Pages

Total Visitors

Thursday, April 11, 2013

ಹಬ್ಬದ ಸಡಗರ


ಒಬ್ಬರ ಮನೆಯಲ್ಲಿ ಮದುವೆ ಉಪನಯನಗಳಂತಹ ಸಂಭ್ರಮ ಇರಬಹುದು ,ಇನ್ನೊಬ್ಬರ ಮನೆಯಲ್ಲಿ ಪೂಜೆ ಇರಬಹುದು,ಈ ಸಂಭ್ರಮ ಸಡಗರಗಳು ಅದನ್ನು ನಡೆಸುವವರ ಮನೆ ಮನಗಳಲ್ಲಿ ಮಾತ್ರ ಇರುತ್ತದೆ. ಅದರೆ ಎಲ್ಲರೂ ಒಂದೇ ಬಗೆಯ ಸಂತಸವನ್ನು ಮನೆ ಮನೆಗಳಲ್ಲಿ ಆಚರಿಸಿ ಸಂತಸ ಹಂಚಿಕೊಳ್ಳುತ್ತಾರೆ ಎಂದರೆ ಅವುಗಳಿಗೆ ಮೂಲ ಕಾರಣ ಹಬ್ಬಗಳು. 

ಈ ಹಬ್ಬಗಳು ನೂರು ಮೈಲು ದೂರದಲ್ಲಿ ಬರುತ್ತಿರುವಾಗಲೇ ಇಲ್ಲಿ ಮಾವಿನೆಲೆಯ ತೋರಣ ಕಟ್ಟಿ ಸ್ವಾಗತಕ್ಕೆ ಸಿದ್ಧತೆಗಳಾಗುತ್ತದೆ. ಅದರಲ್ಲೂ ಹೆಂಗಳೆಯರಿಗೆ ಹಬ್ಬದ ದಿನಗಳೆಂದರೆ ಉತ್ಸಾಹದ ಜೊತೆ ಜೊತೆಗೆ  ಜವಾಬ್ದಾರಿ  ತಗಲಿಕೊಂಡು ಬಿಡುತ್ತವೆ. 

ಯುಗಾದಿ ದಿನ ಬೇವು ಬೆಲ್ಲ ತಿಂದು ಮುಖ ಕಹಿ  ಮಾಡಿಕೊಂಡು ಸುಧಾರಿಸಿಕೊಳ್ಳುವಾಗಲೇ ಹಬ್ಬದ ಇನ್ನೊಂದಷ್ಟು ದಿನಗಳು ಹೆಸರುಗಳು ನಾಲಿಗೆಯಲ್ಲಿ ನಲಿದಾಡಲು ತೊಡಗುತ್ತವೆ. 'ನಾಗರ ಪಂಚಮಿ  ನಾಡಿಗೆ ದೊಡ್ಡದು' ಎಂದು ಬಗ್ಗಿ ಕಲ್ಲಿನ ನಾಗರಗಳಿಗೆಲ್ಲಾ ಹಾಲೆರೆದು ಬೆನ್ನಿನ್ನೂ ನೆಟ್ಟಗಾಗುವಷ್ಟರಲ್ಲಿ ಬೇರೆ ಹಬ್ಬಗಳು ಒಂದೊಂದಾಗಿ 'ಹಾಜರ್ ಸಾರ್' ಎಂದು ಮನೆಯೊಳಗೆ ಪ್ರವೇಶಿಸಲು ಸರತಿಯಲ್ಲಿ ನಿಂತಿರುತ್ತದೆ. ದಿನನಿತ್ಯದ ಯಾಂತ್ರಿಕ ಬದುಕಿಗೆ ಒಂದಿಷ್ಟು ಹರ್ಷದ ಸಿಂಚನಗರೆಯುತ್ತವೆ.

