Pages

Total Visitors

Thursday, July 10, 2014

ಕರ್ಣನ ಗೆಲುವು



ಕರ್ಣನ ರಥ ಯುದ್ಧಭೂಮಿಯ ನೆಲದಲ್ಲಿ ಹೂತು ಹೋಗಿದೆ. ಅರ್ಜುನನ ಕಡೆಗೆ ತಿರುಗಿ ಹೇಳುತ್ತಾನೆ. ಅರ್ಜುನಾ 'ಕಲಹಕಾನುವರೀಗಲಲಸದು ಮತವು ಬಿಲುಹೀನ ಶರಹೀನ ಸಲೆ ವಾಹನಗಳ ಬಲಹೀನರಲ್ಲಿ ಸಲೆ ಬಲ್ಲಿದವ ನೀನು ನಿಲುವೊಂದು ಕ್ಷಣಕೆ ಸಿಲುಕಿರ್ದ ರಥವೆತ್ತುತಲೆ ಬರ್ಪೆ ರಣಕೆ' 

ಯುದ್ದದಲ್ಲೂ ನೀತಿಗಳಿರುತ್ತವೆ. ಬೆನ್ನು ತೋರಿಸಿ ಓಡುವವನ ಮೇಲೆ ಯಾರೂ ಯುದ್ದ ಮಾಡುವುದಿಲ್ಲ. ಹಾಗೇ ಆಯುಧವಿಲ್ಲದ ಬಲಹೀನನಾದವನ  ಜೊತೆ ಕಲಹ ಸಲ್ಲದು. ನಿನಗೆ ತಿಳಿಯದಿರುವುದು ಏನಿದೆ ಒಂದು ಕ್ಷಣ ನಿಲ್ಲು ರಥವನ್ನು ಎತ್ತಿ ಮತ್ತೆ ನಿನ್ನೊಡನೆ ಹೋರಾಟಕ್ಕೆ ಬರುತ್ತೇನೆ'. 

ಅರ್ಜುನನಿಗೂ ಕರ್ಣನ ಮಾತುಗಳು ತಪ್ಪೆನಿಸುವುದಿಲ್ಲ. ನಿಯಮಗಳು ಇರುವುದೇ ಹಾಗೇ ತಾನೇ.

ಒಪ್ಪಿದ.
ರಥವನ್ನೆತ್ತುವ ಪ್ರಯತ್ನದಲ್ಲಿರುತ್ತಾನೆ ಕರ್ಣ.
ಆಗಲೇ ಕೃಷ್ಣ ಅರ್ಜುನನಿಗೆ ಕರ್ಣನನ್ನು ಕೊಲ್ಲಲು ಆದೇಶಿಸುತ್ತಾನೆ. ವೈರಿಗಳಿಗೆ ಆಪತ್ತು ಬಂದಾಗಲೇ ಕೊಲ್ಲುವುದು ರಾಜಧರ್ಮ.ಕಾಯುವುದೇನನ್ನು ..ಹಿಡಿ ಬಿಲ್ಲು ತೊಡು ಬಾಣ.. 

ಕರ್ಣನ ಬೆನ್ನು ಮಾತ್ರ ಕಾಣುತ್ತಿದೆ ಅರ್ಜುನನಿಗೆ.. ಇದ್ದಕ್ಕಿದ್ದಂತೆ ಬಿಲ್ಲು ಬಾಣಗಳನ್ನು ಕೆಳಗಿಟ್ಟು ಯಾವುದೋ ಭಾವನೆಗಳ ಆವೇಗಕ್ಕೆ ಸಿಲುಕಿದ್ದಾನೆ ಅರ್ಜುನ.ಅಲ್ಲಿಯವರೆಗೆ ವೈರಿಯಾಗಿದ್ದ ಕರ್ಣ ಆ ಕ್ಷಣಕ್ಕೆ ಆಪ್ತನಾಗುತ್ತಾನೆ. 
ಅಂಗಲಾಚುತ್ತಾನೆ ಕೃಷ್ಣನಲ್ಲಿ .. 

ಮನಸಿಜ ಪಿತ ನೀನು ಮಾತಿಲಿ ಬಿಟ್ಟಾಡು ಕರ್ಣನಾರೈ
ಎನ್ನ ಮನದಲಿ ಹಲವು ಹಂಬಲಿಸುತಲಿರ್ಪುದು ಕರ್ಣನಾರೈ
ಧನುವೆತ್ತಲಾರೆ ಕೂರ್ಗಣೆ ತೊಡಲಾರೆನು ಕರ್ಣನಾರೈ
ಮೇಣೆನಗೀಸು ಪಗೆಗಾಣದಾತನ ಮೇಲಿನ್ನು ಕರ್ಣನಾರೈ
ಪೊಡವಿ ಪಾಲಕನಿಂದ ಹೆಚ್ಚು ತೋರುತಲಿದೆ ಕರ್ಣನಾರೈ
ಎನ್ನ ಒಡಹುಟ್ಟಿದವನೋ ಸಂಬಂಧಿಯೋ ತಿಳಿಯದು ಕರ್ಣನಾರೈ
ನಡೆಯದೆನ್ನಯ ಮಾರ್ಗಣಂಗಳಾತನ ಮೇಲೆ ಕರ್ಣನಾರೈ
ದೇವ ನುಡಿ ನುಡಿ ಮರೆಮಾಜಬೇಡ ಯಥಾರ್ಥವ ಕರ್ಣನಾರೈ

ಇಲ್ಲಿ ಕವಿ ಅರ್ಜುನನ ವಿಲಾಪವನ್ನು, ಅವನ ಮನದಾಳದ ನೋವನ್ನು  ಸರಳ ಶಬ್ಧಗಳಲ್ಲಿ  ಹಿಡಿದಿಡುತ್ತಾನೆ. ಕಣ್ಣರಿಯದಿದ್ದರೂ ಕರುಳರಿಯದೇ ಎಂಬ ಮಾತು ನೆನಪಾಗುವುದು ಈಗಲೇ..

