Pages

Total Visitors

Tuesday, November 24, 2015

ಕ್ಯಾಮರಾ ಕಣ್ಣೊಳಗೆ..

ಕ್ಯಾಮೆರಾ ಹಿಡಿದು ಹುಳ, ಹುಪ್ಪಟೆ, ಮರ, ಹೂವು ಅಂತೆಲ್ಲಾ ಫೊಟೋ ತೆಗೆಯುವ ಇವರಿಗೆ ' ನಾವು ಹೋಗುತ್ತಿರುವ ಮನೆಯಲ್ಲಿ ತುಂಬಾ ಹೂಗಿಡಗಳಿವೆ ಎಂದು ಆಮಿಷವೊಡ್ಡಿ ಕ್ಯಾಮೆರಾ ಹೆಗಲಿಗೇರಿಸಿ ಹೊರಡುವಂತೆ ಮಾಡಿದ್ದೆ. ಅವರ ಮನೆಗೆ ಸಾಗುತ್ತಿರುವ ಕಾಲು ಹಾದಿಯಲ್ಲಿ   ಪಾಲೆ ಮರವೊಂದು ಮೈಯಿಡೀ ಹೂ ಹೊತ್ತು  ಸಿಂಗಾರಗೊಂಡು ನನ್ನ ಫೊಟೋ ತೆಗಿ ಎಂದು ಪರಿಮಳ ಸೂಸಿ ಕರೆಯುತ್ತಿತ್ತು. ನಡು ದಾರಿಯಲ್ಲಿ ನಿಂದು ಅದನ್ನು ಕ್ಲಿಕ್ಕಿಸುತ್ತಿರುವಾಗಲೇ ಹಿಂದಿನಿಂದ ಕುತೂಹಲದ ಕಣ್ಣು ಹೊತ್ತ ಅವಳು ಕಂಡಳು. ಆಗಷ್ಟೇ ಅರಳಿದ  ಹೂ ಮೊಗದ ಹುಡುಗಿ.  ನನ್ನ ನಗುವಿಗೆ ಬೇಕೋ ಬೇಡವೋ ಎಂಬ ಅನುಮಾನದಿಂದಲೇ ನಕ್ಕರೂ ಅವಳ ನೋಟವೆಲ್ಲಾ ಕ್ಯಾಮೆರಾದ ಮೇಲೆಯೇ ಇತ್ತು. 

ನಾವು ಮುಂದೆ ನಡೆದಂತೆಲ್ಲಾ ನಮ್ಮ ಹೆಜ್ಜೆಯ ಜೊತೆ ಅವಳ ಹೆಜ್ಜೆಯೂ ಇತ್ತು. ನಾವು ತಲುಪಬೇಕಾದ ಮನೆ ಬಂದಿತ್ತು. ಮುಚ್ಚಿದ ಗೇಟನ್ನು ತೆರೆದು ಒಳನುಗ್ಗಿ ಮತ್ತೆ ಮುಚ್ಚಲು ಹಿಂದೆ ತಿರುಗಿದರೆ ಅವಳಲ್ಲೇ ನಿಂತಿದ್ದಳು. 'ಅವಳದ್ದು ಒಂದು ಫೊಟೋ ತೆಗೀರಿ' ಅಂದೆ. 