ಗಂಡಸರೇನೋ ಆ ದಿನ ಸಿಕ್ಕ ರಜೆಯನ್ನು ಕಳೆಯಲು ರುಚಿ ರುಚಿ ಊಟದ ಜೊತೆಗೆ ಸೋಫಾದ ಮೇಲೆ ಮೈ ಚೆಲ್ಲಿ ಮಲಗುವ ಕನಸು ಕಾಣುತ್ತಿದ್ದರೆ ಹೆಂಗಸರು ರೇಶಿಮೆ ಸೀರೆ ಉಟ್ಟು ಸರಬರ ಸದ್ದು ಮಾಡುತ್ತಾ ವಿಶೇಷ ತಿನಿಸುಗಳ ಸಿದ್ಧತೆಯಲ್ಲಿರುತ್ತಾರೆ.ಅದರಲ್ಲೂ ಹೊಸದಾಗಿ ಸೊಸೆಯಾದವಳೋ, ಅಥವಾ ಸೇರಕ್ಕಿಯನ್ನು ಒದ್ದು ಒಳ ಬಂದ ನವಸೊಸೆಯ ಅತ್ತೆಯಾದವಳಿಗೋ ಈ ಹಬ್ಬ ಇನ್ನಷ್ಟು ಮಹತ್ವದ್ದಾಗಿರುತ್ತದೆ. ಅತ್ತೆಗೆ ತಾನಿಷ್ಟು ಕಾಲ ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಸೊಸೆಗೂ ಪರಿಚುಸುವ ಆಸೆಯಾದರೆ ಸೊಸೆಗೆ ತನ್ನ ತವರಲ್ಲಿ ಆಚರಿಸುತ್ತಿದ್ದ ಹಬ್ಬದ ಸಡಗರವನ್ನು ಇಲ್ಲಿಯೂ ಕಾಣುವಾಸೆ. 

ಹೆಣ್ಣಾಗಿ ನಾನು ಈ ಎಲ್ಲಾ ಆಸೆಗಳಿಂದ ಮುಕ್ತಳಾಗಲು ಹೇಗೆ ಸಾಧ್ಯ. ಹಬ್ಬ ಹಳೆಯದೇ ಆದರೂ ನನಗೆ ಹೊಸ ಮನೆಯಲ್ಲಿ ಆಚರಿಸುವ ಉತ್ಸಾಹ. ಜೊತೆಗೆ ಇಲ್ಲಿಯ ರೀತಿ ರಿವಾಜನ್ನು ಅರಿಯುವ ಕುತೂಹಲ. 
'ಹಬ್ಬದ ದಿನವೇ ಬೆಳಿಗ್ಗೆ ಬೇಗ ಎದ್ದು ಎಲ್ಲಾ ತಯಾರಿ ಮಾಡೋಣಮ್ಮಾ.ಇವತ್ತು ಮಾಡಿಟ್ರೆ ನಿನ್ನ ಮಾವನೋ, ನಿನ್ನ ಗಂಡಾನೋ ಡಬ್ಬಿಗೆ ಕೈ ಹಾಕಿ ತಿಂದು ಬಿಡುತ್ತಾರೆ. ಇನ್ನೂ ನೈವೇಧ್ಯ ಆಗಿಲ್ಲ,ಎಂಜಲು ಮಾಡ್ಬಿಟ್ರಲ್ಲ ಅಂದ್ರೆ ಕೈ ಹಾಕಿ ತೆಗೊಂಡ್ರೆ ಅದು ಹೇಗೆ ಎಂಜಲಾಗುತ್ತೆ?  ಎನ್ನುವೆಲ್ಲಾ ಅಥರ್ವಣ ಪಾಠಗಳನ್ನು ಮಾಡ್ತಾರೆ..' ಅಂದರು. ತವರಲ್ಲಿ ನಾನೂ ಇದನ್ನೇ ಮಾಡುತ್ತಿದ್ದೆ ಅಂತ ಅತ್ತೆಯೆದುರು ಹೇಳೋಕೆ ಸಾಧ್ಯಾನೇ..!! ಹೂಂ ಅಂತ ತಲೆ ಅಲುಗಿಸಿದೆ. 

