Pages

Total Visitors

Monday, July 30, 2012

ನಗು..










ಮೊನಾಲಿಸಾಳ ಚಿತ್ರಪಟವನ್ನು ನೋಡ್ತಾ ಇದ್ದೆ. ನಿಗೂಢ ನಗುವಿದೆಯಂತೆ ಅವಳ ತುಟಿಗಳಲ್ಲಿ. ಆದ್ರೆ ಅದನ್ನ ತಿರುಗಾ ಮುರುಗಾ ಮಾಡಿ ನೋಡಿದರೂ ನಂಗೆ ಯಾವ ನಗುವೂ ಕಾಣಿಸಲಿಲ್ಲ. ಅರೆ ಇದೆಂತಾ ಹೇಳಿಕೆ! ಕಲೆಗೆ ಅಪಚಾರವಾಯಿತು ಅಂತ ಕೊಂಕೆತ್ತಬೇಡಿ. ನಾನು ನಗುವನ್ನು ಗುರುತಿಸುವುದು ಹೇಗಪ್ಪಾ ಅಂದ್ರೆ, ಬಾಯಲ್ಲಿರೊ ಅಷ್ಟೂ ಹಲ್ಲುಗಳು ಹೊರಗಿಣುಕಿ ತಮ್ಮ ಅಂಕು ಡೊಂಕುಗಳನ್ನು ಪ್ರದರ್ಶಿಸುತ್ತಿರಬೇಕು. ಸರಿಯಾಗಿ ಹೇಳ್ಬೇಕು ಅಂದ್ರೆ  ನಮ್ಮ ಸದಾನಂದ ಗೌಡರ ಹಾಗೆ. ಮುಖ್ಯ ಮಂತ್ರಿ ಪಟ್ಟವನ್ನು ಕಳೆದುಕೊಂಡಾಗಲೂ ಸಹ ಅವರು ತಮ್ಮ ಸಾವಿರ ವ್ಯಾಟಿನ ನಗೆಯನ್ನು ಕಳೆದುಕೊಳ್ಳಲಿಲ್ಲ. ಅದೇನು ವಿನೋದವೋ ವಿಷಾದವೋ ಒಂದೂ ತಿಳಿಯೋಲ್ಲ.ಅವರ ನಗು ಒಂತರಾ  ಗುಂಡೂರಾಯರ ಕೂಲಿಂಗ್ ಗ್ಲಾಸ್ ಇದ್ದ ಹಾಗೆ. ಅದರ ಹಿಂದಿನ ಭಾವನೆಗಳನ್ನು ಓದುವುದೇ ಕಷ್ಟ.ಅದೇನೇ ಇರಲಿ. ಇವರಂತೂ 'ನಗು ನಗುತಾ ನಲೀ ನಲೀ..ಏನೇ ಆಗಲೀ' ಎಂಬ ಸೂತ್ರವನ್ನು ಕಟ್ಟು ನಿಟ್ಟಾಗಿ ಅನುಸರಿಸುವವರು ಅನ್ನುವುದಂತೂ ಸತ್ಯ.

ಈ ನಗೆಯೇ ಹಾಗೆ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಾಗಿ ಪ್ರಕಟಗೊಳ್ಳುತ್ತದೆ. ಇದಕ್ಕೆ ಹಲವು ರೂಪ ಹಲವು ಬಗೆ. ನೋಡುವ ನೋಟಗಳಲ್ಲಿ ಅಥವಾ ಕೇಳುವ ನುಡಿಗಳಲ್ಲಿ ಇರುವ ನಗೆ ಕೊಂಡಿಗಳನ್ನು ನಮ್ಮ  ಮೆದುಳು ಗ್ರಹಿಸಿ, ಸ್ನಾಯುಗಳನ್ನು ಸಡಿಲಿಸಿ ತುಟಿ ಬಿರಿಯುವಂತೆ ಮಾಡುತ್ತದೆ. ವಿಮರ್ಶಕರು ಇದನ್ನು ಸುಲಭವಾಗಿ ನಾಲ್ಕು ರೂಪದಲ್ಲಿ ನೋಡುತ್ತಾರೆ. ಮೃದು ಹಾಸ, ಮಂದಹಾಸ, ಅಟ್ಟಹಾಸ, ವಿಕಟ.. ಅವರ ಈ ಸುಲಭ ರೂಪ  ನಮಗೆ ಅರ್ಥವಾಗುವಂತಹ ಭಾಷೆಯಲ್ಲಿಲ್ಲ ಅನ್ಸುತ್ತೆ ಅಲ್ವಾ.. 

ಆದರೆ ಕವಿಗಳು ನಗೆಯ ಬಗೆಗೆ ಬರೆದು ಹಾಡಿ ಹೊಗಳಿದಷ್ಟು ಬೇರೆ ಯಾರೂ ಅದರ ಬಳಕೆ ಮಾಡಿಕೊಂಡಿಲ್ಲ. 'ಮುನಿಸು ತರವೇ ಮುಗುದೇ. ಹಿತವಾಗಿ ನಗಲೂ ಬಾರದೇ' ಎಂದು ಅವರು ಗೋಗರೆದಾಗ ಯಾವ ಹುಡುಗಿಯಾದರೂ ಸಿಟ್ಟನ್ನು ದೂರ ಅಟ್ಟಿ ನಗೆ ಮುಗುಳು ಅರಳಿಸುತ್ತಾಳೆ. ಕವಿ ಕಾಳಿದಾಸ ಹೆಣ್ಣಿನ ನಗೆಯನ್ನು ಹೇಗೆ ವರ್ಣಿಸುತ್ತಾನೆ ನೋಡಿ.
'ಮಾಣಿಕ್ಯದ ಮೇಲೊಂದು ಮಲ್ಲಿಗೆ,ಹವಳದ ಮೇಲೊಂದು ಮುತ್ತು
ಅವಳ ಬೆಳ್ನಗೆ ಚೆಂದುಟಿಯ ಮೇಲೆ ಚಂದಾಗಿತ್ತು'.
ಹೀಗೆ ಹೊಗಳಿಸಿಕೊಂಡಾಕೆ ನಗದೆ  ಸುಮ್ಮನಿರಲು ಸಾಧ್ಯವೇ?
ಇನ್ನು ಜನಪದರಂತೂ,
'ಮಕ್ಕಳಾಟವು ಚೆಂದ ಮತ್ತೆ ಯೌವನ ಚೆಂದ
ಮುಪ್ಪಿನಲಿ ಚೆಂದ ನರೆಗಡ್ಡ ಜಗದೊಳಗೆ
ಎತ್ತಾ ನೋಡಿದರೂ ನಗು ಚೆಂದ'
ಎಂದು ನಗೆಯನ್ನು ಎಲ್ಲರ ಮೊಗದಲ್ಲೂ ಕಾಣಬಯಸುತ್ತಾರೆ. 

