಿದ್ದ ಮುಂಡಾಸನ್ನು ಬಿಚ್ಚಿ ಪಕ್ಕದಲ್ಲಿರಿಸಿದ. ಮೈಗೆ ಹಾಕಿದ್ದ ದೊರಗಿನ ನಿಲುವಂಗಿಯನ್ನು ತೆಗೆದ. 
ಇಪ್ಪತ್ತೆರಡೋ ಇಪ್ಪತ್ತಮೂರೋ .. ಅದಕ್ಕಿಂತ ಸ್ವಲ್ಪವೂ ಹೆಚ್ಚಲ್ಲದ ವಯಸ್ಸಾತನದು. 
ಪಿಂಗಳೆಯ ಕದಪುಗಳು ನಾಚಿಕೆಂದಲೂ ಆಘಾತದಿಂದಲೂ ಕೆಂಪೇರಿದವು. ಜೊತೆಗೆ ರಾಜನಿಗೇನಾದರೂ ಈ ವಿಷಯ ತಿಳಿದರೆ ಅನ್ಯಾಯವಾಗಿ ಇವನ ಪ್ರಾಣ ಹೋಗುವುದಲ್ಲಾ ಎಂಬ ಹೆದರಿಕೆಯಿಂದ ಎದೆ ಬಡಿತ ಮಿತಿ ಮೀರಿತು. ಮಾತುಗಳು ತೊದಲುತ್ತಾ.. 'ನೀವು..ಯಾರು? ನಿಜ ಹೇಳಿ.. ಯಾಕೆ ಬಂದಿರಿ ಇಲ್ಲಿ..' ಎಂದಳು.
'ಪಿಂಗಳೇ..' ಅವನ ಸ್ವರದಲ್ಲೀಗ  ನೀಲಮೇಘ ಶ್ಯಾಮನ ಕೊಳಲಿನ ಒನಪಿತ್ತು.'ನಿನಗಾಗಿಯೇ ಬಂದೆ ಎಂದರೆ ನಂಬುವೆಯಾ' ಎಂದ..
ಅವಳ ಕಣ್ರೆಪ್ಪೆಗಳು ಗಲಿಬಿಲಿಂದ ಪಟಪಟನೆ ಬಡಿದುಕೊಂಡವು. 'ನನಗಾಗಿಯೇ..? ಅಂದರೆ..?'
'ಅಂದು ವಸಂತೋತ್ಸವದಲ್ಲೇ ನಿನ್ನನ್ನು ಮೊದಲ ಬಾರಿಗೆ ನೋಡಿದ್ದು. ನಾನು ನೃತ್ಯದಲ್ಲಿ ಸಾಧನೆ ಮಾಡುತ್ತಿದ್ದವನಾದ್ದರಿಂದ ನಿನ್ನೆಡೆಗೆ ಸೆಳೆಯಲ್ಪಟ್ಟೆ. ನಿನ್ನನ್ನು ಮತ್ತೆ ನೋಡಬೇಕೆಂಬ ಬಯಕೆತ್ತು. ಆದರೆ ವಿಧಿ ಬೇರೆಯದನ್ನೇ ಬರೆದಿತ್ತು..'ಅವನ ಧ್ವನಿಯಲ್ಲಿನ ಹತಾಶೆ ಪಿಂಗಳೆಯನ್ನು ಅವನ ಬಳಿ ಸಾರಿ ಅವನ ಕೈಗಳನ್ನು ಹಿಡಿದು ಸಾಂತ್ವನಗೊಳಿಸುವಂತೆ ಮಾಡಿತು.
ತನ್ನ ಕೈ ಹಿಡಿದ ಅವಳ ಚಿಗುರು ಬೆರಳುಗಳನ್ನು ಸವರುತ್ತಾ ಮಾತು ಮುಂದುವರಿಸಿದ ಧೀರ್ಘತಮ. 'ಮೊದಲಿನಿಂದಲೇ ಹೇಳಿ ಬಿಡುತ್ತೇನೆ ಕೇಳು.. ನಾನು ನಿಮ್ಮ ದೇಶದ ಪಕ್ಕದಲ್ಲೇ ಇರುವ  ದೇಶ ಸಾಂಬಲ್ಯದ ಯುವರಾಜ. ನಿನಗೂ ರಾಜಕಾರಣದ ಕೊಂಚ ಅರಿ"ದೆ ಎಂದಾದರೆ ನಮ್ಮಿಬ್ಬರ ದೇಶಗಳ ನಡುವಿನ ಶತೃತ್ವದ ಅರಿವೂ ಇರಬಹುದಲ್ಲವೇ? 