ಈ ಪರಿಸ್ಥಿತಿಯಲ್ಲಿ ಕೊಲ್ಲಬಹುದೇ ಕರ್ಣನನ್ನು ಎಂಬುದು ಅರ್ಜುನನ  ಪ್ರಶ್ನೆಯಲ್ಲ.ಕೊಲ್ಲಬಾರದವನನ್ನು ಎಂಬುದೇ ಅವನ ಇಚ್ಛೆ. ಕೊಲ್ಲದಿರಲು ಕಾರಣಗಳನ್ನು ಹುಡುಕುತ್ತಾನೆ..
'ಕೃಷ್ಣಾ ನಾನೀಗ  ಕೊಲ್ಲಲಾರೆ ಕರ್ಣನನ್ನು.. ಅವನ ಜೊತೆ ಇದ್ದಕ್ಕಿದ್ದಂತೆ ಬಂಧವೊಂದು ಬೆಸೆದಿದೆ. ಆ ನಂಟಿನ ಅಂಟು ಬಿಗಿಯಾಗಿದೆ. ಬಿಡಿಸಿಕೊಳ್ಳಲಾಗದಷ್ಟು..ನಿನಗೆ ತಿಳಿಯದಿದ್ದುದು ಯಾವುದಿದೆ ಜಗದಲ್ಲಿ ಹೇಳಿಬಿಡು ನನಗೆ ಯಾರಿವನು ಈ ಕರ್ಣ..
ಬಿಲ್ಲನ್ನೆತ್ತಲಾರೆನಯ್ಯಾ.. ಬಾಣವನ್ನು ಗುರಿಡಲಾರೆ ಅವನೆಡೆಗೆ.. ಸಮರವೆಸಗಬೇಕಾದರೆ ಹಗೆ ಬೇಕು.. ನನಗೆ ಅವನ ಮೇಲೆ ಕಿಂಚಿತ್ತೂ ಆ ಭಾವನೆಲ್ಲ. ಅಷ್ಟೇ ಏಕೆ ನನ್ನಣ್ಣ ಧರ್ಮರಾಯನಿಂದಲೂ ಈತನೇ ನನಗೆ ಹೆಚ್ಚು ಪ್ರಿಯವಾಗಿ ತೋರುತ್ತಿದ್ದಾನೆ ಹೇಳಬಾರದೇ ಯಾರವನು?'

ಹೇಳಬಹುದಿತ್ತಲ್ಲ ಕೃಷ್ಣನಿಗೆ.. ಇವನು ನಿನ್ನ ಅಣ್ಣ ಎಂದು..ಕೃಷ್ಣನಲ್ಲದೇ ಬೇರೆ ಯಾರೇ ಆಗಿದ್ದರೂ ಅರ್ಜುನನಿಗೆ ನಿಜ ನುಡಿಯುವ ಅಪಾಯವಿತ್ತು.  ಯುದ್ಧವಲ್ಲಿಗೆ ನಿಲ್ಲುತ್ತಿತ್ತೇನೋ? 

ಆದರೆ ಕೃಷ್ಣ ಹಾಗೆ ಹೇಳುವುದಿಲ್ಲ.. ಕರ್ಣನ ಪಾಪಗಳ ಲೆಕ್ಕ ಹಾಕುತ್ತಾನೆ.. ರೊಚ್ಚಿಗೆಬ್ಬಿಸುತ್ತಾನೆ ಅರ್ಜುನನನ್ನು.. 

'ಏನು ಹುಚ್ಚು ಹಿಡಿದಿದೆ ನಿನಗೆ ಅರ್ಜುನಾ.. ಎಷ್ಟೆಷ್ಟು ಮೋಸವೆಸಗಿದ್ದಾನೆ ಇವನು ಲೆಕ್ಕಹಾಕು.. ಆಗೆಂದಾದರು ಸಂಬಂಧಗಳ ಸುಳಿಯಲ್ಲಿ ಸಿಲುಕಿ ನಿಮ್ಮನ್ನು ಪಾರು ಮಾಡಿದ್ದಾನೆಯೇ?  ಇವನು ನಿನ್ನ ಬಂಧುವೆಂತಾದಾನು? ರಣರಂಗದಲ್ಲಿ ಮೋಸದಿಂದ ನಿನ್ನ ಕಂದನನ್ನು ಕೊಂದವನಲ್ಲವೇ ಇವನು.ಏನಾದರೂ ಸಂಬಂಧವೋ ಅನುಬಂಧವೋ ಇದ್ದೀತೆಂದು ಎತ್ತಿದ ಕತ್ತಿ ಕೆಳಗಿಳುಹಿದ್ದಾನೆಯೇ? ಯುದ್ಧಭೂಮಿಗೆ ಬಂದು ಬಂಧುತ್ವವನ್ನು ಹುಡುಕಬೇಡ.. ಕೊಂದು ಕಳೆ ..'  

ಮತ್ತರೆಕ್ಷಣದಲ್ಲಿ  ಅರ್ಜುನನ ಬಾಣ ಕರ್ಣನೆದೆಗೆ ತಾಕಿ ಕರ್ಣ ಕುಸಿಯುತ್ತಾನೆ.

ಪ್ರಶ್ನೆ ಮೂಡುವುದು ಈಗಲೇ.. 

ಕರ್ಣನಿಗೆ ಗೊತ್ತಿದೆ ಅರ್ಜುನ ಯಾರೆಂದು..
ತನಗೂ ಅವನಿಗೂ ಇರುವ ಬಂಧುತ್ವವೇನೆಂದು.. ಆದರೆ ಎಲ್ಲಿಯೂ ಆ ಬಂಧನದ ಪಾಶಕ್ಕೆ ಸಿಲುಕದೆ ಒಡೆಯನ ಉಪ್ಪಿನ ಋಣ ತೀರಿಸುವೆಂದು ಮಾಡಬಾರದ್ದನ್ನೆಲ್ಲಾ ಮಾಡುತ್ತಾನೆ.

ಕೃಷ್ಣನಿಗೂ ತಿಳಿದಿದೆ ಅವರಿಬ್ಬರ ನಡುವಿನ ಬಂಧವೇನೆಂದು.. 