ಹಾಗಂತ ಯಾವಾಗೆಂದರೆ ಆಗ, ಎಲ್ಲೆಂದರಲ್ಲಿ ನಗಲು ಸಾಧ್ಯವೇ? ಇಲ್ಲ ತಾನೇ.. ನಮ್ಮ ಪುರಾಣವನ್ನೇ ತೆಗೆದುಕೊಳ್ಳಿ. ಅಂದು ಮಯ ನಿರ್ಮಿಸಿದ ಸುಂದರ ಅರಮನೆಯೊಳಗೆ ಬಾಗಿಲು ಎಂದು ತಿಳಿದು ಗೋಡೆಗೆ ತಲೆ ಕುಟ್ಟಿಸಿಕೊಂಡು, ಗೋಡೆ ಎಂದು ತಿಳಿದಲ್ಲಿ ಖಾಲೀ ಜಾಗ ಕಂಡು, ನೀರಿಲ್ಲದಲ್ಲಿ ಭ್ರಮಿಸಿ ಉಟ್ಟ ಬಟ್ಟೆಯನ್ನೆತ್ತಿ ನಡೆದ ಕೌರವನನ್ನು ಕಂಡು ' ಇಷ್ಟೂ ತಿಳಿಯದೇನು ನಿಮಗೆ ಬಾವಾ' ಎಂದು ಗೊಳ್ಳನೆ ನಕ್ಕ ದ್ರೌಪತಿಯ ನಗು ಮಹಾಭಾರತ ಯುದ್ಧವನ್ನೇ ನಡೆಸಿಬಿಟ್ಟಿತು. ಆದರೆ ಕೌರವರು ವಿನಾಶವನ್ನೇ ಬಯಸಿದವರಾಗಿದ್ದರು. ಅವರ ಅವನತಿ ಸುಮ್ಮನೇ ಹೆಣ್ಣಿನ ಸುಂದರ ನಗೆಯ ಮೇಲೆ ಹೊರಿಸಿದ ಮಿಥ್ಯಾರೋಪ ಅಂತ ಅನ್ನಿಸುತ್ತೆ ಅಲ್ವಾ.. 

ಶ್ರೀ ಕೃಷ್ಣನ ಮೋಹಕ ನಗೆಗೆ ಮಾರು ಹೋಗಿ ದುಂಬಿಗಳು ಅವನ ಮುಖಾರವಿಂದ ದವನ್ನು  ಅರಳಿ ನಿಂತ ಸುಮವೆಂದು ತಿಳಿದು ಸುತ್ತ ಮುತ್ತ  ಸುಳಿದಾಡುತ್ತಿದ್ದವಂತೆ. ಹರಿ ಕಥೆಯೊಂದರಲ್ಲಿ ಇದನ್ನು ಕೇಳಿದ ನನ್ನ ಪತಿರಾಯರು 'ಅವನ ನಗೆಗಿಂತ ನನ್ನ ನಗೆಯೇ ಪವರ್ ಫುಲ್ .. ನಾನು ಅವತ್ತು ಜೋರಾಗಿ ನಕ್ಕಾಗ ಇಡೀ ಹೆಜ್ಜೇನಿನ ಗೂಡೇ ನನ್ನ ಹಿಂದೆ  ಬಂದಿತ್ತು. ಅದರಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ನುಗ್ಗಿದರೂ ಆಗ್ಲಿಲ್ಲ. ಬೇಡಪ್ಪಾ ಈ ನಗೆಯ ಸಹವಾಸ ಎಂದು ಹೆಜ್ಜೇನಿನಿಂದ ಕುಟುಕಿಸಿಕೊಂಡದ್ದನ್ನು ನೆನೆಸಿಕೊಂಡು ಇನ್ನಷ್ಟು ಮುಖ ಊದಿಸಿ ಕುಳಿತುಕೊಂಡರು. 

ನಾವೂ ಅಷ್ಟೇ ಈ ಪುರಾಣ ಕಾಲದವರ ನಗೆಯ ಬಗೆಯನ್ನು ಬಿಟ್ಟು ವರ್ತಮಾನಕ್ಕೆ ಬರೋಣ. ಈಗೆಲ್ಲಿದೆ ನಗಕ್ಕೆ ಟೈಮು ಅಂತ ಮೂಗು ಮುರೀತಿದ್ದೀರಾ.. ಅದೂ ಹೌದು .. ಒಬ್ಬರ ಮುಖ ಇನ್ನೊಬ್ಬರಿಗೆ ನೋಡಲು ಟೈಮ್ ಇದ್ರೆ ತಾನೇ ನಗೋದು?!.. ಕಷ್ಟ ಪಟ್ಟು ನಕ್ಕರೂ, ಇವರು ನಗ್ದೇ ಇದ್ರೇ ಚೆನ್ನಾಗಿತ್ತು ಅನ್ನಿಸುವಂತಿರುತ್ತದೆ.  ಕೆಲವರಂತೂ ನಗ ಬಾರದ್ದಕ್ಕೆಲ್ಲಾ ನಕ್ಕು ಇರಿಸು ಮುರಿಸು ಉಂಟು ಮಾಡುತ್ತಾರೆ. ಇನ್ನು ಕೆಲವು ಬಾರಿ ಸೌಜನ್ಯಕ್ಕೆಂದು ನಕ್ಕು ಟೀಕೆಗೆ ಈಡಾಗುವ ಸಂದರ್ಭಗಳೂ ಇವೆ. ಬಸ್ ನಲ್ಲಿ ಟಿಕೆಟ್ ಕೊಳ್ಳುವಾಗ 'ಚಿಲ್ರೆ ಕೇಳಿದ್ರೆ ನಗ್ತೀರಲ್ರೀ' ಎಂದು ಒರಟಾಗಿ ನುಡಿಯುವ ಕಂಡಕ್ಟರಿನ ತಲೆಯ ಮೇಲೆ ಒಂದೇಟು ಹಾಕ್ಬೇಕು ಅಂತ ನಿಮಗೂ ಅನ್ನಿಸಿರಬಹುದು.