ಆದರೂ ಚಿಕ್ಕಂದಿನಿಂದಲೇ ಇದ್ದ ನಾಟ್ಯದ ಬಗೆಗಿನ ವಿಶೇಷ ಮೋಹದಿಂದಾಗಿ ಇಲ್ಲಿಗೆ ಬಂದು   ಯುವರಾಜನೆಂಬ ಗುರುತು ಸಿಗದಂತೆ ವೇಷ ಮರೆಸಿಕೊಂಡು ಬಂದು ಇಲ್ಲಿನ ಗುರುಗಳಲ್ಲಿ ಕಲಿಯುತ್ತಿದ್ದೆ. ನಾನು ನೃತ್ಯದಲ್ಲಿ ಯಾವ ಪರಿಯಲ್ಲಿ ಮುಳುಗಿ ಹೋಗಿದ್ದೆ ಎಂದರೆ ನನಗೆ ನನ್ನ ಸುತ್ತ ಮುತ್ತಲಿನ ಪರಿವೆಯೇ ಇರುತ್ತಿರಲಿಲ್ಲ. ನನ್ನ ದೇಶ ನನ್ನ ಕರ್ತವ್ಯ ನನ್ನ ಜನ ಇವರ ಬಗೆಗಿನ ಚಿಂತೆಗಳೂ ಇರುತ್ತಿರಲಿಲ್ಲ.. ಇದೊಂದೇ ನನ್ನ ಉಸಿರು ನನ್ನ ಜೀವನ ಎಲ್ಲವೂ ಆಗಿತ್ತು. ಆಗಲೇ ಆ ವಸಂತೋತ್ಸವ ನಡೆದಿದ್ದು.. ನಾನು ಅಲ್ಲಿ ಭಾಗವಹಿಸದಿದ್ದರೂ ಅಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಆಸ್ವಾದಿಸಿದ್ದೆ. ಆ ದಿನ ಔತಣಕ್ಕೆಂದು ನನ್ನನ್ನೂ ಒಳಗೆ ಕರೆದೊದ್ದರು. ಬಗೆ ಬಗೆಯ ತಿನಿಸುಗಳನ್ನು ಬಡಿಸಿದ್ದರು. ತುತ್ತೆತ್ತುವ ಮುನ್ನ ರಾಜನ ಕಡೆಯವನೊಬ್ಬ ಬಂದು ' ಇಂದಿನ ಈ ಎಲ್ಲಾ ಸಂಭ್ರಮಕ್ಕೆ ಕಾರಣ  ಯುದ್ಧಭೂಮಿಯಲ್ಲಿ ನಮ್ಮ ಮಹಾರಾಜರ  ಶತ್ರುವಾದ ಸಾಂಬಲ್ಯದ ರಾಜನ ಮರಣ ಮತ್ತು ಅದರಿಂದ ಸಿಕ್ಕಿದ ನಮ್ಮ ಜಯ. ಇನ್ನೀ ಉತ್ಸವವನ್ನು ಪ್ರತೀ ವರ್ಷವೂ ಆಚರಿಸಲಾಗುವುದು' ಎಂಬ ಘೋಷಣಾವಾಕ್ಯವನ್ನು ಕೂಗಿದ. ಆಗಲೇ ನನಗೆ ತಿಳಿದದ್ದು ನನ್ನ ತೀರ್ಥರೂಪರ ಮರಣದ ಸುದ್ದಿ.. ಪಿಂಗಳೇ.. ಯೋಚಿಸು ಎಂತಹಾ ಮಗ ನಾನು ತಂದೆಯ ಮರಣದ ಸಂಭ್ರಮದ ದಿನದಾಚರಣೆಯ ಭೋಜನದಲ್ಲಿ ತುತ್ತೆತ್ತಿಕೊಳ್ಳುವವನಿದ್ದೆ.. ಅಂದೇ ನಿಶ್ಚಯಿಸಿದ್ದೆ .. ನನ್ನಪ್ಪನ ಹತ್ಯೆಗೆ ಪ್ರತೀಕಾರವೆಸಗದೇ ಇಲ್ಲಿಂದ ಹೋಗಲಾರೆ ಎಂದು..