ನ್ಯಾಯಾನ್ಯಾಯಗಳ ತಕ್ಕಡಿಯಲ್ಲಿ ತೂಗಿದಾಗ ಕರ್ಣನ ಪಾಪಗಳ ತೂಕ ಹೆಚ್ಚಾಗಿಯೇ  ಇತ್ತು.
ಹಾಗೊಂದು ವೇಳೆ ಸತ್ಯ ಹೇಳಿದ್ದರೆ.. ಕರ್ಣ ಬದುಕಬಹುದಿತ್ತು.. ಆದರೆ ಅದು ಅವನ ಸೋಲಾಗುತ್ತಿತ್ತು.
ದ್ರೌಪದಿಯ ಮುಖ ನೋಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದ ಕರ್ಣ, ಸುಭದ್ರೆಯ ಮಗನ ಹಂತಕ ಕರ್ಣ, ಪಾಂಡವರನ್ನು ಅವಮಾನಿಸುವ ಯಾವ ಕ್ಷಣವನ್ನೂ ಕಳೆದುಕೊಳ್ಳದೆ ಬಳಸಿದ್ದ ಕರ್ಣ.. ಸಾಯದೇ ಉಳಿದರೆ ಗೌರವವಿತ್ತೇ ಅವನಿಗೆ.. ಅನಿವಾರ್ಯವಾಗಿ ಪಾಪಪ್ರಜ್ಞೆಯಿಂದ  ಬದುಕಿನುದ್ದಕ್ಕೂ ನರಳಬೇಕಿತ್ತವನು..  ಅವನ ಗೆಲುವು ಇದ್ದುದ್ದು ಸಾವಿನಲ್ಲಿಯೇ.. 

 ಕೃಷ್ಣನ ಆಲೋಚನೆಯೂ ಅದೇ ಆಗಿತ್ತು. ಅವನಿಗೆ ಕರ್ಣನನ್ನು ಗೆಲ್ಲಿಸಬೇಕಿತ್ತು. ಜೊತೆಗೆ ಅರ್ಜುನನನ್ನೂ ..

ಒಂದು ಬಾಣ.. ಎರಡು ಗುರಿ.. 




Thursday, July 3, 2014

ಜ್ವರ ಬರುವ ಹಾಗಿದೇ..




ಘಟ್ಟ ಹತ್ತಿ ಇಳಿದಿದ್ದು ಬರೀ ನೆವ ಅಷ್ಟೇ.. ಅಲ್ಲಿ ಮಳೆಯೇ ಇಲ್ಲದೆ ಉರಿ ಬಿಸಿಲಿನಲ್ಲಿ ಅಡ್ಡಾಡಿ ಮನೆ ಸೇರಿದರೆ ಯಾಕೋ ಮೈಯೆಲ್ಲಾ ಬಿಸಿಯಾದಂತೇ, ಕಣ್ಣುಗಳು ಬೆಂಕಿಯುಗುಳುವಂತಾ ಅನುಭವ. 'ನಾಸಿಕವೂ ಸಂಪಿಗೆಯಂತೇ..' ಎಂದು ನನ್ನ ಮಾಮೂಲು ಕಿರುಚು ಕಂಠದಲ್ಲಿ ಹಾಡ ಹೊರಟರೆ ಅದು 'ದಾಸಿಕಬೂ ದಪ್ಪಿಗೆಯತ್ತೇ' ಎಂದು ಕೇಳಿಸಿತು. 

ಆಹಾ.. 'ಜ್ವರ ಬರುವ ಹಾಗಿದೆ.. ಹಾಸಿಗೆಯು ಹಾಕಿದೆ.. ಸುಮ್ಮನಲ್ಲಿ ಮಲಗು ಎಂದು ನನಗೆ ಹೇಳಬಾರದೇ' ರಾಗವಾಗಿ ಇವರಲ್ಲಿ ಕೇಳಿದೆ. ಹೀಗೆ ಕೇಳಿದರೆ ಸಂಗೀತ ಪ್ರಿಯರಾದ ಅವರ ತಲೆ ಅಲುಗೀತು ಎಂಬ ಆಸೆ ನನ್ನದು. "ನಂಗೆ ಒಂದ್ಲೋಟ ಬಿಸಿ ಚಹಾ ಮಾಡಿಕೊಟ್ಟು ಮತ್ತೆಷ್ಟು ಹೊತ್ತು ಬೇಕಾದ್ರು ನಿದ್ದೆ ಮಾಡು" ಎಂದು ಅಭಯ ಪ್ರದಾನ ಮಾಡಿದರು.

ಅಷ್ಟೇ ತಾನೇ.. 'ಬಸ್ ದೋ ಮಿನಿಟ್..  ಆದ್ರೆ ಆಮೇಲೆ ನಾನಾಗಿ ಏಳುವವರೆಗೆ ಏಳಿಸಬಾರದು..' ಅಂತ ಮೊದಲೇ ಆರ್ಡರ್ ಪಾಸ್ ಮಾಡಿ ನವಿಲಿನ ನಡಿಗೆಯಲ್ಲಿ ಅಡುಗೆ ಮನೆಗೆ ನಡೆದೆ.

ಆದರೆ ಅಷ್ಟೆಲ್ಲ ಸುಲಭದಲ್ಲಿ ಹಾಡು ಹಗಲೇ ನನಗೆ ನಿದ್ರಾ ಭಾಗ್ಯ ಒಲಿಯುವುದು ಯಾರಿಗಾದರೂ ಪಥ್ಯವಾದೀತೇ..?? ಮೊಬೈಲ್ ನಾನಿಲ್ಲಿದ್ದೇನೆ ಎಂದು ಬಡಿದುಕೊಳ್ಳತೊಡಗಿತು. 