ಅಂದ ಹಾಗೆ ನಗು ಅನ್ನೊದು ಸಹಜವಾಗಿ ಬಂದ್ರೇನೆ ಚೆನ್ನ. ಕೆಲವರಂತೂ ನಿಮಗೊಂದು ಜೋಕ್ ಹೇಳ್ತೀನಿ ಅಂತ ತಲೆ ತಿನ್ತಾ ಇರ್ತಾರೆ. ಕೇಳಿದವರಿಗೆ ಮೊದಲಿಗೆ ನಗಬೇಕಿತ್ತೋ ಅಲ್ಲ ಕೊನೆಗೆ ನಗ ಬೇಕಿತ್ತೋ ಅನ್ನೋ ಗೊಂದಲ ಹುಟ್ಟಿಸುವಂತಿರುತ್ತೆ. ಅಲ್ಲ ಇಷ್ಟೊಳ್ಳೆ ಜೋಕ್ ಹೇಳಿದ್ರೂ ನಗಲೇ ಇಲ್ಲ ಅಂತ ಮುನಿಸಿಕೊಂಡು ಬಿಡ್ತಾರೆ. ಅಂತೋರಿಗೆ ನೀವು ಎಲ್ಲಿ ನಗಬೇಕು ಅಂತ ಮೊದಲೆ ಹೇಳಿ ಬಿಡಪ್ಪಾ ನಕ್ ಬಿಡ್ತೀನಿ ಅನ್ಬೇಕಷ್ಟೆಯೋ ಏನೋ..!! 
ಇನ್ನು ಕೆಲವೊಮ್ಮೆ ತುಂಬಾ ಬೇಸರದಲ್ಲಿರೋ ಗೆಳೆಯರನ್ನು ಕೋಡಂಗಿಯಂತೆ ನಟಿಸಿ ನಗಿಸಲು ಪ್ರಯತ್ನಿಸಿ  ವಿಫಲರಾದಾಗ, ' ಏನಯ್ಯಾ ನಗೋದಿಕ್ಕೂ ನಿಂಗೆ ದುಡ್ಡು ಕೊಡ್ಬೇಕಾ' ಅಂತ ರೇಗುತ್ತೇವೆ. ಅಂತಾದ್ರಲ್ಲಿ ಈಗ ನಾವೇ ದುಡ್ಡು ಕೊಟ್ಟು ನಗ್ತಿದ್ದೀವಿ  ಅಂದ್ರೆ ಎಂತಾ ಕಾಲ ಬಂದೋಯ್ತು ನೋಡಿ!! ಕ್ಷಮಿಸಿ, ನಾನು ಹೇಳುತ್ತಿರುವುದು ನಮ್ಮ ನಗೆ ನಾಟಕಗಳಿಗೋ, ಚಲನಚಿತ್ರಗಳಿಗೋ ದುಡ್ಡು ಕೊಟ್ಟು ಟಿಕೆಟ್ ತೆಗೊಂಡು ಎಲ್ಲಿ ನಗ್ಬೇಕು ಅಂತ ಅರ್ಥ ಆಗದೆ ಅತ್ತುಬಿಡುವಂತಾಗುವುದರ ಬಗ್ಗೆ ಅಲ್ಲ. 

ಗಲ್ಲಿ ಗಲ್ಲಿಗಳಲ್ಲಿ ನಿಮ್ಮನ್ನು ಶತಾಯಃ  ಗತಾಯಃ  ನಗಿಸಿಯೇ ಸಿದ್ಧ ಅಂತ ತಲೆಯೆತ್ತಿಕೊಂಡಿರುವ ಲಾಫಿಂಗ್ ಕ್ಲಬ್ಬುಗಳ ಬಗ್ಗೆ. ಡಿ ವಿ  ಜಿ ಯವರು 'ನಗುವು ಸಹಜದ ಧರ್ಮ' ಅಂದರೆ, ಇವರುಗಳು ಸಹಜವಾಗಿಯೇ ನಗು ಬರಬೇಕು ಅಂತೇನಿಲ್ಲ. ನೀವಾಗಿಯೇ ಬಾಯಗಲಿಸಿ ಸ್ವರ ಹೊರಡಿಸಿ ಸುಮ್ಮ ಸುಮ್ಮನೆ ನಕ್ಕರೂ ಸಾಕು.. ಇದೂ ಕೂಡಾ ಯಾಂತ್ರಿಕವಾಗಿ ಮಾಡುವ ವ್ಯಾಯಾಮದಂತೆ ಅಂತ ಹೇಳ್ತಾರೆ. ಯಾವುದೇ ಉಲ್ಲಾಸ ಉತ್ಸಾಹಗಳಿಲ್ಲದಿದ್ದರೂ ಅವರು ಹೇಳಿದ ಎಲ್ಲಾ ರೀತಿಯಲ್ಲೂ ನಕ್ಕು ತೋರಿಸಬೇಕು. ಮತ್ತೆ ಮನೆಗೆ ಮರಳುವಾಗ ಗಡಿಗೆ ಗಾತ್ರದ ಮುಖ ಹೊತ್ತರಾಯಿತು. 

ಇತ್ತೀಚೆಗೆ ಎಲ್ಲೋ ಇದೇ ರೀತಿಯ ಲಾಫಿಂಗ್ ಕ್ಲಬ್ಬಿನವರು ಎಬ್ಬಿಸುವ ನಗೆ ಕೋಲಾಹಲದಿಂದಾಗಿ ನೆರೆಕರೆಯವರು ಸಿಟ್ಟುಗೊಂಡು ಪೋಲೀಸರಿಗೆ ಕರೆ ಕಳುಹಿಸಿದರಂತೆ. ವಿಷಯ ನ್ಯಾಯಾಲಯದ ಮೆಟ್ಟಲೇರಿ, ನೀವು ಹೀಗೆಲ್ಲ ನಕ್ಕು ಬೇರೆಯವರೆದುರಿಗೆ ಹಗುರಾಗಬೇಡಿ ಎಂದು ತೀರ್ಪಿತ್ತಿದೆಯಂತೆ. ಇದನ್ನು ಕೇಳಿದ ಲಾಫಿಂಗ್ ಕ್ಲಬ್ ಓನರ್ ಅಳುತ್ತಿದ್ದರೆ, ಕೇಸ್ ಗೆದ್ದವರು ಮುಸಿ ಮುಸಿ ನಗುತ್ತಿದ್ದಾರಂತೆ. ಏನ್ ಕಾಲ ಬಂತು ನೋಡಿ.. ನಗಕ್ಕೂ ಪರ್ಮಿಟ್ಟಾ..??
ಬೇರೆ ಯಾವ ಪ್ರಾಣಿವರ್ಗಕ್ಕೂ ಇರದ ಮನುಷ್ಯನಿಗೆ ಮಾತ್ರವೇ ಇರುವ ವಿಶಿಷ್ಟ ಗುಣ ಅಂದರೆ ನಗು. ಮಗು ಹುಟ್ಟಿ ಸ್ವಲ್ಪವೇ ಹೊತ್ತಿನಲ್ಲಿ ತನ್ನಷ್ಟಕ್ಕೆ ತಾನೇ ಕನಸಿನಲ್ಲೆಂಬಂತೆ ಬೊಚ್ಚು ಬಾಯಿ  ಬಿಟ್ಟು ನಗುವುದನ್ನು ನೋಡಿ ಮೈ ಮರೆಯದವರಿಲ್ಲ. ತಿಂಗಳಾಗುತ್ತಿದ್ದಂತೆಯೇ ಗುರುತು ಹಿಡಿದು ನಗತೊಡಗುತ್ತದೆ.ಬೆಳೆಯುತ್ತಿದ್ದಂತೇ ಮುಗ್ದತೆಯ ಪರೆ ಕಳಚುವ ಮಗುವಿಗೆ ನಗಲೂ ಕಟ್ಟು ಪಾಡುಗಳು.