ಮರುದಿನ ಸೂರ್ಯ ಹುಟ್ಟುವ ಮೊದಲೇ ಎದ್ದು ಸ್ನಾನ ಮಾಡಿ ಫಿಲ್ಮೀ ಸ್ಟೈಲಿನಲ್ಲಿ ತಲೆಗೆ ಟವೆಲ್ ಸುತ್ತಿ ಅಡುಗೆ ಮನೆಗೆ ಪ್ರವೇಶ ಮಾಡಿದೆ. ಅತ್ತೆ ಆಗಲೇ ಎದ್ದು ತನ್ನ ಸುತ್ತ ಸಾಮಾನುಗಳ ರಾಶಿಯನ್ನೇ ಹರಡಿಕೊಂಡು ಕಿರಾಣಿ ಅಂಗಡಿಯ ಮಾಲೀಕರಂತೆ ಕಾಣಿಸುತ್ತಿದ್ದರು. ಅವರ ನಿರ್ದೇಶನದಂತೆ ಸ್ವಲ್ಪವನ್ನು ಹುರಿದು, ಇನ್ನೊಂದಿಷ್ಟು ತುರಿದು ಎಂಬೆಲ್ಲ ಕೆಲ್ಸಗಳನ್ನು ಮಡಿಲಿಗೆಳೆದುಕೊಂಡೆ. ಮೈಸೂರುಪಾಕು, ಸಾಟುಗಳೆಂಬ ಸಿಹಿ  ತಿಂಡಿಗಳು ಪರಿಮಳ ಸೂಸುತ್ತಾ ಡಬ್ಬದಲ್ಲಿ ಕುಳಿತುಕೊಂಡವು. ದೇವರಿಗೂ ಬರೀ ಸಿಹಿ  ತಿಂದ್ರೆ ಬೇಸರ ಬರೋಲ್ವಾ.. ಅವನಿಗಾಗಿ ಕರುಂ ಕುರುಂ  ಚಕ್ಕುಲಿ, ಕೋಡುಬಳೆ, ವಡೆಯ ತಯಾರಿ ಆಗಬೇಕಿತ್ತು. ಅದರ ಸಿದ್ಧತೆಗಾಗಿ ಅತ್ತೆ ಹುರಿದ ಉದ್ದಿನಬೇಳೆಯ ಹುಡಿಯನ್ನು ಹುಡುಕುತ್ತಿದ್ದರು. ಎಲ್ಲಿ ಹುಡುಕಿದರೂ ಇಲ್ಲ. ನಾನೂ ಹುಡುಕಿದೆ. ಊಹೂಂ.. ಕಾಣಿಸಲಿಲ್ಲ. ಎಲ್ಲೋ ಅಂಗಡಿಯವನು ಕೊಡಲಿಕ್ಕೆ ಮರೆತಿದ್ದಾನೆ ಅಂತ  ಹಬ್ಬಕ್ಕೆ ತರಿಸಿದ ಸಾಮಾನು ಚೀಟಿಯನ್ನು ತಂದು ಅದರಲ್ಲಿ ನೋಡಿದರೆ ಪಟ್ಟಿಯಲ್ಲಿ ಆ ಹೆಸರೇ ಸೇರಿರಲಿಲ್ಲ. ಅಂಗಡಿಯವನು ಚೀಟಿಯಲ್ಲಿದ್ದ ಸಾಮಾನುಗಳನ್ನೇ ಕಟ್ಟಿ ಕೊಡಲು ಮರೆತಿರುತ್ತಾನೆ ಅಂದ ಮೇಲೇ ಬರೆಯಲು ಮರೆತಿದ್ದ ಸಾಮಾನನ್ನು ಹುಡುಕಿದರೆ ಸಿಗುವುದೆಲ್ಲಿಂದ..? 'ಇಷ್ಟು ವರ್ಷ ಹೀಗೆ ಆಗಿರಲಿಲ್ಲ. ಈಗಿನ್ನೂ ಇಷ್ಟು ಬೇಗ ಯಾವ ಅಂಗಡಿ ತಾನೇ ಬಾಗಿಲು ತೆರೆಯುತ್ತೆ.? ಏನಮ್ಮಾ ಮಾಡೋದೀಗ' ಎಂದು ಅತ್ತೆ ಆತಂಕಗೊಂಡರು.   

ನನ್ನ ತವರಲ್ಲಿ ಅಮ್ಮ ಇಡೀ ಬೇಳೆಯನ್ನು ಹುರಿದು ಮಿಕ್ಸಿಯಲ್ಲಿ ಹುಡಿ ಮಾಡಿ ಚಕ್ಕುಲಿ ಮಾಡುತ್ತಿದ್ದುದು ಅಂತ ತಿಳಿದಿದ್ದುದರಿಂದ ' ಅದೆಷ್ಟು ಹೊತ್ತಿದೆ ಅತ್ತೇ.. ಸ್ವಲ್ಪ ಹುರಿದು ಹುಡಿ ಮಾಡಿದರಾಯ್ತು. ನಾನೇ ಮಾಡಿಕೊಡ್ತೀನಿ ನಿಲ್ಲಿ..' ಎಂದೆ. ಬಾಣಲೆಯಲ್ಲಿ ಹುರಿಯುತ್ತಿದ್ದ  ಉದ್ದಿನಬೇಳೆ ಕೆಂಪಗಾಗುತ್ತಿದ್ದಂತೆ ಅಷ್ಟು ಹೊತ್ತು ಪ್ರಖರವಾಗಿ ಉರಿಯುತ್ತಿದ್ದ ಬಲ್ಬ್ ಕೂಡಾ ನಿಧಾನಕ್ಕೆ ಡಿಮ್ ಆಗಿ ಕೆಂಪಗಾಯಿತು. 