ಎತ್ತಿ 'ಹಲೋ' ಎಂದರೆ ನನ್ನ ಬದಲಾದ ಸ್ವರದಿಂದ ವಿಚಲಿತಳಾದ ನನ್ನ ಗೆಳತಿ 'ನೀನು ನೀನೆಯೋ' ಎಂದು ಪರಮ ತತ್ವಜ್ಞಾನಿಗೂ ಅರ್ಥವಾಗದಂತಹ ಪ್ರಶ್ನೆಯೊಂದನ್ನು ನನ್ನ ಕಡೆಗೆ ಎಸೆದಳು. 

ನಾನೇಕೆ ಸುಮ್ಮನುಳಿಯಲಿ ಹೇಳಿ.. 'ನಾನು ನಾನೇ' ಎಂದೆ ಆಗಷ್ಟೇ ಮೋಕ್ಷ ಸಾಕ್ಷಾತ್ಕಾರವಾದ ಸ್ಟೈಲಿನಲ್ಲಿ. 

'ಏನಾಗಿದೆಯೇ ನಿನ್ನ ಸ್ವರಕ್ಕೆ.. ನನ್ನನ್ನು ಬಿಟ್ಟು ಆಗುಂಬೆ ಘಾಟಿ ಏರಿದೆಯಲ್ಲ..ಮೊದಲೇ ಗಿಣಿಗೆ ಹೇಳುವಂತೆ ಹೇಳಿದೆ. ನಂಗೀಗ ಆಫೀಸಿಗೆ ರಜೆ ಹಾಕುವಂತೆ ಇಲ್ಲ. ಸ್ವಲ್ಪ ದಿನ ಬಿಟ್ಟು ಒಟ್ಟಿಗೆ  ಹೋಗೋಣ. ನಾನೂ ಬರ್ತೀನಿ ಅಂತ .. ಕೇಳಿದೆಯಾ ನನ್ನ ಮಾತನ್ನು..  ನನ್ನ ಬೇಸರದ ನಿಟ್ಟುಸಿರಿನ ತಾಪ, ಶಾಪ ನಿನಗೆ ತಟ್ಟದೇ ಇದ್ದೀತೇ.. ಅನುಭವಿಸು ಈಗ' ಎಂದು ತನ್ನ ಹೊಟ್ಟೆ ಉರಿ ಕಾರಿದಳು. 

'ಇದೇನು ಮಹಾ ಬಿಡೇ..ಎಂತೆಂತಾ ಕಾಯಿಲೆಗಳಿಗೆ ಹೆದರಿದವಳಲ್ಲ ನಾನು .. ಈ ಪುಟುಗೋಸಿ ಜ್ವರಕ್ಕೆ ಹೆದರುವುದುಂಟೇ.. ಒಂಚೂರು ರೆಸ್ಟ್ ತೆಗೊಂಡ್ರೆ ಕಡಿಮೆಯಾಗುತ್ತೆ' ಎಂದು ಅವಳ ಹೊಟ್ಟೆ ಕಿಚ್ಚಿಗೆ ತಣ್ಣೀರೆರೆದೆ.

ಆದರೂ ಅವಳೆಲ್ಲಿ ಬಿಡುತ್ತಾಳೆ ..'ಮೈ ಕೈಯೆಲ್ಲಾ ನೋಯ್ತಾ ಇದೆಯೇನೇ..? ಕೈಕಾಲಿನ ಕೀಲುಗಳೆಲ್ಲ ಸರಾಗವಾಗಿ ಮಡಿಚಿ ಬಿಡಿಸಿ ಮಾಡಲಿಕ್ಕಾಗುತ್ತಾ..? ಉಸಿರಾಟ ಸರಿ ಇದೆ ಅಲ್ವಾ.. ?' ಕಣ್ಣಲ್ಲೇನು ನೀರು ಬರ್ತಿಲ್ಲಾ ತಾನೇ..? ಬಾಯಿ  ರುಚಿ ಸರಿ ಇದೆಯಾ, ಹೊಟ್ಟೆಗೆ ಆಹಾರ ಎಲ್ಲಾ ಸೇರುತ್ತೆ ತಾನೇ? ಎಂದೆಲ್ಲಾ ಡಾಕ್ಟರ್ ಮಾದರಿಯ ಎರಡನೇ ಸುತ್ತಿನ ಪ್ರಶ್ನಾವಳಿಗಳನ್ನು ನನ್ನ ಕಡೆಗೆ ಎಸೆದಳು. 
ಈಗ್ಯಾಕೋ ಕೊಂಚ ಗಾಭರಿಯಾದರೂ ತೋರಗೊಡದೆ, ನಿಧಾನಕ್ಕೆ ಎದ್ದು  ಕೈ ಕಾಲು ಮೇಲೆ ಕೆಳಗೆ ಮಾಡಿ , ಬಗ್ಗಿ ಎದ್ದು ಪರೀಕ್ಷಿಸಿಕೊಂಡು ಗಂಟು,  ಕೀಲುಗಳೆಲ್ಲಾ ಮೊದಲಿನಂತೆ ವರ್ಕ್ ಆಗ್ತಾ ಇದೆ ಎಂದು ದೃಢಪಡಿಸಿಕೊಂಡೆ. ಉಸಿರಾಟ ಸರಿಯಾಗಿ ನಡೆಯುತ್ತಾ ಇರುವುದರಿಂದ ತಾನೇ ನಾನು ಜೀವಂತವಾಗಿರೋದು..ಹಾಗಾಗಿ ಅದರ ಸಮಸ್ಯೆಯೇನೂ ಇಲ್ಲ. ಇನ್ನು ಈರುಳ್ಳಿ ಹೆಚ್ಚುವಾಗಲೂ ಕಣ್ಣಲ್ಲಿ ಹನಿ  ನೀರು ಬಾರದ ಗೂಬೆ ಕಣ್ಣಿನೋಳೆಂಬ ಖ್ಯಾತಿವೆತ್ತ ನನ್ನನ್ನು ದೂರದಲ್ಲಿ ನಿಂತು ಬರಬೇಕೋ ಬೇಡವೋ ಎಂದು ಕಾಡುತ್ತಿರುವ ಈ ಯಕಶ್ಚಿತ್ ಜ್ವರಕ್ಕೆ ಕಣ್ಣೀರಿಳಿಸುವ ಧೈರ್ಯ ಬಂದೀತೇ..ಕೊನೆಯದಾಗಿ ಅವಳು ಕೇಳಿದ ಆಹಾರದ ಸಂಗತಿ ಯಾಕೋ ಉತ್ತರಿಸಲು ಕೊಂಚ ಗಲಿಬಿಲಿ ಅನ್ನಿಸಿತು. ನಾಲ್ಕು ದೋಸೆ ಗುಳುಂ ಮಾಡಿ ಅದರ ಮೇಲೆ ಅರ್ಧ ಲೀಟರ್ ಜ್ಯೂಸ್ ಎಂಬ ದ್ರಾವಕವನ್ನೆರೆದುಕೊಂಡು ಸ್ವಲ್ಪ ಹೊತ್ತಾಗಿತ್ತಷ್ಟೇ, ಹಾಗಾಗಿ ಈಗ ಪರೀಕ್ಷೆ ಮಾಡಿ ಪುನಃ ಗಂಟಲಿನಲ್ಲಿ ಏನಾದರು ತುರುಕೋಣ ಎಂದರೆ ಸ್ಥಳವೇ ಇಲ್ಲ  !