ಮೀಸೆ ಮೂಡುತ್ತಿರುವ ಹುಡುಗರಂತೂ ಹುಡುಗಿಯರ ಕಡೆಗೆ ನೋಡಿ ಸೌಹಾರ್ಧ ನಗು ನಗುವಂತಿಲ್ಲ. 'ನೋಡೇ ಅವ್ನು ನನ್ನ ನೋಡಿ ಕೋತಿ ತರ ಹಲ್ಕಿರೀತಾನೆ' ಅಂತ ಹುಡುಗಿ ಅವನನ್ನು ಏಕಾ ಏಕಿ ಅವನ ಪೂರ್ವಜರ ಕಾಲಕ್ಕೆ ಎತ್ತಂಗಡಿ ಮಾಡಿ ಬಿಡುತ್ತಾಳೆ. ಇನ್ನು ಹುಡುಗಿಯರು ನಕ್ಕರಂತೂ ಕೇಳಲೇ ಬೇಡಿ.ಮನೆಯಲ್ಲಿರುವ ಅಮ್ಮ ಅಜ್ಜಿಯಂದಿರ ಸಹಿತ ನೆರೆ ಹೊರೆಗಳೂ ಸೇರಿಕೊಂಡು ' ಅದೇನೇ ಅದು ಪಿಸಿ ಪಿಸಿ ಅಂತ ಚೆಲ್ಲು ಚೆಲ್ಲಾಗಿ ಎಲ್ರ ಜೊತೆಗೆ ನಗೋದು, ಸ್ವಲ್ಪ ಗಂಭೀರವಾಗಿರೋದನ್ನು ಕಲ್ತುಕೋ' ಎಂದು ತಲೆಯ ಮೇಲೆ ಮೊಟಕುತ್ತಾರೆ. 

ಹೀಗಾಗಿಯೋ ಏನೋ ಕೆಲವರಂತೂ ನಗೆಯನ್ನು 'ಬ್ಯಾಂಕ್ ಡಿಪಾಸಿಟ್' ಎಂದೇ ತಿಳಿದಂತಿರುತ್ತಾರೆ. ಖರ್ಚು ಮಾಡಲು ಹತ್ತಾರು ಬಾರಿ ಯೋಚಿಸುತ್ತಾರೆ. ಹಾಸ್ಯಭರಿತ ಕಾರ್ಯಕ್ರಮ ನೋಡುವಾಗಲೋ, ಬರಹಗಳನ್ನು ಓದುವಾಗಲೋ ಇವರ ಮುಖ ಗಂಭೀರವಾಗಿದ್ದು ನಗುತ್ತಿರುವ ನಮ್ಮ ಬಗ್ಗೆ ನಮಗೇ ಅನುಮಾನ ಉಂಟು ಮಾಡುತ್ತದೆ. 

ಇಷ್ಟೆಲ್ಲಾ ಅಡೆ ತಡೆಗಳಿದ್ದರೂ ಒಳಗೆ ಹುಟ್ಟಿದ ನಗು ಗುಪ್ತಗಾಮಿನಿಯಾಗದೇ, ತುಟಿಯ ಮೇಲೆ ಪ್ರಕಟವಾಗಿ ಎದುರಿರುವವರನ್ನೂ ತನ್ನ ಪ್ರವಾಹಕ್ಕೆಳೆದುಕೊಂಡು ಮನಸ್ಸನ್ನು ಆನಂದಸಾಗರದೆಡೆಗೆ ಪ್ರವಹಿಸುವಂತೆ ಮಾಡುತ್ತದೆ. ಈ ನಗು ಎಂಬ ಅಮೂಲ್ಯ ಸಂಪತ್ತು ಇನ್ನೊಬ್ಬರಿಗೆ ಹಂಚಿದಷ್ಟೂ ಅದರ ಭಂಡಾರದ ಗಾತ್ರ ಸ್ವಿಸ್ ಬ್ಯಾಂಕಿನಲ್ಲಿರುವ ನಮ್ಮ ರಾಜಕಾರಿಣಿಗಳ ಹಣದಂತೆ ಹೆಚ್ಚುತ್ತಲೇ ಹೋಗುತ್ತದೆ. ಹೀಗಾಗಿ ನೀವು ಚೌಕಾಸಿ ಮಾಡದೇ ನಗಬೇಕೆನಿಸಿದಾಗಲೆಲ್ಲಾ ಮನಸಾರೆ  ನಕ್ಕು ಬಿಡಿ ಆಗದೇ..!! 





Tuesday, July 24, 2012

ತಾನೊಂದು ಬಗೆದರೆ..




'ಶಾಲಿನಿ ಬೇಗ ರೆಡಿ ಆಗು ಮತ್ತೆ ಲೇಟ್ ಆದ್ರೆ ಕಷ್ಟ'  ಅಂತ ಅವಸರ ಮಾಡಿದ ದಿವಾಕರ.

'ಬಂದೆ ಇರಿ ಒಂದು ನಿಮಿಷ..' ಎಂದು ಮತ್ತೊಮ್ಮೆ ಕನ್ನಡಿಯ ಕಡೆಗೆ ನೋಡಿ ತನ್ನ ಪರ್ಸ್ ಕೈಯಲ್ಲಿ ಹಿಡಿದು ತನ್ನನ್ನೇ ನೋಡುತ್ತಾ ನಿಂತ ಅತ್ತೆಯ ಕಡೆಗೆ ತಿರುಗಿ ನಸು ನಗು ಬೀರಿದಳು. ಬಾಗಿಲು ಹಾಕ್ಕೊಳ್ಳಿ ಜಾಗ್ರತೆ ಎಂದು ಹೇಳಲು ಮರೆಯಲಿಲ್ಲ.

'ಹುಂ.. ! ಸರಿ ನಾನಿರೋದು ಅದಕ್ಕೇ ಅಲ್ವೇ..' ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತಾ ಗಿರಿಜಮ್ಮ ಅವರು ಹೋಗುವುದನ್ನೇ ನೋಡುತ್ತಾ ನಿಂತರು.

ದಿವಾಕರ ಒಬ್ಬನೇ ಮಗ . ಕಳೆದ ವರ್ಷವಷ್ಟೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿತ್ತು ಬಾಳು. ಶಾಲಿನಿ ಅಚ್ಚುಮೆಚ್ಚಿನ ಸೊಸೆ. ಅವನೇ ಇಷ್ಟಪಟ್ಟು ಮದುವೆಯಾಗಿದ್ದರೂ ಎಲ್ಲದರಲ್ಲೂ ಹೊಂದಿಕೊಂಡಿದ್ದಳು. ಆದರೆ ಈ ಕೆಲವು ದಿನಗಳಿಂದ ಗಿರಿಜಮ್ಮನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಅದೂ ಮೊನ್ನೆ ಅವರ ಮಾತುಗಳು ಕಿವಿಗೆ ಬೀಳದೆ ಹೋಗಿದ್ದರೆ ಇನ್ನೂ ಸೊಸೆ ಒಳ್ಳೆಯವಳು ಎಂಬ ಭ್ರಮೆಯಲ್ಲೇ ಇರುತ್ತಿದ್ದೆನೇನೋ .. ಎಂದು ತಲೆಕೊಡವಿಕೊಂಡರು.