ಅದನ್ನೇ ಕಾದವಳಂತೆ ಉಸಿರು ಬಿಗಿ ಹಿಡಿದು ಕೈಗಳನ್ನು ಗಟ್ಟಿಯಾಗಿಸಿ ಸ್ವಲ್ಪವೂ ಚಲನೆಯಿಲ್ಲದ ಕಂಬದಂತೆ ನಿಂತಳು. ನಗು ಉಕ್ಕಿ ಬಂದು ನಕ್ಕುಬಿಟ್ಟೆ. ಅವಳೂ ಹಗುರಾದಂತೆ ನಕ್ಕಳು. ಕ್ಯಾಮೆರಾದೊಳಗೆ ಸೆರೆ ಸಿಕ್ಕಳು. 'ಇನ್ನೂ ಒಂದು ತೆಗೀತೀರಾ..' ಅವಳ ಕಣ್ಣಲ್ಲಿ ನೂರು ದೀಪಗಳ ಬೆಳಕು. ಮತ್ತೆ ಮತ್ತೆ ಕ್ಯಾಮೆರಾ ಅವಳೆಡೆಗೆ ತಿರುಗಲೇಬೇಕಾಯ್ತು. 
ನಾವು ಹೋಗಿದ್ದ ಮನೆಯವರು ಅವಳ ವರಾತ ಹೆಚ್ಚುತ್ತಿರುವುದನ್ನು ಕಂಡು ' ಹೀಗೆ ಫೊಟೋ ತೆಗೆದ್ರೆ ನಿಂಗೆ ಬೇಗ ಮದುವೆ ಆಗುತ್ತೆ ನೋಡು' ಎಂದರು.
ಸಂಜೆಯ ಸೂರ್ಯನ ರಾಗ ರಂಗು ಅವಳ ಕೆನ್ನೆಯಲ್ಲಿ.. 
ನಾಚುತ್ತಾ ಓಡಿದಳು. 

ನಾವು ಮನೆಯೊಳಗೆ ನಡೆದು ಮಾತುಕತೆಯಲ್ಲಿ ಮುಳುಗಿದ್ದಾಗ ಹೊರಗೆ ಗೇಟಿನ ಸದ್ದು. 
ಅವಳ ಜೊತೆ ಅವಳದೇ ಓರಗೆಯ ಮಕ್ಕಳು. ಹತ್ತಿರದವಳನ್ನು ಬೊಟ್ಟು ಮಾಡಿ 'ಇವಳದ್ದು ಫೊಟೋ ತೆಗೀರಿ.. ಇವಳಿಗೂ ನನ್ನದೇ ಪ್ರಾಯ.  ಬೇಗ ಮದುವೆ ಆಗಬೇಕು' ಅಂದಳು. ಎಲ್ಲರೂ ನಗುವಾಗ ಆ ಮಕ್ಕಳ ಮೊಗದಲ್ಲೂ  ನಗೆ ಹಬ್ಬ.. ಅಲ್ಲೇ ಆಟವಾಡುತ್ತಾ ಇದ್ದ ಹುಡುಗನೊಬ್ಬ  ಫೊಟೋ ತೆಗೆಸಿಕೊಳ್ಳದಿದ್ದರೆ  ತನಗೆ ಮದುವೆ ಆಗದೇ ಹೋದೀತೆಂಬ  ಎಂಬ ಆತಂಕದಲ್ಲಿದ್ದಂತೆ ತಾನೂ ಮುಖ ತೋರಿಸಿದ. ಮಕ್ಕಳ ಗುಂಪು ಹೆಚ್ಚುತ್ತಾ ಇತ್ತು. ಯಾರು ಬಂದರೂ ಅವರೆಲ್ಲರ ಜೊತೆ ಅವಳ ನಗು ಮುಖ ಇದ್ದೇ  ಇತ್ತು. 

ಮತ್ತೊಂದು ಸುತ್ತಿನ ಫೋಟೋ ಪ್ರಹಸನ ಮುಗಿಯುವಾಗ ಅವಳು ಫೋಟೋಕ್ಕೆ ಫೋಸ್ ಕೊಡುವುದರಲ್ಲಿ ಎಕ್ಸ್ ಪರ್ಟ್  ಆಗಿದ್ದಳು. 
 ಆಗಸದ ಸೂರ್ಯ ಆಕಳಿಸುತ್ತಾ ಪಡುವಣಕ್ಕಿಳಿಯ ಹೊರಟ.ಮತ್ತು ನಾವು ಮನೆಯ ಕಡೆ ಮುಖ ಮಾಡಿದೆವು. 

Tuesday, November 17, 2015

'ಹೋ ಏನು ...