ನನ್ನ ಉತ್ತರಕ್ಕಾಗಿ ಕಾದು ಕುಳಿತಿದ್ದ ಗೆಳತಿ.. ಯಾಕೇ .. ಏನಾಯ್ತು.. ಮಾತಾಡ್ತಾ ಇಲ್ಲ.. ಅಂದಳು.

'ಇಲ್ಲಾ ಕಣೇ, ಏನೂ ಇಲ್ಲ.. ಎಲ್ಲಾ ಸರಿಯಾಗೇ ಇದ್ದೀನಿ' ಅಂದೆ.

 ಅವಳು ಮತ್ತೆ ' ನಂಗ್ಯಾಕೋ ನಿಂಗೆ ಇಲಿ ಜ್ವರಾನೋ, ಮಂಗನ ಜ್ವರಾನೋ, ಕೋಳಿ ಜ್ವರಾನೋ ಬಂದಿರ್ಬೇಕು ಅಂತ ಡೌಟು ಕಣೇ.. ಯಾಕಂದ್ರೆ ನಿನ್ನನ್ನಿನ್ನೂ ಮನುಷ್ಯ ಜಾತಿ ಅಂತ ಯಾರೂ ಒಪ್ಕೊಳ್ಳೋಕೆ ಸಿದ್ಧ ಇಲ್ಲ ಅಲ್ವಾ ಅದಕ್ಕೆ ಹೇಳಿದೆ ಅಷ್ಟೇ.. ಯಾವ್ದಕ್ಕೂ ಡಾಕ್ಟ್ರ ಹತ್ರ ಹೋಗಿ ಒಂದು ಬ್ಲಡ್ ಚೆಕ್ ಅಪ್ ಮಾಡಿಸ್ಕೊಳ್ಳೇ ಅಂತ ಬಾಂಬೆಸೆದು ನಾನು ಬಯ್ಯಲು ಬಾಯ್ದೆರೆಯುವ  ಮೊದಲೇ  ಫೋನಿರಿಸಿದಳು.

ನನಗೂ ಜ್ವರಕ್ಕೂ ಅವಿನಾಭಾವ ನಂಟು. ಮೊದಲೆಲ್ಲ ಊರಲ್ಲಿ ಯಾರಿಗಾದರೂ ಜ್ವರ ಬಂದಿದೆ ಎಂಬ ಸುದ್ಧಿ ಗೊತ್ತಾದರೆ ಸಾಕು,ನನ್ನಮ್ಮ ನನಗೆ ಮಫ್ಲರು, ಶಾಲು, ಸ್ವೆಟರು ಹೊದೆಸಿ ಸನ್ಮಾನ ಮಾಡಲು ಪ್ರಾರಂಭಿಸುತ್ತಿದ್ದಳು. ನನಗೆ ಜ್ವರ ಬಂದರೆ ಬೇಗ ವಾಸಿ ಆಗೋದಿಲ್ಲ ಎಂಬುದು ಅದಕ್ಕೆ ಇನ್ನೊಂದು ಕಾರಣ. ಡಾಕ್ಟರರಾಗಿದ್ದ ಅಪ್ಪ ಕ್ಲಿನಿಕ್ಕಿನಿಂದ ಬಂದ ಕೂಡಲೇ ಅವರ ಕಿಟ್ ನಿಂದ ನಾಲ್ಕಾರು ಬಣ್ಣ ಬಣ್ಣದ ಮಾತ್ರೆಗಳನ್ನು ತೆಗೆದಿರಿಸುತ್ತಿದ್ದಳು.ತಣ್ಣೀರ ಪಟ್ಟಿ ಕಟ್ಟಲು ಬಟ್ಟೆ ರೆಡಿ ಮಾಡುತ್ತಿದ್ದಳು. ಅಮ್ಮ ಜ್ವರ ಮನೆಯೊಳಗೆ ಇಣುಕದ ಹಾಗೆ ಇಷ್ಟೆಲ್ಲಾ ತಯಾರಿ ನಡೆಸಿದ್ದರೂ ನನಗೆ ಹೇಗೋ ಜ್ವರ ಬಂದು ಬಿಡುತ್ತಿತ್ತು.ಆಗ ಅಮ್ಮ, ನಂಗೊತ್ತಿತ್ತು .. ಇವ್ಳಿಗೆ ಜ್ವರ ಬಂದೇ ಬರುತ್ತೆ ಅಂತ .. ನೋಡಿ ನಾನು ಮೊದ್ಲೇ ಎಲ್ಲಾ ರೆಡಿ ಮಾಡಿದ್ದಕ್ಕಾಯ್ತು" ಅಂತ ಹೇಳುತ್ತಾ  ತನ್ನ ಸಿದ್ಧತೆಗಳನ್ನೆಲ್ಲಾ ನನ್ನ ಮೇಲೆ ಪ್ರಯೋಗಿಸಲು ಪ್ರಾರಂಭಿಸುತ್ತಿದ್ದಳು. 