ಇದೇನು ಕರ್ಮ ಹಬ್ಬದ ದಿನ ಕರೆಂಟ್  ಹೀಗಾಗೋದು..? ಎಂದು ಇಬ್ಬರಿಗೂ ತಲೆ ಬಿಸಿ ಆಯಿತು. ನಾವಿಬ್ಬರೂ ಒಬ್ಬರಾದ ಮೇಲೊಬ್ಬರಂತೆ ಕರೆಂಟಿನವರಿಗೆ ಬಯ್ದು ಅದೂ ಸಾಕಾಗದೆ ನಮ್ಮೂರ ಲೈನ್ ಮ್ಯಾನ್ ನ ವಂಶದವರ ಜನ್ಮ ಜಾಲಾಡಿದೆವು. ಅಷ್ಟರಲ್ಲಿ ಸ್ವಲ್ಪ ಬಲ್ಬ್ ಎಲ್ಲಿದೆ ಎಂದು ಕಾಣುವಂತೆ ಉರಿಯುತ್ತಿದ್ದ ಅದು ಪೂರ್ಣ ಮಾಯವಾಯಿತು. 

ಇನ್ನು ಬಯ್ದು ಪ್ರಯೋಜನವಿಲ್ಲ ಎಂದು  ಹಾಸಿಗೆಯಲ್ಲಿ ಕಾಲು ಚಾಚಿ ಮಲಗಿದ್ದ ಮಾವನವರನ್ನು ಎಬ್ಬಿಸಿ, ಲೈನ್ ಮ್ಯಾನಿಗೆ ಫೋನ್ ಮಾಡಲು ಒತ್ತಾಯಿಸಿದೆವು. 'ಹಬ್ಬ ಅಲ್ವಾ ಸಾರ್.. ನಾನು ಎರಡು ದಿನ ರಜೆಯಲ್ಲಿದ್ದೀನಿ. ಅಂತ ಫೋನ್ ಕಟ್ ಮಾಡಿದ. ಛೇ.. ಇನ್ನೇನು ಮಾಡೋದು ಎಂದು ಅತ್ತೆ ತಲೆ ಮೇಲೆ ಕೈ ಹೊತ್ತರೆ ನಾನು ಎದೆಗುಂದದೇ, ಕೊಂಚ ಸಿಟ್ಟಿನ ಸ್ವರದಲ್ಲೆ  ' ಅತ್ತೇ ಒನಕೆ ಎಲ್ಲಿದೆ ಹೇಳಿ' ಎಂದು ಓಬವ್ವನ ಮಾದರಿಯಲ್ಲೇ ಸೊಂಟಕ್ಕೆ ಸೆರಗು ಬಿಗಿದು ಕೇಳಿದೆ. ಮೊದಲೇ ವೀರಕಲಿಗಳ ನಾಡು ಕೊಡಗಿನಿಂದ ಬಂದವಳು.ಮದುವೆ ಮಾಡಿ ಗಂಡನ ಮನೆಗೆ ಕಳಿಸುವಾಗ ಅಮ್ಮ ಬೇರೆ ' ಇವಳಿಗೆ ಸ್ವಲ್ಪ ಸಹನೆ ಕಮ್ಮಿ , ಒಂಚೂರು ಕೋಪವೂ ಜಾಸ್ತಿ, ಅಂತೆಲ್ಲ ಹೇಳಿ ಬಿಟ್ಟಿದ್ದರು. ಆದ್ದರಿಂದ ನನ್ನ ಈಗಿನ ರೋಷಾವೇಶಕ್ಕೆ  ಅತ್ತೆ ಸ್ವಲ್ಪ ನಡುಗಿ  ನಾನೇನೋ ಅವನ ತಲೆ ಒಡೆಯಲು ಹೋಗುತ್ತಿರುವಂತೆ 'ಲೈನ್ ಮ್ಯಾನ್ ಪಾಪ ರಜೆ ಅಂತೆ, ಅವ್ನಿಗೂ ಹಬ್ಬ ಮಾಡ್ಬೇಕಲ್ಲ ಬಿಟ್ಬಿಡೇ ಸುಮ್ನೆ' ಅಂದ್ರು.