ಹೊರಗೆ ಬಿಸಿಲಿಗೆ ಹಾಕಿದ್ದ ಬಟ್ಟೆ ಗಾಳಿಗೆ ಕೆಳಗೆ ಬಿದ್ದಿತ್ತು. ಅದನ್ನೆತ್ತಿ ಮಡಚಿ ಒಳಗಿಡಲು ಅವರ ಕೋಣೆಯ ಬದಿಯಲ್ಲೇ ಸಾಗುತ್ತಿದ್ದಾಗ ಕಿವಿಗೆ ಬಿದ್ದ ಮಾತಾದರು ಎಂತಹದು..!

'ನೋಡ್ರೀ ಎಷ್ಟು ದಿನಾಂತ ಇದನ್ನು ನೋಡೋದು..ಆನಂದಾಶ್ರಮದಲ್ಲಿ ಹೋಗಿ ವಿಚಾರಿಸಬಾರದಾ..? ಯಾರೋ ಏನೋ ತಿಳ್ಕೋಳ್ತಾರಂತ ನಾವು ಜೀವನ ಮಾಡೋಕಾಗುತ್ತಾ? ನಮ್ಗೆ ಸರಿ ಅನ್ನಿಸಿದ್ರೆ ಆಯ್ತು.. ಇವತ್ತು ನೀವು ಅಲ್ಲಿ ಮಾತಾಡ್ಲೇ ಬೇಕು..'

ಈ ಮಾತಿಗೆ ದಿವಾಕರ ಏನು ಹೇಳಿದನೋ ..ನಿಂತಲ್ಲೇ ತಲೆ ತಿರುಗಿದಂತಾಗಿ  ಕಣ್ಣು ಕತ್ತಲಿಡುವುದು ಅರಿವಾದಾಗ  ಪಕ್ಕನೆ ಕೋಣೆಯೊಳಕ್ಕೆ ನುಗ್ಗಿ ಸಾವರಿಸಿಕೊಳ್ಳುವಷ್ಟರಲ್ಲಿ ಅವರಿಬ್ಬರು ಕೆಲಸಕ್ಕೆ ಹೋಗಿ ಆಗಿತ್ತು.

 ಲೊಡ್ಡಾದ ಮರ ..ನಾನಾದರು ಇನ್ನು ಯಾರಿಗೆ ಬೇಕು.. ಆದರೆ ನನ್ನ ಪಾಡಿಗೆ ನಾನು ಈ ಮನೆಯೊಳಗೆ ಇರುವುದೂ ಬೇಡವಾಗಿದೆಯೇ ಇವರಿಗೆ?
ಇಡೀ ದಿನ ಅವರಿಬ್ಬರೂ ದುಡಿಯಲು ಹೊರಗೆ ಹೋಗುತ್ತಾರೆ. ಮನೆಯ ಎಲ್ಲಾ ಕೆಲ್ಸ ಮುಗಿಸಿ ಹೋಗುವ ಸೊಸೆ.. ಸ್ವಲ್ಪ ಕೆಲಸವೇನಾದರು ಇದ್ದರೆ ಹೊತ್ತಾದರು ಹೋಗಬಹುದೇನೋ? ಹೇಳಿದರೆ ನೀವು ಹಾಯಾಗಿ ಇರಿ ಎಂದು ಬಾಯಿ ಮುಚ್ಚಿಸುತ್ತಿದ್ದಳು.ಅಥವಾ ಅವಳು ಒಪ್ಪಿದರೂ ಮನಸ್ಸು ಕೆಲಸ ಮಾಡಲು ಪ್ರೇರೇಪಿಸುತ್ತಿತ್ತೇ ಹೊರತು ದೇಹ ಸಹಕರಿಸುತ್ತಿರಲಿಲ್ಲ.

ಅವಳಿಗೂ ಏನೂ ಮಾಡದೆ ಬಿಟ್ಟಿ ಅನ್ನ ತಿಂತಾರೆ ಅಂತ ಅನ್ನಿಸುತ್ತಿದೆಯೋ ಏನೋ.. ಆನಂದಾಶ್ರಮ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಸೇವಾಶ್ರಮ.ಮೊದಲೊಂದೆರಡು ಬಾರಿ ಯಾರನ್ನೋ ನೋಡಬೇಕು ಎಂದು ಹೋಗಿದ್ದ ನೆನಪು. ಆದರೆ ಅಲ್ಲಿನವರ ಶೂನ್ಯ ತುಂಬಿದ ನೋಟ ಹೆಚ್ಚು ಹೊತ್ತು ನನ್ನನ್ನು ಅಲ್ಲಿ ನಿಲ್ಲದಂತೆ ಮಾಡಿತ್ತು. ಈಗ ನನ್ನನ್ನು ಅಲ್ಲಿಗೆ ಮೆತ್ತಗೆ ಸಾಗಿಸುವ ಹುನ್ನಾರವೇ .. ?  ಈ ಮನೆಯ ಪ್ರತಿ ಕಲ್ಲು ನನ್ನ ಗಂಡನ ದುಡಿಮೆಯಿಂದ ಪೇರಿಸಿದ್ದು. ಈಗ ನಾನು ಈ ಮನೆಗೆ ಪರಕೀಯಳೇ..? ತಲೆ ಸಿಡಿಯತೊಡಗಿತು.
ಇಂದು ಅತಿ ತರಾತುರಿಯಲ್ಲಿ ಹೊರಟಿದ್ದು ಅಲ್ಲಿಗೆ ಎಂದು ತಿಳಿದಿದೆ. ಬರುವಾಗ ಇನ್ನೇನು ಕಾದಿದೆಯೋ..? ನನ್ನನ್ನು ಒಂದು ಮಾತು ಈ ಬಗ್ಗೆ ಕೇಳಬೇಕೆನ್ನಿಸಲಿಲ್ಲ ಇಬ್ಬರಿಗೂ.. ಕಣ್ಣೀರು ಕೆನ್ನೆಯ ಮೇಲೆ ಧಾರೆಯಾಗಿ ಹರಿಯುತ್ತಿದ್ದರೂ ಒರೆಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಗಿರಿಜಮ್ಮ.. ಅಲ್ಲೇ ಕುಸಿದು ಕುಳಿತರು.