ಮೊದಲಿಗೆ  ಅಮ್ಮ ನನ್ನ ಕೈಗೆ ಬಣ್ಣ ಬಣ್ಣದ ಮಾತ್ರೆಗಳನ್ನು  ತಂದು ತುರುಕುತ್ತಿದ್ದಳು. ಆ ಮಾತ್ರೆಗಳ ಬಣ್ಣವೇನೋ ಸುಂದರವಾಗಿದ್ದರೂ ಅದರ ಕಹಿ  ಮತ್ತು ವಾಸನೆಯನ್ನು ತಡೆಯಲಾರದೇ ಅವಳ ಕಣ್ಣು ತಪ್ಪಿಸಿ ಮೆಲ್ಲನೆ ಮಂಚದ ಕೆಳಗೆ ಎಸೆದುಬಿಡುತ್ತಿದ್ದೆ. ಹೀಗೆ  ಹೊತ್ತು ಹೊತ್ತಿಗೆ ನನ್ನ ಕೈ ಸೇರುತ್ತಿದ್ದ ಮಾತ್ರೆಗಳೆಲ್ಲ ಬೆಚ್ಚಗೆ ಮಂಚದಡಿ ಮಲಗುತ್ತಿದ್ದ ಕಾರಣ ನನ್ನ ಜ್ವರವೂ ನನ್ನ ಜೊತೆಯೇ ಉಳಿದುಕೊಳ್ಳುತ್ತಿತ್ತು.ಮತ್ತೆ ಅಮ್ಮನ ತಣ್ಣೀರು ಪಟ್ಟಿ ಎಂಬ ಶಿಕ್ಷೆ. ಬೆಚ್ಚಗೆ ಹೊದ್ದರೂ ಚಳಿಯಾಗಿ ಗಡಗಡನೆ ನಡುಗುವ ನನ್ನ ತಲೆಗೆ ತಣ್ಣೀರಲ್ಲಿ ಅದ್ದಿದ ಬಟ್ಟೆ ಇಟ್ಟಾಗ ನರಕ ದರ್ಶನವಾಗುತ್ತಿತ್ತು. 
ಆದರೂ ಅದಕ್ಕೆಲ್ಲ ತಣಿಯದ ನನ್ನ ಜ್ವರಕ್ಕೆ  ಅಪ್ಪನೇ ಮದ್ದು ಮಾಡಬೇಕಿತ್ತು. ಅಪ್ಪನ ಟ್ರೀಟ್ ಮೆಂಟ್ ಅಂತೂ ಇನ್ನೂ ಹಿಂಸೆಯದ್ದು.  ನನ್ನ ನರಪೇತಲ ಮೈಯಲ್ಲಿ ಮಾಂಸ ಅನ್ನುವುದೇನಾದ್ರು ಇದೆಯಾ ಅಂತ ಹುಡುಕಿ 'ವ್ಹೋ' ಎಂದು ಅಳುತ್ತಿದ್ದ ನನ್ನನ್ನು ಸಮಾಧಾನಿಸುತ್ತಲೇ ಸೂಜಿ ಚುಚ್ಚುತ್ತಿದ್ದರು. 

ಒಮ್ಮೆ ಮಂಚದ ಕೆಳಗೆ ಇಟ್ಟಿದ್ದ ಹಳೆ ಪೆಟ್ಟಿಗೆಗಳ ಸ್ಥಳಾಂತರವೆಂಬ ಉತ್ಕತನಕ್ಕೆ, ಜಿರಳೆಗಳು ತಿಂದು ಅಳಿದುಳಿದಿದ್ದ ಮಾತ್ರೆಗಳ ಪಳೆಯುಳಿಕೆಗಳು ಸಿಕ್ಕಿದ್ದವು. ಹೀಗೆ ನನ್ನ 'ಲಾಂಗ್ ಲಿವ್' ಜ್ವರದ ಕಾರಣ ಜಗಜ್ಜಾಹೀರಾಗಿತ್ತು. ಅದರ ನಂತರ ನಾನು ಮಾತ್ರೆ ನುಂಗಿ ಆಗುವವರೆಗೇ ಪಕ್ಕದಲ್ಲೇ ನಿಂತಿರುತ್ತಿದ್ದ ಅಮ್ಮ, ನುಂಗಿ ಆಯಿತು ಎಂದರೂ ಬಿಡದೇ ಯಶೋದೆ ಕೃಷ್ಣನಿಗೆ ಹೇಳಿದಂತೆ ಬಾಯಿ  ತೆರೆದು ತೋರಿಸು ಎನ್ನುತ್ತಿದ್ದಳು. ಅಲ್ಲೆಲ್ಲೂ ಮಾತ್ರೆ ಉಳಿದುಕೊಂಡಿಲ್ಲ ಎಂದು ನಿಶ್ಚಯವಾದ ಮೇಲೆಯೇ ನಿರ್ಗಮಿಸುತ್ತಿದ್ದಳು.    

ಆದರೂ ನನಗೆ ಈ ಜ್ವರ ಅಂದರೆ ಯಾಕೋ 'ಪ್ಯಾರ್ಗೆ ಆಗ್ಬಿಟ್ಟೈತೆ'.