ಎಳೆನಗೆಯ ಬೆಳದಿಂಗಳು ಎಂದೇ ಗುರುತಿಸಲ್ಪಡುವ ಶ್ರೀಮತಿ ಅನಿತಾ ನರೇಶ್ ಮಂಚಿಯವರ ಮತ್ತೊಂದು ಲಘು ಬರಹಗಳ ಸಂಕಲನ 'ಹೋ ಏನು!!'  ಇದೀಗ ಓದುಗರ ಕೈ ಸೇರಿದೆ.
ಇದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಳಿಯಿರುವ ಮಂಚಿ ಎಂಬ ಸುಂದರ ಗ್ರಾಮದಲ್ಲಿ ೧೪.೧೧.೨೦೧೫ ರಂದು ನಡೆದ ಸರಳ ಸುಂದರ ಕಾರ್ಯಕ್ರಮದ ವಿವರಗಳನ್ನು ತಮ್ಮಲ್ಲಿ ಹಂಚಿಕೊಳ್ಳಲು ನನಗೆ ತುಂಬಾ ಕುಶಿಯಾಗುತ್ತಿದೆ. 
ಮೊದಲೇ ನಿರ್ಧರಿಸಿದಂತೆ ಬೆಂಗಳೂರಿನಿಂದ ಕಾರಿನಲ್ಲಿ ಪುಸ್ತಕಗಳನ್ನು ಹಾಗೂ ಪುಸ್ತಕ ಪ್ರಕಾಶಕರಾದ ಶ್ರೀಯುತ ಅಣಕು ರಾಮನಾಥರನ್ನು, ಸುಧಾ ಪತ್ರಿಕೆಯಲ್ಲಿ  ಪ್ರಸಿದ್ಧವಾಗಿದ್ದ ವಾರೆ ನೋಟ ಎಂಬ ಅಂಕಣದ ರೂವಾರಿ ಶ್ರೀ ಆನಂದರೊಂದಿಗೆ ಕರೆದುಕೊಂಡು ಬಂದು ಹಿಂದಿನ ದಿನ ರಾತ್ರಿಯೇ ಬೀಡು ಬಿಟ್ಟಿದ್ದೆ. ನಾವು ತಲಪುವ ಮೊದಲೇ ಮನೆಯಂಗಳದಲ್ಲಿ ಶಾಮಿಯಾನ ಹಾಕಿ ಕುರ್ಚಿಗಳನ್ನು ಜೋಡಿಸಿ ಇಡಲಾಗಿತ್ತು.  ವೇದಿಕೆಯ ಮುಂದೆ ಹಾಕಿದ್ದ ಹೂವಿನ ರಂಗೋಲೆಯನ್ನು ಮತ್ತೆ ಮತ್ತೆ ನೋಡುವಂತೆ ಪ್ರೇರೇಪಿಸುವ ರೀತಿಯಲ್ಲಿ ಬಹಳ ಕಲಾತ್ಮಕವಾಗಿ ರಚಿಸಲಾಗಿತ್ತು. ಅದರ ಕೇಂದ್ರ ಭಾಗದಲ್ಲಿರಿಸಿದ್ದ ಕಂಚಿನ ಕಾಲು ದೀಪ ಮರುದಿನದ ಶುಭ ಮಹೂರ್ತಕ್ಕಾಗಿ ಕಾಯುವಂತೆ ಕಾಣುತ್ತಿತ್ತು. 

ಮಂಚಿಯ ಮನೆ ಪ್ರವೇಶಿಸಿದ ನನಗೆ ಅಲ್ಲಿದ್ದವರೆಲ್ಲ ಅದ್ಯಾವುದೋ ಕಾಲದಿಂದ ಪರಿಚಿತರೂ ಅದಕ್ಕೂ ಮೇಲಾಗಿ ಆತ್ಮೀಯರೂ ಆದ ಕಾರಣ ಪ್ರಯಾಣದ ಆಯಾಸವೇ ಮರೆತು ಹೊಯಿತು. ಕಳ ಕಳ ಮಾತು ಗಲ ಗಲ ನಗುವಿನ ನಡುವೆ ನಾನೂ ಬೆರೆತು ಹೋಗಿ ವೇದಿಕೆಯಲ್ಲಿ ಬ್ಯಾನರ್ ಕಟ್ಟುವುದು ಮತ್ತಿತರ ಕೆಲಸಗಳಲ್ಲಿ ಮುಳುಗಿ ಹೋದೆ.