' ಅವ್ನು ಇರ್ಲಿ ಅತ್ತೆ ಅವನ ಪಾಡಿಗೆ, ನೀವು ಒನಕೆ ಕೊಡಿ. ಒರಳಿಗಾದ್ರು ಹಾಕಿ ಈ ಉದ್ದಿನ ಬೇಳೆಯನ್ನು ಹುಡಿ ಮಾಡಿ ಕೊಡ್ತೀನಿ' ಅಂದೆ. ಅತ್ತೇ ಕೂಡಲೇ  ' ಅಯ್ಯೋ ಹಾಗಂದಿದ್ದಾ ನೀನು.. ತಡಿ ತಡಿ ತಂದೆ ಎಂದು ಒಳಹೋಗಿ ಒನಕೆ ಹುಡುಕಿ ತಂದಿಟ್ಟರು. ನಾನು ಒನಕೆಯಲ್ಲಿ ಅಕ್ಕಿ ಹುಡಿ ಮಾಡುವುದನ್ನು ಚಿಕ್ಕಂದಿನಲ್ಲಿ ನೋಡಿದ್ದು ನೆನಪಿತ್ತೇ ವಿನಃ ಅದರ ಬಗ್ಗೆ ಬೇರೇನೂ ತಿಳಿದಿರಲಿಲ್ಲ. ಒರಳಿಗೆ ತುಂಬಾ ಉದ್ದಿನಬೇಳೆಯನ್ನು ತುಂಬಿ ಲೈನ್ ಮ್ಯಾನ್ ನ ತಲೆಗೇ ಹೊಡೆಯುವಷ್ಟು ಶಕ್ತಿ ಹಾಕಿ ಕುಟ್ಟಿದೆ. ಒಳಗಿದ್ದ ಉದ್ದಿನಬೇಳೆ 'ಚೆಲ್ಲಿದರೂ ಮಲ್ಲಿಗೇಯಾ..' ಎಂಬಂತೆ ಸುತ್ತಲೂ ಚೆಲ್ಲಿತು. ಮತ್ತೊಮ್ಮೆ ತುಂಬಿ ನಿಧಾನಕ್ಕೆ ಕುಟ್ಟಿದರೂ ಆ ಕೆಲಸ ಸುಸೂತ್ರವಾಗಿ ನಡೆಯುವಂತೆ ತೋರಲಿಲ್ಲ. 
ಆದರೆ ಮನೆಯ ಸೊಸೆಯಾಗಿ ನಾನು ಅಷ್ಟು ಸುಲಭಕ್ಕೆ ಕೈ ಚೆಲ್ಲಿ ಕುಳಿತುಕೊಳ್ಳಲು ಸಾಧ್ಯವೇ..? ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಅತ್ತೆಯ ಕಡೆಗೆ ತಿರುಗಿ ' ಅತ್ತೇ ಬೀಸುವ ಕಲ್ಲು ಇಲ್ಲವೇ' ಎಂದೆ.
ನನ್ನ ಓಬವ್ವಾವತಾರ ನೋಡಿಯೇ ಅರ್ಧ ಸುಸ್ತಾಗಿದ್ದ ಅತ್ತೆ, 'ಇದೆಯಮ್ಮಾ ಆದ್ರೆ ಅದನ್ನು ಮುಟ್ಟದೇ ಮೂರು ವರ್ಷ ಕಳೀತು. ಈಗ ಹೊಸದಾಗಿ ಬ್ರಹ್ಮ ಕಲಶ ಮಾಡಿ ತೊಳೀಬೇಕಷ್ಟೇ' ಎಂದರು 

ಅಷ್ಟರಲ್ಲಿ ನಮ್ಮ ಗಲಾಟೆಗೆ ಕಣ್ಣು ಪಿಳುಕಿಸುತ್ತಾ ಎದ್ದ ನನ್ನ ಪತಿರಾಯರಿಗೆ ಹೊಸ ಹೆಂಡತಿಯ ಉತ್ಸಾಹಕ್ಕೆ ಭಂಗ ತರುವ ಮನಸ್ಸಾಗಲಿಲ್ಲ. ಬಲ ಭೀಮನಂತೆ ಎದ್ದು ಬೀಸುವ ಕಲ್ಲನ್ನೆತ್ತಿ ಅಂಗಳದಲ್ಲಿರಿಸಿ, ಎರಡು ಕೊಡ ನೀರು ಹೊಯ್ದು ಸ್ನಾನ ಮಾಡಿಸಿದರು. ನಾನು ಒಣಗಿದ ಬಟ್ಟೆಯಲ್ಲಿ ಅದನ್ನೊರೆಸಿದೆ. ಆದ್ರೂ ಯಾಕೋ ಏನೋ ಮಿಸ್ಸಿಂಗ್ ಅಂತ ಅನ್ನಿಸತೊಡಗಿತು. ನೋಡಿದರೆ ಅದನ್ನು ತಿರುಗಿಸುವ  ಮರದ ಹಿಡಿಯೇ ಇರಲಿಲ್ಲ. 