ಅದಕ್ಕೂ ಕಾರಣಗಳಿಲ್ಲದಿಲ್ಲ.  ಜ್ವರ ಎಲ್ಲರನ್ನೂ ಕಾಡುವ ರೋಗವಾದರೂ, ಅದರಿಂದ ಆಗುವ ಉಪಕಾರಗಳ ಬಗ್ಗೆ ನಿಮಗಿನ್ನೂ ಗೊತ್ತಿಲ್ಲ ಅಂತ ಕಾಣುತ್ತೆ ಹಾಗಾಗಿ ಜ್ವರವನ್ನೂ ಇಷ್ಟ ಪಡುವವರಿದ್ದಾರೆಯೇ ಎಂಬ ಸಂದೇಹ ನಿಮ್ಮೊಳಗಿರುವುದು..!!
ನಾನಾಗ ಆರನೆಯ ತರಗತಿಯಲ್ಲಿದ್ದೆ. ಗಣಿತ ಹೇಳಿಕೊಡಲು ಹೊಸದಾಗಿ ಒಬ್ಬರು ಟೀಚರ್ ಬಂದಿದ್ದರು. ಅವರು ಗಣಿತವನ್ನು  ಬೋರ್ಡಿನಲ್ಲಿ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ, ವಿದ್ಯಾರ್ಥಿಗಳ ಬೆನ್ನಿನ ಮೇಲೆ ಕೋಲಿನಿಂದ ಬರೆ ಎಳೆದು ಹೇಳಿಕೊಡುತ್ತಿದ್ದರು. ಹಾಗಾಗಿ ಅವರ ಕ್ಲಾಸು ಎಂದರೆ ಎಲ್ಲರಿಗೂ ನಡುಕ. ಇನ್ನು ಗಣಿತ ಟೆಸ್ಟ್ ಅನ್ನುವುದು ಹೇಗಿರಬಹುದು ನೀವೇ ಊಹಿಸಿ. 'ನಾಡಿದ್ದು ಟೆಸ್ಟ್ ಇದೆ ಎಲ್ಲರೂ ಸರಿ ಕಲಿತು ಬನ್ನಿ' ಎಂದು ಬೆತ್ತ ಝಳಪಿಸುತ್ತಾ ನುಡಿದು ಕ್ಲಾಸಿನಿಂದ ಹೊರ ಹೋಗಿದ್ದರು ಆ ದಿನ.  ನನ್ನ ಅದೃಷ್ಟಕ್ಕೆ ಸರಿಯಾಗಿ ಟೆಸ್ಟ್ ಎಂದು ಹೇಳಿದ ದಿನ ನಾನು ಜ್ವರದಿಂದ ಮುಸುಕೆಳೆದು ಹಾಸಿಗೆಯಲ್ಲಿ ಕನಸು ಕಾಣುತ್ತಾ ಮಲಗಿದ್ದೆ. ಟೆಸ್ಟ್ ಮುಗಿದು ಆನ್ಸರ್ ಶೀಟ್ ಹಿಡಿದು ಕ್ಲಾಸಿಗೆ ಎರಡು ಬೆತ್ತದ ಸಮೇತವೇ ಬಂದಿದ್ದರು. ಆ ದಿನ ಇಡೀ ಕ್ಲಾಸಿನಲ್ಲಿ ಧೈರ್ಯವಾಗಿ ತಲೆ ಎತ್ತಿ ಕೂತವಳೆಂದರೆ ನಾನೊಬ್ಬಳೇ.. ಇದು ಜ್ವರದ ಮಹಿಮೆಯಲ್ಲದೇ ಇನ್ನೇನು ಹೇಳಿ. 

ಇನ್ನೊಮ್ಮೆ ನಮ್ಮನೆಗೆ 'ನಾರದನ ಹೆಣ್ರೂಪ' ಎಂದೇ ಪ್ರಸಿದ್ಧಿ ಹೊಂದಿದ್ದ ಕಾಶತ್ತೆ  ಬರ್ತೀನಿ ಅಂದಿದ್ದರು. ಅವರು ಯಾರದೇ ಮನೆಗೆ ನುಗ್ಗಿದರೂ ಸಾಕು ಮನೆಯೊಳಗೆ ಮಾತಿನ ಚಕಮಕಿ ಗ್ಯಾರಂಟಿ. 'ನಿನ್ನ ಬಗ್ಗೆ ಅವ್ಳು ಹೀಗೆ ಹೇಳಿದ್ಲು, ಕೇಳಿ ನಂಗೆ ಮನಸ್ಸು ತಡೀಲಿಲ್ಲ ಕಣೇ ಹೇಳೋಣಾ ಅಂತ ಇಲ್ಲಿಗೆ ಬಂದೆ ನೋಡಮ್ಮಾ..'  ಎಂದು  ಆಣೆ ಪ್ರಮಾಣಗಳ ಸಾಕ್ಷಿಗಳೊಂದಿಗೆ ನಂಬುವಂತೆ ಮಾತನಾಡುವ ಚಾಕಚಕ್ಯತೆ ಹೊಂದಿದವರು ಅವರು. ಅಂತವರು ಬಂದು ಹೋದರೆ ತ್ಸುನಾಮಿಗಿಂತ ಹೆಚ್ಚಿನ ಹಾನಿ ನಿಶ್ಚಿತ ಎಂದು ತಿಳಿದ ನಾನು 'ಅಯ್ಯೋ ಕಾಶತ್ತೇ.. ಇಲ್ಲಿ ಎಲ್ರಿಗೂ ಜೋರು ಜ್ವರ ಕಣ್ರೀ..ನೀವು ಬರ್ತೀನಿ ಅಂದಿದ್ದು ತುಂಬಾನೇ ಕುಶಿ  ಆಯ್ತು ನೋಡಿ. ಕಷ್ಟಕ್ಕಾಗಬೇಕಾದರೆ ನಮ್ಮವರೇ ಆಗ್ಬೇಕು ಅಲ್ವಾ.. ಬನ್ನಿ .. ಎಲ್ರೂ ಹಾಸಿಗೆ ಹಿಡಿದಿದ್ದೀವಿ..  ಅದೇನೋ ಚಿಕೂನ್ ಗುನ್ಯಾ ಅಂತೆ. ಬಂದು ನಮ್ಗೆಲ್ಲ ಒಂದಿಷ್ಟು ಗಂಜೀನಾದ್ರು ಬೇಯ್ಸಿ  ಹಾಕಿ' ಎಂದೆ.  ಕಾಶತ್ತೆ ಬಾರದೇ ಈಗೊಂದೆರಡು ವರ್ಷದ ಮೇಲಾಯಿತು. ಇದೂ ಜ್ವರದ ಹಿರಿಮೆಯೇ ತಾನೇ.. 