 ನಡು ನಡುವೆ ಅನಿತಾ ಮತ್ತು ಅವಳ ಕಸಿನ್ಸ್ ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳಿಂದಾಗಿ ನಗುವಿನ ಭರ ಹೆಚ್ಚಾಗಿ ಕೈಗಳು ಚುರುಕಾದರೂ  ಕೆಲಸ ಒಂದು ಹಂತಕ್ಕೆ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿಯೇ  ನಡು ರಾತ್ರಿ ಕಳೆದಿತ್ತು. ಒಳಗಡೆ ಆನಂದ್ ಸರ್ ಆಗಲೇ ಕಾಲು ಚಾಚಿ ನಿದ್ರಾಲೋಕಕ್ಕೆ ಜಾರಿದ್ದರು. ದಿನ ಮುಗಿಯಿತು ಅಂತ ಸುಲಭದಲ್ಲಿ ಒಪ್ಪಲೊಲ್ಲದ ರಾಮನಾಥ್ ಸಾಹೇಬರು ಮಾತ್ರ ಮನೆಯ ಹಿಂಭಾಗದಲ್ಲಿ ಎಲ್ಲಿ ಮೊಬೈಲು ಸಿಗ್ನಲ್ ಸರಿಯಾಗಿ ಸಿಗುತ್ತದೆ ಅಂತ ಸರ್ವೇ ಮಾಡುತ್ತಿದ್ದರು. 
ಇನ್ನಾದರೂ ಸ್ವಲ್ಪ ದಿಂಬಿಗೆ ತಲೆಗೊಟ್ಟು ವಿಶ್ರಮಿಸೋಣವೆಂದರೆ ಅನಿತನ ಮಗನೂ ಮತ್ತು ಅವನ ಪ್ರಾಯದವರೇ ಆದ ಅನಿತನ ಕಸಿನ್ಸ್ ವೇದಿಕೆಯನ್ನಿಡೀ ತಮ್ಮ ತರಲೆ ಕಾರ್ಯಕ್ರಮದ 'ಅಡ್ಡಾ'ವಾಗಿಸಿಕೊಂಡು  ನರೇಶ್ ಬಾವನನ್ನು ಪುಸಲಾಯಿಸಿ ವಿವಿಧ ಭಂಗಿಯಲ್ಲಿ ಪೋಟೋ ಸೆಷನ್ ನಡೆಸುತ್ತಿದ್ದರು. ನನಗೂ ಅನಿಲ್ ಗೂ ಇದನ್ನು ನೋಡಿ ಉತ್ಸಾಹ ಹೆಚ್ಚಾಗಿ ಅವರ ಜೊತೆ ನಾವೂ ಸೇರಿಕೊಂಡು ಗದ್ದಲವೆಬ್ಬಿಸಿದೆವು. ಸಮಯ ಜಾರುತ್ತಿತ್ತು. ಬೆಳ್ಳಿ ಮೂಡಲು ಕೆಲವೇ ಕ್ಷಣಗಳು ಬಾಕಿತ್ತು. ಆ ಹೊತ್ತಿನಲ್ಲಿ ಅನಿತನ ಅಮ್ಮನ ಕೈಯ್ಯಲ್ಲಿ ಪ್ರೀತಿಯ ಬೈಗುಳ ತಿಂದು ಎಲ್ಲರೂ ಮಲಗಿಕೊಂಡೆವು.
ನಸುಕಿನಲ್ಲೇ ಪ್ರತ್ಯಕ್ಷರಾದ ಧ್ವನಿವರ್ಧಕದ  ಸಹಾಯಕರು ದೇವರ ಸ್ತುತಿಯೊಂದನ್ನು ಹಾಕಿ ಬೆಳಗಾಯಿತು ಎಂದು ನನ್ನನ್ನು  ಎಚ್ಚರಿಸಿದರು. ಆಮೇಲೆ ಮೊದಲೇ ಗೊತ್ತು ಪಡಿಸಿದಂತೆ ಸಂಗತಿಗಳು ಜರುಗತೊಡಗಿದವು.