ಆ ದಿನವೇ ನನಗೆ ಗೊತ್ತಾದ ಇನ್ನೂ ಒಂದು ಸುದ್ದಿ ಎಂದರೆ ನನ್ನೆದೆಯಲ್ಲಿ ಇನ್ನೂ ಅಡಿ ಇಡುತ್ತಿದ್ದ ನಿನ್ನ ಕಾಲುಗಳಿಗೆ ಸಂಕಲೆಕ್ಕಿ ರಾಜ ತನ್ನ ವಶ ಮಾಡಿಕೊಂಡಿದ್ದಾನೆ ಎಂಬುದು..
ಎದೆಯಲ್ಲಿ ಕ್ರೋಧದ ಜ್ವಾಲಾಮುಖಿ ಬುಗಿಯೇಳುತ್ತಿತ್ತು. ಸೈನ್ಯ ಕಟ್ಟಿಕೊಂಡು ಸೆಣಸಲು ರಾಜ್ಯವಿಲ್ಲ ಕೋಶವಿಲ್ಲ, ನನ್ನವರೆನಿಸಿಕೊಂಡ ಪ್ರಜೆಗಳಿಲ್ಲ.. ರಣಾಂಗಣದಲ್ಲಿದ್ದ  ಒಬ್ಬಂಟಿ ಯೋಧ ನಾನು.. ಅವಕಾಶಕ್ಕಾಗಿ ಕಾದಿದ್ದೆ.. ಮತ್ತೆ ನಿನ್ನಿಂದಾಗಿಯೇ ಅದು ನನ್ನ ಕೈ ಸೇರಿತು. ನಿನ್ನ ಬಯಕೆಯನ್ನು ಪೂರೈಸಲೆಂದೇ  ರಾಜನ ಅಪ್ಪಣೆಯಂತೆ ನಾನಿಲ್ಲಿಗೆ ಕಾಲಿಟ್ಟೆ. ನನಗೂ ದ್ವೇಷವಿರುವುದು ಇಲ್ಲಿನ ರಾಜನಲ್ಲಿ.. . ನನ್ನ ಶತ್ರು ಅವನೇ.. ಅವನನ್ನು ಕೊಂದು ಮುಗಿಸುವುದು ನನ್ನ ಉದ್ದೇಶ.. ಈಗ ಹೇಳು ನೀನು ನಿನ್ನ ಎದೆಯಾಳದ ಮಾತುಗಳನ್ನು ಬಯಲಿಗಿಟ್ಟಂತೆ ನಾನೂ ನನ್ನ ರಹಸ್ಯವನ್ನು ಬಿಚ್ಚಿಟ್ಟಿದ್ದೇನೆ. ಇಬ್ಬರ ದಾರಿಯೂ ಒಂದೇ ಆಗಿರುವ ಕಾರಣ ಜೊತೆಯಾಗಿ ಸಾಗುವುದಾದರೆ ಈಗ ಹಿಡಿದಿರುವ ಕೈ ಇನ್ನಷ್ಟು ಭದ್ರವಾಗುತ್ತದೆ ಏನೆನ್ನುವೇ' ಎಂದ. 
 ಪಕ್ಕನೇ ಆತನಿಂದ ದೂರವಾದ ಚೆಲುವಾದ ಪಿಂಗಳೆಯ ಮೊಗ ಗಂಭೀರವಾಯಿತು. ಆಲೋಚಿಸುವವಳಂತೆ ಸ್ವಲ್ಪ ಹೊತ್ತು ಮೌನವಾಗಿದ್ದ  ಆಕೆ ನಿಧಾನಕ್ಕೆ ನಾಚುತ್ತಾ ಆತನ ಸಮೀಪ ಬಂದು ಅವನ ಬೆರಳುಗಳಿಗೆ ಬೆರಳುಗಳನ್ನು ಹೆಣೆದಳು. 
' ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದರೆ ನನ್ನದೊಂದು ನಿಬಂಧನೆಯೂ ಇದೆ. ಈ ಸಲದ ವಸಂತೋತ್ಸವದಲ್ಲಿ ನನ್ನ ನಾಟ್ಯ ನಡೆಯುವಂತೆ ನೀವು ಮಹಾರಾಜರಲ್ಲಿ ಅಪ್ಪಣೆ  ಬೇಡಬೇಕು. ಆ ತುಂಬಿದ ಸಭಾಸದರೆದುರೇ  ನಮ್ಮ ಬದುಕಿನ ನಿರ್ಧಾರವೂ ನಡೆದುಬಿಡಲಿ..'
'ಅದನ್ನು ನನಗೆ ಬಿಡು.. ಅಲ್ಲಿಯವರೆಗೆ ಈ ಮಾತುಗಳು ಮತ್ತು ನನ್ನ ಈ ರೂಪ ನಮ್ಮಿಬ್ಬರಲ್ಲೇ ಇರಲಿ' ಎಂದ ಧೀರ್ಘತಮ ಯಾವುದೋ ಒಂದು ನಿರ್ಧಾರಕ್ಕೆ ಬಂದವನಂತೆ.. 
ತುಂಬಿದ ಸಬಾಂಗಣವದು. ರಾಜ ಮತ್ತು ಸಭಾಸದರು ಮಾತ್ರವಲ್ಲದೇ ಊರ ಪರವೂರ ವಿಶೇಷ ಅತಿಥಿಗಳನ್ನು ಹೊಂದಿತ್ತು. ಆ ದಿನದ ವಿಶೇಷವೆಂದರೆ ಗುರು ಮತ್ತು ಶಿಷ್ಯೆಯರ ಜುಗಲ್ ಬಂಧಿ.. ಧೀರ್ಘತಮನ ಬೇಡಿಕೆಗೆ ರಾಜ ಮಣಿದು ನೀಡಿದ್ದ ಮನ್ನಣೆಯಾಗಿತ್ತದು.
ಸಭಿಕರಿಂದ ಸ್ವಲ್ಪ ದೂರದಲ್ಲೇ ಇದ್ದ ವೇಧಿಕೆಯ ಸಿಂಹಾಸನದ ಮೇಲೆ ರಾಜ ವಿರಾಜಮಾನವಾಗಿದ್ದ. ಒಂದು ಕಡೆ ಅಂತಃಪುರದ ಸ್ತ್ರೀಯರ ದಂಡು ಪರದೆಯ ಹಿಂದೆ ಕುಳಿತು ಅಸೂಯೆಯ ಕಣ್ಣುಗಳಿಂದ ನೋಡುತ್ತಿದ್ದರೆ ಇನ್ನೊಂದೆಡೆ ಅಹ್ವಾನಿತರ ಕುತೂಹಲದ ನೋಟ.. 
ಅವಳು ಸರ್ವಾಲಂಕಾರಭೂತೆಯಾಗಿ ಘಲ್ ಘಲ್ ಎಂದು ಗೆಜ್ಜೆ ನಾದದೊಂದಿಗೆ  ಕೋಲ್ ಮಿಂಚಂತೆ ವೇಧಿಕೆಯನ್ನೇರಿದಳು. ರಾಜ ಅವಳ ಕಡೆಗೆ ಹೆಮ್ಮೆಂದ ನೋಡಿ ಕಣ್ಮಿಟುಕಿಸುತ್ತಾ   ಇನ್ನೊಂದು ಕಡೆಯಿಂದ ವೃದ್ಧನಾದ ಗುರುವನ್ನು ನಿರೀಕ್ಷಿಸುತ್ತಿದ್ದರೆ  ಸದೃಡ ಯುವಕನ ಆಗಮನವಾಯಿತು. ಪಕ್ಕನೆ ಕತ್ತಿ ಹಿರಿದು ಏಳ ಹೊರಟವ ತನ್ನನ್ನು ತಾನು ಸಂಭಾಳಿಸಿಕೊಂಡ. ಇದರಲ್ಲೆನೋ ಸಂಚಿದೆ ಆದರೆ ಆಹ್ವಾನಿತರೆದುರು ಈಗಲೇ ಅದನ್ನು ಪ್ರಚುರ ಪಡಿಸಿದರೆ ತನ್ನ ದೇಶದ ಮರ್ಯಾದೆಯ ಕಥೆಯೇನು ಎಂದು ಚಿಂತಿಸಿ, ತಾನು ಜಾಗರೂಕನಾಗಿದ್ದರೆ ಸರಿ ಎಂದು ಸುಮ್ಮನೆ ಕುಳಿತು ಮುಂದಾಗುವುದನ್ನು ನೋಡ ಹೊರಟ.