ಈಗ ಮಾವನ ಸರದಿ. ನಾವು ಬಾಯಿ  ತೆರೆಯುವುದಕ್ಕೆ ಮುನ್ನವೇ ಅದಕ್ಕೊಂದು ಮರದ ಹಿಡಿ ಹೊಂದಿಸಿ ಕೊಟ್ಟರು. ಎಲ್ಲಾ ಸಿದ್ಧವಾಗಿ ನಾನು ಕಲ್ಲಿನೆದುರು ಕುಳಿತೆ. ಅತ್ತೆಯೂ ನನ್ನೆದುರು ಕುಳಿತು ಕೈ ಜೋಡಿಸಿದರು.ಸುಮ್ಮನೆ ಹಿಟ್ಟು ಬೀಸುವ ಬದಲು ಹಬ್ಬದ ಸಡಗರ ಹೆಚ್ಚಿಸಲು  ' ನಿಮ್ಗೆ ಬೀಸುವ ಕಲ್ಲಿನ ಪದ ಬರುತ್ತಾ ಅತ್ತೆ' ಅಂದೆ. ಮೊದಲೇ ಕೆಲಸ ಆಗದ ಮಂಡೆ ಬಿಸಿಯಲ್ಲಿದ್ದ ಅವರು  ಒಂದು ಹಾಡೂ ನೆನಪಾಗದೇ, 'ಇಲ್ಲಮ್ಮಾ ಸತ್ಯನಾರಾಯಣ ಪೂಜೆಯ ಹಾಡು ಮಾತ್ರ ನೆನಪಾಗ್ತಿದೆ ಈಗ ಹೇಳಲಾ' ಅಂದ್ರು. ನಂಗೆ ಹಾಗೊಂದಿದೆ ಅಂತ ಗೊತ್ತಿರಲಿಲ್ಲ. ಹುಂ ಹೇಳಿ ಅತ್ತೆ ಅಂದೆ.
 " ಸತ್ಯ ದೇವ ಕೊಡು ಪ್ರಸಾದವಾ , ಶಿರದಿ ಮೆರೆವ ಪತ್ರ ಪುಷ್ಪ ಭರಿತ ದ್ರವ್ಯವಾ.." "ಗೆ ಸರಾಗವಾಗಿ ಸುರುವಾದ ಹಾಡು ಬೀಸುವ ಕಲ್ಲಿನೊಂದಿಗೆ ಸ್ಪರ್ಧೆ ಮಾಡಲಾಗದೇ ಫಸ್ಟ್ ಗೇರು ಹಾಕಿದರೂ ಏರದ ಗಾಡಿಯಂತೆ ಏದುಬ್ಬಸ ಬಿಡತೊಡಗಿತು. ' ನಂಗೆ ಕೆಲ್ಸ ಮಾಡುತ್ತಾ ಹಾಡೋಕ್ಕಾಗಲ್ಲಮ್ಮ .. ನೀನೇ ಹೇಳು ಅಂದರು. 
ಮರ್ಯಾಧೆಗೆ ಒಂದಾದರೂ ದೇವರ ನಾಮ ನೆನಪಿಗೆ ಬರಬೇಡವೇ..!! ಹೋಗಲಿ ದೇಶ ಭಕ್ತಿ ಗೀತೆಯನ್ನು ನೆನಪಿಸಿಕೊಂಡೆ. ಅದೂ ಜನ ಗಣ ಮನ, ವಂದೇ ಮಾತರಂ ಬಿಟ್ಟು ಮುಂದೆ ಹೋಗಲಿಲ್ಲ. ಮದುವೆಗಿಂತ ಎಷ್ಟೋ ಮೊದಲು ನೋಡಿದ ಸಿನೆಮಾದಾ ಹಾಡು 'ಕಬೂತರ್ ಜಾ ಜಾ'  ನೆನಪಾಗಿ ಅದನ್ನೇ ಹಾಡಿದೆ. ಅಷ್ಟರಲ್ಲಿ ಅದನ್ನು ಕೇಳಿಸಿಕೊಂಡ ನನ್ನವರು ' ಕಬೂತರ್ ಬಿಡು ಕಾಗೆ ಕೂಡಾ ಈ ಸ್ವರ ಕೇಳಿ ಹೆದರಿ ಹಾರುತ್ತೆ. ಜಾ .. ಜಾ.. ಅಂತ ಹೇಳಲೇ ಬೇಕಿಲ್ಲ ಅಂತ ಕಿಚಾಸಿದರು. ನನ್ನ ಸ್ವರ ಮಾಧುರ್ಯದ ಬಗ್ಗೆ ಇಂತಹ ಮಾತು ಕೇಳಿ ಸಿಟ್ಟು ಬಂದು, ಅತ್ತೆ ಎದುರಿಗಿರುವುದರಿಂದ ಬಯ್ಗುಳಗಳನ್ನು ನುಂಗಿಕೊಂಡು ಮೌನವಾಗಿ ಬೀಸುವುದನ್ನು ರಭಸಗೊಳಿಸಿದೆ. 