 ಸುತ್ತಲೂ ಹಸಿರು ಹರಡಿದ ಬೆಟ್ಟಗಳ ಕಣಿವೆಯಲ್ಲಿ ಅಡಕೆ ತೋಟದ ನಡುವೆ ನಿಂತಿರುವ ಅವರ ಮನೆಯಂಗಳದಲ್ಲಿ ಬಂಧು ಮಿತ್ರರು ಹಾಗೂ ಹಿತೈಷಿಗಳು ಪುಸ್ತಕ ಅನಾವರಣವಾಗುವ ಸನ್ನಿವೇಶಕ್ಕೆ ಸಾಕ್ಷಿದಾರರಾಗಲು ಕಾತರದಿಂದ ನೆರೆದಿದ್ದರು. ತಮ್ಮ ಪೋಷಕರೊಂದಿಗೆ ಬಂದಿದ್ದ ಚಿಣ್ಣರ ದಂಡು ಅತ್ತಿತ್ತ ಓಡಾಡುತ್ತಾ ಡಿಕ್ಕಿ ಹೊಡೆಯುತ್ತಾ ಆಡಿಕೊಳ್ಳುತ್ತಿದ್ದದ್ದು ಮತ್ತು ಆ ದಿನ ಮಕ್ಕಳ ದಿನಾಚರಣೆಯೂ ಕೂಡಾ ಆಗಿದ್ದುದು ಕಾರ್ಯಕ್ರಮದೊಳಗೊಂದು ಕಾರ್ಯಕ್ರಮವೆಂಬಂತೆ ಭಾಸವಾಯಿತು. 
ಪೂರ್ವಾಹ್ನ ಹತ್ತಕ್ಕೆ ಸರಿಯಾಗಿ ಕನ್ನಡನಾಡಿನ ಹೆಸರಾಂತ ಹಾಸ್ಯ ಸಾಹಿತಿ ಪ್ರೊಪೆಸ್ಸರ್ ಭುವನೇಶ್ವರಿ ಹೆಗಡೆಯವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

 ಆಗಲೇ ಸಿದ್ಧರಾಗಿ ನಿಂತಿದ್ದ ಗಣ್ಯರನ್ನು ಅನಿತಾ ನರೇಶ್ ಮಂಚಿ ವೇದಿಕೆಗೆ ಆಹ್ವಾನಿಸಿದರು. ಸೂಕ್ತ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಅರಳತೊಡಗಿತು. ಶ್ರೀ ರಾಮಚಂದ್ರ ಭಟ್ ಕಜೆ ಹಿಂದಿನ ಸಮಾರಂಭಗಳಲ್ಲಿ ನಿಭಾಯಿಸಿದಂತೆ ಇಂದೂ ಕೂಡಾ ಅತ್ಮೀಯವಾಗಿ ಸ್ವಾಗತ ಭಾಷಣ ಮಾಡಿದರು. ಮತ್ತೆ ಬಣ್ಣದ ಕಾಗದದ ಒಳಗಡಗಿದ್ದ ಪುಸ್ತಕವನ್ನು ಶ್ರೀ ಮನೋಹರ್ ಪ್ರಸಾದರು ಬಿಡುಗಡೆಗೊಳಿಸಿ ವೇದಿಕೆಯಲ್ಲಿದ್ದವರಿಗೆಲ್ಲಾ ಒಂದೊಂದು ಪ್ರತಿ ನೀಡಿದರು. ಪ್ರಕೃತಿಯ ಸಿರಿಯನ್ನು ನೆನಪಿಸುವ ಹಸಿರು ಬಣ್ಣ ಎದ್ದುಕಾಣುತ್ತಿದ್ದ ಸುಂದರ ಮುಖಪುಟದ ಪುಸ್ತಕ ಎಲ್ಲರ ಕಣ್ಸೆಳೆಯಿತು. 