ಎಷ್ಟು ಹೊತ್ತಿನ ಮೈ ಮರೆವೋ.. ಹೊರಗೆ ಬಾಗಿಲಿನ ಗಂಟೆ ಜೋರಾಗಿ ಸದ್ದು ಮಾಡುತ್ತಿತ್ತು. ಮೆಲ್ಲನೆದ್ದು ಬಾಗಿಲು ತೆರೆದರು. ಸೊಸೆ ಗಡಿಬಿಡಿಯಿಂದಲೇ ಒಳಬಂದಳು. ಕೈಯಲ್ಲಿ ಬಟ್ಟೆಯ ಪ್ಯಾಕೆಟ್.

ಓಹೋ.. ನನ್ನನ್ನು ಕಳಿಸುವಾಗ ಉಡೂಗೊರೆ.. ವ್ಯಂಗ್ಯ ನಗು ಮುಖದ ಮೇಲೆ ಹರಡಿತು.

 ಅಷ್ಟರಲ್ಲಿ ಶಾಲಿನಿ ' ಅತ್ತೇ .. ಇಲ್ಲಿ ನೋಡಿ..ಇದರಲ್ಲಿ  ನಿಮಗ್ಯಾವ ಸೀರೆ ಹಿಡಿಸುತ್ತೋ ಹೇಳಿ' ಎಂದಳು. ಬಾಯಿ ತೆರೆಯಬೇಕೆನ್ನುವುದರಲ್ಲೇ 'ಬಿಡಿ ನಾನೇ ಹೇಳ್ತೀನಿ. ನಿಮ್ಮ ಇಷ್ಟದ ಕಲರ್ ನಂಗೆ ಗೊತ್ತಿಲ್ವೇ.'.ಎಂದು ಕೈಯಲ್ಲಿ ಒಂದು ಸೀರೆ ತುರುಕಿದಳು. ನಿರಾಸಕ್ತಿಯಿಂದ ಅದನ್ನು ಹಿಡಿದು ಬಾರದೇ ಇರುವ ದಿವಾಕರನನ್ನು ವಿಚಾರಿಸಿದರು.


'ಅವರು ಈಗ ಬರ್ತಾರೆ ಆಟೋ ತೆಗೊಂಡು.. ಅವ್ರು ಬರೋದ್ರೊಳಗೆ ನೀವು ಈ ಸೀರೆ ಉಟ್ಟು ಸಿದ್ಧರಾಗಿ' ಎಂದು ನುಡಿದು ಒಳ ಹೋದವಳು  ಪುನಃ ತಡೆದು 'ಅತ್ತೇ.. ನಿಮಗೆ ತಿಳಿಸದೆ ನಾವು ಕೆಲವು ವಿಷಯಗಳನ್ನು ನಿಶ್ಚಯಿಸಿದ್ದೇವೆ... ನೀವು ಬೇಸರಿಸಬಾರದು' ಎಂದಳು.

ಎದೆಯೊಳಗೆ ಲಾವಾರಸ ಕುದಿಯುತ್ತಿದ್ದರೂ ತೋರಗೊಡದೆ  'ಏನಮ್ಮಾ 'ಎಂದರು.

'ಸ್ವಲ್ಪ ನಿಲ್ಲಿ ನಿಮಗೇ ಗೊತ್ತಾಗುತ್ತೆ.. ನೀವೀಗ ಮೊದಲು ಸೀರೆ ಉಟ್ಟು ಬನ್ನಿ' ಎಂದಳು ಶಾಲಿನಿ.
ಬಂದದ್ದು ಬರಲಿನ್ನು ಎಂದು ತಾವೇ ಬಿಗುವಾದರು.ಹರಕೆಯ ಕುರಿಗೂ ಅಲಂಕಾರ ಬೇಕು ತಾನೇ.. ಎಂದು ಮನದಲ್ಲೇ ಅಂದುಕೊಂಡರು.

ಕೈಯಲ್ಲಿ ಹಿಡಿದ ಸೀರೆಯ ಮಡಿಕೆ ಇನ್ನೂ ಬಿಚ್ಚಿರಲಿಲ್ಲ. ಅಷ್ಟರಲ್ಲಿ ಅಟೋ ನಿಂತ ಸದ್ದಾಯಿತು. ಸೀರೆ ಹಾಗೇ ಹಿಡಿದು ಹೊರಬಂದರು. ಶಾಲಿನಿಯೂ ಸಡಗರದಿಂದ ಹೊರಗೆ ನಡೆದಳು. ಹೊರಗೆ ನೋಡಿದರೆ ಯಾರೋ ಆಟೋದಿಂದ ಇಳಿಯುತ್ತಿದ್ದಾರೆ. ಯಾರಿರಬಹುದು..? ಇಷ್ಟು ದೂರದಿಂದ ಕಾಣುವುದೂ ಇಲ್ಲ.  ಕಣ್ಣುಜ್ಜಿಕೊಂಡು ಮತ್ತೊಮ್ಮೆ ನೋಡಿದರು. ಸಾವಿತ್ರಿಯಲ್ಲವೇ ಅವಳು..? ಇವಳ ಮಗ ಶಂಕರ ಮತ್ತು ದಿವಾಕರ ಆತ್ಮೀಯ ಗೆಳೆಯರು.  ದೂರದ ಡೆಲ್ಲಿಯಲ್ಲಿದ್ದ ಇವಳೆಲ್ಲಿಂದ ಬಂದಳು ಇಲ್ಲಿಗೆ.. ?

ಶಾಲಿನಿ ಸಂತಸದಿಂದ  ಸ್ವಾಗತ ಕೋರುತ್ತಿದ್ದರೆ, ನನ್ನ ಮುಖದಲ್ಲಿ ಅರಳಲು ಪ್ರಾರಂಭಿಸುತ್ತಿದ್ದ ನಗು ಒಳ ಬರುತ್ತಿರುವ  ದಿವಾಕರನನ್ನು ನೋಡಿ ಮುದುಡಿತು. ಅವನು  'ಅಮ್ಮಾ..  ಸ್ವಲ್ಪ ಇಲ್ಲಿ ಬರ್ತೀಯಾ' ಎಂದು ಹೆಗಲಿಗೆ ಕೈ ಹಾಕಿ ಆಚೆ ಕರೆದುಕೊಂಡು ಹೋದ.. ಬಂದವರೆದುರಿಗೆ ಅಮ್ಮನ ಮೇಲೆ ಭಾರೀ ಪ್ರೀತಿ ಅಂತ ತೋರಿಸಿಕೊಳ್ಳುವ ನಾಟಕ ಇದು ಎನ್ನಿಸಿ ಕಹಿಯಾಯಿತು.

