Pages

Total Visitors

Wednesday, January 15, 2014

ರಾಜ ಪರಂಪರೆ



ಲೋಕದ ಕಣ್ಣಿಗೆ ಅವನು ಅರೆಹುಚ್ಚ. ಮಕ್ಕಳಿಗೆ ಮಾತ್ರ ಅವನು ಪ್ರೀತಿಯ ಕಥೆಯಜ್ಜ. 

ಅವನ ಕಥೆಗಳಲ್ಲಿ  ಇಣುಕುತ್ತಿದ್ದ ರಾಜಕುಮಾರಿಗೆ ಏಳು ಮಹಡಿಯಷ್ಟುದ್ದದ ಜಡೆಯಿತ್ತು. ಇನ್ನೂ ನಡು ಬೆನ್ನೂ ಸವರದ ನಮ್ಮ ಕೂದಲ ಬಗ್ಗೆ ನಮಗೆ ನಿರಾಶೆ ..

ರಾಜಕುಮಾರ ಎಲ್ಲಾ ಯುದ್ಧವಿದ್ಯೆಗಳಲ್ಲೂ ಪ್ರವೀಣ... ಅವನ ಬಳಿಯಿದ್ದ ಕುದುರೆಯಂತೂ ಅತ್ಯದ್ಭುತ. ಬೇಕಾದಾಗ ರೆಕ್ಕೆ ಬಿಡಿಸಿ ಹಾರುತ್ತಿತ್ತು. ಒಮ್ಮೊಮ್ಮೆ ಅದರ ತಲೆಯ ಮೇಲೆ  ಒಂಟಿ ಕೊಂಬು.

ಕಥೆಗಳಲ್ಲಿ ಬರುವ  ಮಾಂತ್ರಿಕನಂತೂ ಹಗಲಲ್ಲೂ ಹೆದರಿಕೆ ಹುಟ್ಟಿಸುವಂತಿದ್ದ.

ಕೊನೆಗೆಲ್ಲವೂ ಒಳಿತೇ  ಆಗುತ್ತಿದ್ದ ಆ ಕಥೆಗಳನ್ನು ಕೇಳುತ್ತ  ನಾವು ಕುತೂಹಲ ಹೊತ್ತ ನಮ್ಮ ಕಣ್ಣು ಕಿವಿಗಳನ್ನು ಅವನಿಗೊಪ್ಪಿಸಿ ಕಥೆಯ ಲೋಕದಲ್ಲಿ ನಡೆದಾಡುತ್ತಿದ್ದೆವು. ಆ ಕಾಲದಲ್ಲೇ ಬದುಕುತ್ತಿದ್ದೆವು. 

ಕಾಲ ಸರಿಯಿತು..

ನಾವು ಬೆಳೆದೆವೆಂದುಕೊಂಡೆವು .ನೈಜ ಬದುಕಿನ ಮುಂದೆ ಕಥೆಯ ರುಚಿ ಮಾಸಿತು. 

ಕೇಳುವ ಕಿವಿಗಳಿರದೆ ಕಥೆಯಜ್ಜ ಮೌನವನ್ನೇ ಹಾಸಿ ಹೊದ್ದ.

ಕಥೆಗಳಳಿದವು.. 

ಹೀಗೆ ರಾಜ ಪರಂಪರೆ ನಶಿಸಿತಂತೆ.. 
-- 

6 comments:

  1. ಇಲ್ಲಿ ಕಥೆಗಾರ ಅಜ್ಜ ಪ್ರತಿಮೆ, ನೂರಾರು ಕೃತಿಗಳು ಕಣ್ಮರೆಯಾಗಿ ಹೋಗಿವೆ ಆಧುನಿಕತೆಯ ಸುನಾಮೀ ಹೊಡೆತಕೆ.

    ReplyDelete
  2. EE katheya innu chikkadaagi bareyalu saadyave illa..namma kanasu yaavattiddaroo namagintha melene...

    ReplyDelete
  3. ಎಷ್ಟೊ೦ದು ಸತ್ಯ, ನಾವು ಕೇಳುತಿದ್ದ ಕಥೆಗಳು ನಮ್ಮನ್ನೆಲ್ಲಾ ಮಾಯಾಲೋಕಕ್ಕೇ ಕರೆದುಕೊ೦ಡು ಹೋಗುತಿದ್ವು - ಇ೦ದಿನ ಕಾರ್ಟೂನ್ ಕಥೆಗಳಿಗೆ ಎಲ್ಲಿ೦ದೆಲ್ಲಿಯ ಹೋಲಿಕೆ..... ಚಿಕ್ಕದಾಗಿ ಸರಳವಾಗಿ ಹೇಳಿದ್ದೀರಿ, ಅದು ನಿಮ್ಮ ಶೈಲಿ ಅನಿ, ಇಷ್ಟವಾಯ್ತು :)

    ReplyDelete
  4. ಹಳೆಯದೆಲ್ಲಾ ಸುಳ್ಳು, ಹೊಸತೆಲ್ಲಾ ಸತ್ಯ .. ಕಾಲ್ಪನಿಕ ಸುಖವನ್ನು ಕಳೆದುಕೊಳ್ಳುವುದು ನಮ್ಮ ಗಳಿಕೆ.

    ReplyDelete
  5. ಈಗಿನ ನಾಗಾಲೋಟದ ಕುದುರೆಯ "ಕೊಂಬು"ಗಳ ಹೊಡೆತಕ್ಕೆ, ನನ್ನ, ನಿಮ್ಮ ಕತೆಯಜ್ಜನು ಬಲಿಯಾಗಿ ಅವನ ಮುಂಡಾಸೂ ಜಾರಿಬಿದ್ದಿದೆ ಮಣ್ಣಿನಾಳಕೆ!

    ReplyDelete