. ರಾಮ್ ನರೇಶ್ ಮಂಚಿಯವರ ಕ್ಯಾಮರಕ್ಕೆ ಸಿಲುಕಿದ, ಒಬ್ಬರ  ಹಿಂದೋಬ್ಬರು ನಿಂತು ತುಂಟತನದಲ್ಲಿ ಇಣುಕುವ ಪೋರರ ಛಾಯಾ ಚಿತ್ರದೊಂದಿಗೆ 'ಹೋ ಏನು' ಎಂಬ ತಲೆಬರಹ ಮುದ್ದಾಗಿ ಕಾಣುತ್ತಿತ್ತು. ಹಿಂಭಾಗದಲ್ಲಿ ಅನಿತನ ಸುಂದರ ಚಿತ್ರದ ಕೆಳಗೆ ಅಣಕು ರಾಮನಾಥರು ತುಂಬುಮನಸ್ಸಿನಿಂದ ಬರೆದ ಬೆನ್ನುಡಿಯೆಂಬ ಕಿರು ಕೃತಿ ಪರಿಚಯ ತಿಳಿ ಹಾಸ್ಯದೊಂದಿಗೆ ಗಮನ ಸೆಳೆಯುವಂತಿತ್ತು. ಒಳಪುಟದಲ್ಲಿ ಕೃತಿಯನ್ನು ನಮ್ಮ ನೆಚ್ಚಿನ ಪೆಜತ್ತಾಯ ಮಾವನಿಗೆ ಅರ್ಪಣೆ ಮಾಡಲಾಗಿತ್ತು. ವಿವಿಧ  ವಿಷಯಗಳ ಮೇಲೆ ಬರೆದ ಈ ಲಘು ಬರಹಗಳ ಸಂಕಲನದಲ್ಲಿ ಒಟ್ಟು ೪೨ ಬರಹಗಳಿದ್ದು ಸುಮಾರು ಇನ್ನೂರು ಪುಟಗಳಷ್ಟು ವ್ಯಾಪಿಸಿಕೊಂಡಿವೆ. ಇವುಗಳಲ್ಲಿ ಕೆಲವು ಮುಗುಳ್ನಗೆ ತರಿಸುವಂತದ್ದು, ಇನ್ನು ಕೆಲವು ಘ್ಹೊಳ್ಳೆಂದು ನಗಿಸುವವು, ಮತ್ತೆ ಕೆಲವು ನೆನೆದೂ ನೆನೆದೂ ನಗಿಸುವಂತವು.



 ಈ ನಗೆ ಲೇಖನಗಳಲ್ಲಿ ಯಾವುದೇ ರೀತಿಯ ಪ್ರಚಲಿತ ಜೋಕುಗಳ ಉಲ್ಲೇಖ ಎಲ್ಲೂ ಇರದಿರುವುದು ಈ ಪುಸ್ತಕದ ಹೆಚ್ಚುಗಾರಿಕೆ. ಕಥೆಯ ಪಾತ್ರದಾರಿಗಳು ಮುಕ್ತಾಯದ ಜಾಡು ಹಿಡಿದು ಸಾಗುವಾಗ ಸ್ವಾಭಾವಿಕವಾಗಿಯೇ ನಿಮ್ಮ ಮನಸ್ಸನ್ನು ಹಗುರಾಗಿಸಿ ನಗಿಸುವುದರಲ್ಲಿ ಯಶಸ್ವಿಯಾಗುತ್ತವೆ. ಈ ಲೇಖನಗಳ ಗುಣಮಟ್ಟಕ್ಕೆ ಕನ್ನಡ ನಾಡಲ್ಲಿ ಮನೆಮಾತಾಗಿರುವ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಮೆಚ್ಚಿ ಹರಸಿರುವ ಮುನ್ನುಡಿಯೇ ಕನ್ನಡಿ.