 'ಅಮ್ಮಾ ನಾನು ಹೇಳುವುದನ್ನು ಗಮನವಿಟ್ಟು ಕೇಳು.. ಶಂಕರ  ಗೊತ್ತಲ್ವಾ ನಿಂಗೆ ..ಅವನು ಮಿಲಿಟ್ರಿ ಸೇವೆಯಲ್ಲಿ ತೀರಿಕೊಂಡು ಎರಡು ವರ್ಷ ಆಯ್ತಮ್ಮ..ಇವರು ಇತ್ತೀಚೆಗೆ ಇಲ್ಲಿನ ಆಶ್ರಮ ಸೇರಿದ್ದರು. ನಂಗೆ ಮೊನ್ನೆಯಷ್ಟೆ ವಿಷಯ ತಿಳಿಯಿತು..ಶಾಲಿನಿಗೆ ಹೇಳಿದ್ದೆ. ಅವಳು ಇವರನ್ನು ನಮ್ಮ ಮನೆಗೆ ಕರೆದುಕೊಂಡು ಬರುವ ಬಗ್ಗೆ ಆನಂದಾಶ್ರಮದಲ್ಲಿ ಮಾತಾಡಿ ಅಂತ ನನ್ನನ್ನು ಬಲವಂತ ಪಡಿಸಿದಳು.ನೀನು ಇಡೀ ದಿನ ಒಬ್ಬಳೇ ಮೌನವಾಗಿ ಕಾಲ ಕಳೆಯುವುದನ್ನು ನಮಗೆ ನೋಡಲೇ ಕಷ್ಟವಾಗುತ್ತಿತ್ತು.. ಆದರೆ ಅನಿವಾರ್ಯವಾಗಿತ್ತು ಸಹಿಸಿಕೊಳ್ಳುವುದು .. ಇಂದಿನಿಂದ ಇವರು ನಮ್ಮಲ್ಲೇ ಇರ್ತಾರೆ.. ನಿಂಗೆ ಜೊತೆಯಾಗಿ..  ..ಇನ್ನು ಅವರೆದುರು ಇದನ್ನು ಮಾತನಾಡುವುದು ಬೇಡ. ಮೊದಲೇ ನಿನಗ್ಯಾಕೆ ಇದನ್ನು ತಿಳಿಸಲಿಲ್ಲ ಅಂದ್ರೆ ತುಂಬಾ ಸ್ವಾಭಿಮಾನಿಯಾದ ಅವರನ್ನು ಒಪ್ಪಿಸುವ ಭರವಸೆ ನಮಗಿರಲಿಲ್ಲ. ಆದ್ರೆ ಶಾಲಿನಿಯ ಹಠಕ್ಕೆ ಸೋತು ಹೋದರು.ನಮ್ಮಲ್ಲಿಗೆ ಬರಲೊಪ್ಪಿದರು.'

'ಅರೇ.. !! ಹೊಸ ಸೀರೆ ಇನ್ನೂ ಉಟ್ಟಿಲ್ವಾ.. ಹ್ಯಾಪಿ ಬರ್ತ್ ಡೆ ಅಮ್ಮ.. ,ನಿನ್ನ ಹುಟ್ಟಿದ ದಿನ ಇಂದು... ನಿಂಗೆ ನೆನಪಿದೆಯಾ ಇಲ್ವಾ.. ಬೇಗ ಸೀರೆ ಉಟ್ಟು ರೆಡಿ ಆಗು.. ಆಟೋ ಇನ್ನು ಇಲ್ಲೇ ಇದೆ ನಾವು ದೇವಸ್ಥಾನಕ್ಕೆ ಹೋಗಿ ಬರೋಣ.. ಬರೋ ಹೊತ್ತಿಗೆ ನಮ್ಮ ಮೇಡಮ್ ಬಿಸಿ ಅಡುಗೆ ತಯಾರಿ ಮಾಡ್ತಾರೆ ಅಲ್ವಾ ಶಾಲಿನಿ' ಎಂದು ಅತ್ತ ನೋಡುತ್ತಿದ್ದರೆ ಗಿರಿಜಮ್ಮ ಒಳಗಿನಿಂದ ಉಕ್ಕುವ ಸಂತಸದಲೆಗಳ ಹೊಡೆತಕ್ಕೆ ಸಿಲುಕಿ ಮಾತುಗಳನ್ನು ಮರೆತವರಂತೆ ನಿಂತೇ ಇದ್ದರು. 

-- 

Monday, July 9, 2012

ಹೋಗುವೆನು ನಾ...



ಅರಳುವ ಹೂವುಗಳೇ 
ಮಾಡದಿರಿ ಸದ್ದು
ಅವನೆಡೆಗೆ ನಡೆವಾಗ 
ನೋಡುವುದ್ಯಾತಕೆ ಹೀಗೆ ಕದ್ದು 

ಬೀಸುವ ಗಾಳಿಯೇ 
ಒಂದಿಷ್ಟು ಸುಮ್ಮನುಳಿ 
ನಾ ತೆರಳಿದ  ಬಳಿಕ 
ಬೇಕಾದಷ್ಟು ಸುತ್ತಿ ಸುಳಿ 

ಬೆಳ್ಳಿ ಕಾಲ್ಗೆಜ್ಜೆಯೇ 
ಮೆತ್ತಗಿರಲಿ ನಿನ್ನ ಸ್ವರ 
ತಡ ಮಾಡದಿರು ಹೆಜ್ಜೆಯೇ
ಕಾದಿರುವ ನನ್ನ ವರ 

ಓ ನನ್ನ ಹೊನ್ನ ಝರಿ 
ತಂಪೆರೆಯೇ ನನ್ನೊಳಗೂ 
ಬಿರು ತಾಪವೀ ಒಲವು 
ಹರಿತ ಕತ್ತಿಯ ಅಲುಗು 

ಒಮ್ಮೆ ಸೇರಿದರವನ 
ಬೆಚ್ಚನೆಯ ಆಸರೆ 
ಮತ್ತು ಏರುವುದು 
ಬೇಕಿಲ್ಲ ಬೇರೆ ಸುರೆ 

ತುಂಬು ಬದುಕಿನ ದಾರಿ 
ಇದ್ದರೆಷ್ಟೇ ದೂರ 
ಒಲುಮೆ ಪಡೆದ ಮನಕೆ 
ಇನಿತಿಲ್ಲ ಬೇಸರ ..

Thursday, July 5, 2012

ಪರಿಹಾರ..





'ಆಂಟೀ ಆಂಟೀ..' ಪಕ್ಕದ ಮನೆಯ ಪುಟ್ಟಿಯ ಸ್ವರದಲ್ಲಿ ಅಳುವಿತ್ತು. ಯಾವಾಗಲೂ ಅಷ್ಟೇ ತಂಟೆ ಮಾಡುವುದರಲ್ಲಿ ನಿಸ್ಸೀಮಳಾಗಿರುವ ಅವಳು ಏನಾದರೂ ದೂರು ದುಮ್ಮಾನಗಳಿದ್ದರೆ ಅದರ ಪರಿಹಾರಕ್ಕೆ ನನ್ನನ್ನವಲಂಭಿಸುತ್ತಿದ್ದಳು. 

ಅವಳಮ್ಮನಾದರೆ ಮೊದಲೆರಡು ಪೆಟ್ಟು ಕೊಟ್ಟು ಆಮೇಲೆ 'ಯಾಕೇ ಅಳ್ತಿದ್ದೀಯಾ' ಅಂತ.. ಕೇಳ್ತಾಳೆ ಅಂತ ಗೊತ್ತಿದೆ ಅವಳಿಗೆ!!