ಅಂತೂ ಇಂತೂ ಉದ್ದಿನಬೇಳೆಯನ್ನು ಹುಡಿಯ ರೂಪಕ್ಕೆ ತಂದು, ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಚಕ್ಕುಲಿ ವಡೆಯ  ಹಿಟ್ಟು ರೆಡಿ ಮಾಡಿದ್ದಾಯಿತು. ಈಗ ಉತ್ಸಾಹದಲ್ಲಿ ಎಣ್ಣೆ ಬಿಸಿಗಿಟ್ಟು ಕಾದ ಎಣ್ಣೆಗೆ ಚಕ್ಕುಲಿ ಹಾಕಿದೆ. ಡಬ್ ಎಂಬ ಸದ್ದಿನೊದನೆ ಎಣ್ಣೆ ಹೊರ ಚೆಲ್ಲಿತು. ' ಎಲ್ಲಿಯೋ ಉದ್ದಿನ ಬೇಳೆ ಇಡೀ ಉಳ್ಕೊಂಡಿದೆ ಎಂದರು ಅತ್ತೆ ಅನುಭವೀ  ಕಂಠದಲ್ಲಿ. ದೋಸೆಯ ಕಾವಲಿಯ ಮುಚ್ಚಳವನ್ನೇ ಗುರಾಣಿಯಂತೆ ಹಿಡಿದು ಚಕ್ಕುಲಿ ಬೇಯಿಸಿ ತೆಗೆದಿದ್ದಾಯಿತು.ಚಕ್ಕುಲಿ ಸಿಡಿತಕ್ಕೆ ಸಿಕ್ಕಿ ಕೆಲವು ಕಡೆ ತನ್ನ ಮೂಲ ಆಕಾರವನ್ನು ಕಳೆದುಕೊಂಡು ಹೊಸ ರೂಪ ಹೊಂದಿತ್ತು. ದೇವನೊಬ್ಬ ನಾಮ ಹಲವು ಎಂಬುದಿಲ್ಲಿ ನಾಮ ಒಂದೇ ರೂಪ ಹಲವು ಆಗಿತ್ತು. ಆದರೇನು ರುಚಿಯಲ್ಲಿ ವ್ಯತ್ಯಾಸವಿಲ್ಲ ತಾನೇ ಅಂತ ನಾವೇ ಸಮಾಧಾನ ಪಟ್ಟುಕೊಂಡೆವು. 

ದೇವರಿಗೆ ನೈವೇಧ್ಯ ಆದ ನಂತರ  "ಇಷ್ಟು ಭಕ್ತಿಯಲ್ಲಿ ಯಾರೂ ನೈವೇಧ್ಯ ತಯರು ಮಾಡಿರಲಿಕ್ಕಿಲ್ಲ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೇವರು ಕೊಟ್ಟೇ ಕೊಡ್ತಾನೆ" ಎಂದು ಚಕ್ಕುಲಿ ಪ್ರಿಯರಾದ ಮಾವ ನಮ್ಮನ್ನು ಹೊಗಳಿ ಅಟ್ಟಕ್ಕೇರಿಸಿದರು.ಅತ್ತೆಯಂತೂ ಇದರಿಂದ ಸಂತೋಷಗೊಂಡು ಬರೋ ತಿಂಗಳು ಬರುವ ಹಬ್ಬಕ್ಕೆ ಇನ್ನೊಂದು ಸೇರು ಹಿಟ್ಟು ಹೆಚ್ಚೇ ಚಕ್ಕುಲಿ ಮಾಡ್ಬೇಕು. ರುಚಿ ಪರಿಮಳ ಎಲ್ಲಾ ತುಂಬಾ ಚೆನ್ನಾಗಿದೆ ಎಂದರು. 