ಇಂತಾ ಚಂದದ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದು ಪುಟ ತಿರುವುತ್ತಿರುವಾಗ ಸುರುವಾದ ಮನೋಹರ ಪ್ರಸಾದರ ಭಾಷಣ ನಮ್ಮೆಲ್ಲರನ್ನೂ ಸಾರಸ್ವತ ಲೋಕದ ಮತ್ತೊಂದು ಅದ್ಭುತ ಸನ್ನಿವೇಶಕ್ಕೆ ಸೆಳೆದೊಯ್ಯಿತು. ಜುಳು ಜುಳು ಹರಿಯುವ ತೊರೆಯಂತೆ ಅವರ ಮಾತು ಸಾಗುತ್ತಿತ್ತು. ಅನಿತಾ ಬರೆದ ಪುಸ್ತಕವನ್ನು ಶ್ಲಾಘಿಸಿದ ಅವರು ರಾಮ್ ನರೇಶ್ ದಂಪತಿಗಳ ಸಾಹಿತ್ಯ ಮತ್ತು ಕಲಾ ಪ್ರೇಮವನ್ನು ಪ್ರಶಂಸಿಸಿದರು. ನಡುವೆ ಒಂದಿಷ್ಟು ತಮಾಷೆ, ಒಂದಿಷ್ಟು ತುಂಟತನವನ್ನು ಬೆರೆಸಿಕೊಳ್ಳುತ್ತಾ ಅವರು ತಮ್ಮ ಆಕರ್ಷಕ ಧ್ವನಿಯಲ್ಲಿ ಸಭಿಕರ ಮನಗೆಲ್ಲುವುದರಲ್ಲಿ ಯಶಸ್ವಿಯಾದರು. ಉದಯವಾಣಿ ಸುದ್ದಿ ವಿಭಾಗದ ಮುಖ್ಯಸ್ಥರಾದ ಅವರು ಪತ್ರಿಕಾರಂಗದಲ್ಲೊಂದು ಮರೆಯಲಾಗದ ಹೆಸರು. ಸ್ವತಃ ಉತ್ತಮ ಓದುಗರಾದ ಅವರು ತಮ್ಮ ಬಾಲ್ಯದಲ್ಲಿ ಚಂದಮಾಮ ಹಾಗೂ ಸುಧಾ ಪತ್ರಿಕೆ ವಹಿಸಿದ್ದ ಪಾತ್ರವನ್ನು ಸ್ಮರಿಸಿಕೊಂಡರು. ಪುಟ್ಟ ಮಕ್ಕಳು ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳ ಬೇಕೆಂಬುದನ್ನು ಒತ್ತಿ ಹೇಳಿದರು. ಓ ಹೆನ್ರಿಯ ಒಂದು ಸಣ್ಣ ಕಥೆಯನ್ನು ಹೆಕ್ಕಿಕೊಂಡು ಕಥೆಗಳು ಹೇಗಿದ್ದರೆ ಚೆನ್ನಾಗಿರುತ್ತವೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದರು. ಒಟ್ಟಿನಲ್ಲಿ ಬಹುಕಾಲದ ನಂತರ ಒಂದು ಅದ್ಭುತ ಭಾಷಣ ಕೇಳಿದ ಸಂತಸ  ನನ್ನದಾಗಿತ್ತು.

ನಂತರ ನಮ್ಮ ನೆಚ್ಚಿನ ಭುವನಕ್ಕ ಅನಿತಾ ಕೆಲವು ವೇಳೆ ಕಂಪ್ಯೂಟರ್ ಬಳಕೆಯ ವಿಷಯದಲ್ಲಿ ನನ್ನ ಊರುಗೋಲಿನಂತೆ ಎಂದು ನುಡಿದು ನಗಿಸಿದರು. ಮನೋಹರ್ ಪ್ರಸಾದರ ಸವಿ ನುಡಿಗಳನ್ನು ಮೆಚ್ಚಿ ಅಭಿನಂದಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಂತಿಮ ಘಟ್ಟದತ್ತ ಸಾಗುತ್ತಿರುವಾಗ ಮೈಕ್ ಎತ್ತಿಕೊಂಡ ಶ್ರೀ ರಾಮನಾಥ್ ಎಂದಿನಂತೆ ಒಂದು ಅಣಕವಾಡಿನೊಂದಿಗೆ ತಮ್ಮ ಮಾತನ್ನು ಆರಂಭಿಸಿದರು. ತಮ್ಮ ಶೈಲಿಯಲ್ಲಿ ಮಾತು ತೊಡಗಿದ ಅವರು 'ಹೋ ಏನು' ಪುಸ್ತಕದ ಪರಿಚಯವನ್ನು ಸಭಿಕರಿಗೆ  ಮಾಡಿಕೊಟ್ಟರು. ಅನಿತಾ ಮುಕ್ತಾಯ ಹಂತದಲ್ಲಿ ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು. ಇದೆಲ್ಲದರ ನಡುವೆ ಡಾ.ಸುರೇಖಾ ರವಿಶಂಕರ್ ಅವರ ಸಮರ್ಥ ನಿರೂಪಣೆ ಎಲ್ಲರ ಗಮನ ಸೆಳೆಯಿತು.