ಬ್ರಹ್ಮಪುತ್ರಾ ನದಿ ಉಕ್ಕೇರಿ ಎಲ್ಲಾ ಕಡೆ ಜಲಾವೃತವಾದುದನ್ನು ಟಿ ವಿ  ಯಲ್ಲಿ ನೋಡುತ್ತಿದ್ದ ನಾನು 'ಹ್ಹೋ ಪುಟ್ಟಿ ರಾಣಿಯವರು ಬರಬೇಕು' ಎಂದು ಅವಳನ್ನು ಸ್ವಾಗತಿಸಿದೆ.

ಬಂದವಳೇ ' ಆಂಟೀ ನಿಮಗ್ಗೊತ್ತಾ' ಅಂದಳು

'ಏನು ಪುಟ್ಟೀ' 

'ಆಂಟೀ.. ಕಪ್ಪೆ ಕೂಗಿದ್ರೆ ಮಳೆ ಬರೋದಂತೆ ..' 

'ಹೌದಾ ಪುಟ್ಟಿ .. ಜಾಣೆ ನೀನು.. ನಿಂಗ್ಯಾರು ಹೇಳಿದ್ರು ಇದನ್ನ ..'

'ಆ ಮನೆ 'ದೊಡ್ಡ' ಹೇಳಿದ್ರು' 

'ಅದು ಸರಿ ಆದ್ರೆ ಅದ್ಕೆ ನೀನ್ಯಾಕೆ ಅಳ್ತೀಯಾ.. ನೀನು ಅತ್ರೂ ಮಳೆ ಬರುತ್ತಾ ..'

'ಆಂಟೀ.. ಮತ್ತೇ.. ಮತ್ತೇ.. ನಾನು ಕಪ್ಪೇನ ಸಾಯಿಸ್ಬಿಟ್ಟೆ.. ಹಾಗಿದ್ರೆ ಇನ್ನು ಮಳೆ ಬರಲ್ವಾ.. ಮಳೆ ಬರದಿದ್ರೆ ನಾನು ಕಲರ್ ಕಲರ್ ದೋಣಿ ಬಿಡೋದು ಹೇಗೆ? ಮೊನ್ನೆ ತಂದ ಹೊಸ ರೈನ್ ಕೋಟ್ ಹಾಕೋದು ಯಾವಾಗ..?' ಅಳು ಇನ್ನೂ ಜೋರಾಯಿತು.

ನನಗೂ ಇವಳ ತಂಟೆಗೆ ಸಿಟ್ಟು ಬಂತು.. 

'ಅಲ್ವೇ ಪುಟ್ಟಿ ಪಾಪದ ಆ ಕಪ್ಪೇನ ಯಾಕೇ ಸಾಯ್ಸಿದ್ದು.. ನೀನು ಒಳ್ಳೆ ಹುಡ್ಗಿ ಅಂದ್ಕೊಡಿದ್ದೆ..'

ಬಿಕ್ಕುತ್ತಾ 'ನಾನು ನಡೀತಾ ಬರುವಾಗ ನನ್ನ ಎದುರೇ ಟಪ್ ಟಪ್ ಅಂತ ಹೋಗ್ತಾ ಇತ್ತು. ನಾನು ಪಸ್ಟ್ ಹೋಗ್ಬೇಕೂಂದ್ರೆ ದಾರೀನೇ ಬಿಡ್ಲಿಲ್ಲ. ನಂಗೂ ಸಿಟ್ಟು ಬರಲ್ವಾ.. ಕಲ್ಲು ಎಸೆದೆ. ಅದು ನಿಮ್ಮ ತಾವರೆ ಕೊಳಕ್ಕೆ ಹಾರಿ ಬಿದ್ಬಿಡ್ತು ಆಂಟೀ.. ಎಷ್ಟು ಹುಡ್ಕಿದ್ರೂ ಕಾಣ್ಲೇ ಇಲ್ಲ. ನೀರಿಗೆ ಬಿದ್ದವರು ಸತ್ತೋಗ್ತಾರೆ ಅಲ್ವಾ.. ಆಂಟೀ ನಾನು ಬೇಕೂಂತ ಮಾಡ್ಲಿಲ್ಲ..' ಫ್ರಾಕಿನ ತುದಿಯಲ್ಲಿ ಕಣ್ಣೊರೆಸಿಕೊಂಡಳು. 

ನಾನು ಜೋರಾಗಿ ನಗುತ್ತಾ 'ಅಯ್ಯೋ ಮುದ್ದು, ಕಪ್ಪೆ ನೀರಿಗೆ ಬಿದ್ರೆ ಸಾಯೋದಿಲ್ಲ. ಅದ್ಕೆ ಸ್ವಿಮ್ಮಿಂಗ್  ಬರುತ್ತೆ. ಅದು ನೀರಲ್ಲೂ ನೆಲದಲ್ಲೂ ಎರಡೂ ಕಡೆ ಇರುತ್ತೆ..' 

ನನ್ನ ಮಾತನ್ನು ತಡೆದು ' ಆಂಟೀ ಹಾಗಿದ್ರೆ ಮಳೆ ಬರುತ್ತೆ ಅಲ್ವಾ ಎಂದಳು ಕುಷಿಯಲ್ಲಿ.. 

'ಹೂಂ ಪುಟ್ಟಿ .. ಈಗ ಇದನ್ನು ತಗೋ' ಅಂತ ಅವಳ ಕೈಗೆ ಒಂದು ಚಾಕೊಲೇಟ್  ತುರುಕಿದೆ. 

ಹೊರಗೋಡಿದವಳೇ ಮತ್ತೆ ತಿರುಗಿ ಬಂದಳು. 

'ಆಂಟೀ ..' 

'ಏನಮ್ಮಾ..' 

'ಆಂಟೀ ಟಿ ವಿ ಲಿ ತೋರಿಸ್ತಾ ಇದ್ದಾರೆ ಅಲ್ವಾ ಆ ರಿವರ್ ಇರುವಲ್ಲಿ ತುಂಬಾ ಮಳೆ ಬರುತ್ತಾ' ಅಂದಳು. 

'ಹೌದು .. ನೋಡು.. ಎಷ್ಟೊಂದು ಮನೆಗಳೆಲ್ಲ ಮುಳುಗಿದೆ ನೀರಲ್ಲಿ ಪಾಪ' ಅಂದೆ.

ಆಂಟೀ ಅಲ್ಲಿರುವ ಕಪ್ಪೆಗಳನ್ನೆಲ್ಲಾ ಸಾಯಿಸಿದ್ರೆ ಮಳೆ ನಿಂತು ಬಿಡುತ್ತೆ ಅಲ್ವಾ.. !!! ಎಂದು ಪರಿಹಾರ ತಿಳಿಸಿ ಹೊರಗೋಡಿದಳು.