ನಾನಂತೂ ಆ ದಿನವೂ ಕರೆಂಟ್ ಹೋಗದಿರಲಿ ಅಂತೆ ಈಗಿನಿಂದಲೇ ಆ ಹಬ್ಬದ ದೇವರನ್ನು ಬೇಡಿಕೊಳ್ಳಲು ಪ್ರಾರಂಭಿಸಿದ್ದೇನೆ. 

  






7 comments:

  1. ಚೆನ್ನಾಗಿದೆ ಹಬ್ಬದ ಸಡಗರ ....ಯುಗಾದಿ ಶುಭಾಶಯಗಳು

    ReplyDelete
  2. ಅಕ್ಷರಗಳು ಮಾಡುವ ಜಾಡು ಅಬ್ಬಾ ಸೂಪರ್

    ಪ್ರತಿಯೊಂದನ್ನು ಕಾವ್ಯಮಯ ಅಲ್ಲದೆ ಹಾಸ್ಯ ದೃಷ್ಟಿಯಿಂದಲೂ ರೂಪಿಸುವ ನಿಮ್ಮ ಲೇಖನಕ್ಕೆ ನನ್ನ ನಮನಗಳು. ಹೊಸ ವಧುವಿನ ಮುಗ್ಧತೆ, ತಾನೂ ಕೆಲಸ ಮಾಡಬಲ್ಲೆ ಎಂದು ತೋರಿಸುವ ತವಕ, ಅತ್ತೆಯವರ ಶಾಂತ ಗುಣ, ಮಾವ ಪತಿರಾಯರ ಸಹಾಯ ಓಹ್ ಎಲ್ಲವು ಸೂಪರ್.

    ಇಸ್ಥವಾದ ಸಾಲುಗಳು "ಅತ್ತೆ ಸ್ವಲ್ಪ ನಡುಗಿ ನಾನೇನೋ ಅವನ ತಲೆ ಒಡೆಯಲು ಹೋಗುತ್ತಿರುವಂತೆ 'ಲೈನ್ ಮ್ಯಾನ್ ಪಾಪ ರಜೆ ಅಂತೆ, ಅವ್ನಿಗೂ ಹಬ್ಬ ಮಾಡ್ಬೇಕಲ್ಲ ಬಿಟ್ಬಿಡೇ ಸುಮ್ನೆ' ಅಂದ್ರು."

    ಯುಗಾದಿ ಹಬ್ಬದ ಶುಭಾಶಯಗಳು ಮೇಡಂ

    ReplyDelete
  3. ನಿಮ್ಮ ಅತ್ತೆಯವರ photo ಕೂಡಾ ಹಾಕಿದ್ರೆ ಚೆನ್ನಾಗಿರ್ತಿತ್ತು.

    ReplyDelete
  4. ಯಾರಾದರೂ ಒಂದು ಕರೆಂಟ್ ದೇವಿಯ ಗುಡಿ ಮಾಡಿದ್ದರೆ ................................ ಒಳ್ಳೆಯ ಗಳಿಕೆ ಆಗುತ್ತಾ ಇತ್ತು. - ಪೆಜತ್ತಾಯ ಎಸ್. ಎಮ್.

    ReplyDelete
  5. ಹಬ್ಬದ ಸಡಗರ ತುಂಬಾ ರೋಚಕವಾಗಿದೆ. ಚಿರಗಳನ್ನು ಹಾಕಿ ನಮ್ಮ ಹಸಿವನ್ನು ಹೆಚ್ಚಿಸಿದ್ದು ಮಾತ್ರ ಅನ್ಯಾಯ ಅನಿತಕ್ಕ. ಒಳ್ಳೊಳ್ಳೆ ಖಾದ್ಯಗಳ ಸರಮಾಲೆ.

    ReplyDelete
  6. ನಿಮ್ಮ ಹಬ್ಬದ ಸಡಗರದ ತಯಾರಿಯಲ್ಲಿ ನಾವು ಸಂಭ್ರಮ ಸಡಗರದಿಂದ ಭಾಗಿಯದಷ್ಟೇ ಲೇಖನ ಖುಷಿ ಕೊಟ್ಟಿತು . ಇಂತಹ ಬಾಯಲ್ಲಿ ನೀರೂರಿಸುವ ಕುರುಕುಲು ತಿಂಡಿಗಳನ್ನ ಈ ಫೋಟೋದ ಮೂಲಕವೇ ಕೈ ಹಾಕಿ ರುಚಿ ನೋಡುವ ತವಕ :( ಹಹಃ ಹ್ಹ ಹ್ಹ್ )

    ReplyDelete