ನಂತರ ಲಘು ಸಂಗೀತ ಹಾಗೂ ಯಕ್ಷಗಾನದ ಆಯ್ದ ಹಾಡುಗಳ ಭಾಗವತಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಕುಮಾರಿ ಮೇಘಾ ಕಾಯರ್ಪಾಡಿ ಮತ್ತು ರೇಶ್ಮಾ ನರಸಿಂಹ ಕಜೆ  ಲಘು ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಇದರಲ್ಲಿ ರೇಶ್ಮಾ ಕಜೆಯವರು ಅನಿತಾ ಬರೆದಿದ್ದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದ್ದು ವಿಶಿಷ್ಟವಾಗಿತ್ತು. 
 ಯಕ್ಷಗಾನಾಮೃತ ಸಿಂಚನ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದು ಸಭಿಕರನ್ನು ರಂಜಿಸಿತು. 

 ಭಾಗವತರಾಗಿ  ಕು. ಕಾವ್ಯಶ್ರೀ ಅಜೇರು ಮತ್ತು ಶ್ರೀ ಮುರಳಿ ಕೃಷ್ಣ ತೆಂಕಬೈಲು ಭಾಗವಹಿಸಿದರು. ಇವರಿಗೆ ಹಿಮ್ಮೇಳದಲ್ಲಿ ಮದ್ದಳೆಯಲ್ಲಿ  ನೆಕ್ಕರೆಮೂಲೆ ಗಣೇಶ್ ಭಟ್, ಚೆಂಡೆಯಲ್ಲಿ ನಿಡ್ವಜೆ ಶಂಕರ ಭಟ್, ಸುಭ್ರಹ್ಮಣ್ಯ ಮುರಾರಿ ಚಕ್ರತಾಳದಲ್ಲಿ ಸಹಕರಿಸಿದರು. ಶ್ರೀ ಕಿಶೋರ್ ಭಟ್ ಕೊಮ್ಮೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ಅಲ್ಲಿಯವರೆಗೆ ಮನಸ್ಸನ್ನು ತುಂಬಿಕೊಳ್ಳುತ್ತಿದ್ದ ನಮಗೆ ಅದಾಗಲೇ ಮೇಜಿನಲ್ಲಿ ತಂದಿಟ್ಟಿದ್ದ ಬಗೆ ಬಗೆಯ ಭಕ್ಷ್ಯಗಳು ಹೊಟ್ಟೆ ತುಂಬಿಸುವ ಬಗ್ಗೆಯೂ ಸೂಚನೆ ನೀಡಿದವು. ಪೊಗದಸ್ತಾದ ಊಟ ಮಾಡುತ್ತಿದ್ದಾಗಲೂ ವೇದಿಕೆಯಲ್ಲಿ ಕು. ಮೇಘಾ ಹಾಡುತ್ತಿದ್ದರೆ ಅದಕ್ಕೆ  ಕೀ ಬೋರ್ಡ್ ಸಾಥ್ ನೀಡುತ್ತಿದ್ದವಳು ಅಮೃತಾ. ಊಟದ ಜೊತೆಗೆ ಇದನ್ನೂ ಆಸ್ವಾದಿಸುತ್ತಾ ತಟ್ಟೆ ಖಾಲಿ ಮಾಡಿದೆವು. 
ಬಹುದಿನಗಳಿಂದ ಕಾಯುತ್ತಿದ್ದ ಕುತೂಹಲದ ಕ್ಷಣಗಳು ಇಷ್ಟು ಬೇಗನೇ ಮುಗಿಯಬಾರದಿತ್ತು ಎಂದುಕೊಳ್ಳುತ್ತಲೇ ಎದ್ದು ಬರಲು ಹಠ ಮಾಡುತ್ತಿದ್ದ ಕಾಲುಗಳನ್ನು ಹೇಗೋ ಎಳೆದು ತಂದು ಕಾರಿಗೇರಿದರೂ ಮನಸ್ಸು ಆ ಗುಂಗಿನಲ್ಲೇ ಮುಳುಗೇಳುತ್ತಿತ್ತು.