ಇದಿಷ್ಟೇ ಆಗಿದ್ದರೆ ಇದೇನು ಮಹಾ ಅನ್ನಬಹುದಿತ್ತು .. ಆದರೆ ನನ್ನ ಜ್ವರದ ಮಹಿಮೆ ಇಷ್ಟಕ್ಕೆ ನಿಲ್ಲುವುದಿಲ್ಲ. 

ಅದೇನಾಯ್ತೋ ಗೊತ್ತಿಲ್ಲ ದೇವರು ದಿಂಡರನ್ನೆಲ್ಲ ಲೆಕ್ಕಕ್ಕಿಂತ ಹೆಚ್ಚು ಪಕ್ಕಕ್ಕೆ ಸೇರಿಸಿಕೊಳ್ಳದ ನಮ್ಮಜ್ಜ ಅಜ್ಜಿಗೆ ಇದ್ದಕ್ಕಿದ್ದಂತೆ ಕಾಶಿ ಯಾತ್ರೆಯ ಹಂಬಲ ಸುರು ಆಯಿತು. ಯಾರ್ಯಾರನ್ನೋ ಕೇಳಿ ಅಲ್ಲಿಗೆ ಹೋಗುವ ಬಸ್ಸಿನ ಹೆಸರು ದಾರಿಗಳನ್ನೆಲ್ಲ ಗುರುತು ಹಾಕಿಕೊಂಡಿದ್ದರು. ಆಗೆಲ್ಲ ಈಗಿನಂತೆ ಕ್ಷಣಾರ್ಧದಲ್ಲಿ ಸುದ್ಧಿಗಳು ಒಂದೂರಿಂದ ಇನ್ನೊಂದೂರಿಗೆ ಹೋಗುತ್ತಿರಲಿಲ್ಲ. ನಮಗೆ ಆ ಸುದ್ಧಿಯ ವಿವರದ ಕಾಗದ ಬಂದು ತಲುಪುವ ಮೊದಲೇ ನಾವು ರಜೆಗೆ ಅಜ್ಜನ ಮನೆಗೆ ಹೋಗುವುದು ಎಂದು ಹೊರಟೇ ಬಿಟ್ಟಿದ್ದೆವು. ನಮ್ಮನ್ನು ಕಂಡು ಅಜ್ಜ ಅಜ್ಜಿಗೆ ಕುಶಿ  ಆಗಿ ಕಾಶಿ ಯಾತ್ರೆಗೆ ನಾವೂ ಅವರೊಡನೆ ಹೋಗುವುದೆಂದಾಯಿತು.

ನಾಳೆ ಹೊರಡುವ ದಿನ ಎಂದಾದರೆ ಅದರ ಮೊದಲಿನ ದಿನವೇ ನನ್ನ ಪ್ರೀತಿಯ ಜ್ವರ ನಾನು ಬರ್ತೀನಿ ಅಂತ ನನ್ನನ್ನು ಹಿಡಿದುಕೊಂಡಿತು. ಅದೂ ಸಾಮಾನ್ಯ ಜ್ವರ ಅಲ್ಲ. ಮೈಯೆಲ್ಲ ಕೆಂಡದಂತೆ ಸುಡುತ್ತಿತ್ತು. ಹೀಗಾಗಿ ನನ್ನನ್ನು ಬಿಟ್ಟು ಹೋಗುವಂತೆಯೂ ಇಲ್ಲ ಕರೆದುಕೊಂಡು ಹೋಗುವಂತೆಯೂ ಇಲ್ಲ ಎಂಬ ಸಂದಿಗ್ದ ಎದುರಾಯಿತು. ಅಜ್ಜಿ ಆಗ ' ಎಂತ ಯಾತ್ರೆಯೂ ಬೇಡ, ಕೂಸಿಂಗೆ ಮೊದಲು ಉಷಾರಾಗಲಿ, ಮತ್ತೆಲ್ಲ ಹೋಪಲ್ಲಿಗೆ ಹೋಪದು" ಎಂದು ತೀರ್ಪಿತ್ತು ಕಟ್ಟಿದ್ದ ಗಂಟು ಮೂಟೆ ಬಿಚ್ಚಿ ನನ್ನ ಸೇವೆಗೆ ನಿಂತರು. ಒಂದೆರಡು ದಿನದಲ್ಲಿ ಜ್ವರ ಕಡಿಮೆಯಾಯಿತಾದರೂ ಪೂರ್ತಿ ಹೋಗಿರಲಿಲ್ಲ. ಅಜ್ಜ ಡಾಕ್ಟರ್ ಹತ್ತಿರ ಮದ್ದಿಗೆ ಹೋಗಿದ್ದರು. ಬರುವಾಗ ತಂದ ಸುದ್ಧಿ ಹೆದರಿಕೆ ಹುಟ್ಟಿಸುವಂತಿತ್ತು. ಅದೇನೆಂದರೆ ಆ ದಿನ ಕಾಶಿ ಯಾತ್ರೆಗೆ ನಾವೆಲ್ಲ ಹೋಗಬೇಕಿದ್ದ ಬಸ್ಸು ಪಲ್ಟಿ ಹೊಡೆದು ಕೆಲವರು ಸತ್ತು ಹಲವರಿಗೆ ಗಂಭೀರ ಏಟಾಗಿತ್ತು.ಅಲ್ಲಿಯವರೆಗೆ ನನ್ನ ಜ್ವರಕ್ಕೆ ಬಯ್ಯುತ್ತಿದ್ದ ಎಲ್ಲರೂ ಜೀವ ಉಳಿಸಿದ  ಅದನ್ನು ಹೊಗಳಿದ್ದೇ ಹೊಗಳಿದ್ದು. 

ಇಂತಿರ್ಪ  ಜ್ವರ ಬಂದರೆ ಬೇಡ ಅನ್ನೋರು ಉಂಟೇ ನೀವೇ ಹೇಳಿ. ಅಯ್ಯೋ ಇದು ಜ್ವರ ಏರಿ ಹೇಳ್ತಾ ಇರೋ ಬಡಬಡಿಕೆ ಅಲ್ಲಾ.. ನನ್ನ ನಂಬಿ ಪ್ಲೀಸ್..