ಅವನ ಅಪ್ಪಣೆ ಪಡೆದು ಕಣ್ಮಿಟುಕಿಸುವಷ್ಟರಲ್ಲಿ ಇಬ್ಬರ ನೃತ್ಯವೂ ಶುರುವಾಯಿತು. ಎಲ್ಲರೂ ನರ್ತನದಲ್ಲಿ ತಲ್ಲೀನರಾದರು. ಅದೊಂದು ಮಹಾ ಪ್ರವಾಹ .. ಒಬ್ಬರನ್ನೊಬ್ಬರು ಮೀರಿಸುತ್ತಿದ್ದರು.. ಸುಂದರಿಯಾದ ಅವಳಿಗೆ ಸುಂದರನಾದ ಅವನ ಸರಿ ಮಿಗಿಲೆನಿಸುವ ಜೋಡಿ..  ಯಾರ ಕಡೆಗೆ ನೋಡುವುದೆಂಬ ಗೊಂದಲ ನೋಡುಗರಿಗೆ..ರೆಪ್ಪೆ ಪಿಳುಕಿಸದೆ ಎಲ್ಲರ ಕಣ್ಣುಗಳು ಅವರ ನರ್ತನದ ಸುಖವನ್ನು ಕಣ್ಣುಗಳಲ್ಲಿ ಹೀರುತ್ತಿತ್ತು. ಎಲ್ಲರೂ ಮೈ ಮರೆತಿದ್ದರು. ರಾಜನೂ ನೃತ್ಯದ ಮೋಡಿಗೊಳಗಾಗಿದ್ದ. 
ನೃತ್ಯದ ಅಭಿನಯದ ಜೊತೆ ಜೊತೆಗೆ ಅವರಿಬ್ಬರ ಕಣ್ಣುಗಳು ಏನನ್ನೋ ಮಾತನಾಡಿಕೊಳ್ಳುತ್ತಿದ್ದವು.
 ಅವನ ಕಣ್ಣಲ್ಲೀಗ ಅದೇನೋ ಹೊಳೆವ ಸೆಳಕು.. ಅವಳ ಕಣ್ಣಲ್ಲೂ ಪ್ರತಿಫಲಿಸಿತು.
 ನೃತ್ಯದ ಸಹಜ ನಡಿಗೆಯೊಂದಿಗೆ ಉಡುಪಿಗೆ ಕೈ ಹಾಕಿ ಸಣ್ಣದಾದ  ವಿಷ ಸವರಿದ ಹರಿತದ ಚೂರಿಯನ್ನು ಕೈಗೇರಿಸಿಕೊಂಡ. ಅವಳ ಕೈಯಲ್ಲೂ ಅಂತಹುದೇ ಚೂರಿ.. ಒಬ್ಬರ ಗುರಿ ತಪ್ಪಿದರೆ ಇನ್ನೊಬ್ಬರು ಬೇಕಲ್ಲವೇ.. 
ಮೆತ್ತಗಿನ ಕಣ್ಸನ್ನೆ.. 
ಅವನ ಕೈಯಲ್ಲಿದ್ದ ಚೂರಿ ಕೈ ಬಿಟ್ಟಿತು.. ಅವಳ ಕೈಯಲ್ಲಿದ್ದ ಚೂರಿಯೂ.. ರಾಜನ ಕಡೆಗೆ ಹಾರುತ್ತಿದ್ದ ಚೂರಿಗೆ ರಾಜನಿಂದ ಮೊದಲು ಅವಳ ದೇಹ ಅಡ್ಡ ಬಂದಿತು. ಅವಳ ಕೈಯಿಂದೆಸೆದ ಚೂರಿ ನೇರವಾಗಿ ಅವನ ಎದೆಗೇ ತಗಲಿತ್ತು.. ಅವನ ಕಣ್ಣುಗಳಲ್ಲಿ ಅಪನಂಬಿಕೆಯ ನೆರಳು.. 
'ಪಿಂಗಳೇ ಏನು ಮಾಡಿದೆ ನೀನು..' ಆರ್ತನಾಗಿ ಕಿರುಚಿದ್ದ.
ಕುಸಿದು ಬೀಳುತ್ತಿದ್ದ ಪಿಂಗಳೆಗೆ ರಾಜ ಆಧಾರ ನೀಡಿದ್ದ.
ಉಕ್ಕುತ್ತಿದ್ದ ನೆತ್ತರನ್ನು ಬೆರಳುಗಳಲ್ಲಿ ತಡೆ ಹಿಡಿದು 'ಸರಿಯಾದುದನ್ನೇ ಮಾಡಿದ್ದೇನೆ..  ಹೊತ್ತು ಹೆತ್ತು ಅನ್ನ ನೀಡಿದ ದೇಶದ ಅಳಿವನ್ನು ಬಯಸುವವಳಲ್ಲ ಈ ಪಿಂಗಳೆ.. ಪ್ರೀತಿಯ ಅರ್ಥ ನಿನಗಿನ್ನೂ ತಿಳಿದಿಲ್ಲ ರಾಜಕುವರ.. ಯಾರು ದೇಶವನ್ನು ಪ್ರೀತಿಸಲಾರರೋ ಅವರು ಯಾರನ್ನೂ ಪ್ರೀತಿಸಲಾರರು.. ನೀನು ವೀರನೇ ಆಗಿದ್ದರೆ  ಹೆಣ್ಣಿನ ಸಂಘದಿಂದ ಯುದ್ಧ ಗೆಲ್ಲುವ ಆಲೋಚನೆ ಮಾಡುತ್ತಿರಲಿಲ್ಲ..ನಿನ್ನದು ತಪ್ಪು ನಿರ್ಧಾರವಾಗಿತ್ತು. ನನಗೆ ಬದುಕು ಏನೂ ನೀಡದಿದ್ದರೂ ದೇಶಕ್ಕಾಗಿ ಸಾಯುವ ಅವಕಾಶ ನೀಡಿದೆ.. ಅಷ್ಟು ಸಾಕು.. ಮಹಾರಾಜಾ.. ಈ ವಿಷಯವನ್ನು ಮೊದಲೇ ನಿಮ್ಮೊಡನೆ ಹೇಳಿ ಅವನನ್ನು ಕೊಲ್ಲಿಸಬಹುದಿತ್ತು. ಆದರೆ ಅವನನ್ನು ಬಿಟ್ಟು ಬದುಕುವ ಶಕ್ತಿಯನ್ನು ನಾನೂ ಕಳೆದುಕೊಂಡಿದ್ದೇನೆ.. ಅದಕ್ಕಾಗಿಯೇ ಈ ದಿನವನ್ನು ಆರಿಸಿದೆ.. ನನ್ನ ಗುರಿ ತಪ್ಪಲಿಲ್ಲ.. ನಮ್ಮಿಬ್ಬರನ್ನು ಸಾವು ಒಂದುಗೂಡಿಸುತ್ತದೆ. ಅಷ್ಟು ಸಾಕು.. 
ಅವಳ ಮಾತುಗಳು ಮಂದವಾದವು. ಅವನಲ್ಲಿ ಚಲನೆಯಿರಲಿಲ್ಲ.. ಅವಳ ದೇಹ ರಾಜನ  ಹಿಡಿತದಿಂದ ಜಾರಿ ಅವನೆಡೆಗೆ ತೆವಳಿ ಕೈಗಳನ್ನು ಚಾಚಿ ಅವನ ಬೆರಳುಗಳ ಜೊತೆ ತನ್ನವನ್ನು ಹೆಣೆದುಕೊಂಡಿತು.
'ಪಿಂಗಳೇ.. ಏನು ಮಾಡಿಕೊಂಡೆ ನೀನು.. ಅಯ್ಯೋ..' ರಾಜನ ಕಣ್ಣುಗಳು ಹನಿಯುತ್ತಿದ್ದರೆ ಸಭಿಕರೆಲ್ಲರ ಕರತಾಡನದ ಸದ್ದು ಅವಳೊಳಗೆ ಮಾರ್ಧನಿಸುತ್ತಿತ್ತು..ಕಲಾವಿದೆಯ ಕಲಾಮಯ ಬದುಕು ಚಪ್ಪಾಳೆ ಸದ್ದಿನೊಡನೆ ಕೊನೆಗೊಂಡಿತ್ತು.